Tag: ಯಾರ್ಕರ್

  • ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಅಬುಧಾಬಿ: ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದ ಸನ್‍ರೈಸರ್ಸ್ ಆಟಗಾರ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 29 ವರ್ಷದ ಎಡಗೈ ವೇಗಿ ಟಿ.ನಟರಾಜನ್ ಪತ್ನಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಯಾರ್ಕರ್ ಎಸೆತದ ಮೂಲಕ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ನಟರಾಜನ್ ಪಂದ್ಯಕ್ಕೆ ತಿರುವು ನೀಡಿದ್ದರು. ಬೆಂಗಳೂರು ಪರ ಏಕಾಂಗಿ ಹೋರಾಟ ಮಾಡುತ್ತಿದ್ದ ಎಬಿಡಿ ಔಟಾಗುತ್ತಿದಂತೆ ಭಾರೀ ಸ್ಕೋರ್ ಗಳಿಸಿರುವ ಅವಕಾಶವನ್ನು ತಂಡ ಕಳೆದುಕೊಂಡಿತ್ತು.

    ಪಂದ್ಯದ ಬಳಿಕ ಮಾತನಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ನಟರಾಜನ್ ಹಾಗೂ ಅವರ ಪತ್ನಿಗೆ ಶುಭಾಶಯ ಕೋರಿದ್ದರು. ನಟರಾಜನ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟರಾಜನ್ ಮಗು ಜನಿಸಿದ ಸಂತಸದಲ್ಲಿದ್ದಾರೆ. ಅವರಿಗೆ ಫೈನಲ್ ಪಂದ್ಯಕ್ಕೂ ಮುನ್ನ ವಿಶೇಷ ಗಿಫ್ಟ್ ಲಭಿಸಿದೆ ಎಂದು ವಾರ್ನರ್ ತಿಳಿಸಿದ್ದರು.

    ತಮಿಳುನಾಡಿನ ಚೆನ್ನೈನಿಂದ ಸುಮಾರು 340 ಕಿಮೀ ದೂರದ ಸೇಲಂ ಜಿಲ್ಲೆಯ ಸಣ್ಣ ಹಳ್ಳಿ ಚೆನ್ನಪ್ಪಂಪಟ್ಟಿ ಗ್ರಾಮದವರು. ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಅಲ್ಲಿಯೇ ತಮ್ಮ ಬೌಲಿಂಗ್ ಕೌಶಲ್ಯಗಳನ್ನು ಮೆರೆಗುಗೊಳಿಸಿದ್ದರು. ಉಳಿದಂತೆ ನಟರಾಜನ್ ತಾಯಿ ಹಾಗೂ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ನಟರಾಜನ್ ಅವರನ್ನು  ಬಳಿಕ ಸನ್‍ರೈಸರ್ಸ್ ಹೈದಾರಾಬಾದ್ ತಂಡ ಖರೀದಿ ಮಾಡಿತ್ತು. ಸದ್ಯ ನಟರಾಜನ್ ಯಾರ್ಕರ್ ಗೆ ಫಿದಾ ಆಗಿರುವ ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆತನನ್ನು ಯಾರ್ಕರ್ ನಟರಾಜನ್ ಎಂದು ಕರೆದರೆ ಉತ್ತಮವಾಗಿರುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

  • ದಿನಗೂಲಿ ಕೆಲಸ ಮಾಡುತ್ತಿದ್ದ ತಾಯಿಯ ಮಗ ಇಂದು ಯಾರ್ಕರ್ ಸ್ಪೆಶಲಿಸ್ಟ್

    ದಿನಗೂಲಿ ಕೆಲಸ ಮಾಡುತ್ತಿದ್ದ ತಾಯಿಯ ಮಗ ಇಂದು ಯಾರ್ಕರ್ ಸ್ಪೆಶಲಿಸ್ಟ್

    – ಸೇಲಂನ ಪುಟ್ಟ ಹಳ್ಳಿಯಲ್ಲಿ ಜನಿಸಿದ ನಟರಾಜನ್ ಕ್ರಿಕೆಟ್ ಜೆರ್ನಿ
    – 3 ತಂಗಿಯರನ್ನು ಓದಿಸುವ ಕನಸು ಕಟ್ಟಿರುವ ಯುವ ಕ್ರಿಕೆಟಿಗ

