Tag: ರೇವತಿ

  • ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    – ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
    – ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

    ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

  • ಕುಮಾರಸ್ವಾಮಿಗೆ ಯಡಿಯೂರಪ್ಪ ಧನ್ಯವಾದ

    ಕುಮಾರಸ್ವಾಮಿಗೆ ಯಡಿಯೂರಪ್ಪ ಧನ್ಯವಾದ

    ಬೆಂಗಳೂರು: ಮಗನ ಮದುವೆಯನ್ನು ಸರಳವಾಗಿ ಮಾಡಿದ್ದಕ್ಕೆ ಎಚ್.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ದರೂ ಹೆಚ್ಚು ಜನರನ್ನು ಸೇರಿಸದೆ ಮದುವೆ ಕಾರ್ಯ ಮುಗಿಸಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

    ಶುಕ್ರವಾರ ನಟ ನಿಖಿಲ್ ಮತ್ತು ರೇವತಿ ವಿವಾಹ ಕಲ್ಯಾಣೋತ್ಸವ ಅದ್ಧೂರಿ ಸೆಟ್‍ನಲ್ಲಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಡೆದಿದೆ. ಮದುವೆಗಾಗಿ ಕೇತಗಾನಹಳ್ಳಿಯಲ್ಲಿನ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ಸಪ್ತಪದಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿತ್ತು. ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ವರ ನಿಖಿಲ್ ರೇವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದರು. ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವಾದ ಮಾಡಿದ್ದರು.

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಷ್ಟೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ನನ್ನ ಪುತ್ರನ ಮದ್ವೆಗೆ ಮನೆಯಿಂದಲೇ ಹಾರೈಸಿದ ನಿಮ್ಮೆಲ್ಲರಿಗೂ ಸದಾ ಋಣಿ: ಎಚ್‍ಡಿಕೆ

    ನನ್ನ ಪುತ್ರನ ಮದ್ವೆಗೆ ಮನೆಯಿಂದಲೇ ಹಾರೈಸಿದ ನಿಮ್ಮೆಲ್ಲರಿಗೂ ಸದಾ ಋಣಿ: ಎಚ್‍ಡಿಕೆ

    ಬೆಂಗಳೂರು: ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಮದುವೆ ರಾಮನಗರದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸರಳವಾಗಿ ನೇರವೇರಿದೆ. ಇದೇ ಬೆನ್ನಲ್ಲೇ ಎಚ್‍ಡಿಕೆ ಅವರು ಟ್ವೀಟ್ ಮಾಡಿ ತಮ್ಮ ಮಗ ಹಾಗೂ ಸೊಸೆಗೆ ಮನೆಯಿಂದಲೇ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು. ಇಡೀ ಜಗತ್ತು ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ, ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ ಎಂದು ಟ್ವಿಟ್ ಮಾಡಿದ್ದಾರೆ.

    ಹಾಗೆಯೇ ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿ ಎಂದು ಎಚ್‍ಡಿಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಗತ್ತು ಪ್ರಸಕ್ತ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯತುಂಬಿದ ಕೃತಜ್ಞತೆಗಳು ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನಿಖಿಲ್ ಅವರು ರೇವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವಾದ ಮಾಡಿದ್ದಾರೆ.

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಷ್ಟೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕುಟುಂಬದವರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

  • ರೇವತಿಗೆ ಮಾಂಗಲ್ಯಧಾರಣೆ ಮಾಡಿದ ನಿಖಿಲ್

    ರೇವತಿಗೆ ಮಾಂಗಲ್ಯಧಾರಣೆ ಮಾಡಿದ ನಿಖಿಲ್

    ರಾಮನಗರ: ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮತ್ತು ರೇವತಿ ವಿವಾಹ ಕಲ್ಯಾಣೋತ್ಸವ ಅದ್ಧೂರಿ ಸೆಟ್‍ನಲ್ಲಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಡೆದಿದೆ.

    ಮದುವೆಗಾಗಿ ಕೇತಗಾನಹಳ್ಳಿಯಲ್ಲಿನ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ಸಪ್ತಪದಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿತ್ತು. ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ವರ ನಿಖಿಲ್ ರೇವತಿಯ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ನವ ದಂಪತಿಗೆ ಮದುವೆಯಲ್ಲಿ ಭಾಗಿಯಾಗಿದ್ದ ಗಣ್ಯರು, ಹಿತೈಷಿಗಳು ಧಾರೆ ಎರೆಯುವ ಮೂಲಕ ಆಶೀರ್ವಾದ ಮಾಡಿದ್ದಾರೆ.

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಂಪತಿ, ಎಚ್‍ಡಿ ಕುಮಾರಸ್ವಾಮಿ ದಂಪತಿ ಹಾಗೂ ಉದ್ಯಮಿ ಮಂಜುನಾಥ್ ದಂಪತಿ ಸಮ್ಮುಖದಲ್ಲಿ ನಿಖಿಲ್ ಮತ್ತು ರೇವತಿ ವಿವಾಹ ಕಾರ್ಯಕ್ರಮ ನೆರವೇರಿದೆ. ನಿಖಿಲ್ ಹಾಗೂ ರೇವತಿ ಮನೆಯವರು, ಆಪ್ತರಷ್ಟೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಕುಟುಂಬದವರು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

    https://twitter.com/ANI/status/1251014426817368064

    ಈ ಹಿಂದೆ ರಾಮನಗರದ ಜನಪದ ಲೋಕದ ಬಳಿ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪರಿಣಾಮದಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸಕ್ಕೆ ಶಿಫ್ಟ್ ಆಗಿತ್ತು. ಈಗ ಬೆಂಗಳೂರು ರೆಡ್ ಜೋನ್‍ನಲ್ಲಿದೆ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೆ ಗ್ರೀನ್ ಜೋನ್ ರಾಮನಗರಕ್ಕೆ ಮದುವೆ ಶಿಫ್ಟ್ ಮಾಡಿದ್ದರು.

  • ಲಾಕ್‍ಡೌನ್ ನಡುವೆಯೂ ಎಚ್‍ಡಿಕೆ ಪುತ್ರನ ಕಲ್ಯಾಣ

    ಲಾಕ್‍ಡೌನ್ ನಡುವೆಯೂ ಎಚ್‍ಡಿಕೆ ಪುತ್ರನ ಕಲ್ಯಾಣ

    ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ. ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ಸರಳವಾಗಿ ನಡೆಯುತ್ತಿದೆ.

    ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿಕೆ ಫಾರ್ಮ್‍ಹೌಸ್‍ನಲ್ಲಿ ವಿವಾಹ ನಡೆಯುತ್ತಿದ್ದು, ಪೂರ್ವ ನಿಗದಿಯಾಗಿದ್ದ ದಿನಾಂಕದಂದೇ ಮದುವೆ ನಡೆಯುತ್ತಿದೆ. ಎರಡು ಕುಟುಂಬದವರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ನಿಖಿಲ್  ಮತ್ತು ರೇವತಿ ವಿವಾಹ ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನೆರವೇರಲಿದೆ.

    ಈಗಾಗಲೇ ಫಾರ್ಮ್‍ಹೌಸ್‍ನಲ್ಲಿ ವರ ನಿಖಿಲ್ ಮತ್ತು ವಧು ರೇವತಿಗೆ ಅರಿಶಿಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಮುಂದಿನ ಶಾಸ್ತ್ರಗಳಿಗೆ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ರಾಮನಗರದ ಜನಪದ ಲೋಕದ ಬಳಿ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪರಿಣಾಮದಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸಕ್ಕೆ ಮದುವೆ ಶಿಫ್ಟ್ ಆಗಿತ್ತು. ಈಗ ಬೆಂಗಳೂರು ರೆಡ್ ಜೋನ್‍ನಲ್ಲಿದೆ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೆ ಗ್ರೀನ್ ಜೋನ್ ರಾಮನಗರಕ್ಕೆ ಮದುವೆ ಶಿಫ್ಟ್ ಮಾಡಿದ್ದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪೊಲೀಸರು ಕೂಡ ಪ್ರತಿ ವಾಹನಗಳನ್ನು ತಡೆದು ಪರಿಶೀಲಿಸಿ ಕಳುಹಿಸುತ್ತಿದ್ದಾರೆ. ಪ್ರವೇಶಕ್ಕೆ ಅನುಮತಿ ಪಡೆದಿರುವವರಿಗಷ್ಟೇ ಕಾರ್ ನಂಬರ್ ನೋಡಿ ಪೊಲೀಸರು ಒಳಗೆ ಹೋಗಲು ಅವಕಾಶ ಮಾಡಿಕೊಡುತ್ತಿದ್ದಾರೆ.

