Tag: ಮ್ಯಾಚ್ ಫಿಕ್ಸಿಂಗ್

  • ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    – ಬಿಜೆಪಿ ಗೆದ್ದು ಸಂವಿಧಾನ ಬದಲಾಯಿಸಿದ್ರೆ ದೇಶವೇ ಹೊತ್ತಿ ಉರಿಯುತ್ತದೆ ಎಂದ ಸಂಸದ

    ನವದೆಹಲಿ: ಮ್ಯಾಚ್‌ ಫಿಕ್ಸಿಂಗ್‌ (Match Fixing) ಇಲ್ಲದೇ ಬಿಜೆಪಿ ʻ400 ಪಾರ್‌ʼ ಘೋಷಣೆ ಸಾಧ್ಯವಿಲ್ಲ. 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ. ಮೋದಿ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆಗೆ ಕೆಲವು ಉದ್ಯಮಿಗಳೂ ಸೇರಿಕೊಂಡಿದ್ದಾರೆ ಎಂದು ಸಂಸದ ರಾಹುಲ್‌ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ED ಬಂಧನ ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ I.N.D.I.A. ಒಕ್ಕೂಟದ ʻಪ್ರಜಾಪ್ರಭುತ್ವ ಉಳಿಸಿʼ ಪ್ರತಿಭಟನಾ ರ‍್ಯಾಲಿಯನ್ನು ದ್ದೇಶಿಸಿ ಅವರು, ಬಿಜೆಪಿ ಗೆದ್ದು ಸಂವಿಧಾನವನ್ನ ಬದಲಾಯಿಸಿದ್ರೆ, ದೇಶವೇ ಹೊತ್ತಿ ಉರಿಯುತ್ತದೆ. ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ ಎಂದು ಆತಂಕಪಟ್ಟಿದ್ದಾರೆ.

    ಸಂವಿಧಾನ ಬದಲಾದ ದಿನವೇ ದೇಶ ಒಡೆಯುತ್ತದೆ:
    ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿ ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ, ದೇಶದ ಸಂವಿಧಾನವನ್ನು ಬದಲಾಯಿಸುತ್ತದೆ. ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಬಡವರ ಹಣವನ್ನು ಕಸಿದುಕೊಳ್ಳುತ್ತಾರೆ, ಸಂವಿಧಾನ ಬದಲಾದ ದಿನವೇ ದೇಶ ಒಡೆದು ಹೋಗುತ್ತದೆ. ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಸುಮ್ಮನೆ ಹೇಳಿಲ್ಲ. ಜನರ ಪ್ರತಿಕ್ರಿಯೆಯನ್ನ ಪರೀಕ್ಷೆ ಮಾಡ್ತಿದ್ದಾರೆ. ಆದ್ದರಿಂದ ಇದು ಸಾಮಾನ್ಯ ಚುನಾವಣೆಯಲ್ಲ, ಭಾರತ ಮತ್ತು ಸಂವಿಧಾನ ಉಳಿಸುವ ಚುನಾವಣೆ, ಬಡವರ, ರೈತರ ಹಕ್ಕು ರಕ್ಷಿಸುವ ಚುನಾವಣೆ. ಇಂತಹ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ. ವಿಪಕ್ಷಗಳು ಚುನಾವಣೆ ಎದುರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ನ್ಯಾಯಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

    ಮ್ಯಾಚ್‌ ಫಿಕ್ಸಿಂಗ್‌ ಆಗದಿದ್ದರೆ 180 ಸ್ಥಾನ ದಾಟಲ್ಲ:
    ಕ್ರಿಕೆಟ್‌ನಲ್ಲಿ ಅಂಪೈರ್‌ಗಳು ಮತ್ತು ನಾಯಕನ ಮೇಲೆ ಒತ್ತಡ ಹೇರಿ, ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು (ಇಬ್ಬರು ಸಿಎಂ) ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಇವಿಎಂಗಳು, ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷದ ನಾಯಕರ ಮೇಲೆ ಒತ್ತಡ ತರದಿದ್ದರೆ, ಮಾಧ್ಯಮಗಳನ್ನು ಖರೀದಿಸದಿದ್ದರೆ ಅವರು 180 ಸ್ಥಾನಗಳನ್ನೂ ದಾಟಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

    ದೇಶದಲ್ಲಿ ಕಾಂಗ್ರೆಸ್‌ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಆದ್ರೆ ಪಕ್ಷದ ಎಲ್ಲಾ ಖಾತೆಗಳನ್ನ ಸ್ಥಗಿತಗೊಳಿಸಲಾಗಿದೆ. ಇಬ್ಬರು ಸಿಎಂ ಗಳನ್ನ ಬಂಧಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ? ಎಂದು ಪ್ರಶ್ನಿಸಿದ್ದಾರೆ.

  • WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

    WPL 2024: ಅಂಪೈರ್‌ ಎಡವಟ್ಟು – ಫಿಕ್ಸಿಂಗ್‌ ಹಣೆಪಟ್ಟಿ ಕಟ್ಟಿಕೊಂಡ ಮುಂಬೈ ಇಂಡಿಯನ್ಸ್‌

    ಮುಂಬೈ: ಪುರುಷರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆವೃತ್ತಿಯಲ್ಲಿ ಆಗಾಗ್ಗೆ ವಿವಾದಗಳು ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿಯೂ (WPL 2024) ಈಗ ಭಾರೀ ವಿವಾದಗಳು ಹುಟ್ಟಿಕೊಳ್ಳಲು ಶುರುವಾಗಿದೆ. ಕಳೆದ ವರ್ಷ ಡಬ್ಲ್ಯೂಪಿಎಲ್‌ ಮೊದಲ ಆವೃತ್ತಿಯ ಫೈನಲ್‌ನಲ್ಲಿ ನೋಬಾಲ್‌ ವಿವಾದ ಎದುರಿಸಿದ್ದ ಮುಂಬೈ ಇಂಡಿಯನ್ಸ್‌ (Mumbai Indians), 2ನೇ ಆವೃತ್ತಿಯಲ್ಲಿ ಫಿಕ್ಸಿಂಗ್‌ ಹಣೆಪಟ್ಟಿಯೊಂದಿಗೆ ಮನೆಗೆ ತೆರಳಿದೆ.

    ಶುಕ್ರವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಹರ್ಮನ್‌ ಪ್ರೀತ್‌ಕೌರ್‌ ಅವರ ನಾಟೌಟ್‌ ವಿವಾದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಸೋತು ಮನೆಗೆ ತೆರಳಿದರೂ ಅಭಿಮಾನಿಗಳು (Cricket Fans) ಆಕ್ರೋಶ ಹೊರಹಾಕುವುದನ್ನ ಮುಂದುವರಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಡಬ್ಲ್ಯೂಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌, ಎರಡೂ ತಂಡಗಳ ಫಿಕ್ಸಿಂಗ್‌ ನಿಲ್ಲಿಸಲು ಸಾಧ್ಯವಿಲ್ಲ ಎಂದು ಆರ್‌ಸಿಬಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.

    ಹರ್ಮನ್‌ಪ್ರೀತ್‌ ಕೌರ್‌ ಅವರ ರನೌಟ್‌ ಅನ್ನು ನಾಟೌಟ್‌ ಎಂದು ಘೋಷಿಸಲಾಗಿದೆ. ಇದು ಮ್ಯಾಚ್‌ ಫಿಕ್ಸಿಂಗ್‌ ಎಂದು ಆರ್‌ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌

    ಅಷ್ಟಕ್ಕೂ ಆಗಿದ್ದೇನು?
    ಆರ್‌ಸಿಬಿ ವಿರುದ್ಧದ ಎಲಿಮಿನೇಟರ್‌ ಪಂದ್ಯದಲ್ಲಿ 10ನೇ ಓವರ್‌ ವೇಳೆಗೆ ಹರ್ಮನ್‌ಪ್ರೀತ್‌ ಕೌರ್‌ ಕ್ರೀಸ್‌ಗೆ ಬಂದಿದ್ದರು. ಈ ವೇಳೆ ಸ್ಟ್ರೈಕ್‌ನಲ್ಲಿದ್ದ ನಟಾಲಿ ಸ್ಕಿವರ್‌ ಬ್ರಂಟ್‌ ಒಂದು ರನ್‌ ಕದಿಯಲು ಯತ್ನಿಸಿದರು. ಆಗ ಸ್ಲಿಪ್‌ ಫೀಲ್ಡರ್‌ ನೇರವಾಗಿ ಕೀಪರ್‌ ಕೈಗೆ ಚೆಂಡನ್ನು ಎಸೆದರು. ವಿಕೆಟ್‌ ಕೀಪರ್‌ ರಿಚಾ ಘೋಷ್‌ ಚೆಂಡನ್ನು ಕೈಗೆ ಹಿಡಿಯುವ ವೇಳೆ ಕ್ರೀಸ್‌ನಲ್ಲಿದ್ದ ಹರ್ಮನ್‌ಪ್ರೀತ್‌ ಕೌರ್‌ ಅವರ ಬ್ಯಾಟ್‌, ಚೆಂಡು ವಿಕೆಟ್‌ಗೆ ಬಡಿಯುವ ವೇಳೆ ಕ್ರೀಸ್‌ನಿಂದ ಮೇಲೆದ್ದಿತ್ತು. ಅಂಪೈರ್‌ ಇದನ್ನು ಔಟ್‌ ಎಂದೇ ಘೋಷಿಸುತ್ತಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದರು. ಅಚ್ಚರಿ ತೀರ್ಪಿನಂತೆ 3ನೇ ಅಂಪೈರ್‌ ನಾಟೌಟ್‌ ಎಂದು ಘೋಷಿಸಿದರು. ಇದರಿಂದ ಅಭಿಮಾನಿಗಳು ಅಸಮಾಧಾನಗೊಂಡರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಐಪಿಎಲ್‌ ಪ್ರಿಯರಿಗೆ ಶಾಕ್‌!

    ಮೊದಲ ಆವೃತ್ತಿಯಲ್ಲೇ ನೋಬಾಲ್‌ ವಿವಾದ:
    ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಟ್ರೋಫಿ ಗೆದ್ದ ಬಳಿಕ ನೋಬಾಲ್‌ ವಿವಾದ ಹುಟ್ಟಿಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಫೈನಲ್‌ನಲ್ಲಿ ಕ್ಯಾಪಿಟಲ್ಸ್‌ ಪರ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಶಫಾಲಿ ವರ್ಮಾ (Shafali Verma) ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಮುಂಬೈ ಇಂಡಿಯನ್ಸ್‌ ಬೌಲರ್‌ ಇಸ್ಸಿ ವಾಂಗ್‌ 2ನೇ ಓವರ್‌ನಲ್ಲಿ ಎಸೆದ 3ನೇ ಎಸೆತವು ಹೈ-ಫುಲ್‌ಟಾಸ್ ಆಗಿತ್ತು. ಸ್ಪಷ್ಟವಾಗಿ ಅದು ವಿಕೆಟ್‌ಗಿಂತಲೂ ಮೇಲ್ಭಾಗದಲ್ಲಿ‌ತ್ತು. ಟಿವಿ ಅಂಪೈರ್‌ ರಿವಿವ್ಯೂನಲ್ಲೂ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಆದರೂ ಶಫಾಲಿ ವರ್ಮಾಗೆ ಔಟ್ ತೀರ್ಪು ನೀಡಲಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳು ಮುಂಬೈ ತಂಡದ ಪರ ಅಂಪೈರ್‌ ಸೇರಿ 13 ಜನ ಫೀಲ್ಡಿಂಗ್‌ಗೆ ಇಳಿಯುತ್ತಾರೆ ಎಂದು ಟೀಕೆ ವ್ಯಕ್ತವಾಗಿತ್ತು.

  • IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

    IPL 2023: ಧೋನಿಯಿಂದ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ- ಲಾಸ್ಟ್ 5 ಓವರ್‌ಗೂ ಮುನ್ನ ನಡೆದಿದ್ದೇನು?

    ಚೆನ್ನೈ: 2023ರ ಐಪಿಎಲ್ (IPL 2023) ಆವೃತ್ತಿಯ ಪ್ಲೇ ಆಫ್‌ನಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (GT) ತಂಡವನ್ನ ಮಣಿಸಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) 10ನೇ ಬಾರಿಗೆ ಫೈನಲ್ ತಲುಪಿದೆ. ಆದ್ರೆ ಕೊನೆಯ 5 ಓವರ್‌ನಲ್ಲಿ ಟೈಟಾನ್ಸ್ ಗೆಲುವಿಗೆ 71 ರನ್‌ಗಳ ಅಗತ್ಯವಿದ್ದಾಗ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ (MS Dhoni) ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂಷಿಸುತ್ತಿದ್ದಾರೆ.

    ಈ ಹಿಂದೆ ಸಿಎಸ್‌ಕೆ ತಂಡದ ಪ್ರಮುಖ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕೇಸ್‌ನಲ್ಲಿ ಸಿಲುಕಿದ್ದರಿಂದ ತಂಡ 2 ವರ್ಷ ಬ್ಯಾನ್ ಆಗಿತ್ತು. ಆಗ ತಂಡದಲ್ಲಿದ್ದ ಆಟಗಾರರು ಇಬ್ಭಾಗವಾಗಿ ಕೆಲ ಆಟಗಾರರು ಗುಜರಾತ್ ಲಯನ್ಸ್ ತಂಡದಲ್ಲಿ, ಇನ್ನೂ ಕೆಲವರು ಮಹಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಿದ್ದರು. ಇದೀಗ ಮಹಿ ಅವರ ನಡೆಯಿಂದ ಕ್ರಿಕೆಟ್ ಅಭಿಮಾನಿಗಳ ನಡುವೆ ಪರ-ವಿರೋಧ ಚರ್ಚೆ ಹುಟ್ಟಿಕೊಂಡಿದೆ. ಇದನ್ನೂ ಓದಿ: IPL 2023 Final: ಗುಜರಾತ್‌ಗೆ ಗುನ್ನ ಕೊಟ್ಟ ಚೆನ್ನೈ – 10ನೇ ಬಾರಿಗೆ ಫೈನಲ್‌ಗೆ CSK ಎಂಟ್ರಿ

    ಕೊನೆಯ 5 ಓವರ್‌ನಲ್ಲಿ ನಡೆದಿದ್ದೇನು?
    ಗುಜರಾತ್ ಟೈಟಾನ್ಸ್‌ಗೆ ಬೃಹತ್ ಮೊತ್ತದ ಗುರಿ ನೀಡಿದ್ದ ಚೆನ್ನೈ 16ನೇ ಓವರ್ ಬೌಲ್ ಮಾಡಲು ಮಥೀಶ ಪತಿರನ ಸಿದ್ಧಗೊಳ್ಳುತ್ತಿದ್ದಾಗ ಅಂಪೈರ್ ಅನಿಲ್ ಚೌಧು ಪತಿರನ ಅವರನ್ನ ತಡೆದರು. ಆಗ ಲೆಗ್ ಅಂಪೈರ್ ಕ್ರಿಸ್ ಗ್ಯಾನಿ ಬಳಿ ತೆರಳಿದ ಧೋನಿ ಏನೆ0ದು ವಿಚಾರಿಸಿದರು. ಪತಿರನ ತಮ್ಮ ಮೊದಲ ಓವರ್ (ಇನ್ನಿಂಗ್ಸ್ನ 12ನೇ ಓವರ್) ಬೌಲ್ ಮಾಡಿದ ಬಳಿಕ 9 ನಿಮಿಷ ಮೈದಾನದಿಂದ ಹೊರಗುಳಿದಿದ್ದರು. ನಿಯಮದ ಪ್ರಕಾರ ಆಟದ ಮಧ್ಯೆ ಆಟಗಾರ ಮೈದಾನ ತೊರೆದರೆ, ಎಷ್ಟು ಸಮಯ ಹೊರಗಿದ್ದರೋ ಅಷ್ಟು ಸಮಯ ಕಳೆದ ಬಳಿಕವಷ್ಟೇ ಬೌಲ್ ಮಾಡಬಹುದು.

    ಪತಿರನ ಬೌಲ್ ಮಾಡಲು ಇನ್ನೂ 4 ನಿಮಿಷ ಆಗಬೇಕಿತ್ತು. ಇದಕ್ಕೆ ಧೋನಿ ಈಗಾಗಲೇ ಚಹಾರ್, ಜಡೇಜಾ, ತೀಕ್ಷಣ ತಲಾ 4 ಓವರ್ ಮುಗಿಸಿದ್ದಾರೆ. ಉಳಿದಿರುವುದು ತುಷಾರ್ ದೇಶ್‌ಪಾಂಡೆ ಮಾತ್ರ. ಅದರಲ್ಲಿ 2 ಓವರ್ ಪತಿರನ ಅವರದ್ದು 3 ಓವರ್ ಬಾಕಿ ಇದೆ. ತಂಡದಲ್ಲಿರುವ ಮತ್ತೊಂದು ಬೌಲಿಂಗ್ ಆಯ್ಕೆ ಮೋಯಿನ್ ಅಲಿ, 30 ಎಸೆತದಲ್ಲಿ ಟೈಟಾನ್ಸ್ ಗೆ ಗೆಲ್ಲಲು 71 ರನ್ ಬೇಕಿದೆ. ವಿಜಯ್ ಶಂಕರ್, ರಹೀದ್ ಖಾನ್ ಇಬ್ಬರು ಬಲಗೈ ಬ್ಯಾಟರ್‌ಗಳು ಆಡುತ್ತಿರುವಾಗ ಬಲಗೈ ಸ್ಪಿನ್ನರ್‌ನನ್ನ ದಾಳಿಗಿಳಿಸುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ 4 ನಿಮಿಷ ಮಾತನಾಡುತ್ತಲೇ ಕಳೆಯೋಣ ಎಂದು ಧೋನಿ ಅಂಪೈರ್‌ಗಳಲ್ಲಿ ಮನವರಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್‌

    ದಂಡದಿಂದ ಸಿಎಸ್‌ಕೆ ಪಾರು:
    ಫೀಲ್ಡಿಂಗ್ ಮಾಡುತ್ತಿರುವ ತಂಡ ಉದ್ದೇಶ ಪೂರ್ವಕವಾಗಿ ಸಮಯ ವ್ಯರ್ಥ ಮಾಡಿದರೆ, ನಿಯಮದ ಪ್ರಕಾರ 5 ರನ್ ದಂಡ ಹಾಕಬೇಕು, ಜೊತೆಗೆ ಯಾವ ಬೌಲರ್ ನಿಂದಾಗಿ ಆಟ ವಿಳಂಬವಾಗುತ್ತಿದೆಯೋ ಆತನನ್ನು ಹೊರಹಾಕಬೇಕು. ಇದು ಅಂಪೈರ್‌ಗಳಷ್ಟೇ ತೆಗೆದುಕೊಳ್ಳಬಹುದಾದ ನಿರ್ಧಾರ. ಆದ್ರೆ ಧೋನಿಯ ವಿಚಾರದಲ್ಲಿ ಅಂಪೈರ್ ಗಳು ಮೃದು ಧೋರಣೆ ತೋರಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ.

    ಮ್ಯಾಚ್ ಫಿಕ್ಸಿಂಗ್ ಸದ್ದು:
    ಐಪಿಎಲ್‌ನಲ್ಲಿ ಈ ಹಿಂದೆಯೂ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಬೆಳಕಿಗೆ ಬಂದಿದೆ. ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಅಜಿತ್ ಚಂಡೀಲಾ ಅವರು ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿ ಗುರುನಾಥ್ ಮೇಯಪ್ಪನ್ ಅವರು ಕೂಡ ಇವರ ಜೊತೆ ಶಿಕ್ಷೆಗೆ ಒಳಗಾಗಿದ್ದರು. ಬಾಂಗ್ಲಾದೇಶ ಮಾಜಿ ನಾಯಕ ಶಕಿಬ್ ಅಲ್ ಹಸನ್ ಅವರು 2021ರಲ್ಲಿ ಭ್ರಷ್ಟಚಾರದ ಕುರಿತು ವರದಿ ಮಾಡುವಲ್ಲಿ ವಿಫಲರಾಗಿದ್ದರಿಂದ ಅವರು ಕೆಲ ತಿಂಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

    BCCI ಭ್ರಷ್ಟಾಚಾರ ನಿಗ್ರಹ ಘಟಕ ಹೇಳುವುದೇನು?
    ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆಟಗಾರರು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿದರೆ, ತಕ್ಷಣ ಅವರು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಬೇಕು. ಇಲ್ಲದೇ ಇದ್ದಲ್ಲಿ ಅಂತಹ ಆಟಗಾರರು ಅಮಾನತು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ, ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಕಾರ್ಯ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಭ್ರಷ್ಟಚಾರ ನಿಗ್ರಹ ಘಟಕ ಹೇಳಿದೆ.

  • 2023 ವಿಶ್ವಕಪ್ ಆಡುವುದೇ ನನ್ನ ಗುರಿ: ಶ್ರೀಶಾಂತ್

    2023 ವಿಶ್ವಕಪ್ ಆಡುವುದೇ ನನ್ನ ಗುರಿ: ಶ್ರೀಶಾಂತ್

    ತಿರುವನಂತಪುರಂ: 2023ರ ವಿಶ್ವಕಪ್ ಆಡುವುದೇ ತಮ್ಮ ಮುಂದಿರುವ ಬಹುದೊಡ್ಡ ಗುರಿ, ನನ್ನ ಮಾತು ಕೇಳಲು ಅಚ್ಚರಿ ಎನಿಸಿದರೂ ಈ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕ್ರಿಕೆಟಿಗ ಎಸ್.ಶ್ರೀಶಾಂತ್ ಹೇಳಿದ್ದಾರೆ.

    2023ರ ಏಕದಿನ ವಿಶ್ವಕಪ್ ಆಡುವ ವಿಶ್ವಾಸವಿದೆ. ಎಂದೂ ನಮ್ಮ ಗುರಿಗಳು ಉನ್ನತಮಟ್ಟದಲ್ಲಿರಬೇಕು, ನನ್ನ ಲಕ್ಷ್ಯವೂ ಎತ್ತರದಲ್ಲಿರುತ್ತವೆ. ಒಂದೊಮ್ಮೆ ಒಬ್ಬ ಅಥ್ಲೀಟ್ ಚಿಕ್ಕ ಗುರಿಯನ್ನು ಹೊಂದಿದ್ದರೆ ಸಾಧಾರಣ ವ್ಯಕ್ತಿಯಾಗಿ ಪರಿವರ್ತನೆ ಆಗುತ್ತಾನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್ ಗೆ ಅಂತ್ಯವಾಗಲಿದೆ. ನಿಷೇಧ ಮುಗಿದ ಬಳಿಕ ಕೇರಳ ಪರ ರಣಜಿ ಟ್ರೋಫಿ ಆಡುವ ಅವಕಾಶ ನೀಡಲಾಗಿದೆ. ಈಗಾಗಲೇ ಕೇರಳ ಕ್ರಿಕೆಟ್ ಬಿಡುಗಡೆ ಮಾಡಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್‍ಗೆ ಸ್ಥಾನ ನೀಡಿದೆ. ಶ್ರೀಶಾಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ರಣಜಿ ಆಡುವುದು ಬಹುತೇಕ ಖಚಿತವಾಗಿದೆ.

    ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಉದ್ಭವಿಸಿದೆ. ಅಲ್ಲದೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

     

    View this post on Instagram

     

    https://youtu.be/yv4mSzAzvY0

    A post shared by Sree Santh (@sreesanthnair36) on

  • 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    – ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು

    ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

    ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.

    ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.

    ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.

    ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.

  • ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಮ್ಯಾಚ್ ಫಿಕ್ಸಿಂಗ್: ಅಫ್ಘಾನ್ ಸ್ಟಾರ್ ಕ್ರಿಕೆಟಿಗನಿಗೆ 6 ವರ್ಷ ನಿಷೇಧ!

    ಕಾಬುಲ್: ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ತನ್ನ ತಂಡದ ಸ್ಟಾರ್ ಕ್ರಿಕೆಟ್ ಆಟಗಾರ ಶಫಿಕುಲ್ಲಾ ಶಫಾಕ್ ಮೇಲೆ 6 ವರ್ಷ ಅಮಾನತು ಶಿಕ್ಷೆ ವಿಧಿಸಿದೆ.

    ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ 2018ರ ಆವೃತ್ತಿ ಹಾಗೂ 2019ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಶಫಾಕ್ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ ಪರಿಣಾಮ ಆತನ ವಿರುದ್ಧ ಐಸಿಸಿ ನಿಯಮ 2.1.1ರ ಅನ್ವಯ ನಿಷೇಧ ವಿಧಿಸಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

    ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ವಿವಿಧ ರೀತಿ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೇ, ಬುಕ್ಕಿಗಳು ಸಂಪರ್ಕ ಮಾಡಿದ್ದರು ಉದ್ದೇಶ ಪೂರ್ವಕವಾಗಿ ಬೋರ್ಡಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಆಟಗಾರ ಫಿಕ್ಸಿಂಗ್‍ನಲ್ಲಿ ಪಾಲ್ಗೊಂಡಿರುವುದಕ್ಕೆ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 30 ವರ್ಷದ ಶಫಾಕ್ ದೇಶದ ಪರ ಅಂತಿಮ ಪಂದ್ಯವನ್ನಾಡಿದ್ದು, ಇದುವರೆಗೂ 24 ಏಕದಿನ, 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

    ವಿಶ್ವ ಕ್ರಿಕೆಟ್‍ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್, ಮೊಹಮ್ಮದ್ ನಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಈ ಇಬ್ಬರು ಆಟಗಾರರ ಬಳಿಕ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಶಫಾಕ್ ಸ್ಟಾರ್ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದರು. ದೇಶಿಯ ಕ್ರಿಕೆಟ್‍ನಲ್ಲಿರುವಾಗಲೇ ಟಿ20 ಮಾದರಿಯಲ್ಲಿ ಕೇವಲ 71 ಎಸೆತಗಳಲ್ಲಿ 214 ರನ್ ಸಿಡಿಸಿದ್ದರು.

  • ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್ ನಡೆಸಿ ನಿಷೇಧಕ್ಕೊಳಗಾದ ಪಾಕ್ ಕ್ರಿಕೆಟಿಗರು ಇವರೇ!

    ಫಿಕ್ಸಿಂಗ್‍ಗೂ ಪಾಕಿಸ್ತಾನಕ್ಕೂ ಬಿಡದ ನಂಟು..!

    ಇಸ್ಲಾಮಾಬಾದ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಎಂದಾಕ್ಷಣ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಹೆಸರು ನೆನಪಾಗುತ್ತದೆ. ಕಳೆದ 2 ದಶಕಗಳಲ್ಲಿ ಸರಿ ಸುಮಾರು 8 ಮಂದಿ ಪಾಕಿಸ್ತಾನ ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ನಿಷೇಧವನ್ನು ಎದುರಿಸಿದ್ದಾರೆ. ಈಗಲೂ ಕೂಡ ಪಾಕ್ ಕ್ರಿಕೆಟಿಗರೊಂದಿಗೆ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದರೇ ಆಟಗಾರರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟವಾಗುತ್ತದೆ.

    ಇತ್ತೀಚೆಗೆ ಪಾಕಿಸ್ತಾನ ಸೂಪರ್ ಲೀಗ್‍ಗೂ ಮುನ್ನ ಪಾಕಿಸ್ತಾನ ಅನುಭವಿ ಆಟಗಾರ ಉಮರ್ ಅಕ್ಮಲ್‍ರನ್ನು ಫಿಕ್ಸಿಂಗ್ ಮಾಡಲು ಬುಕ್ಕಿಗಳು ಸಂಪರ್ಕಿಸಿದ್ದರು. ಪರಿಣಾಮ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಕ್ಮಲ್‍ಗೆ ಮೂರು ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ. ಇದೇ ವೇಳೆ ಫಿಕ್ಸಿಂಗ್ ಕಾರಣದಿಂದ ನಿಷೇಧಕ್ಕೊಳಗಾದ ಆಟಗಾರರ ಪಟ್ಟಿ ಇಂತಿದೆ.

    ಸಲೀಂ ಮಲಿಕ್ (2000): ಮ್ಯಾಚ್ ಫಿಕ್ಸಿಂಗ್ ಕಾರಣದಿಂದ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ನಿಷೇಧಕ್ಕೆ ಒಳಗಾದ ಆಟಗಾರ ಸಲೀಂ ಮಲಿಕ್. ಆ ವೇಳೆ ಆತನ ಮೇಲೆ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ ಕೆಲ ಸಮಯದ ಬಳಿಕ ಆತನ ಮೇಲಿನ ಅಮಾನತು ವಾಪಸ್ ಪಡೆಯಲಾಗಿತ್ತು. ಆದರೆ 2008ರಲ್ಲಿ ಮತ್ತೊಮ್ಮೆ ಫಿಕ್ಸಿಂಗ್ ನಡೆಸಿ ಸಲೀಂ ಸಿಕ್ಕಿಹಾಕಿಕೊಂಡಿದ್ದ.

    ಅಟಾ-ಉರ್-ರೆಹಮಾನ್ (2000): ಫಿಕ್ಸಿಂಗ್ ನಡೆಸಲು ಬುಕ್ಕಿಗಳೊಂದಿಗೆ ಮಾತುಕತೆ ನಡೆಸಿದ ಕಾರಣದಿಂದ 2000ರಲ್ಲಿ ಆತನ ವಿರುದ್ಧ ಜೀವಮಾನದ ಅಮಾನತು ವಿಧಿಸಲಾಗಿತ್ತು. ಆದರೆ 2006 ರಲ್ಲಿ ಅಮಾನತು ಹಿಂಪಡೆಯಲಾಗಿತ್ತು.

    ಮೊಹಮ್ಮದ್ ಅಮಿರ್ (2011): ಇಂಗ್ಲೆಂಡ್ ಟೂರ್ನಿ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ನೋ ಬಾಲ್ ಎಸೆಯಲು ಬುಕ್ಕಿಗಳೊಂದಿಗೆ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳಲಾಗಿತ್ತು. 2010 ರಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ 2011ರಲ್ಲಿ 5 ವರ್ಷ ಅಮಾನತು ಮಾಡಲಾಗಿತ್ತು. ಅಮಾನತು ಅಂತ್ಯವಾದ ಬಳಿಕ 2016ರಲ್ಲಿ ಮತ್ತೆ ಅಮಿರ್ ಪಾಕ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದ.

    ಮೊಹಮ್ಮದ್ ಆಸಿಫ್ (2011): ಸ್ಪಾಟ್ ಫಿಕ್ಸಿಂಗ್ ಭಾಗವಾಗಿ ನೋ ಬಾಲ್ ಎಸೆದಿದ್ದ ಆಸಿಫ್‍ಗೆ 7 ವರ್ಷ ಅಮಾನತು ವಿಧಿಸಿಲಾಗಿತ್ತು. ಆದರೆ ಆ ಬಳಿಕ ಅಮಾನತು ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು. ಅಲ್ಲದೇ ವಿಚಾರಣೆ ಕಾರಣದಿಂದ ಆಸಿಫ್ 12 ತಿಂಗಳು ಜೈಲು ವಾಸ ಅನುಭವಿಸಿದ್ದ.

    ಸಲ್ಮಾನ್ ಭಟ್ (2011): 2010ರ ಇಂಗ್ಲೆಂಡ್ ಟೂರ್ನಿ ಭಾಗವಾಗಿ ನಡೆದಿದ್ದ ಟೂರ್ನಿಯಲ್ಲಿ ಅಮಿರ್, ಆಸಿಫ್‍ರೊಂದಿಗೆ ಭಟ್ ಕೂಡ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಜೀವಮಾನ ನಿಷೇಧಕ್ಕೆ ಒಳಗಾಗಿದ್ದ ಭಟ್‍ಗೆ ಆ ಬಳಿಕ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಲಾಗಿತ್ತು.

    ಡ್ಯಾನಿಶ್ ಕನೇರಿಯಾ (2010): ಪಾಕಿಸ್ತಾನ ಪರ ಆಡಿದ ಮೊದಲ ಹಿಂದೂ ಎಂಬ ದಾಖಲೆ ಬರೆದಿದ್ದ ಡ್ಯಾನಿಶ್ ಕನೇರಿಯಾ ಇಂಗ್ಲೆಂಡ್‍ನಲ್ಲಿ ನಡೆದಿದ್ದ ಕೌಂಟಿ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ. ಪರಿಣಾಮ ಆತನ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೀವಮಾನ ನಿಷೇಧ ವಿಧಿಸಿತ್ತು. 2018 ರಲ್ಲಿ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿದ್ದ ಕನೇರಿಯಾ ಫಿಕ್ಸಿಂಗ್ ನಡೆಸಿದ್ದಾಗಿ ಒಪ್ಪಿಕೊಂಡಿದ್ದ.

    ಶಾರ್ಜೀಲ್ ಖಾನ್ (2018): ಪಾಕ್ ತಂಡದ ಆರಂಭಿಕ ಆಟಗಾರನಾಗಿದ್ದ ಶಾರ್ಜೀಲ್ ಖಾನ್ ಪಾಕ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಪಾಕಿಸ್ತಾನ್ ಸೂಪರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಹಾಕಿಕೊಂಡಿದ್ದ. ಪರಿಣಾಮ 5 ವರ್ಷ ಆತನನ್ನು ಅಮಾನತು ಮಾಡಲಾಗಿದೆ.

    ಉಮರ್ ಅಕ್ಮಲ್ (2020): ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಉಮರ್ ಅಕ್ಮಲ್‍ನನ್ನು ಸಂಪರ್ಕಿಸಿದ್ದರು. ಆದರೆ ಈ ವಿಚಾರವನ್ನು ಆತ ಪಾಕ್ ಕ್ರಿಕೆಟ್ ಬೋರ್ಡಿಗೆ ತಿಳಿಸಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡಿನ ಭ್ರಷ್ಟಾಚಾರ ನಿಗ್ರಹ ಸಮಿತಿ ಉಮರ್ ಅಕ್ಮಲ್‍ಗೆ 3 ವರ್ಷ ನಿಷೇಧ ವಿಧಿಸಲಾಗಿದೆ.

  • ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    ಕೋಟಿ ಕೋಟಿ ಹಣ ಸಂಪಾದನೆಗಾಗಿ ಆಟವನ್ನೇ ಪಣಕ್ಕಿಟ್ಟಿದ್ದವರ ವಿರುದ್ಧ ಚಾರ್ಚ್ ಶೀಟ್

    – ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ದೋಷಾರೋಪ ಸಲ್ಲಿಕೆ

    ಬೆಂಗಳೂರು: ಕೋಟಿ ಕೋಟಿ ಹಣ ಸಂಪಾದನೆಗಾಗಿ ಕ್ರಿಕೆಟ್ ಆಟವನ್ನೇ ಪಣಕ್ಕಿಟ್ಟಿದವರು ಅಂದರ್ ಆಗಿದ್ದು ಆಯ್ತು, ಬೇಲ್‍ನ ಮೇಲೆ ಬಿಡುಗಡೆಯೂ ಆದರು. ಆದ್ರೀಗ ಆ ಎಲ್ಲಾ ಖತರ್ನಾಕ್ ಟೀಂ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳು ಯಾವ ರೀತಿಯಲ್ಲಿ ಪ್ರಕರಣಕ್ಕೆ ಕೈ ಜೋಡಿಸಿದ್ದರು ಎನ್ನುವುದನ್ನು ಸಾಕ್ಷ್ಯ ಸಮೇತ ಸಿಸಿಬಿ ಪೊಲೀಸರು ಬಿಚ್ಚಿಟ್ಟಿದ್ದಾರೆ.

    ಕೆಪಿಎಲ್‍ನ ಎರಡು ಟೀಂಗಳ ಮಾಲೀಕರಾದ ಆಲಿ, ಅರವಿಂದ ರೆಡ್ಡಿ, ಆಟಗಾರರಾದ ಗೌತಮ್, ಖಾಜಿ ವಿರುದ್ಧ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳ ಪ್ರಕಾರ, ಮೊದಲು ಅಂತರರಾಷ್ಟ್ರೀಯ ಮಟ್ಟದ ಬುಕ್ಕಿಗಳಿಂದ ಕೆಪಿಎಲ್ ತಂಡಗಳ ಮಾಲೀಕರ ಸಂಪರ್ಕವಾಗಿತ್ತು. ಬಳಿಕ ಮ್ಯಾಚ್ ಫಿಕ್ಸಿಂಗ್ ಬಗ್ಗೆ ದುರಾಲೋಚನೆಯುಳ್ಳ ಮಾಲೀಕರು ತಮ್ಮ ತಂಡದ ಕೆಲ ಆಟಗಾರರನ್ನು ಸಂಪರ್ಕಿಸಿದ್ದರು. ನಂತರ ಆಟಗಾರರು ಹಾಗೂ ಬುಕ್ಕಿಗಳು ಜೊತೆ ಅನ್ಯೋನ್ಯತೆ ಬೆಳೆಸಿ ಫಿಕ್ಸಿಂಗ್ ನಡೆದಿತ್ತು ಎಂದು ತಿಳಿಸಲಾಗಿದೆ.

    ಮ್ಯಾಚ್ ಫಿಕ್ಸಿಂಗ್ ಟ್ರಿಕ್ಸ್:
    * ಒಂದು ಓವರಿನಲ್ಲಿ 10ಕ್ಕೂ ಹೆಚ್ಚು ರನ್ ನೀಡುವಂತೆ ಡೀಲ್
    * ಅತಿ ಹೆಚ್ಚು ಬಾಲ್‍ಗಳಲ್ಲಿ ಕಡಿಮೆ ರನ್ ಗಳಿಸುವಂತೆ ಫಿಕ್ಸ್
    * ಫುಲ್ ಸ್ಲೀವ್ ಶರ್ಟ್ ಅನ್ನು ಅರ್ಧಕ್ಕೆ ಏರಿಸಿಕೊಂಡು ಸಿಗ್ನಲ್
    * ಪದೇ ಪದೇ ಬ್ಯಾಟ್‍ಗಳನ್ನು ಬದಲಿಸುವ ರೀತಿ ಸಿಗ್ನಲ್ ನೀಡುತ್ತಿದ್ದ ಫಿಕ್ಸರ್ಸ್

  • ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ದಕ್ಷಿಣ ಏಷ್ಯಾದಲ್ಲೇ ಮೊದಲು- ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ

    ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಕಳ್ಳಾಟ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧದ ಅಡಿ ಪರಿಗಣಿಸುವ ಕಾಯ್ದೆಗೆ ಶ್ರೀಲಂಕಾ ಸಂಸತ್ ಅನುಮೋದನೆ ನೀಡಿದೆ.

    ಕಳೆದ ಕೆಲ ವರ್ಷಗಳಿಂದ ಮ್ಯಾಚ್ ಫಿಕ್ಸಿಂಗ್ ಹಾಗೂ ಕ್ರೀಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಸಂಕಷ್ಟ ಎದುರಿಸಿದ್ದ ಶ್ರೀಲಂಕಾ ಕ್ರಿಕೆಟ್ ಬೋರ್ಡ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಯಮಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಸದ್ಯ ಈ ಪ್ರಸ್ತಾವನೆಗಳನ್ನು ಸ್ವೀಕರಿಸಿರುವ ಸರ್ಕಾರ ಪಾರ್ಲಿಮೆಂಟ್‍ನಲ್ಲಿ ಮಸೂದೆಗೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆಯ ಅನ್ವಯ ಕ್ರೀಡಾ ಕಳ್ಳಾಟ, ಭ್ರಷ್ಟಾಚಾರ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿ ತನಿಖೆ ನಡೆಸುವುದು ಹಾಗೂ ಇಂತಹ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷವರೆಗೂ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ.

    ಶ್ರೀಲಂಕಾ ಕ್ರೀಡಾ ಸಚಿವ ಹರಿನ್ ಫರ್ನಾಂಡೋ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಿದರು. ಈ ಕಾಯ್ದೆಗೆ ಸಚಿವ, ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬೆಂಬಲ ನೀಡಿದ್ದರು. ಈ ಕಾಯ್ದೆಯನ್ನು ಜಾರಿ ಮಾಡಲು ಕ್ರೀಡಾ ಸಚಿವಾಲಯ ಐಸಿಸಿಯೊಂದಿಗೆ ಮಾತುಕತೆ ನಡೆಸಿತ್ತು. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಮಾತ್ರವಲ್ಲದೇ ಈ ಇದಕ್ಕೆ ನೆರವು ನೀಡುವ ವ್ಯಕ್ತಿಗಳಿಗೂ ಶಿಕ್ಷೆ ನೀಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡದ ಈಗಿನ ಆಟಗಾರರು ಮಾತ್ರವಲ್ಲದೇ ಮಾಜಿ ಆಟಗಾರರಿಗೂ ಈ ಕಾಯ್ದೆ ಅನ್ವಯವಾಗುತ್ತದೆ.

  • ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ- ಇಬ್ಬರು ಆಟಗಾರರು ಅರೆಸ್ಟ್

    ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಪಂದ್ಯಾವಳಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಕರ್ನಾಟಕ ತಂಡದ 2 ಆಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೊಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಅಬ್ರರ್ ಖಾಜಿ ಬಂಧನಕ್ಕೊಳಗಾದ ಆಟಗಾರರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ. ಹಣ ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಸಿಎಂ ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್‌ನಲ್ಲಿ ಮುಂಬೈ, ಆರ್‌ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು. ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ. ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್‌ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಈ ಹಿನ್ನೆಲೆ ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.