Tag: ಮುಸ್ಲಿಂ ಯುವಕ

  • ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ

    ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ

    ಯಾದಗಿರಿ: ಮುಸ್ಲಿಂ ಯುವಕನೊಬ್ಬ ಅಯ್ಯಪ್ಪ ಮಾಲೆ ಧರಿಸುವ ಮೂಲಕ ಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ನಿಷ್ಠೆ ಮತ್ತು ಶ್ರದ್ಧೆಯಿಂದ ಅಯ್ಯಪ್ಪ ಮಾಲಾಧಾರಿಗಳು ಪಾಲಿಸುವ ನಿಯಮಗಳನ್ನು ಪಾಲಿಸುವುದರ ಮೂಲಕ ಇಡೀ ರಾಷ್ಟ್ರಕ್ಕೆ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ್ದಾರೆ.

    ಮಹಾರಾಷ್ಟ್ರ ಮೂಲದ ಯುವಕ ಬಾಬ್ಲು ಅಫಸರ್ ಡಾಂಗೆ ಅಯ್ಯಪ್ಪ ಮಾಲೆ ತೊಟ್ಟ ಮುಸ್ಲಿಂ ಯುವಕ. ಬಾಬ್ಲು ಸದ್ಯ ಯಾದಗಿರಿ ಜಿಲ್ಲೆಯ ಗುರುಮಠಕಲ್‍ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಹಿಂದೂಗಳ ಜೊತೆ ಹೆಚ್ಚು ಒಡನಾಟ ಹೊಂದಿರುವ ಬಾಬ್ಲುಗೆ ಅಯ್ಯಪ್ಪ ಮಾಲೆ ಧರಿಸಲು ಅವರ ಕಾರು ಮಾಲೀಕ ಪ್ರೇರಣೆ.

    ತಮ್ಮ ಧರ್ಮದ ಅಲ್ಲಾನನ್ನು ಆರಾಧಿಸುವುದರ ಜೊತೆಗೆ ಬಾಬ್ಲು ಅಯ್ಯಪ್ಪನ ಪರಮ ಭಕ್ತ. ಅಲ್ಲಾನ ಜೊತೆ ಹಿಂದೂ ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ. ಬಾಬ್ಲು ಅಫಸರ್ ಇದೇ ಮೊದಲನೇ ಬಾರಿ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, 41 ದಿನಗಳ ಕಾಲ ಮಣಿಕಂಠನ ವ್ರತ ಆಚರಣೆ ಮಾಡಬೇಕಾಗುತ್ತದೆ. ಹೀಗಾಗಿ ಗುರುಮಠಕಲ್ ಪಟ್ಟಣದಲ್ಲಿರುವ ಅಯ್ಯಪ್ಪನ ಮಂದಿರದಲ್ಲಿ ಎಲ್ಲಾ ಮಾಲಾಧಾರಿಗಳ ಜೊತೆಗೆ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ಪೂಜೆಯ ಮೂಲಕ ಅಯ್ಯಪ್ಪನ ಸ್ಮರಣೆ ಮಾಡುತ್ತಿದ್ದಾರೆ.

  • ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು: ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಒಂದು ಚೀಲ ಸಿಮೆಂಟ್ ಕೊಟ್ಟಿದ್ದು ಸಾರ್ಥಕವಾಯಿತು ಎಂದು ಕೊಪ್ಪಳದ ಮುಸ್ಲಿಂ ಯುವಕ ಅಯೋಧ್ಯೆ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

    ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಸಂಶುದ್ದೀನ್ ಎರಡು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಶನಿವಾರ ನೀಡಿದ ಮಹತ್ವದ ತೀರ್ಪಿನ ಖುಷಿಯನ್ನು ಶಂಶುದ್ದೀನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಅಯೋಧ್ಯೆ ತೀರ್ಪು ದೇಶವು ಇಂದು ಖುಷಿ ಪಡುವ ವಿಚಾರ. ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವೀಕರಿಸಿದ್ದಾರೆ. ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ. ಕೊಪ್ಪಳ ಜಿಲ್ಲೆಯ ವತಿಯಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಹೋಗಿ ರಾಮ ಮಂದಿರ ನಿರ್ಮಾಣಕ್ಕೆ ಒಂದು ಚೀಲ ಸಿಮೆಂಟ್ ನೀಡಿ ಬಂದಿದ್ದೇನೆ. ಈ ಕೆಲಸ ಇಂದು ಸಾರ್ಥಕ ಅನಿಸುತ್ತಿದೆ ಎಂದು ಸಂಶುದ್ದೀನ್ ಹೇಳಿದ್ದಾರೆ.

    ನಾನೊಬ್ಬ ಭಾರತೀಯ, ಹಿಂದೂ-ಮುಸ್ಲಿಮರು ಭಾವೈಕ್ಯತೆಯಿಂದ ಬದುಕಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸುಪ್ರೀಂಕೋರ್ಟ್ ನೀಡಿದೆ. ಅಯೋಧ್ಯೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸಿದ್ದೇವೆ ಎಂದು ಸಂಶುದ್ದೀನ್ ತಿಳಿಸಿದರು. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

    ಸಂಶುದ್ದೀನ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2017ರ ಏಪ್ರಿಲ್‍ನಲ್ಲಿ ನೈತಿಕ ಬೆಂಬಲ ನೀಡಿದ್ದರು. ಜೊತೆಗೆ ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದರು. ಇದಕ್ಕೂ ಮುನ್ನ ಸಂಶುದ್ದೀನ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿತ್ತು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದರು. ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಸಂಶುದ್ದೀನ್ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ

  • ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಚಿಕ್ಕಮಗಳೂರು: ರಾಜ್ಯಾದ್ಯಂತ ದಸರಾ ಸಂಭ್ರಮ. ಹಿಂದೂಗಳಿಗೆ ಶ್ರೇಷ್ಠವಾದ ಹಬ್ಬ. ಎಲ್ಲರೂ ತಮ್ಮ-ತಮ್ಮ ವಾಹನಗಳಿಗೆ ಅಲಂಕರಿಸಿ, ಪೂಜೆ ಮಾಡಿ ಓಡಾಡಿ ಸಂಭ್ರಮಿಸುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಕೂಡ ತನ್ನ ಬಸ್ಸುಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಚಿಕ್ಕಮಗಳೂರಿನ ಎಸ್‍ಎಂಎಸ್ ಬಸ್ ಮಾಲೀಕನಾದ ಸಿರಾಜ್, ಹಿಂದೂಗಳು ನಾಚುವಂತೆ ಆಯುಧ ಪೂಜೆ ಆಚರಿಸಿದ್ದಾರೆ. ಸಿರಾಜ್ ಹಿಂದೂಗಳಂತೆ ತಾನೂ ಹಬ್ಬ ಮಾಡಿ, ಎಲ್ಲರಿಗೂ ಸಿಹಿ ಹಂಚಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.

    ಸಿರಾಜ್ ಅವರು ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ, ನಂತರ ಬಸ್ಸಿಗೆ ಚೆಂಡು ಹೂ, ಬಲೂನ್, ಬಾಳೆ ದಿಂಡು ಹಾಗೂ ಮಾವಿನ ತೋರಣದಿಂದ ಸಿಂಗರಿಸಿದ್ದಾರೆ. ಬಳಿಕ ವಾಹನಗಳಿಗೆ ಅರಿಶಿನ-ಕುಂಕುಮ, ವಿಭೂತಿ ಬಳಿದು ಆರತಿ ಮಾಡಿ ಪೂಜೆ ಮಾಡಿದ್ದಾರೆ.

