Tag: ಮೈಕ್ರೋ ಫೈನಾನ್ಸ್

  • ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

    ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

    ಬೆಂಗಳೂರು:ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ‌ ಬಿದ್ದಿದೆ. ಮೈಕ್ರೋ ಫೈನಾನ್ಸ್ ಮತ್ತು ಹಣವನ್ನು ಸಾಲವಾಗಿ ನೀಡುವ ಕಂಪನಿಗಳಿಗೆ ಕಾನೂನು ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್‌, ಅಸೋಸಿಯೇಷನ್ ಪದಾಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳ ಜೊತೆ ಸಹಕಾರ, ಕಂದಾಯ, ಗೃಹ, ಕಾನೂನು, ಹಣಕಾಸು ಇಲಾಖೆ ಸಭೆ ಮಾಡಿದ ನಂತರ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಸಿದ್ದರಾಮಯ್ಯ ತಿಳಿಸಿದರು. ಇದನ್ನೂ ಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ

    ಸದ್ಯ ಏನು ಕ್ರಮಕೈಗೊಳ್ಳಲಾಗಿದೆ?
    – ಹಣವನ್ನು ವಸೂಲಿ ಮಾಡುವಾಗ ಆರ್‌ಬಿಐ ನಿಯಮ ಪಾಲನೆ ಮಾಡಬೇಕು.
    – ಕಾನೂನು ಏನು ಹೇಳುತ್ತದೋ ಅದಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡಬಾರದು.
    – ಸಂಜೆ 5 ಗಂಟೆ ನಂತರ ವಸೂಲಿ ಮಾಡುವಂತಿಲ್ಲ.
    – ಗೂಂಡಾ, ರೌಡಿಗಳನ್ನ ಬಿಟ್ಟು ವಸೂಲಿ ಮಾಡಬಾರದು.
    – ಕಾನೂನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೇ ಕ್ರಮ
    – ಪ್ರತಿ ಡಿಸಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭ

  • PUBLiC TV Impact | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾದ ಮಹಿಳೆ ಮನೆಗೆ ತಹಶೀಲ್ದಾರ್ ಭೇಟಿ

    PUBLiC TV Impact | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾದ ಮಹಿಳೆ ಮನೆಗೆ ತಹಶೀಲ್ದಾರ್ ಭೇಟಿ

    ಬೀದರ್: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯ ಕುರಿತು `ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ತಹಶೀಲ್ದಾರ್ ಶಿವಾನಂದ ಮೇತ್ರೆ ಮೃತ ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ.

    ಬೀದರ್ (Bidar) ಜಿಲ್ಲೆಯ ಹುಲಸೂರು (Hulsooru) ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ನೀಡಿದ್ದ ಕಿರುಕುಳ ತಾಳಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಸುದ್ದಿಯನ್ನು ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಮೃತ ಮಹಿಳೆಯ ಮನೆಗೆ ತಹಶೀಲ್ದಾರ್ ಶಿವಾನಂದ ಮೇತ್ರೆ ಭೇಟಿ ನೀಡಿದ್ದು, ಕೂಡಲೇ ತಪ್ಪಿಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಟ್ರಕ್, ಕಾರು ಮುಖಾಮುಖಿ ಡಿಕ್ಕಿ – ನಾಲ್ವರು ಸಾವು, ಇಬ್ಬರು ಗಂಭೀರ

    ಸ್ಥಳದಲ್ಲಿಯೇ ತಹಶೀಲ್ದಾರ್ ಮೈಕ್ರೋ ಫೈನಾನ್ಸ್ ಅಧಿಕಾರಿಗಳು ಸಭೆ ಕರೆದು, ತರಾಟೆ ತೆಗೆದುಕೊಂಡಿದ್ದಾರೆ.

    ಘಟನೆ ಏನು?
    ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಮಹಿಳೆಯನ್ನು ರೇಷ್ಮಾ ಸೂರ್ಯವಂಶಿ (25) ಎಂದು ಗುರತಿಸಲಾಗಿದೆ. ವಿವಿಧ ಸಂಘಗಳಲ್ಲಿ 3 ಲಕ್ಷ ರೂ. ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನೂ ಓದಿ: 76ನೇ ಗಣರಾಜೋತ್ಸವಕ್ಕೆ ಸಕಲ ಸಿದ್ಧತೆ – ಭದ್ರತೆ ಹೇಗಿದೆ?

     

  • ಮೈಕ್ರೋ ಫೈನಾನ್ಸ್ ಟಾರ್ಚರ್ – ದೂರು ನೀಡಲು ಬಂದಿದ್ದ ಮಹಿಳೆಯರಿಗೆ ಪೊಲೀಸರಿಂದ ದಂಡ ಆರೋಪ

    ಮೈಕ್ರೋ ಫೈನಾನ್ಸ್ ಟಾರ್ಚರ್ – ದೂರು ನೀಡಲು ಬಂದಿದ್ದ ಮಹಿಳೆಯರಿಗೆ ಪೊಲೀಸರಿಂದ ದಂಡ ಆರೋಪ

    ಹಾವೆರಿ: ಮೈಕ್ರೋ ಫೈನಾನ್ಸ್ (Microfinance) ಸಿಬ್ಬಂದಿ ಕಿರುಕುಳಕ್ಕೆ ನೊಂದು ದೂರು ನೀಡಲು ಹೋಗಿದ್ದ ರಾಣೆಬೆನ್ನೂರಿನ (Ranebennur) ಗುಡ್ಡದ ಬೇವಿನಹಳ್ಳಿಯ ಇಬ್ಬರು ಮಹಿಳೆಯರಿಗೆ ಪೊಲೀಸರು ಗದರಿಸಿ ದಂಡ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.

    ನಮ್ಮ ದೂರಿಗೆ ಸ್ಪಂದಿಸದ ಹಲಗೇರಿ ಪೊಲೀಸರು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರಿಗೆ ಸ್ಪಂದಿಸಿದ್ದಾರೆ. ನಮ್ಮನ್ನು ಠಾಣೆಗೆ ಕರೆಸಿ ಗದರಿಸಿ ದಂಡ ಕಟ್ಟಿಸಿದ್ರು ಎಂದು ಗ್ರಾಮದ ನಾಗಮ್ಮ ಹಾಗೂ ರಹೀಮಾ ಆರೋಪಿಸಿದ್ದಾರೆ.

    ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿಮ್ಮ ಮಗಳು ಸಾಲ ಕಟ್ಟೋದು ಬಿಟ್ಟು, ಯಾರ ಜೊತೆ ಓಡಿ ಹೋಗಿದ್ದಾಳೆ ಎಂದು ಅವಾಚ್ಯವಾಗಿ ನಿಂದನೆ ಮಾಡಿದ್ದರು. ಹೀಗಾಗಿ ಮೈಕ್ರೋ ಪೈನಾನ್ಸ್ ಸಿಬ್ಬಂದಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಮಹಿಳೆಯರು ತಳ್ಳಾಡಿದ್ದರು ಎನ್ನಲಾಗಿದೆ.

    ಮಹಿಳೆಯರ ವಿರುದ್ಧ ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆಸಿ 1,000 ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

  • ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಸೀಜ್ ಆದ ಮನೆ ಬೀಗ ಓಪನ್ – ಮನೆಗೆ ಮರಳಿದ ಬಾಣಂತಿ ಕುಟುಂಬ

    ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಸೀಜ್ ಆದ ಮನೆ ಬೀಗ ಓಪನ್ – ಮನೆಗೆ ಮರಳಿದ ಬಾಣಂತಿ ಕುಟುಂಬ

    – ಆಸ್ಪತ್ರೆಯಲ್ಲಿದ್ದರೂ ಸ್ಪಂದಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಧನ್ಯವಾದ ತಿಳಿಸಿದ ಸಂತ್ರಸ್ತರು

    ಬೆಳಗಾವಿ: ಸಾಲ ಕಟ್ಟದ್ದಕ್ಕೆ ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಒಂದು ತಿಂಗಳು ಮಗು ಸಮೇತ ಬಾಣಂತಿ ಹಾಗೂ ಕುಟಂಬಸ್ಥರನ್ನ ಮನೆಯಿಂದ ಹೊರಕ್ಕೆ ಹಾಕಿ ಮನೆ ಸೀಜ್ ಮಾಡಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ‌ ತಾರಿಹಾರ ಗ್ರಾಮದಲ್ಲಿ ನಡೆದಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತಕ್ಷೇತ್ರದ ತಾರೀಹಾಳ ಗ್ರಾಮದ ಗಣಪತಿ ಲೋಹಾರ ಕುಟುಂಬ ಬೀದಿಗೆ ಬಂದಿತ್ತು. ಇದೀಗ ಎಲ್ಲರೂ ಮತ್ತೆ ಮನೆ ಸೇರಿದ್ದಾರೆ.

