Tag: ರಾಬಿನ್ ಸಿಂಗ್

  • ಲಾಕ್‍ಡೌನ್ ರೂಲ್ಸ್ ಬ್ರೇಕ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ದಂಡ, ಕಾರ್ ಸೀಜ್

    ಲಾಕ್‍ಡೌನ್ ರೂಲ್ಸ್ ಬ್ರೇಕ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ದಂಡ, ಕಾರ್ ಸೀಜ್

    ಚೆನ್ನೈ: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಕಾರಣ ಟೀಂ ಇಂಡಿಯಾ ಮಾಜಿ ಆಟಗಾರ ರಾಬಿನ್ ಸಿಂಗ್ ಅವರಿಗೆ 500 ರೂ. ದಂಡ ಹಾಗೂ ಅವರ ಕಾರನ್ನು ಸೀಜ್ ಮಾಡಲಾಗಿದೆ. ಚೆನ್ನೈನಲ್ಲಿ ತರಕಾರಿ ಖರೀದಿ ಮಾಡಲು ಕಾರಿನಲ್ಲಿ ತೆರಳಿದ್ದ ವೇಳೆ 56 ವರ್ಷದ ರಾಬಿನ್ ಸಿಂಗ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

    ತಮಿಳುನಾಡು ಅದರಲ್ಲೂ ಚೆನ್ನೈನಲ್ಲಿ ಕೊರೊನಾ ಸೋಂಕಿನ ಅರ್ಭಟ ಹೆಚ್ಚಾಗಿದೆ. ಪರಿಣಾಮ ಅಲ್ಲಿನ ಸರ್ಕಾರ ಲಾಕ್‍ಡೌನ್ ಜಾರಿ ಮಾಡಿದೆ. ಪೊಲೀಸರು ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿದ್ದಾರೆ. 2 ಕಿಮೀ ದೂರಕ್ಕಿಂತ ಯಾರದರೂ ಲಾಕ್‍ಡೌನ್ ಪ್ರದೇಶದಲ್ಲಿ ಪ್ರಯಾಣ ನಡೆಸಿದರೆ ಅವರಿಗೆ ದಂಡ ಹಾಗೂ ವಾಹನ ಸೀಜ್ ಮಾಡಲಾಗುತ್ತಿದೆ.

    ಪೊಲೀಸರ ಪರಿಶೀಲನೆ ನಡೆಸುತ್ತಿದ್ದ ವೇಳೆ ರಾಬಿನ್ ಅವರ ಯಾವುದೇ ಇ-ಪಾಸ್ ಹಾಗೂ ನಿಖರ ಕಾರಣ ತಿಳಿಸದ ಕಾರಣ ದಂಡ ವಿಧಿಸಿದ್ದಾರೆ. ಚೆನ್ನೈ ಮತ್ತು ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ಜೂನ್ 19 ರಿಂದ ಲಾಕ್‍ಡೌನ್ ಜಾರಿ ಮಾಡಲಾಗಿದೆ.

    ಭಾರತ ಪರ ರಾಬಿನ್ ಸಿಂಗ್ 136 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 1999 ಏಕದಿನ ವಿಶ್ವಕಪ್ ಟೂರ್ನಿಯ ತಂಡದ ಸದಸ್ಯರಾಗಿದ್ದರು. ಅಲ್ಲದೇ ಫೀಲ್ಡಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

  • ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಒಳಿತಿಗೆ ಕೋಚ್ ಬದಲಾವಣೆ ಒಳ್ಳೆಯದು ಎಂದು ಟೀಂ ಇಂಡಿಯಾದ ಮಾಜಿ ಆಲ್‍ರೌಂಡರ್ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ಕಳೆದ 15 ವರ್ಷಗಳಲ್ಲಿ ವಿವಿಧ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿರುವ ರಾಬಿನ್ ಸಿಂಗ್ ಅವರು, ಕಳೆದ ಎರಡು ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಹೊರಬಿದ್ದ ಭಾರತ ತಂಡಕ್ಕೆ ಕೋಚ್ ಬದಲಾವಣೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

    ಬಿಸಿಸಿಐ ಕೋಚ್ ಹುದ್ದೆಗೆ ಆಹ್ವಾನ ಕರೆದಿರುವ ಹಿನ್ನೆಲೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಬಿನ್ ಸಿಂಗ್, ಭಾರತದ ತಂಡಕ್ಕೆ ಕೋಚ್ ಬದಲಾವಣೆಯ ಅಗತ್ಯವಿದೆ. ಭಾರತ ತಂಡ ಪ್ರಮುಖ ಹಂತದಲ್ಲಿ ಸರಿಯಾದ ಪ್ರದರ್ಶನ ತೋರುತ್ತಿಲ್ಲ. ಅದ್ದರಿಂದ ಮುಂದಿನ ವಿಶ್ವಕಪ್‍ನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ತಯಾರಿ ಆರಂಭ ಮಾಡಬೇಕು ಎಂದು ಹೇಳಿದ್ದಾರೆ.