  • ಬೆಂಗ್ಳೂರಿನಿಂದ ಮತ್ತೆ ರಾಮನಗರಕ್ಕೆ ನಿಖಿಲ್ ಮದ್ವೆ ಶಿಫ್ಟ್

    ಬೆಂಗ್ಳೂರಿನಿಂದ ಮತ್ತೆ ರಾಮನಗರಕ್ಕೆ ನಿಖಿಲ್ ಮದ್ವೆ ಶಿಫ್ಟ್

    – ತೋಟದ ಮನೆಯಲ್ಲಿ ಸಿಂಪಲ್ ಮ್ಯಾರೇಜ್
    – ನಿಖಿಲ್, ರೇವತಿ ಕುಟುಂಬಸ್ಥರಷ್ಟೇ ಭಾಗಿ

    ರಾಮನಗರ: ನಿಗದಿಯಾದಂತೆ ಏಪ್ರಿಲ್ 17ರಂದೇ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಹಾಗೂ ರೇವತಿ ಅವರ ಮದುವೆ ನಡೆಯಲಿದ್ದು, ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನಿಂದ ರಾಮನಗರಕ್ಕೆ ಶಿಫ್ಟ್ ಮಾಡಲಾಗಿದೆ.

    ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಳಿ ಇರುವ ತೋಟದ ಮನೆಯಲ್ಲಿ ಸರಳವಾಗಿ ನಿಖಿಲ್ ಹಾಗೂ ರೇವತಿ ಮದುವೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೊದಲು ರಾಮನಗರದ ಹೊರವಲಯದ ಜನಪದ ಲೋಕದ ಬಳಿ ನಿಖಿಲ್, ರೇವತಿ ವಿವಾಹ ನಡೆಸಲು ನಿಗದಿ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ಮದುವೆ ಕಾರ್ಯಕ್ರಮವನ್ನು ಬೆಂಗಳೂರಿನ ಹೆಚ್‍ಡಿಕೆ ನಿವಾಸದ ಬಳಿಯೇ ಮಾಡಲು ನಿರ್ಧರಿಸಲಾಗಿತ್ತು.

    ಈಗ ಕೊರೊನಾ ಹಾವಳಿಗೆ ಬೆಂಗಳೂರು ರೆಡ್ ಜೋನ್‍ನಲ್ಲಿರುವ ಹಿನ್ನೆಲೆ ಮತ್ತೆ ಮದುವೆ ಕಾರ್ಯವನ್ನು ರಾಮನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿಯೇ ಮದುವೆ ನೆರವೇರಲಿದೆ.

    ಮದುವೆಗೆ ನಿಖಿಲ್ ಹಾಗೂ ರೇವತಿ ಅವರ ಎರಡು ಕುಟುಂಬದವರು ಸೇರಿ ಸುಮಾರು 70 ರಿಂದ 100 ಜನರು ಮಾತ್ರ ಭಾಗಿಯಾಗಲಿದ್ದಾರೆ. ಸರಳವಾಗಿ ನಿಖಿಲ್ ಮದುವೆ ನೆರವೇರಲಿದ್ದು, ಈಗಾಗಲೇ ತೋಟದ ಮನೆ ಬಳಿ ವಿವಾಹಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ತೋಟದ ಮನೆಯ ಬಳಿ ವಿವಾಹಕ್ಕೆ ಸೆಟ್ ಹಾಕುವುದು, ಇರತೆ ವ್ಯವಸ್ಥೆಗಳ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ.

