Tag: ರಾಜಕೀಯ ಪಕ್ಷ

  • ‘ನಮ್ಮ ಕಾಂಗ್ರೆಸ್’ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಸೆಳೆಯಲು ಯುವತಿಯರ ಆಂಧ್ರ ಸ್ಟೈಲ್ ಡಾನ್ಸ್

    ‘ನಮ್ಮ ಕಾಂಗ್ರೆಸ್’ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಸೆಳೆಯಲು ಯುವತಿಯರ ಆಂಧ್ರ ಸ್ಟೈಲ್ ಡಾನ್ಸ್

    ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇಂದು `ನಮ್ಮ ಕಾಂಗ್ರೆಸ್ ಪಕ್ಷ’ ಉದಯವಾಯಿತು. ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಚಾಲನೆ ನೀಡಿದರು.

    ಆದರೆ ಜಿಲ್ಲೆಯ ಕೂಡಲಸಂಗಮದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಜನ ಬಾರದ ಕಾರಣ ಕಾರ್ಯಕ್ರಮದ ಆಯೋಜಕರು ಜನರನ್ನು ಸೆಳೆಯಲು ವೇದಿಕೆ ಮೇಲೆ ಯುವತಿಯರಿಂದ ನೃತ್ಯ ಕಾರ್ಯಕ್ರಮ ನಡೆಸಿದ್ದಾರೆ. ಈ ವೇಳೆ ಪಕ್ಷದ ಉದ್ಘಾಟನಾ ಸಮಾರಂಭ ನೋಡಲು ಬಂದ ಹಲವರು ಯುವತಿಯರ ನೃತ್ಯ ನೋಡುವ ಮೂಲಕ ಮುಜುಗರಕ್ಕೆ ಒಳಗಾಗಿದ್ದಾರೆ.

    ನಮ್ಮ ಕಾಂಗ್ರೆಸ್ ಪಕ್ಷದ ಹೊಲಿಗೆ ಯಂತ್ರದ ಚಿಹ್ನೆ ಇರುವ ಪಕ್ಷದ ಧ್ವಜವನ್ನ ಶಾಸಕ ವರ್ತೂರ್ ಪ್ರಕಾಶ್ ಅವರು ತಮ್ಮ ತಂದೆಗೆ ಹಸ್ತಾಂತರಿಸುವ ಮೂಲಕ ಪಕ್ಷದ ಲಾಂಛನವನ್ನ ಬಿಡುಗಡೆಗೊಳಿಸಿ ಪಕ್ಷವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು. ಈ ವೇಳೆ ಸಮಾವೇಶಕ್ಕೆ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ವಿರೋಧ ಪಕ್ಷದ ಸ್ಥಾನ ಸಿಗದಿದ್ದಾಗ, 2008ರಲ್ಲಿ ಯಡಿಯೂರಪ್ಪ ಅವರಿಂದ 8 ಕೋಟಿ ದುಡ್ಡು ಪಡೆದು ಬಿಜೆಪಿಯೊಂದಿಗೆ ಸಹಕರಿಸಿದ್ದ ನೀವು ಬಿಜೆಪಿ ಏಜೆಂಟ್ ಎಂದು ಗಂಭೀರ ಆರೋಪ ಮಾಡಿದರು. ಈ ಕುರಿತು ಬೆಂಗಳೂರಿನಲ್ಲಿ ವೇದಿಕೆ ಸಿದ್ಧಗೊಳಿಸಿ, ಯಾರು ಬಿಜೆಪಿ ಏಜೆಂಟ್ ಅಂತಾ ಸಾಬೀತು ಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಧಿಕಾರದ ಆಸೆಗಾಗಿ ನಾನು ಪಕ್ಷ ಕಟ್ಟಿಲ್ಲ, ಆದರೆ ಸಿಎಂ ಸಿದ್ದರಾಮಯ್ಯನವರು ಹೊಗಳು ಭಟ್ಟರಿಗೆ ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಯಾರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅವರಿಗೆ ಒಂದು ಪಟ್ಟ ಕಟ್ಟುತ್ತಾರೆ. ಅನ್ನ ಹಾಕಿದ ಸತೀಶ್ ಜಾರಕಿಹೊಳಿ ಅವರನ್ನು ಹೊರಕಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೇ ಸಿದ್ದರಾಮಯ್ಯ ಅವರು ತಮ್ಮ ಏಜೆಂಟ್ ರ ಮೂಲಕ ವೀರಶೈವ ಲಿಂಗಾಯತ ಸಮಾಜವನ್ನ ಒಡೆದು ಹಾಕಿದ್ದಾರೆ, ವೀರಶೈವ ಸಮಾಜವನ್ನು ಒಡೆದಂತಹ ಕೀರ್ತಿ ಸಿಎಂ ಅವರಿಗೆ ಸಲ್ಲುತ್ತೆ ಎಂದರು.

    ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಮೂಲ ನಾಯಕರನ್ನು ಹೊರಹಾಕುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಗೋಮುಖ ವ್ಯಾಗ್ರಹಗಳಿದ್ದಂತೆ. ಮಹದಾಯಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ಪಕ್ಷಗಳು ದುಡ್ಡು ಲೂಟಿ ಹೊಡೆಯಲು ಅಧಿಕಾರಕ್ಕೆ ಬರುತ್ತಿವೆ. ನಾನು ಯಾರಿಗೂ ದುಡ್ಡು ಕೊಟ್ಟು ಸಮಾವೇಶಕ್ಕೆ ಬರ ಹೇಳಿಲ್ಲ, ಆದರೂ ಇಷ್ಟು ಜನ ಬಂದಿದ್ದರೆ ಎಲ್ಲರಿಗೂ ಧಾನ್ಯವಾದ ಎಂದು ಹೇಳಿದರು.

    https://www.youtube.com/watch?v=3i8JNu_r7pI

     

  • ಸುದ್ದಿಗೋಷ್ಠಿಯಲ್ಲಿ ಶೆಣೈಗೆ ಸಿಟ್ಟು: ಅರ್ಧಕ್ಕೆ ಪ್ರೆಸ್‍ಮೀಟ್ ಮುಗಿಸಿ ಎದ್ದು ಹೋದ್ರು

    ಸುದ್ದಿಗೋಷ್ಠಿಯಲ್ಲಿ ಶೆಣೈಗೆ ಸಿಟ್ಟು: ಅರ್ಧಕ್ಕೆ ಪ್ರೆಸ್‍ಮೀಟ್ ಮುಗಿಸಿ ಎದ್ದು ಹೋದ್ರು

    ಬಳ್ಳಾರಿ: ಹೊಸ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ನೆಲೆ ಕಂಡುಕೊಳ್ಳಲು ಹೊರಟಿರುವ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಸುದ್ದಿಗೋಷ್ಠಿಯಿಂದ ಕೈ ಮುಗಿದು ಹೊರ ನಡೆದ ಘಟನೆ ನಡೆದಿದೆ.

    ನವಂಬರ್ ಒಂದರಂದು ಉದ್ಘಾಟನೆ ಯಾಗಲಿರುವ ಹೊಸ ಪಕ್ಷದ ಬಗ್ಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಇಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಕೂಡ್ಲಿಗಿಯಲ್ಲೇ ಹೊಸ ಪಕ್ಷ ಉದ್ಘಾಟನೆ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ರು.

    ಇದಕ್ಕೆ ಸಿಟ್ಟಾದ ಅನುಪಮಾ ಶೆಣೈ ಮಾಧ್ಯಮವರು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂತಾ ಕೆಟ್ಟದಾಗಿ ಬಿಂಬಿಸಿದ್ದೀರಿ. ಆದ್ರೆ ವಾಸ್ತವವಾಗಿ ಬಳ್ಳಾರಿ ಹಾಗಿಲ್ಲ. ಇಲ್ಲಿನ ಜನರು ಮುಗ್ದರು ಅಂತಾ ಪತ್ರಕರ್ತರಿಗೆ ಮರುಪ್ರಶ್ನೆ ಎಸೆದರು. ಇದಕ್ಕೆ ಪ್ರತಿ ಉತ್ತರ ನೀಡಿದ ಪತ್ರಕರ್ತರು ನಾವೂ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಅಂದಿಲ್ಲ. ನ್ಯಾಯಮೂರ್ತಿ ಸಂತೋಷ ಹೆಗಡೆ ರಿಪಬ್ಲಿಕ್ ಆಫ್ ಬಳ್ಳಾರಿ ಅಂತಾ ಹೇಳಿದ್ದರು. ಈ ಹಿಂದೆ ನೀವೂ ಕೂಡಾ ಕೂಡ್ಲಿಗಿಯಲ್ಲಿ ‘ಲಿಕ್ಕರ್ ಲಾಬಿ’ ಎಂದು ಆರೋಪಿಸಿದ್ದು ಮರೆತುಬಿಟ್ಟರಾ ಎಂದು ಮರು ಪ್ರಶ್ನೆ ಎಸೆದರು.

