Tag: ರಣಹೇಡಿ

  • ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ರೈತರ ಪ್ರೀತಿ ಗಿಟ್ಟಿಸಿಕೊಂಡ ರಣಹೇಡಿ!

    ನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಕಳೆದ ವಾರ ಬಿಡುಗಡೆಗೊಂಡಿತ್ತು. ಅನ್ನದಾತರ ಬದುಕಿನ ಕಥೆ ಎಂದ ಮೇಲೆ ಅದರತ್ತ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಅಷ್ಟಕ್ಕೂ ಕನ್ನಡದ ಪ್ರೇಕ್ಷಕರೂ ಕೂಡ ಇಂತಹ ನೆಲದ ಕಂಪಿನ ಕಥೆಗಳಿಗಾಗಿ ಸದಾ ಕಾತರಿಸುತ್ತಿರುತ್ತಾರೆ. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಬಂದ ಈ ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರ ಪ್ರೀತಿ ಸಿಕ್ಕಿದೆ. ಆ ನಂತರದಲ್ಲಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಸಾಗಿ ಬಂದ ರಣಹೇಡಿ ಕ್ರಮೇಣ ರಾಜ್ಯದ ರೈತರ ಪ್ರೀತಿಯನ್ನೂ ಪಡೆದುಕೊಂಡಿದೆ. ಇದು ರಣಹೇಡಿಗೆ ಮತ್ತಷ್ಟು ಶಕ್ತಿ ತುಂಬಿದೆ. ಯಾವುದೇ ಚಿತ್ರದ ಗೆಲುವಿನಲ್ಲಿ ರೈತಾಪಿ ವರ್ಗದ ಪಾತ್ರ ಬಹಳಷ್ಟಿದೆ. ಅವರದ್ದೇ ಬದುಕು ಬವಣೆಯ ಕಥೆ ಹೊಂದಿರೋ ರಣಹೇಡಿಯನ್ನು ರಾಜ್ಯದ ರೈತರೆಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ.

    ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ರೈತ ಸಮುದಾಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅದನ್ನು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿಯೇ ನಿರೂಪಿಸಲಾಗಿದೆ. ಹಳ್ಳಿ ಜೀವನ ಅಂದಮೇಲೆ ಅಲ್ಲಿ ದ್ವೇಷ, ಅಸೂಯೆ, ಜಗಳ, ಕಾದಾಟಗಳೆಲ್ಲ ಇದ್ದಿದ್ದೇ. ಅದೇ ರೀತಿ ಇಲ್ಲಿಯೂ ಎರಡು ಫೈಟಿಂಗುಗಳಿವೆ. ಆದರೆ ಅದಕ್ಕೆ ಯಾವುದೇ ಬಿಲ್ಡಪ್ಪುಗಳನ್ನು ಅಳವಡಿಸಲಾಗಿಲ್ಲ. ಆ ನೈಜತೆಯಲ್ಲಿಯೂ ಈ ಸಾಹಸ ಸನ್ನಿವೇಶಗಳು ಮಿರುಗುವಂತೆ ಕಟ್ಟಿ ಕೊಡಲಾಗಿದೆ. ಯಾವ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲದಂತೆ ಮೂಡಿ ಬಂದಿರುವ ಈ ಚಿತ್ರವನ್ನು ರಾಜ್ಯಾದ್ಯಂತ ಜನ ಮೆಚ್ಚಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿರುವ ಈ ಚಿತ್ರವೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರವನ್ನು ಕನ್ನಡ ಚಿತ್ರರಂಗದ ಸದಭಿರುಚಿಯ ನಿರ್ಮಾಪಕರಾದ ಸುರೇಶ್ ನಿರ್ಮಾಣ ಮಾಡಿದ್ದಾರೆ. ಇದು ರೈತರ ಕಥಾನಕ ಹೊಂದಿದ್ದರೂ ರಣಹೇಡಿ ಎಂಬ ಹೆಸರನ್ನು ಯಾಕಿಡಲಾಗಿದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತಿತ್ತು. ಆದರೆ ರೈತ ರಣಹೇಡಿಯಲ್ಲ ಯೋಧ ಎಂಬಂತಹ ಕಥಾ ತಿರುಳನ್ನು ಈ ಸಿನಿಮಾ ಒಳಗೊಂಡಿದೆ ಎಂಬ ವಿಚಾರವೇ ರೈತ ಸಂಕುಲ ಇದರತ್ತ ಆಕರ್ಷಣೆಗೀಡಾಗಲು ಕಾರಣವಾಗಿದೆ. ಅಷ್ಟಕ್ಕೂ ರೈತರ ಬದುಕೇ ಒಂದು ಹೋರಾಟ. ಅದಕ್ಕೆ ತಕ್ಕುದಾಗಿಯೇ ಈ ಸಿನಿಮಾದಲ್ಲಿ ಮೈ ನವಿರೇಳಿಸುವಂತಹ ದೇಸೀ ಸಾಹಸ ಸನ್ನಿವೇಶಗಳೂ ಇವೆ. ಒಟ್ಟಾರೆಯಾಗಿ ಈ ಭಿನ್ನ ಹೂರಣವೇ ಜನರಿಗೆ ಹಿಡಿಸಿದೆ. ಇದರಿಂದಾಗಿಯೇ ಅಮೋಘ ಗೆಲುವು ರಣಹೇಡಿಯ ಕೈಹಿಡಿಯುವ ಸಾಧ್ಯತೆಗಳು ಮಿರುಗಲಾರಂಭಿಸಿವೆ.