    ಚೆನ್ನೈ: ನಮ್ಮ ಬಳಿ ಟ್ಯಾಲೆಂಟ್ ಮತ್ತು ಸಾಧಿಸುವ ಮನಸ್ಸು ಇದ್ದರೆ, ಅವಕಾಶ ತಾನಗಿಯೇ ಹುಡುಕಿಕೊಂಡು ಬರುತ್ತದೆ. ಈಗ ತಮಿಳುನಾಡಿನ ಎಡಗೈ ವೇಗಿ ಟಿ. ನಟರಾಜನ್ ಅವರ ವಿಚಾರದಲ್ಲೂ ಅವಕಾಶ ಅವರನ್ನೇ ಹುಡುಕಿಕೊಂಡು ಬಂದಿದೆ.

    ಐಪಿಎಲ್ ಎಂದರೆ ರಂಗುರಂಗಿನ ಕ್ರಿಕೆಟ್ ಹಬ್ಬ. ದುಡ್ಡಿನ ಹೊಳೆಯೇ ಹರಿಯುವ ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಸರಿದೆ. ವಿದೇಶಿ ಆಟಗಾರರು ಕೂಡ ಈ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕರಾಗಿರುತ್ತಾರೆ. ಅಂತೆಯೇ ಈ ಕ್ರಿಕೆಟ್ ಲೀಗ್ ದೇಶೀಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಒಂದು ಉತ್ತಮ ವೇದಿಕೆಯಾಗಿದೆ.

    ಐಪಿಎಲ್‍ನಿಂದ ಹಲವಾರು ಯುವ ಆಟಗಾರರು ಹೊರಬಂದಿದ್ದು, ಈಗ ಚೆನ್ನೈನ ಸೇಲಂ ಜಿಲ್ಲೆಯ ಪುಟ್ಟ ಗ್ರಾಮ ಚಿನ್ನಪ್ಪಂಪಟ್ಟಿಯಲ್ಲಿ ಜನಿಸಿದ ತಂಗರಾಸು ನಟರಾಜನ್ ಇಂದು ಐಪಿಎಲ್‍ನಲ್ಲಿ ಯಾರ್ಕರ್ ಸ್ಪೆಶಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ನಟರಾಜನ್ ಅವರು 1991 ಮೇ 27 ರಂದು ಸೇಲಂನಲ್ಲಿ ಜನಿಸಿದ್ದರು. ಇವರ ತಂದೆ-ತಾಯಿ ಇಬ್ಬರು ದಿನಗೂಲಿ ಕೆಲಸ ಮಾಡುತ್ತಾರೆ. ಜೊತೆಗೆ ಇವರಿಗೆ ಮೂರು ಜನ ಸಹೋದರಿಯರು ಇದ್ದಾರೆ.

    ಮೊದಲು ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಒಂದು ದಿನ ತಮಿಳುನಾಡು ಕ್ರಿಕೆಟ್ ಮೆಂಟರ್ ಜೈಪ್ರಕಾಶ್ ಅವರ ಕಣ್ಣಿಗೆ ಬಿದ್ದಿದ್ದರು. ಅಂದು ಜೈಪ್ರಕಾಶ್ ಅವರು ಅವರನ್ನು ಕರೆತಂದು ವೈಟ್ ಬಾಲ್ ಕ್ರಿಕೆಟ್ ಅಭ್ಯಾಸ ಮಾಡಿಸಿದ್ದರು. ಈ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ನಟರಾಜನ್ ಒಂದು ಮಟ್ಟದ ಯಶಸ್ಸು ಕಂಡಿದ್ದರು. ಅಂದು ನಟರಾಜನ್ ಆಡುತ್ತಿದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಮುತ್ತಯ್ಯ ಮುರುಳೀಧರನ್ ನಟರಾಜನ್ ಅವರಿಗೆ ಉತ್ತಮವಾಗಿ ತರಬೇತಿ ನೀಡಿದ್ದರು.