    ಪತ್ರಕರ್ತರ ಉತ್ತರ, ಪ್ರತಿಯುತ್ತರಕ್ಕೆ ಏಕಾಎಕಿ ಸಿಟ್ಟಾದ ಅನುಪಮಾ ಶೆಣೈ, ಅರ್ಧಕ್ಕೆ ಮೊಟಕುಗೊಳಿಸಿ ಪತ್ರಕರ್ತರಿಗೆ ಕೈ ಮುಗಿದು ಸಿಟ್ಟಿನಿಂದಲೇ ಸುದ್ದಿಗೋಷ್ಠಿಯಿಂದ ಹೊರನಡೆದರು.

    ನವೆಂಬರ್ ಒಂದರಂದು ಹೊಸ ಪಕ್ಷ ಉದ್ಘಾಟನೆ ಮಾಡಲಿರುವ ಅನುಪಮಾ ಶೆಣೈ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದರೆ ಕ್ಷೇತ್ರ ಯಾವುದು ಎಂದು ಈಗಲೇ ಹೇಳವುದಿಲ್ಲವೆಂದು ಸ್ಪಷ್ಟಪಡಿಸಿದರು.

    224 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಅನುಪಮಾ ಶೆಣೈ ಪ್ಲಾನ್ ರೂಪಿಸಿದ್ದಾರೆ. ಆದ್ರೆ ಅನುಪಮಾ ಹೊಸದಾಗಿ ರಾಜಕೀಯಕ್ಕೆ ಬರುವವರನ್ನೆ ಅಭ್ಯರ್ಥಿಗಳನ್ನಾಗಿ ಮಾಡಿ ಪಕ್ಷ ಕಟ್ಟಲು ಚಿಂತನೆ ನಡೆಸಿದ್ದಾರೆ.

  • ದೇಶದ ಶ್ರೀಮಂತ ಪಕ್ಷ ಯಾವುದು? ಯಾವ ಪಕ್ಷದ ಆಸ್ತಿ ಎಷ್ಟಿದೆ?

    ದೇಶದ ಶ್ರೀಮಂತ ಪಕ್ಷ ಯಾವುದು? ಯಾವ ಪಕ್ಷದ ಆಸ್ತಿ ಎಷ್ಟಿದೆ?

    ನವದೆಹಲಿ: ಒಟ್ಟು 894 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಭಾರತದ ಶ್ರೀಮಂತ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

    ಅಸೋಷಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಎಆರ್) ಸಂಸ್ಥೆ 2015-16ನೇ ಸಾಲಿನಲ್ಲಿ ಪಕ್ಷಗಳ ಆಸ್ತಿಯ ವಿವರಗಳನ್ನು ಪ್ರಕಟಿಸಿದ್ದು, ಕಾಂಗ್ರೆಸ್ 759 ಕೋಟಿ ರು. ಆಸ್ತಿ ಹೊಂದುವ ಮೂಲಕ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿದೆ.

    ಯಾವ ಪಕ್ಷದ ಆಸ್ತಿ ಎಷ್ಟು?
    ಬಿಜೆಪಿ 893.88 ಕೋಟಿ ರೂ., ಕಾಂಗ್ರೆಸ್ 758.79 ಕೋಟಿ ರೂ., ಬಿಎಸ್‍ಪಿ 559 ಕೋಟಿ ರೂ., ಸಿಪಿಎಂ 437.78 ಕೋಟಿ ರೂ., ಎಐಟಿಸಿ 44.99 ಕೋಟಿ ರೂ., ಎನ್‍ಸಿಪಿ 14.54 ಕೋಟಿ ರೂ., ಸಿಪಿಐ 10.18 ಕೋಟಿ ರೂ. ಆಸ್ತಿಯನ್ನು ಹೊಂದಿದೆ.