    ಹೆರಿಗೆಗೆ ಬಂದಿದ್ದ ಗಣಪತಿ ಪುತ್ರಿ ಮಾಧುರಿ ತಂದೆ, ತಾಯಿ, ಮಗಳು ಮೊಮ್ಮಕ್ಕಳನ್ನ ಮನೆಯಿಂದ ನಿರ್ಧಯಿಯಾಗಿ ಫೈನಾನ್ಸ್ ಸಿಬ್ಬಂದಿ ಹೊರಹಾಕಿದ್ದರು. ಮನೆ ಕಟ್ಟಲು ಬೆಳಗಾವಿಯ ಅಪ್ಟುಸ್ ಫೈನಾನ್ಸ್‌ನಲ್ಲಿ 5 ಲಕ್ಷ ಸಾಲ ಪಡೆದಿದ್ದ ಗಣಪತಿ ಲೋಹಾರ 3.50 ಲಕ್ಷ ರೂ. ಸಾಲ ಮರುಪಾವತಿ ಮಾಡಿದ್ದರು. ಅನಾರೋಗ್ಯ, ಮಗಳ ಹೆರಿಗೆ ಕಾರಣದಿಂದ ಕಂತು ಕಟ್ಟಿರಲಿಲ್ಲ. 7 ಲಕ್ಷಕ್ಕೂ ಅಧಿಕ ಹಣ ಕಟ್ಟು ಅಂತಾ ಹೇಳಿ ಕೋರ್ಟ್‌ನಿಂದ ಆದೇಶ ತಂದು ಮನೆಗೆ ಬೀಗ ಜಡಿದು ಗೋಡೆ ಮೇಲೆ ಜಪ್ತಿ‌ ನೋಟಿಸ್ ಬರೆದು ಹೋಗಲಾಗಿತ್ತು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಈ ಕುರಿತು ‘ಪಬ್ಲಿಕ್‌ ಟಿವಿ’ ಬೆಳಗ್ಗಿನಿಂದ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ‌ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತನ್ನ ಖಾಸಗಿ ಆಪ್ತ ಸಹಾಯಕರನ್ನ ಕರೆಸಿ ಲೋಹಾರ ಕುಟುಂಬಕ್ಕೆ ಧನ ಸಹಾಯದ ಜೊತೆಗೆ ದಿನಸಿ ಸಹಾಯ ಮಾಡಿದ್ದರು.

    ಅಲ್ಲದೇ, ಫೈನಾನ್ಸ್ ಕಂಪನಿಯ ಜೊತೆಗೆ ಸಂಪರ್ಕ ಸಾಧಿಸಿ ಕೇವಲ ಅಸಲು ಮಾತ್ರ ತುಂಬುವುದು ಹಾಗೂ ಕಂತು ತುಂಬಲು ಕಾಲಾವಕಾಶ ನೀಡುವಂತೆ ಕಂಪನಿಗೆ ಒತ್ತಾಯಿಸಿ, ಸೀಜ್ ಆದ ಬಾಣಂತಿ ಮನೆಯ ಬಾಗಿಲು ಓಪನ್ ಮಾಡಿಸಿದ್ದಾರೆ. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

    ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬಸ್ಥರನ್ನ ಮರಳಿ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಕ್ಕೆ ಹೆಬ್ಬಾಳ್ಕರ್‌ ಆಪ್ತರು ಕರೆ ತಂದರು. ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ಗಂಭೀರವಾಗಿ ಪರಿಗಣಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಲ್ಲಿದ್ದರೂ ಘಟನೆ ಕುರಿತು ಮಾಹಿತಿ ಪಡೆದು ಲೋಹಾರ ಕುಟುಂಬಕ್ಕೆ ಸಹಾಯ‌ ಮಾಡಿದ್ದಾರೆ. ಬೀದಿಗೆ ಬಂದ ಕುಟುಂಬಕ್ಕೆ ಸಹಾಯಹಸ್ತ ಚಾಚಿದ ಎಲ್ಲರಿಗೂ ಲೋಹಾರ ಕುಟುಂಬ ಧನ್ಯವಾದ ತಿಳಿಸಿದೆ.

  • ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ನಿಂದ ತಪ್ಪಾಗಿದೆ ಅಂತ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಠಿಣ ಕಾನೂನು ಇದೆ. ಆದರೆ,‌ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ಹೊರ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಸರ್ಕಾರ ಬೇಜವಾಬ್ದಾರಿತನ ತೋರಿಸುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಸಿಎಂ ಸಭೆ ಮಾಡಲು ಇಷ್ಟು ದಿನ ಬೇಕಾಯ್ತಾ? ಪೊಲೀಸರು, ಅಧಿಕಾರಿಗಳು ಇಲ್ವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

    ಮೈಕ್ರೋ ಫೈನಾನ್ಸ್‌ನಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತಿಮಿತಿಯಿಲ್ಲದೆ ಮೈಕ್ರೋ ಫೈನಾನ್ಸ್ ಹಾವಳಿ ನಡೆಯುತ್ತಿದೆ. ಮೈಕ್ರೋ ಫೈನಾನ್ಸ್‌ನಿಂದ ಬಡವರಿಗೆ ವಂಚನೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಕುಮಾರಸ್ವಾಮಿ ಕಾಲದಲ್ಲಿ ಕಾನೂತ್ಮಕವಾಗಿ ತಿದ್ದುಪಡಿ ತಂದಿದ್ದರು. ಈ ಸರ್ಕಾರ ಬಂದ್ಮೇಲೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ರಾಮನಗರದಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಕಿಡ್ನಿ ಮಾರಿಕೊಂಡ ವರದಿಯಾಗಿದೆ. ಈ ಸರ್ಕಾರ ನಿದ್ದೆ ಮಾಡ್ತಿದ್ಯಾ? ಬದುಕಿದ್ಯಾ.. ಸತ್ತಿದ್ಯಾ ಅಂತ ಕೇಳಬೇಕಾಗುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

  • ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ: ಪರಮೇಶ್ವರ್

    ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ: ಪರಮೇಶ್ವರ್

    ಬೆಂಗಳೂರು: ಮೈಕ್ರೋ ಫೈನಾನ್ಸ್ (Micro Finance) ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.

    ಮೈಕ್ರೋ ಫೈನಾನ್ಸ್ ಕಿರುಕುಳ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೈಕ್ರೋ ಫೈನಾನ್ಸ್‌ನಿಂದ ತೊಂದರೆ ಆಗುತ್ತಿದೆ ಎಂದು ರಾಜ್ಯಾದ್ಯಂತ ದೂರು ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಸಂಬಂಧ ಈಗ ಇರುವ ನಿಯಮಗಳು ಅಷ್ಟು ಕಠಿಣವಾಗಿ ಇಲ್ಲ ಅಂತ ನಮ್ಮ ಗಮನಕ್ಕೆ ಬಂದಿದೆ ಎಂದರು.

    ಬ್ಯಾಂಕ್ ನಿಯಮಗಳ (Bank Ruls) ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಅದೇ ರೀತಿ ಅವರ ರಕ್ಷಣೆ ಮಾಡಲು ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ಕಠಿಣವಾಗಿ ಇಲ್ಲ ಅಂತ ನಮ್ಮ ಇಲಾಖೆಯಿಂದ ಅನೇಕ ವರದಿಗಳು ಬಂದಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡೋ ಅಗತ್ಯವಿದೆ. ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣಕ್ಕೆ ಕಠಿಣ ಕಾನೂನು ತರುತ್ತದೆ ಅಂತ ತಿಳಿಸಿದರು.

     

     ಸಾಲ ತಗೊಂಡು ಸಾಲ ವಾಪಸ್ ಕಟ್ಟದೇ ಹೋದ್ರೆ ಅವರು ಸಾಲಗಾರರ ಬಳಿಯೇ ಕ್ರಮ ತೆಗೆದುಕೊಳ್ಳಬಹುದು ಅಂತ ಫೈನಾನ್ಸ್ ಅವರು ಸಹಿ ಹಾಕಿಸಿಕೊಂಡಿರುತ್ತಾರೆ. ಸಾಲ ತಗೋಳೋವಾಗ ಹತ್ತಾರು ಕಡೆ ಸಹಿ ತೆಗೆದುಕೊಂಡಿರುತ್ತಾರೆ. ಆ ಸಹಿ ಯಾಕೆ‌ ಮಾಡಿರುತ್ತೇವೆ ಅಂತಾನೂ ಗ್ರಾಹಕರಿಗೆ ಗೊತ್ತಿರೋದಿಲ್ಲ .ಅದು ಕಮಿಟ್ ಮೆಂಟ್ ಆಗಿರುತ್ತದೆ. ಆ ಆಧಾರದಲ್ಲಿ ಮನೆ ರೇಡ್ ಮಾಡೋದು, ಮನೆ ಸೀಜ್ ಮಾಡೋದು‌ ಎಲ್ಲಾ ಮಾಡ್ತಿದ್ದಾರೆ.ಇದಕ್ಕೆ ‌ಕಾನೂನಿನಲ್ಲೆ ಪರಿಹಾರ ಕಂಡುಹಿಡಿಯಬೇಕು ಎಂದರು. ಇದನ್ನೂ ಓದಿ: ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ

    ಈಗಾಗಲೇ ಕಾನೂನು ಸಚಿವರು ಅದರ ಬಗ್ಗೆ ಗಮನಹರಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಕಾನೂನು ಬದಲಾವಣೆ ಮಾಡಿ ಕಠಿಣ ನಿಯಮ ಜಾರಿ ಮಾಡುವುದಾಗಿ ಹೇಳಿದ್ದಾರೆ. ನಾಳೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ಮಾಡಿ ಏನೆಲ್ಲ ಕೇಸ್ ಗಳು ಅಗಿವೆ. ಕಾನೂನು ಕಠಿಣವಾಗಿ ಇಲ್ಲ ಅನ್ನೋದನ್ನು ಪರಿಶೀಲನೆ ‌ಮಾಡ್ತೀವಿ. ಈಗ ಆಗಿರುವ ಕೇಸ್ ಗಳ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ಮಾಡುತ್ತೇವೆ ಅಂತ ತಿಳಿಸಿದರು.

  • ಬೆಳಗಾವಿ| ಫೈನಾನ್ಸ್ ಕಿರುಕುಳ – ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

    ಬೆಳಗಾವಿ| ಫೈನಾನ್ಸ್ ಕಿರುಕುಳ – ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

    ಬೆಳಗಾವಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಕಿರುಕುಳಕ್ಕೆ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಕಿರುಕುಳ ತಾಳಲಾರದೆ ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಯಮನಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

    ಹುಕ್ಕೇರಿ (Hukkeri) ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೈನಾನ್ಸ್ನಲ್ಲಿ ಸಬ್ಸಿಡಿ ಎಂದು ಹೇಳಿ ಹೊಳೆಪ್ಪ ದಡ್ಡಿ 2.30 ಲಕ್ಷ ರೂ. ಕೊಡಿಸಿದ್ದ. ಕೊಡಿಸಿದ ಅರ್ಧದಷ್ಟು ಸಾಲ ತನಗೆ ಕೊಟ್ಟರೆ ತಾನೇ ಸಾಲ ಕಟ್ಟುವುದಾಗಿ ಹೇಳಿದ್ದ. ಆದರೆ ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣವನ್ನು ಸರೋಜಾ ಹೊಳೆಪ್ಪಗೆ ನೀಡಿದ್ದರು. ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್ನಿಂದ ಪೂರ್ತಿ ಸಾಲ ಕಟ್ಟಲು ಸೂಚನೆ ನೀಡಿದ್ದಾರೆ. ಈ ವೇಳೆ ತಾನೂ ಹಣ ಕಟ್ಟುವುದಿಲ್ಲ, ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದು ಸರೋಜ ಹೇಳಿದ್ದಾರೆ. ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಎಂದು ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡಿದ್ದಾರೆ. ಈ ವೇಳೆ ಅರ್ಧ ಸಾಲ ಪಡೆದ ಹೊಳೆಪ್ಪ ಸಹ ಸಾಲ ಕಟ್ಟುವುದಿಲ್ಲವೆಂದು ಕೈ ಎತ್ತಿದ್ದಾನೆ. ಇದನ್ನೂ ಓದಿ: ತುಮುಲ್ ಚುನಾವಣೆಯಲ್ಲಿ ಸಿಎಂ ಬಣ ಮೇಲುಗೈ – ಗುಬ್ಬಿ ಶಾಸಕ ಬಹಿರಂಗ ಅಸಮಾಧಾನ

    ಈ ಎಲ್ಲಾ ಕಿರುಕುಳ ತಾಳಲಾರದೇ ಸರೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಹೊಳೆಪ್ಪನ ವಿರುದ್ಧ ಕಾಕತೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ. ಇದನ್ನೂ ಓದಿ: ಕ್ಲಾಸ್‌ ನಡೆಯುತ್ತಿದ್ದಾಗಲೇ ತರಗತಿಯಿಂದ ಹೊರಬಂದು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

  • ಪಕ್ಷ ಸಂಘಟನೆಗಾಗಿ ಡಿಕೆಶಿ ಹೋರಾಟ ಮಾಡ್ತಿದ್ದಾರೆ, ಸಮಯ ಬಂದಾಗ ಸ್ಥಾನಮಾನ ಸಿಕ್ಕೇ ಸಿಗುತ್ತೆ: ಇಕ್ಬಾಲ್ ಹುಸೇನ್

    ಪಕ್ಷ ಸಂಘಟನೆಗಾಗಿ ಡಿಕೆಶಿ ಹೋರಾಟ ಮಾಡ್ತಿದ್ದಾರೆ, ಸಮಯ ಬಂದಾಗ ಸ್ಥಾನಮಾನ ಸಿಕ್ಕೇ ಸಿಗುತ್ತೆ: ಇಕ್ಬಾಲ್ ಹುಸೇನ್

    ರಾಮನಗರ: ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಉತ್ಸಾಹಕ್ಕಾಗಿ ಡಿ.ಕೆ.ಶಿವಕುಮಾರ್ (DK Shivakumar) ಹೋರಾಟ ಮಾಡುತ್ತಿದ್ದಾರೆ. ಸಮಯ ಬಂದಾಗ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತೆ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ತಿಳಿಸಿದ್ದಾರೆ.

    ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆಯಾಗಬೇಕು ಎಂಬ ವಿಚಾರ ಕುರಿತು ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಈ ವಿಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ಯಾರೂ ಕೂಡ ಈ ಬಗ್ಗೆ ಮಾತನಾಡಬಾರದೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಯಾವ ಬದಲಾವಣೆಯೂ ಇಲ್ಲ, ಯಾವ ಚೇರು ಕೂಡ ಖಾಲಿ ಇಲ್ಲ ಎಂದರು. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದುಗೊಳಿಸಿ – ಸುಪ್ರೀಂಗೆ 1492 ಪುಟಗಳ ದಾಖಲೆ ಸಲ್ಲಿಸಿದ ಪೊಲೀಸರು

    ಇನ್ನೂ ರಾಮನಗರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರ ಕುರಿತು ಮಾತನಾಡಿದ ಅವರು, ಜನರು ಅನಾವಶ್ಯಕವಾಗಿ ಸಂಘಗಳನ್ನ ಮಾಡಿಕೊಂಡು ಸಾಲ ಮಾಡಬಾರದು. ಬಿಡಿಸಿಸಿ ಬ್ಯಾಂಕ್‌ನಲ್ಲಿ 0%ನಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಮೈಕ್ರೋ ಫೈನಾನ್ಸ್ ಅವರನ್ನು ದೂರವಿಡಿ ಎಂದು ಜನರಿಗೆ ಮನವಿ ಮಾಡುತ್ತೇನೆ. ದುಡಿದ ಹಣವನ್ನು ಮೈಕ್ರೋ ಫೈನಾನ್ಸ್‌ಗೆ ಬಡ್ಡಿಕಟ್ಟಿ ಹಾಳು ಮಾಡಿಕೊಳ್ಳಬೇಡಿ. ಮೈಕ್ರೋ ಫೈನಾನ್ಸ್ ನಡೆಸುವವರು ಯಾವುದೇ ಆರ್‌ಬಿಐ ನಿಯಮಗಳನ್ನು ಇಟ್ಟುಕೊಂಡಿಲ್ಲ. ಅಲ್ಲದೇ ಫೈನಾನ್ಸ್‌ಗಳಿಗೂ ಆರ್‌ಬಿಐಗೂ ಯಾವುದೇ ಸಂಬಂಧವಿಲ್ಲ. ಯಾವ್ಯಾವುದೋ ದೇವರ ಹೆಸರಿಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ಫೈನಾನ್ಸ್ ಕಂಪನಿಗಳಿಗೆ ಅಂತ್ಯ ಕಾಣಬೇಕು ಎಂದು ಇಕ್ಬಾಲ್ ಹುಸೇನ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ರೌಡಿಶೀಟರ್‌ ಹತ್ಯೆ; ಬೆಂಗಳೂರಲ್ಲಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಸುಟ್ಟುಹಾಕಿದ್ದ ಹಂತಕ

  • Ramanagara | ಮೈಕ್ರೋ ಫೈನಾನ್ಸ್ ಹಾವಳಿ – ಮಹಿಳೆ ಆತ್ಮಹತ್ಯೆ

    Ramanagara | ಮೈಕ್ರೋ ಫೈನಾನ್ಸ್ ಹಾವಳಿ – ಮಹಿಳೆ ಆತ್ಮಹತ್ಯೆ

    ರಾಮನಗರ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ (Micro Finance) ಹಾವಳಿ ಮುಂದುವರಿದಿದೆ. ಫೈನಾನ್ಸ್ ಕಾಟಕ್ಕೆ ಜನರು ಊರು ತೊರೆಯುತ್ತಿರುವುದು ಒಂದು ಕಡೆಯಾದರೇ ಮತ್ತೊಂದೆಡೆ ಜೀವವನ್ನೇ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಸಾಲಗಾರರ ಕಿರುಕುಳಕ್ಕೆ ಮಹಿಳೆಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಗೆ ಜನರು ಊರು ಖಾಲಿ ಮಾಡಿಕೊಂಡು ವಲಸೆ ಹೋಗುತ್ತಿದ್ದಾರೆ. ಮತ್ತೊಂದೆಡೆ ನಿತ್ಯ ಮನೆಬಳಿ ಬಂದು ಕಿರುಕುಳ ಕೊಡುತ್ತಿರುವ ಫೈನಾನ್ಸ್ ಸಿಬ್ಬಂದಿ ಕಾಟಕ್ಕೆ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮನಗರದ  (Ramanagara) ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದ ಯಶೋದಮ್ಮ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನ ವದಂತಿ – ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನ!

    ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋದಮ್ಮ ಸುಮಾರು ಎಂಟು ಖಾಸಗಿ ಫೈನಾನ್ಸ್ ಕಂಪನಿಗಳಿಂದ 5 ಲಕ್ಷ ಸಾಲ ಪಡೆದಿದ್ದರು. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾದ ಹಿನ್ನೆಲೆ ಸರಿಯಾಗಿ ಕೆಲಸಕ್ಕೆ ಹೋಗದೇ ಸಾಲ ಮರುಪಾವತಿ ಮಾಡಿರಲಿಲ್ಲ. ಎರಡು ತಿಂಗಳು ಸಾಲ ಬಾಕಿ ಉಳಿಸಿಕೊಂಡ ಹಿನ್ನೆಲೆ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿ ಇನ್ನೆರಡು ದಿನದಲ್ಲಿ ಸಾಲ ಕಟ್ಟಲಿಲ್ಲ ಅಂದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಬೇಸತ್ತ ಯಶೋದಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ರಾಯಚೂರಿನ ಮೃತ್ಯುಂಜಯ ಮಠ, ಗೋಶಾಲೆ ನೆಲಸಮ: ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ

    ಇನ್ನೂ ಗ್ರಾಮದಲ್ಲಿ ಹಲವು ಮಂದಿ ಇದೇ ರೀತಿ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದಿದ್ದು ನಿತ್ಯ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಗ್ರಾಮಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮನೆ ಜಪ್ತಿ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಒಂದು ಫೈನಾನ್ಸ್‌ನಿಂದ ಸಾಲ ತೀರುವ ಮುನ್ನವೇ ಮತ್ತೊಂದು ಫೈನಾನ್ಸ್ನವರು ಹಣ ಕೊಡುತ್ತೇವೆ ಎಂದು ಜನರಿಗೆ ಸಾಲ ನೀಡಿ ಅಧಿಕ ಬಡ್ಡಿ ಹಾಕುತ್ತಿದ್ದಾರೆ. ಅಲ್ಲದೇ ನಾಲ್ಕು ಜನ ಮಹಿಳೆಯರನ್ನು ಸೇರಿಸಿ ಒಂದು ಗುಂಪು ಮಾಡಿ ಸಾಲ ಕೊಡುತ್ತಾರೆ. ಒಬ್ಬರು ಸಾಲ ಕಟ್ಟದಿದ್ದರೆ ಉಳಿದ ಮೂರು ಮಂದಿಗೆ ಆ ಸಾಲ ಕಟ್ಟುವಂತೆಯೂ ಫೈನಾನ್ಸ್ ಸಿಬ್ಬಂದಿ ಒತ್ತಡ ಹೇರಿ ಮಾನಸಿಕ ಕಿರುಕುಳ ಕೊಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್!

    ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಈ ಮೈಕ್ರೋ ಫೈನಾನ್ಸ್ ಭೂತಕ್ಕೆ ಜನ ಕಂಗಾಲಾಗಿದ್ದು, ಖಾಸಗಿ ಫೈನಾನ್ಸ್ ಕಿರುಕುಳ ತಪ್ಪಿಸುವಂತೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಅಮೆರಿಕದ ಏಳ್ಗೆಗಾಗಿ ವಿದೇಶಗಳಿಗೆ ತೆರಿಗೆ, ಫೆಡರಲ್‌ ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ರದ್ದು; ಮಹತ್ವದ ಆದೇಶಗಳಿಗೆ ಟ್ರಂಪ್‌ ಸಹಿ

  • ಅವಾಚ್ಯ ಶಬ್ದ ಬಳಸಿ ಸಾಲಗಾರರಿಗೆ ಬೆದರಿಕೆ ಆರೋಪ – ಮೈಕ್ರೋ ಫೈನಾನ್ಸ್ ಬ್ರಾಂಚ್ ಮ್ಯಾನೇಜರ್ ಬಂಧನ

    ಅವಾಚ್ಯ ಶಬ್ದ ಬಳಸಿ ಸಾಲಗಾರರಿಗೆ ಬೆದರಿಕೆ ಆರೋಪ – ಮೈಕ್ರೋ ಫೈನಾನ್ಸ್ ಬ್ರಾಂಚ್ ಮ್ಯಾನೇಜರ್ ಬಂಧನ

    ರಾಮನಗರ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ಹಿನ್ನೆಲೆ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಖಾಸಗಿ ಫೈನಾನ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್‌ನನ್ನು (Branch Manager) ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ರಾಮನಗರ (Ramanagara) ತಾಲೂಕಿನ ಕೋನಮುದ್ದನಹಳ್ಳಿ ಗ್ರಾಮದಲ್ಲಿ ಸಾಲಗಾರರಿಗೆ ಬ್ರಾಂಚ್ ಮ್ಯಾನೇಜರ್ ಕಿರುಕುಳ ಕೊಡುತ್ತಿದ್ದ. ಸಾಲ ಕಟ್ಟುವಂತೆ ಅವಾಚ್ಯ ಶಬ್ದ ಬಳಕೆ ಮಾಡಿ ಬೆದರಿಕೆ ಹಾಕಿದ್ದಾರೆಂದು ಸಾಲಗಾರರು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಚ್ಚೆತ್ತ ಪೊಲೀಸರು ಬಿಡದಿಯ ಖಾಸಗಿ ಫೈನಾನ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕನ್ನಡ ಮೀಡಿಯಂ ಹುಡುಗನ ಅದ್ಭುತ ಸಾಧನೆ – ಕಲಬುರಗಿ ಕುವರ ಮಂಜುನಾಥ ಸಿಂಗೆ ಈಗ ಸಿಬಿಐ ಡಿಐಜಿ

    ಯಾವುದೇ ಫೈನಾನ್ಸ್ ಕಂಪನಿಗಳು ಆರ್‌ಬಿಐ ಗೈಡ್‌ಲೈನ್ ಮೀರಿ ಸಾಲಗಾರರಿಂದ ಬಡ್ಡಿ ವಸೂಲಿ ಮಾಡಬಾರದು ಹಾಗೂ ಮನೆಗಳ ಬಳಿ ತೆರಳಿ ಮಾನಸಿಕ ಕಿರುಕುಳ ನೀಡದಂತೆ ಫೈನಾನ್ಸ್ ಕಂಪೆನಿಗಳಿಗೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಯಾದಲ್ಲಿ ಮೋದಿ ಸಾಹೇಬ್ರು ಒಬ್ಬರೇ ಸ್ಟಾರ್ ಪ್ರಚಾರಕರು: ಸಂತೋಷ್ ಲಾಡ್