  • ರಣಹೇಡಿ ಜೊತೆ ಕಬ್ಬು ಕಟಾವಿಗೆ ಬಂದ ಐಶ್ವರ್ಯಾ ರಾವ್!

    ರಣಹೇಡಿ ಜೊತೆ ಕಬ್ಬು ಕಟಾವಿಗೆ ಬಂದ ಐಶ್ವರ್ಯಾ ರಾವ್!

    ಸಾಮಾನ್ಯವಾಗಿ ಬಹುತೇಕ ನಟಿಯರು ಗ್ಲಾಮರಸ್ ಪಾತ್ರಗಳಲ್ಲಿ, ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿಯೇ ಮಿಂಚಬೇಕೆಂಬ ಇರಾದೆ ಹೊಂದಿರುತ್ತಾರೆ. ಕೆಲವೇ ಕೆಲ ನಟಿಯರು ಮಾತ್ರವೇ ಅದು ಎಂಥಾದ್ದೇ ಚಹರೆಯ ಪಾತ್ರವಾದರೂ ನಟನೆಗೆ ಅವಕಾಶವಿರಬೇಕು, ಅದು ಸವಾಲಿನದ್ದಾಗಿರಬೇಕೆಂಬ ಮನಸ್ಥಿತಿ ಹೊಂದಿರುತ್ತಾರೆ. ಅಂಥ ವಿರಳ ನಟಿಯರ ಸಾಲಿನಲ್ಲಿ ಐಶ್ವರ್ಯಾ ರಾವ್ ಕೂಡಾ ಸೇರಿಕೊಳ್ಳುತ್ತಾರೆ. ಬಹುಶಃ ತಾನು ಪರಿಪೂರ್ಣ ನಟಿಯಾಗಬೇಕೆಂಬ ತುಡಿತ ಇಲ್ಲದೇ ಹೋಗಿದ್ದರೆ ಖಂಡಿತಾ ಅವರು ರಣಹೇಡಿ ಚಿತ್ರದ ಪಾತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

    ನಿರ್ದೇಶಕ ಮನು ಕೆ. ಶೆಟ್ಟಿ ಹಳ್ಳಿ ಕಥೆಯನ್ನು ಸಿದ್ಧಪಡಿಸಿಕೊಳ್ಳುವಾಗಲೇ ಪಾತ್ರಗಳಿಗೂ ಕಲಾವಿದರನ್ನು ನಿಕ್ಕಿ ಮಾಡಿಕೊಂಡಿದ್ದರಂತೆ. ಕರ್ಣ ಕುಮಾರ್ ಈ ಕಥೆಯನ್ನು, ಪಾತ್ರವನ್ನು ಆರಂಭಿಕವಾಗಿಯೇ ಒಪ್ಪಿಕೊಂಡಿದ್ದರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕರ್ಣಕುಮಾರ್ ಕೂಡಾ ಅತ್ಯಂತ ಖುಷಿಯಿಂದಲೇ ಈ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬುದೇ ಪ್ರಶ್ನೆಯಾಗಿತ್ತು. ಅದು ಡಿಗ್ಲಾಮ್ ಪಾತ್ರ. ನಟನೆಯಲ್ಲಿ ಪಾರಂಗತೆಯಾದ ನಟಿ ಮಾತ್ರವೇ ಅದನ್ನು ನಿರ್ವಹಿಸಲು ಸಾಧ್ಯ. ಇದಕ್ಕಾಗಿ ಹುಡುಕಾಟದಲ್ಲಿದ್ದಾಗ ಅದಾಗಲೇ ರವಿ ಹಿಸ್ಟರಿ ಎಂಬ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯಾ ರಾವ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು.