    ಸಾಲ ಎಷ್ಟಿದೆ?
    ಕಾಂಗ್ರೆಸ್ 329.43 ಕೋಟಿ ರೂ., ಬಿಜೆಪಿ 24.99 ಕೋಟಿ ರೂ., ಎಐಟಿಸಿ 12.07 ಕೋಟಿ ರೂ., ಸಿಪಿಐ 8.79 ಕೋಟಿ ರೂ., ಸಿಪಿಐಎಂ 20.285 ಕೋಟಿ ರೂ., ಬಿಎಸ್‍ಪಿ 1.63 ಕೋಟಿ ರೂ., ಎನ್‍ಸಿಪಿಗೆ 95 ಲಕ್ಷ ರೂ. ಸಾಲವಿದೆ.

    2004-05ರಲ್ಲಿ ಬಿಜೆಪಿ 123.93 ಕೋಟಿ ರುಪಾಯಿ ಆಸ್ತಿ ಹೊಂದಿತ್ತು. 11 ವರ್ಷದಲ್ಲಿ ಅದರ ಆಸ್ತಿ ಪ್ರಮಾಣ ಹೆಚ್ಚಾಗಿದ್ದು ಈಗ 893.88 ಕೋಟಿ ರೂ. ಆಗಿದೆ. ಕಾಂಗ್ರೆಸ್ ಆಸ್ತಿ ಪ್ರಮಾಣ ಇದೇ ಅವಧಿಯಲ್ಲಿ 167.35 ಕೋಟಿ ರೂ. ಇದ್ದರೆ ಈಗ 758.79 ಕೋಟಿ ರೂ. ಆಗಿದೆ.

    2004-05 ರ ಅವಧಿಯಲ್ಲಿ ಕಾಂಗ್ರೆಸ್ ಗೆ 8 ಕೋಟಿ ರೂ. ಸಾಲವಿದ್ದರೆ ಈಗ 329.43 ಕೋಟಿ ರೂ.ಗೆ ಏರಿಕೆಯಾಗಿದೆ.  ಈ ಅವಧಿಯಲ್ಲಿ  ಬಿಜೆಪಿಗೆ 14.29 ಕೋಟಿ ರೂ. ಸಾಲವಿದ್ದರೆ 2015-16 ಅವಧಿಯ ವೇಳೆಗೆ 24.99 ಕೋಟಿ ರೂ.ಗೆ ಏರಿಕೆಯಾಗಿದೆ.

    ಇದನ್ನೂ ಓದಿ: 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ? ಕೊಟ್ಟವರು ಯಾರು?

     

     

  • 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ?

    4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ?

    ನವದೆಹಲಿ: 2012-13 ಮತ್ತು 2015-16 ಅವಧಿಯಲ್ಲಿ ಕಾರ್ಪೋರೇಟ್ ಕಂಪೆನಿಗಳು 956.77 ಕೋಟಿ ರೂ. ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

    ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ರಾಜಕೀಯ ಪಕ್ಷಗಳ ದೇಣಿಗೆ ಬಗ್ಗೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಹರಿದು ಬಂದಿದ್ದು, ಈ ಅವಧಿಯಲ್ಲಿ 2,987 ಕಾರ್ಪೋರೇಟ್ ದಾನಿಗಳಿಂದ ಒಟ್ಟು 705.81 ಕೋಟಿ ರೂ. ದೇಣಿಗೆ ಬಂದಿದೆ ಎಂದು ಎಡಿಆಎರ್ ತಿಳಿಸಿದೆ.

    ಕಾಂಗ್ರೆಸ್ ಪಕ್ಷಕ್ಕೆ 167 ದಾನಿಗಳಿಂದ 198.16 ಕೋಟಿ ರೂ. ಹಣ ಬಂದಿದ್ದರೆ, ಎನ್‍ಸಿಪಿಗೆ 40 ದಾನಿಗಳಿಂದ 50.73 ಕೋಟಿ ರೂ. ಬಂದಿದೆ. ಸಿಪಿಎಂಗೆ 45 ದಾನಿಗಳಿಂದ 1.89 ಕೋಟಿ ರೂ., 17 ದಾನಿಗಳಿಂದ ಸಿಪಿಐಗೆ 18 ಲಕ್ಷ ರೂ. ಹಣ ದೇಣಿಗೆ ರೂಪದಲ್ಲಿ ಬಂದಿದೆ.

    ವಿಶೇಷವಾಗಿ ಐದು ರಾಜಕೀಯ ಪಕ್ಷಗಳಿಗೆ ಲೋಕಸಭಾ ಚುನಾವಣೆ ನಡೆದ ವರ್ಷದಲ್ಲಿ(2014-15) ಅತಿ ಹೆಚ್ಚು ಹಣ ದೇಣಿಗೆ ರೂಪದಲ್ಲಿ ಬಂದಿದೆ. 82.14 ಕೋಟಿ ರೂ.(2012-13), 224.61 ಕೋಟಿ ರೂ.(2013-14), 573.18 ಕೋಟಿ ರೂ.(2014-15), 76.94 ಕೋಟಿ ರೂ.(2015-16) ಹಣ ದೇಣಿಗೆ ಬಂದಿದೆ.

    ಯಾವ ವರ್ಷ ಯಾರಿಗೆ ಎಷ್ಟು?
    ಬಿಜೆಪಿಗೆ 72.99 ಕೋಟಿ ರೂ.(2012-13), 156.983 ಕೋಟಿ ರೂ.(2013-14), 408.344 ಕೋಟಿ ರೂ.(2014-15), 67.49 ಕೋಟಿ ರೂ.(2015-16) ಒಟ್ಟು 705.81 ಕೋಟಿ ರೂ. ದೇಣಿಗೆ ಬಂದಿದೆ.

    ಕಾಂಗ್ರೆಸ್‍ಗೆ 7.545 ಕೋಟಿ ರೂ.(2012-13), 53.516 ಕೋಟಿ ರೂ.(2013-14), 128.11 ಕೋಟಿ ರೂ.(2014-15), 0.26 ಕೋಟಿ ರೂ.(2015-16) ಒಟ್ಟು 50.73 ಕೋಟಿ ರೂ. ದೇಣಿಗೆ ಬಂದಿದೆ.

    ಅತಿ ಹೆಚ್ಚು ದೇಣಿಗೆ ನೀಡಿದ ಟ್ರಸ್ಟ್ ಗಳು
    ಸತ್ಯ ಎಲೆಕ್ಟೋರಲ್ ಟ್ರಸ್ಟ್ 193.62 ಕೋಟಿ ರೂ., ಜನರಲ್ ಎಲೆಕ್ಟೋರಲ್ ಟ್ರಸ್ಟ್ 70.7 ಕೋಟಿ ರೂ., ಲೋಧಾ ಕನ್‍ಸ್ಟ್ರಕ್ಷನ್ 16 ಕೋಟಿ ರೂ. ದೇಣಿಗೆಯನ್ನು ಬಿಜೆಪಿಗೆ ನೀಡಿದೆ.

    ಸತ್ಯ ಎಲೆಕ್ಟೋರಲ್ ಟ್ರಸ್ಟ್ 57.25 ಕೋಟಿ ರೂ.,ಜನರಲ್ ಎಲೆಕ್ಟೋರಲ್ ಟ್ರಸ್ಟ್ 54.1 ಕೋಟಿ ರೂ., ಪ್ರೊಗ್ರೆಸ್ಸಿವ್ ಎಲೆಕ್ಟೋರಲ್ 9.9 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡಿದೆ.

    ಎನ್‍ಸಿಪಿಗೆ ಸತ್ಯ ಎಲೆಕ್ಟೋರಲ್ ಟ್ರಸ್ಟ್ 10 ಕೋಟಿ ರೂ., ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ 5.25 ಕೋಟಿ ರೂ., ಲೋಧಾ ಡೆವೆಲ್ಲರ್ಸ್ ಪ್ರೈವೆಟ್ ಲಿಮಿಟೆಟ್ 5 ಕೋಟಿ ರೂ. ಹಣವನ್ನು ದೇಣಿಗೆಯಾಗಿ ನೀಡಿದೆ.