Tag: ರಾಜೀವ್ ಧವನ್

  • ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ

    ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ

    ನವದೆಹಲಿ: ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಇಂದು ಬೆಳಗ್ಗೆ ಹೈಡ್ರಾಮಾ ನಡೆದಿದ್ದು ಹಿರಿಯ ವಕೀಲ ರಾಜೀವ್ ಧವನ್ ದಾಖಲೆಗಳನ್ನು ಹರಿದು ಹಾಕಿದ್ದಾರೆ.

    ಅಯೋಧ್ಯೆ ಪ್ರಕರಣದ ವಿಚಾರಣೆಯ ಕಡೆಯ ದಿನವಾದ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತಿತ್ತು.

    ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಪರ ವಕೀಲ ವಿಕಾಸ್ ಸಿಂಗ್ ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ಬರೆದ ‘ಅಯೋಧ್ಯೆ ರಿವಿಸಿಟೆಡ್’ ಪುಸ್ತಕವನ್ನು ಉಲ್ಲೇಖಿಸಿ ಆಯೋಧ್ಯೆಯಲ್ಲಿ ರಾಮಮಂದಿರ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ ಈ ಪುಸ್ತಕ ಮತ್ತಷ್ಟು ಮಾಹಿತಿ ನೀಡುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು.

    ಪುಸ್ತಕದ ಬಗ್ಗೆ ಉಲ್ಲೇಖಿಸುತ್ತಿದ್ದಂತೆ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ನ್ಯಾ. ರಂಜನ್ ಗೊಗೋಯ್ ಈ ಪುಸ್ತಕವನ್ನು ನಾನು ಇಟ್ಟುಕೊಳ್ಳಬಹುದೇ ಎಂದು ಕೇಳಿದ್ದಕ್ಕೆ ವಿಕಾಸ್ ಸಿಂಗ್ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು. ನಂತರ ಮುಖ್ಯ ನ್ಯಾಯಾಧೀಶರು ಈಗ ನಾನು ಈ ಪುಸ್ತಕವನ್ನು ಓದಲು ಆರಂಭಿಸುತ್ತೇನೆ. ನವೆಂಬರ್ ನಲ್ಲೂ ಓದುತ್ತೇನೆ. ಆ ಬಳಿಕವೂ ಓದುತ್ತೇನೆ ಎಂದು ತಿಳಿಸಿದರು.

    ನ್ಯಾ.ಗೊಗೋಯ್ ಅವರು ಪುಸ್ತಕವನ್ನು ಓದುತ್ತೇನೆ ಎಂಬ ಮಾತು ಬರುತ್ತಿದ್ದಂತೆ ವಕೀಲ ರಾಜೀವ್ ಧವನ್ ಸಿಟ್ಟಾದರು. ವಿಚಾರಣೆ ಸಮಯದಲ್ಲಿ ಹಿಂದೂ ಮಹಾಸಭಾ ನೀಡಿದ ನಕ್ಷೆ ಮತ್ತು ದಾಖಲೆಗಳನ್ನು ಹರಿದು ಹಾಕಿದರು. ಇದಕ್ಕೆ ಸಿಟ್ಟಾದ ಗೊಗೋಯ್ ಇನ್ನಷ್ಟು ದಾಖಲೆಗಳನ್ನು ಹರಿಯಬಹುದು ಎಂದಾಗ ಧವನ್ ಮತ್ತಷ್ಟು ದಾಖಲೆಗಳನ್ನು ಹರಿದು ಹಾಕಿದರು.

    ಕೂಡಲೇ ಧವನ್ ಅವರಿಗೆ ಎಚ್ಚರಿಕೆ ಕೊಟ್ಟ ಗೊಗೋಯ್ ಈ ರೀತಿಯ ವರ್ತನೆ ಮಾಡಕೂಡದು. ನೀವು ಈ ರೀತಿ ಮಾಡಿದರೂ ನಾವು ಎಲ್ಲ ದಾಖಲೆಗಳನ್ನು ಅಧ್ಯಯನ ಮಾಡುತ್ತೇವೆ ಎಂದು ಎಲ್ಲ ಕಕ್ಷಿದಾರರ ಪರ ವಕೀಲರಿಗೆ ಸೂಚಿಸಿದರು.

    2010ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ. ರಂಜನ್ ಗೊಗೋಯ್, ಎಸ್‍ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‍ಎ ನಾಜೀರ್ ನೇತೃತ್ವದ ಸಂವಿಧಾನ ಪೀಠ ಆಗಸ್ಟ್ 6 ರಿಂದ ದಿನಂಪ್ರತಿ ವಿಚಾರಣೆ ನಡೆಸುತ್ತಿದೆ. ಇಂದು ಅಂತಿಮ ದಿನವಾಗಿದ್ದು, ಇಂದಿನ ವಿಚಾರಣೆ ಸಮಯದಲ್ಲಿ ರಂಜನ್ ಗೊಗೋಯ್ ಸಂಜೆ 5 ಗಂಟೆಯ ಒಳಗಡೆ ಎಲ್ಲರ ವಾದ ಅಂತ್ಯವಾಗಬೇಕು ಎಂದು ಸೂಚಿಸಿದ್ದಾರೆ.

    2018ರ ಅಕ್ಟೋಬರ್ 3 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ರಂಜನ್ ಗೊಗೋಯ್ ಅವರ ಅವಧಿ ಈ ವರ್ಷ ನವೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಗೊಗೋಯ್ ಅವರು ನಿವೃತ್ತರಾಗುವುದಕ್ಕೂ ಮೊದಲೇ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ.

  • ಬುಧವಾರ ಅತೃಪ್ತರ ಭವಿಷ್ಯ ನಿರ್ಧಾರ – ಸುಪ್ರೀಂನಲ್ಲಿ ಮ್ಯಾರಥಾನ್ ವಿಚಾರಣೆ ಹೀಗಿತ್ತು

    ಬುಧವಾರ ಅತೃಪ್ತರ ಭವಿಷ್ಯ ನಿರ್ಧಾರ – ಸುಪ್ರೀಂನಲ್ಲಿ ಮ್ಯಾರಥಾನ್ ವಿಚಾರಣೆ ಹೀಗಿತ್ತು

    ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಬುಧವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.

    ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಬಂದಾಗ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅರಿಯಲೆಂದು ತ್ರಿಸದಸ್ಯ ಪೀಠದಲ್ಲಿ ಮಂಗಳವಾರ 10:40ಕ್ಕೆ ಆರಂಭಗೊಂಡ ವಿಚಾರಣೆ ಮಧ್ಯಾಹ್ನ 3:24ರವರೆಗೆ ನಡೆಯಿತು.

    ಬೆಳಗ್ಗೆಯಿಂದ ಮಧ್ಯಾಹ್ನ ಭೋಜನ ಅವಧಿಯವರೆಗೆ ರಾಜೀನಾಮೆ ಸಲ್ಲಿಸಿದ ಶಾಸಕರ ಪರವಾಗಿ ಮುಕುಲ್ ರೋಹಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಮಧ್ಯಾಹ್ನದ ನಂತರ ಸಿಎಂ ಪರವಾಗಿ ರಾಜೀವ್ ಧವನ್ ವಾದ ಮಂಡಿಸಿದರು. ಇದನ್ನೂ ಓದಿ: ನಾಳೆ ಶಾಸಕರ ರಾಜೀನಾಮೆ, ಅನರ್ಹತೆ ಪ್ರಕರಣ ಇತ್ಯರ್ಥ

    ಇಡೀ ದಿನ ಮೂರು ಕಡೆಯ ವಾದ, ಪ್ರತಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠ ಬುಧವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿತು. ಆದೇಶ ಪ್ರಕಟವಾಗೋವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿಹಿಂದೆ ವಿಶ್ವಾಸಮತಯಾಚನೆಗೆ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ಪ್ರಕಟಿಸಿ: ರೋಹಟಗಿ

    ರಾಜೀವ್ ಧವನ್ ವಾದ ಹೀಗಿತ್ತು:
    ಸ್ಪೀಕರ್ ಕಣ್ಣುಮುಚ್ಚಿಕೊಂಡು ಕುಳಿತಿಲ್ಲ. ಶಾಸಕರು ಆಸೆ, ಆಮಿಷಗಳಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಪೀಕರ್ ಅವರಿಗೆ ನೀಡಲಾಗಿದೆ. 11 ಮಂದಿ ಶಾಸಕರು ಮುಂಬೈಗೆ ತೆರಳುವ ಬದಲು ಸ್ಪೀಕರ್ ಬಳಿ ಹೋಗಬೇಕಿತ್ತು. ಇದೊಂದು 11 ಜನರ ಬೇಟೆಯ ತಂಡವಾಗಿದೆ. ಗುಂಪು ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ರಾಜೀನಾಮೆ ಬಳಿಕ 10 ಶಾಸಕರು ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಶೀಘ್ರ ರಾಜೀನಾಮೆ ಅಂಗೀಕಾರವಾದರೆ ಸಂವಿಧಾನ ವಿರೋಧಿ ಆಗುತ್ತದೆ. ಹಾಗಾಗಿ ಸ್ಪೀಕರ್ ಕಾರ್ಯವ್ಯಾಪ್ತಿಯಲ್ಲಿ ಸುಪ್ರೀಂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅತೃಪ್ತ ಶಾಸಕರ ವಿಚಾರ ಮಾತ್ರ ಅಲ್ಲ ಇದು. ಸರ್ಕಾರವನ್ನು ಕೆಡವಲು ಹೊರಟಿದ್ದಾರೆ. ಸಿಎಂ ಮತ್ತು ಸಿಎಂ ಆಗಲು ಸಾಧ್ಯವಿಲ್ಲದವರ ನಡುವಿನ ಪ್ರಕರಣ ಇದಾಗಿದೆ.

    ಈ ವಿಚಾರದಲ್ಲಿ ಸ್ಪೀಕರ್ ಪ್ರಶ್ನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇರಲಿಲ್ಲ. ಈಗಲೂ ಇಲ್ಲ. ಈ ತರಹದ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಬಾರದು. ಇಲ್ಲಿ ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆ ಹೊರತುಪಡಿಸಿ, ಸುಪ್ರೀಂಗೆ ಮಧ್ಯಪ್ರವೇಶದ ಅಧಿಕಾರವೇ ಇಲ್ಲ. ಶಾಸಕರು ಆಮಿಷಗಳನ್ನು ಬೆನ್ನತ್ತಿ ಹೋಗಿದ್ದು, ವೈಯಕ್ತಿಕ ಹಿತಾಸಕ್ತಿಗಳಿಗಾಗಿ ರಾಜೀನಾಮೆ ನೀಡಿದ್ದಾರೆ. ಶಾಸಕರು ರಾಜೀನಾಮೆಗೆ ಭ್ರಷ್ಟಾಚಾರ, ದುರಾಡಳಿತದ ಆರೋಪ ಮಾಡುತ್ತಿದ್ದಾರೆ. ಅಲ್ಪಮತದ ಸರ್ಕಾರ ಉಳಿಸಲು ಸ್ಪೀಕರ್ ಯತ್ನಿಸುತ್ತಿಲ್ಲ. ಸರ್ಕಾರಕ್ಕೂ ಮತ್ತು ಸ್ಪೀಕರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಸ್ಪೀಕರ್ ಮೇಲೆ ಅತೃಪ್ತ ಶಾಸಕರು ಮಾಡಿರುವ ಆರೋಪ ಸರಿಯಲ್ಲ.

    ಎರಡೂ ತರಹದ ಅನರ್ಹತೆ ಪ್ರಕ್ರಿಯೆಗಳಿದ್ದು, ಭಿನ್ನವಾಗಿವೆ. ಶಾಸಕರ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಬೇಕು. ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ ನಡುವಿನ ವಾದ ಅಲ್ಲ. ಸ್ಪೀಕರ್ ಅಧಿಕಾರವನ್ನು 10ನೇ ಶೆಡ್ಯೂಲ್ ಜೊತೆಗೆ ಓದಬೇಕು. ಸಂವಿಧಾನದ 190ನೇ ವಿಧಿಯನ್ನು 10ನೇ ಶೆಡ್ಯೂಲ್ ಪ್ರಕಾರ ಅರ್ಥೈಸಿಕೊಳ್ಳಬೇಕಿದೆ. ಸ್ಪೀಕರ್ ಅವರಿಗೆ ವಿಚಾರಣೆ ನಡೆಸಲು ಸಮಯಾವಕಾಶದ ಅಗತ್ಯವಿದೆ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದ್ದು, ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದೆ. ಹೀಗಾಗಿ ವಿಧಿ 190 ಮತ್ತು ಶೆಡ್ಯೂಲ್ 10ನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕಕ್ಕೆ ಮಾರಕ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವದ ಬುಡ ಅಲುಗಾಡುತ್ತಿದೆ.

    ಶಾಸಕರ ರಾಜೀನಾಮೆಗಳಿಗೆ ಕಾರಣಗಳೇ ಇಲ್ಲ. ಶಾಸಕರು ನೀಡುವ ಕಾರಣಗಳು ಸ್ಪೀಕರ್ ಅವರಿಗೆ ತೃಪ್ತಿಯಾದ್ರೆ ಮಾತ್ರ ರಾಜೀನಾಮೆ ಸಾಂವಿಧಾನಿಕವಾಗಲಿದೆ. 10 ರಿಂದ 13 ಶಾಸಕರು ರಾಜೀನಾಮೆ ನೀಡಲು ಸರ್ಕಾರ ಕೆಡವಲು ಬೇಟೆಗೆ ಹೊರಟಿದ್ದಾರೆ. ರಾಜಕೀಯ ಆಟದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಶಾಸಕರು ಬಯಸಿದ್ದಾರೆ.

    ಸರ್ಕಾರ ಬೀಳಿಸಲು ಅತೃಪ್ತರು ಕೋರ್ಟಿಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಅವಕಾಶ ಮಾಡಿಕೊಡಬೇಡಿ. ಸುಪ್ರೀಂಕೋರ್ಟ್‍ನ ನ್ಯಾಯಾಂಗ ವಿಮರ್ಶೆ ಆಧಿಕಾರದ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ. ಸ್ಪೀಕರ್ ಹುದ್ದೆ ಸಾಂವಿಧಾನಿಕವಾದ್ದು, ಸುಪ್ರೀಂಕೋರ್ಟ್ ಸ್ಪೀಕರ್ ಮೇಲೆ ನಂಬಿಕೆ ಇಡಬೇಕು. ಸ್ಪೀಕರ್ ತಪ್ಪು ನಿರ್ಧಾರ ತೆಗೆದುಕೊಂಡರೆ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಲಿ. ಜುಲೈ 6 ಮತ್ತು 11ರ ನಡುವೆ ಸ್ಪೀಕರ್ ರಾಜೀನಾಮೆ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದರು. ಅದ್ರೆ ಅತೃಪ್ತರು ಬಿರುಗಾಳಿ ವೇಗದಲ್ಲಿ ಕೆಲಸ ಮಾಡಲಿ ಎಂದು ಹೇಳುತ್ತಿದ್ದಾರೆ. ಅರ್ಜಿಯ ವಿಚಾರಣೆಗೆ ಸ್ಪೀಕರ್ ಅವರಿಗೆ ಕಾಲಾವಕಾಶ ಬೇಕಿದೆ. ಸ್ಪೀಕರ್ ಈಗಾಗಲೇ ವಿಚಾರಣೆ ಆರಂಭಿಸಿದ್ದು, ಈ ಹಂತದಲ್ಲಿ ಸುಪ್ರೀಂಕೋಟ್ ಮಧ್ಯಪ್ರವೇಶಿಸುವಂತಿಲ್ಲ. ಸ್ಪೀಕರ್ ಅಧಿಕಾರದ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆ ಆಗಬೇಕು. ಈ ಬಗ್ಗೆ ತರಾತುರಿ ಆದೇಶ ನೀಡುವುದು ಬೇಡ.

    ರಾಜೀನಾಮೆ ಇದೊಂದು ರಾಜಕೀಯ ಕುತಂತ್ರವಾಗಿದ್ದು, ಅಧಿವೇಶನಕ್ಕೂ ಮುನ್ನ ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದಂತೆ ಮಾಡುವ ಪ್ಲಾನ್ ಇದಾಗಿದೆ. ಇಂತಹ ಬೆಳವಣಿಗೆಗಳನ್ನು ಪರಿಗಣಿಸಬಾರದು. ಬಜೆಟ್ ಅಂಗೀಕಾರಕ್ಕೂ ಮೊದಲೇ ಸರ್ಕಾರ ಬೀಳಿಸುವುದು ಇವರೆಲ್ಲರ ಉದ್ದೇಶವಾಗಿದೆ. ಗುರುವಾರಕ್ಕೆ ಪೂರ್ಣ ಪ್ರಮಾಣದ ಚರ್ಚೆ ಆಗಲಿ. ಅಂದು ಎಲ್ಲ ಶಾಸಕರು ಹಾಜರಾಗಲಿ.