Tag: ಮೆಜೆಸ್ಟಿಕ್

  • ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಕರ್ನಾಟಕ ಬಂದ್ – ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿ

    ಬೆಂಗಳೂರು: ಯಾವಾಗಲೂ ಜನ ಸಂದಣಿಯಿಂದ ಕೂಡಿರುತ್ತಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲೋದಕ್ಕೆ ಬಿಡುತ್ತಿರಲಿಲ್ಲ ಜನ ಓಡೋಡಿ ಬರುತ್ತಿದ್ದರು. ಆದರೆ ಇಂದು ಬಸ್‍ಗಳ ಸಂಚಾರವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಿದ್ದಾರೆ.

    ಹೌದು. ಇಂದು ಸರೋಜಿನ ಮಹಿಷಿ ವರದಿಯನ್ನ ಜಾರಿಗೆ ತರುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದೆ. ಈ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ನಾವು ಅರ್ಧ ಗಂಟೆಯಿಂದ ಕಾದರೂ ಜನ ಬರುತ್ತಿಲ್ಲ ಬಂದ್ ಅಂತ ಜನ ಭಯಪಡುತ್ತಿದ್ದಾರೆ. ವೋಲ್ವೋದಲ್ಲಂತೂ ಎರಡು ಪ್ರಯಾಣಿಕರು ಇದ್ದರೆ ಹೆಚ್ಚು ಎಂದು ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಅಳಲು ತೋಡಿಕೊಂಡರು. ಬಂದ್ ಪರಿಣಾಮ ಬಿಎಂಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಸಂಪೂರ್ಣ ಭಣಗುಟ್ಟುತ್ತಿದೆ.

    ಇತ್ತ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಪ್ರತಿ ಸರ್ಕಲ್‍ಗೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಬಸ್ ಸಂಚಾರ ಯಥಾಸ್ಥಿತಿಯಿದ್ದು, ಎಂದಿನಂತೆ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‍ಗಳು ಸಂಚರಿಸುತ್ತಿದೆ. ಆದರೆ ಜನರಿಲ್ಲದೆ ಮೆಜೆಸ್ಟಿಕ್ ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿ ಕಾಣಿಸುತ್ತಿದೆ.

    ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಕೂಡ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್‍ನಿಂದ ಫ್ರೀಡಂ ಪಾರ್ಕ್ ವರೆಗೂ ರ‍್ಯಾಲಿ ನಡೆಯಲಿರುವ ಹಿನ್ನೆಲೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಭಧ್ರತೆ ಒದಗಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಯ್ಸಳ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಹಾಗೆಯೇ ರೈಲ್ವೆ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಎಂದಿನಂತೆ ರೈಲುಗಳು ಸಂಚರಿಸಲಿದೆ. ಆದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಿದೆ.

  • ಶೀಘ್ರದಲ್ಲೇ ರೆಡಿಯಾಗಲಿದೆ ಬಸ್ ಮ್ಯೂಸಿಯಂ

    ಶೀಘ್ರದಲ್ಲೇ ರೆಡಿಯಾಗಲಿದೆ ಬಸ್ ಮ್ಯೂಸಿಯಂ

    ಬೆಂಗಳೂರು: ಸಾರಿಗೆ ಜನರ ಸಂಪರ್ಕ ಕೊಂಡಿ. ಅದರಲ್ಲೂ ಜನ ಸಾಮಾನ್ಯರ ಪ್ರಮುಖ ಸಾರಿಗೆ ಎಂದರೆ ಸರ್ಕಾರಿ ಬಸ್ಸುಗಳು. ಹೀಗಾಗಿ ರಾಜ್ಯದ ಬಸ್ ಇತಿಹಾಸದ ಕುರಿತು ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಮುಂದಾಗಿದೆ.

    ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ಇತಿಹಾಸ ಸಾರುವ ಅತ್ಯಾಕರ್ಷಕ ವಸ್ತು ಸಂಗ್ರಹಾಲಯವನ್ನು ಸಾರಿಗೆ ಇಲಾಖೆಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶೀಘ್ರದಲ್ಲೇ ನಿರ್ಮಾಣ ಮಾಡಲು ಮುಂದಾಗಿದೆ.

    ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ ಈ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿತ್ತಿದ್ದು, ಕೆಸ್‍ಆರ್‍ಟಿಸಿ ಬಸ್ಸುಗಳು ಯಾವಾಗ ರಸ್ತೆಗಳಿದವು, ವಾಯುವ್ಯ, ಈಶಾನ್ಯ, ನೈಋತ್ಯ ಸೇರಿದಂತೆ ಇತರೆ ವಿಭಾಗಗಳು ಹೇಗೆ ರೂಪುಗೊಂಡವು? ಈ ಸಂಸ್ಥೆಗಳ ಉಗಮಕ್ಕೂ ಮುನ್ನ, ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಹೇಗಿತ್ತು ಎಂಬುದರ ಕುರಿತು ಬಹುತೇಕರಿಗೆ ತಿಳಿದಿಲ್ಲ. ತಿಳಿದುಕೊಳ್ಳೋಣ ಅಂದುಕೊಂಡರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಯಾವುದೇ ಕೋಶ ಇಲ್ಲ. ಹೀಗಾಗಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಚಿಂತಿಸಿದೆ.

    ದೇಶದಲ್ಲಿ ರೈಲ್ವೆ ಮ್ಯೂಸಿಯಂ ಇದೆ. ಆದರೆ ಬಸ್ ಸಾರಿಗೆ ವ್ಯವಸ್ಥೆಯ ಇತಿಹಾಸ ಹೇಳುವ ಮ್ಯೂಸಿಯಂ ಎಲ್ಲೂ ಇಲ್ಲ. ಈ ಕೊರತೆಯನ್ನು ನೀಗಿಸಲು ಮೊದಲ ಬಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಪ್ರಯತ್ನಕ್ಕೆ ಕೈ ಹಾಕಿದೆ.

    ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ, ಸುಮಾರು 3 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವಸ್ತು ಸಂಗ್ರಹಾಲಯ ಜನ್ಮ ತಾಳಲಿದೆ. ಮ್ಯೂಸಿಯಂ ನಿರ್ಮಿಸಲು ಅನಾವಶ್ಯಕವಾಗಿ ದುಡ್ಡು ವೆಚ್ಚ ಮಾಡುತ್ತಿಲ್ಲ. ಬದಲಾಗಿ ಹಳೆಯ ಹಾಗೂ ಗುಜರಿ ಬಸ್‍ಗಳೇ, ಮ್ಯೂಸಿಯಂ ಆಗಿ ಪರಿವರ್ತನೆಗೊಂಡು, ಸಾರಿಗೆ ಇತಿಹಾಸ ಸಾರಲಿವೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು, ವಿಶೇಷ ವಿನ್ಯಾಸದ ವಸ್ತು ಸಂಗ್ರಹಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಹಳೇ ಬಸ್ ಗಳಿಗೆ ಆಕರ್ಷಕ ರೂಪ ಕೊಟ್ಟು ಮ್ಯೂಸಿಯಂ ನಿರ್ಮಿಸಲು, ಅನೇಕ ವಿನ್ಯಾಸಕರು ಮುಂದೆ ಬಂದಿದ್ದಾರೆ. ಮೆಜೆಸ್ಟಿಕ್‍ನಲ್ಲಿನ ಒಟ್ಟು 5 ಹಳೆಯ ಬಸ್ಸುಗಳು ಮ್ಯೂಸಿಯಂ ರೂಪ ತಾಳಲಿವೆ.

  • ಏಕಾಏಕಿ ಮಾಯವಾದ ಶನೇಶ್ವರ- ಭಕ್ತರು ಕಂಗಾಲು

    ಏಕಾಏಕಿ ಮಾಯವಾದ ಶನೇಶ್ವರ- ಭಕ್ತರು ಕಂಗಾಲು

    – ರೈಲ್ವೇ ಇಲಾಖೆ ವಿರುದ್ಧ ಭಕ್ತರ ಆಕ್ರೋಶ
    – ಹೈಕೋರ್ಟ್ ಆದೇಶದಂತೆ ಶನೇಶ್ವರ ಶಿಫ್ಟ್

    ಬೆಂಗಳೂರು: ಸಾಮಾನ್ಯವಾಗಿ ಭಕ್ತರು ಶನಿವಾರ ಬಂದ್ರೆ ಶನೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ. ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇಗುಲಕ್ಕೂ ಸಾಕಷ್ಟು ಜನ ಬರುತ್ತಿದ್ದರು. ಆದರೆ ದೇವಸ್ಥಾನವನ್ನು ರೈಲ್ವೇ ಇಲಾಖೆಯವರು ಏಕಾಏಕಿ ತೆರವುಗೊಳಿಸಿದ್ದಾರೆ.

    ಹೈಕೋರ್ಟ್ ಆದೇಶದಂತೆ ರೈಲ್ವೇ ಇಲಾಖೆಯ ಸಿಬ್ಬಂದಿ ಇಲಾಖೆಯ ಜಾಗದಲ್ಲಿದ್ದ ಶನೇಶ್ವರ ದೇವಸ್ಥಾನವನ್ನು ಶಿಫ್ಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಇರದ ಭಕ್ತರು ಇಂದು ಶನೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ದೇಗುಲ, ದೇವರ ಮೂರ್ತಿ ಇರದಿದ್ದನ್ನು ಕಂಡ ಭಕ್ತರು ರೈಲ್ವೇ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈಲ್ವೇ ಇಲಾಖೆ ಸಿಬ್ಬಂದಿಯು ಶನೇಶ್ವರನ ಮೂರ್ತಿಯನ್ನು ಶ್ರೀರಾಮಪುರದ ಅಯ್ಯಪ್ಪ ದೇಗುಲದಲ್ಲಿ ಇಟ್ಟಿದ್ದಾರೆ. ಆದರೆ ದೇವರ ಪಾದವನ್ನು ಮಾತ್ರ ಅಲ್ಲಿಯೇ ಬಿಟ್ಟಿದ್ದಾರೆ. ಇದನ್ನು ನೋಡಿದ ಭಕ್ತರು ರೈಲ್ವೇ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

    ನಲವತ್ತು ವರ್ಷಗಳಿಂದ ಶನೇಶ್ವರ ಇದೆ. ಆದರೆ ಅದನ್ನು ಪದೇ ಪದೇ ರೈಲ್ವೇ ಇಲಾಖೆಯವರು ಶಿಫ್ಟ್ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಹೇಗೆ. ಇಲ್ಲಿಗೆ ಬಂದು ದೇವರ ದರ್ಶನ ಪಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು. ಇಷ್ಟು ಜಾಗ ಖಾಲಿ ಇದೆ. ಇದರಲ್ಲಿ ದೇವಸ್ಥಾನಕ್ಕೆ ಒಂದಿಷ್ಟು ಜಾಗ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.