    ಟಿಎನ್‍ಪಿಎಲ್‍ನಲ್ಲಿ ಮಿಂಚಿದ ನಟರಾಜನ್ ಅವರು, ನಂತರ ತಮಿಳುನಾಡು ಕ್ರಿಕೆಟ್ ತಂಡಕ್ಕೆ ಎಂಟ್ರಿಕೊಟ್ಟು, ದೇಶೀಯ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ 2017ರಲ್ಲಿ ಒಂದು ಬ್ಯಾಟ್ ಕೊಳ್ಳಲು ಹಣವಿಲ್ಲದೇ ಇದ್ದ ನಟರಾಜನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ ಮೂರು ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ 2017ರ ಐಪಿಎಲ್‍ನಲ್ಲಿ ದುಬಾರಿಯಾಗಿದ್ದ ನಟರಾಜನ್ ತಾವು ಆಡಿದ ಆರು ಪಂದ್ಯದಲ್ಲಿ 9.07 ಎಕಾನಮಿ ರೇಟ್ ಹೊಂದಿದ್ದರು.

    ಇದಾದ ನಂತರ ಪಂಜಾಬ್ ತಂಡ ಇವರನ್ನು ಕೈಬಿಟ್ಟಿತ್ತು. ಆದರೆ 2018ರ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಮಿಂಚಿದ್ದ ನಟರಾಜನ್ ತಮಿಳುನಾಡು ತಂಡ ಫೈನಲ್‍ಗೆ ಹೋಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದನ್ನು ಕಂಡ ಸನ್‍ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಮುತ್ತಯ್ಯ ಮುರುಳೀಧರನ್ 2018 ಐಪಿಎಲ್ ಹಾರಾಜು ಪ್ರಕ್ರಿಯೆಯಲ್ಲಿ 40 ಲಕ್ಷ ನೀಡಿ ನಟರಾಜನ್ ಅವರನ್ನು ಖರೀದಿಸಿದ್ದರು.

    ಈ ಹಿಂದೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ನಟರಾಜನ್, ನನ್ನ ತಂಗಿಯರಿಗೆ ಉತ್ತಮ ಶಿಕ್ಷಣ ಕೊಡಸಬೇಕು. ಅವರಿಗೆ ಶಿಕ್ಷಣ ಕೊಡಿಸುವುದು ನಾನು ದುಬಾರಿ ಕಾರು ತೆಗೆದುಕೊಳ್ಳುವುದಕ್ಕಿಂತ ದೊಡ್ಡದು. ಅವರ ಜೀವನಕ್ಕೆ ಉತ್ತಮ ದಾರಿಯನ್ನು ಮಾಡಿಕೊಡಬೇಕು. ಜೊತೆಗೆ ನನ್ನ ಹಾಗೇ ಉತ್ತಮ ಟೆನ್ನಿಸ್ ಕ್ರಿಕೆಟ್ ಆಡುವ ಆಟಗಾರಿಗೆ ಸಹಾಯ ಮಾಡಬೇಕು. ಒಂದು ಮನೆಯನ್ನು ಕಟ್ಟಬೇಕು ಎಂದು ಹೇಳಿಕೊಂಡಿದ್ದರು.

    ಇಂದು ಅದೇ ನಟರಾಜನ್ ಐಪಿಎಲ್‍ನಲ್ಲಿ ಯಾರ್ಕರ್ ಸ್ಪೆಶಲಿಸ್ಟ್ ಆಗಿ ಮಿಂಚುತ್ತಿದ್ದಾರೆ. ನಿನ್ನೆ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 10 ಯಾರ್ಕರ್ ಎಸೆದು ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ ಒಂದು ಇನ್ನಿಂಗ್ಸ್‍ನಲ್ಲಿ ಅತೀ ಹೆಚ್ಚು ಯಾರ್ಕರ್ ಎಸೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ನಿನ್ನೆಯ ಪಂದ್ಯದಲ್ಲಿ ಪ್ರಮುಖ 17ನೇ ಓವರ್ ಬೌಲ್ ಮಾಡಿದ ನಟರಾಜನ್ ಕೇವಲ 7 ರನ್ ನೀಡಿ ಒಂದು ವಿಕೆಟ್ ಗಬಳಿಸಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದ್ದರು.

  • ನನಗೆ ಮಾಲಿಂಗ ಯಾರ್ಕರ್ ಹಾಕೋದನ್ನು ಹೇಳಿಕೊಟ್ಟಿಲ್ಲ – ಬೌಲಿಂಗ್ ಗುಟ್ಟು ಬಿಚ್ಚಿಟ್ಟ ಬುಮ್ರಾ

    ನನಗೆ ಮಾಲಿಂಗ ಯಾರ್ಕರ್ ಹಾಕೋದನ್ನು ಹೇಳಿಕೊಟ್ಟಿಲ್ಲ – ಬೌಲಿಂಗ್ ಗುಟ್ಟು ಬಿಚ್ಚಿಟ್ಟ ಬುಮ್ರಾ

    ನವದೆಹಲಿ: ಶ್ರೀಲಂಕಾದ ಯಾರ್ಕರ್ ಸ್ಪೆಶಲಿಸ್ಟ್ ಲಸಿತ್ ಮಾಲಿಂಗ ನನಗೆ ಯಾರ್ಕರ್ ಹಾಕುವುದನ್ನು ಹೇಳಿಕೊಟ್ಟಿಲ್ಲ ಎಂದು ಭಾರತದ ಯುವ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಹೇಳಿದ್ದಾರೆ.

    ಈಗ ಭಾರತದ ತಂಡದ ಬೌಲಿಂಗ್ ಸ್ಟಾರ್ ಆಗಿರುವ ಬುಮ್ರಾ ಹಾಗೂ ಮಾಲಿಂಗ ಐಪಿಎಲ್ ನಲ್ಲಿ ಒಂದೇ ತಂಡದ ಪರವಾಗಿ ಆಡುತ್ತಾರೆ. ಬುಮ್ರಾ ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಮಾಲಿಂಗ ಅವರ ಬಳಿ ಯಾರ್ಕರ್ ಎಸೆತವನ್ನು ಮಾಡುವುದನ್ನು ಕಲಿತಿದ್ದಾರೆ. ಹಾಗಾಗಿ ಅವರು ಇಂದು ಡೆಡ್ಲಿ ಯಾರ್ಕರ್ ಗಳನ್ನು ಎಸೆಯುತ್ತಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು.