  • ನಿಗದಿಯಂತೆ ನಿಖಿಲ್ ಮದುವೆ – ವಧು ರೇವತಿ ಮನೆಯಲ್ಲಿ ಮುಹೂರ್ತ ಫಿಕ್ಸ್

    ನಿಗದಿಯಂತೆ ನಿಖಿಲ್ ಮದುವೆ – ವಧು ರೇವತಿ ಮನೆಯಲ್ಲಿ ಮುಹೂರ್ತ ಫಿಕ್ಸ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‍ನ ಅಟ್ಟಹಾಸ ಹಿನ್ನೆಲೆಯಲ್ಲಿ ನಿಗದಿಯಂತೆ ನಿಖಿಲ್ ಕುಮಾರಸ್ವಾಮಿ ಮದುವೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುಟುಂಬ ಮುಂದಾಗಿದೆ ಎಂದು ತಿಳಿದುಬಂದಿದೆ.

    ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ಮುಹೂರ್ತ ಏಪ್ರಿಲ್ 17 ರಂದು ಫಿಕ್ಸ್ ಆಗಿತ್ತು. ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ ಜಾನಪದ ಲೋಕದ ಬಳಿ ಅದ್ಧೂರಿಯಾಗಿ ಮದುವೆ ಮಾಡಲು ಕುಟುಂಬ ನಿರ್ಧರಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಪುತ್ರನ ವಿವಾಹ ಮುಹೂರ್ತವನ್ನು ಮುಂದೂಡಬೇಕಾ? ಅಥವಾ ನಿಗದಿಯಂತೆ ನೆರವೇರಿಸಬೇಕಾ? ಎಂಬ ಗೊಂದಲದಲ್ಲಿ ಕುಮಾರಸ್ವಾಮಿ ಕುಟುಂಬವಿತ್ತು. ಆದರೆ ಭಾನುವಾರ ದೇವೇಗೌಡರ ಕುಟುಂಬ ಅಂತಿಮ ನಿರ್ಧಾರ ತೆಗೆದುಕೊಂಡಿದೆ.

    ತಂದೆ ದೇವೇಗೌಡರ ಜೊತೆಗೆ ನಿನ್ನೆ ಸಂಜೆ ಕುಮಾರಸ್ವಾಮಿ ವಿವಾಹದ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಾರನ್ನು ಮುಹೂರ್ತ ಕಾರ್ಯಕ್ಕೆ ಆಹ್ವಾನಿಸುವುದು ಬೇಡ. ಇಂತಹ ಸಂದರ್ಭದಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯಬಾರದು. ಕೊರೊನಾ ಹರಡುವಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಬಹಳ ಮುಖ್ಯವಾಗಿದೆ. ಸದ್ಯಕ್ಕೆ ನಾವು ರಾಮನಗರ ಹಾಗೂ ಚನ್ನಪಟ್ಟಣದ ಮಧ್ಯೆ ನಿಗದಿಯಂತೆ ವಿವಾಹ ನೆರವೇರಿಸಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಮಟ್ಟಿಗೆ ಮದುವೆ ಕಾರ್ಯ ನೆರವೇರಿಸುವ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ವಧು ರೇವತಿ ಅವರ ಮನೆಯಲ್ಲಿ ಎರಡು ಕುಟುಂಬಗಳ ಮುಖ್ಯ ಸದಸ್ಯರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗಲಿದ್ದು, 50 ಜನರೊಳಗೆ ಸೇರಿ ಮದುವೆ ಮುಹೂರ್ತ ನೆರವೇರಿಸುವ ತಿರ್ಮಾನಕ್ಕೆ ಬಂದಿದ್ದಾರೆ. ಅಲ್ಲದೇ ಲಾಕ್‍ಡೌನ್ ತೆರವಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಆರತಕ್ಷತೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಏಪ್ರಿಲ್ 17 ರಂದು ಒಳ್ಳೆಯ ಮುಹೂರ್ತ ಇದೆ. ಶ್ರೀ ಶಾರ್ವರೀನಾಮ ಸಂವತ್ಸರದ ಉತ್ತರಾಯಣದ ವಸಂತ ಋತುವಿನ ಚೈತ್ರಮಾಸದ ಕೃಷ್ಣ ಪಕ್ಷದ ದಶಮಿ ಒಳ್ಳೆಯ ಮುಹೂರ್ತ. ಇದನ್ನು ಬಿಟ್ಟರೆ ಶ್ರಾವಣ ಮಾಸದವರೆಗೂ ಕಾಯಬೇಕು. ಏಪ್ರಿಲ್ 17 ಬಿಟ್ಟರೆ ಮುಂದೆ ಮೂರ್ನಾಲ್ಕು ತಿಂಗಳು ಒಳ್ಳೆಯ ಮುಹೂರ್ತ ಇಲ್ಲ. ಹೀಗಾಗಿ ತಡ ಮಾಡುವುದು ಬೇಡ. ನಿಗದಿಯಂತೆ ಎರಡು ಕುಟುಂಬದ ಸದಸ್ಯರುಗಳ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸೋಣ ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಕುಮಾರಸ್ವಾಮಿ ವಧು ರೇವತಿ ಅವರ ಪೋಷಕರ ಬಳಿ ಈ ವಿಚಾರವನ್ನು ತಿಳಿಸಿದ್ದಾರೆ. ಹೀಗಾಗಿ ವಧು ರೇವತಿ ನಿವಾಸ ಜ್ಞಾನಭಾರತಿ ಬಡಾವಣೆಯಲ್ಲಿ ಏಪ್ರಿಲ್ 17 ರಂದು ನಿಗದಿಯಂತೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

