Tag: ರಾಜೇಶ್ ಗೌಡ

  • ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

    ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

    ತುಮಕೂರು: ಕರ್ನಾಟಕದ ಚುನಾವಣಾ ಇತಿಹಾಸದಲ್ಲಿಯೇ 2018ರವರೆಗೆ ಶಿರಾ (Sira) ಕ್ಷೇತ್ರದಲ್ಲಿ ಕಮಲ ಪಕ್ಷದ ಖಾತೆಯೇ ತೆರೆದಿರಲಿಲ್ಲ. ಆದರೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ ಗೆದ್ದು ಶಿರಾ ಕೋಟೆಯ ಮೇಲೆ ಬಿಜೆಪಿ ಬಾವುಟ ಹಾರಿಸಿ ಇತಿಹಾಸ ಸೃಷ್ಟಿಸಿದ್ದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರರ (TB Jayachandra) ವಿರುದ್ದ ಬರೋಬ್ಬರಿ 13,800 ಮತಗಳ ಅಂತರದಿಂದ ಗೆದ್ದು ಬೀಗಿದ ಸಿ.ಎಂ.ರಾಜೇಶ್ ಗೌಡ (Dr. Rajesh Gowda) ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ಇವರ ತಂದೆ ಮೂಡಲಗಿರಿಯಪ್ಪ ಮೂರುಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಒಂದು ಬಾರಿ ಶಿರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಆದರೂ ಪುತ್ರ ರಾಜೇಶ್ ಗೌಡ ಮಾತ್ರ ರಾಜಕೀಯದತ್ತ ಸುಳಿಯದೇ ವೈದ್ಯ ವೃತ್ತಿಯಲ್ಲಿ ತೊಡಗಿದ್ದರು. ತಂದೆಯ ಯಾವುದೇ ರಾಜಕೀಯ ಸಭೆ ಸಮಾರಂಭಗಳಲ್ಲಿ ಇವರು ಭಾಗಿಯಾಗುತ್ತಿರಲಿಲ್ಲ. ಇದನ್ನೂ ಓದಿ: ಚುನಾವಣೆ ಬಂದ್ರೆ ಕುರುಡುಮಲೆ ವಿನಾಯಕನಿಗೆ ಎಲ್ಲಿಲ್ಲದ ಬೇಡಿಕೆ 

    ತಂದೆ ಮೂಡಲ ಗಿರಿಯಪ್ಪ ರಾಜಕೀಯದಿಂದ ನೇಪಥ್ಯಕ್ಕೆ ಸರಿದು ದಶಕಗಳೇ ಕಳೆದಿತ್ತು. ಆದರೆ ಇದ್ದಕಿದ್ದ ಹಾಗೇ ರಾಜೇಶ್ ಗೌಡರಲ್ಲಿ ತಾನೂ ಜನಪ್ರತಿನಿಧಿ ಆಗಬೇಕು ಎಂಬ ಹಂಬಲ ಮೂಡಿತ್ತು. 2018 ರಲ್ಲಿ ಶಿರಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ಜೆಡಿಎಸ್‌ನ ಸತ್ಯನಾರಾಯಣ ಅವರು 2020 ರಲ್ಲಿ ಅಕಾಲಿಕ ಮರಣ ಹೊಂದಿದ್ದರು. ಹಾಗಾಗಿ ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಡಾ.ಸಿ.ಎಂ ರಾಜೇಶ್ ಗೌಡರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎದುರಾಳಿಯಾಗಿದ್ದರು. ಆದರೂ ರಾಜೇಶ್ ಗೌಡರು ಜಯಚಂದ್ರರ ವಿರುದ್ದ ಗೆದ್ದು ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದರು.

    ಶಾಸಕ ಡಾ.ಸಿ.ಎಂ. ರಾಜೇಶ್ ಗೌಡರದ್ದು ಸೌಮ್ಯ ಸ್ವಭಾವ. ಶಿರಾ ತಾಲೂಕಿನ ಚಿರತೆಹಳ್ಳಿಯವರು. ತಾವು ಬೆಂಗಳೂರಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದರೂ ತಮ್ಮ ತಾಲೂಕಿನ ಜನರನ್ನು ಮರೆತಿರಲಿಲ್ಲ. ಆಗಾಗ ಬಂದು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಊರ ಜನರ ವೈದ್ಯಕೀಯ ಸೇವೆ ಮಾಡುತಿದ್ದರು. ಜನರ ಕಷ್ಟಕ್ಕೆ ಸ್ಪಂದಿಸುತಿದ್ದರು. ಆ ಮೂಲಕ ಜನ ಮಾನಸದಲ್ಲಿ ಒಳ್ಳೆ ಡಾಕ್ಟ್ರು ಎಂದೇ ಜನಜನಿತರಾಗಿದ್ದರು. ಹಾಗಾಗಿ ಶಿರಾ ಕ್ಷೇತ್ರದ ಜನತೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜೇಶ್ ಗೌಡರ ಕೈ ಹಿಡಿದರು. ಇದನ್ನೂ ಓದಿ: 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ 

    ಕೋವಿಡ್ ಕಾಲದಲ್ಲಿ ಕಣ್ಣೀರು ಒರೆಸಿದ ರಾಜೇಶ್ ಗೌಡರು- ಕೋವಿಡ್ ಎರಡನೇ ಅಲೆಯಲ್ಲಿ ಶಿರಾ ಕ್ಷೇತ್ರದ ಜನ ಅಕ್ಷರಶಃ ತತ್ತರಿಸಿದ್ದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಮೊದಲ ಕೇಸ್ ಪತ್ತೆಯಾಗಿದ್ದೇ ಶಿರಾದಲ್ಲಿ. ಈ ವೇಳೆ ಕಾಲಿಗೆ ಚಕ್ರಕಟ್ಟಿಕೊಂಡು ಕೋವಿಡ್ ಪೀಡಿತರ ಸೇವೆ ಮಾಡಿದ ರಾಜೇಶ್ ಗೌಡರು ಜನ ಸಾಮಾನ್ಯರ ನೆರವಿಗೆ ಬಂದರು. ಫುಡ್ ಕಿಟ್, ವ್ಯಾಕ್ಸಿನೇಷನ್‌, ಮೆಡಿಷಿನ್ ಹೀಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದರು.

    ಮದಲೂರು ಕೆರೆಗೆ ನೀರು ಹರಿಸಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನ, ಶಿರಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, ಆಕ್ಸಿಜನ್ ತಯಾರಿಕಾ ಘಟಕ, ಆರ್‌ಟಿಪಿಸಿಆರ್‌ ಘಟಕ ‌ಶಿರಾಗೆ ತಂದಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಸ್ತೆ ಕಾಣದ ಊರಿಗೆ ರಸ್ತೆ ಮಾಡಿಕೊಟ್ಟಿದ್ದಾರೆ. ಇದೇ ರೀತಿಯ ಹಲವು ಅಭಿವೃದ್ಧಿಯ ಕಾರ್ಡ್ ಇಟ್ಟುಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  • ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ

    ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ

    ತುಮಕೂರು: ಶಿರಾ ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ (Rajesh Gowda) ಅವರು ಜಾತ್ರಾ ಮಹೋತ್ಸವದಲ್ಲಿ (Fair) ದೇವರನ್ನು ಹೊತ್ತು ಕುಣಿಯುತ್ತಾ ಸೇವೆ ಸಲ್ಲಿಸಿದ್ದಾರೆ.

    ಶಿರಾ (Sira) ತಾಲೂಕಿನ ಗುಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ (BJP) ಶಾಸಕ ಡಾ. ರಾಜೇಶ್ ಗೌಡ ಲಕ್ಷ್ಮಿನರಸಿಂಹ ಸ್ವಾಮಿ, ಶ್ರೀ ಕಂಡಗದ ಕರಿಯಮ್ಮ ದೇವಿ, ಶ್ರೀ ಈರಮರಿಯಣ್ಣ ಸ್ವಾಮಿ ದೇವರನ್ನು ಹೊತ್ತು ಕುಣಿದಿದ್ದಾರೆ. ಇದನ್ನೂ ಓದಿ: ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

    ಶಾಸಕರು ಮೂರು ದೇವರ ಹಲಗು ಹಿಡಿದು ಗಂಟೆಗಟ್ಟಲೆ ಕುಣಿದಿದ್ದಾರೆ. ದೇವರನ್ನು ಹೊತ್ತು ಕುಣಿದು ವಿಶೇಷ ಸೇವೆ ಸಲ್ಲಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಕುಣಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಹೆಣ್ಮಕ್ಕಳಿಗೆ ತೊಂದ್ರೆ ಕೊಟ್ಟವರ ಮನೆಗೆ ಬುಲ್ಡೋಜರ್ ನುಗ್ಗಿಸ್ತೇವೆ: ಬಂಡಿ ಸಂಜಯ್

  • ಮದಲೂರು ಕೆರೆಗೆ ಹೇಮಾವತಿ ನೀರು – 30 ದಿನದಲ್ಲೇ ಭರವಸೆ ಈಡೇರಿಸಿದ ಸಿಎಂ

    ಮದಲೂರು ಕೆರೆಗೆ ಹೇಮಾವತಿ ನೀರು – 30 ದಿನದಲ್ಲೇ ಭರವಸೆ ಈಡೇರಿಸಿದ ಸಿಎಂ

    – 4 ದಶಕದ ಕನಸು ನನಸು
    – ಹರ್ಷಗೊಂಡ ಶಿರಾ ಜನತೆ

    ತುಮಕೂರು: ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು. ಆದರಂತೆ ಸೋಮವಾರದಿಂದ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡಲಾಗಿದ್ದು 40 ವರ್ಷದ ಕನಸು ನನಸಾಗಿದೆ.

    ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಒಂದು ಪಕ್ಷದವರು ಮದಲೂರು ಕೆರೆಗೆ ನಾಲೆ ಮಾಡಿದ್ದು ನಾವು ಎಂದರೆ ಇದನ್ನು ಯೋಜನೆ ಜಾರಿ ಮಾಡಿದ್ದು ನಾವು ಎಂದು ಇನ್ನೊಂದು ಪಕ್ಷದವರು ಪರಸ್ಪರ ವಾಗ್ದಾಳಿ ಮಾಡಿದ್ದರು. ಈ ನಡುವೆ ಸಿಎಂ ಯಡಿಯೂರಪ್ಪ ಅಕ್ಟೋಬರ್ 30 ರಂದು ಮದಲೂರು ನಲ್ಲಿ ಸಮಾವೇಶ ನಡೆಸಿ ಆರು ತಿಂಗಳ ಒಳಗಡೆ ಕೆರೆಗೆ ನೀರು ಬಿಡುತ್ತೇವೆ ಎಂದು ಘೋಷಣೆ ಮಾಡಿದ್ದರು.

    ಉಪ ಚುನಾವಣೆ ಮುಗಿದ ಬಳಿಕ ಶಾಸಕ ರಾಜೇಶ್ ಗೌಡ ಮದಲೂರಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದರು. 40ಕ್ಕೂ ಹೆಚ್ಚು ಜೆಸಿಬಿ ಮೂಲಕ ಕೆರೆಯಲ್ಲಿದ್ದ ಸೀಮೆಜಾಲಿಯನ್ನು ತೆರವು ಮಾಡಲಾಗಿತ್ತು. ಈಗ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ನಾಲೆ ಮೂಲಕ 200 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ಅಂದರೆ ಇಂದು ನೀರು ಮದಲೂರು ಕೆರೆಗೆ ತಲುಪಲಿದೆ. ಕೊಟ್ಟ ಮಾತನ್ನು 30 ದಿನದಲ್ಲೇ ಈಡೇರಿಸುವ ಮೂಲಕ ಸರ್ಕಾರ ವಿಪಕ್ಷಗಳಿಗೆ ತಿರುಗೇಟು ನೀಡಿದೆ.

    ಮದಲೂರು ಕೆರೆಗೆ ನೀರು ಬಿಡಬೇಕೆಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಭಾರೀ ಹೋರಾಟಗಳು ನಡೆದಿತ್ತು. ಈ ಬಗ್ಗೆ ಶಿರಾ ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಾಗಿದೆ. ಹೀಗಾಗಿ ಉಪಚುನಾವಣೆ ವೇಳೆ ಮದಲೂರು ಕೆರೆಗೆ ಕೊಟ್ಟ ಮಾತಿನಂತೆ ನೀರು ಹರಿಸಿದ್ದು ಇನ್ನೂ ಒಂದೂವರೆ ತಿಂಗಳ ಕಾಲ ನೀರು ಹರಿಯಲಿದೆ. ಇದಕ್ಕೆ ಸಹಕರಿಸಿದ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸ್ಥಳೀಯ ನಾಯಕರಿಗೆ ಹಾಗೂ ಹೋರಾಟಗಾರಿಗೆ ಕೃತಜ್ಞತೆ ತಿಳಿಸಿದ್ದಾರೆ.

    ಬಿಜೆಪಿ ವಿರೋಧಿಸಿತ್ತು: ಈ ಪ್ರಯತ್ನ ಈ ಮೊದಲು ಮಾಜಿ ಸಚಿವ ಟಿ.ಬಿ.ಜಯಚಂದ್ರರೂ ಮಾಡಿದ್ದರು. ಆಗ ಇದೇ ಬಿಜೆಪಿ ಪಕ್ಷದವರು ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಾಡಿದ್ದರು. ಅಲ್ಲದೆ ಕಳ್ಳಂಬೆಳ್ಳದಿಂದ ಮದಲೂರು ಕೆರೆವರೆಗೂ ಸುಮಾರು 110 ಕಿ.ಮೀ ದೂರ ಜಯಚಂದ್ರ ನಾಲೆ ನಿರ್ಮಾಣ ಮಾಡಿದ್ದರು. ಅಲ್ಲಲ್ಲಿ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿರುವ ಕಾರಣ ನೀರು ಪೋಲಾಗುತ್ತದೆ. ಹಾಗಾಗಿ ನಾಲೆ ಕಾಮಗಾರಿ ಅವೈಜ್ಞಾನಿಕವಾಗಿ ಎಂದು ಎಂದು ಬಿಜೆಪಿಯವರು ಆಪಾದನೆ ಮಾಡುತಿದ್ದರು. ಆದರೆ ಅದೇ ನಾಲೆ ಮೂಲಕ ಇಂದು ನೀರು ಹರಿಸಿ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಮದಲೂರು ಕೆರೆಗೆ ನೀರಿನ ಹಂಚಿಕೆ ಇಲ್ಲದೇ ಇದ್ದರೂ ನೀರು ಹರಿಸಿದ್ದಾರೆ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರತಿಕ್ರಿಯಿಸಿದ್ದಾರೆ.

  • ಶಿರಾದಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ – ರಾಜೇಶ್‌ ಗೌಡಗೆ ಜಯ, ಟಿಬಿಜೆಗೆ ಸೋಲು

    ಶಿರಾದಲ್ಲಿ ಬಿಜೆಪಿಯಿಂದ ಇತಿಹಾಸ ಸೃಷ್ಟಿ – ರಾಜೇಶ್‌ ಗೌಡಗೆ ಜಯ, ಟಿಬಿಜೆಗೆ ಸೋಲು

    ತುಮಕೂರು: ಶಿರಾದಲ್ಲಿ ಇದೇ ಮೊದಲ ಬಾರಿಗೆ ಜಯಗಳಿಸುವ ಮೂಲಕ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ರಾಜೇಶ್‌ ಗೌಡ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಟಿಬಿ ಜಯಚಂದ್ರ ಅವರನ್ನು ಸೋಲಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ.

    ರಾಜೇಶ್‌ಗೌಡ ಅವರು ಆರಂಭದಿಂದಲೂ ಮುನ್ನಡೆಯಲ್ಲಿದ್ದರು. 13ನೇ ಸುತ್ತಿನಲ್ಲಿ 8,471 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದ ರಾಜೇಶ್‌ ಗೌಡ ಅವರ ಅಂತರ 15ನೇ ಸುತ್ತಿನ ಮತ ಎಣಿಕೆಯ ವೇಳೆ 1,765 ಅಂತರಕ್ಕೆ ಕುಸಿದಿತ್ತು. ಹೀಗಾಗಿ ಸ್ಪರ್ಧೆ ತೀವ್ರಗೊಂಡಿತ್ತು.

    ನಂತರದ ಸುತ್ತಿನಲ್ಲಿ ರಾಜೇಶ್‌ ಗೌಡ ಅಂತರವನ್ನು ಕಾಯ್ಸುಕೊಂಡ ಪರಿಣಾಮ ಅಂತಿಮವಾಗಿ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    2018 ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸತ್ಯನಾರಾಯಣ ಅವರು 74,338 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ 63,973, ಬಿಜೆಪಿ 16,959 ಮತಗಳನ್ನು ಪಡೆದಿತ್ತು.

  • ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು

    ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವು

    ಬೆಂಗಳೂರು: ಶಾಸಕ ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದ ತೆರವಾದ ಶಿರಾದಲ್ಲಿ ಈ ಬಾರಿ ತ್ರಿಕೋನ ಫೈಟ್ ಇದೆ. ಇಲ್ಲಿ ಪಬ್ಲಿಕ್ ಟಿವಿ ಜಿಲ್ಲಾಪಂಚಾಯತ್ ಕ್ಷೇತ್ರಗಳ ಆಧಾರದ ಮೇಲೆ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ.

    ಸಮೀಕ್ಷೆಯ ಪ್ರಕಾರ 7 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮತದಾರರದ್ದು, ವಿಭಿನ್ನ ಒಲವು-ನಿಲುವು. ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ, ಒಂದರಲ್ಲಿ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಲಿದ್ದಾರೆ.

    ಅಂತಿಮವಾಗಿ ಕಾಂಗ್ರೆಸ್-ಜೆಡಿಎಸ್ ನೀಡಿದ ನಿಕಟ ಸ್ಪರ್ಧೆ ನಡುವೆಯೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆಲುವಿನ ನಗೆ ಬೀರಲಿದ್ದಾರೆ. ಮೊದಲ ಬಾರಿಗೆ ಇಲ್ಲಿ ಕಮಲ ಅರಳಲಿದೆ ಎನ್ನುತ್ತದೆ ಪಬ್ಲಿಕ್ ಟಿವಿ ಎಕ್ಸಿಟ್ ಪೋಲ್.  ಇದನ್ನೂ ಓದಿ: ಪಬ್ಲಿಕ್‌ ಟಿವಿ ಸಮೀಕ್ಷೆ – ಆರ್‌ಆರ್‌ ನಗರದಲ್ಲಿ ಮುನಿರತ್ನಗೆ ಮತದಾರರ ಕೃಪೆ

     

    ಶಿರಾ ಕ್ಷೇತ್ರದ `ಮತ’ಬರಹ
    * ಒಟ್ಟು ಮತದಾರರು-2,15,694
    * ಚಲಾವಣೆಯಾದ ಮತ-1,77,645
    * ಶೇಕಡಾವಾರು ಮತ-82.64

    `ಪಬ್ಲಿಕ್’ ಎಕ್ಸಿಟ್ ಪೋಲ್
    * ರಾಜೇಶ್ ಗೌಡ, ಬಿಜೆಪಿ ಅಭ್ಯರ್ಥಿ – 38%
    * ಟಿಬಿ ಜಯಚಂದ್ರ, ಕಾಂಗ್ರೆಸ್ ಅಭ್ಯರ್ಥಿ- 34%
    * ಅಮ್ಮಾಜಮ್ಮ, ಜೆಡಿಎಸ್ ಅಭ್ಯರ್ಥಿ -27%

    ಎಲ್ಲಿ ಯಾರಿಗೆ ಎಷ್ಟು ಮುನ್ನಡೆ
    ಚಿಕ್ಕನಹಳ್ಳಿ ಜಿ.ಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -38%, ಕಾಂಗ್ರೆಸ್ – ಹಿನ್ನಡೆ -32%, ಜೆಡಿಎಸ್ – ಹಿನ್ನಡೆ -30%

    ನಾದೂರು ಜಿಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -35%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್- ಹಿನ್ನಡೆ-32%

    ಮದಲೂರು ಜಿ.ಪಂ ಕ್ಷೇತ್ರ
    ಬಿಜೆಪಿ – ಮುನ್ನಡೆ -%34, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್- ಹಿನ್ನಡೆ -33%

    ಹುಲಿಕುಂಟೆ ಜಿಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ -32%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್ – ಮುನ್ನಡೆ – 35%

     

     

    ತಾವರೆಕೆರೆ ಜಿಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ -33%, ಕಾಂಗ್ರೆಸ್ – ಹಿನ್ನಡೆ -33%, ಜೆಡಿಎಸ್ – ಮುನ್ನಡೆ – 34%

    ಕಳ್ಳಬೆಳ್ಳಂ ಜಿ.ಪಂ ಕ್ಷೇತ್ರ
    ಬಿಜೆಪಿ – ಹಿನ್ನಡೆ – 34%, ಕಾಂಗ್ರೆಸ್ – ಮುನ್ನಡೆ -35%, ಜೆಡಿಎಸ್ – ಹಿನ್ನಡೆ – 31%

    ಶಿರಾ ನಗರ ಕ್ಷೇತ್ರ
    ಬಿಜೆಪಿ – ಹಿನ್ನಡೆ -33%, ಕಾಂಗ್ರೆಸ್ – ಮುನ್ನಡೆ – 34%, ಜೆಡಿಎಸ್ – ಹಿನ್ನಡೆ -33%

  • ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    ಶಿರಾ ‘ಕೈ’ ಅಭ್ಯರ್ಥಿ ಜಯಚಂದ್ರ ಮುದಿ ಎತ್ತು: ಬಿ.ಜೆ.ಪುಟ್ಟಸ್ವಾಮಿ

    – ಬಿಜೆಪಿಯ ರಾಜೇಶ್ ಗೌಡ ಯುವ ಎತ್ತು
    – ಶಿರಾದಲ್ಲಿ ಮರಿ ರಾಜಾಹುಲಿ ಪ್ರಚಾರ

    ತುಮಕೂರು: ಶಿರಾದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿ ರಾಜೇಶ್ ಗೌಡ ಯುವ ಎತ್ತು ಎಂದು ರಾಜ್ಯ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಜೆ.ಪುಟ್ಟಸ್ವಾಮಿ, ಯುವ ಎತ್ತಿಗೆ ಶಿರಾ ಜನತೆ ಮತ ನೀಡಿದ್ರೆ ಪ್ರಯೋಜನೆ. ಏಳು ಬಾರಿ ಗೆದ್ದಿರುವ ಟಿ.ಬಿ.ಜಯಚಂದ್ರ ಮುದಿ ಎತ್ತು. ನಮ್ಮ ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಯುವಕರು. ಹಾಗಾಗಿ ಯುವ ಎತ್ತಿಗೆ ಮತ ನೀಡಿದ್ರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷದಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಯ್ತು. ಸರ್ಕಾರ ಬಿದ್ದು ಒಂದು ವರ್ಷ ಕಳೆದರೂ ಇಬ್ಬರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಳಿ ಅಭಿವೃದ್ಧಿ ಮಂತ್ರ ಇಲ್ಲ. ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೊರೊನಾ ವೇಳೆ ದೇಶಕ್ಕೆ ಪ್ರಧಾನಿ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಇರದಿದ್ರೆ ಅಲ್ಲೋಲ ಕಲ್ಲೋಲವಾಗುತ್ತಿತ್ತು. ಸಿಎಂ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯತೆ ಮತ್ತು ಆರ್ಥಿಕ ನೆರವು ನೀಡಿದ್ದಾರೆ. ರಾಜಾಹುಲಿ ಯಡಿಯೂರಪ್ಪನವರ ಪುತ್ರ ಮರಿ ರಾಜಾಹುಲಿ ವಿಜಯೇಂದ್ರ ಶಿರಾದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಅಭ್ಯರ್ಥಿಗೆ ಗೆದ್ದರೆ ಈ ಕ್ಷೇತ್ರ ಅಭಿವೃದ್ಧಿಯಾಗಲಿದ್ದು, ಬಿಜೆಪಿಗೆ ಮತ ನೀಡಿ ಎಂದು ಮತದಾರರ ಬಳಿ ಬಿ.ಜೆ.ಪುಟ್ಟಸ್ವಾಮಿ ಮನವಿ ಮಾಡಿಕೊಂಡರು.