Tag: ಮೊದಲು ಮಾನವನಾಗು ಟ್ರಸ್ಟ್

  • ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಬೆಂಗಳೂರು: ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.  ನಟಿ ಸೋನು ಪಾಟೀಲ್ ತಾಯಿಯ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಈಗ ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರ ಅಭಿಮಾನಿ ಸೌಮ್ಯಾ. ಸುದೀಪ್ ಸಹಾಯ ಮಾಡಿರುವ ಕುರಿತು ಅವರೊಂದು ವೀಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಸುದೀಪ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ತಾಳಿ ಭಾಗ್ಯವನ್ನು ಉಳಿಸಿದ್ದೀರಾ ನೀವು ಎಂದು ಸೌಮ್ಯಾ ವೀಡಿಯೋದಲ್ಲಿ ಹೇಳಿದ್ದಾರೆ.

    ಕಳೆದ ತಿಂಗಳು ನನ್ನ ಪತಿಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದೆವು. ಆಗಲೇ ತುಂಬ ಖರ್ಚು ಆಗಿತ್ತು. ನಂತರ ಮನೆಗೆ ಬಂದಮೇಲೇ ಕೊರೊನಾ ತಗುಲಿತು. ನನಗೆ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಆಯಿತು. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಯ್ತು. ಆದರೆ ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದರು. ರೆಮಿಸಿಡಿವರ್ ಇಂಜೆಕ್ಷನ್‍ಗಾಗಿ ಹುಡುಕಿದರೂ ಸಿಗಲಿಲ್ಲ ಎಂದಿದ್ದಾರೆ ಸೌಮ್ಯ.

    20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು 1.50 ಲಕ್ಷ ರೂ. ಖರ್ಚಾಗಿತ್ತು. ಇಂತಹ ಸಂದರ್ಭದಲ್ಲಿ 50 ಸಾವಿರ ರೂ. ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದರು. ಅದು ನಮಗೆ ಕಷ್ಟದ ಪರಿಸ್ಥಿತಿ ಆಗಿತ್ತು. ಆದರೂ, ಹೇಗೋ ಹೊಂದಿಸಿಕೊಂಡು ಕಟ್ಟಿದೆವು. ಚಿಕಿತ್ಸೆ ಮುಗಿದ ಮೇಲೆ 1.30 ಲಕ್ಷ ರೂಪಾಯಿ ಬಿಲ್ ಆಗಿತ್ತು. ಅಷ್ಟೊಂದು ದುಡ್ಡು ನಮ್ಮ ಬಳಿ ಇರಲಿಲ್ಲ. ಎಲ್ಲ ಪ್ರಯತ್ನ ಮಾಡಿದರೂ, ದುಡ್ಡು ಹೊಂದಿಸಲು ಆಗಲಿಲ್ಲ. ಆಗ ಸಹಾಯಕ್ಕೆ ಸುದೀಪ್ ಅವರು ಬಂದರು ಎಂದು ಸೌಮ್ಯಾ ವೀಡಿಯೋದಲ್ಲಿ ತಿಳಿಸಿದ್ದಾರೆ.

    ಸುದೀಪ್ ಅವರ ಮೊದಲು ಮಾನವನಾಗು ಟ್ರಸ್ಟ್ ಬಗ್ಗೆ ಮಾಹಿತಿ ಪಡೆದುಕೊಂಡ ಆ ಟ್ರಸ್ಟ್ನ ಸಂಪರ್ಕಿಸಿದೆ. ನಂತರ ವಿಷಯ ಸುದೀಪ್ ಅವರಿಗೆ ತಲುಪಿದೆ. ಅವರು ಕೂಡಲೇ ಸೌಮ್ಯಾಗೆ ಆರ್ಥಿಕ ಸಹಾಯ ಮಾಡಿದ್ದಾರೆ. ನಾನು ಸುದೀಪ್ ಅವರಿಗೆ 10 ವರ್ಷಗಳಿಂದ ಅಭಿಮಾನಿ. ನಾನು ಗುಣ, ವ್ಯಕ್ತಿತ್ವ ನೋಡಿ, ಅಭಿಮಾನಿಯಾದವಳು. ಈಗ ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಜನ್ಮದಲ್ಲೂ ನಾನು ಅವರ ಅಭಿಮಾನಿಯಾಗಿಯೇ ಹುಟ್ಟುತ್ತೇನೆ. ನಾನು ಸಾಯುವವರೆಗೂ ಸುದೀಪ್ ಅವರ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ಆಯಸ್ಸು ಎಲ್ಲವೂ ಸುದೀಪ್ ಅವರಿಗೆ ಇರಲಿ’ ಎಂದು ಸೌಮ್ಯಾ ಹೇಳಿದ್ದಾರೆ.