Tag: ರೈಲ್ವೆ ಟಿಕೆಟ್

  • ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

    ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿ ಅಮಾನತು

    ಯಾದಗಿರಿ: ಪ್ರಯಾಣಿಕರಿಗೆ ಟಿಕೆಟ್ (Railway Ticket) ನೀಡದೇ ಮೊಬೈಲ್‌ನಲ್ಲಿ ಹರಟೆ ಹೊಡೆಯುತ್ತಿದ್ದ ರೈಲ್ವೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವ (Suspension) ಘಟನೆ ಯಾದಗಿರಿಯಲ್ಲಿ (Yadgir) ನಡೆದಿದೆ.

    ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿ ಸಿ.ಮಹೇಶ್‌ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಮಹೇಶ್ ಯಾದಗಿರಿ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ (Ticket Counter) ಕಾರ್ಯನಿರ್ವಹಿಸುತ್ತಿದ್ದ. ಟಿಕೆಟ್‌ಗಾಗಿ ನೂರಾರು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದರು. ಟಿಕೆಟ್ ಕೌಂಟರ್ ಸಿಬ್ಬಂದಿ ಮಹೇಶ್ ಬಹಳ ಹೊತ್ತು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ. ಈ ವೇಳೆ ಪ್ರಯಾಣಿಕನೊಬ್ಬ ವೀಡಿಯೋ ಮಾಡಿ ಸ್ಟೇಷನ್ ಮಾಸ್ಟರ್‌ಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹ ಇಂದು ನಭಕ್ಕೆ; ಭಾರತ-ಅಮೆರಿಕ ಮಹತ್ವದ ಹೆಜ್ಜೆ

    ಇದನ್ನು ಗಮನಿಸಿ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗೆ ಕಳುಹಿಸಿದ್ದಾರೆ. ಸ್ಟೇಷನ್ ವ್ಯವಸ್ಥಾಪಕ ಭಾಗಿರಥ ಮೀನಾ ತಕ್ಷಣವೇ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: Hassan | ಹೋಟೆಲ್‌ನಲ್ಲಿ ಊಟ ಮಾಡಿ ಕೈತೊಳೆಯುವಾಗ ಪ್ರಾಣಬಿಟ್ಟ ಯುವಕ

  • ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

    ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ನಲ್ಲಿ ಟಿಕೆಟ್ ದಂಧೆ – ಹಣ ಕೊಟ್ರೆ ವೇಟಿಂಗ್ ಲಿಸ್ಟ್ ಇದ್ರೂ ಕನ್ಫರ್ಮ್ ಆಗುತ್ತೆ!

    -ಟ್ರಾವೆಲ್ ಏಜೆನ್ಸಿಯ 9 ಸಿಬ್ಬಂದಿಗಳು ಪೊಲೀಸರ ವಶಕ್ಕೆ

    ಬೆಂಗಳೂರು: ಮೆಜೆಸ್ಟಿಕ್‌ನ ರೈಲ್ವೆ ಸ್ಟೇಷನ್‌ನಲ್ಲಿ (Majestic Railway Station) ರಿಸರ್ವೇಷನ್ ಟಿಕೆಟ್ ಹೆಸರಲ್ಲಿ ದಂಧೆ ನಡೀತಿದೆ. ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ಗಳನ್ನು ಕನ್ಫರ್ಮ್ ಮಾಡಿಸಿಕೊಡ್ತೀನಿ ಎಂದು ಹಣ ಪೀಕುತ್ತಿದ್ದ ಟ್ರಾವೆಲ್ ಏಜೆನ್ಸಿಗಳ ಮೇಲೆ ಆರ್‌ಪಿಎಫ್ ಟೀಂ (RPF Team) ದಾಳಿ ನಡೆಸಿದೆ.

    ಹೌದು, ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ನ್ನು ರಿಸರ್ವೇಷನ್ ಮಾಡಿಕೊಡ್ತೀವಿ ಎಂದು ಪ್ರಯಾಣಿಕರ ಬಳಿ ವನ್ ಟು ಡಬಲ್ ಹಣ ಪಡೆಯುತ್ತಿದ್ದರು. ಟಿಕೆಟ್ ಕೌಂಟರ್‌ಗಳ ಬಳಿ ನಿಂತು ವೇಟಿಂಗ್ ಲಿಸ್ಟ್ ಇರುವ ಪ್ರಯಾಣಿಕರನ್ನ ಟಾರ್ಗೆಟ್ ಮಾಡಿ, ತಮ್ಮ ಟ್ರಾವೆಲ್ ಏಜೆನ್ಸಿ ಅಂಗಡಿಗಳಿಗೆ ಕರೆದುಕೊಂಡು ಹೋಗಿ ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರ್‌ಪಿಎಫ್‌ನ ಕ್ರೈಮ್ ಇನ್ವೆಸ್ಟಿಗೇಷನ್ ಬ್ರ‍್ಯಾಂಚ್ ಹಾಗೂ ಡಿವಿಷನಲ್ ಸ್ಟೆಷಲ್ ಟೀಂ ದಾಳಿ ನಡೆಸಿದ್ದಾರೆ. ಈ ವೇಳೆ ಅನುಮಾನಸ್ಪಾದ ಓಡಾಟ ಹಾಗೂ ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಿದ್ದ ಟ್ರಾವೆಲ್ ಏಜೆನ್ಸಿಯ 9 ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದೋಣಿ ಮುಳುಗಿ ಮೂವರು ಮೀನುಗಾರರು ನಾಪತ್ತೆ