    ಮೂರನೇ ಬಾರಿ ಶನೇಶ್ವರ ಶಿಫ್ಟಿಂಗ್:
    ಇದವರೆಗೂ ಮೂರು ಬಾರಿ ಶನೇಶ್ವರ ದೇವಸ್ಥಾನವನ್ನು ಶಿಫ್ಟ್ ಮಾಡಲಾಗಿದೆ. ಈ ಹಿಂದೆ ಶ್ರೀರಾಮಪುರದಿಂದ ಓಕಳಿಪುರಂಗೆ ದೇಗುಲವನ್ನು ಶಿಫ್ಟ್ ಮಾಡಲಾಗಿತ್ತು. ಬಳಿಕ ರಸ್ತೆ ಅಗಲೀಕರಣಕದ ಉದ್ದೇಶದಿಂದ ರೈಲ್ವೇ ಇಲಾಖೆಯು ಆರು ತಿಂಗಳ ಹಿಂದಷ್ಟೇ ಮೆಜೆಸ್ಟಿಕ್ ಸಮೀಪದ ಸ್ಥಳಕ್ಕೆ ಶಿಫ್ಟ್ ಮಾಡಿತ್ತು. ಇದೀಗ ಅಲ್ಲಿಂದಲೂ ಶನೇಶ್ವರನನ್ನು ಓಕಳೀಪುರಂನಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಶಿಫ್ಟ್ ಮಾಡಿದ್ದಾರೆ.

  • ಬೆಂಗ್ಳೂರಿನಲ್ಲಿ ವರುಣನ ಅಬ್ಬರಕ್ಕೆ ಧರೆಗೆ ಉರುಳಿದ ಮರಗಳು

    ಬೆಂಗ್ಳೂರಿನಲ್ಲಿ ವರುಣನ ಅಬ್ಬರಕ್ಕೆ ಧರೆಗೆ ಉರುಳಿದ ಮರಗಳು

    ಬೆಂಗಳೂರು: ನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ವಿವಿಧೆಡೆ ನಾಲ್ಕು ಮರಗಳು ಧರೆಗೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ನಗರದ ಎಂಜಿ ರೋಡ್, ಶಿವಾಜಿ ನಗರ, ವಿಧಾನಸೌಧ, ಬಸವನಗುಡಿ, ಜೆಪಿ ನಗರ, ಓಲ್ಡ್ ಏರ್ಪೋಟ್ ರೋಡ್, ದೊಮ್ಮಲೂರು, ಮಲ್ಲೇಶ್ವರಂ, ಹೆಬ್ಬಾಳ, ಕನ್ನಿಂಗ್ ಹ್ಯಾಮ್ ರೋಡ್‍, ಯಶವಂತಪುರ ಸೇರಿದಂತೆ ವಿವಿಧೆಡೆ ವರುಣ ಅಬ್ಬರಿಸಿದ್ದಾನೆ. ಪರಿಣಾಮ ರಸ್ತೆ ಮೇಲೆ ನೀರು ನಿಂತು ವಾಹನ ಚಾಲಕರು ಹಾಗೂ ಸವಾರರು ಪರದಾಡುವಂತಾಯಿತು. ಅಷ್ಟೇ ಅಲ್ಲದೆ ಪ್ಯಾಲೇಸ್ ರಸ್ತೆಯ ಅಂಡರ್ ಪಾಸ್‍ನಲ್ಲಿ ಮಳೆ ನೀರು ತುಂಬಿದಿದ್ದರಿಂದ ರಸ್ತೆ ದಾಟಲು ಸವಾರರು ಹರ ಸಾಹಸ ಪಡುವಂತಾಯಿತು.

    ಬುಲ್ ಟೆಂಪಲ್ ರೋಡ್‍ನಲ್ಲಿ ಎರಡು ಮರಗಳು, ಜೆಸಿ ರೋಡ್‍ನಲ್ಲಿ ಒಂದು ಮರ ಹಾಗೂ ಕೋರಮಂಗಲದಲ್ಲಿ ಒಂದು ಮರ ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

    ಮೆಜೆಸ್ಟಿಕ್‍ನಲ್ಲಿ ಸಂಜೆ 7 ಗಂಟೆ ಸುಮಾರಿಗೆ ಮಳೆ ಸುರಿಯಲು ಆರಂಭಿಸಿದ್ದರಿಂದ ಪ್ರಯಾಣಿಕರು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ಪರದಾಡುವಂತಾಯಿತು. ಇತ್ತ ಎಚ್‍ಎಸ್‍ಆರ್ ಲೇಔಟ್‍ನ ರಸ್ತೆಗಳು ತುಂಬಿ ಹರಿಯುತ್ತಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

  • ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಬೆಂಗಳೂರು: ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುವ ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಲಿನಿಕ್‍ಗೆ ಕಳೆದ ಒಂದು ತಿಂಗಳಿನಿಂದ ಡಾಕ್ಟರ್ ಬಂದಿಲ್ಲ. ಹೆಚ್ಚಾಗಿ ತೃತೀಯ ಲಿಂಗಿಗಳೇ ಕ್ಲಿನಿಕ್‍ಗೆ ಬರುತ್ತಾರೆ ಎಂದು ವೈದ್ಯರು ನೇಮಕವಾಗಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾದ ಬೆನ್ನಲ್ಲೆ ಕಳೆದ ಬಾರಿ ಇದ್ದ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭ ಮಾಡಿತ್ತು. ಕೆಲವು ದಿನಗಳು ಚೆನ್ನಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ. ಇದ್ದ ವೈದ್ಯರು ಕ್ಲಿನಿಕ್ ಬಿಟ್ಟು ಒಂದು ತಿಂಗಳಾದರೂ ಇನ್ನೂ ಬೇರೆ ಡಾಕ್ಟರ್ ನೇಮಕ ಮಾಡಿಲ್ಲ.

    ಬೇರೆ ಡಾಕ್ಟರ್ ನಾ ನೇಮಕ ಮಾಡೋಣ ಅಂದರೆ ಯಾವ ಡಾಕ್ಟರ್ ಕೂಡ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ಗೆ ಬರಲು ಮುಂದಾಗುತ್ತಿಲ್ಲ. ಮಹಿಳಾ ವೈದ್ಯರು, ನಾವು ಹೋಗಲ್ಲ, ಜಾಗ ಸರಿ ಇಲ್ಲ ಮತ್ತು ತೃತೀಯ ಲಿಂಗಿಗಳು ಜಾಸ್ತಿ ಬರುತ್ತಾರೆ ಆಗಾಗಿ ನಾವು ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಪಬ್ಲಿಕ್ ಟಿವಿ, ವೈದ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ
    ಪ್ರತಿನಿಧಿ : ಯಾಕ್ ಸರ್ ಮೆಜೆಸ್ಟಿಕ್‍ನಲ್ಲಿ ಡಾಕ್ಟರ್ ಇಲ್ಲ. ಮೆಜೆಸ್ಟಿಕ್ ಅಂದರೆ ಯಾರು ಬರಲ್ಲ ಅಂತಾ ಇದಾರಂತೆ ಯಾಕೆ?
    ವೈದ್ಯಾಧಿಕಾರಿ : ಇಲ್ಲ ಸರ್ ಮೆಜೆಸ್ಟಿಕ್ ಅಂದರೆ ಲೇಡಿಸ್ ಹಾಕೋಕೆ ಆಗಲ್ಲ. ಅಲ್ಲಿ ವರ್ಕರ್ಸ್ ಜಾಸ್ತಿ
    ಪ್ರತಿನಿಧಿ : ಹುಂ ಹುಂ .
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಸರ್ ಆಗಾಗಿ ಬರುತ್ತಿಲ್ಲ.
    ಪ್ರತಿನಿಧಿ : ಹೌದಾ…
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಇದಾರೆ ಸರ್
    ಪ್ರತಿನಿಧಿ : ಆದರೆ ಏನು..
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಹೆಚ್ಚಾಗಿ ಬರುವುದು ಸರ್.. ಅವರಿಗೆ ಲೇಡಿಸ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಸರ್
    ಪ್ರತಿನಿಧಿ : ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರಾ
    ವೈದ್ಯಾಧಿಕಾರಿ : ಹೌದು.. ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರು, ಬರಲ್ಲ ಅಂತಾ ಅಂದ್ರು
    ಪ್ರತಿನಿಧಿ : ಮತ್ತೆ ಹೇಗೆ ಈಗ
    ವೈದ್ಯಾಧಿಕಾರಿ : ಈಗ ಜೆಂಟ್ಸ್ ಡಾಕ್ಟರ್ ಬರುತ್ತಾರೆ, ಸೋಮವಾರ

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರ್ ಇಲ್ಲದೇ ನರ್ಸ್‌ಗಳು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ. ವೈದ್ಯರಿಲ್ಲದೇ ನರ್ಸ್‌ಗಳ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದಕ್ಕೆ ರೋಗಿಗಳು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾಕೆ ಒಂದು ತಿಂಗಳಿನಿಂದ ಡಾಕ್ಟರ್ ಇಲ್ಲ ಎಂದು ನರ್ಸ್ ಕೇಳಿದರೆ ಏನು ಉತ್ತರ ಕೊಟ್ಟಿದ್ದಾರೆ ಎಂದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ…

