Tag: ಮೈತ್ರಿ ನಾಯಕರು

  • ಜೀವನದಲ್ಲಿ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ ಇದು: ಈಶ್ವರಪ್ಪ

    ಜೀವನದಲ್ಲಿ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ ಇದು: ಈಶ್ವರಪ್ಪ

    ಬೆಂಗಳೂರು: ಇದು ನನ್ನ ಜೀವನದಲ್ಲೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆದರೆ ಈಗ ಮಾತನಾಡುತ್ತಿದ್ದೇನೆ ಎಂದು ಹೇಳಿ ಈಶ್ವರಪ್ಪ ದೋಸ್ತಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 6 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಸದನದಲ್ಲಿ ಮಾತನಾಡಿದ ಈಶ್ವರಪ್ಪ, ಯಾರು ಕೂಡ ಸಭೆಯಲ್ಲಿ ಮಾತನಾಡಬೇಡಿ ಎಂದು ನಮ್ಮ ನಾಯಕರು ನಮಗೆ ಸೂಚಿಸಿದ್ದರು. ಹೀಗಾಗಿ ಇಷ್ಟು ದಿನ ನಾನು ಸುಮ್ಮನೆ ಕುಳಿತು ಆಡಳಿತ ಪಕ್ಷದವರ ಮಾತುಗಳನ್ನು ಅಲಿಸುತ್ತಿದ್ದೆ. ಇದು ನನ್ನ ಜೀವನದಲ್ಲಿಯೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆಡಳಿತ ಪಕ್ಷದವರು ಮಾತನಾಡಲು ಸಿದ್ಧವಿಲ್ಲ. ಅದಕ್ಕೆ ಇಂದು ಮಾತನಾಡುತ್ತಿದ್ದೇನೆ ಎಂದು ಕಿಡಿಕಾರಿದರು.

    ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ. ಹೊಸ ಶಾಸಕರು ಬಂದಿದ್ದೇವೆ, ಜನರ ಸಮಸ್ಯೆ ಹೇಳಲು 5-10 ನಿಮಿಷ ಸಮಯ ಕೊಡಿ ಎಂದು ಕೇಳುತ್ತಾರೆ ಎಂದು ದೂರಿದರು.

    ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೂ ಅವರು ಕೂಗುವುದಕ್ಕೆ ಶುರುಮಾಡಿದರೆ, ನಾವು ಅನುಭವಿಸಬೇಕು. ನನ್ನ ಜೀವನದಲ್ಲಿ ಶಾಸಕನಾಗಿ ಬಂದಮೇಲೆ ಇಂತಹ ಪರಿಸ್ಥಿತಿಯನ್ನು ನಾನು ಎಂದೂ ಕಂಡಿರಲಿಲ್ಲ. ಸದನದ ಪಾವಿತ್ರ್ಯತೆ ಹಾಳಾಗಿದೆ. ಶಾಸಕರು ಇಷ್ಟಪಟ್ಟಾಗ ಅವರೇ ಮಾತನಾಡುತ್ತಾರೆ. ಅವರಿಗೆ ಕಷ್ಟವಾದಾಗ ಕಲಾಪ ಮುಂದಕ್ಕೆ ಹಾಕುತ್ತಾರೆ. ಹೊಟ್ಟೆ ಹಸಿದಾಗ ಒಂದು ರೀತಿ, ಆಮೇಲೆ ಇನ್ನೊಂದು ರೀತಿ ವರ್ತಿಸುತ್ತಾರೆ ಎಂದು ಹರಿಹಾಯ್ದರು.

    ನಾವು 105 ಮಂದಿ ಇದ್ದೇವೆ, ನಮ್ಮಲ್ಲೂ ಕೂಡ ಹೊಸ ಶಾಸಕರು ಇದ್ದಾರೆ. ಈ ಸದನವನ್ನು ನೋಡಿ ಕಲಿತಿದ್ದೇನು? 50-60 ಮಂದಿ ಆಡಳಿತ ಪಕ್ಷದವರು ಬಂದು ಸಭೆ ನಡೆಯೋಕೆ ಬಿಡಲ್ಲ ಎನ್ನುತ್ತಾರೆ. ನಿಮ್ಮ ಧ್ವನಿ ಜೋರಾಗಿದೆ ಅದಕ್ಕೆ ಸಭೆ ನಿಲ್ಲಿಸಲು ಯತ್ನಿಸುವ ಶಾಸಕರು ವಾಪಸ್ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ ಸಣ್ಣ ಧ್ವನಿಯ ಸ್ಪೀಕರ್ ಬಂದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದರು.

    ಈ ವೇಳೆ ಪ್ರಿಯಾಂಕ್ ಖರ್ಗೆ ಎಲ್ಲರೂ ಬರುತ್ತಿದ್ದಾರೆ. ಆಮೇಲೆ ಮಾತನಾಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಈಶ್ವರಪ್ಪ ಅವರು, ಅವರೆಲ್ಲಾ ಬರುವವರಿಗೂ ನೀವು ಬೈಸಿಕೊಳ್ಳಿ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರಗಿನ ಜನರಿಗೆ ತಿಳಿಯಲಿ. ವಿರೋಧ ಪಕ್ಷದವರೇ ಸದನಕ್ಕೆ ಬಂದು ಕುಳಿತಿದ್ದಾರೆ. ಸ್ಪೀಕರ್ ಕೂಡ ಬಂದಿದ್ದಾರೆ. ಆದ್ರೆ ಆಡಳಿತ ಪಕ್ಷದವರು ಇನ್ನೂ ಬಂದಿಲ್ಲ ಎಂದು ಹೇಳಿ ತಿರುಗೇಟು ಕೊಟ್ಟರು.

  • ಪದೇ ಪದೇ ಮುಂಬೈಗೆ ಬಂದು ಶಾಂತಿ ಕೆಡಿಸ್ತಿದ್ದಾರೆ- ರೆಬೆಲ್ಸ್ ಕಿಡಿ

    ಪದೇ ಪದೇ ಮುಂಬೈಗೆ ಬಂದು ಶಾಂತಿ ಕೆಡಿಸ್ತಿದ್ದಾರೆ- ರೆಬೆಲ್ಸ್ ಕಿಡಿ

    ಮುಂಬೈ: ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿಯನ್ನು ಕೆಡಿಸುತ್ತಿದ್ದಾರೆ ಎಂದು ಮನವೊಲಿಕೆಗೆ ಬರುತ್ತಿರುವ ಹಿರಿಯ ನಾಯಕರ ವಿರುದ್ಧ ರೆಬೆಲ್ ಶಾಸಕರು ಕಿಡಿಕಾರಿದ್ದಾರೆ.

    ಮೈತ್ರಿ ಪಕ್ಷದ ಹಿರಿಯ ನಾಯಕರು ಇಂದು ಮುಂಬೈ ತೆರಳಿ ಅತೃಪ್ತರ ಮನ ಓಲೈಸುವ ಕಾರ್ಯ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ನಗರಿ ಮತ್ತೊಂದು ಹೈಡ್ರಾಮಾಕ್ಕೆ ವೇದಿಕೆ ಅಗುತ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

    ಯಾಕೆಂದರೆ ಪದೇ ಪದೇ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಶಾಂತಿ ಕದಡುತ್ತಿದ್ದಾರೆಂದು ಅತೃಪ್ತರು ದೂರಿದ್ದು, ಅವರಿಂದ ನಮಗೆ ಜೀವಬೆದರಿಕೆಯಿದೆ ಹೀಗಾಗಿ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

    ಅದರಲ್ಲೂ ಕಾಂಗ್ರೆಸ್ ಪಕ್ಷದ 10 ಶಾಸಕರು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂನಬಿ ಆಜಾದ್ ನಮ್ಮನ್ನು ಭೇಟಿ ಮಾಡಲು ಬರಲಿದ್ದಾರೆ. ನಮಗೆ ಯಾರನ್ನೂ ಭೇಟಿ ಮಾಡುವುದು ಇಷ್ಟವಿಲ್ಲವೆಂದು ಅತೃಪ್ತ ಶಾಸಕರು ಸ್ಥಳೀಯ ಠಾಣೆ ಮೂಲಕ ಮುಂಬೈ ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದಾರೆ.

    ಸೂಕ್ತ ಭದ್ರತೆ ನೀಡುವಂತೆ ಅತೃಪ್ತರು ಮಹಾರಾಷ್ಟ್ರ ಪೊಲೀಸರಿಗೆ ಮನವಿ ಮಾಡಿದ್ದು, ಸುಪ್ರೀಂಕೋರ್ಟ್ ಗೂ ಸಹ ಇಂದು ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.