    ಟ್ರಾವೆಲ್ ಏಜೆನ್ಸಿ ಸಿಬ್ಬಂದಿಯೇ ಟಿಕೆಟ್ ಬುಕ್ ಮಾಡಿ, ಕನ್ಫರ್ಮ್ ಮಾಡಿಕೊಡುತ್ತಿದ್ದರು. ಇನ್ನೂ ಕೆಲವರ ಬಳಿ ವೇಟಿಂಗ್ ಇರುವ ಟಿಕೆಟ್ ಪಿಎನ್‌ಆರ್ ನಂಬರ್ ಪಡೆದು, ಟಿಕೆಟ್ ರಿಸರ್ವ್ ಮಾಡಿಕೊಡ್ತಿವಿ ಎಂದು ರಿಸರ್ವೇಷನ್ ಕೌಂಟರ್ ಬಳಿಯೇ ಗ್ರಾಹಕರ ಜೊತೆ ವ್ಯವಹಾರ ನಡೆಸುತ್ತಿದ್ದರು. ಹೀಗೆ ಪ್ರತಿದಿನ ಟಿಕೆಟ್ ಕೌಂಟರ್ ಬಳಿ ಗ್ರಾಹಕರ ಜೊತೆ ನಡೆಸ್ತಿದ್ದ ಮಾತುಕತೆ, ಅನುಮಾನಸ್ಪಾದ ಓಡಾಟ ನೋಡಿ, ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ.

    ಒಂಬತ್ತು ಜನರನ್ನ ವಶಕ್ಕೆ ಪಡೆದು ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆಯೂ ನಕಲಿ ಟಿಕೆಟ್ ಹಾಗೂ ರಿಸರ್ವೇಷನ್ ಟಿಕೆಟ್ ನೆಪದಲ್ಲಿ ಜನರಿಗೆ ವಂಚನೆ ಮಾಡ್ತಿದ್ದ ಗ್ಯಾಂಗ್‌ನ ಬಂಧಿಸಲಾಗಿತ್ತು. ಉತ್ತರ ಭಾರತದ ಪ್ರಯಾಣಿಕರಿಗೂ ವಂಚನೆ ಮಾಡಿದ್ದು, ಇನ್ನೊಮ್ಮೆ ಈ ರೀತಿಯ ಅಕ್ರಮವೆಸಗಿದ್ರೆ ಐಆರ್‌ಸಿಟಿಸಿ ಐಡಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಇನ್ನೂ ರೈಲ್ವೆ ಸೀಟು ಚಾರ್ಟ್ ತಯಾರಿಸುವ ಸಿಬ್ಬಂದಿ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

  • ರೈಲ್ವೆ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು: ಸಿಎಂ ಆಗ್ರಹ

    ರೈಲ್ವೆ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು: ಸಿಎಂ ಆಗ್ರಹ

    ಬೆಂಗಳೂರು: ರೈಲ್ವೇ ಟಿಕೆಟ್ (Railway Ticket) ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.

    ರೈಲ್ವೆ ಟಿಕೆಟ್ ದರ ಏರಿಕೆ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಸಾಮಾನ್ಯ ಜನರ ಸಾರಿಗೆಯಾಗಿಯೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಾಸ್‌ ಲೀಡರ್‌ – ಬಿಆರ್‌ ಪಾಟೀಲ್‌ ಸ್ಪಷ್ಟನೆ

    ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳ ಭಾರದಿಂದ ಜನರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಹಾಲು, ಮೊಸರು, ಚಹಾ ಪುಡಿಯಿಂದ ಹಿಡಿದು ಪಾಪ್ ಕಾರ್ನ್ವರೆಗೆ ಎಲ್ಲದರ ಮೇಲೆ ಜಿಎಸ್‌ಟಿ ಹೇರಿಕೆಯಿಂದಾಗಿ ಪ್ರತಿಯೊಂದು ಕುಟುಂಬದ ಬಜೆಟ್ ಏರುಪೇರಾಗಿದೆ. ಇದೇ ವೇಳೆ ರೈಲು ಪ್ರಯಾಣದ ದರ ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿಕ್ಕಮಗಳೂರು | ಮೆಡಿಕಲ್‍ನಲ್ಲಿ ಮಾತ್ರೆ ಪಡೆದು ಸೇವಿಸುವಾಗಲೇ ಹೃದಯಾಘಾತ – ವ್ಯಕ್ತಿ ಸಾವು

