Tag: ಯಮುನಾ ನದಿ

  • ಯಮುನೆಯಲ್ಲಿ ದೋಣಿ ಮುಳುಗಿ 17 ಜನ ನಾಪತ್ತೆ – ಮೂವರ ಶವ ಪತ್ತೆ

    ಯಮುನೆಯಲ್ಲಿ ದೋಣಿ ಮುಳುಗಿ 17 ಜನ ನಾಪತ್ತೆ – ಮೂವರ ಶವ ಪತ್ತೆ

    ಲಕ್ನೋ: 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿ, ಅದರಲ್ಲಿದ್ದ 17 ಜನರು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ನಡೆದಿದೆ. ಗುರುವಾರ ನಡೆದ ಘಟನೆಯಲ್ಲಿ ಇಲ್ಲಿಯವರೆಗೆ ಕೇವಲ ಮೂವರ ಮೃತದೇಹ ಹೊರ ತೆಗೆಯಲಾಗಿದೆ, 13 ಜನರನ್ನು ರಕ್ಷಿಸಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ಫತೇಪುರ್ ಜಿಲ್ಲೆಯ ಮರ್ಕಾದಿಂದ ಜರೌಲಿ ಘಾಟ್‌ಗೆ ತೆರಳುತ್ತಿದ್ದ ದೋಣಿ ನದಿಯಲ್ಲಿ ಮಗುಚಿ ಬಿದ್ದಿದೆ. ಅದರಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಮಹಿಳೆಯರು ಹಾಗೂ ಮಗುವಿನ ಶವ ನದಿಯಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ಪಂಚಾಯತ್‌ ದಲಿತ ಅಧ್ಯಕ್ಷರು ಕುರ್ಚಿಯಲ್ಲಿ ಕೂರುವಂತಿಲ್ಲ, ಸ್ವಾತಂತ್ರ್ಯ ದಿನ ಧ್ವಜ ಹಾರಿಸುವಂತಿಲ್ಲ: ಸರ್ವೇಯಿಂದ ತಾರತಮ್ಯ ಬೆಳಕಿಗೆ

    ಜಿಲ್ಲೆಯ ಮಾರ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಡಿಐಜಿ ಮಿಶ್ರಾ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಸಹಾಯಕ್ಕಾಗಿ ಪ್ರಯಾಗ್‌ರಾಜ್‌ನಿಂದ ಡೈವರ್‌ಗಳನ್ನೂ ಕರೆಸಲಾಗಿದೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಚಿವರಾದ ರಾಕೇಶ್ ಸಚನ್ ಮತ್ತು ರಾಮಕೇಶ್ ನಿಶಾದ್ ಅವರನ್ನು ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

    ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

    ನವದೆಹಲಿ: ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿದೆ. ವಾರಾಂತ್ಯದಲ್ಲಿ ಯಮುನಾ ನದಿಯಲ್ಲಿ ಅಮೋನಿಯ ಮಟ್ಟವು 3 ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್) ಗೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

    ಛತ್ ಪೂಜೆಯ ಮೊದಲ ದಿನವಾದ ಸೋಮವಾರದಂದು ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ. ಇದೇನೂ ಮೊದಲನೇ ಬಾರಿಗೆ ಅಲ್ಲ. ಈ ಹಿಂದೆನಿಂದಲೂ ಸಹ ಯಮುನಾ ನದಿಯಲ್ಲಿ ವಿಷಕಾರಿ ನೊರೆಯ ಸಮಸ್ಯೆ ಕಾಡುತ್ತಿದೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ

    ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವರ್ಷ ಯಮುನಾ ತೀರದಲ್ಲಿ ಛತ್ ಪೂಜೆಯನ್ನು ನಿಷೇಧಿಸಿದ್ದು, ಆದರೆ ಇದು ಬಿಜೆಪಿ ಮತ್ತು ಎಎಪಿ ಟೀಕೆಗೆ ಎಡೆಮಾಡಿಕೊಟ್ಟಿತು. ಆದಾಗ್ಯೂ, ದೆಹಲಿಯ ಯಮುನಾ ತೀರವನ್ನು ಹೊರತುಪಡಿಸಿ “ನಿಗದಿ ಪಡಿಸಿದ ಜಾಗಗಳಲ್ಲಿ” ಛಾತ್ ಆಚರಣೆಗಳನ್ನು ಡಿಡಿಎಂಎ ಅನುಮತಿಸಿದೆ.

    ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಜನರು ಚಾತ್ ಪೂಜೆಯನ್ನು ಆಚರಿಸುತ್ತಾರೆ. ಸೂರ್ಯ ದೇವರಿಗೆ ಉಪವಾಸ ಮಾಡಿ ಮೊಣಕಾಲು ಆಳದ ನೀರಿನಲ್ಲಿ ನಿಂತು  ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಆಚರಣೆಗಳು ಮೂರು ದಿನಗಳ ಕಾಲ ನಡೆಯುತ್ತದೆ.

    ಈ ವರ್ಷದ ಆರಂಭದಲ್ಲಿ ದೆಹಲಿ ಸರ್ಕಾರವು ಯಮುನಾ ನದಿಗೆ ಸಂಸ್ಕರಿಸದ ಕೊಳಚೆನೀರನ್ನು ಬಿಡುವುದರಿಂದ ನೊರೆಯನ್ನು ಕಡಿಮೆ ಮಾಡಲು ಒಂಬತ್ತು ಅಂಶಗಳ ಕ್ರಿಯಾ ಯೋಜನೆಯನ್ನು ರೂಪಿಸಿತು. ಆದರೆ ಯಮುನಾ ನದಿಯ ಮಾಲಿನ್ಯ ಮರುಕಳಿಸುವ ಮತ್ತು ಸಂಸ್ಕರಿಸದ ಸಮಸ್ಯೆಯ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ತಮಿಳು ಚಿತ್ರ ತಂಡದ ಯಡವಟ್ಟು – ಮೇಲುಕೋಟೆ ತಂಗಿ ಕೊಳದ ನೀರು ಕಲುಷಿತ

    ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಣೆಯಾಗಿದ್ದು, ಇದು ಮಧ್ಯಮ ಮೇಲ್ಮೈ ಗಾಳಿಗೆ ಕಾರಣವೆಂದು ಹೇಳಬಹುದು. ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ವಿಷಕಾರಿ ಗಾಳಿಯಿಂದ ಉಸಿರಾಡುತ್ತಿದ್ದಾರೆ. ಕಳೆದ ವಾರದಿಂದ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟವು ಹದಗೆಟ್ಟಿದೆ.

  • ಯಮುನಾ ನದಿ ದಡದಲ್ಲಿ ಅರೆಬೆಂದ ಮೃತದೇಹಗಳು ಪತ್ತೆ

    ಯಮುನಾ ನದಿ ದಡದಲ್ಲಿ ಅರೆಬೆಂದ ಮೃತದೇಹಗಳು ಪತ್ತೆ

    ಲಕ್ನೋ: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ನಡೆಸುವುದು ಕುಟುಂಬಸ್ಥರಿಗೆ ಸರ್ಕಾರಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ನಡುವೆಯೇ ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯ ಯಮುನಾ ನದಿಯ ದಡದಲ್ಲಿ ಕೊರೊನಾ ಸೋಂಕಿತರ ಮೃತದೇಹಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲಾ ಕೇಂದ್ರವಾಗಿರುವ ಹಮೀರ್‍ಪುರದ ಬಳಿ ಹರಿಯುವ ಯಮುನಾ ನದಿಗೆ ಕೊರೊನಾ ಸೋಂಕಿತರ ಮೃತದೇಹವನ್ನು ಎಸೆಯಲಾಗಿದೆ. ನಿನ್ನೆ ಒಂದೇ ದಿನ ಸುಮಾರು 7 ಮೃತದೇಹಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಹಮೀರ್‍ಪುರದ ಎಸ್‍ಪಿ ಅನೂಪ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ನದಿಯ ದಡದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ.

    ಕಾನ್ಪುರ ಹಾಗೂ ಹಮೀರ್‌ಪುರ ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಅಂತ್ಯಸಂಸ್ಕಾರ ನಡೆಸಲು ಸಮಸ್ಯೆ ಎದುರಾಗುತ್ತಿದೆ. ಇದರ ನಡುವೆಯೇ ಅರೆಬರೆ ಬೆಂದ ಮೃತದೇಹಗಳನ್ನು ತಂದು ನದಿಗೆ ಎಸೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ನದಿಯಲ್ಲಿ ಒಂದು ಅಥವಾ ಎರಡು ಮೃತದೇಹಗಳು ಸಿಗುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಕೊರೊನಾ 2ನೇ ಅಲೆಯ ನಡುವೆ ಇಷ್ಟು ಮೃತ ದೇಹಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಉಂಟಾಗುತ್ತಿರುವ ಲೋಪಗಳೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    – ಒಂದೇ ಕುಟುಂಬದ ಆರು ಜನರು
    – ನದಿ ದಡದಲ್ಲಿ ಕುಟುಂಬಸ್ಥರ ಆಕ್ರಂದನ
    – ಗ್ರಾಮದಲ್ಲಿ ಸ್ಮಶಾನ ಮೌನ

    ಚಂಡೀಗಢ: ಒಂದೇ ಕುಟುಂಬದ ಆರು ಜನ ನದಿಯಲ್ಲಿ ಮುಳುಗಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಜಲ್ಮಾನಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಕುಟುಂಸ್ಥರು ಯಮುನಾ ನದಿ ದಡದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ಜನರಲ್ಲಿ ಮೂವರ ಶವ ಪತ್ತೆಯಾಗಿದ್ದು, ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದೆ.

    ನದಿ ದಡದಲ್ಲಿ ವಾಯು ವಿಹಾರಕ್ಕಾಗಿ ಸುಶೀಲ್ ಕುಟುಂಬದವರ ಜೊತೆ ತೆರಳಿದ್ದರು. ಸುಶೀಲ್ ಜೊತೆಯಲ್ಲಿ ಪತ್ನಿ ಸೋನಿಯಾ (32), ಮಕ್ಕಳಾದ ಸಾಗರ್ (15), ಪಾಯಲ್ (12), ಸಂಬಂಧಿ ಸರೀತಾ (18), ಸಂಬಂಧಿಯ ಮಕ್ಕಳಾದ ಬಾದಲ್ (18) ಮತ್ತು ಗರ್ವ್ (16) ಜೊತೆಯಾಗಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಮಕ್ಕಳು ನದಿಯಲ್ಲಿ ಸ್ನಾನ ಮಾಡೋದಾಗಿ ಹಠ ಹಿಡಿದಿದ್ದರಿಂದ ಸುಶೀಲ್ ನದಿ ದಡದಲ್ಲಿಯೇ ಕುಳಿತುಕೊಂಡಿದ್ದರು.

    ಪತ್ನಿ ಸೋನಿಯಾ ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಇಳಿದಿದ್ದರು. ಮಕ್ಕಳು ನದಿ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಸೋನಿಯಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಸರೀತಾ ಸಹ ನದಿಯಲ್ಲಿ ಮುಳಗಲಾರಂಭಿಸಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಆರು ಜನ ಯುಮುನೆಯ ಪಾಲಾಗಿದ್ದಾರೆ. ಇನ್ನು ದಡದಲ್ಲಿ ಕುಳಿತಿದ್ದ ಸುಶೀಲ್ ಸಹಾಯಕ್ಕಾಗಿ ಕೂಗಿ ಕೂಗಿ ಜ್ಞಾನ ತಪ್ಪಿದ್ದಾರೆ.

    ಮಕ್ಕಳ ಧ್ವನಿ ಕೇಳಿದ್ದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಕುರಿಗಾಹಿ ನದಿಗೆ ಧುಮುಕಿದ್ರೂ ಯಾರನ್ನ ಉಳಿಸಲು ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಹಲವು ಯುವಕರು ನದಿಗೆ ಧುಮುಕಿ ಆರು ಜನರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಈಜು ತಜ್ಞರ ಮೂಲಕ ಹುಡುಕಾಟ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಘಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಸೋನಿಯಾ, ಸರೀತಾ ಮತ್ತು ಬಾದಲ್ ಶವ ಪತ್ತೆಯಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

    ಡಿಸಿ ಧಮೇಂದ್ರ ಸಿಂಗ್, ಡಿಎಸ್‍ಪಿ ಪ್ರದೀಪ್ ಕುಮಾರ್, ಡಿಆರ್‍ಓ ಚಂದ್ರಮೋಹನ್, ತಹಶೀಲ್ದಾರ್ ನರೇಶ್ ಕೌಶಲ್ ಘಟನಾ ಸ್ಥಳದಲ್ಲಿದ್ದಾರೆ. ಬೋಟ್, ಮುಳುಗು ತಜ್ಞರ ಸಹಾಯದ ಮೂಲಕ ಉಳಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆ ಸುತ್ತಲಿನ ಗ್ರಾಮಗಳ ಈಜುಗಾರರು ಮತ್ತು ನಾವಿಕರನ್ನ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನದಿ ದಡದಲ್ಲಿಯೇ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.

  • ‘ಕೇಮ್ ಚೋ ಟ್ರಂಪ್’ ಕಾರ್ಯಕ್ರಮ – ಯಮುನೆಯ ಕೊಳಕನ್ನು ಮರೆಮಾಚಲು 500 ಕ್ಯೂಸೆಕ್ ನೀರು ಹರಿಸಿದ ಸರ್ಕಾರ

    ‘ಕೇಮ್ ಚೋ ಟ್ರಂಪ್’ ಕಾರ್ಯಕ್ರಮ – ಯಮುನೆಯ ಕೊಳಕನ್ನು ಮರೆಮಾಚಲು 500 ಕ್ಯೂಸೆಕ್ ನೀರು ಹರಿಸಿದ ಸರ್ಕಾರ

    ಲಕ್ನೋ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ನಗರ ಸುಂದರವಾಗಿ ಕಂಗೊಳಿಸಲು ಯುಪಿ ಸರ್ಕಾರ ನಾನಾ ಕಸರತ್ತು ಮಾಡ್ತಿದ್ದು, ಕಲುಷಿತಗೊಂಡು ದುರ್ವಾಸನೆ ಬೀರುತ್ತಿರುವ ಯಮುನಾ ನದಿಯ ಸೌಂದರ್ಯ ಹೆಚ್ಚಿಸಲು ಸರ್ಕಾರ ನದಿಗೆ ನೀರು ಹರಿಸಿದೆ.

    ಗುಜರಾತಿನ ಅಹಮದಾಬಾದಿನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ, ಭಾರತದ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿದ್ದಾರೆ. ಟ್ರಂಪ್ ಭೇಟಿ ವೇಳೆ ನದಿಯ ಪರಿಸರ ಸುಂದರವಾಗಿ ಕಾಣಬೇಕು ಎನ್ನುವ ಉದ್ದೇಶದಿಂದ ಉತ್ತರಪ್ರದೇಶದ ನೀರಾವರಿ ಇಲಾಖೆಯು ಯಮುನಾ ನದಿಗೆ 500 ಕ್ಯೂಸೆಕ್ ನೀರನ್ನು ಹರಿಸಿದೆ.ಇದನ್ನೂ ಓದಿ: ಭಾರತಕ್ಕೆ ಬರಲಿರುವ ಟ್ರಂಪ್ ಏನು ತಿನ್ನುತ್ತಾರೆ? ಫೇವರೇಟ್ ಆಹಾರ ಏನು?

    ಆಗ್ರಾಗೆ ಟ್ರಂಪ್ ಭೇಟಿ ನೀಡುತ್ತಾರೆಂಬ ಮಾಹಿತಿ ಇರುವ ಹಿನ್ನೆಲೆ ನದಿಗೆ 500 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಫೆಬ್ರವರಿ 20ರಂದು ಮಥುರಾದ ಯಮುನಾ ನದಿಗೆ ಹರಿಬಿಟ್ಟಿರುವ ನೀರು ಸೇರಲಿದ್ದು, ಬಳಿಕ ಫೆಬ್ರವರಿ 21ರಂದು ನೀರು ಆಗ್ರಾ ತಲುಪಲಿದೆ. ನದಿಗೆ ನೀರು ಹರಿಸಿರುವುದರಿಂದ ಅಲ್ಲಿ ಬರುತ್ತಿದ್ದ ದುರ್ನಾತ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತೆ. ನದಿಯ ಪರಿಸರವೂ ಕೂಡ ಮತ್ತಷ್ಟು ಸುಂದರವಾಗುತ್ತೆ ಎಂದು ಅಧಿಕಾರಿ ಧರ್ಮೇಂದರ್ ಸಿಂಗ್ ಫೋಗಟ್ ತಿಳಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಜೊತೆಗೆ ಭಾರತಕ್ಕೆ ಬರುತ್ತಿದೆ ದಿ ಬೀಸ್ಟ್ ಕಾರ್- ಕಾರಿನ ವಿಶೇಷತೆ ಏನು? ಮೈಲೇಜ್ ಎಷ್ಟು?

    ಅಲ್ಲದೇ ಮಾಲಿನ್ಯವನ್ನು ನಿಯಂತ್ರಿಸಲು 500 ಕ್ಯೂಸೆಕ್ ನೀರನ್ನು ಯಮುನಾ ನದಿಗೆ ಹರಿಬಿಡಲಾಗುತ್ತಿದೆ. ಇದು ನದಿ ಮೇಲೆ ಕೆಲ ಪರಿಣಾಮ ಬೀರಲಿದೆ. ಇದರಿಂದ ಮಥುರಾ ಹಾಗೂ ಆಗ್ರಾದಲ್ಲಿ ಹರಿಯುವ ಯುವನಾ ನದಿ ಆಮ್ಲಜನಕವನ್ನು ಹೆಚ್ಚಿಸುತ್ತದೆ. ನೀರು ಹರಿಸಿದ ಮಾತ್ರಕ್ಕೆ ಈ ನದಿ ನೀರು ಕುಡಿಯಲು ಯೋಗ್ಯವಾಗಲ್ಲ ಆದರೆ ನದಿಯ ದುರ್ವಾಸನೆ ದೂರವಾಗುತ್ತೆ ಎಂದು ಅಧಿಕಾರಿ ಹೇಳಿದ್ದಾರೆ.

    ಅಮೆರಿಕದ ಅನಿವಾಸಿ ಭಾರತೀಯರು ಹೂಸ್ಟನ್‍ನಲ್ಲಿ ಆಯೋಜಿಸಿದ್ದ `ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಕೆಲ ವಿಚಾರಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಅವರಿಗೆ ಸಹಾಯಕವಾಗಿತ್ತು. ಹೀಗಾಗಿ ಭಾರತಕ್ಕೆ ಆಗಮಿಸುತ್ತಿರುವ ಟ್ರಂಪ್ ಅವರಿಗೆ ಇಂತಹದ್ದೇ ವೇದಿಕೆ ಕಲ್ಪಿಸಿಕೊಡಲು `ಕೇಮ್ ಚೋ ಟ್ರಂಪ್’ ಸಾರ್ವಜನಿಕ ಸಭೆಗೆ ಭಾರೀ ಸಿದ್ಧತೆ ನಡೆದಿದೆ.

    ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಫೆಬ್ರವರಿ 24 ಹಾಗೂ 25 ರಂದು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ನವದೆಹಲಿಗೆ ಆಗಮಿಸಲಿರುವ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 25 ರಂದು ಗುಜರಾತ್‍ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಜಂಟಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

  • ಮಾಲಿನ್ಯ ಆಯ್ತು, ಈಗ ದೆಹಲಿಯಲ್ಲಿ ವಿಷಕಾರಿ ನೊರೆಯ ಆತಂಕ

    ಮಾಲಿನ್ಯ ಆಯ್ತು, ಈಗ ದೆಹಲಿಯಲ್ಲಿ ವಿಷಕಾರಿ ನೊರೆಯ ಆತಂಕ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ಅಲ್ಲಿನ ನಿವಾಸಿಗಳ ಆರೋಗ್ಯವನ್ನು ಹದಗೆಡಿಸುತ್ತಿದೆ. ಒಂದೆಡೆ ವಾಯು ಮಾಲಿನ್ಯವಾದರೆ, ಇನ್ನೊಂದೆಡೆ ಯಮುನಾ ನದಿ ವಿಷಕಾರಿ ನೊರೆಯಿಂದ ತುಂಬಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

    ಹೌದು, ದೆಹಲಿ ಇತ್ತೀಚೆಗೆ ಮಾಲಿನ್ಯದ ರಾಜಧಾನಿಯಾಗಿ ಬದಲಾಗುತ್ತಿದೆ. ಒಂದೆಡೆ ವಾಹನದ ಹೊಗೆ, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ವಾಯು ಮಾಲಿನ್ಯವಾಗಿ ಸಂಪೂರ್ಣ ನಗರ ಹೊಗೆಯಿಂದ ತುಂಬಿಕೊಂಡಿದೆ. ಇನ್ನೊಂದೆಡೆ ಜಲ ಮಾಲಿನ್ಯದಿಂದ ಯಮುನಾ ನದಿಯನ್ನು ವಿಷಕಾರಿ ನೊರೆ ಆವರಿಸಿಕೊಂಡಿದೆ. ಈ ವಿಷಕಾರಿ ನೊರೆ, ದುರ್ನಾತ ನಡುವೆಯೇ ಭಾನುವಾರ ಸಾವಿರಾರು ಭಕ್ತರು ಯಮುನಾ ನದಿ ತೀರದಲ್ಲಿ ನಿಂತು ಛತ್ ಪೂಜೆ ನೆರವೇರಿಸಿದ್ದಾರೆ.

    ಮಲಿನಗೊಂಡ ಯಮುನಾ ನದಿಯ ನೀರಿನಲ್ಲಿ ಭಕ್ತರು ಪೂಜೆ ನೆರವೇರಿಸುತ್ತಿರುವ ಫೋಟೋಗಳನ್ನು ನೋಡಿದರೆ ಜನರು ಯಾವುದೋ ಹಿಮ ಬೀಳುವ ಸ್ಥಳದಲ್ಲಿ ಪೂಜೆ ಮಾಡುತ್ತಿದ್ದಾರೆ. ಈ ಸ್ಥಳ ಎಷ್ಟು ಚೆನ್ನಾಗಿದೆ ಎಂದು ಅನಿಸಬಹುದು. ಆದರೆ ಅಸಲಿಗೆ ಫೋಟೋಗಳಲ್ಲಿ ಕಾಣುತ್ತಿರುವುದು ಹಿಮವಲ್ಲ ವಿಷಕಾರಿ ನೊರೆ ಎನ್ನುವುದು ಆಘಾತಕಾರಿ ವಿಷಯವಾಗಿದೆ.

    ರಾಜಧಾನಿ ನೀರಿಗಾಗಿ ಯಮುನಾ ನದಿಯನ್ನೇ ಅವಲಂಬಿಸಿದೆ. ಆದರೆ ಯಮುನಾ ನದಿ ದೇಶದಲ್ಲಿಯೇ ಅತ್ಯಂತ ಮಲಿನಗೊಂಡ ನದಿಯಾಗಿರುವುದು ವಿಪರ್ಯಾಸ. ನಗರದ 19 ಒಳಚರಂಡಿಗಳ ನೀರು ಯಮುನೆಗೆ ಬಂದು ಸೇರುತ್ತಿದೆ. ಇದರಿಂದಲೇ 96% ಯಮುನಾ ನದಿ ಮಲಿನಗೊಂಡಿದೆ. ಇದರಲ್ಲಿ 5% ದಷ್ಟು ಮಾತ್ರ ನೀರನ್ನು ಸಂಸ್ಕರಿಸಲು ಸಾಧ್ಯವಾಗುತ್ತಿದ್ದು ಇದು ನಗರ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

    ಛತ್ ಪೂಜೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರು ಕೂಡ ಭಾಗಿಯಾಗಿದ್ದರು. ಛತ್ ಪೂಜೆ ನೆರವೆರಿಸಲೆಂದೇ ಸರ್ಕಾರ ಯಮುನಾ ನದಿಯ ಸುತ್ತ 1,100 ಘಾಟ್‌ಗಳ ವ್ಯವಸ್ಥೆ ಮಾಡಿತ್ತು.

    ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಕೇಜ್ರಿವಾಲ್ ಮಾತನಾಡಿ, ಪ್ರಸ್ತುತ ಸ್ಥಿತಿ ಅಸಹನೀಯವಾಗಿದೆ. ನಗರವಾಸಿಗಳು ಅವರದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಉಸಿರಾಡಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದ್ದಾರೆ. ದೆಹಲಿಯಲ್ಲಿ ಇಂದಿನಿಂದ ಸಮಬೆಸ ಸಂಖ್ಯೆಗಳ ನಿಯಮ ಜಾರಿಯಾಗಿದೆ. ಅಲ್ಲದೆ ಹೆಚ್ಚಾಗಿರುವ ಮಾಲಿನ್ಯದ ಪರಿಣಾಮ ಮಂಗಳವಾರದವರೆಗೂ ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಫರೀದಾಬಾದ್‌ನಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

  • ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ಪ್ರಧಾನಿ ಮೋದಿ ಭೇಟಿ ಮಾಡಿ ಮನವಿ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೋಕಸಭೆಯ ಕಹಿ ಘಟನೆಗಳು ಮರೆಮಾಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

    ಹೊಸ ಎನ್‍ಡಿಎ ಸರ್ಕಾರ ರಚನೆಯಾದ ನಂತರ ಪ್ರಥಮ ಬಾರಿಗೆ ಪ್ರಧಾನಿ ಮೋದಿಯನ್ನು ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದ್ದು, ದೆಹಲಿಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ‘ನೀರು ಉಳಿಸಿ’ ಅಭಿಯಾನವನ್ನು ತಮ್ಮದೇ ಯೋಜನೆಯೊಂದಿಗೆ ಜಾರಿಗೊಳಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿ ಮೋದಿ ಭೇಟಿ ಕುರಿತು ತಮ್ಮ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ವಿಜಯದ ಕುರಿತು ಶುಭಾಶಯ ಕೋರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ರಾಂಚಿಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮರಳುವಾಗ ಕೇಜ್ರಿವಾಲ್ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಯಮುನಾ ನದಿ ನೀರನ್ನು ಕೊಯ್ಲು ಮಾಡುವ ಯೋಜನೆ ಮೂಲಕ ರಾಜಧಾನಿಯಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಮಳೆಗಾಲದಲ್ಲಿ ಯಮುನಾ ನದಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಒಂದು ಋತುಮಾನದ ನೀರಿನಿಂದ ದೆಹಲಿಯ ಒಂದು ವರ್ಷದ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಪೂರೈಸಲು ಕೇಜ್ರಿವಾಲ್ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಿದ್ದಾರೆ. ದೆಹಲಿ ಹಾಗೂ ಕೇಂದ್ರ ಸರ್ಕಾರ ಜೊತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಕೇಜ್ರಿವಾಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸಂಸತ್ ಜಂಟಿ ಅಧಿವೇಶನಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಈ ಕುರಿತು ಭಾಷಣ ಮಾಡಿದ್ದು, ನೀರು ಉಳಿಸುವ ಕುರಿತು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಯನ್ನು ವಿವರಿಸಿದ್ದರು. ಇದು ಸರ್ಕಾರದ ಎರಡನೇ ಅವಧಿಯ ವಿಶೇಷ ಅಭಿಯಾನವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ವಚ್ಛ ಭಾರತ’ ಅಭಿಯಾನ ಜನಪ್ರಿಯವಾಗಿತ್ತು.