    ತನ್ನೆಲ್ಲಾ ಬಸ್ಸುಗಳನ್ನು ಅಲಂಕರಿಸಿ ಹಿಂದೂ-ಮುಸ್ಲಿಂ ಎಲ್ಲರನ್ನೂ ಕರೆಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಎಲ್ಲರಿಗೂ ಸಿಹಿ ಹಂಚಿ ಆಯುಧ ಪೂಜೆಯ ಶುಭಾಶಯ ವಿನಿಮಯ ಮಾಡಿಕೊಂಡು, ಹಿಂದೂ-ಮುಸ್ಲಿಂ ಬಾಯಿ-ಬಾಯಿ ಎಂದೂ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

  • ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಮುಸ್ಲಿಂ ಯುವಕನ ಜೊತೆಯಲ್ಲಿದ್ದ ಹಿಂದೂ ಯುವತಿಗೆ ಥಳಿಸಿದ ಯುಪಿ ಮಹಿಳಾ ಪೊಲೀಸ್!

    ಲಕ್ನೋ: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಇದ್ದಳು ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮಹಿಳಾ ಪೊಲೀಸ್ ಯುವತಿಗೆ ಥಳಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇದೀಗ ಮಹಿಳಾ ಪೊಲೀಸನ್ನ ಕೆಲಸದಿಂದ ವಜಾ ಮಾಡಲಾಗಿದೆ.

    ವಿಡಿಯೋದಲ್ಲೇನಿದೆ?:
    ಯುವತಿಯನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಯುವತಿ ಮಹಿಳಾ ಪೊಲೀಸ್ ಪಕ್ಕದಲ್ಲೇ ಕುಳಿತಿದ್ದಾಳೆ. ಈ ವೇಳೆ ಪೊಲೀಸ್ ಕಾನ್ಸ್ ಸ್ಟೇಬಲ್, ಯುವತಿಗೆ ಅಸಭ್ಯ ಶಬ್ಧಗಳಿಂದ ಬೈದು, ದೈಹಿಕ ಹಿಂಸೆ ನೀಡಿದ್ದಾಳೆ. ಅಲ್ಲದೇ ನೀನ್ಯಾಕೆ ಮುಸ್ಲಿಂ ಯುವಕನನ್ನು ಫ್ರೆಂಡ್ ಮಾಡಿಕೊಂಡಿದ್ದೀಯಾ ಅಂತ ಪ್ರಶ್ನಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ವಾಹನದಲ್ಲಿ ಅವರಿಬ್ಬರ ಎದುರು ಕುಳಿತಿದ್ದ ಪೊಲೀಸ್ ವಿಡಿಯೋ ಮಾಡಿದ್ದು, ಆ ಬಳಿಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಲ್ಲದೇ ವಿಡಿಯೋ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶವ್ಯಕ್ತವಾಗಿತ್ತು. ಯುವತಿಯ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಟ್ವಿಟ್ಟಿಗರು ಕಿಡಿಕಾರಿದ್ದರು.

    `ಈವರೆಗೆ ಕೋಮುವಾದದ ಬೀಜ ಬಿತ್ತುತ್ತವೆ ಅಂತ ರಾಜಕೀಯ ಪಕ್ಷಗಳ ವಿರುದ್ಧ ಮಾತನಾಡುತ್ತಿದ್ದೆವು. ಆದ್ರೆ ಇದೀಗ ಪಕ್ಷಗಳಿಗಿಂತ ಪೊಲೀಸರೇ ಕೋಮವಾದದ ಬೀಜ ಬಿತ್ತುತ್ತಿದ್ದಾರೆ. ಹೀಗಾಗಿ ಯುವತಿ ಮೇಲೆ ಕೈ ಮಾಡಿದ್ದ ಮಹಿಳಾ ಪೊಲೀಸ್ ಕಾನ್ಸ್ ಸ್ಟೇಬಲ್ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ಈ ಪ್ರಕರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿನಾಥ್ ಅವರು ಮಧ್ಯಪ್ರವೇಶಿಸಬೇಕು’ ಅಂತ ಟ್ವಿಟ್ಟಗನೊಬ್ಬ ಬೇಡಿಕೆ ಇಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಸ್ಲಿಂ ಯುವಕನಿಂದ ದೇವಾಲಯದಲ್ಲಿ ದೀರ್ಘ ದಂಡ ನಮಸ್ಕಾರ

    ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಸ್ಲಿಂ ಯುವಕನಿಂದ ದೇವಾಲಯದಲ್ಲಿ ದೀರ್ಘ ದಂಡ ನಮಸ್ಕಾರ

    ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ್ ಗೆಲುವಿಗಾಗಿ ಮುಸ್ಲಿಂ ಯುವಕನೋರ್ವ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

    ಪಟ್ಟಣದ ರಾಜಾಬಕ್ಷಿ ಬಿಲ್ಲು ಖಾನ್ ಎಂಬವರು ವೀರಭದ್ರೇಶ್ವರ ದೇವಸ್ಥಾನದಿಂದ ದಾವಲ್ ಮಲ್ಲಿಕ್ ದರ್ಗಾದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂತಾ ರಾಜಾಭಕ್ಷಿ ಹರಕೆಯನ್ನು ಹೊತ್ತಿದ್ದಾರೆ.

    ಜಿ.ಎಸ್.ಪಾಟೀಲ್ ಈ ಬಾರಿಯೂ ರೋಣದಿಂದ ಚುನಾಯಿತರಾಗಬೇಕು. ಜೊತೆಗೆ ಸಚಿವ ಸಂಪುಟದಲ್ಲಿ ಮಹತ್ವದ ಸಚಿವ ಖಾತೆ ಪಡೆಯಬೇಕು ಎಂದು ಹಿಂದು ಹಾಗೂ ಮುಸ್ಲಿಂ ದೇವರಲ್ಲಿ ರಾಜಾಬಕ್ಷಿ ಹರಕೆ ಹೊತ್ತಿದ್ದಾರೆ.

    ಸುಮಾರು ಒಂದೂವರೆ ಕಿಲೋಮಿಟರ್ ದೂರದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಮೆಚ್ಚುಗೆಗೆ ರಾಜಾಭಕ್ಷಿ ಪಾತ್ರರಾಗಿದ್ದಾರೆ. ಈ ದೀರ್ಘ ದಂಡ ನಮಸ್ಕಾರ ವೇಳೆ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

  • ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಜಿಲ್ಲೆಯ ಮುಸ್ಲಿಂ ಯುವಕರೊಬ್ಬರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೈತಿಕ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಆಟೋ ಚಾಲಕ ಶಂಶುದ್ದೀನ್ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಹೊರಟ ಯುವಕ. ಈ ಸಂಬಂಧ ಕೊಪ್ಪಳದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದಾರೆ. ಶಂಶುದ್ದೀನ್ ಕಳೆದ ಕೆಲ ದಿನಗಳ ಹಿಂದೆ ತನ್ನ ಫೇಸ್‍ಬುಕ್‍ನಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಶಂಶುದ್ದೀನ್ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿದೆ.

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಶಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದ. ಬಿಡುಗಡೆ ಹಂತದಲ್ಲಿರುವ ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಶಂಶುದ್ದೀನ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದಾರೆ.

    ಕೊಪ್ಪಳದಿಂದ ಅಯೋಧ್ಯೆಗೆ ತೆರಳಿ ಅಲ್ಲಿಯೇ ಸಿಮೆಂಟ್ ನೀಡಲು ಶಂಶುದ್ದೀನ್ ನಿರ್ಧರಿಸಿದ್ದಾರೆ. ಭಾವೈಕ್ಯತೆ ಸಂಕೇತವಾಗಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಈ ನಿರ್ಧಾರವನ್ನು ಶಂಶುದ್ದೀನ್ ಮಾಡಿದ್ದಾರೆ.