    ನಮ್ಮ ಸರ್ಕಾರ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಕೆ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿ ನಾಯಕರು ತಮ್ಮದೇ ಸರ್ಕಾರ ರೈಲು ಪ್ರಯಾಣ ಹೆಚ್ಚಿಸಿದಾಗ ಸದ್ದಿಲ್ಲದೆ ಬಿಲ ಸೇರಿಕೊಂಡಿದ್ದಾರೆ. ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಏರಿಕೆಯಾದಾಗ ಬೀದಿಗಿಳಿದಿದ್ದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಹೊಂದಿರುವ ದರ ನಿರ್ಣಯ ಸಮಿತಿಯೇ ಆ ಏರಿಕೆಯ ನಿರ್ಧಾರ ಕೈಗೊಂಡಿರುವುದನ್ನು ಬಚ್ಚಿಟ್ಟು ನಮ್ಮ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ವಿಫಲ ಪ್ರಯತ್ನ ನಡೆಸಿದ್ದರು ಎಂದು ಹರಿಹಾಯ್ದರು. ಇದನ್ನೂ ಓದಿ: ಶ್ರೀರಾಮ ಸೇನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಕೇಸ್‌ – ಹುಕ್ಕೇರಿ ಪಿಎಸ್‌ಐ ಅಮಾನತು

    ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದು, ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಯಾಣಿಕರು ಸಂಚರಿಸುವ ಈ ಸಾರಿಗೆ ವ್ಯವಸ್ಥೆ ಈಗಲೂ ಲಾಭದಾಯಕವಾಗಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ಬಜೆಟ್ ಮಂಡನೆಯ ಪದ್ಧತಿಯನ್ನು ನರೇಂದ್ರ ಮೋದಿ ಸರ್ಕಾರ ಕೈಬಿಟ್ಟಿರುವ ಕಾರಣ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೊದಲು ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ದೇಶದ ಜನತೆಯ ಮುಂದಿಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಗರ್ಭಿಣಿ ಸಾವು

  • ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    ರೈಲ್ವೇ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಹಣ ಇಲ್ಲದಿದ್ರೂ ಟಿಕೆಟ್‌ ಬುಕ್‌ ಮಾಡಬಹುದು!

    – ʻಈಗ ಟಿಕೆಟ್‌ ಬುಕ್ ಮಾಡಿ, ನಂತರ ಪಾವತಿಸಿʼ!

    ನವದೆಹಲಿ: ನೀವು ಟ್ರೈನ್‌ನಲ್ಲಿ ಹೋಗ್ಬೇಕಾ? ನಿಮ್ಮ ಬಳಿ ಹಣ ಇಲ್ವಾ? ಡೋಂಟ್‌ವರಿ ಈಗ ಟಿಕೆಟ್‌ ಬುಕ್‌  ಮಾಡಿ ನಂತರ ಪಾವತಿಸಿ.

    ಏನಿದು ಅಚ್ಚರಿ ಅಂತೀರಾ… ಹೌದು. ಭಾರತೀಯ ರೈಲ್ವೆ (Indian Railway) ಇಲಾಖೆಯು ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನ ಕೊಟ್ಟಿದೆ. ಟಿಕೆಟ್‌ ಬುಕಿಂಗ್‌ನಲ್ಲಿ (Ticket Booking) ಹೊಸ ಸೌಲಭ್ಯ ಜಾರಿಗೆ ತಂದಿದೆ. ಇದನ್ನೂ ಓದಿ: ಇನ್ನು ಮುಂದೆ ಅರಣ್ಯದಲ್ಲಿ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ

    ಒಂದು ವೇಳೆ ನೀವು ಪ್ರವಾಸಕ್ಕೆ ಪ್ಲ್ಯಾನ್‌ ಮಾಡುತ್ತಿದ್ದು, ತಕ್ಷಣವೇ ನಿಮ್ಮ ಬಳಿ ರೈಲು ಟಿಕೆಟ್‌ ಖರೀದಿಸಲು ಚಿಂತಿಸಬೇಕಿಲ್ಲ. ಅದಕ್ಕಾಗಿಯೇ ಭಾರತೀಯ ರೈಲ್ವೆ ಇಲಾಖೆ ʻಈಗಲೇ ಬುಕ್ ಮಾಡಿ, ನಂತರ ಪಾವತಿಸಿʼ ಆಯ್ಕೆಯನ್ನು ಪರಿಚಯಿಸಿದೆ, ಇದು ಯಾವುದೇ ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಅನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಮತ್ತು ಅನುಸರಿಸಲು ಕೆಲವು ಪ್ರಮುಖ ಷರತ್ತುಗಳಿವೆ.