    https://www.facebook.com/publictv/videos/2397787000346983/?t=1

    ರವಿ ಹಿಸ್ಟರಿಯ ಜೊತೆಗೇ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದವರು ಐಶ್ವರ್ಯಾ ರಾವ್. ಈ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆದ ಐಶ್ವರ್ಯಾ ಮರು ಮಾತಾಡದೆ ಅದನ್ನು ಒಪ್ಪಿಕೊಂಡಿದ್ದರಂತೆ. ಅವರದ್ದಿಲ್ಲಿ ಬಳ್ಳಾರಿ ಸೀಮೆಯಿಂದ ಕಬ್ಬು ಕಟಾವು ಮಾಡಲು ಮಂಡ್ಯ ಸೀಮೆಗೆ ಬಂದ ಕೂಲಿಯಾಳಿನ ಪಾತ್ರ. ಯಾವುದೇ ಗ್ಲಾಮರ್ ಇಲ್ಲದ ಆ ಪಾತ್ರಕ್ಕೆ ಐಶ್ವರ್ಯಾ ಜೀವ ತುಂಬಿರೋ ರೀತಿಯ ಬಗ್ಗೆ ಚಿತ್ರತಂಡದಲ್ಲೊಂದು ಮೆಚ್ಚುಗೆ ಇದ್ದೇ ಇದೆ. ಐಶ್ವರ್ಯಾರ ನಟನೆ ನೋಡಿದ ಪ್ರತೀ ಪ್ರೇಕ್ಷಕರೂ ಕೂಡ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ ಎಂಬಂಥಾ ಭರವಸೆಯೂ ಚಿತ್ರತಂಡದಲ್ಲಿದೆ. ಈ ಪಾತ್ರ ಸೇರಿದಂತೆ ಒಟ್ಟಾರೆ ಚಿತ್ರದ ಸ್ಪಷ್ಟ ಚಿತ್ರಣ ಈ ವಾರ ಸಿಗಲಿದೆ.

  • ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ಮರ್ಷಿಯಲ್ ಹಾದಿಯ ಸಿನಿಮಾಗಳ ಅಬ್ಬರದ ನಡುವೆಯೇ ಆಗಾಗ ನೆಲದ ಘಮಲಿನ ಸಿನಿಮಾಗಳೂ ಕೂಡಾ ತಯಾರಾಗುತ್ತಿರುತ್ತವೆ. ಇದರಲ್ಲಿನ ಕ್ರಿಯಾಶೀಲತೆ, ಹೊಸತನಗಳೇ ಗೆಲುವಿನ ಹಾದಿ ತೋರಿಸುತ್ತವೆ. ಕಂಟೆಂಟು ಗಟ್ಟಿಯಾಗಿದ್ದರೆ ಎಂಥಾ ದೊಡ್ಡ ಚಿತ್ರಗಳ ಎದುರಾದರೂ ಪೈಪೋಟಿ ಕೊಟ್ಟು ಗೆಲ್ಲೋ ಕಸುವನ್ನು ಈಗಾಗಲೇ ಕನ್ನಡದ ಪ್ರೇಕ್ಷಕರು ಕರುಣಿಸಿದ್ದಾರೆ. ಆ ಬಲದಿಂದಲೇ ಪ್ರಯೋಗಾತ್ಮಕವಾದ, ಹೊಸ ಜಾಡಿನ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ದಾಖಲಾಗುವಂತೆ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣುತ್ತಿದೆ.

    ಮನು ಕೆ ಶೆಟ್ಟಿಹಳ್ಳಿ ನಿರ್ದೆಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಸುರೇಶ್ ನಿರ್ಮಾಣ ಮಾಡಿದ್ದಾರೆ. ಕರ್ಣಕುಮಾರ್ ಮತ್ತು ಐಶ್ವರ್ಯಾ ರಾವ್ ಇದರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರುವವರು ಕರ್ಣ ಕುಮಾರ್. ಅವರು ರಣಹೇಡಿ ಮೂಲಕ ನಾಯಕ ನಟನಾಗಿಯೂ ಹೊರ ಹೊಮ್ಮಿದ್ದಾರೆ. ಈ ಹಿಂದೆ ರವಿ ಹಿಸ್ಟರಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ರಾವ್ ಇಲ್ಲಿಯೂ ನಾಯಕಿಯಾಗಿದ್ದಾರೆ. ಅವರದ್ದಿಲ್ಲಿ ಕೂಲಿಕಾರರ ಹೆಣ್ಣು ಮಗಳ ಡಿಗ್ಲಾಮ್ ಪಾತ್ರ. ಈ ದಿನಮಾನಕ್ಕೆ ತೀರಾ ಹೊಸತಾಗಿರೋ ಈ ಪಾತ್ರಕ್ಕಾಗಿ ಐಶ್ವರ್ಯಾ ಬಹಳಷ್ಟು ತಯಾರಿ ನಡೆಸಿಯೇ ನಟಿಸಿದ್ದಾರಂತೆ.

    ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಕಥೆ ಹೊಂದಿರುವ ಚಿತ್ರ. ದೇಶದ ಬೆನ್ನೆಲುಬು ಅಂತೆಲ್ಲ ಕರೆಸಿಕೊಳ್ಳುವ ರೈತಾಪಿ ವರ್ಗದ ಕಷ್ಟ ಕಾರ್ಪಣ್ಯದೊಂದಿಗೇ ಒಂದು ಸಮೃದ್ಧ ಸಂಸ್ಕೃತಿಗೆ ಕನ್ನಡಿಯಾಗುವಂಥಾ ಕಥೆ ಇಲ್ಲಿದೆ. ಮಂಡ್ಯ ಸೀಮೆಯ ಹಳ್ಳಿಗಾಡಿನಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಮನು ಕೆ. ಶೆಟ್ಟಿಹಳ್ಳಿ ತಾನು ಕಂಡ ನೈಜ ಬದುಕಿನ ಚಿತ್ರಣವನ್ನೇ ಇಲ್ಲಿ ಬಿಚ್ಚಿಟ್ಟಿದ್ದಾರಂತೆ. ಇದರೊಂದಿಗೆ ಹಳ್ಳಿ ಬದುಕಿನ ಆಚಾರ ವಿಚಾರ, ಪೇಟೆಯ ಥಳುಕಿಗೆ ಬಲಿಯಾಗಿ ತಣ್ಣಗೆ ಮೂಲೆಗುಂಪಾಗುತ್ತಿರೋ ಆಚರಣೆಗಳತ್ತಲೂ ಇಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಒಟ್ಟಾರೆಯಾಗಿ ರೈತರ ಬದುಕಿನ ಚಿತ್ರಣದೊಂದಿಗೆ ಹಳ್ಳಿ ಬದುಕಿನ ಚಿತ್ತಾರ ಮೂಡಿಸುವ ಅದ್ಭುತ ಕಥೆಯನ್ನು ರಣಹೇಡಿ ಒಳಗೊಂಡಿದೆ. ಅದೆಲ್ಲವೂ ಇದೇ ತಿಂಗಳ 29ರಂದು ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.

    https://www.youtube.com/watch?v=kXf1qX9ay9w

  • ಗ್ರಾಮೀಣ ಸೊಗಡಿನ ರಣಹೇಡಿ!

    ಗ್ರಾಮೀಣ ಸೊಗಡಿನ ರಣಹೇಡಿ!

    ಬೆಂಗಳೂರು: ಪಕ್ಕಾ ಕಮರ್ಶಿಯಲ್ ಜಾಡಿನ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಗ್ರಾಮೀಣ ಸೊಗಡಿನ ಸಿನಿಮಾಗಳೂ ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದರಲ್ಲಿಯೂ ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ ಆ ಭಾಗದ ಜನಜೀವನವನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಅಪರೂಪಕ್ಕಾದರೂ ನಿರ್ಮಾಣಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ತಯಾರಾಗಿ ಈಗ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ‘ರಣಹೇಡಿ’. ಒಂದಷ್ಟು ಕಾಲದಿಂದ ನಾನಾ ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ, ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿದೆ.

    ಮನು ಕೆ ಶೆಟ್ಟಿಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಇಲ್ಲಿ ಈ ಹಿಂದೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿರೋ ಕರ್ಣ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಹಿಸ್ಟರಿ, ಬಡ್ಡಿಮಗನ್ ಲೈಫು ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಐಶ್ವರ್ಯಾ ರಾವ್ ಇಲ್ಲಿ ಕೂಲಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಈ ಚಿತ್ರ ಮೂಡಿ ಬಂದಿದೆ.

    ಹೊಸತನದ ಕಥೆಗಳಿಗೇ ಪ್ರಧಾನವಾಗಿ ಪ್ರಾಶಸ್ತ್ಯ ಕೊಡುವ ಸುರೇಶ್ ಅವರು ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ನಂತರದಲ್ಲಿ ಗ್ರಾಮ್ಯ ಕಥನಕ್ಕೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕೇವಲ ಗ್ರಾಮೀಣ ಸೊಗಡಿನ ಕಥೆ ಮಾತ್ರವಲ್ಲ. ಇಲ್ಲಿ ರೈತರ ಸಮಸ್ಯೆಗಳತ್ತ ಬೆಳಕು ಹರಿಸಲಾಗಿದೆ. ನಿಜವಾಗಿಯೂ ಬೆಳೆಯನ್ನೇ ನಂಬಿ ಬದುಕೋ ರೈತ ಯಾವ್ಯಾವ ಸಮಸ್ಯೆಗಳನ್ನು ಎದುರಿಸಿ ನಲುಗುತ್ತಾನೆಂಬುದರ ಚಿತ್ರಣವೂ ಇಲ್ಲಿದೆಯಂತೆ. ಇದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿ ಹೇಳುತ್ತಲೇ ಮಜವಾದ ಹೂರಣವನ್ನು ಬಿಚ್ಚಿಡಲಿರೋ ಈ ಸಿನಿಮಾ ಇನ್ನು ವಾರದೊಪ್ಪತ್ತಿನಲ್ಲಿಯೇ ಚಿತ್ರಮಂದಿರ ತಲುಪಿಕೊಳ್ಳಲಿದೆ.

  • ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ಬೆಂಗಳೂರು: ಒಂದು ಹೊಸಾ ಬಗೆಯ ಚಿತ್ರ ಹಲವಾರು ಹೊಸಾ ಪ್ರತಿಭೆಗಳನ್ನೂ ಪರಿಚಯಿಸುತ್ತೆ. ಇದೇ ವಾರ ಬಿಡುಗಡೆಯಾಗುತ್ತಿರೋ ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಚಿತ್ರವೂ ಈ ಸಾಲಿನಲ್ಲಿ ಸೇರಿಕೊಳ್ಳುತ್ತೆ. ಈ ಸಿನಿಮಾದ ನಾಯಕಿಯಾಗಿ ನಟಿರುವ ಐಶ್ವರ್ಯಾ ರಾವ್ ಕೂಡಾ ಹೊಸಾ ಪ್ರತಿಭೆಯೇ. ಕಾಲೇಜು ದಿನಗಳಲ್ಲಿ ನೃತ್ಯದತ್ತ ಕದಲಿದ ಹೆಜ್ಜೆಗಳೇ ಐಶ್ವರ್ಯಾರನ್ನು ನಟಿಯಾಗಿ ರೂಪುಗೊಳ್ಳುವಂತೆ ಮಾಡಿದ್ದೊಂದು ಚೆಂದದ ಕಥೆ. ಅದನ್ನು ರವಿ ಹಿಸ್ಟರಿಯಲ್ಲಿನ ಪಾತ್ರವೇ ಮತ್ತಷ್ಟು ರೋಚಕವಾಗಿಸೋ ಭರವಸೆ ಐಶ್ವರ್ಯಾರದ್ದು.

    ಹೀಗೆ ರವಿಹಿಸ್ಟರಿಯ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಐಶ್ವರ್ಯಾ ಮೂಲವಿರೋದು ಉಡುಪಿಯಲ್ಲಿ. ಕನ್ನಡದ ಕವಯತ್ರಿ ಸುಜಾತಾ ಅವರ ಪುತ್ರಿಯಾದ ಐಶ್ವರ್ಯಾ ಬೆಳೆದದ್ದೆಲ್ಲ ಮೈಸೂರಿನಲ್ಲಿಯೇ. ಡಾಲಿ ಧನಂಜಯ್ ಥರದ ಪ್ರತಿಭೆಗಳು ಅರಳಿಕೊಂಡ ಸಂಸ್ಥೆಯಲ್ಲಿಯೇ ನಟನಾ ತರಬೇತಿಯನ್ನೂ ಪಡೆದುಕೊಂಡಿರೋ ಐಶ್ವರ್ಯಾ ಮೂಲತಃ ನೃತ್ಯಗಾರ್ತಿ. ಇವರ ಪಾಲಿಗೆ ರವಿ ಹಿಸ್ಟರಿಯ ನಾಯಕಿಯಾಗೋ ಅವಕಾಶ ಕೂಡಿ ಬಂದಿದ್ದೇ ಆಕಸ್ಮಿಕವಾಗಿ.

    ರವಿ ಹಿಸ್ಟರಿ ಚಿತ್ರಕ್ಕೆ ಐಶ್ವರ್ಯಾ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದರು. ಚಿತ್ರೀಕರಣಕ್ಕೂ ಮುಂಚೆ ವರ್ಕ್ ಶಾಪ್ ಗೆ ಹಾಜರಾಗಿ ಅಲ್ಲಿ ಸಂಪೂರ್ಣ ತರಬೇತಿಯನ್ನೂ ಕೂಡಾ ಐಶ್ವರ್ಯಾ ಪಡೆದುಕೊಂಡಿದ್ದರು. ನಿರ್ದೇಶಕರು ಸೇರಿದಂತೆ ಎಲ್ಲರೂ ಪ್ರತೀ ಹಂತದಲ್ಲಿಯೂ ಆತ್ಮೀಯವಾಗಿಯೇ ತಿದ್ದುತ್ತಾ ಈ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಹಕರಿಸಿದರೆಂಬ ಧನ್ಯತಾಭಾವ ಐಶ್ವರ್ಯಾಗಿದೆ.

    ಈ ಚಿತ್ರದಲ್ಲಿ ಐಶ್ವರ್ಯಾರದ್ದು ಕಾಲೇಜು ಹುಡುಗಿಯ ಪಾತ್ರ. ಇಂಜಿನಿಯರಿಂಗ್ ಓದುತ್ತಿರೋ ಹುಡುಗಿಯಾಗಿ ಅವರು ನಟಿಸಿದ್ದಾರೆ. ಪಕ್ಕಾ ಬೋಲ್ಡ್ ಶೇಡಿನ ಈ ಪಾತ್ರ ಯಾವುದೇ ಸನ್ನಿವೇಶಕ್ಕಾದರೂ ಹಿಂದೆ ಮುಂದೆ ನೋಡದೇ ರಿಯಾಕ್ಟ್ ಮಾಡುತ್ತೆ. ಎಂಥಾ ಸಂದರ್ಭವಿದ್ದರೂ ಮುನ್ನುಗ್ಗುತ್ತೆ. ಅಂಥಾದ್ದೊಂದು ಪಾತ್ರವನ್ನು ಎಂಜಾಯ್ ಮಾಡುತ್ತಲೇ ನಿಭಾಯಿಸಿರುವ ಐಶ್ವರ್ಯಾ ಈ ಮೂಲಕ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.

    ಸಾಮಾನ್ಯವಾಗಿ ಯಾರೇ ಹೆಣ್ಣುಮಕ್ಕಳು ನಟಿಯಾಗ ಬೇಕೆಂಬ ಆಸೆಯಿಟ್ಟುಕೊಂಡರೆ ಮೊದಲು ವಿರೋಧ ವ್ಯಕ್ತವಾಗೋದೇ ಮನೆ ಮಂದಿಯಿಂದ. ಆದರೆ ಈ ವಿಚಾರದಲ್ಲಿ ಐಶ್ವರ್ಯಾ ಅದೃಷ್ಟವಂತೆ. ಯಾಕೆಂದರೆ ಬಾಲ್ಯದಿಂದಲೂ ಮಗಳಿಗೆ ಅಪ್ಪಟ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದವರು ಅವರಮ್ಮ ಸುಜಾತ. ಸ್ವತಃ ಕವಯತ್ರಿ, ಕಥೆಗಾರ್ತಿಯೂ ಆಗಿರುವ ಸುಜಾತಾ ಅವರು ಚೌಕಟ್ಟುಗಳಾಚೆಗೆ ಆಲೋಚಿಸುತ್ತಾ ಬದುಕುವ ಕ್ರಮವನ್ನು ಮಗಳಿಗೂ ಕಲಿಸಿದ್ದರು. ಸ್ವತಃ ನಟಿಯಾಗಬೇಕೆಂದು ಆಸೆ ಹೊಂದಿದ್ದ ಸುಜಾತಾರಿಗೆ ಕೆಲ ಕಟ್ಟುಪಾಡುಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಮಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಿಂದಲೇ ಐಶ್ವರ್ಯಾರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

    ಅಮ್ಮನ ಇಂಥಾ ಪ್ರೋತ್ಸಾಹದಿಂದಲೇ ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಶ್ವರ್ಯಾ ನೃತ್ಯಪಟುವಾಗಿ ಹೊರಹೊಮ್ಮಿದ್ದರು. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯ ಪ್ರಾಕಾರಗಳಲ್ಲಿ ಪಾರಂಗತೆಯಾಗಿರುವ ಐಶ್ವರ್ಯಾ ಇದುವರೆಗೂ ಐವತ್ತಕ್ಕೂ ಹೆಚ್ಚು ಯಶಸ್ವೀ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಐಶ್ವರ್ಯಾ ನೃತ್ಯ ಪ್ರದರ್ಶನವೊಂದನ್ನು ನೋಡಿದವರೊಬ್ಬರು ಸಿನಿಮಾ ಆಫರ್ ಕೊಟ್ಟಿದ್ದರಂತೆ. ಐಶ್ವರ್ಯಾ ಮನೇಲಿ ಬಂದು ಮಾತಾಡಿ ಅಂದಾಗ ಅಮ್ಮ ಸುಜಾತಾರಿಗೂ ಕಥೆ ಹೇಳಿದ್ದರಂತೆ. ಆ ಮೂಲಕವೇ ಐಶ್ವರ್ಯಾ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ರವಿ ಹಿಸ್ಟರಿಗಿಂತಲೂ ಮೊದಲೇ ಅವರು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಣಹೇಡಿ, ಬಡ್ಡಿ ಮಗಂದ್ ಲೈಫು, ಮೈಸೂರ್ ಡೈರೀಸ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಾಯಕಿಯಾಗಿದ್ದಾರೆ.

    ಆದರೆ ರವಿ ಹಿಸ್ಟರಿಯೇ ಅವರ ಮೊದಲ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ. ರಣಹೇಡಿ ಮುಂತಾದ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರೋ ಐಶ್ವರ್ಯಾಗೆ ಅಂಥಾ ಪಾತ್ರಗಳ ಮೂಲಕವೇ ಜನರ ಮನಸು ಗೆಲ್ಲೋ ಆಸೆ. ಈಗಾಗಲೇ ಅವರ ಮುಂದೆ ಸಾಲು ಸಾಲು ಅವಕಾಶಗಳಿವೆ. ಅದೆಲ್ಲವನ್ನೂ ಎಚ್ಚರದಿಂದಲೇ ಪರಾಮರ್ಶಿಸಿ ಒಪ್ಪಿಕೊಳ್ಳುತ್ತಿರೋ ಐಶ್ವರ್ಯಾ ಕನ್ನಡ ಚಿತ್ರರಂಗದ ಐಶ್ವರ್ಯದಂಥಾ ನಟಿಯಾಗೋ ಲಕ್ಷಣಗಳೇ ಹೆಚ್ಚಾಗಿವೆ.