Tag: ಯಜ್ಞ ಶೆಟ್ಟಿ

  • ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಥಿಯೇಟರ್ ಗೆ ಹೊಸ ಜೀವ ತುಂಬಲಿದೆಯಾ ಆ್ಯಕ್ಟ್ 1978

    ಬೆಂಗಳೂರು: ಕೊರೊನಾ ದೇಶಕ್ಕೆ ಬಂದಾಗಿನಿಂದಲೂ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಲಾಕ್‍ಡೌನ್ ಆದಾಗಿನಿಂದ ಜನ ಮನೆಯಲ್ಲೇ ಲಾಕ್ ಆಗಿದ್ದರು. ಮನರಂಜನೆಯ ಬಾಗಿಲನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲಾಗಿತ್ತು. ಅನ್‍ಲಾಕ್ ಪ್ರಕ್ರಿಯೆಲ್ಲಿ ಕಡೆಗೂ ಥಿಯೇಟರ್ ಗಳ ಬಾಗಿಲನ್ನು ತೆರೆಯಲಾಗಿದೆ. ಆದರೂ ಪ್ರೇಕ್ಷಕರು ಥಿಯೇಟರ್ ಬಾಗಿಲಿಗೆ ಬರುತ್ತಿಲ್ಲ.

    ಥಿಯೇಟರ್ ಒಪನ್ ಆದರೂ ಜನ ಬರೋದು ಡೌಟೇ ಎಂಬುದನ್ನು ಅರಿತಿದ್ದ ನಿರ್ಮಾಪಕರು, ನಿರ್ದೇಶಕರು ಹೊಸ ಸಿನಿಮಾಗಳನ್ನ ಥಿಯೇಟರ್ ಗೆ ಬಿಟ್ಟು ಆಳ ನೋಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಹೀಗಾಗಿಯೇ ಸದ್ಯ ಥಿಯೇಟರ್ ಗಳಲ್ಲಿ ಮರು ಬಿಡುಗಡೆಯ ಪರ್ವ ಮುಂದುವರಿದಿದೆ.

    ಕೊರೊನಾ ವೈರಸ್ ಭಯ ಜನರನ್ನು ಇನ್ನು ಬಿಟ್ಟು ಹೋಗಿಲ್ಲ. ಹೀಗಾಗಿಯೇ ಜನ ಮನೆಯಿಂದ ಹೊರಗೆ ಬರಲು ಇನ್ನು ಹೆದರುತ್ತಿದ್ದಾರೆ. ವ್ಯಾಕ್ಸಿನ್ ಯಾವಾಗ ಸಿಗುತ್ತೋ? ಜನ ಧೈರ್ಯವಾಗಿ ಬಂದು ಸಿನಿಮಾ ನೋಡುವುದು ಯಾವಾಗಲೋ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹಾಗಾದ್ರೆ ಸಿನಿಮಾವನ್ನು ಸಿದ್ಧವಿಟ್ಟುಕೊಂಡು ವ್ಯಾಕ್ಸಿನ್ ಗಾಗಿ ಕಾಯುವುದರಲ್ಲಿ ಅರ್ಥವೇನಿದೆ ಅನ್ನೋದು ಇನ್ನೊಂದು ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳ ನಡುವೆ ಮಂಸೋರೆ ಒಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

    ಹೌದು ಅವರ ನಿರ್ದೇಶನದ ಆ್ಯಕ್ಟ್ 1978 ಚಿತ್ರವನ್ನು ಥಿಯೇಟರ್ ನಲ್ಲೇ ರಿಲೀಸ್ ಮಾಡಲು ನಿರ್ಧರಿಸಿ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ. ಈ ಲಾಕ್‍ಡೌನ್ ಮುಗಿದ ಬಳಿಕ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿರವ ಮೊದಲ ಹೊಸ ಸಿನಿಮಾವಿದು. ಎಲ್ಲರು ಹಿಂದೆ ಸರಿಯುತ್ತಿರುವಾಗ ಹೊಸ ಸಿನಿಮಾವನ್ನೇ ರಿಲೀಸ್ ಮಾಡಿ ಜನರನ್ನು ಥಿಯೇಟರ್ ನತ್ತ ಸೆಳೆಯಲು ಮಂಸೋರೆ ಟೀಂ ರೆಡಿಯಾಗಿದೆ. ಇದೇ ನವೆಂಬರ್ 20 ರಂದು ಆ್ಯಕ್ 1978 ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡುತ್ತಿದೆ.

    ಈಗಾಗಲೇ ಸಿನಿಮಾದ ಬಗ್ಗೆ ಸಾಕಷ್ಟು ಟಾಕ್ ಕ್ರಿಯೇಟ್ ಆಗಿದೆ. ಮನುಷ್ಯನಿಗೆ, ಸಮಾಜಕ್ಕೆ ತೀರಾ ಹತ್ತಿರವಾದಂತ ಕಾನೂನಿನ ಬಗೆಗಿನ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಾಗಿ ಜನ ಥಿಯೇಟರ್ ನತ್ತ ಬಂದೆ ಬರುತ್ತಾರೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಒಟ್ಟಾರೆ ಥಿಯೇಟರ್ ಗೆ ಜನ ಕರೆಸಿ ಹೊಸ ನಾಂದಿ ಹಾಡಲು ಹೊರಟಿದ್ದಾರೆ ಮಂಸೋರೆ ಟೀಂ.

    ಆ್ಯಕ್ಟ್ 1978 ಚಿತ್ರವನ್ನ ಮಂಸೋರೆ ನಿರ್ದೇಶನ ಮಾಡಿದ್ದು, ದೇವರಾಜ್ ಆರ್ ಬಂಡವಾಳ ಹೂಡಿದ್ದಾರೆ. ಯಜ್ಞ ಶೆಟ್ಟಿ, ಬಿ ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶೋಭರಾಜ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಯಾನಂದ್ ಟಿ ಕೆ, ವೀರು ಮಲ್ಲಣ್ಣ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ತುಳು ನಟನ ಜೊತೆ ಯಜ್ಞ ಶೆಟ್ಟಿ ಕಲ್ಯಾಣ

    ತುಳು ನಟನ ಜೊತೆ ಯಜ್ಞ ಶೆಟ್ಟಿ ಕಲ್ಯಾಣ

    ಮಂಗಳೂರು: ಬಹುಭಾಷಾ ನಟಿ ಯಜ್ಞಶೆಟ್ಟಿ ಅವರು ಇಂದು ತುಳು ಸಿನಿರಂಗದ ನಾಯಕ ನಟ ಸಂದೀಪ್ ಶೆಟ್ಟಿ ಅವರೊಂದಿಗೆ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕುಟುಂಬ ಸದಸ್ಯರು ಸೇರಿದಂತೆ ಕಲೆ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಂದು ಮಂಗಳೂರಿನಲ್ಲಿ ಮದುವೆ ನಡೆದಿದ್ದು, ನಟರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭಕೋರಿದ್ದಾರೆ.

    ಯಜ್ಞ ಶೆಟ್ಟಿ ಅವರು 2007ರಲ್ಲಿ ತೆರೆಕಂಡ ‘ಒಂದು ಪ್ರೀತಿಯ ಕಥೆ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಆ ಬಳಿಕ ‘ಎದ್ದೇಳು ಮಂಜುನಾಥ’, ‘ಲವ್ ಗುರು’, ‘ಉಳಿದವರು ಕಂಡಂತೆ’, ‘ಕಿಲ್ಲಿಂಗ್ ವೀರಪ್ಪನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದೊಂದಿಗೆ ತೆಲುಗು ಸಿನಿರಂಗಕ್ಕೂ ಪಾದಾರ್ಪಣೆ ಮಾಡಿದ್ದ ಯಜ್ಞಶೆಟ್ಟಿ ಅವರು, ‘ಲಕ್ಷ್ಮಿ’ಸ್ ಎನ್‍ಟಿಆರ್’ ಸಿನಿಮಾ ನಟನೆಗೆ ಭಾರೀ ಪ್ರಶಂಸೆಗಳನ್ನು ಪಡೆದಿದ್ದರು.

    ಕಿರುತೆಯಲ್ಲೂ ಮೋಡಿ ಮಾಡಿದ್ದ ಯಜ್ಞಶೆಟ್ಟಿ ಅವರು, ಸುದೀಪ್ ನಿರ್ಮಾಣದ ‘ವಾರಸ್ಥಾರ’ ಧಾರವಾಹಿಯಲ್ಲಿ ನಟಿಸಿದ್ದರು. ಉಳಿದಂತೆ ಸಂದೀಪ್ ಶೆಟ್ಟಿ ಅವರು ತುಳು ‘ಥಾಂಡಾ ಮದಿಮೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.