    ಬುಕ್ಕಿಂಗ್‌ ಹೇಗೆ?
    1. ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
    2. ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್‌ ಮಾಡಿ.
    3. ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್ ಕೇಳುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ. ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು (Submit) ಆಯ್ಕೆಯನ್ನು ಕ್ಲಿಕ್ ಮಾಡಿ.
    4. ನಿಮ್ಮನ್ನು ಪಾವತಿ ಪೇಜ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
    5. ಪೇ ಲೇಟರ್ ಆಯ್ಕೆಯನ್ನು ಬಳಸಲು, ಮೊದಲು (www.epaylater.in) ಗೆ ಭೇಟಿ ನೀಡುವ ಮೂಲಕ ನೋಂದಾಯಿಸಬೇಕು.
    6. ನೋಂದಣಿ ನಂತರ, ಪೇ ಲೇಟರ್ ಆಯ್ಕೆಯು ಲಭ್ಯವಾಗುತ್ತದೆ. ಅದನ್ನು ಆಯ್ಕೆ ಮಾಡಿ ಮತ್ತು ಯಾವುದೇ ಮುಂಗಡ ಪಾವತಿಯಿಲ್ಲದೇ ನೀವು ದೃಢೀಕೃತ ಟಿಕೆಟ್ ಅನ್ನು ಪಡೆಯುತ್ತೀರಿ.

    14 ದಿನದಲ್ಲಿ ಪಾವತಿಸಿ:
    ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿದ 14 ದಿನಗಳಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿ ಮಾಡಲು ವಿಫಲವಾದ್ರೆ 3.5% ಸೇವಾ ಶುಲ್ಕ ವಿಧಿಸಲಾಗುತ್ತದೆ. ಆ ನಂತರವೂ ಪಾವತಿಯನ್ನ ಮತ್ತಷ್ಟು ವಿಳಂಬ ಮಾಡಿದ್ರೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ನೋಡ್ಕೊಂಡು ದರ್ಶನ್ ಕೇಸ್‌ನಲ್ಲಿ ಮುಂದಿನ ಕ್ರಮ – ಪರಮೇಶ್ವರ್

  • 35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    ಜೈಪುರ: 35 ರೂಪಾಯಿಗಳನ್ನು ಮರಳಿಪಡೆಯುವ ಸಲುವಾಗಿ ರಾಜಾಸ್ಥಾನದ ಕೋಟಾ ಮೂಲದ ವ್ಯಕ್ತಿಯೊಬ್ಬರು ಕಳೆದ 5 ವರ್ಷಗಳಿಂದ ನಡೆಸಿದ ಕಾನೂನು ಹೋರಾಟ ಕೊನೆಗೂ ಯಶಸ್ವಿಯಾಗಿದ್ದು, ಸುಮಾರು 3 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.

    2.98 ಬಳಕೆದಾರರಿಗೆ ಪ್ರತಿ ಟಿಕೆಟ್ ಬೆಲೆ 35 ರೂಪಾಯಿಯಂತೆ ಒಟ್ಟಾರೆ 2.43 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಹಿಂಪಡೆಯಲಿದ್ದಾರೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ. ಇದನ್ನೂ ಓದಿ: ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್

    Railway

    ಸುಮಾರು 50 ಆರ್‌ಟಿಐ ಅರ್ಜಿ ಮತ್ತು 4 ಸರ್ಕಾರಿ ಇಲಾಖೆಗೆ ಹಲವು ಪತ್ರ ಬರೆದು ಜಿಎಸ್‌ಟಿ ಅನುಷ್ಟಾನವಾಗುವುದಕ್ಕೂ ಮುನ್ನ ತನ್ನ ಟಿಕೆಟ್ ರದ್ದಾಗಿದ್ದರೂ ಸೇವಾ ಶುಲ್ಕವಾಗಿ ಪಡೆದಿದ್ದ 35 ರೂಪಾಯಿಯನ್ನು ಹೋರಾಟದೊಂದಿಗೆ ಮತ್ತೆ ಪಡೆದುಕೊಂಡಿದ್ದಾರೆ. ಇದರಿಂದ ಇದೇ ಪರಿಸ್ಥಿತಿಯಲ್ಲಿದ್ದ 2.98 ಲಕ್ಷ ಐಆರ್ ಸಿಟಿಸಿ ಬಳಕೆದಾರರಿಗೆ ರೈಲ್ವೆಯು 2.43 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಉತ್ತರಿಸಿದ್ದಾರೆ.

    Railway

    ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರಿಗೆ ಪದೇ ಪದೇ ಮಾಡಿದ ಟ್ವೀಟ್ ಗಳಿಂದ 2.98 ಲಕ್ಷ ಬಳಕೆದಾರರು ರೂ.35 ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    Railway

    ಏನಿದು ಘಟನೆ?: ಜಿಎಸ್‌ಟಿ ಅನುಷ್ಠಾನವಾಗುವ ಮುನ್ನವೇ ತಾನು ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ಶುಲ್ಕವಾಗಿ 35 ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗಿತ್ತು. ನಂತರ ರೈಲ್ವೆ ಮತ್ತು ಹಣಕಾಸು ಸಚಿವಾಲಯಕ್ಕೆ ಆರ್‌ಟಿಐ ಸಲ್ಲಿಸುವ ಮೂಲಕ 35 ರೂಪಾಯಿ ವಾಪಸ್ ಪಡೆದುಕೊಳ್ಳಲು ಹೋರಾಟ ಆರಂಭಿಸಿದ್ದರು. ಇದೀಗ ಹೆಚ್ಚುವರಿಯಾಗಿ ಪಡೆಯಲಾಗಿದ್ದ 35 ರೂಪಾಯಿ ತನಗೆ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

  • ರೈಲ್ವೆ ಟಿಕೆಟ್ ವಂಚಕನಿಗೆ ಟೆರರ್ ಲಿಂಕ್!