    ಪ್ರತಿನಿಧಿ : ಮೆಜೆಸ್ಟಿಕ್ ಆದರೆ ಏನಂತೆ ಮೇಡಂ ಬರೋದಕ್ಕೆ
    ಇಂದಿರಾ ಕ್ಲಿನಿಕ್ ನರ್ಸ್ : ಮೆಜೆಸ್ಟಿಕ್ ಏರಿಯಾ ಸರಿ ಇಲ್ಲ ಅಂತಾ ಸರ್
    ಪ್ರತಿನಿಧಿ : ಇವರು ಯಾಕ್ ಬಿಟ್ಟಿದ್ದು
    ಇಂದಿರಾ ಕ್ಲಿನಿಕ್ ನರ್ಸ್ : ಎಂಡಿ ಮಾಡೋದಕ್ಕೆ ಹೋಗಿದ್ದಾರೆ
    ಪ್ರತಿನಿಧಿ : ಏನು ಹೇಳ್ತಾರೆ ಮೇಲಿನವರು ಯಾವಾಗ ಬರುತ್ತಾರಂತೆ
    ಇಂದಿರಾ ಕ್ಲಿನಿಕ್ ನರ್ಸ್ : ಗೊತ್ತಿಲ್ಲ ಸರ್ ಮೆಜೆಸ್ಟಿಕ್ ಸರಿ ಇಲ್ಲ ಯಾರು ಬರುತ್ತಿಲ್ಲ ಅಂತಾ ಹೇಳುತ್ತಿದ್ದಾರೆ ಸರ್
    ಪ್ರತಿನಿಧಿ : ಎರಡು ತಿಂಗಳಿನಿಂದ ಡಾಕ್ಟರ್ ಇಲ್ಲ
    ಇಂದಿರಾ ಕ್ಲಿನಿಕ್ ನರ್ಸ್ : ಒಂದು ತಿಂಗಳಿನಿಂದ ಇಲ್ಲ ಸರ್
    ಪ್ರತಿನಿಧಿ : ಯಾವಾಗ ಬರಬಹುದು ?
    ನರ್ಸ್ : ಬರುತ್ತಾರೆ ಸರ್ ಇನ್ನೊಂದು ವಾರದಲ್ಲಿ ಬರ್ತಾರೆ ಅಂತಾ ಆಫೀಸರ್ಸ್ ಹೇಳುತ್ತಿದ್ದಾರೆ ಸರ್.

  • ಉಗ್ರರಿಂದ ದಾಳಿ ಭೀತಿ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ

    ಉಗ್ರರಿಂದ ದಾಳಿ ಭೀತಿ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ

    ಬೆಂಗಳೂರು: ಉಗ್ರರರಿಂದ ದಾಳಿ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ ಒದಗಿಸಲಾಗಿದೆ.

    ಮೆಟ್ರೋ ಪ್ರವೇಶಿಸುವ ಪ್ರತಿ ಪ್ರಯಾಣಿಕರಿಗೂ ಮೆಟ್ರೋ ಸೆಕ್ಯೂರಿಟಿ ಸಿಬ್ಬಂದಿ ಪ್ರತ್ಯೇಕ ತಪಾಸಣೆ ಮಾಡುತ್ತಿದ್ದಾರೆ. ಪ್ರಯಾಣಿಕರ ಮೊಬೈಲ್, ಪರ್ಸ್‍ಗಳನ್ನು ಚೆಕ್ ಮಾಡಿ ಬಳಿಕ ಒಳಗೆ ಪ್ರವೇಶ ನೀಡುತ್ತಿದ್ದಾರೆ. ಜೊತೆಗೆ ಮರಳಿನ ಮೂಟೆಯಿಂದ ಸೆಕ್ಯೂರಿಟಿ ವಾಲ್‍ಗಳನ್ನು ಕೂಡ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿದೆ.

    ಇತ್ತ ವಿಧಾನಸೌಧಕ್ಕೂ ಕೂಡ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ವಿಧಾನಸೌಧದ ಎಲ್ಲಾ ಗೇಟ್‍ಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದೆ. ವಿಧಾನಸೌಧದ ಒಳಗೆ ಹೋಗುವವರ ತಪಾಸಣೆ ಮಾಡಿ ಬಳಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸದ್ಯ ಖಾಕಿ ಸರ್ಪಗಾವಲಿನಲ್ಲಿ ವಿಧಾನಸೌಧ ಇದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನ ಪ್ರವೇಶ ದ್ವಾರದ ಮುಂದೆಯೇ ನಿಲ್ಲಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಹಾಗೆಯೇ ವಿಧಾನಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರನ್ನೂ ತಪಾಸಣೆ ಮಾಡಿಯೇ ಭದ್ರತಾ ಸಿಬ್ಬಂದಿ ಒಳಗೆ ಕಳುಹಿಸುತ್ತಿದ್ದಾರೆ.

    ಬೆಂಗಳೂರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ತಪಾಸಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಪಿಜಿ, ಹಾಸ್ಟೆಲ್‍ಗಳ ಮೇಲೆ ಕೂಡ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.  ಎಲ್ಲಾ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಹಲವು ದಿನಗಳಿಂದ ನಿಂತಲ್ಲೇ ನಿಂತಿರೋ ವಾಹನಗಳ ತೆರವುಗೊಳಿಸಲಾಗಿದೆ. ಹಾಗೆಯೇ ದೇವಸ್ಥಾನ, ಮಸೀದಿ, ಮಾಲ್, ಹಾಸ್ಪಿಟಲ್, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೂ ನಿಗಾವಹಿಸಲಾಗಿದೆ. ಅಲ್ಲದೆ ನಗರದ ಲಾಡ್ಜ್‍ಗಳಲ್ಲಿ ದಾಖಲೆಗಳನ್ನ ನೀಡದೆ ತಂಗಿರುವವರ ವಿಚಾರಣೆ ಮಾಡಲಾಗುತ್ತಿದೆ.

    ತಡರಾತ್ರಿವರೆಗೆ ಪೊಲೀಸರಿಂದ ನಾಕಾಬಂದಿ ಹಾಕಿ ಕಾರ್ಯಾಚರಣೆ ನಡೆದಿದ್ದು, ಅಪರಿಚಿತ ಕಾರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೂರು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ರಾತ್ರಿ ಇಂದಿರಾನಗರದ ಬಳಿ ಪೊಲೀಸರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಪ್ರವೀಣ್, ಸಂತೋಷ್, ಸಂಜಯ್‍ರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಐ.ಬಿ. ಅಧಿಕಾರಿಗಳಿಂದಲೂ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.

    ವಿಚಾರಣೆ ವೇಳೆ ಕೋಲಾರ ತಾಲೂಕಿನ ಕೈವಾರದಲ್ಲಿ ಅಪಘಾತ ಮಾಡಿ ಬೆಂಗಳೂರಿಗೆ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೂರ್ವ, ಕೇಂದ್ರ ವಿಭಾಗದ ಡಿಸಿಪಿಗಳಿಂದ ವಿಚಾರಣೆ ಮುಂದುವರಿದಿದೆ.

    ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಬಹುದು ಎಂಬ ಆತಂಕ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ನಗರಗಳನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ರಾಜಧಾನಿಯಲ್ಲಿ, ಪೊಲೀಸರು ಅಲರ್ಟ್ ಆಗಿರುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ರಾಜಧಾನಿಯ ರೈಲ್ವೆ, ಬಸ್ ನಿಲ್ದಾಣ, ಮೆಟ್ರೋ, ಮಾಲ್, ಮಾರುಕಟ್ಟೆ, ದೇವಸ್ಥಾನ, ಮಸೀದಿ, ವಿಧಾನಸೌಧ, ವಿಕಾಸಸೌಧ, ಹೈಕೋಟ್9, ಸೇರಿ ಹಲವಡೆ ಖಾಕಿ ಕಟ್ಟೆಚ್ಚರ ವಹಿಸಿದೆ.

  • ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಮೆಜೆಸ್ಟಿಕ್‍ನಲ್ಲಿ ಪತ್ತೆಯಾಗಿದ್ದು ಕೊಲ್ಕತ್ತಾದಲ್ಲಿ ತಯಾರಾದ ಗ್ರೆನೇಡ್

    ಬೆಂಗಳೂರು: ಮೆಜೆಸ್ಟಿಕ್‍ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ ಕೋಲ್ಕತ್ತಾದಲ್ಲಿ ತಯಾರಾಗಿದ್ದು, ಗ್ರೆನೇಡ್‍ನ ಮೇಲೆ ಯಾವುದೇ ಮಾರ್ಕ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಪಶ್ಚಿಮ ಬಂಗಾಳದ ಸ್ಥಳೀಯ ಫ್ಯಾಕ್ಟರಿಯಲ್ಲಿ ಈ ಗ್ರೆನೇಡ್ ತಯಾರು ಮಾಡಲಾಗಿದೆ ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ದೂರದ ಪಶ್ಚಿಮ ಬಂಗಾಳದಲ್ಲಿ ತಯಾರಾದ ಗ್ರೆನೇಡ್ ಅನ್ನು ಬೆಂಗಳೂರಿಗೆ ತಂದವರು ಯಾರು? ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಇಟ್ಟವರು ಯಾರು? ಎಂಬ ಬಗ್ಗೆ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ!

    ಗ್ರೆನೇಡ್‍ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನುವ ವಿಚಾರ ತಿಳಿದು ಬಂದಿದೆ. ಬೆದರಿಕೆ ಕರೆ ಹಾಗೂ ಗ್ರೆನೇಡ್ ಪತ್ತೆಯಾದ ಬಳಿಕ ಮೆಜೆಸ್ಟಿಕ್ ಸುತ್ತಮುತ್ತ ರೈಲ್ವೇ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ. ರೈಲ್ವೇ ಎಸ್‍ಪಿ ಗುಳೇದ್ ನೇತೃತ್ವದಲ್ಲಿ ರೈಲ್ವೇ ನಿಲ್ದಾಣಕ್ಕೆ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ ಮೆಜೆಸ್ಟಿಕ್‍ನಲ್ಲಿರುವ ಹತ್ತು ಪ್ಲಾಟ್ ಫಾರ್ಮ್‍ಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಮೆಜೆಸ್ಟಿಕ್‍ನಿಂದ ಹೊರಡುವ ಎಲ್ಲಾ ರೈಲುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗುತ್ತಿದಂತೆ ಸಮೀಪದಲ್ಲಿದ್ದ ಕೆಲವು ಸ್ಟಾಲ್‍ಗಳನ್ನು ಮುಚ್ಚಿಸಿದ್ದಾರೆ.