    ಈಗ ಈ ಗಾಳಿ ಸುದ್ದಿಗೆ ತೆರೆ ಎಳೆದಿರುವ ಬುಮ್ರಾ, ಲಸಿತ್ ಮಾಲಿಂಗ ಅವರು ನನಗೆ ಯಾರ್ಕರ್ ಎಸೆತ ಹಾಕುವುದನ್ನು ಹೇಳಿಕೊಟ್ಟಿಲ್ಲ. ನಾನು ಮತ್ತು ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ ಒಂದೇ ನೆಟ್‍ನಲ್ಲಿ ಅಭ್ಯಾಸ ಮಾಡಿದ್ದೇವೆ. ಆದರೆ ಅವರು ನನಗೆ ಯಾರ್ಕರ್ ಎಸೆತವನ್ನು ಹೇಗೆ ಎಸೆಯುವುದು ಎಂಬುದರ ಬಗ್ಗೆ ಹೇಳಿಕೊಟ್ಟಿಲ್ಲ. ಬದಲಿಗೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎಂದು ಹೇಳಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಬುಮ್ರಾ, ನನಗೆ ಯಾರು ಯಾರ್ಕರ್ ಎಸೆತವನ್ನು ಹೇಳಿಕೊಟ್ಟಿಲ್ಲ. ಮಾಲಿಂಗ ಅವರು ನಾನು ಐಪಿಎಲ್ ಅಲ್ಲಿ ಒಂದೇ ತಂಡಕ್ಕೆ ಆಡುತ್ತೇವೆ. ಆದರೆ ಮಾಲಿಂಗ ಕೂಡ ನನಗೆ ಯಾರ್ಕರ್ ಎಸೆತದ ಬಗ್ಗೆ ಹೇಳಿಕೊಟ್ಟಿಲ್ಲ. ನಾನು ಟಿವಿ ನೋಡಿಯೇ ಬೌಲಿಂಗ್ ಮಾಡುವುದನ್ನು ಕಲಿತ್ತಿದ್ದೇನೆ. ವಿಡಿಯೋ ನೋಡಿ ಅಲ್ಲಿನ ಪ್ರತಿಕ್ರಿಯೆಯನ್ನು ಅನುಸರಿಸಿ ನಾನು ಬೌಲಿಂಗ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಈಗಲೂ ಕೂಡ ಟಿವಿ ನೋಡಿಯೇ ಬೌಲಿಂಗ್ ಕಲಿಯುತ್ತೇನೆ. ನನಗೆ ನನ್ನದೇ ದಾರಿಯಲ್ಲಿ ಅಭ್ಯಾಸ ಮಾಡಲು ಇಷ್ಟಪಡುತ್ತೇನೆ. ನನ್ನ ಬಗ್ಗೆ ನಾನೇ ವಿಶ್ಲೇಷಣೆ ಮಾಡಲು ಪ್ರಯತ್ನಿಸುತ್ತೇನೆ. ಏಕೆಂದರೆ ಕ್ರಿಕೆಟ್ ಆಡುವಾಗ ಮೈದಾನದಲ್ಲಿ ನಾನು ಒಬ್ಬಂಟಿಯಾಗಿ ಬೌಲಿಂಗ್ ಮಾಡಬೇಕು. ಅಲ್ಲಿ ನನಗೆ ಸಹಾಯ ಮಾಡಲು ಯಾರು ಇರುವುದಿಲ್ಲ. ಹಾಗಾಗಿ ನಾನು ನನ್ನ ದಾರಿಯಲ್ಲಿ ನಾನೇ ಅಭ್ಯಾಸ ಮಾಡಿ. ನನಗೆ ನಾನೇ ಸಹಾಯ ಮಾಡಿಕೊಳ್ಳುತ್ತೇನೆ ಎಂದು ತನ್ನ ಬೌಲಿಂಗ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ಕೆಲವರು ಮಾಲಿಂಗ ಅವರು ನನಗೆ ಯಾರ್ಕರ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಅದು ನಿಜವಲ್ಲ. ಅವರು ನನಗೆ ಮೈದಾನದಲ್ಲಿ ಏನೂ ಹೇಳಿಕೊಟ್ಟಿಲ್ಲ. ಅವರ ಬಳಿ ನಾನು ಕಲಿತಿರುವುದು ಮನಸ್ಸನ್ನು ಹೇಗೆ ನಿಯಂತ್ರಣ ಮಾಡುವುದು, ಕೋಪ ಮಾಡಿಕೊಳ್ಳದೇ ಹೇಗೆ ಇರುವುದು. ವಿಭಿನ್ನ ಸಂದರ್ಭಗಳನ್ನು ಹೇಗೆ ನಿಭಾಯಿಸುವುದು ಮತ್ತು ಒಬ್ಬ ಬ್ಯಾಟ್ಸ್ ಮ್ಯಾನ್ ಅನ್ನು ಔಟ್ ಮಾಡಲು ಹೇಗೆ ಯೋಜನೆ ರೂಪಿಸುವುದು ಎಂಬುದನ್ನು ನಾನು ಅವರ ಬಳಿ ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಬೆನ್ನು ನೋವಿನ ಗಾಯದ ಸಮಸ್ಯೆಯಿಂದ ಕಳೆದ ಐದು ತಿಂಗಳಿಂದ ಭಾರತದ ತಂಡದಿಂದ ಹೊರಬಿದ್ದಿದ್ದ ಬುಮ್ರಾ ಅವರು ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

  • ನಾಲ್ಕು ಬಾಲ್‍ನಲ್ಲಿ 4 ವಿಕೆಟ್ ಪಡೆದ  ಮಾಲಿಂಗ ವಿಶ್ವದಾಖಲೆ

    ನಾಲ್ಕು ಬಾಲ್‍ನಲ್ಲಿ 4 ವಿಕೆಟ್ ಪಡೆದ ಮಾಲಿಂಗ ವಿಶ್ವದಾಖಲೆ

    ಕೊಲಂಬೊ: ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಅವರು ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಚುಟುಕು ಪಂದ್ಯದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

    ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದಲ್ಲಿ, ಲಸಿತ್ ಮಾಲಿಂಗ ಮ್ಯಾಚ್‍ನ ಮೂರನೇ ಓವರ್ ನಲ್ಲಿ ಕಿವೀಸ್‍ನ ನಾಲ್ಕು ಆಟಗಾರರನ್ನು ಒಂದೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

    ಪಂದ್ಯದ ಮೂರನೇ ಓವರ್ ಬೌಲ್ ಮಾಡಲು ಬಂದ ಮಾಲಿಂಗ್ ಆ ಓವರ್ ನ ಮೂರನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಕೊಲಿನ್ ಮುನ್ರೊವನ್ನು ಬೌಲ್ಡ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ನಂತರ 4 ನೇ ಎಸೆತದಲ್ಲಿ ಹಮೀಶ್ ರುದರ್‍ಫೋರ್ಡ್ ಅವರನ್ನು ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಬಂದ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಮಾಲಿಂಗ್ ಅವರ 5ನೇ ಎಸೆತದಲ್ಲಿ ಬೌಲ್ಡ್ ಆದರು. ಓವರ್ ನ ಕೊನೆಯ ಬಾಲ್‍ನಲ್ಲಿ ಅನುಭವಿ ಆಟಗಾರ ರಾಸ್ ಟೇಲರ್‍ ರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.

    https://twitter.com/avulasunil/status/1169999036985643009

    ಇದೇ ಪಂದ್ಯದಲ್ಲಿ ಇನ್ನೊಂದು ಸಾಧನೆ ಮಾಡಿರುವ ಲಸಿತ್ ಮಾಲಿಂಗ ಅವರು, ಕೊಲಿನ್ ಮುನ್ರೊ ಅವರನ್ನು 3 ನೇ ಎಸೆತದಲ್ಲಿ ಬೌಲ್ಡ್ ಮಾಡುವ ಮೂಲಕ ವಿಶ್ವದಲ್ಲೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ನೂರು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರನ್ನು ಬಿಟ್ಟರೆ ಈ ಪಟ್ಟಿಯಲ್ಲಿ 98 ವಿಕೆಟ್ ಪಡೆದ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಎರಡನೇ ಸ್ಥಾನದಲ್ಲಿ ಇದ್ದಾರೆ.

    ಒಂದೇ ಓವರ್ ನಲ್ಲಿ 4 ವಿಕೆಟ್ ಕಿತ್ತು ದಾಖಲೆ ಬರೆದ ಮಾಲಿಂಗ, ತಾನು ಬೌಲ್ ಮಾಡಿದ ಐದನೇ ಓವರ್‍ ನಲ್ಲಿ ಕೀವೀಸ್ ಆಟಗಾರ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡಿ 5 ವಿಕೆಟ್ ಪಡೆಯುವ ಮೂಲಕ ತನ್ನ ವೃತ್ತಿ ಜೀವನದಲ್ಲಿ ಟಿ-20 ಮಾದರಿಯಲ್ಲಿ ಎರಡು ಬಾರಿ ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.

    2006ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಮಾದರಿಗೆ ಮೊದಲು ಪಾದಾರ್ಪಣೆ ಮಾಡಿದ ಮಾಲಿಂಗ ಅವರು, ಇಲ್ಲಿಯವರೆಗೆ 76 ಟಿ-20 ಪಂದ್ಯಗಳನ್ನು ಆಡಿದ್ದು, 19.0 ಸರಾಸರಿಯಲ್ಲಿ ಒಟ್ಟು 104 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ 226 ಏಕದಿನ ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 338 ವಿಕೆಟ್‍ಗಳನ್ನು ಪಡೆದಿದ್ದಾರೆ. ತನ್ನ ಡೆಡ್ಲಿ ಯಾರ್ಕರ್ ಮೂಲಕ ಹೆಸರುವಾಸಿಯಾಗಿರುವ ಮಾಲಿಂಗ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 101 ವಿಕೆಟ್ ಪಡೆದು ಮಿಂಚಿದ್ದಾರೆ.

    ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಲಸಿತ್ ಮಾಲಿಂಗ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ಶ್ರೀಲಂಕಾ ನೀಡಿದ 125 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಲಾಗದೆ 88 ರನ್‍ಗಳಿಗೆ ಆಲ್‍ಔಟ್ ಆಯಿತು. ಈ ಮೂಲಕ ಈ ಪಂದ್ಯವನ್ನು 37 ರನ್‍ಗಳ ಅಂತರದಿಂದ ಶ್ರೀಲಂಕಾ ಗೆದ್ದುಕೊಂಡಿತು.

  • ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಜಸ್ಪ್ರಿತ್ ಬುಮ್ರಾ

    ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯ ಬಿಚ್ಚಿಟ್ಟ ಜಸ್ಪ್ರಿತ್ ಬುಮ್ರಾ

    ಬರ್ಮಿಗ್ಹ್ಯಾಮ್: ವಿಶ್ವದ ನಂಬರ್ ಒನ್ ಬೌಲರ್ ಜಸ್ಪ್ರಿತ್ ಬುಮ್ರಾ ತನ್ನ ಡೆಡ್ಲಿ ಯಾರ್ಕರ್ ಎಸೆತಗಳ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ ಭಾರತ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 28 ರನ್ ಅಂತರದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ತನ್ನ ಡೆಡ್ಲಿ ಯಾರ್ಕರ್ ಮೂಲಕ ಬಾಂಗ್ಲಾದೇಶಿ ಆಟಗಾರನ್ನು ಕಾಡಿದ ಬುಮ್ರಾ ತನ್ನ ನಿಗದಿತ 10 ಓವರ್‍ ಗಳಲ್ಲಿ 55 ರನ್ ನೀಡಿ 4 ವಿಕೆಟ್ ಕಿತ್ತು ಭಾರತಕ್ಕೆ ಜಯವನ್ನು ತಂದುಕೊಟ್ಟರು.

    ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲಲು ಕೊನೆಯ ಮೂರು ಓವರ್ ನಲ್ಲಿ 36 ರನ್‍ಗಳ ಅವಶ್ಯಕತೆ ಇದ್ದಾಗ ಭಾರತ ಒಂದು ಹಂತದಲ್ಲಿ ಅಪಾಯಕ್ಕೆ ಸಿಲುಕಿತ್ತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಬಾಂಗ್ಲಾ ಬ್ಯಾಟ್ಸ್‍ಮನ್ ಮೊಹಮ್ಮದ್ ಸೈಫುದ್ದೀನ್ ಅವರು ಕ್ರೀಸ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಕಾರಣ ಸೋಲುವ ಭೀತಿ ಎದುರಾಗಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಅವರು ಬುಮ್ರಾಗೆ ಪ್ರಮುಖ 48 ನೇ ಓವರ್ ಬೌಲ್ ಮಾಡಲು ನೀಡಿದರು. ತಮ್ಮ ನಾಯಕ ನಿರೀಕ್ಷೆಗೆ ತಕ್ಕಂತೆ ಬೌಲ್ ಮಾಡಿದ ಬುಮ್ರಾ ಅ ಓವರ್‍ ನಲ್ಲಿ ಯಾರ್ಕರ್ ಮೂಲಕ 2 ವಿಕೆಟ್ ಪಡೆದು ಭಾರತವನ್ನು ಗೆಲ್ಲಿಸಿದರು.

    ಈಗ ಈ ಮಾರಕ ಯಾರ್ಕರ್‍ ಗಳ ಹಿಂದಿನ ರಹಸ್ಯ ಹೇಳಿರುವ ಬುಮ್ರಾ ಅವರು ನನ್ನ ನಿಖರವಾದ ಯಾರ್ಕರ್ ದಾಳಿಗೆ ನಾನು ಮಾಡುವ ಅಭ್ಯಾಸ ಸಹಾಯ ಮಾಡುತ್ತದೆ, ನೆಟ್ಸ್ ನಲ್ಲಿ ಹೆಚ್ಚು ಯಾರ್ಕರ್ ಎಸೆಯುತ್ತೇನೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬುಮ್ರಾ,”ನಾನು ನೆಟ್ಸ್‍ನಲ್ಲಿ ಯಾರ್ಕರ್ ಎಸೆತಗಳನ್ನು ಹೆಚ್ಚು ಎಸೆಯಲು ಪ್ರಯತ್ನ ನಡೆಸುತ್ತೇನೆ. ಹೀಗೆ ಮಾಡುವುದರಿಂದ ಯಾರ್ಕರ್ ಎಸೆತಗಳ ಮೇಲೆ ನಮಗೆ ಒಳ್ಳೆಯ ಹಿಡಿತ ಸಿಗುತ್ತದೆ. ಅದನ್ನು ತುಂಬಾ ಸಲ ಅಭ್ಯಾಸ ಮಾಡದೇ ಇದ್ದರೇ ಯಾರ್ಕರ್ ಎಸೆತವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ”ಸ ಎಂದು ಹೇಳಿದ್ದಾರೆ.

    ನಾನು ಯಾವಗಲೂ ಆಟವಾಡಲು ಎದುರು ನೋಡುತ್ತಿರುತ್ತೇನೆ ಮತ್ತು ನಾವು ಆಡುವ ಹೆಚ್ಚಿನ ಸಂಖ್ಯೆಯ ಪಂದ್ಯಗಳಲ್ಲಿ ನಾವು ಹೆಚ್ಚು ಅನಂದಪಡುತ್ತೇವೆ. ಇದು ನನ್ನ ಮೊದಲ ವಿಶ್ವಕಪ್ ಅದ್ದರಿಂದ ಸಾಧ್ಯವಾದಷ್ಟು ಆಟವಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

    ಬುಮ್ರಾ ಯಾರ್ಕರ್ ಅಭ್ಯಾಸದ ವೇಳೆ ಆಲ್‍ರೌಂಡರ್ ವಿಜಯ್ ಶಂಕರ್ ಗಾಯಗೊಂಡಿದ್ದು, ಈಗ ಟೂರ್ನಿಯಿಂದ ಹೊರಬಿದ್ದಿದ್ದಾರೆ.