Tag: ಮುಖ್ಯ ಶಿಕ್ಷಕರು

  • ಭ್ರಷ್ಟಾಚಾರ, ಕರ್ತವ್ಯಲೋಪ – ಗದಗದ ಮೂವರು ಮುಖ್ಯಶಿಕ್ಷಕರು ಅಮಾನತು

    ಭ್ರಷ್ಟಾಚಾರ, ಕರ್ತವ್ಯಲೋಪ – ಗದಗದ ಮೂವರು ಮುಖ್ಯಶಿಕ್ಷಕರು ಅಮಾನತು

    ಗದಗ: ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂವರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

    ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನ ಒಬ್ಬೊಬ್ಬ ಮುಖ್ಯಶಿಕ್ಷಕರು ಅಮಾನತುಗೊಂಡಿದ್ದಾರೆ. ಮಕ್ಕಳ ಶೂ ಹಾಗೂ ಸಾಕ್ಸ್ ಖರೀದಿಯಲ್ಲಿ ಇಲಾಖೆ ನಿಯಮಗಳನ್ನು ಮೀರಿ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಖರೀದಿ ಮಾಡಿರುವ ಆರೋಪದ ಮೇರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮ್ಯಾಗೇರಿ-ಶಿರಹಟ್ಟಿ ಮುಖ್ಯಶಿಕ್ಷಕ ಎಸ್.ಬಿ ಸರ್ಜಾಪೂರ ಅವರನ್ನು ಅಮಾನತುಗೊಳಿಸಲಾಗಿದೆ.

    ಅಕ್ಷರ ದಾಸೋಹ ಯೋಜನೆಯ 6.44 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಲಕ್ಷ್ಮೇಶ್ವರ ಸರಕಾರಿ ಪ್ರಾಥಮಿಕ ನಂಬರ್-4 ಶಾಲೆಯ ಮುಖ್ಯಶಿಕ್ಷಕ ಎ.ಎಸ್ ಬಣಗಾರ ಅವರನ್ನು ಮಾನತುಗೊಳಿಸಲಾಗಿದೆ. ಮದ್ಯಪಾನ ಮಾಡಿ ಶಾಲೆಗೆ ಬರುವುದು ಹಾಗೂ ಶಾಲೆಗೆ ತಡವಾಗಿ ಬರುತ್ತಿದ್ದರಿಂದ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಕೆ.ಗಾಡರೆಡ್ಡಿಯವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

    ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಗೂ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ ಇರುವ ಶಿಕ್ಷಕರು ಎಂದು ಶಿಕ್ಷಣ ಇಲಾಖೆಗೆ ದೂರು ಬಂದಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಎಲ್ಲ ಶಾಲೆಗಳು ಶ್ರಮಿಸಬೇಕು. ಮಕ್ಕಳ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

  • ವಿದ್ಯೆ ಕಲಿಸಿದ ಗುರುವಿಗೆ ಕಾರ್ ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು

    ವಿದ್ಯೆ ಕಲಿಸಿದ ಗುರುವಿಗೆ ಕಾರ್ ಗಿಫ್ಟ್ ನೀಡಿದ ಹಳೆ ವಿದ್ಯಾರ್ಥಿಗಳು

    ಮಂಗಳೂರು: ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಕಾರ್ ಗಿಫ್ಟ್ ನೀಡುವ ಮೂಲಕ ಗುರುಗಳೂ ಶಿಷ್ಯರನ್ನು ಮರೆಯಲಾಗದಂತೆ ಮಾಡಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳನ್ನು ಮರೆಯದೆ ಕಾರ್ ಗಿಫ್ಟ್ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ತಮಗೆ ಅಕ್ಷರಾಭ್ಯಾಸ ನೀಡಿದ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಿ.ಕೆ.ಫಕ್ರುದ್ದೀನ್ ಅವರು ನಿವೃತ್ತಗೊಂಡ ಸಂದರ್ಭದಲ್ಲಿ ಕಾರನ್ನು ಉಡುಗೊರೆ ನೀಡಿ ಬೀಳ್ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ನಿವೃತ್ತಿಯಾಗುತ್ತಿದೆ ಎಂದು ತಿಳಿದ ಹಳೆ ವಿದ್ಯಾರ್ಥಿಗಳು ಏನಾದರೂ ವಿಭಿನ್ನ ಉಡುಗೊರೆ ಕೊಡಬೇಕೆಂದು ನಿರ್ಧರಿಸಿದರು. ಅದರಂತೆ ನಿವೃತ್ತ ಶಿಕ್ಷಕರಿಗೆ ಶಾಲಾ ಮಂಡಳಿ, ಹಳೆ ವಿದ್ಯಾರ್ಥಿಗಳು, ಊರ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು.

    ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಫಕ್ರುದ್ದೀನ್ ಅವರಿಗೆ ಹಳೆ ವಿದ್ಯಾರ್ಥಿಗಳು ಸೇರಿ ಖರೀದಿಸಿದ ಹೊಸ ಆಲ್ಟೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಸನ್ಮಾನ ಹಾಗೂ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದ ಫಕ್ರುದ್ದೀನ್ ಅವರು ಮಾತನಾಡಿ, ಹಳೆ ವಿದ್ಯಾರ್ಥಿಗಳು ಇನ್ನೂ ನನ್ನನ್ನು ನೆನಪು ಇಟ್ಟುಕೊಂಡಿರೋದೇ ನನಗೆ ದೊಡ್ಡ ಉಡುಗೊರೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಹಾಗೂ ತನ್ನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆಗಳಲ್ಲಿರುವುದು ನನಗೆ ದೊಡ್ಡ ಉಡುಗೊರೆ. ಇಂತಹ ಅಪರೂಪದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.