  • ನಿಶ್ಚಯವಾದಂತೆ ಏಪ್ರಿಲ್ 17ರಂದೇ ನಿಖಿಲ್, ರೇವತಿ ಮದ್ವೆ – ಕುಟುಂಬಸ್ಥರಷ್ಟೇ ಭಾಗಿ

    ನಿಶ್ಚಯವಾದಂತೆ ಏಪ್ರಿಲ್ 17ರಂದೇ ನಿಖಿಲ್, ರೇವತಿ ಮದ್ವೆ – ಕುಟುಂಬಸ್ಥರಷ್ಟೇ ಭಾಗಿ

    ರಾಮನಗರ: ಪುತ್ರ ನಿಖಿಲ್ ಹಾಗೂ ರೇವತಿ ವಿವಾಹ ಕಾರ್ಯ ಪೂರ್ವ ನಿಗದಿಯಂತೆ ಏಪ್ರಿಲ್ 17ರಂದೇ ಬೆಂಗಳೂರಿನ ಮನೆಯ ಬಳಿ ಎರಡು ಕುಟುಂಬಸ್ಥರ ನಡುವೆ ನಡೆಸುವುದಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಮನಗರದಲ್ಲಿ ತಿಳಿಸಿದ್ದಾರೆ.

    ರಾಮನಗರ ಹೊರವಲಯದ ಜನಪದ ಲೋಕದ ಬಳಿ ನಿಖಿಲ್-ರೇವತಿ ವಿವಾಹ ಕಾರ್ಯವನ್ನು ಅದ್ಧೂರಿಯಾಗಿ ನಡೆಸಲು ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಮದುವೆ ಸಿದ್ಧತಾ ಕಾರ್ಯಗಳು ಸ್ಥಗಿತಗೊಂಡಿದ್ದವು. ಅಲ್ಲದೇ ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಮದುವೆ ಕಾರ್ಯ ನಡೆಸಲಾಗುತ್ತೆ ಎನ್ನಲಾಗಿತ್ತು.

    ಇದೀಗ ಎಚ್‍ಡಿಕೆಯವರು ಮಗನ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪೂರ್ವ ನಿಗದಿಯಂತೆ ಏಪ್ರಿಲ್ 17ರಂದೇ ಶುಭದಿನವಾಗಿದ್ದು, ಬೆಂಗಳೂರಿನ ಮನೆಯ ಬಳಿ ಎರಡು ಕುಟುಂಬಸ್ಥರಷ್ಟೇ 15ರಿಂದ 20 ಮಂದಿ ಸೇರಿಕೊಂಡು ಮದುವೆ ಕಾರ್ಯ ನಡೆಸುತ್ತೇವೆ. ಮುಂದೆ ಅವಕಾಶ ಸಿಕ್ಕರೇ ರಾಮನಗರದಲ್ಲಿ ಒಂದು ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.

  • ನಿಖಿಲ್ ಮದ್ವೆ ಸ್ಥಳ ಶಿಫ್ಟ್ ಸಾಧ್ಯತೆ

    ನಿಖಿಲ್ ಮದ್ವೆ ಸ್ಥಳ ಶಿಫ್ಟ್ ಸಾಧ್ಯತೆ

    ಬೆಂಗಳೂರು: ಕೊರೊನಾ ಎಫೆಕ್ಟ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಗೂ ತಟ್ಟುವ ಸಾಧ್ಯತೆ ಇದೆ. ಕೊರೊನಾ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಈಗಾಗಲೇ ನಿಖಿಲ್ ಮತ್ತು ರೇವತಿ ವಿವಾಹ ಮಹೋತ್ಸವಕ್ಕೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೃಹತ್ ಜಾಗದಲ್ಲಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ಆದರೆ ಮೂಲಗಳ ಪ್ರಕಾರ ಮದುವೆ ಕಾರ್ಯವನ್ನು ಈಗ ಬೆಂಗಳೂರಿನ ಅರಮನೆ ಮೈದಾನಕ್ಕೆ ಸ್ಥಳಾಂತರ ಮಾಡುವ ಕುರಿತು ಚರ್ಚೆಗಳು ಕುಟುಂಬದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:  ಹೆಚ್‍ಡಿಕೆ ಮನೆಯಲ್ಲಿ ಮದ್ವೆ ಸಂಭ್ರಮ- ನಿಖಿಲ್ ಲಗ್ನಪತ್ರಿಕೆಗೆ ಪೂಜೆ

    ಜನಸಂದಣಿ ದಟ್ಟಣೆಯಿಂದ ಕೊರೊನಾ ಸುಲಭವಾಗಿ ಹರಡುತ್ತದೆ. ಹೀಗಾಗಿ ಈ ಸ್ಥಳ ಬದಲಾವಣೆ ಬಗ್ಗೆ ಗೌಡರ ಕುಟುಂಬದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ಈಗಾಗಲೇ ಎರಡೂ ಕುಟುಂಬದಲ್ಲೂ ಮದುವೆಗೆ ಸಿದ್ಧತೆಗಳು ನಡೆಯುತ್ತಿದೆ. ಇದನ್ನೂ ಓದಿ: ನಿಖಿಲ್- ರೇವತಿ ವಿವಾಹಕ್ಕೆ ಭೂಮಿ ಪೂಜೆ ಮೂಲಕ ಸಿದ್ಧತಾ ಕಾರ್ಯಕ್ಕೆ ಚಾಲನೆ

    ನಿಖಿಲ್ ಮತ್ತು ರೇವತಿ ವಿವಾಹಕ್ಕೆ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಗೌಡರ ಕುಟುಂಬಕ್ಕೂ ರಾಮನಗರ ಮತ್ತು ಚನ್ನಪಟ್ಟಣದ ಜನರ ನಡುವೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ನಂಟು ಕೂಡ ಇದೆ.

    ಹೀಗಾಗಿ ತಮ್ಮ ಮಗನ ಮದುವೆ ಸಂಭ್ರಮವನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ, ತಮ್ಮ ಪಕ್ಷದ ಬೆಂಬಲಿಗರು, ಅಭಿಮಾನಿಗಳ ಜೊತೆ ಕೂಡ ಸಂಭ್ರಮಿಸಲು ಕುಮಾರಸ್ವಾಮಿ ಅವರು ನಿರ್ಧರಿಸಿದ್ದರು. ಆದರೆ ಈಗ ಕೊರೊನಾ ವೈರಸ್ ಪರಿಣಾಮದಿಂದ ನಿಖಿಲ್ ಮದುವೆಯನ್ನು ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

  • ನನ್ನ ಕೈ ಹಿಡಿದುಕೊಳ್ಳಿ, ನಾನು ಎಂದಿಗೂ ಬಿಡೋದಿಲ್ಲ – ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ

    ನನ್ನ ಕೈ ಹಿಡಿದುಕೊಳ್ಳಿ, ನಾನು ಎಂದಿಗೂ ಬಿಡೋದಿಲ್ಲ – ಭಾವಿ ಪತ್ನಿಗೆ ಭಾವನಾತ್ಮಕ ಸಂದೇಶ

    ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಭಾವಿ ಪತ್ನಿ ರೇವತಿ ಅವರಿಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ.

    ನಿಖಿಲ್ ನಿಶ್ಚಿತಾರ್ಥದ ನಂತರ ತಮ್ಮ ಭಾವಿ ಪತ್ನಿ ರೇವತಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಜೊತೆಗೆ ಆ ಫೋಟೋಗೆ ರೊಮ್ಯಾಂಟಿಕ್ ಮೂಡಿನಲ್ಲಿ ಕ್ಯಾಪ್ಶನ್ ಕೊಡುತ್ತಿದ್ದಾರೆ. ಇದೀಗ ಮತ್ತೊಂದು ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ನಿಖಿಲ್ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ರೇವತಿಯ ಕೈಯನ್ನು ಹಿಡಿದುಕೊಂಡಿದ್ದಾರೆ. ರೇವತಿ ಅವರು ಕೂಡ ತಮ್ಮ ಭಾವಿ ಪತಿಯ ಕೈಯನ್ನು ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ನಿಖಿಲ್ “ನನ್ನ ಕೈಯನ್ನು ಹಿಡಿದುಕೊಳ್ಳಿ ಮತ್ತು ನಾನು ಆ ಕೈಯನ್ನು ಎಂದಿಗೂ ಬಿಡುವುದಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಳ್ಳುವ ಮೂಲಕ ರೇವತಿಗೆ ಸಂದೇಶ ಕಳುಹಿಸಿದ್ದಾರೆ.

    ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸೂಪರ್ ಜೋಡಿ, ಕ್ಯೂಟ್ ದಂಪತಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ನಟ ಪ್ರಥಮ್ ಕೂಡ ಇವರಿಬ್ಬರ ಫೋಟೋಗೆ ಕಮೆಂಟ್ ಮಾಡಿದ್ದಾರೆ.

    https://www.instagram.com/p/B9bJjVBpfVl/

    “10 ದಿನದ ಹಿಂದೆ ನಿಮ್ಮ ಸಂದರ್ಶನದಲ್ಲಿ ನೋಡಿದ ನೆನಪು. ಇನ್ನೂ ಭೇಟಿ ಮಾಡಿಲ್ಲ, ಮಾತನಾಡಿಲ್ಲ. ಒಂದು ಸಲ ಮೀಟ್ ಮಾಡಿ. ನಿಶ್ಚಿತಾರ್ಥ ಆಗುತ್ತಿದ್ದಂತೆ ಏನಣ್ಣ ದಿನ ಅವರ ಮನೆಗೆ ಹಾಜರಾಗುತ್ತಿದ್ದೀರಾ. ನೀವು ರೇವತಿ ಅವರು ಸೂಪರ್. ಕುಮಾರಣ್ಣರಿಗೆ ಸುಕುಮಾರ ಅನ್ನೋ ಮೊಮ್ಮಗ ಆಗಲಿ. ರೇವತಿ ಅವರಿಗೆ ಭಾನುಮತಿ-ಇಂದುಮತಿ ಅನ್ನೋ ಅವಳಿ-ಜವಳಿನೂ ಆಗಿಲಿ” ಎಂದು ಕಮೆಂಟ್ ಮಾಡಿದ್ದಾರೆ.

    ನಿಖಿಲ್ ಮತ್ತು ರೇವತಿ ಅವರ ವಿವಾಹ ಏಪ್ರಿಲ್ 17 ರಂದು ನಡೆಯಲಿದೆ. ಈಗಾಗಲೇ ಎರಡು ಕುಟುಂಬದವರು ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.