    ಪ್ರಸ್ತುತ ಕೋಚ್ ಅವರ ನೇತೃತ್ವದಲ್ಲಿ, ಭಾರತ ಸತತ ಎರಡು ಏಕದಿನ, ವಿಶ್ವಕಪ್‍ಗಳ ಸೆಮಿಫೈನಲ್‍ನಲ್ಲಿ ಮತ್ತು ವಿಶ್ವ ಟ್ವೆಂಟಿ -20 ಚಾಂಪಿಯನ್‍ಶಿಪ್‍ನ ಕೊನೆಯ ನಾಲ್ಕು ಹಂತಗಳಲ್ಲಿ ಸೋತಿದೆ. ಈಗ ಭಾರತ 2023 ರ ವಿಶ್ವಕಪ್‍ಗೆ ತಯಾರಿ ನಡೆಸುವ ಸಮಯ ಮತ್ತು ಬದಲಾವಣೆಯು ತಂಡಕ್ಕೆ ಒಳ್ಳೆಯದು ಎಂದು ರಾಬಿನ್ ಸಿಂಗ್ ಹೇಳಿದ್ದಾರೆ.

    ಈ ವೇಳೆ 2019ರ ವಿಶ್ವಕಪ್‍ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ನಾನು ಭಾರತ ತಂಡದ ಕೋಚ್ ಆಗಿದ್ದರೆ ಯಾವ ರೀತಿಯಲ್ಲಿ ತೀರ್ಮಾನ ಮಾಡುತ್ತಿದ್ದೆ ಎಂಬುದನ್ನು ಹೇಳಿರುವ ಅವರು, ನಾವು ಒಂದು ಪಂದ್ಯವನ್ನು ಗೆಲ್ಲಬೇಕು ಎಂದರೆ ಆಟವನ್ನು ತಾಂತ್ರಿಕಾವಾಗಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ನಾನು ಕೋಚ್ ಆಗಿದ್ದರೆ, ಮಳೆಯಾದ ಕಾರಣ ಬಾಲ್ ಸ್ವಿಂಗ್ ಆಗುತ್ತಿದ್ದ ಕಾರಣ ಭಾರತವು ರೋಹಿತ್ ಶರ್ಮಾ ಅವರನ್ನು ಮೊದಲೇ ಕಳೆದುಕೊಂಡಿತ್ತು. ಆಗ ನಾನು ಇದ್ದರೆ ವಿರಾಟ್ ಕೊಹ್ಲಿಯನ್ನು 4 ನೇ ಕ್ರಮಾಂಕದಲ್ಲಿ ಆಡಿಸುತ್ತಿದೆ. ಆ ಆಟಕ್ಕಾಗಿ ನಾನು ಮೊದಲೇ ಮತ್ತೊಬ್ಬ ಉನ್ನತ ಕ್ರಮಾಂಕದ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್‍ ವಾಲ್ ಅವರನ್ನು ಆಯ್ಕೆ ಮಾಡಿ ನಂ.3 ರಲ್ಲಿ ಆಡಿಸುತ್ತಿದೆ.

    ಧೋನಿ ಅವರನ್ನು 5 ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೆ ಆಗ ಅವರಿಗೆ ಬ್ಯಾಟ್ ಬೀಸಲು ಹೆಚ್ಚಿನ ಸಮಯ ಸಿಗುತ್ತಿತ್ತು. ಇದರ ನಡುವೆ ಕೊಹ್ಲಿ ಮತ್ತು ಧೋನಿ ಒಟ್ಟಿಗೆ ಬ್ಯಾಟಿಂಗ್ ಮಾಡಬಹುದಿತ್ತು. ಆಗ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಎಂಬ ಮೂರು ಪವರ್ ಹಿಟ್ಟರ್‍ ಗಳನ್ನು ನಾವು ಕೆಳ ಕ್ರಮಾಂಕದಲ್ಲಿ ಆಡಿಸಿ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ.

    2007ರಿಂದ 2009ರ ವರೆಗೆ ಭಾರತದ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಬಿನ್ ಸಿಂಗ್ ಭಾರತದ ಅಂಡರ್-19 ಎ ತಂಡಕ್ಕೂ ತರಬೇತುಗಾರನಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ.

    ಭಾರತ ತಂಡದ ಎಲ್ಲಾ ವಿಭಾಗದ ಕೋಚ್‍ಗಳಿಗೂ ಅರ್ಜಿ ಹಾಕಲು ಬಿಸಿಸಿಐ ಆಹ್ವಾನ ನೀಡಿದೆ. ಅದರಂತೆ ದಿಗ್ಗಜ ಆಟಗಾರರಾದ ಟಾಮ್ ಮೂಡಿ, ಮಹೇಲಾ ಜಯವರ್ಧನೆ ಮತ್ತು ಮೈಕ್ ಹೆಸ್ಸೆನ್‍ನಂತವರು ಅರ್ಜಿ ಹಾಕಿದ್ದು, ಬಿಸಿಸಿಐ ಯಾರನ್ನು ದೃಢೀಕರಣ ಪಡಿಸಿಲ್ಲ.