Tag: ರಘುರಾಮ್

  • ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

    ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

    ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

    ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

    ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

    ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

    ರೇಟಿಂಗ್: 4/5

  • ಮಿಸ್ಸಿಂಗ್ ಬಾಯ್: ಕಂಟಕದಿಂದ ಪಾರುಮಾಡಿದ್ದು ಶಿವಣ್ಣನ ಪ್ರೀತಿ!

    ಮಿಸ್ಸಿಂಗ್ ಬಾಯ್: ಕಂಟಕದಿಂದ ಪಾರುಮಾಡಿದ್ದು ಶಿವಣ್ಣನ ಪ್ರೀತಿ!

    ಬೆಂಗಳೂರು: ಸೂಕ್ಷ್ಮ ಕಥಾ ಹಂದರಗಳಿಗೆ ಪರಿಣಾಮಕಾರಿಯಾಗಿ ದೃಶ್ಯ ಕಟ್ಟುವಲ್ಲಿ ಮಾಸ್ಟರ್ ಅನ್ನಿಸಿಕೊಂಡಿರುವವರು ನಿರ್ದೇಶಕ ರಘುರಾಮ್. ಅವರು ಅಂಥಾದ್ದೇ ಶ್ರದ್ಧೆಯಿಂದ ರೂಪಿಸಿರುವ ಮಿಸ್ಸಿಂಗ್ ಬಾಯ್ ಚಿತ್ರ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಅವರು ಅದೆಷ್ಟೇ ಪ್ರೀತಿಯಿಂದ ಮಿಸ್ಸಿಂಗ್ ಬಾಯ್ ಚಿತ್ರವನ್ನು ರೂಪಿಸಿದ್ದರೂ ಬಿಡುಗಡೆಯ ವಿಚಾರದಲ್ಲಿ ಗ್ರಹಣ ಕವಿದುಕೊಂಡಿತ್ತು. ಹೀಗೇ ಮುಂದುವರಿದಿದ್ದರೆ ಅದೇನೇನಾಗುತ್ತಿತ್ತೋ ಗೊತ್ತಿಲ್ಲ. ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಕಾಲಕ್ಕೆ ಎಂಟ್ರಿ ಕೊಟ್ಟು ಕವಿದಿದ್ದ ಗ್ರಹಣ ಕಳೆಯುವಂತೆ ಮಾಡಿದ್ದಾರೆ. ಈವತ್ತಿಗೆ ರಘುರಾಮ್ ಮುಖದಲ್ಲಿ ಖುಷಿ ಇದೆಯೆಂದರೆ ಅದಕ್ಕೆ ಶಿವಣ್ಣನ ಅಕಾರಣ ಕಾಳಜಿಯೇ ಕಾರಣ!

    ನಿರ್ಮಾಪಕರ ಕಡೆಯಿಂದ ಎರಡು ವರ್ಷಗಳ ಕಾಲ ಮಿಸ್ಸಿಂಗ್ ಬಾಯ್ ಬಿಡುಗಡೆ ಡಿಲೇ ಆಗುತ್ತಿರುವ ವಿಚಾರ ತಿಳಿದ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಮುತುವರ್ಜಿ ವಹಿಸಿ ಸಹೋದರ ಪುನೀತ್ ಗೆ ಹೇಳಿದ್ದರಂತೆ. ಪುನೀತ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕುಮಾರ್ ಅವರ ಬಳಿ ಚರ್ಚಿಸಿ ಹೊಂಬಾಳೆ ಫಿಲಂಸ್ ನ ಕಾರ್ತಿಕ್ ಗೌಡರ ಕಡೆಯಿಂದ ಈ ಚಿತ್ರ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ.

    ಮಿಸ್ಸಿಂಗ್ ಬಾಯ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಾ ಬಂದಿದ್ದಕ್ಕೆ ಕಾರಣ ನಿರ್ಮಾಪಕರ ಆರ್ಥಿಕ ಬಾಧೆ. ಅದೆಷ್ಟೋ ಕಾಲದಿಂದ ತಡೆದುಕೊಂಡು ಕಾದಿದ್ದ ರಘುರಾಮ್ ಪಾಲಿಗೆ ಕಡೆಗೆ ಯಾವ ಭರವಸೆಯೂ ಉಳಿದಿರಲಿಲ್ಲ. ಪ್ರೀತಿಯಿಂದ ಮಾಡಿದ ಚಿತ್ರ ಉಸಿರು ನಿಲ್ಲುತ್ತದೆ ಎಂಬ ಆಘಾತದಲ್ಲಿದ್ದರು. ಆದರೆ ಈ ವಿಚಾರವನ್ನು ಹೇಗೋ ತಿಳಿದುಕೊಂಡಿದ್ದ ಶಿವಣ್ಣ ಮಿಸ್ಸಿಂಗ್ ಬಾಯ್ ಗೆ ಬಿಡುಗಡೆಯ ಭಾಗ್ಯ ಕರುಣಿಸಿದ್ದಾರೆ. ಆ ಬಲದಿಂದಲೇ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿದೆ.

  • ಹುಬ್ಬಳ್ಳಿಯ ಮಿಸ್ಸಿಂಗ್ ಬಾಯ್ ಸ್ಪೀಡನ್ನಿನ ನಂಟು!

    ಹುಬ್ಬಳ್ಳಿಯ ಮಿಸ್ಸಿಂಗ್ ಬಾಯ್ ಸ್ಪೀಡನ್ನಿನ ನಂಟು!

    ಬೆಂಗಳೂರು: ಮನಮಿಡಿಯುವ ಸತ್ಯ ಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಚಿತ್ರ ನಿರ್ದೇಶಕ ರಘು ರಾಮ್ ಅವರ ಕನಸಿನ ಕೂಸು ಎಂಬುದು ಗೊತ್ತೇ ಇದೆ. ಆದ್ರೆ ಇದು ಕರ್ನಾಟಕದ ಯಾವ ಮೂಲೆಯಲ್ಲಿ ನಡೆದಿರೋ ಕಥೆ. ನಿಜಕ್ಕೂ ಇದು ಸತ್ಯ ಕಥೆಯಾ ಎಂಬೆಲ್ಲ ಗೊಂದಲಗಳು ಹಲವರಲ್ಲಿದೆ!

    ಈ ಬಗ್ಗೆ ಒಂದಷ್ಟು ಸುಳಿವುಗಳನ್ನು ನಿರ್ದೇಶಕರೇ ಬಿಟ್ಟು ಕೊಟ್ಟಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಿರೋ ರಿಯಲ್ ಕಥೆಯಲ್ಲಿ ಹುಡುಗ ಮಿಸ್ ಆಗೋದು ಹುಬ್ಬಳ್ಳಿಯಿಂದ. ರಘುರಾಮ್ ಚಿತ್ರವನ್ನೂ ಕೂಡಾ ಅಲ್ಲಿಂದಲೇ ಆರಂಭಿಸಿದ್ದಾರೆ. ಹುಬ್ಬಳ್ಳಿಯ ಸುಂದರ ಲೊಕೇಷನ್ನುಗಳನ್ನೂ ಕೂಡಾ ಸೆರೆ ಹಿಡಿದಿದ್ದಾರೆ.

    ಅಚ್ಚರಿ ಅಂದರೆ, ನಮ್ಮ ಕರ್ನಾಟಕದ ಹುಬ್ಬಳ್ಳಿಗೂ ದೂರದ ದೇಶ ಸ್ವೀಡನ್ನಿಗೂ ನೇರಾ ನೇರ ಲಿಂಕಿದೆ. ಹುಬ್ಬಳ್ಳಿಯಿಂದ ಮಿಸ್ ಆದ ಆ ಪುಟ್ಟ ಹುಡುಗ ಸ್ವೀಡನ್ ದೇಶಕ್ಕೆ ಅದು ಹೇಗೆ ಹೋಗುತ್ತಾನೆ? ತನ್ನ ಹೆತ್ತವರು ಮತ್ತು ಊರ ನೆನಪನ್ನು ಎದೆಯೊಳಗಿಟ್ಟುಕೊಂಡು ಅದು ಹೇಗೆ ವಾಪಾಸಾಗ್ತಾನೆ? ಅಷ್ಟಕ್ಕೂ ಕಡೆಗೂ ಆತನಿಗೆ ಹೆತ್ತವರು ಸಿಕ್ತಾರಾ? ಇಂಥಾ ಕ್ಯೂರಿಯಾಸಿಟಿಗಳಿಗೆಲ್ಲ ಸದ್ಯದಲ್ಲೇ ಉತ್ತರ ಸಿಗಲಿದೆ.

    ಅಂತೂ ಮಾಮೂಲಿ ಚಿತ್ರಗಳಲ್ಲಿ ಸಿಗದಂಥಾ ಭಾವ ತೀವ್ರತೆ, ಪ್ರತೀ ಫ್ರೇಮಿನಲ್ಲಿಯೂ ಕಾಡುವಂಥಾ ಗುಣಗಳೊಂದಿಗೆ ಈ ಚಿತ್ರ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಳ್ಳೋದಂತೂ ಗ್ಯಾರಂಟಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ‘ಮಿಸ್ಸಿಂಗ್ ಬಾಯ್’ ಜೋಡಿಯಾದವಳು ಮಲೆಯಾಳಿ ಕನ್ಯೆ!

    ಬೆಂಗಳೂರು: ರಘುರಾಮ್ ಯಾವ ಚಿತ್ರ ಮಾಡಿದರೂ ಪ್ರತೀ ಪಾತ್ರವನ್ನೂ ಕಾಡುವಂತೆ, ಸದಾ ನೆನಪಿಟ್ಟುಕೊಳ್ಳುವಂತೆ ರೂಪಿಸುತ್ತಾರೆ. ಅವರೊಂದು ಚಿತ್ರ ಮಾಡುತ್ತಾರೆಂದಾಕ್ಷಣವೇ ಜನ ಕಾತರಗೊಳ್ಳುವುದೂ ಈ ಕಾರಣದಿಂದಲೇ. ಹಾಗಿದ್ದ ಮೇಲೆ ಈ ಸಿನಿಮಾದ ಕೇಂದ್ರ ಬಿಂದುವಿನಂತಿರೋ ನಾಯಕಿಯ ಪಾತ್ರವನ್ನೂ ಅವರು ಅಷ್ಟೇ ಆಸ್ಥೆಯಿಂದ ರೂಪಿಸಿರುತ್ತಾರೆ. ಇದಕ್ಕಾಗಿ ಭಾರೀ ಹುಡುಕಾಟ ನಡೆಸಿ ಕಡೆಗೂ ಮಲೆಯಾಳಿ ಬೆಡಗಿ, ಮಾಡೆಲ್ ಅರ್ಚನಾ ಜಯಕೃಷ್ಣನ್ ಅವರನ್ನು ಕರೆ ತಂದಿದ್ದಾರೆ!

    ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕೇರಳ ಹುಡುಗಿಯ ಆಗಮನವಾದಂತಿದೆ. ಭಾವನಾ ಮೆನನ್, ನಿತ್ಯಾ ಮೆನನ್, ಪಾರ್ವತಿ, ಮೀರಾ ಜಾಸ್ಮಿನ್, ರಮ್ಯಾ ನಂಬೀಶನ್… ಹೀಗೆ ಕನ್ನಡದಲ್ಲಿ ಮಿಂಚಿರೋ ಮಲೆಯಾಳಿ ಹುಡುಗೀರ ಪಟ್ಟಿ ದೊಡ್ಡದಿದೆ. ಇದೀಗ ಆ ಸಾಲಿಗೆ ಅರ್ಚನಾ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ಅರ್ಚನಾ ಮೂಲತಃ ಮಾಡೆಲ್. ಇದರೊಂದಿಗೇ ಒಂದಷ್ಟು ಮಲೆಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದ ಅವರು ಸದ್ಯಕ್ಕೆ ಬೆಂಗಳೂರಿನಲ್ಲಿಯೇ ನೆಲೆ ನಿಂತಿದ್ದಾರೆ. ಮಾಡೆಲಿಂಗನ್ನು ಪ್ರಧಾನವಾಗಿ ಪರಿಗಣಿಸಿದ್ದಾರೆ. ಇಂಥಾ ಅರ್ಚನಾ ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕರಿಗೆ ಪರಿಚಿತೆಯಾಗಿದ್ದವರು. ಆ ಕಾರಣದಿಂದಲೇ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಮಿಸ್ಸಿಂಗ್ ಬಾಯ್ ಮೂಲಕ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ನೆಲೆ ನಿಲ್ಲೋ ಸೂಚನೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎಳೇ ಜೀವದ ಬೆರಳ ಮೊನೆ ಎದೆಗೆ ತಾಕಿಸೋ ಮಿಸ್ಸಿಂಗ್ ಬಾಯ್ ಟ್ರೈಲರ್!

    ಎಳೇ ಜೀವದ ಬೆರಳ ಮೊನೆ ಎದೆಗೆ ತಾಕಿಸೋ ಮಿಸ್ಸಿಂಗ್ ಬಾಯ್ ಟ್ರೈಲರ್!

    ಬೆಂಗಳೂರು: ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಈ ಸಿನಿಮಾ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿತ್ತು. ಕೊಂಚ ತಡವಾದರೂ ಕೂಡಾ ಇದರೆಡೆಗಿನ ಕುತೂಹಲ ಮಾತ್ರ ಸಡಿಲವಾಗಿರಲಿಲ್ಲ. ಅದಕ್ಕೆ ಕಾರಣವಾಗಿರೋದು ಇದಕ್ಕೆ ಆರಿಸಿಕೊಂಡಿರೋ ಮನಮಿಡಿಯುವ ಸತ್ಯಕಥೆ!

    ನಿರ್ದೇಶಕ ರಘುರಾಮ್ ತಮ್ಮ ಕೂಸೆಂದುಕೊಂಡು ಶ್ರದ್ಧೆಯಿಂದ ನಿರ್ದೇಶನ ಮಾಡಿರೋ ಚಿತ್ರ ಮಿಸ್ಸಿಂಗ್ ಬಾಯ್. ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಶ್ರದ್ಧೆ ಮತ್ತು ಇಡೀ ಚಿತ್ರದ ಆದ್ರ್ರತೆ ಎಂಥಾದ್ದೆಂಬುದಕ್ಕೆ ಸಾಕ್ಷಿಯಂತಿದೆ. ಬುದ್ಧಿ ಬಲಿಯುವ ಮುನ್ನವೇ ಕೈ ಬಿಡಿಸಿಕೊಂಡು ಎಲ್ಲಿಯೋ ಕಳೆದು ಹೋದ ಮಗ. ಆತ ಬಂದೇ ಬರುತ್ತಾನೆಂಬ ನಂಬಿಕೆಯನ್ನೇ ಉಸಿರಾಗಿಸಿಕೊಂಡ ಹೆತ್ತವರು. ಆದರೆ ಈ ಜೀವಗಳನ್ನು ಬೆಸೆಯೋ ದಾರಿ ಮಾತ್ರ ಕಲ್ಪಿಸಿಕೊಳ್ಳಲೂ ಕಷ್ಟವಾಗುವಷ್ಟು ದೂರ.

    ಇಂಥಾದ್ದೊಂದು ಸ್ಥಿಯಲ್ಲಿರುವವರ ಕರುಳ ಮರ್ಮರ ಎಂಥಾದ್ದಿರುತ್ತದೆಂಬುದನ್ನು ಈ ಟ್ರೈಲರ್ ಪರಿಣಾಮಕಾರಿಯಾಗಿಯೇ ಅನಾವರಣಗೊಳಿಸಿದೆ. ಈ ಮೂಲಕ ಮಿಸ್ಸಿಂಗ್ ಬಾಯ್ ಚಿತ್ರದ ಒಟ್ಟಾರೆ ಆಂತರ್ಯ ಎಂಥಾದ್ದೆಂಬುದರ ಝಲಕ್ ಅನ್ನು ರಘುರಾಮ್ ನೀಡಿದ್ದಾರೆ. ಈ ಟ್ರೈಲರ್ ಮೂಲಕವೇ ಮಿಸ್ಸಿಂಗ್ ಬಾಯ್ ಪ್ರತೀ ಪ್ರೇಕ್ಷಕರಿಗೂ ಮತ್ತಷ್ಟು ಆಪ್ತವಾಗೋದು ಗ್ಯಾರಂಟಿ.

    ಈ ಟ್ರೈಲರ್ ಮೂಲಕವೇ ರಘುರಾಮ್ ತಮ್ಮ ಇಷ್ಟು ವರ್ಷಗಳ ಶ್ರಮವನ್ನ ಸಾರ್ಥಕವಾಗಿಸಿಕೊಂಡಿದ್ದಾರೆ. ಯಾಕೆಂದರೆ ಇದನ್ನು ನೋಡಿದ ಯಾರೇ ಆದರೂ ಒಂದರೆ ಕ್ಷಣ ಭಾವುಕರಾಗದಿರಲು ಸಾಧ್ಯವೇ ಇಲ್ಲ. ಅದೆಷ್ಟೋ ವರ್ಷಗಳ ಹಿಂದೆ ಹೆತ್ತವರ ಕೈ ಬಿಡಿಸಿಕೊಂಡು ಕಾಣೆಯಾದ ಎಳೇ ಹುಡುಗನ ಬೆರಳ ಮೊನೆ ಎದೆಗೇ ತಾಕಿದಂಥಾ ತಲ್ಲಣದಿಂದ ಕಂಪಿಸದಿರಲೂ ಸಾಧ್ಯವಿಲ್ಲ. ಒಂದು ಟ್ರೈಲರ್ ಪರಿಣಾಮಕಾರಿಯಾಗಲು ಇದಕ್ಕಿಂತಲೂ ಬೇರೇನೂ ಬೇಕಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದಿನ ತಿಂಗಳು ತೆರೆ ಕಾಣಲಿದ್ದಾನೆ ಮಿಸ್ಸಿಂಗ್ ಬಾಯ್!

    ಮುಂದಿನ ತಿಂಗಳು ತೆರೆ ಕಾಣಲಿದ್ದಾನೆ ಮಿಸ್ಸಿಂಗ್ ಬಾಯ್!

    ಬೆಂಗಳೂರು: ತೊಂಭತ್ತರ ದಶಕದಲ್ಲಿ ನಡೆದಿದ್ದ ಮನಮಿಡಿಯುವ ಸತ್ಯಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಸಿನಿಮಾವನ್ನು ರಘುರಾಮ್ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕಾತರದಿಂದ ಕಾಯುತ್ತಿರೋ ಮಿಸ್ಸಿಂಗ್ ಬಾಯ್ ಬಿಡುಗಡೆಯ ದಿನಾಂಕವೀಗ ಪಕ್ಕಾ ಡಿಫರೆಂಟಾಗಿಯೇ ಜಾಹೀರಾಗಿದೆ.

    ಮಿಸ್ಸಿಂಗ್ ಬಾಯ್ ಚಿತ್ರೀಕರಣ ಶುರುವಾದಂದಿನಿಂದಲೂ ಅದನ್ನು ಪ್ರೇಕ್ಷಕರ ಕುತೂಹಲದ ಕೇಂದ್ರದಿಂದ ಕದಲದಿರುವಂತೆ ನೋಡಿಕೊಂಡು ಬಂದವರು ರಘುರಾಮ್. ಇದೀಗ ಅವರು ಸಿದ್ಧಸೂತ್ರಗಳನ್ನು ಮೀರಿಕೊಂಡು ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಜಾಹೀರು ಮಾಡಿದ್ದಾರೆ.

    ಪ್ರೆಸ್ ಮೀಟ್ ಮಾಡಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಮಾಮೂಲಿ. ಆದರೆ ರಘುರಾಮ್ ಅವರು ಕರ್ನಾಟಕವೂ ಸೇರಿದಂತೆ ವಿದೇಶಗಳಲ್ಲಿಯೂ ಇರುವ ಶ್ರೀಸಾಮಾನ್ಯರಿಂದಲೇ ಮಿಸ್ಸಿಂಗ್ ಬಾಯ್ ಬಿಡುಗಡೆ ದಿನಾಂಕ ಘೋಷಿಸಿರುವ ವೀಡಿಯೋವೊಂದನ್ನು ಅನಾವರಣಗೊಳಿಸಿದ್ದಾರೆ.

    ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ, ದುಬೈ, ಜರ್ಮನಿ ಮುಂತಾದ ಪ್ರದೇಶಗಳಿಂಣದ ಮಾತಾಡಿರೋ ಜನಸಾಮಾನ್ಯರು ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿ ಬಿಡುಗಡೆ ದಿನಾಂಕ ಅನಾವರಣಗೊಳಿಸಿದ್ದಾರೆ. ಈ ಕೆಲಸ ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ತೀರಾ ಹೊಸತಾಗಿದೆ.

    ಜನಸಾಮಾನ್ಯರೇ ಘೋಷಣೆ ಮಾಡಿರೋ ಪ್ರಕಾರ ಹೇಳೋದಾದರೆ ಇದೇ ಮಾರ್ಚ್ 22ರಂದು ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ತೆರೆ ಕಾಣಲಿದೆ. ಮನ ಮಿಡಿಯುವ ಸತ್ಯ ಘಟನೆಯಾಧಾರಿತವಾದ ಈ ಚಿತ್ರ ನೋಡಲು ಎಲ್ಲ ವರ್ಗದ ಪ್ರೇಕ್ಷಕರೂ ಕಾತರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv