Tag: ಮೆಣಸಿನಕಾಯಿ

  • ಗಿಡ ಸಮೇತ ಮೆಣಸಿನಕಾಯಿ ಕಳ್ಳತನ- ಬೆಳೆ ರಕ್ಷಿಸಲು ಸಿಸಿಟಿವಿ ಅಳವಡಿಸಿದ ರೈತ

    ಗಿಡ ಸಮೇತ ಮೆಣಸಿನಕಾಯಿ ಕಳ್ಳತನ- ಬೆಳೆ ರಕ್ಷಿಸಲು ಸಿಸಿಟಿವಿ ಅಳವಡಿಸಿದ ರೈತ

    ರಾಯಚೂರು: ಬರಗಾಲ ಬಂದಾಗಲೆಲ್ಲಾ ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಆದರೆ ಈ ಬಾರಿಯ ಬರಗಾಲ ಹೊಸ ರೀತಿಯ ಕಳ್ಳತನಕ್ಕೆ ನಾಂದಿ ಹಾಡಿದೆ. ರಾಯಚೂರು ಜಿಲ್ಲೆಯಲ್ಲಿ ರೈತರಿಗೆ ತಮ್ಮ ಬೆಳೆಗಳನ್ನ ಕಳ್ಳರಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಇಲ್ಲೊಬ್ಬ ರೈತ ಜಮೀನಿಗೆ ಸಿಸಿ ಕ್ಯಾಮೆರಾ (CCTV) ಅಳವಡಿಸಿದ್ದಾನೆ.

    ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತನ (Farmer) ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಹೀಗಿರುವಾಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದಿರುವ ರಾಯಚೂರು (Raichur) ಜಿಲ್ಲೆಯ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ಈ ಮೊದಲು ಹತ್ತಿ, ತೊಗರಿ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಮೆಣಸಿನಕಾಯಿಯ ಮೇಲೆ ಕಣ್ಣಿಟ್ಟಿದ್ದಾರೆ. ರಾತ್ರೋರಾತ್ರಿ ಗಿಡಸಮೇತ ಮೇಣಕಾಸಿನಯನ್ನು (Chilly) ಕದ್ದು ಎಸ್ಕೇಪ್ ಆಗುತ್ತಿದ್ದಾರೆ. ಇದರಿಂದ ಬೇಸತ್ತ ರೈತ ಜಮೀನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾನೆ. ಆದರೂ ಕಳ್ಳರ ಭಯ ಇರುವುದರಿಂದ ರಾತ್ರಿ ಹೊತ್ತು ಜಮೀನಿನಲ್ಲೇ ಮಲಗುತ್ತಾರೆ.

    ಮಳೆ ಕೊರತೆಯಿಂದ ಜಮೀನಿಗೆ ನೀರು ಬೀಡಲು ಸಾಕಷ್ಟು ಹಣ ಖರ್ಚು ಮಾಡಿರುವ ರೈತರು, ಕೀಟನಾಶಕ, ಗೊಬ್ಬರ ಅಂತ ಎಕರೆಗೆ ಲಕ್ಷಾಂತರ ರೂಪಾಯಿ ಸುರಿದಿದ್ದಾರೆ.ಎಕರೆಗೆ 10 ರಿಂದ 12 ಕ್ವಿಂಟಾಲ್ ಬೆಳೆ ನಿರೀಕ್ಷೆಯಿದ್ದು, ಆ ಪೈಕಿ 2-3 ಕ್ವಿಂಟಾಲ್ ಕಳ್ಳರ ಪಾಲಾದ್ರೆ ನಮಗೆ ಉಳಿಯುವುದೇನು ಅಂತ ರೈತರು ಆತಂಕಗೊAಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಬೆಳೆ ರಕ್ಷಣೆಗೆ ಸಹಾಯ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯಶ್‌ ನೋಡುವ ಕಾತರದಲ್ಲಿ ಬೈಕ್‌ ಅಪಘಾತ- ಅಭಿಮಾನಿ ಗಂಭೀರ

    ಬರಗಾಲ ರೈತರನ್ನ ಮಾತ್ರ ಸಂಕಷ್ಟಕ್ಕೆ ಸಿಲುಕಿಸಿಲ್ಲ. ಜೊತೆಗೆ ಹೊಸ ರೀತಿಯ ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. ಬೆಳೆಯನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವವರೆಗೂ ರೈತರಿಗೆ ನಿದ್ದೆಯಿಲ್ಲದಂತಾಗಿದೆ. ರೈತರ ಕಷ್ಟಕ್ಕೆ ಕೂಡಲೇ ಪರಿಹಾರ ಸಿಗಬೇಕಿದೆ.

  • ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಗದಗ: ಮೆಣಸಿನಕಾಯಿಯನ್ನು (Chilli) ಕದ್ದ ಕಳ್ಳರಿಬ್ಬರಿಗೆ (Thieves) ಗ್ರಾಮಸ್ಥರು ಕದ್ದ ಮೆಣಸಿನಕಾಯಿಯನ್ನು ತಿನ್ನುವಂತೆ ಒತ್ತಾಯಿಸಿ, ಹಿಗ್ಗಾಮುಗ್ಗ ಧರ್ಮದೇಟು ನೀಡಿರುವ ಅಮಾನವೀಯ ಘಟನೆ ಗದಗ (Gadag) ಜಿಲ್ಲೆಯಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಣ್ಣ ಅಂಗಡಿ ಹಾಗೂ ಮಂಜುನಾಥ ಗೌಡರ ಮೆಣಸಿನಕಾಯಿ ಕದ್ದ ಕಳ್ಳರು. ಮೆಣಸಿನಕಾಯಿಯನ್ನು ಕದ್ದಿರುವ ವಿಚಾರ ತಿಳಿಯುತ್ತಲೇ ಗ್ರಾಮಸ್ಥರು ಅವರಿಬ್ಬರನ್ನು ಹಿಡಿದು, ಕದ್ದ ಮೆಣಸಿನಕಾಯಿ ಮೂಟೆಯನ್ನು ಹೊರಿಸಿ, ಊರಿಡೀ ಮೆರವಣಿಗೆ ಮಾಡಿದ್ದಾರೆ.

    ಬಳಿಕ ಇಬ್ಬರಿಗೂ ಕದ್ದ ಮೆಣಸಿನಕಾಯಿಗಳನ್ನು ಸ್ಥಳದಲ್ಲೇ ತಿನ್ನುವಂತೆ ಒತ್ತಾಯಿಸಿದ್ದಾರೆ. ತಿನ್ನದೇ ಹೋದರೆ ಪೊಲೀಸರಿಗೆ ಕಂಪ್ಲೆಂಟ್ ಕೊಡುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ತಮ್ಮನ್ನು ಬಿಟ್ಟುಬಿಡುವಂತೆ ಗ್ರಾಮಸ್ಥರಲ್ಲಿ ಕೈಮುಗಿದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

    ಇಷ್ಟಾದರೂ ಬಿಡದ ಗ್ರಾಮಸ್ಥರು ಇಬ್ಬರಿಗೂ ಧರ್ಮದೇಟು ನೀಡಿ, ಕಂಬಕ್ಕೆ ಕಟ್ಟಿಹಾಕಿ, ಹಿಗ್ಗಾಮುಗ್ಗ ಥಳಿಸಿದ್ದಾರೆ. ಗ್ರಾಮಸ್ಥರು ಅಮಾನವೀಯವಾಗಿ ವರ್ತಿಸಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಕುಡಿದ ನಶೆಯಲ್ಲಿ ಟ್ರಕ್‌ನ ರೈಲ್ವೆ ಹಳಿಯಲ್ಲಿ ಬಿಟ್ಟ ಚಾಲಕ – ತಪ್ಪಿದ ಭಾರೀ ದುರಂತ

  • ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಸರಕು, ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅವಶ್ಯಕ – ವಸಂತ ಲದ್ವಾ

    ಹುಬ್ಬಳ್ಳಿ: ಕೇವಲ ರಾಜ್ಯ ಮತ್ತು ದೇಶದಲ್ಲಿ ವ್ಯಾಪಾರ ಮಾಡುವುದರಿಂದ ಅಭಿವೃದ್ಧಿಯಾಗುವುದು ಕಷ್ಟ. ಗುಣಮಟ್ಟದ ರಫ್ತು ಕೈಗೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಿಕೊಳ್ಳುವುದು ಇಂದಿನ ವ್ಯಾಪಾರದಲ್ಲಿ ಅವಶ್ಯಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದ್ವಾ ಹೇಳಿದರು.

    ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಸಹಯೋಗದಲ್ಲಿ ಆಜಾದಿಕಾ ಅಮೃತ ಮಹೋತ್ಸವ ವಾಣಿಜ್ಯ ಸಪ್ತಾಹದ ಅಂಗವಾಗಿ ಆಯೋಜಿಸಿದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ರಫ್ತಿನ ಬಗ್ಗೆ ತರಬೇತಿ ನೀಡುಬೇಕು

    ಕೋವಿಡ್ ಪರಿಣಾಮದಿಂದ ಉದ್ದಿಮೆಗಳು ನೆಲಕಚ್ಚಿವೆ. ರಾಜ್ಯದಿಂದ ಹಲವಾರು ಸೇವೆಗಳನ್ನು ರಫ್ತು ಮಾಡಲು ಇಂದಿಗೂ ನಾವು ಮುಂಬೈಗೆ ತೆರಳುವ ಅನಿವಾರ್ಯತೆ ಇದೆ. ಅದರ ಬದಲಿಗೆ ನಮ್ಮ ರಾಜ್ಯದ ನೈಸರ್ಗಿಕ ಬಂದರು ಆದ ಕಾರವಾರವನ್ನು ಉಪಯೋಗಿಸಿಕೊಳ್ಳಬೇಕು. ರಫ್ತು ಸಾಗಣೆ ಕಾರ್ಯಕ್ಕಾಗಿ ಅಂಕೋಲಾ ರೈಲು ಮಾರ್ಗ ಅಗತ್ಯವಾಗಿರುವುದರಿಂದ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಇದಕ್ಕೆ ಆದ್ಯತೆ ನೀಡಬೇಕು. ವಾಣಿಜ್ಯ ಮಂಡಳಿಯು ಪ್ರತಿ 6 ತಿಂಗಳಿಗೊಮ್ಮೆ ರಫ್ತಿನ ಬಗ್ಗೆ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉದ್ದಿಮೆದಾರರು ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸರಕುಗಳನ್ನು ರಫ್ತು ಮಾಡಬೇಕು ಎಂದು ತಿಳಿಸಿದರು.

    ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ

    ಕೆನ್ ಅಗ್ರಿಟೆಕ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಪಿ.ನಾಯಕ್ ಮಾತನಾಡಿದ್ದು, ರಫ್ತು ಅಧಿಕಗೊಳಿಸಲು ಕೃಷಿಯ ಮೇಲೆ ಹೆಚ್ಚು ಗಮನ ಹರಿಸಬೇಕು. ಕೃಷಿ ಮತ್ತು ಆಹಾರ ಸಂಸ್ಕರಣೆ ಭಾಗದಲ್ಲಿ ಜಿಲ್ಲೆ ಹೆಚ್ಚಿನ ರಫ್ತನ್ನು ಸಾಧಿಸಿದೆ. ರಾಜ್ಯದಲ್ಲಿ ಕೃಷಿ ಬೆಳೆಗೆ ಭೂಮಿ ಹಾಗೂ ಒಳ್ಳೆಯ ವಾತಾವರಣ ಇರುವುದರಿಂದ ರಫ್ತಿನಲ್ಲಿ ಮೇಲುಗೈ ಸಾಧಿಸಲು ಸಹಾಯಕವಾಗಿದೆ. ಎಲ್ಲಿ ಮತ್ತು ಹೇಗೆ ಸ್ಪರ್ಧೆ ಮಾಡಬೇಕು ಎಂಬುವುದನ್ನು ತಿಳಿದುಕೊಂಡು ಕೃಷಿಯಲ್ಲಿ ಗುಣಮಟ್ಟದ ಬೆಳೆಗಳಿಗೆ ಹೆಚ್ಚಿನ ಗಮನಹರಿಸಬೇಕು ಎಂದರು. ಇದನ್ನೂ ಓದಿ: ಕ್ಯಾತಿನಕೊಪ್ಪ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು

    ದೇಶದಲ್ಲಿ ಶೇ.80 ರಷ್ಟು ಕೃಷಿಕರು ಸಣ್ಣ ಮತ್ತು ಮಧ್ಯಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭೂರಹಿತ ರೈತರು ಕೃಷಿ ಕೆಲಸಗಳಲ್ಲಿ ಪರಿಣಿತಿ ಹೊಂದಿದ್ದು, ಅಂತಹ ರೈತರ ಕೌಶಲ್ಯಗಳನ್ನು ರಫ್ತಿಗಾಗಿ ಬಳಸಿಕೊಳ್ಳಬೇಕು. ಸುಸ್ಥಿರ ಆಹಾರ ಬೆಳೆಯ ಅಭಿವೃದ್ಧಿ ಪ್ರಾಮುಖ್ಯತೆ ನೀಡಬೇಕು. ಬೀಜದಿಂದ ರಫ್ತಿ ಮಾಡುವವರಿಗೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

    ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಳ್ಳೆಯ ಗುಣಮಟ್ಟದ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಹೀಗೆ ರಫ್ತಿನ ಬೆಳೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ವ್ಯವಸಾಯ ಮಾಡಬೇಕು. ಕೃಷಿಯು ಎಲ್ಲ ಅಭಿವೃದ್ಧಿಗಳ ಕೀಲಿ ಇದ್ದಂತೆ, ಅದರ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು. ಕೃಷಿಕರಿಂದ ರಫ್ತುದಾರರವರೆಗೆ ಎಲ್ಲರೂ ಅವರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುವುದರಿಂದ ರಫ್ತಿನ ಮಟ್ಟದಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಹಾಯವಾಗುತ್ತೆ ಎಂದರು.

    ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ಮಹೇಂದ್ರ ಲದ್ದಡ ಮಾತನಾಡಿದ್ದು, 2006 ರಲ್ಲಿ ರಾಜ್ಯದಲ್ಲಿ 8 ಲಕ್ಷ ಟನ್‍ಗಳಷ್ಟು ಹತ್ತಿ ಬೆಳೆಯಲಾಗುತ್ತಿತ್ತು. ಈ ಬೆಳೆ ಹೆಚ್ಚಿಸಲು ತೀರ್ಮಾನಿಸಿ ಸಭೆ ನಡೆಸಿ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿತ್ತು. 10 ವರ್ಷದ ಅಂತರದಲ್ಲಿ 2016ರ ಹೊತ್ತಿಗೆ 1 ಕೋಟಿ ಟನ್ ಹತ್ತಿ ಬೆಳೆಯುವಲ್ಲಿ ರಾಜ್ಯ ಯಶಸ್ಸು ಕಂಡಿದೆ. 2012 ರಿಂದ 14 ರವರೆಗೆ ಹಲವು ಬಗೆಯ ಹತ್ತಿಯನ್ನು ದೇಶದಲ್ಲಿ ಬೆಳೆಯಲಾಗಿದೆ. ಇಂದು ದೇಶದಿಂದ ಅತೀ ಹೆಚ್ಚು ಹತ್ತಿಯನ್ನು ರಫ್ತು ಮಾಡಲಾಗುತ್ತಿದೆ. ಇಂಡೋನೇಷ್ಯಾ ಮತ್ತು ಪಶ್ಚಿಮ ಬಂಗಾಳಗಳಿಗೆ 25ಕ್ಕೂ ಹೆಚ್ಚು ವರ್ಷಗಳಿಂದ ಅವಿಭಜಿತ ಧಾರವಾಡ ಜಿಲ್ಲೆಯಿಂದ ಹತ್ತಿ ರಫ್ತಾಗುತ್ತಿತ್ತು. ಉತ್ತರ ಕರ್ನಾಟಕದ ಹವಾಮಾನವು ಆಹಾರ ಪದಾರ್ಥಗಳ ಬೆಳೆಗೆ ಉತ್ತಮವಾಗಿದೆ ಎಂದು ಪ್ರಶಂಸಿದರು. ಇದನ್ನೂ ಓದಿ: ನೀರು ಮಿಕ್ಸ್ ಮಾಡಿ ಪೆಟ್ರೋಲ್, ಡೀಸೆಲ್ ಮಾರಾಟ – ರೊಚ್ಚಿಗೆದ್ದ ಜನ

    ಈ ಸಂದರ್ಭದಲ್ಲಿ ಡಿ.ಜಿ.ಎಫ್.ಟಿ ಸಹಾಯಕ ನಿರ್ದೇಶಕಿ ಗೀತಾ.ಕೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಅಶೋಕ ಗಡಾದ, ವಾಣಿಜ್ಯೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್, ಮಂಡಳಿ ಉಪಾಧ್ಯಕ್ಷ ವಿನಯ್ ಜವಳಿ, ವಾಣಿಜ್ಯೋದ್ಯಮ ಸಂಸ್ಥೆ ಜಂಟಿ ನಿರ್ದೇಶಕ ಉಮೇಶ್ ಗಡಾದ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಅಣ್ಣಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  • ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಕರಕಲು

    ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಮೆಣಸಿನಕಾಯಿ ಸುಟ್ಟು ಕರಕಲು

    ಬಳ್ಳಾರಿ: ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣ ಕೆಂಪು ಮೆಣಸಿನಕಾಯಿ ಸುಟ್ಟು ಕರಕಲಾದ ಘಟನೆ ಬಳ್ಳಾರಿ ಹಾಗೂ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ.

     

    ಇಂದು ಮಧ್ಯಾಹ್ನದ ಸಮಯದಲ್ಲಿ ಆಂದ್ರಪ್ರದೇಶದ ಅನಂತಪುರದಿಂದ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ಲಾರಿಯಲ್ಲಿ ಕಪು ಮಣಸಿನಾಕಾಯಿ ಸಾಗಿಸಲಾಗುತಿತ್ತು. ರಸ್ತೆ ದಾಟುವಾಗ ವಿದ್ಯುತ್ ತಂತಿ ತಗುಲಿದ ಪರಿಣಾಮವಾಗಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಮೂಟೆಗೆ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಪರಿಣಾಮ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಬಹುತೇಕ ಸುಟ್ಟು ಕರಕಲಾಗಿವೆ.

    ಲಾರಿ ಚಾಲಕ ಸೇರಿದಂತೆ ಸ್ಥಳೀಯರ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಲಾರಿಯಲ್ಲಿ ಇದ್ದ ಬಹುಪಾಲು ಮೆಣಸಿನಕಾಯಿ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರಾಜ್ಯದಲ್ಲಿ ಮೆಣಸಿನಕಾಯಿಗೆ ಒಳ್ಳೆಯ ಬೆಲೆ ಇದ್ದ ಕಾರಣ ಅಕ್ಕಪಕ್ಕದ ರಾಜ್ಯದ ರೈತರು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತಮ್ಮ ಮೆಣಸಿನಕಾಯಿ ಮಾರಲು ಬರುತ್ತಿದ್ದಾರೆ.

  • ಕೊರೊನಾ ಹೊಡೆತಕ್ಕೆ ನಲುಗಿದ ರೈತ – ಕಷ್ಟಪಟ್ಟು ಬೆಳೆದ ಬೆಳೆ ನಾಶ ಮಾಡಿದ

    ಕೊರೊನಾ ಹೊಡೆತಕ್ಕೆ ನಲುಗಿದ ರೈತ – ಕಷ್ಟಪಟ್ಟು ಬೆಳೆದ ಬೆಳೆ ನಾಶ ಮಾಡಿದ

    ಹುಬ್ಬಳ್ಳಿ: ಕೊರೊನಾ ವೈರಸ್ ಹೊಡೆತಕ್ಕೆ ರೈತ ಸಮುದಾಯವೇ ನಲುಗಿದ್ದು, ರೈತ ತಾವು ಕಷ್ಟಪಟ್ಟು ಬೆಳೆದಿದ್ದ ಮೆಣಸಿನಕಾಯಿ ಬೆಳೆ ನಾಶಮಾಡಿದ್ದಾರೆ. ಕೊರೊನಾ ವೈರಸ್ ಎಲ್ಲೆಡೆ ಭೀತಿ ಸೃಷ್ಟಿಸಿದ್ದು, ರೈತ ಸಮುದಾಯವನ್ನು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಸಿದೆ.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಇದರಿಂದ ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದರಿಂದ ಬೇಸರಗೊಂಡಿರುವ ರೈತ ಬಸವರಾಜ ಸೋಲಾರಗೊಪ್ಪ, ತಮ್ಮ 2 ಎಕ್ರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನು ಸಂಪೂರ್ಣ ನಾಶಪಡಿಸಿದ್ದಾರೆ.

    ಬಸವರಾಜ ಅವರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದವರಾಗಿದ್ದು, ಕೊರೊನಾ ಎಫೆಕ್ಟ್ ನಿಂದ ಹಸಿ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಟ್ರ್ಯಾಕ್ಟರ್ ನಿಂದ ಬೆಳೆ ನಾಶ ಮಾಡಿದ್ದಾರೆ. ಇತ್ತ ಮೆಣಸಿನಕಾಯಿ ಬೆಳೆದ ರೈತರಿಗೆ 15 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಇದುವರೆಗೂ ಆ ಹಣ ರೈತರ ಖಾತೆಗೆ ಜಮಾ ಮಾಡಿಲ್ಲ. ಒಂದು ಕಡೆ ಪರಿಹಾರ ಇಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲ. ಇದರಿಂದ ನೊಂದು ರೈತ ಬೆಳೆ ನಾಶ ಮಾಡಿದ್ದಾರೆ.

    ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳಿಗೆ ಬೆಲೆ ಸಿಗದೆ ರೈತರ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಸರ್ಕಾರ ರೈತ ಸಮುದಾಯ ಕಣ್ಣೀರನ್ನು ಒರೆಸಬೇಕಿದೆ.

  • ಮೆಣಸಿನಕಾಯಿ ವ್ಯಾಪಾರಿಗೆ ಕೊರೊನಾ – ಕಂಟೈನ್ಮೆಂಟ್ ಮುಕ್ತವಾಗಿದ್ದ ಪ್ರದೇಶದಲ್ಲಿ ಮತ್ತೆ ಆತಂಕ

    ಮೆಣಸಿನಕಾಯಿ ವ್ಯಾಪಾರಿಗೆ ಕೊರೊನಾ – ಕಂಟೈನ್ಮೆಂಟ್ ಮುಕ್ತವಾಗಿದ್ದ ಪ್ರದೇಶದಲ್ಲಿ ಮತ್ತೆ ಆತಂಕ

    ಧಾರವಾಡ: ಜಿಲ್ಲೆಯ ಹೊಸಯಲ್ಲಾಪುರ ಪ್ರದೇಶ ಅದೇನು ಪಾಪಾ ಮಾಡಿದೇಯೋ ಗೊತ್ತಿಲ್ಲ. ಧಾರವಾಡ ಜಿಲ್ಲೆಯ ಮೊದಲ ಪಾಸಿಟಿವ್ ಪ್ರಕರಣ ಇದೇ ಏರಿಯಾದಲ್ಲಿ ಪತ್ತೆಯಾಗಿತ್ತು. ಈ ಕಾರಣಕ್ಕೆ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಆಗಿ ಹೋಗಿದ್ದ ಈ ಪ್ರದೇಶವನ್ನು ವಾರದ ಹಿಂದಷ್ಟೇ ಕಂಟೋನ್ಮೆಂಟ್ ಝೋನಿನಿಂದ ಮುಕ್ತಗೊಳಿಸಿ, ಸಾಮಾನ್ಯ ವಲಯವನ್ನಾಗಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಗುರುವಾರ ಇದೇ ಏರಿಯಾದ ಕೋಳಿಕೆರೆಯ 35 ವರ್ಷದ ಮೆಣಸಿನಕಾಯಿ ವ್ಯಾಪಾರಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.

    ಮೊನ್ನೆಯಷ್ಟೇ ಮುಂಬೈಗೆ ಮಾವಿನಕಾಯಿ ಇಳಿಸಿ ಬರಲು ಹೋದ ನವಲೂರಿನ ಲಾರಿ ಚಾಲಕನಿಗೆ ಸೋಂಕು ತಗುಲಿತ್ತು. ಈಗ ನವಲೂರು ಅಗಸಿಗೆ ಹೊಂದಿಕೊಂಡಿರುವ ಕೋಳಿಕೆರೆಯ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಮೂಲತಃ ಮೆಣಸಿನಕಾಯಿ ವ್ಯಾಪಾರಿಯಷ್ಟೇ ಅಲ್ಲದೇ ಆಟೋ ಕೂಡ ಓಡಿಸುತ್ತಿದ್ದರು. ಮೂಲಗಳ ಪ್ರಕಾರ ಕಳೆದ 20 ದಿನ ಆಸ್ಪತ್ರಯಲ್ಲೇ ಇವರು ಇದ್ದರು ಎಂದು ಹೇಳಲಾಗಿದ್ದು, ಲಾಕ್‍ಡೌನ್ ಆದಾಗಿನಿಂದಲೂ ಇವರಿಗೆ ಆರೋಗ್ಯ ಸರಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಹೀಗಾಗಿ ಕೊರೊನಾ ಸಂದರ್ಭದಲ್ಲಿ ಇವರು ವ್ಯಾಪಾರ ಮಾಡಿಲ್ಲ ಎನ್ನಲಾಗಿದೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದು, ಇದಕ್ಕೂ ಮೊದಲು ಧಾರವಾಡದ ಒಂದು ಖಾಸಗಿ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೂ ಭೇಟಿ ನೀಡಿದ್ದರು ಎನ್ನಲಾಗಿದೆ. ತೀವ್ರ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಕಿಮ್ಸಗೆ ದಾಖಲಿಸಿ ಕೋವಿಡ್-19 ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

  • 40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    40 ಲಕ್ಷ ಮೌಲ್ಯದ ಮೆಣಸಿನಕಾಯಿ ಬೆಳೆ ಮಣ್ಣು ಪಾಲು

    ಮಂಡ್ಯ: ದೇಶವ್ಯಾಪಿ ಲಾಕ್ ಡೌನ್ ಹಿನ್ನೆಲೆ ರೈತರು ಬೆಳೆದ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ. ಮಂಡ್ಯದ ರೈತ 40 ಲಕ್ಷ ರೂ.ವೆಚ್ಚ ಮಾಡಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ ಬೆಳೆ ಕಟಾವಿಗೆ ಬಂದರೂ ಕೊಳ್ಳುವವರೇ ಇಲ್ಲದಂತಾಗಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದ ರೈತ ಶಿವಲಿಂಗೇಗೌಡರು 40 ಲಕ್ಷ ವೆಚ್ಚದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ ಹಳದಿ, ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ಬೆಳೆದಿದ್ದರು. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ದಪ್ಪ ಮೆಣಸಿನಕಾಯಿ ಬೆಳೆಯನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುವ ಭೀತಿಯಲ್ಲಿ ಶಿವಲಿಂಗೇಗೌಡರು ಇದ್ದಾರೆ. ಮೆಣಸಿನಕಾಯಿ ಕಟಾವಿಗೆ ಬಂದಿದ್ದು, ಗಿಡದಲ್ಲೇ ಕೊಳೆಯುತ್ತಿದೆ.

    ರೇಷ್ಮೆ ಬೇಸಾಯ ಬಿಟ್ಟು ತೋಟಗಾರಿಕೆ ಬೆಳೆಯತ್ತ ಮುಖಮಾಡಿದ್ದ ರೈತ ಶಿವಲಿಂಗೇಗೌಡರಿಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಹೊಡೆತ ಬಿದ್ದಿದೆ. ಕಟಾವಿಗೆ ಬರುತ್ತಿದ್ದಂತೆ ದೇಶವ್ಯಾಪಿ ಲಾಕ್ ಡೌನ್ ಆಗಿದ್ದು, ಕೊಳ್ಳುವರಿಲ್ಲದ್ದಕ್ಕೆ ರೈತ ಮೆಣಸಿನಕಾಯಿಯನ್ನು ಕಟಾವು ಮಾಡಿಲ್ಲ. ಒಂದೆಡೆ ಸರ್ಕಾರವೇ ರೈತರ ತರಕಾರಿ, ಹಣ್ಣುಗಳನ್ನು ಖರೀದಿಸಲಿದೆ. ಹಾಪ್‍ಕಾಮ್ಸ್ ಮೂಲಕ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ. ಆದರೆ ಯಾರೊಬ್ಬರೂ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ.

    ಸರ್ಕಾರ ಹಾಪ್ ಕಾಮ್ಸ್ ಮೂಲಕ ತರಕಾರಿ ಖರೀದಿಸುವ ಭರವಸೆ ನೀಡಿದ್ದಕ್ಕೆ ಶಿವಲಿಂಗೇಗೌಡರು ಅಧಿಕಾರಿಗಳನ್ನು ಭೇಟಿ ಮಾಡಿ ಮೆಣಿಸಿನಕಾಯಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

  • 2 ಕ್ಟಿಂಟಾಲ್ ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ ಮಾಜಿ ಸೈನಿಕ

    2 ಕ್ಟಿಂಟಾಲ್ ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ ಮಾಜಿ ಸೈನಿಕ

    – 10 ಚೀಲದಷ್ಟು ಸುರಿದ ಎಲ್ಲವನ್ನೂ ಬಾಚಿಕೊಂಡ್ರು

    ಮಡಿಕೇರಿ: ಕೊರೊನಾ ವೈರಸ್ ಭೀತಿ ಒಂದು ಕಡೆಯಾದರೆ, ಮತ್ತೊಂದು ಕಡೆ ರೈತ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದ ಮಾಜಿ ಸೈನಿಕರೊಬ್ಬರು ತಮ್ಮ ಒಂದು ಎಕರೆ ಭೂಮಿಯಲ್ಲಿ ಬೆಳೆದ ಹಸಿಮೆಣಸಿನಕಾಯಿಯನ್ನು ರಸ್ತೆಗೆ ಚೆಲ್ಲಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ನಡೆದಿದೆ.

    ಕೊಡ್ಲಿಪೇಟೆ ಹೊಸಮುನ್ಸಿಪಾಲ್ಟಿ ನಿವಾಸಿ ನಿವೃತ ಯೋಧ ದೇವರಾಜ್ ಅವರು ಮೆಣಸಿನಕಾಯಿಯನ್ನ ರಸ್ತೆಗೆ ಚೆಲ್ಲಿದ್ದಾರೆ. ಒಂದು ಎಕರೆಯಲ್ಲಿ ಬೆಳೆದಿದ್ದ ಹಸಿರುಮೆಣಸಿಕಾಯಿ ಕಟಾವಿಗೆ ಬಂದಿತ್ತು. ಆದರೆ ಕೊರೊನಾದಿಂದ ದೇಶವೇ ಲಾಕ್‍ಡೌನ್ ಆಗಿರುವ ಕಾರಣದಿಂದಾಗಿ ರೈತರಿಂದ ಉತ್ತಮ ಬೆಲೆಗೆ ಖರೀದಿಸುವವರಿಲ್ಲ. ಇತ್ತ ಮೆಣಸಿನಕಾಯಿ ಹಣ್ಣಾಗಿ ಕೊಳೆತು ಹೋಗುವ ಪರಿಸ್ಥಿತಿಯನ್ನು ಕಂಡ ದೇವರಾಜ್ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಮೆಣಸಿನಕಾಯಿಯನ್ನ ಸುರಿದು ಜನರಿಗೆ ಉಚಿತವಾಗಿ ತೆಗೆದುಕೊಂಡು ಹೋಗುವಂತೆ ಕೂಗಿ ಹೇಳಿದ್ದಾರೆ.

    ಇದನ್ನು ಕಂಡು ಜನರು ಮುಗಿಬಿದ್ದು ತಮಗೆ ಬೇಕಾದಷ್ಟು ಮೆಣಸಿನಕಾಯಿಯನ್ನು ಬಾಚಿಕೊಂಡು ಹೋಗಿದ್ದಾರೆ. ಸುಮಾರು 20 ಕೆ.ಜಿ ತೂಕದ ಹತ್ತು ಚೀಲದಷ್ಟು ಮೆಣಸಿನಕಾಯಿ ರಸ್ತೆಯಲ್ಲಿ ಸುರಿದ್ದನ್ನು ಒಂದು ಬೀಡದೆ ಜನರು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಜನರು ಸಾಮಾಜಿಕ ಅಂತರವನ್ನು ಕೂಡ ಕಾಯ್ದುಕೊಂಡಿಲ್ಲ.

    ಈ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ತಮ್ಮ ಹೊಲ-ಗದ್ದೆಗಳಲ್ಲಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಅವುಗಳೆಲ್ಲ ಇದೀಗ ಕೊಯ್ಲಿಗೆ ಬಂದಿದ್ದರೂ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಭಾರತದ ರೈತರು ಕೊಟ್ಟ ಏಟಿಗೆ ಪಾಕ್ ಕಂಗಾಲು – ಟೊಮೆಟೊ ಬೆನ್ನಲ್ಲೇ ಮೆಣಸಿನಕಾಯಿ ಬೆಲೆ ಭಾರೀ ಏರಿಕೆ

    ಭಾರತದ ರೈತರು ಕೊಟ್ಟ ಏಟಿಗೆ ಪಾಕ್ ಕಂಗಾಲು – ಟೊಮೆಟೊ ಬೆನ್ನಲ್ಲೇ ಮೆಣಸಿನಕಾಯಿ ಬೆಲೆ ಭಾರೀ ಏರಿಕೆ

    ನವದೆಹಲಿ: ಟೊಮೆಟೊ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಮೆಣಸಿಕಾಯಿ ಘಾಟು ಶುರುವಾಗಿದೆ. ಗ್ರಾಹಕರು ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಸಿಗದೇ ಪರದಾಡುವಂತಾಗಿದ್ದು ಬೆಲೆ ನೋಡಿಯೋ ಹೌಹಾರಿದ್ದಾರೆ ಎಂದು ವರದಿಯಾಗಿದೆ.

    ಪುಲ್ವಾಮಾದಲ್ಲಿ ಫೆ. 14ರಂದು ಉಗ್ರರ ದಾಳಿ ನಡೆದ ಭಾರತದ ರೈತರು ಪಾಕಿಸ್ತಾನಕ್ಕೆ ನಾವು ತರಕಾರಿಗಳನ್ನು ರಫ್ತು ಮಾಡುವುದಿಲ್ಲ ಎಂದು ಹೇಳಿದ್ದರು. ಇದರ ಪರಿಣಾಮ ದಿನೇ ದಿನೇ ಏರಿಕೆಯಾಗುತ್ತಿದ್ದ ಟೊಮೆಟೊ ದರ ಈಗ ಭಾರೀ ಏರಿಕೆಯಾಗಿದೆ. ಟೊಮೆಟೊದ ಜೊತೆಗೆ ಮೆಣಸಿನಕಾಯಿಯ ದರವು ಏರಿಕೆಯಾಗಿದೆ. ಇದನ್ನು ಓದಿ: ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಕಳೆದ ವರ್ಷ ಈ ಸಮಯದಲ್ಲಿ ಪ್ರತಿ ಕೆಜೆ ಟೊಮೆಟೊ ದರ 24 ಪಾಕಿಸ್ತಾನ ರೂ. ಇದ್ದರೆ ಈಗ ಬೆಲೆ 200 ರೂ. ದಾಟಿದೆ. 2018ರಲ್ಲಿ 1 ಕೆಜಿ ಹಸಿರು ಮೆಣಸಿನಕಾಯಿ 100 ರೂ. ಗಿಂತ ಕಡಿಮೆ ದರ ಇತ್ತು. ಆದರೆ ಈಗ ಒಂದೇ ತಿಂಗಳಿನಲ್ಲಿ ಬೆಲೆ 400 ರೂ. ದಾಟಿದೆ. ಇದನ್ನು ಓದಿ: ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ

    ದುಬಾರಿ ಬೆಲೆ ನೋಡಿ ವ್ಯಾಪಾರಿಗಳು ಕಂಗೆಟ್ಟು ಹೋಗಿದ್ದಾರೆ. ಟೊಮೆಟೊ, ಹಸಿರು ತರಕಾರಿಯನ್ನು ದುಬಾರಿ ಬೆಲೆ ನೀಡಿ ಖರೀದಿಸಲು ಸಾಧ್ಯವಾಗದ ವ್ಯಾಪಾರಿಗಳು ಅಂಗಡಿಯನ್ನೇ ಮುಚ್ಚಿದ್ದಾರೆ ಎಂದು ವರದಿಯಾಗಿದೆ.

    ತರಕಾರಿ ಬೆಲೆ ದುಬಾರಿ ಜೊತೆ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರ ಟೊಮೆಟೊ ಮತ್ತು ಮೆಣಸಿನ ಕಾಯಿಯನ್ನು ಮಾರಾಟ ಮಾಡದ ವ್ಯಾಪಾರಿಗಳ ಮೇಲೆ ದಂಡ ಹಾಕಿದೆ. ಬಲವಂತವಾಗಿ ತರಕಾರಿಗಳನ್ನು ಖರೀದಿಸುವಂತೆ ಆದೇಶಿಸಿದೆ. ಕೆಜಿಗೆ 100 ರೂ. ಖರೀದಿ ಮಾಡಿ ಅದನ್ನು 80 ರೂ.ಗೆ ಮಾರಾಟ ಮಾಡಿದರೆ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಕೆಲಸಗಾರರ ಸಂಬಳವನ್ನು ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿ ಪಾಕ್ ಸರ್ಕಾರದ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಾಕಿಸ್ತಾನಕ್ಕೆ ಭಾರತದಿಂದ ಹೆಚ್ಚು ಪ್ರಮಾಣದಲ್ಲಿ ತರಕಾರಿಗಳು ರಫ್ತು ಆದರೆ ನಂತರ ಸಿಂಧ್ ಮತ್ತು ಬಲೂಚಿಸ್ತಾನದಿಂದ ರಫ್ತಾಗುತಿತ್ತು. ಆದರೆ ಕಳೆದ ನಾಲ್ಕು ವಾರಗಳಿಂದ ಭಾರೀ ಮಳೆ ಸುರಿದ ಪರಿಣಾಮ ಬೆಳೆಗಳು ಹಾಳಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಆಗದ ಕಾರಣ ಬೆಲೆ ಭಾರೀ ಏರಿಕೆಯಾಗಿದೆ.

    ಸಾಧಾರಣವಾಗಿ ಪಾಕಿಸ್ತಾನದಲ್ಲಿ ಈ ರೀತಿ ತರಕಾರಿಗಳ ಬೆಲೆ ಏರಿಕೆಯಾಗುವುದಿಲ್ಲ. ಆದರೆ ಪುಲ್ವಾಮಾ ದಾಳಿ ಬಳಿಕ ಭಾರತದಿಂದ ತರಕಾರಿಗಳು ರಫ್ತು ಆಗುತ್ತಿಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದೆ ಎಂದು ತರಕಾರಿ ವ್ಯಾಪಾರಿ ಯಾಸಿನ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.

    ದೆಹಲಿಯ ಅಜಾದ್‍ಪುರ ಮಂಡಿಯಿಂದ ಪಾಕಿಸ್ತಾನಕ್ಕೆ ಬಹುತೇಕ ತರಕಾರಿಗಳು ಇಲ್ಲಿಯವರೆಗೆ ರಫ್ತಾಗುತಿತ್ತು. ಪ್ರತಿದಿನ 750- 800 ಟ್ರಕ್ ಗಳಲ್ಲಿ ಪಾಕಿಸ್ತಾನಕ್ಕೆ ತರಕಾರಿಗಳು ರಫ್ತಾಗುತಿತ್ತು. ಈಗ ಅಲ್ಲಿಂದ ಸಹ ತರಕಾರಿ ರಫ್ತಾಗುತ್ತಿಲ್ಲ. ಎಲ್ಲ ಕಡೆ ರಫ್ತು ನಿಂತ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.

    ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನವನ್ನು ಭಾರತ ಹಿಂಪಡೆಯಲಾಗಿದ್ದು, ಇದರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ರಫ್ತು ಆಗುವ ಎಲ್ಲಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.200 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪಾಕಿಸ್ತಾನ ಆರ್ಥಿಕತೆಗೆ ಭಾರತ ಪೆಟ್ಟು ನೀಡಿದೆ. ಅಕ್ಕಿ, ತರಕಾರಿ, ಪೀಠೋಪಕರಣಗಳು, ಸಿಮೆಂಟ್, ಚರ್ಮದ ಸರಕು, ಜವಳಿ ಬಟ್ಟೆ, ವಿದ್ಯುತ್ ವಸ್ತುಗಳು, ಶಸ್ತ್ರಚಿಕಿತ್ಸೆ ವಸ್ತುಗಳು ಸೇರಿ ಹಲವು ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ.

  • 1008 ಕೆಜಿಯ ಮೆಣಸಿನಕಾಯಿ ಯಾಗ

    1008 ಕೆಜಿಯ ಮೆಣಸಿನಕಾಯಿ ಯಾಗ

    ದಾವಣಗೆರೆ: ಅಮಾವಾಸ್ಯೆಯ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ 1008 ಕೆಜಿ ಮೆಣಸಿನಕಾಯಿಯ ಯಾಗ ಮಾಡಲಾಗಿದೆ.

    ಶನಿವಾರ ಸುಭಂಜಪ್ಪ ಎಂಬವರ ಹೊಲದಲ್ಲಿ ಖಾಸಗಿ ಕಂಪನಿಯೊಂದರ ಸಹಯೋಗದೊಂದಿಗೆ ತೀಕ್ಷ್ಣ ಪ್ರತ್ಯಂಗಿರ ದೇವಿಗಾಗಿ 1008 ಕೆಜಿ ಒಣ ಮೆಣಸಿನಕಾಯಿ ಬಳಸಿ ಯಾಗ ನಡೆಸಲಾಯಿತು. ಗುರೂಜಿ ಅಘೋರ ಟೀನ್ ಗಣಪತಿ ರ್ಯಾಟ್ ಅವರಿಂದ ಹೋಮಕ್ಕೆ ಚಾಲನೆ ನೀಡಲಾಗಿತ್ತು.

    ಅಂದುಕೊಂಡ ಬೇಡಿಕೆಗಳ ಈಡೇರಿಕೆಗಾಗಿ ಈ ಯಾಗವನ್ನು ಮಾಡುಲಾಗುತ್ತಿದು, ಅಮಾವಾಸ್ಯೆಯ ದಿನ ಯಾಗ ಮಾಡಿ ಮೆಣಸಿನಕಾಯಿಯನ್ನು ಹೋಮ ಕುಂಡದಲ್ಲಿ ಹಾಕಬೇಕು ಆಗ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಪುರಾತನ ಕಾಲದಲ್ಲಿಯೂ ಈ ಹೋಮ ನಡೆಸಲಾಗುತ್ತಿತ್ತು. ಭಕ್ತರು ಭಕ್ತಿಯಿಂದ ಹೋಮಕ್ಕೆ ಪೂಜೆ ಸಲ್ಲಿಸಿ ಬುಟ್ಟಿಗಳಲ್ಲಿ ತಂದ ಮೆಣಸಿನಕಾಯಿಯನ್ನು ಅಗ್ನಿ ಕುಂಡಕ್ಕೆ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv