Tag: ಮೌಢ್ಯ ಆಚರಣೆ

  • ಬಿಸಿ ಬಿಸಿ ರಕ್ತ ಹೀರುವ ಮನುಷ್ಯ-ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಆಚರಣೆ

    ಬಿಸಿ ಬಿಸಿ ರಕ್ತ ಹೀರುವ ಮನುಷ್ಯ-ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಆಚರಣೆ

    ಕೋಲಾರ: ರಾಜ್ಯದಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆಯನ್ನ ಜಾರಿ ಮಾಡಿದ್ರೂ ಸಹ ದೇವರ ಹೆಸರಿನಲ್ಲಿ ಭಯಾನಕ ಆಚರಣೆಗಳು ನಡೆಯುವುದು ಮಾತ್ರ ತಪ್ಪಿಲ್ಲ. ಗಡಿ ಜಿಲ್ಲೆ ಕೋಲಾರದ ಕೆಜಿಎಫ್ ನಗರದ ಚಾಂಪಿಯನ್ ರೀಫ್ ನಲ್ಲಿ ಕಾಳಿ ಆರಾಧಕರು ನಡೆಸುವ ನರಕಾಸುರ ಸಂಹಾರ ಆಚರಣೆ ನಿಜಕ್ಕೂ ನಾಗರಿಕರು ಭಯಪಡುವಂತಹದ್ದು. ಈ ಆಚರಣೆ ದೇವರ ಮೇಲಿರುವ ಜನರ ನಂಬಿಕೆಯನ್ನ ಭಯಕ್ಕೆ ತಿರುಗಿಸುತ್ತದೆ.

    ಮಹಾಶಿವರಾತ್ರಿಯ ನಂತರದ ಮೊದಲ ಅಮಾವಾಸ್ಯೆಯಂದು ಕಾಳಿ ಆರಾಧಕರು ದೇವಿಯನ್ನು ಒಲಿಸಿಕೊಳ್ಳುವ ಸಲುವಾಗಿ ಮಾಡುವ ಸ್ಮಶಾನದಲ್ಲಿ ನರಕಾಸುರ ಸಂಹಾರ ಎಂಬ ವಿಶೇಷ ಆಚರಣೆ ಮಾಡುತ್ತಾರೆ. ಈ ದಿನದಂದು ಕಾಳಿ ಆರಾಧಕ ಕಾಳಿವೇಷಧಾರಿ ಮದನ್, ನರಕಾಸುರ ಪ್ರತಿಕೃತಿ ಮೇಲೆ ನೃತ್ಯ ಮಾಡುತ್ತಾ, ಥೇಟ್ ನರಕಾಸುರನ ಹೊಟ್ಟೆ ಬಗೆಯುವ ರೀತಿ ಮಾಡುತ್ತಾರೆ.

    ಈ ವೇಳೆ ಕಪ್ಪುಬಣ್ಣದ ಜೀವಂತ ಮೇಕೆ ಕತ್ತು ಕತ್ತರಿಸಿ ಭಯಾನಕ ರೀತಿಯಲ್ಲಿ ಬಿಸಿ ಬಿಸಿ ರಕ್ತವನ್ನು ಕಾಳಿ ವೇಷಧಾರಿ ಕುಡಿಯುತ್ತಾರೆ. ಜೊತೆಗೆ ಕೋಳಿಯ ಕತ್ತನ್ನು ಬಾಯಿಂದ ಕಚ್ಚಿ ಎಸೆದು ರಕ್ತ ಹೀರುತ್ತಾನೆ, ಈ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸುತ್ತಿವೆ.

    ಇದು ಭಕ್ತರ ಪಾಲಿಗೆ ಸಂಪ್ರದಾಯ, ಭಕ್ತಿ. ಆದರೆ ಇಂತಹ ಆಚರಣೆಗಳಿಗೆ ನಮ್ಮ ರಾಜ್ಯದಲ್ಲಿ ಅವಕಾಶವಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ರೂಪಿಸಲಾಗಿದ್ದ ಮಾಟ, ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮಸೂದೆ- 2017ನ್ನು ಬಿಎಸ್‍ವೈ ಸರ್ಕಾರ ಜನವರಿ 4 ರಿಂದಲೇ ಜಾರಿಗೆ ತಂದಿದೆ. ಆದರೂ ಇಂತಹ ಆಚರಣೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಪೊಲೀಸರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಮೌಢ್ಯ ನಿಷೇಧ ಕಾಯ್ದೆ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾದಂತಿದೆ. ಸಂಬಂಧ ಪಟ್ಟವರು ಇಂತಹ ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಬೇಕಿದೆ.

  • ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಮುರುಘಾ ಶ್ರೀ ಡಾ. ಶಿವಮೂರ್ತಿ ಶರಣರು

    ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಮುರುಘಾ ಶ್ರೀ ಡಾ. ಶಿವಮೂರ್ತಿ ಶರಣರು

    ದಾವಣಗೆರೆ: ಅಸಹಾಯಕ ಪರಿಸ್ಥಿತಿಯಲ್ಲಿ ದೇವದಾಸಿ ಪದ್ಧತಿಗೆ ಒಳಗಾದ ಅಮಾಯಕ ಮಹಿಳೆಯರು ಆ ಪ್ರವೃತ್ತಿಯಿಂದ ಹೊರಗೆ ಬರುವುದಾದರೆ ಸರ್ಕಾರಗಳು, ಸಂಘ-ಸಂಸ್ಥೆಗಳು ಮತ್ತು ಶ್ರೀಮಠ ನಿಮಗೆ ಸಹಾಯ ಹಸ್ತ ಚಾಚಲಿವೆ ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಭರವಸೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ನಡೆದ ಲಿಂ. ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 63 ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮದಲ್ಲಿ ದೇವದಾಸಿ ಮಹಿಳೆಯರ ಮೌಢ್ಯಾಚರಣೆ ನಿವಾರಣೆಗಾಗಿ ಹಮ್ಮಿಕೊಳ್ಳಲಾಗಿತ್ತು. ಜಾಗೃತಿ ಕಾರ್ಯಕ್ರಮದಲ್ಲಿ ಐವರು ದೇವದಾಸಿ ಮಹಿಳೆಯರಿಗೆ ‘ಜಡೆ’ ಕತ್ತರಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಮಾತನಾಡಿದರು.

    ಮನೆಯ ಪರಿಸ್ಥಿತಿ ಮತ್ತು ಮೌಢ್ಯತೆಗೆ ಒಳಗಾಗಿ ಹಲವಾರು ಅಮಾಯಕ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ತಳ್ಳಲಾಗಿರುತ್ತದೆ. ದೇವರ ಹೆಸರಿನಲ್ಲಿ ಬಿಡುವ ಈ ಮೌಢ್ಯಾಚರಣೆ ಅತ್ಯಂತ ಹೀನಾಯ ಆಚರಣೆ. `ದಾಸಿ’ ಎಂದರೆ ಗುಲಾಮಗಿರಿ ಇದು ನಿಕೃಷ್ಟ ಪದ್ಧತಿಯಾಗಿದ್ದು, ಈ ಸ್ಥಿತಿಯಿಂದ ನೀವೆಲ್ಲರೂ ಹೊರಬಂದು ಉತ್ತಮ ಬದುಕು ಕಟ್ಟಿಕೊಂಡರೆ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ ಎಂದು ಅಭಯ ನೀಡಿದರು.

    ಬಸವಣ್ಣನವರು ಆ ಕಾಲದಲ್ಲಿಯೇ ಎಲ್ಲಾ ಸ್ಥರದ ಜನಗಳನ್ನು ಒಪ್ಪಿಕೊಂಡವರು. ಆಗಿನ ಸೂಳೆ ಸಂಕವ್ವೆಗೆ ತಿಳಿ ಹೇಳಿ ಆಕೆಯನ್ನು ಶರಣೆ ಸಂಕವ್ವೆಯನ್ನಾಗಿ ಮಾಡಿ, ಆಕೆಯಿಂದ ವಚನಗಳನ್ನು ಬರೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

    ಚಿತ್ರದುರ್ಗದಲ್ಲಿ ಬಸವಜಯಂತಿ ದಿನದಂದು ದೇವದಾಸಿ ಮಹಿಳೆಯರಿಗೆ ಜಾಗೃತಿ ಮೂಡಿಸಿ, ಹಲವಾರು ಮಹಿಳೆಯರಿಗೆ ಪುನರುಜ್ಜೀವನ ಕಲ್ಪಿಸಿಕೊಡಲಾಗಿದೆ. ಇನ್ನಾದರೂ ದೇವದಾಸಿ ಮಹಿಳೆಯರು ಈ ಮೌಢ್ಯ ಬದುಕಿನಿಂದ ಆಚೆ ಬಂದು ಆಧುನಿಕ ಜೀವನಕ್ಕೆ ಹೊಂದಿಕೊಳ್ಳಿರಿ. `ಜಡೆ’ಗಳನ್ನು ಬಿಡದೆ ಕೂದಲನ್ನು ಸೋಪು, ಶ್ಯಾಂಪೂ ಹಾಕಿ ಸರಿಯಾಗಿ ತೊಳೆಯಿರಿ ಮತ್ತು ಬಾಚಿಕೊಳ್ಳಿ ಎಂದು ಕರೆ ನೀಡಿದರು.

    ಮಕ್ಕಳಿಗೆ ಮುತ್ತು ಕಟ್ಟಿಸಿ ಎಂದು ಯಾವ ದೇವರು ಹೇಳುತ್ತಾನೆ? ಯಾವ ದೇವಿಯು ಮುತ್ತು ಕಟ್ಟಿಸಿಕೊಂಡವರಿಗೆ ವರ ನೀಡಿದ್ದಾಳೆ? ಸಿಡಿ ಹಾಯುವುದರಿಂದ ಸೇರಿರುವ ಗಂಡಸೆರಲ್ಲಾ ನಿಮ್ಮನ್ನು ನೋಡಿ ನಗುತ್ತಾರೆ. ನಿಮ್ಮ ಮನಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ಮಹಿಳೆಯರ ಬದಲಾಗಿ ಗಂಡುಮಕ್ಕಳಿಗೆ ಸಿಡಿಹಾಯಲು ಹೇಳಿ ಎಂದ ಅವರು, ಈ ಎಲ್ಲಾ ಪದ್ಧತಿಗಳು ನಿಮ್ಮ ಮನಶಾಂತಿಗಾಗಿ ಆಚರಿಸುತ್ತಾ ಬಂದಿದ್ದೀರಿ. ಈ ಎಲ್ಲಾ ಅನಿಷ್ಠ ಪದ್ಧತಿಯಿಂದ ಹೊರಬಂದು ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅವರು ದುಡಿದು ನಿಮ್ಮನ್ನು ಸಲಹುತ್ತಾರೆ ಆಗ ನಿಮ್ಮ ಮನಸ್ಸಿಗೆ ನಿಜವಾದ ಶಾಂತಿ ದೊರೆಯುತ್ತದೆ ಎಂದು ತಿಳಿಸಿದರು, ಇನ್ನು ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭುಶ್ರೀಗಳು ಮತ್ತು ಕುಪ್ಪುಸ್ವಾಮಿ ಉಪಸ್ಥಿತರಿದ್ದರು.