    ಪುಲ್ವಾಮ ದಾಳಿ ನಂತರ ಇಡೀ ರೈಲ್ವೇ ನಿಲ್ದಾಣ ತಪಾಸಣೆ ಮಾಡಲಾಗಿತ್ತು. ಈ ವೇಳೆ ನಿಲ್ದಾಣದ ಸಾಕಷ್ಟು ಕಡೆಗಳಲ್ಲಿ ಸಿಸಿಟಿವಿ ಕೆಲಸ ಮಾಡದಿರುವುದು ಪತ್ತೆಯಾಗಿತ್ತು. ಆಗ ಎಲ್ಲಾ ಕಡೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ರೈಲ್ವೇ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಈಗ ಗ್ರೆನೇಡ್ ಸಿಕ್ಕಿರುವ ಜಾಗಕ್ಕೆ ಐದಾರು ಕಡೆಗಳಿಂದ ಒಳಬರಲು ದಾರಿ ಇದೆ. ಹೀಗಾಗಿಯೂ ಈ ಬಗ್ಗೆ ರೈಲ್ವೇ ಪೋಲೀಸರು ಯಾವುದೇ ಮುಂಜಾಗ್ರತೆ ಕ್ರಮ ವಹಿಸಿಲ್ಲ ಎನ್ನಲಾಗಿದೆ.

    ಈ ಬಗ್ಗೆ ಗೃಹ ಸಚಿವ ಎಂ.ಬಿ ಪಾಟೀಲ್ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಾಥಮಿಕ ವರದಿ ಪ್ರಕಾರ ಅದು ಡಮ್ಮಿ ವಸ್ತು. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಪಡೆಯುತ್ತೇವೆ. ಅದು ಯಾವ ವಸ್ತು, ಎಲ್ಲಿಂದ ಬಂತು ಅನ್ನೊ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

  • ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೈಕಿನಲ್ಲಿ ಬಂದು ಮಹಿಳೆಯನ್ನ ಅಪಹರಿಸಿ, ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಂತ್ರಸ್ತ ಮಹಿಳೆ ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದು, ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದರು. ರಾತ್ರಿ 11 ಗಂಟೆ ಆಗಿದ್ದರಿಂದ ಮಹಿಳೆ ನಿಂತಿದ್ದ ಪ್ರದೇಶಕ್ಕೆ  ಇಬ್ಬರು ವ್ಯಕ್ತಿಗಳು ಆಗಮಿಸಿ ಲೈಂಗಿಕ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಮಹಿಳೆಯು ರಸ್ತೆ ದಾಟಿ ರೈಲ್ವೇ ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಆಕೆಯನ್ನು ಅಪಹರಿಸಿ ಬಾಯಿ ಮುಚ್ಚಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

    ನಿರ್ಜನ ಪ್ರದೇಶದಲ್ಲಿ ಅಂಗಾಂಗಳನ್ನು ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಬಾಯಿಗೆ ಕಟ್ಟಿದ ಬಟ್ಟೆಯನ್ನು ತೆಗೆದು  ಕಾಪಾಡಿ ಕಾಪಾಡಿ ಎಂದು ಮಹಿಳೆ ಜೋರಾಗಿ ಕಿರುಚಾಡಿದ್ದಾರೆ. ಗಾಬರಿಗೊಂಡ ಸವಾರರು ತಕ್ಷಣವೇ ಆಕೆಯನ್ನು ಅಲ್ಲಿಯೇ ಬಿಟ್ಟು ಬೈಕ್ ಏರಿ ಪರಾರಿಯಾಗಿದ್ದಾರೆ. ಸಂತ್ರಸ್ತ ಮಹಿಳೆಯು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಬೈಕ್ ನಂಬರ್ ಸಹಿತ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

  • ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ಬೆಂಗಳೂರು: ರೈತ ಸಂಘದ ಮಧ್ಯೆ ಮಹಾ ಬಿರುಕು ಉಂಟಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಳಸಾ ಬಂಡೂರಿ ರೈತರು ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಬಂದಿಳಿದ ಮಹದಾಯಿ, ಕಳಸಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಂಗಳೂರು ಚಲೋ ನಡೆಸಿದ್ದಾರೆ.

    ಈ ವೇಳೆ ಕೋಡಿಹಳ್ಳಿ ರೈತ ಮುಖಂಡರೇ ಅಲ್ಲ, ಕೋಡಿಹಳ್ಳಿ ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡ್ತಾರೆ. ಕೋಡಿಹಳ್ಳಿ ಒಂದು ಸಂಘಟನೆ ಮಾಡಲಿ, ಅದು ಬಿಟ್ಟು ರಾಜಕೀಯ ಬಿಟ್ಟು ಬಿಡಲಿ. ಮೊನ್ನೆ ನಡೆದ ಹೋರಾಟಕ್ಕೂ ಕರೆದಿಲ್ಲ. ರಾಷ್ಟ್ರಪತಿಗಳ ಭೇಟಿ ಸಂದರ್ಭದಲ್ಲಿ ಈ ಹಿಂದೆ ರೈತರಿಂದ ದುಡ್ಡು ಕಲೆಕ್ಟ್ ಮಾಡಿದ್ರು. ಅವರ್ಯಾಕೆ ದುಡ್ಡು ವಸೂಲಿ ಮಾಡಬೇಕು? ಕೋಡಿಹಳ್ಳಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿಲ್ಲ ಅಂತ ಕೋಡಿಹಳ್ಳಿ ವಿರುದ್ಧ ರೈತರು ಕಿಡಿಕಾರಿದ್ದಾರೆ.

    ಚಳಿಗಾಲ ಅಧಿವೇಶನ ಸಮಯದಲ್ಲೂ ಪ್ರತಿ ರೈತರಿಂದ ಆರುನೂರು ರೂ. ತೆಗೆದುಕೊಂಡು ಒಂದು ದಿನ ಚಳಿಗಾಲ ಅಧಿವೇಶನ ನಡೆದಾಗ ಪ್ರತಿಭಟನೆ ಮಾಡಿ ಆರೆಸ್ಟ್ ಆಗಿ ನಾಟಕ ಮಾಡ್ತಾರೆ. ಇನ್ನು 21 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶ ಘೇರಾವ್ ಹಾಕುವ ಎಚ್ಚರಿಕೆಯನ್ನು ರೈತ ಸಂಘ ನೀಡಿದೆ. ಒಟ್ಟಿನಲ್ಲಿ ಸಾಲಮನ್ನಾದ ಹೋರಾಟದ ಮಧ್ಯೆಯೇ ರೈತರ ಮಧ್ಯೆ ಬಿರುಕು ಮೂಡಿದ್ದು, ಕೋಡಿಹಳ್ಳಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿರುವುದು ಅಚ್ಚರಿ ಮೂಡಿಸಿದೆ.

    ಮೂರು ಪಕ್ಷದ ನಾಯಕರನ್ನ ಭೇಟೆ ಮಾಡ್ತೆವೆ ನಮಗೆ ನ್ಯಾಯ ದೊರಕಿಸಿ ಕೊಡಲಿ. ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನ ಭೇಟಿ ಮಾಡ್ತೆವೆ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡ್ತೀವಿ ಅಂತಾ ಹೇಳಿದ್ರು ಅದರಂತೆ ಮಾಡಲಿ. ಸಾಲಮನ್ನಾ, ಮಹಾದಾಯಿ ಯೋಜನೆ ಜಾರಿ ಮಾಡೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರಸರ್ಕಾರದ ಫಸಲ ಭೀಮ ಯೋಜನೆಯಿಂದ ಸರಿಯಾಗಿ ದುಡ್ಡು ಬರ್ತಿಲ್ಲ. ಹಣ ಬಂದಿದ್ದರು ಅಧಿಕಾರಿಗಳು ಹಣ ನುಂಗುತ್ತಿದ್ದಾರೆ. ನಮ್ಮ ರೈತರು ಸಾಕಷ್ಟು ಜನ ಬರುತ್ತಿದ್ದಾರೆ ನಮ್ಮ ಬೇಡಿಕೆ ಈಡೇರುವರೆಗೂ ಹೊರಾಟ ಮಾಡ್ತಿವಿ ಅಂತ ರೈತರು ಧಿಕ್ಕಾರ ಕೂಗುತ್ತಿದ್ದಾರೆ.

  • ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಮೆಜೆಸ್ಟಿಕ್ ಸಿನಿಮಾ ನಿರ್ದೇಶಕ ಪಿ.ಎನ್.ಸತ್ಯ ವಿಧಿವಶ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಬ್ರೇಕ್ ಕೊಟ್ಟಿದ್ದ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪಿ.ಎನ್.ಸತ್ಯ ಇಂದು ವಿಧಿವಶರಾಗಿದ್ದಾರೆ.

    ಕಳೆದ ಒಂದು ವರ್ಷದಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸತ್ಯ ಅವರಿಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಶುಕ್ರವಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಇಂದು ಸಂಜೆ ಲೋ ಬಿಪಿ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ. ಬಸವೇಶ್ವರನಗರದ ಸತ್ಯವರ ಸೋದರಿ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗ್ತಿದೆ.

    ಮೆಜೆಸ್ಟಿಕ್, ಡಾನ್, ದಾಸ, ಸರ್ದಾರ, ಉಡೀಸ್, ಶಾಸ್ತ್ರೀ, ತಂಗಿಗಾಗಿ, ಗೂಳಿ, ಕೆಂಚ, ಹ್ಯಾಟ್ರಿಕ್ ಹೊಡಿ ಮಗ, ಸುಗ್ರೀವ, ಪಾಗಲ್, ಜೇಡರಹಳ್ಳಿ, ಶಿವಾಜಿನಗರ ಬೆಂಗಳುರು ಅಂಡರ್‍ವಲ್ಡ್ ಮತ್ತು ಮರಿ ಟೈಗರ್ ಸೇರಿದಂತೆ 16 ಚಿತ್ರಗಳನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದರು. ನಿರ್ದೇಶನ ಮಾತ್ರವಲ್ಲದೇ 21 ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಮರಿ ಟೈಗರ್ ಸತ್ಯ ನಿರ್ದೇಶನದ ಕೊನೆಯ ಚಿತ್ರ.