    ರೈಲ್ವೆ ಟಿಕೆಟ್ ವಂಚಕನಿಗೆ ಟೆರರ್ ಲಿಂಕ್!

    ಬೆಂಗಳೂರು: ರೈಲ್ವೆ ಟಿಕೆಟ್‍ನ ಬುಕ್ಕಿಂಗ್ ಅಲ್ಲಿ ವಂಚನೆ ಮಾಡಿ ಸಿಕ್ಕಿ ಬಿದ್ದ ಗುಲಾಂ ಮುಸ್ತಾಫ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.

    ಟಿಕೆಟ್ ವಂಚನೆಯ ಬಗ್ಗೆ ರೈಲ್ವೆ ಇಲಾಖೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗೊಂದಲವಿತ್ತು. ಆನ್‍ಲೈನ್ ಟಿಕೆಟ್ ಓಪನ್ ಆಗುತ್ತಿದ್ದಂತೆ ಕೆಲವೇ ಸೆಕೆಂಡ್‍ಗಳಲ್ಲಿ ಎಲ್ಲವೂ ಮಾರಾಟವಾಗುತಿತ್ತು. ಆದರೆ ಹ್ಯಾಕ್ ಮಾಡಲಾದ ವೆಬ್‍ಸೈಟ್‍ನಿಂದ ಈ ಕೃತ್ಯ ನಡೆಯುತ್ತಿತ್ತು. ಕೊಂಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ ಎಂಬ ಪಕ್ಕ ಮಾಹಿತಿ ದೊರೆತಿತ್ತು.

    ಈ ಮಾಹಿತಿ ಆಧರಿಸಿ ಬೆನ್ನತ್ತಿದ ಯಶವಂತಪುರ ರೈಲ್ವೆ ಅಧಿಕಾರಿಗಳು ಹನುಮಂತರಾಜುನನ್ನು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಜಾರ್ಖಂಡ್ ಮೂಲದ ಗುಲಾಮ್ ಮುಸ್ತಫಾನನ್ನು ಬಂಧಿಸಿದ ಪೊಲೀಸರು ಆರೋಪಿಗಳು ಪ್ರಯಾಣಿಕರಿಗೆಂದು ನೀಡಲಾಗಿದ್ದ ಆನ್‍ಲೈನ್ ಇ-ಟಿಕೆಟ್‍ನ ಐ.ಆರ್.ಟಿ.ಸಿ ವೆಬ್‍ಸೈಟ್‍ನಲ್ಲಿ ನಕಲಿ ದಾಖಲೆ ನೀಡಿ ಎಎನ್‍ಎಂಎಸ್ ಎಂಬ ಹ್ಯಾಕ್ ವೆಬ್‍ಸೈಟ್ ಮುಖಾಂತರ ಟಿಕೆಟ್ ವಂಚನೆ ಮಾಡುತ್ತಿದ್ದರು. ಇದರಲ್ಲಿ ಸಾವಿರಾರು ಮಂದಿ ಇರುವ ದೊಡ್ಡ ಜಾಲವಿದೆ ಎಂಬ ಮಾಹಿತಿ ಪಡೆದ ಅಧಿಕಾರಿಗಳು, ಪ್ರಕರಣಕ್ಕೆ ಮೇಜರ್ ಬ್ರೇಕ್ ದೊರೆತ ಖುಷಿಯಲ್ಲಿದ್ದರು. ಆದರೆ ಈ ನಡುವೆ ಆತನ ಬಳಿ ಇದ್ದ ಲ್ಯಾಪ್‍ಟಾಪ್‍ನಲ್ಲಿದ್ದ ಕೆಲ ಮಾಹಿತಿ ಅಧಿಕಾರಿಗಳು ದಂಗಾಗುವಂತೆ ಮಾಡಿತ್ತು.