    ಅಭಿಯಾನದ ಭಾಗವಾಗಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಗ್ರಾಮ ಪಂಚಾಯತ್‍ಗಳಿಗೆ ಪತ್ರ ಬರೆದು ಈ ಬಾರಿಯ ಮಳೆಗಾಲದಲ್ಲಿ ನೀರನ್ನು ಕೊಯ್ಲು ಮಾಡುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸುವಂತೆ ಸೂಚಿಸಿದ್ದಾರೆ.

    ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊಹಲ್ಲಾ ಕ್ಲಿನಿಕ್ (ಸಣ್ಣ ಕ್ಲಿನಿಕ್) ಹಾಗೂ ಅಧುನೀಕರಣಗೊಳಿಸಿದ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಂತೆಯೂ ಇದೇ ವೇಳೆ ಮನವಿ ಮಾಡಿದ್ದಾರೆ. ಮೊಹಲ್ಲಾ ಕ್ಲಿನಿಕ್ ಸ್ಥಾಪನೆ ಹಾಗೂ ಸರ್ಕಾರಿ ಶಾಲೆಗಳನ್ನು ಅಧುನೀಕರಣಗೊಳಿಸುವ ಯೋಜನೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು, ಈ ಕುರಿತು ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • 300 ಮೀಟರ್ ಎತ್ತರದಿಂದ ನದಿಗೆ ಉರುಳಿದ ಬಸ್ – 11 ಮಂದಿ ಸಾವು

    300 ಮೀಟರ್ ಎತ್ತರದಿಂದ ನದಿಗೆ ಉರುಳಿದ ಬಸ್ – 11 ಮಂದಿ ಸಾವು

    ಡೆಹ್ರಾಡೂನ್: ಉತ್ತರಕಾಶಿಯಿಂದ ವಿಕಾಸನಗರಕ್ಕೆ ತೆರೆಳುತ್ತಿದ್ದ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿ 123 ಬಳಿ ಆಯ ತಪ್ಪಿ ಯಮುನಾ ನದಿಗೆ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ.

    ಸುಮಾರು 300 ಮೀ. ಮೇಲಿಂದ ಬಸ್ಸು ಪಲ್ಟಿಯಾಗಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿದ್ದ 11 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಅಪಘಾತವಾಗಲು ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಅತೀಯಾದ ವೇಗದಲ್ಲಿ ಚಲಿಸುತ್ತಿದ್ದ ಕಾರಣಕ್ಕೆ ಬಸ್ ಪಲ್ಟಿಯಾಗಿ ನದಿಗೆ ಬಿದ್ದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಈ ಘಟನೆ ನಡೆದಿದ್ದು, ಸ್ಥಳಿಯರು ಹಾಗೂ ಉತ್ತರಕಾಶಿ ಜಿಲ್ಲಾಡಳಿತ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಪ್ರಯಾಣಿಕರಲ್ಲಿ 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ.

    ಈಗಾಗಲೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೂ ಉಳಿದ ಪ್ರಯಾಣಿಕರಿಗಾಗಿ ಶೋಧಕಾರ್ಯ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    60 ಜನರಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ – 19 ಸಾವು

    ಲಕ್ನೋ: ಉತ್ತರಪ್ರದೇಶದ ಭಾಗ್ಪತ್ ಬಳಿ 60 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಯಮುನಾ ನದಿಯಲ್ಲಿ ಮಗುಚಿಬಿದ್ದು ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಮಂದಿ ಮುಳುಗಿರುವ ಆತಂಕ ವ್ಯಕ್ತವಾಗಿದೆ.

     

    ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಂಡೊಯ್ಯುತ್ತಿದ್ದುದ್ದರಿಂದ ಮಗುಚಿಬಿದ್ದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದು, ಈಗಾಗಲೇ 12 ಮಂದಿಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸಂದರ್ಭದಲ್ಲಿ ಜನರಿಂದ ಕಕ್ಕಿರಿದಿದ್ದ ದೋಣಿ ಹರಿಯಾಣ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.