Tag: ರಸ್ತೆ ನಿರ್ಮಾಣ

  • ರಸ್ತೆ ನಿರ್ಮಾಣ ಹೆಸರಿನಲ್ಲಿ ಮರೆಯಾಗುತ್ತಿರುವ ಮುಳ್ಳಯ್ಯನಗಿರಿ!

    ರಸ್ತೆ ನಿರ್ಮಾಣ ಹೆಸರಿನಲ್ಲಿ ಮರೆಯಾಗುತ್ತಿರುವ ಮುಳ್ಳಯ್ಯನಗಿರಿ!

    ಚಿಕ್ಕಮಗಳೂರು: ರಸ್ತೆ ನಿರ್ಮಾಣ ಹೆಸರಿನಲ್ಲಿ ಮುಳ್ಳಯ್ಯನಗಿರಿಯೂ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗುವ ಕಾಲ ಬರುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ.

    ಹಿಮಾಲಯ ಪರ್ವತಕ್ಕಿಂತ ಹಳೆಯದ್ದಾದ ದಟ್ಟ ಕಾನನದ ಶೋಲಾ ಕಾಡುಗಳ ಪಶ್ಚಿಮ ಘಟ್ಟಕ್ಕೂ ಸಂಚಕಾರ ಬಂದಿದೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದು ಕಂಡರೆ ಗಿರಿ ಆಯಸ್ಸು ಮುಗಿಯಿತ್ತಾ ಎಂಬ ಅನುಮಾನ ಮೂಡಿದೆ.

    ಇಂದು ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡುತ್ತಿರುವುದು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸೋದರಲ್ಲಿ ಅನುಮಾನವಿಲ್ಲ. ಸರ್ಕಾರ ರಸ್ತೆ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದೆ ವಿನಃ ಅಲ್ಲಿನ ಪ್ರಾಣಿ-ಪಕ್ಷಿಗಳು, ನೀರಿನ ಮೂಲ, ಶೋಲಾ ಅರಣ್ಯ, ಹುಲ್ಲುಗಾವಲಿನ ಬಗ್ಗೆ ಕಾಳಜಿಯೇ ಇಲ್ಲವೆಂದು ಪರಿಸರವಾದಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣನ್ನು ಅಗೆಯೋದು, ಗುಂಡಿ ತೋಡೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅದು ಕುಸಿಯುತ್ತೆ ಅದರಿಂದ ಬಹುದೊಡ್ಡ ಅನಾಹುತ ಆಗುತ್ತದೆ. ಒಮ್ಮೆ ಈ ಗಿರಿಯನ್ನು ನಾಶ ಮಾಡಿದರೆ, ಮತ್ತೆ ನಿರ್ಮಿಸೋದು ಅಸಾಧ್ಯ. ಇಂತಹ ಅಪರೂಪದ ಪ್ರಕೃತಿ ಸಂಪತ್ತನ್ನು ಉಳಿಸಿಕೊಳ್ಳುವ ಬದಲು ಸರ್ಕಾರ ಅಳಿಸೋಕೆ ಬೇಕಾದ ಎಲ್ಲಾ ಕೆಲಸ ಮಾಡುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.

    ಈ ಅರಣ್ಯ ನಾಶವಾದರೆ ಅಂತರ್ಜಲ ಕುಸಿಯುತ್ತೆ. ಶೋಲಾ ಅರಣ್ಯ ನಾಶವಾದರೆ ನೀರಿನ ಸೆಲೆಯೂ ಬತ್ತುತ್ತೆ. ನೀರನ್ನು ವರ್ಷವಿಡಿ ಹಿಡಿದಿಟ್ಟು ಹರಿಸೋ ಹುಲ್ಲುಗಾವಲು ನಾಶವಾಗುತ್ತೆ. ಕಾಂಕ್ರೀಟ್ ಕಾಡಾದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು. ಸರ್ಕಾರದ ಒಂದು ಕೆಲಸ ಪ್ರಕೃತಿ ಹಾಗೂ ಸಮಾಜವನ್ನೇ ನಾಶಮಾಡುವಂತದ್ದು. ಸರ್ಕಾರ ಇಲ್ಲಿಗೆ ಬರುವ ಜನರನ್ನಷ್ಟೆ ನೋಡುತ್ತಿದೆ ವಿನಃ ವರದಂತಿರೋ ಅರಣ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

  • ಗುತ್ತಿಗೆದಾರನ ಎಡವಟ್ಟು- ದಾರಿ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ರಸ್ತೆ ನಿರ್ಮಾಣ!

    ಗುತ್ತಿಗೆದಾರನ ಎಡವಟ್ಟು- ದಾರಿ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ರಸ್ತೆ ನಿರ್ಮಾಣ!

    ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನ ಎಡವಟ್ಟಿನಿಂದ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವನ್ನು ಬಿಟ್ಟು ರಸ್ತೆ ನಿರ್ಮಾಣ ಮಾಡಲಾಗಿದೆ.

    ಅಥಣಿ ತಾಲೂಕಿನ ಗುತ್ತಿಗೆದಾರ ರಫೀಕ್ ತಾರಡೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೋಣನವಾಡಿಯಿಂದ ಕಲ್ಲಾಳ ಗ್ರಾಮದವರೆಗೆ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಈ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ಅಲ್ಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಎಡವಟ್ಟಿನಿಂದ ಗುತ್ತಿಗೆದಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

    ಶೇಡಬಾಳ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಹೀಗೆ ರಸ್ತೆ ನಿರ್ಮಾಣ ಮಾಡಲು ಕಾರಣವಾಗಿದ್ದು, ದಾರಿ ಮಧ್ಯದಲ್ಲೇ ಕಂಬ ಇದ್ದರೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂದಾಜು 40 ಲಕ್ಷ ಜನರ ದುಡ್ಡು ನೀರು ಪಾಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಅಲ್ಲದೆ ಈ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ನಿರ್ಮಾಣವಾಗಿರುವ ಡಾಂಬರ್ ರಸ್ತೆಯನ್ನು ಕೈಯಿಂದಲೇ ಕಿತ್ತಬಹುದಾಗಿದೆ. ಈ ರೀತಿ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.

  • ಸ್ವಹಿತಾಸಕ್ತಿಗೆ ರಸ್ತೆ ದಿಕ್ಕನ್ನೇ ಬದಲಿಸಿದ ಎಂಎಲ್‍ಸಿ ಎನ್.ಎಸ್.ಬೋಸರಾಜು?

    ರಾಯಚೂರು: ಅನುದಾನ ಬಿಡುಗಡೆಯಾದ ಸ್ಥಳದಲ್ಲೇ ಸರಿಯಾದ ರಸ್ತೆ ನಿರ್ಮಾಣವಾಗುವುದು ಕಠಿಣ. ಆದ್ರೆ ರಾಯಚೂರಿನಲ್ಲಿ ಯಾವ ಯೋಜನೆಯಲ್ಲೂ ಇಲ್ಲದ ಜಾಗದಲ್ಲಿ ಭರ್ಜರಿ ರಸ್ತೆ ನಿರ್ಮಾಣವಾಗಿದೆ. ಇದು ಹೇಗೆ ಸಾಧ್ಯ ಅಂತ ಗಾಬರಿಯಾಗಬೇಡಿ. ಇಲ್ಲಿನ ವಿಧಾನ ಪರಿಷತ್ ಸದಸ್ಯರೊಬ್ಬರ ಕೈಚಳಕದಿಂದ ಈ ಪವಾಡ ನಡೆದಿದೆ.

    ಸರ್ಕಾರದ ದಾಖಲೆಗಳ ಪ್ರಕಾರ ರಾಯಚೂರಿನಿಂದ ಮಲಿಯಾಬಾದ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ 0.80 ಕಿ.ಮೀ ಡಾಂಬರ್ ರಸ್ತೆ ಹಾಗೂ 100 ಮೀಟರ್ ಸಿಸಿ ರಸ್ತೆಯಾಗಿದೆ. ಆದ್ರೆ ವಾಸ್ತವದಲ್ಲಿ ಇಲ್ಲಿ ಅಂತಹದ್ದೇನು ಇಲ್ಲ. ಇಲ್ಲಿ ನಡೆದಿದೆ ಎನ್ನಲಾದ ರಸ್ತೆ ಕಾಮಗಾರಿ ರಾಯಚೂರಿನ ನಗರಸಭೆ ವಾರ್ಡ್ ಸಂಖ್ಯೆ 3 ರಲ್ಲಿ ಬರುವ ಮಾರುತಿ ಬಡಾವಣೆಯಲ್ಲಿ ಪೂರ್ಣಗೊಂಡಿದೆ. ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಸ್ವಹಿತಾಸಕ್ತಿಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರ್ಮಿಸಬೇಕಾದ ರಸ್ತೆಯನ್ನ ನಗರದಲ್ಲಿ ನಿರ್ಮಿಸಲಾಗಿದೆ.

    ಬೋಸರಾಜುಗೆ ಸೇರಿದ ಜಾಗ ಇರುವುದರಿಂದ ಹಾಗೂ ಅವರೇ ದಾನ ನೀಡಿದ ಜಾಗದಲ್ಲಿರುವ ಟ್ಯಾಗೋರ್ ಪಾಲಿಟೆಕ್ನಿಕ್ ಕಾಲೇಜ್‍ಗೆ ಅನುಕೂಲವಾಗಲು ಯೋಜನೆ ದಿಕ್ಕನ್ನೆ ಬದಲಿಸಿದ್ದಾರೆ. 2015-16ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆ ಹಣ ದುರುಪಯೋಗವಾಗಿದೆ. ಇದಕ್ಕೆ ನೇರಹೋಣೆ ಎನ್.ಎಸ್.ಬೋಸರಾಜು ಅಂತ ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

    2014 ರಲ್ಲಿ ಎನ್.ಎಸ್.ಬೋಸರಾಜು ಗ್ರಾಮೀಣಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಿ ಮಲಿಯಾಬಾದ್ ಗ್ರಾಮಕ್ಕೆ ರಸ್ತೆ ನಿರ್ಮಿಸಲು 25 ಲಕ್ಷ ರೂಪಾಯಿ ಅನುದಾನಕ್ಕೆ ಅನುಮೋದನೆ ಪಡೆದಿದ್ದಾರೆ. ಆದ್ರೆ ಬಳಿಕ ರಸ್ತೆ ಕಾಮಗಾರಿಯನ್ನ ಮಲಿಯಾಬಾದ್ ಗ್ರಾಮದಲ್ಲಿ ಮಾಡದೇ ನಗರ ಪ್ರದೇಶದಲ್ಲಿ ಮಾಡುವ ಮೂಲಕ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಮೆಹಬೂಬ್ ಅಲಿಖಾನ್ ನಿಯಮ ಉಲ್ಲಂಘಿಸಿದ್ದಾರೆ. ದಾಖಲೆಗಳಲ್ಲಿ ಮಾರುತಿ ಬಡಾವಣೆ ಭಾವಚಿತ್ರ ಅಂಟಿಸಿ ಮಲಿಯಾಬಾದ್ ಅಂತ ತೋರಿಸಿದ್ದಾರೆ. ಎನ್.ಎಸ್.ಬೋಸರಾಜುಗೆ ಹೆದರಿ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದಾರೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಪಟ್ಟಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಎಸಿಬಿಗೆ ದೂರು ನೀಡಿದ್ದಾರೆ.

    ಗ್ರಾಮೀಣ ಭಾಗದ ಅಭಿವೃದ್ದಿಗೆ ಮೀಸಲಾದ ಅನುದಾನದ ರಸ್ತೆ ಕಾಮಗಾರಿಯಲ್ಲಿ ಗೋಲ್ ಮಾಲ್ ಮಾಡಿರುವುದಂತೂ ದಾಖಲೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ನಿಜಕ್ಕೂ ಪ್ರಭಾವ ಬೀರಿದ್ದು ಯಾಕೆ ಅನ್ನೋದು ಬೆಳಕಿಗೆ ಬರಬೇಕಿದೆ. ನಿಯಮ ಉಲ್ಲಂಘಿಸಿದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.