Tag: ರಾಯಚೂರ್

  • ಮದುವೆ ಆಮಂತ್ರಣ ಹಿಡಿದು ಹೊರಟ ಮೂವರು ಮಸಣಕ್ಕೆ

    ಮದುವೆ ಆಮಂತ್ರಣ ಹಿಡಿದು ಹೊರಟ ಮೂವರು ಮಸಣಕ್ಕೆ

    ರಾಯಚೂರು: ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬೈಕಿನಲ್ಲಿ ಹೊರಟಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಸ್ಕಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಮಸ್ಕಿಯಿಂದ ಲಿಂಗಸುಗೂರಿಗೆ ತೆರಳುತ್ತಿದ್ದ ವೇಳೆ ಸಾರಿಗೆ ಬಸ್ ಡಿಪೋ ಹತ್ತಿರ ಘಟನೆ ನಡೆದಿದೆ. ಬೈಕ್ ಸವಾರ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ.

     

    ಬೈಕ್ ಸವಾರ ಹಾಗೂ ಆತನೊಂದಿಗಿದ್ದ ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನ ಮಸ್ಕಿ ತಾಲೂಕಿನ ಅಡವಿಭಾವಿ ಗ್ರಾಮದ ಅರುಣಾಕ್ಷಿ (22), ರಜಿಯಾ ಬೇಗಂ (22) ಹಾಗೂ ವಿರೇಶ್ (23) ಎಂದು ಗುರುತಿಸಲಾಗಿದೆ. ಅತೀ ವೇಗದಲ್ಲಿ ಬೈಕ್ ರೈಡ್ ಮಾಡಿದ್ದರಿಂದ ಅಪಘಾತ ಸಂಭವಿಸಿದೆ.

    ರಜಿಯಾ ಬೇಗಂ ಮದುವೆ ಜನವರಿ 24ಕ್ಕೆ ನಿಶ್ಚಯವಾಗಿತ್ತು. ಹಾಗಾಗಿ ವಧು ರಜಿಯಾ ಬೇಗಂ ತನ್ನ ಸ್ನೇಹಿತರೊಂದಿಗೆ ಲಗ್ನ ಪತ್ರಿಕೆ ಕೊಡಲು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನೊಂದ ಕುಟುಂಬ!

    ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ನೊಂದ ಕುಟುಂಬ!

    ರಾಯಚೂರು: ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನೊಂದ ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

    ಗೀತಾ ಸಿಂಗ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗೀತಾ ಸಿಂಗ್ ರವರು ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ಮಾಚಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

    ಗೀತಾ ಸಿಂಗ್‍ರ ಪತಿ ರಾಜೇಶ್ ಸಿಂಗ್ ವಿಚ್ಛೇದನದ ನಂತರವೂ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೇ ಆತನ ಕುಟುಂಬ ಹಾಗೂ ಮಹಿಳೆಯ ಕುಟುಂಬದ ಸದಸ್ಯರು ಸಹ ಕಿರುಕುಳ ನೀಡಿ, ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ಬೆದರಿಕೆಯನ್ನು ಹಾಕಿದ್ದರು.

    ಇದರಿಂದ ನೊಂದ ಮಹಿಳೆಯು ರಕ್ಷಣೆಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಆದರೆ ಗೀತಾರ ಮನವಿಗೆ ಯಾವೊಬ್ಬ ಅಧಿಕಾರಿಯು ಸ್ಪಂದಿಸಿರಲಿಲ್ಲ. ಅಲ್ಲದೇ ಮಹಿಳಾ ಠಾಣೆಯಲ್ಲಿ ದೂರು ನೀಡಲು ಹೋದರೂ, ದೂರು ಸ್ವೀಕರಿಸಿಲ್ಲ. ಇದರಿಂದ ನೊಂದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಸಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಗೀತಾ ಸಿಂಗ್ ಹಾಗೂ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆ ತಿಳಿದ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.