Tag: ರಾಜಗುರು ದ್ವಾರಕನಾಥ್

  • ಪೇಜಾವರ ಶ್ರೀ ರಾಜಕಾರಣಕ್ಕೆ ಹೋಗಿದ್ರೆ ಪ್ರಧಾನಿಯಾಗುತ್ತಿದ್ದರು: ರಾಜಗುರು ದ್ವಾರಕನಾಥ್

    ಪೇಜಾವರ ಶ್ರೀ ರಾಜಕಾರಣಕ್ಕೆ ಹೋಗಿದ್ರೆ ಪ್ರಧಾನಿಯಾಗುತ್ತಿದ್ದರು: ರಾಜಗುರು ದ್ವಾರಕನಾಥ್

    ಕಲಬುರಗಿ: ಯತಿಶ್ರೇಷ್ಠರಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಶ್ರೀಗಳು ಮರಳಿ ನಾರಾಯಣನ ಸನ್ನಿಧಿ ಸೇರಿದ್ದಾರೆ. ಇದಕ್ಕೆ ದುಃಖ ಪಡುವುದೇನಿಲ್ಲ ಎಂದು ಖ್ಯಾತ ಜ್ಯೋತಿಷಿ, ರಾಜಗುರು ದ್ವಾರಕನಾಥ್ ಕಲಬುರಗಿಯಲ್ಲಿ ಹೇಳಿದ್ದಾರೆ.

    ಶ್ರೀಗಳಿಗೆ ನಾನು ಹಲವು ಬಾರಿ ಭೇಟಿಯಾಗಿ ಮಾತನಾಡಿಸಿದ್ದು ಈ ಹಿಂದೆ ಶ್ರೀಗಳು ನಮ್ಮ ಮನೆಗೆ ಬಂದಾಗ ನೀವು ಸನ್ಯಾಸ ಬಿಟ್ಟು ರಾಜಕಾರಣಕ್ಕೆ ಹೋಗಿದ್ದರೆ ಪ್ರಧಾನಿಯಾಗಬಹುದು ಎಂದು ಹೇಳಿದ್ದೆ. ಮನುಷ್ಯ ನೋವಿಗೆ ಜಾತಿ ಬೇಧ ದೂರ ಇಟ್ಟು ಸ್ಪಂದಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಮತ್ತೆ ಶ್ರೀಗಳ ಚೇತನ ಭಾರತದಲ್ಲಿ ಮೂಡಲಿ. ಅವರು ಈಗ ಕಾಣದಿದ್ದರೂ ಅವರ ಸ್ಮರಣೆ ಯಾವತ್ತಿಗೂ ಇರಲಿ. ಅವರ ಆಶೀರ್ವಾದ ಭಾರತ ಮತ್ತು ಕರ್ನಾಟಕ ಸಾಮ್ರಾಜ್ಯದ ಮೇಲಿ ಸದಾ ಇರಲಿ. ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪ ಮೇಲೆ ಇರಲಿ ಎಂದು ದ್ವಾರಕನಾಥ್ ಹೇಳಿದರು.

  • ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್

    ಎಚ್‍ಡಿಡಿ, ನಿಖಿಲ್, ಪ್ರಜ್ವಲ್ ಗೆಲುವು ಖಚಿತ: ರಾಜಗುರು ದ್ವಾರಕನಾಥ್

    – ಸಿಎಂ ಟೆಂಪಲ್ ರನ್‍ನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತೆ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಗೆಲುವು ಖಚಿತ ಎಂದು ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ.

    ಸಿಎಂ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗೊಂದಲದಲ್ಲಿ ಇಲ್ಲ, ಪ್ರಶಾಂತವಾಗಿದ್ದಾರೆ. ಸುಮ್ಮನೆ ಆರೋಪ ಮಾಡುವ ಜನರ ಮಾತುಗಳ ಬಗ್ಗೆ ಹೆಚ್ಚು ವಿಚಾರ ಮಾಡದಂತೆ, ಯಾವುದಕ್ಕೂ ಧೈರ್ಯ ಕಳೆದುಕೊಳ್ಳದಂತೆ ಸಿಎಂಗೆ ಸಲಹೆ ನೀಡಿದ್ದೇನೆ ಎಂದರು.

    ಕುಕ್ಕೆಯ ವಿಚಾರವಾಗಿ ಸಿಎಂ ಕುಮಾರಸ್ವಾಮಿಯವರು ನನ್ನ ಜೊತೆ ಮಾತಾನಾಡಿದ್ದಾರೆ. ಸಾರ್ವಜನಿಕ ದೇಣಿಗೆಯ ಮೂಲಕ ರಥ ನಿರ್ಮಿಸುವ ಸಲಹೆಯನ್ನು ನೀಡಿದ್ದೇನೆ. ಇದರ ಜೊತೆಗೆ ಹುಂಡಿಯಲ್ಲಿ ಭಕ್ತರು ಹಾಕಿದ ಚಿನ್ನ, ಬೆಳ್ಳಿಯನ್ನು ಬಳಕೆ ಮಾಡುವಂತೆ ಹೇಳಿದ್ದೇನೆ. ಟ್ಯಾಕ್ಸ್ ಪೇಯರ್ಸ್ ಹಣವನ್ನು ನಾವು ಬಳಕೆ ಮಾಡುವುದು ಬೇಡ ಅಂತ ಸಿಎಂಗೆ ಸಲಹೆ ನೀಡಿರುವೆ. ಅವರು ಕೂಡ ಟ್ಯಾಕ್ಸ್ ಪೇಯರ್ಸ್ ಹಣವನ್ನು ಬಳಕೆ ಮಾಡುವುದಕ್ಕೆ ಒಪ್ಪಿಲ್ಲ ಎಂದು ತಿಳಿಸಿದರು.

    ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ಅವರು ಟೆಂಪಲ್‍ರನ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದ ಮಹಾರಾಜ ದೇವಸ್ಥಾನಕ್ಕೆ ಹೋಗಬೇಕು. ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳಬೇಕಾಗುತ್ತದೆ. ಮಹಾರಾಜನಾಗಿ ನಾಡಿನ ಜನತೆಗೆ ನಡೆ ನುಡಿ ಕಲಿಸುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದು ಹೇಳಿದರು.

    ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನವನ್ನು ಶಾರದಪೀಠಕ್ಕೆ ಕೊಡುವ ಬಗ್ಗೆ ಗುಸು ಗುಸು ಸುದ್ದಿಯಾಗುತ್ತಿದೆ. ಈ ಕುರಿತು ಕುಮಾರಸ್ವಾಮಿ ಅವರನ್ನು ಕೇಳಿದ್ದೇನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಸಲಹೆಯನ್ನು ಕೇಳದೆ ಯಾವುದಕ್ಕೂ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಕ್ಕೆ ನಿರ್ಬಂಧ ಮಾಡಲ್ಲ, ಸಹಜವಾಗಿ ಇರುವೆ ಅಂತ ಮಾತು ಕೊಟ್ಟಿದ್ದಾರೆ. ಇನ್ನು ಮುಂದೆ ಅವರಿಗೆ ಬೇಕಾದರೆ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ನಿರ್ಬಂಧವನ್ನು ಮಾಡುವುದಿಲ್ಲ. ನಗುನಗುತ್ತಾ ಇರುವುದಾಗಿ ಹೇಳಿದ್ದಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತಡೆಯುವುದಕ್ಕೆ ಆಗಲ್ಲ. ಆದರೆ ಬಿಜೆಪಿ ಒಂದೇ ಬಹುಮತದಿಂದ ಬರಲ್ಲ ಅಂತ ಕುಮಾರಸ್ವಾಮಿ ಅವರಿಗೆ ನಾನು ಹೇಳಿದ್ದೇನೆ.

    ಕಚ್ಚಾಡಿಕೊಂಡು ಮೈತ್ರಿಯಿಂದ ಹೊರಬಿದ್ದರೆ ಕಾಂಗ್ರೆಸ್‍ಗೆ ಸರ್ಕಾರವಂತೂ ರಚನೆ ಮಾಡುವುದಕ್ಕೆ ಆಗಲ್ಲ. ಬಿಜೆಪಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಇಲ್ಲ. ಏಕೆಂದರೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೇವರ ಅನುಗ್ರಹವಿದೆ. ಕುಮಾರಸ್ವಾಮಿ ಸರ್ಕಾರ ಬಿದ್ದರೆ ನನಗೆ, ಪ್ರಜೆಗಳಿಗೆ ದುಃಖವಾಗುತ್ತದೆ ಎಂದು ದ್ವಾರಕನಾಥ್ ಗುರೂಜಿ ಹೇಳಿದರು.

  • ಮಗನ ಜೊತೆ ರಾಜಗುರು ಮನೆಗೆ ಸಿಎಂ – ದ್ವಾರಕನಾಥ್ ಸ್ಪಷ್ಟನೆ

    ಮಗನ ಜೊತೆ ರಾಜಗುರು ಮನೆಗೆ ಸಿಎಂ – ದ್ವಾರಕನಾಥ್ ಸ್ಪಷ್ಟನೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ರಾಜಗುರು ದ್ವಾರಕನಾಥ್ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

    ರಾತ್ರೋರಾತ್ರಿ ಭೇಟಿ ಮಾಡಿದ್ದು ಸತತ 4 ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ. ಜ್ಯೋತಿಷಿ ಮಾತು ಕೇಳಿ ಅಪ್ಪ ಕುಮಾರಸ್ವಾಮಿ, ಮಗ ನಿಖಿಲ್ ಟೆನ್ಶನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಮಾರ್ಚ್ 29ರ ಬಳಿಕ ನಿಖಿಲ್ ಜಾತಕದಲ್ಲಿ ಗುರು ಸ್ಥಾನ ಬದಲಾವಣೆ ಮಾಡುತ್ತಾರೆ. ಒಳ್ಳೆಯ ಗಳಿಗೆಯಲ್ಲಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿ, ಸದ್ಯಕ್ಕೆ ರಾಜಕೀಯ ಜೀವನದಲ್ಲಿ ಕಷ್ಟ ಇದೆ ಎಂದು ಜ್ಯೋತಿಷಿ ದ್ವಾರಕನಾಥ್ ಹೇಳಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜಗುರು ದ್ವಾರಕನಾಥ್ ಅವರು, ಇದು ಕುಮಾರಸ್ವಾಮಿ ಅವರದ್ದು ಸೌಹಾರ್ಧ ಭೇಟಿ ಅಷ್ಟೇ. 2107ರಲ್ಲೆ ನಾನು ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಹೇಳಿದ್ದೆ, ಅದರಂತೆ ಆಗಿದ್ದಾರೆ. ಅವರಿಗೆ ಶೃಂಗೇರಿ ಶಾರದಾಂಬೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಇದೆ ಎಂದರು.

    ಸಿಎಂ ಪುತ್ರ ಕೂಡ ಸ್ಪರ್ಧೆ ಮಾಡುತ್ತಾ ಇದ್ದೀನಿ ಅಂದ್ರು. ಅದನ್ನು ಬೇಡಾ ಅನ್ನೋದಕ್ಕೆ ಆಗಲ್ಲ. ಹೀಗಾಗಿ ಚುನಾವಣೆಗೆ ನಿಲ್ಲು ಎಂದು ಆಶೀರ್ವಾದ ಮಾಡಿದ್ದೇನೆ. ನೀವು ಗೆಲ್ಲುವುದಕ್ಕೆ ಶಾರದಾಂಬೆ, ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಇದೆ. ಯುದ್ಧನೇ ಶುರುವಾಗದೆ, ಯಾರು ಗೆಲ್ಲುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಯಾರು ನಾಮಪತ್ರ ಸಲ್ಲಿಸುತ್ತಾರೆ ಎಂದು ನೋಡಿ ಹೇಳಬಹದು ಎಂದು ರಾಜಗುರು ದ್ವಾರಕನಾಥ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv