Tag: ರಕ್ಷಣಾ ಸಚಿವೆ

  • ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ಚೀನಾ ಸೈನಿಕರಿಗೆ ನಮಸ್ಕಾರದ ಅರ್ಥ ತಿಳಿಸಿದ ನಿರ್ಮಲಾ ಸೀತಾರಾಮನ್

    ನವದೆಹಲಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗಡಿ ಪ್ರದೇಶದಲ್ಲಿ ಚೀನಿ ಸೈನಿಕರಿಗೆ ಭಾರತೀಯ ನಮಸ್ಕಾರದ ಅರ್ಥವನ್ನು ತಿಳಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಭಾರತ ಮತ್ತು ಚೀನಾ ಗಡಿ ಪ್ರದೇಶದ ನಾಥುಲಾ ದಲ್ಲಿ ಭಾನುವಾರ ಇಂಡೋ-ಟಿಬೆಟಿಯನ್ ಸೈನಿಕರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವರು ತಮ್ಮ ಭೇಟಿಯ ಕುರಿತು ಟ್ವಿಟ್ಟರ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ನಂತರ ಸೇನಾ ಅಧಿಕಾರಿಗಳೊಂದಿಗೆ ತೆರಳಿ ಚೀನಾ ಸೈನಿಕರನ್ನು ಭೇಟಿ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ರಕ್ಷಣಾ ಸಚಿವರು ಚೀನಿ ಸೈನಿಕರೊಂದಿಗೆ ಮಾತುಕತೆ ನಡೆಸಿದ್ದು, ಆ ವೇಳೆ ಭಾರತೀಯ ನಮಸ್ಕಾರದ ಮಹತ್ವವನ್ನು ತಿಳಿ ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತಃ ರಕ್ಷಣಾ ಸಚಿವರೇ ಟ್ವೀಟ್ ಮಾಡಿದ್ದಾರೆ. ಲಾಥುಲಾ ಗಡಿಯನ್ನು ಭೇಟಿ ಮಾಡಿದ ವೇಳೆ ಚೀನಿ ಸೈನಿಕರು ಸತತವಾಗಿ ತನ್ನ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಇಂಡೋ-ಚೀನಾ ಗಡಿಯಲ್ಲಿ ಕೈಗೊಂಡಿರುವ ರಕ್ಷಣಾ ಕಾರ್ಯಗಳನ್ನು ವೀಕ್ಷಿಸಲು ಸಚಿವೆ ಸೀತಾರಾಮನ್ ತೆರಳಿದ್ದರು. ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೈನಿಕರನ್ನು ಹಿಂಪಡೆದಿಲ್ಲ ಎಂಬ ಸಂಗತಿಯನ್ನು ಭಾರತೀಯ ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಗಡಿ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಈ ಹಿಂದೆ ಡೋಕ್ಲಾಂ ಗಡಿ ಪ್ರದೇಶದಲ್ಲಿ ಚೀನಾ ನಿರ್ಮಿಸಿಸುತ್ತಿದ್ದ ರಸ್ತೆಯ ವಿರೋಧಿಸಿ ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗೆ ಸಂಘರ್ಷ ಉಂಟಾಗಿತ್ತು. ಈ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ ಚೀನಾ ಮತ್ತೆ ರಸ್ತೆಯನ್ನು ನಿರ್ಮಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಹಾಗಿದ್ದರೂ ಡೋಕ್ಲಾಂ ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

  • ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

    ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

    ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಇಲ್ಲಿಯವರೆಗೆ ವಾಣಿಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ದೇಶದ ರಕ್ಷಣಾ ಸಚಿವೆಯಾಗಿ ನೇಮಕಗೊಂಡಿದ್ದಾರೆ.

    58 ವರ್ಷದ ನಿರ್ಮಲಾ ಸೀತಾರಾಮನ್ ಅವರು ಆಯ್ಕೆಯಾಗುವ ಮೂಲಕ ಪೂರ್ಣಾವಧಿಯಾಗಿ ರಕ್ಷಣಾ ಖಾತೆಯನ್ನು ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ರಕ್ಷಣೆಯ ಹೊಣೆ ಹೊತ್ತಿದ್ದರು. ಪ್ರಧಾನಿ ಹುದ್ದೆಯೊಂದಿಗೆ ಜೊತೆ 1982 ರವರೆಗೂ ಈ ಖಾತೆಯನ್ನು ನಿರ್ವಹಣೆ ಮಾಡಿದ್ದರು.

    ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

    ವಾಣಿಜ್ಯ ಖಾತೆಯನ್ನು ನಿಭಾಯಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದರು.

    ಅಧಿಕಾರಕ್ಕೆ ಏರಿದ ಮೋದಿ ಸರ್ಕಾರದಲ್ಲಿ ಆರಂಭದ ದಿನಗಳಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಕ್ಷಣೆಯ ಹೊಣೆ ಹೊತ್ತಿದ್ದರು. ಇದಾದ ಬಳಿಕ ಮನೋಹರ್ ಪರಿಕ್ಕರ್ ಈ ಖಾತೆ ಒಲಿದಿತ್ತು. ಗೋವಾ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಖಾತೆಗೆ 2017ರ ಮಾರ್ಚ್ ನಲ್ಲಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈ ಖಾತೆಯನ್ನು ಮತ್ತೆ ಅರುಣ್ ಜೇಟ್ಲಿ ನೋಡಿಕೊಳ್ಳುತ್ತಿದ್ದರು.

    ರೈಲ್ವೇ ಸಚಿವಾಲಯನ್ನು ನೋಡಿಕೊಳ್ಳುತ್ತಿದ್ದ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಖಾತೆಯನ್ನು ನೀಡಲಾಗಿದೆ.

    `ಇಂದು ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಂಪುಟ ಪುನಾರಚನೆಯಾಗಿದ್ದು ಹೊಸ ಖಾತೆ ಹೆಗಲಿಗೇರಿಸಿಕೊಂಡ ಎಲ್ಲಾ ಸಚಿವರುಗಳಿಗೂ ಅಭಿನಂದನೆಗಳು. ಅವರ ಅನುಭವ ಮಂತ್ರಿ ಮಂಡಲದ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತರಾಮನ್, ಮುಕ್ತಲ್ ಅಬ್ಬಾಸ್ ನಖ್ವಿ ಹಾಗೂ ಪಿಯೂಷ್ ಗೋಯಲ್ ಅವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಭಿನಂದನೆಯನ್ನು ಸಲ್ಲಿಸಿದ್ದಾರೆ.