    ಬಂಧಿತ ಗುಲಾಮ್ ಮುಸ್ತಾಫ ಬಳಿ ಇದ್ದ ಲ್ಯಾಪ್‍ಟಾಪ್‍ನಲ್ಲಿ ಕೆಲವು ಸಂಶಯಾಸ್ಪದ ವಿಚಾರಗಳಿದ್ದು, ಇವು ಕೇಂದ್ರ ಸರ್ಕಾರದ ಕೆಲ ಗುಟ್ಟುಗಳು ಎನ್ನಲಾಗಿವೆ. ಸರ್ಕಾರಕ್ಕೆ ಸಂಬಂಧಿಸಿದ ವೆಬ್‍ಸೈಟ್‍ಗಳು ಹಾಗೂ ಅದರ ವಿವರ, ಲಿಂಕ್ಸ್ ಎಂಬ ದೊಡ್ಡ ವೆಬ್‍ಸೈಟ್‍ಗಳ ಹ್ಯಾಕ್ ಮಾಡುವ ಸಾಫ್ಟ್ ವೇರ್, ಕೆಲವು ಬ್ಯಾಂಕ್‍ಗಳ 3 ಸಾವಿರ ಖಾತೆಗಳ ವಿವರ ಸೇರಿದಂತೆ ಹಲವು ಮಾಹಿತಿಗಳಿದ್ದವು. ಪಾಕಿಸ್ತಾನ ಹಾಗೂ ಬಾಂಗ್ಲಾ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಭಯೋತ್ಪಾದನೆಯ ಚಟುವಟಿಕೆಯ ಶಂಕೆ ಮೂಡಿದೆ.

    ಬಂಧಿತ ಗುಲಾಮ್ ಮುಸ್ತಾಫನ ಲ್ಯಾಪ್‍ಟಾಪ್‍ನ ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ವೇಳೆ ಆತಂಕ ಮೂಡಿಸುವ ಕೆಲವು ಡಿಜಿಟಲ್ ಫುಟ್‍ಪ್ರಿಂಟ್‍ಗಳು ಪತ್ತೆಯಾಗಿದ್ದು, ಈ ಹಿಂದೆ ಇಸ್ರೋಗೆ ಸಂಬಂಧಿಸಿದ ಕೆಲ ಮಾಹಿತಿಗಳ ಸರ್ಚ್ ಮಾಡಿರೋದು ಪತ್ತೆಯಾಗಿದೆ. ಅದರ ಜೊತೆಗೆ ಇಸ್ರೋನ ಕಾರ್ಟೋಸ್ಯಾಟನ್ ಬಗೆಗಿನ ಕೆಲ ಮಾಹಿತಿಗಳು ಈತನ ಬಳಿ ಲಭ್ಯವಾಗಿದ್ದು, ಈ ಬಗ್ಗೆ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡಿ ರೈಲ್ವೆ ಅಧಿಕಾರಿಗಳು ದೂರು ನೀಡಿದ್ದಾರೆ.

  • ಬದಲಾಯ್ತು ರೈಲ್ವೇ ವೆಬ್‍ಸೈಟ್: ಈಗ ಸುಲಭವಾಗಿ ಟಿಕೆಟ್ ಬುಕ್ ಮಾಡಿ-ಹೊಸ ವಿಶೇಷತೆಗಳು ಏನು?

    ಬದಲಾಯ್ತು ರೈಲ್ವೇ ವೆಬ್‍ಸೈಟ್: ಈಗ ಸುಲಭವಾಗಿ ಟಿಕೆಟ್ ಬುಕ್ ಮಾಡಿ-ಹೊಸ ವಿಶೇಷತೆಗಳು ಏನು?

    ನವದೆಹಲಿ: ಭಾರತೀಯ ರೈಲ್ವೇಯ ಐಆರ್ ಸಿಟಿಸಿ ವೆಬ್‍ಸೈಟ್ ಅಪ್‍ಡೇಟ್ ಆಗಿದ್ದು, ಟಿಕೆಟ್ ಬುಕ್ಕಿಂಗ್ ಸುಲಭವಾಗಲಿದೆ.

    ಪರಿಷ್ಕೃತಗೊಂಡ ವೆಬ್‍ಸೈಟ್ ನಲ್ಲಿ ಯಾವುದೇ ರೀತಿ ಅಡೆ ತಡೆಗಳಿಲ್ಲದೆ ಬೇಗ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದೆ. ಹೊಸ ವೆಬ್‍ಸೈಟ್ ಎಲ್ಲಾ ಫ್ಲಾಟ್‍ಫಾರಂ ಗಳಲ್ಲೂ ಕೆಲಸ ಮಾಡಲಿದೆ. ಉದಾಹರಣೆಗೆ ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಸುಲಭವಾಗಿ ಕೆಲಸ ಮಾಡಬಹುದು.

    ಗ್ರಾಹಕರು ರೈಲುಗಳ ಇಲ್ಲ ಸೀಟ್ ಗಳ ಲಭ್ಯತೆ ತಿಳಿಯಲು, ವಿಚಾರಣೆ ಮಾಡಲು ವೆಬ್ ಸೈಟ್ ಗೆ ಲಾಗ್ ಇನ್ ಆಗಬೇಕಾದ ಅವಶ್ಯಕತೆ ಇಲ್ಲ. ರೈಲು ಗಳ ಹೊರಡುವ, ಬರುವ ಸಮಯ, ದಿನಾಂಕ, ಕ್ಲಾಸ್, ಕೋಟಾ ಗಳ ಆಧಾರದಲ್ಲಿ ರೈಲು, ಸೀಟ್ ಗಳ ಲಭ್ಯತೆ ತಿಳಿಯಬಹುದಾಗಿದೆ.

    ವೇಟಿಂಗ್ ಲಿಸ್ಟ್ ನಲ್ಲಿರುವವರಿಗೆ ಧೃಢೀಕರಣದ ಸಾಧ್ಯತೆಗಳನ್ನು ತಿಳಿಸುವ ವ್ಯವಸ್ಥೆ ಇದೆ. ಗ್ರಾಹಕರು ಸೀಟ್ ಕ್ಯಾನ್ಸಲ್ ಮಾಡಲು, ಟಿಕೆಟ್ ಪ್ರಿಂಟ್ ಮಾಡಲು, ಎಸ್‍ಎಮ್‍ಎಸ್ ಕಳುಹಿಸಿಕೊಳ್ಳಲು ಆಯ್ಕೆ ಕಲ್ಪಿಸಲಾಗಿದೆ.

    ಅಷ್ಟೇ ಅಲ್ಲದೇ ಬುಕ್ ಮಾಡಿದ ಸಮಯದಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲದಿದ್ದರೆ ಆ ಟಿಕೆಟ್ ದರದಲ್ಲಿ ಬೇರೆ ಸಮಯದಲ್ಲಿ ಆ ಸ್ಥಳಕ್ಕೆ ಹೋಗುವ ರೈಲಿನಲ್ಲಿ ಲಭ್ಯತೆ ಇದ್ದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವಿದೆ.

    ಪ್ರತಿ ಗ್ರಾಹಕನಿಗೂ ಪ್ರತ್ಯೇಕ ಕಾರ್ಡ್ ಇದ್ದು ಗ್ರಾಹಕ ಸಂಬಂಧಿ ಮಾಹಿತಿಯನ್ನು ಕಲೆಹಾಕಲಾಗಿರುತ್ತದೆ. ಕಾಯ್ದಿರಿಸುವ ವೇಳೆ ಈ ಮಾಹಿತಿಯನ್ನು ಬಳಸುವುದರಿಂದ ಕಾಯ್ದಿರಿಸುವ ಸಮಯ ಕೊಂಚ ಕಡಿಮೆಯಾಗಲಿದೆ. ಹಣ ಪಾವತಿಸಲು 6 ಆದ್ಯತಾ ಬ್ಯಾಂಕ್ ಗಳನ್ನು ನಮೂದಿಸಬಹುದಾಗಿದೆ.

  • ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

    ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

     

    ನವದೆಹಲಿ: ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆಯ ಪ್ರಯಾಣಿಕರ ಸೌಲಭ್ಯ ಸಮಿತಿ ಸಮ್ಮತಿಸಿದೆ. 2018ರ ಜನವರಿ 1ರಿಂದ ಈ ಸೌಲಭ್ಯ ಸಿಗಲಿದೆ.

    ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದ್ರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸೋ ರೈಲಿಗೆ ಕರ್ನಾಟಕದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದ್ರೆ ನಿಮ್ಮ ಟಿಕೆಟ್ ಕನ್ನಡದಲ್ಲೇ ಇರಲಿದೆ.

    ಬುಧವಾರದಂದು ನಡೆದ ಸಭೆಯಲ್ಲಿ ಸಮಿತಿಯ ಸದಸ್ಯರಾದ ಆಶೀರ್ವತಂ ಆಚಾರಿ ಅವರು ಈ ವಿಚಾರವನ್ನ ಪ್ರಸ್ತಾಪಿಸಿದ ನಂತರ ಸಮಿತಿ ಇದಕ್ಕೆ ಸಮ್ಮತಿ ಸೂಚಿಸಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಆಚಾರಿ, ತಮಿಳುನಾಡಿನಲ್ಲಿ ಸಾಕಷ್ಟು ಜನ ರೈಲ್ವೆ ಟಿಕೆಟ್‍ನಿಂದ ತೊಂದರೆ ಅನುಭವಿಸುತ್ತಿದ್ದರು. ಕೆಲವರಿಗೆ ಅವರು ಸರಿಯಾದ ಟಿಕೆಟ್ ಹೊಂದಿದ್ದಾರಾ ಇಲ್ಲವಾ ಎಂಬುದೇ ಗೊತ್ತಿರುತ್ತಿರಲಿಲ್ಲ. ಟಿಕೆಟ್ ಮೇಲೆ ಮುದ್ರಣವಾಗಿರೋದನ್ನ ಓದಲು ಬಾರದೆ ಹಲವು ಬಾರಿ ತಮ್ಮದಲ್ಲದ ತಪ್ಪಿಗೆ ಜನ ದಂಡ ಕಟ್ಟಿದೂ ಇದೆ ಎಂದು ಹೇಳಿದ್ದಾರೆ.

    ಮೊದಲಿಗೆ ಅಧಿಕಾರಿಗಳು ಮೂರನೇ ಭಾಷೆಯನ್ನ ಸೇರಿಸಲು ತಯಾರಿರಲಿಲ್ಲ. ಯಾಕಂದ್ರೆ ದೀರ್ಘ ಕಾಲದಿಂದ ದ್ವಿಭಾಷಾ ನೀತಿಯ ಜೊತೆಗೆ ಕೆಲಸ ಮಾಡಿದ್ರು. ಮತ್ತೊಂದು ಕಾರಣವೆಂದರೆ ಅವರು ಇನ್ನೂ ಆರ್ಕಿಯಾಕ್ ಕೊಬೊಲ್ ಸಾಫ್ಟ್ ವೇರ್ ಬಳಸುತ್ತಿದ್ದು, ಇದನ್ನು ಕೂಡಲೇ ಬದಲಾಯಿಸೋದು ಕಷ್ಟವಾಗಿತ್ತು.

    ಅದ್ರೆ ಡಿಜಿಟಲ್ ಯುಗದಲ್ಲಿ ಇದನ್ನ ಪರಿಗಣಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈಲ್ವೆ ಇಲಾಖೆ ಅತ್ಯಂತ ದೊಡ್ಡ ಸೇವಾ ಪೂರೈಕೆದಾರ ಆಗಿದೆ. ಈಗಿನ ದಿನಗಳಲ್ಲಿ ಸೆಲ್‍ಫೋನ್ ಸಂಸ್ಥೆಗಳೂ ಕೂಡ ಶುಲ್ಕ ರಹಿತ ನಂಬರ್‍ಗೆ ಕರೆ ಮಾಡಿದಾಗ 3 ಭಾಷೆಗಳಲ್ಲಿ ಸೇವೆ ನೀಡುತ್ತಿವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಮೂರನೆಯ, ಸ್ಥಳೀಯ ಭಾಷೆಯನ್ನು ತರುವುದು ನಮ್ಮ ಕರ್ತವ್ಯವಲ್ಲವೇ ಎಂದು ಆಚಾರಿ ಹೇಳಿದ್ದಾರೆ.

    ಈ ವರ್ಷಾಂತ್ಯದ ವೇಳೆಗೆ ಸಾಫ್ಟ್ ವೇರ್ ಅಪ್‍ಡೇಟ್ ಮಾಡಲಾಗುತ್ತದೆ. ಇದು ಎಲ್ಲಾ ವರ್ಗದ ಪ್ರಯಾಣಕ್ಕೆ ಹಾಗೂ ಕೌಂಟರ್‍ಗಳಲ್ಲಿ ವಿತರಿಸಲಾಗುವ ಪ್ಯಾಸೆಂಜರ್ ರೈಲುಗಳ ಟಿಕೆಟ್‍ಗಳಿಗೆ ಅನ್ವಯವಾಗಲಿದೆ. ಆದ್ರೆ ಆನ್‍ಲೈನ್‍ನಲ್ಲಿ ಬುಕಿಂಗ್ ಮಾಡಿದಾಗ ಅನ್ವಯವಾಗುವುದಿಲ್ಲ. (ಜಗತ್ತಿನ ಯಾವುದೇ ಭಾಗದಲ್ಲಿದ್ರೂ ಆನ್‍ಲೈನ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಈ ವೇಳೆ ಸ್ಥಳೀಯ ಭಾಷೆಯನ್ನು ಅಳವಡಿಸುವುದು ಕಷ್ಟವಾಗಲಿದೆ)

    ಈ ಮೂಲಕ ಹಿಂದಿ ಹೇರಿಕೆ ವಿರುದ್ಧ ನಡೆಸಲಾಗಿದ್ದ ಅಭಿಯಾನಕ್ಕೆ ಜಯ ಸಿಕ್ಕಂತಾಗಿದೆ. ರೈಲ್ವೆ ಟಿಕೆಟ್‍ಗಳಲ್ಲಿ ಕನ್ನಡ ಇರಲಿದೆ ಎಂಬುದನ್ನು ಕೇಳಲು ತಾತ್ಕಾಲಿಕವಾಗಿ ಖುಷಿಯ ವಿಚಾರ. ಆದ್ರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಟಿಕೆಟ್ ಲಭ್ಯವಿದೆ. ಆದ್ರೆ ದೇಶದೆಲ್ಲೆಡೆ ಹಿಂದಿ ಟಿಕೆಟ್ ಲಭ್ಯತೆ ಹಾಗೇ ಇದೆ. ಆದ್ರೂ ಈ ಕ್ರಮವನ್ನ ಸ್ವಾಗತಿಸುತ್ತೇವೆ ಎಂದು ಕಳೆದ ವಾರ ಬೆಂಗಳೂರಿನಲ್ಲಿ #ಹಿಂದಿಬೇಡ ಅಭಿಯಾನ ಮಾಡಿದ್ದ ವಲ್ಲೀಶ್ ಕುಮಾರ್ ಪ್ರತಿಕೆಯೊಂದಕ್ಕೆ ಹೇಳಿದ್ದಾರೆ.