Tag: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  • ಕಿಡ್ನಿ ಶಸ್ತ್ರಚಿಕಿತ್ಸೆ, ಔಷಧಿ ಸಿಗದೆ ಮಹಿಳೆ ನರಳಾಟ- ಮಾನವೀಯತೆ ಮೆರೆದ ಸಿಎಂ

    ಕಿಡ್ನಿ ಶಸ್ತ್ರಚಿಕಿತ್ಸೆ, ಔಷಧಿ ಸಿಗದೆ ಮಹಿಳೆ ನರಳಾಟ- ಮಾನವೀಯತೆ ಮೆರೆದ ಸಿಎಂ

    – ಟಿಕ್ ಟಾಕ್ ಮೂಲಕ ಗಮನ ಸೆಳೆದ ಮಗಳು
    – ವಿಡಿಯೋ ನೋಡುತ್ತಿದ್ದಂತೆ ಸಹಾಯ ಮಾಡುವಂತೆ ಸಿಎಂ ಸೂಚನೆ
    – ಪತ್ನಿಗೆ ಒಂದು ಕಿಡ್ನಿ ದಾನ ಮಾಡಿರುವ ಪತಿ

    ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮಹಿಳೆಗೆ ಆಪರೇಷನ್ ಮಾಡಿ ಕಿಡ್ನಿ ಕಸಿ ಮಾಡಿದರೂ, ಸೂಕ್ತ ಔಷಧಿ ಇಲ್ಲದೆ ನರಳಾಡುತ್ತಿದ್ದರು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಸ್ಪಂದಿಸಿದ್ದು, ಮಹಿಳೆಗೆ ಒಂದು ತಿಂಗಳ ಔಷಧಿ ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಶೇಖವ್ವ ಅರಂಭಾವಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ವೇಳೆ ಪತಿ ಪತ್ನಿಗಾಗಿ ತಮ್ಮ ಒಂದು ಕಿಡ್ನಿ ದಾನ ಮಾಡಿದ್ದರು. ಜನವರಿ 17ರಂದು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಘೋಷಣೆಯಾದ ಕಾರಣ ಶೇಖವ್ವ ಅವರಿಗೆ ಅಗತ್ಯ ಔಷಧಿಗಳು ದೊರೆಯದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು.

    ಏನು ಮಾಡುವುದು ಎಂದು ತೋಚನೆ ಅವರ ಕುಟುಂಬ ತೀವ್ರ ನೋವಿನಲ್ಲಿತ್ತು. ಆಗ ಶೇಖವ್ವ ಅವರ ಮಗಳು ಪವಿತ್ರ ಹೊಳಿದಿದ್ದೇ ಟಿಕ್ ಟಾಕ್. ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡಿ. ತನ್ನ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕುರಿತು ಪವಿತ್ರ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ಈ ಕುರಿತು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಡಿಯೋ ಸಿಎಂ ಗಮನಕ್ಕೆ ಬಂದಿದ್ದು, ತಕ್ಷಣವೇ ಎಚ್ಚೆತ್ತ ಬಿಎಸ್‍ವೈ ಬೆಳಗಾವಿ ಜಿಲ್ಲಾಧಿಕಾರಿಳಿಗೆ ಕರೆ ಮಾಡಿ ಪರಿಹಾರಕ್ಕೆ ಸೂಚಿಸಿದ್ದಾರೆ.

    ಬೆಳಗಾವಿಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಶೇಖವ್ವ ಅರಂಭಾವಿ ಅವರಿಗೆ ತಕ್ಷಣವೇ ಒಂದು ತಿಂಗಳಿಗಾಗುವಷ್ಟು ಅಗತ್ಯ ಔಷಧಿಗಳನ್ನು ಪೂರೈಸಿ ಎಂದು ಆದೇಶಿಸಿದರು. ಸಿಎಂ ಆದೇಶಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಶೇಖವ್ವ ಅರಂಭಾವಿ ಅವರಿಗೆ ಅಗತ್ಯ ಔಷಧಿ ಪೂರೈಸಿ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ.

  • ಹಾಲಿ ಸಿಎಂ ಹಂಗೆ ಹೋದ್ರು, ಮಾಜಿ ಸಿಎಂ ಮಾತನಾಡಿಸಿದ್ರು

    ಹಾಲಿ ಸಿಎಂ ಹಂಗೆ ಹೋದ್ರು, ಮಾಜಿ ಸಿಎಂ ಮಾತನಾಡಿಸಿದ್ರು

    – ಸಿಎಂ ವಿರುದ್ಧ ಸಂತ್ರಸ್ತರ ದೂರು
    – ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದ ಸಿದ್ದರಾಮಯ್ಯ

    ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಸಂತ್ರಸ್ತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ಈ ಹಿಂದೆ ಇದೇ ಸ್ಥಳಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ರಸ್ತೆ ಪಕ್ಕ ಸಂತ್ರಸ್ತರು ನಿಂತಿದ್ದರೂ ಸಹ ಹಾಗೇ ಹೋಗಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ರಸ್ತೆ ಬದಿ ನಿಂತಿದ್ದ ಗ್ರಾಮಸ್ಥರನ್ನು ಸಿದ್ದರಾಮಯ್ಯ ಮಾತನಾಡಿಸಿದ್ದಾರೆ. ಸಂತ್ರಸ್ತರನ್ನು ಕಂಡ ಸಿದ್ದರಾಮಯ್ಯ ಕಾರನ್ನು ನಿಲ್ಲಿಸಿ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ. ಈ ವೇಳೆ ಸಂತ್ರಸ್ತರು ತಮ್ಮ ಕಷ್ಟ-ನಷ್ಟವನ್ನು ಹೇಳಿಕೊಂಡಿದ್ದಾರೆ. ಸಂತ್ರಸ್ತರನ್ನು ಮಾತನಾಡಿಸಿದ ಅನಂತರ ಈ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.

    ಈ ಹಿಂದೆ ನೆರೆ ವೀಕ್ಷಣೆಗೆ ಮೂಡಿಗೆರೆಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಸ್ತೆ ಬದಿ ನಿರಾಶ್ರಿತರು ನಿಂತಿದ್ದರೂ ಸಹ ಅವರನ್ನು ಮಾತನಾಡಿಸದೆ ಹಾಗೆ ತೆರಳಿದ್ದರು. ಆದರೆ ಬಿದರಹಳ್ಳಿ ನಿರಾಶ್ರಿತರು ಸಿಎಂ ಬಿಎಸ್‍ವೈಗಾಗಿ ಕಾದು ನಿಂತಿದ್ದರು. ಇದಾವುದನ್ನು ಗಮನಿಸದ ಬಿಎಸ್‍ವೈ ಕಾರಿನಲ್ಲಿ ಹಾಗೇ ತೆರಳಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಅಧಿವೇಶನದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಬಿಜೆಪಿ ಚಿಂತನೆ ಕುರಿತು ಕಳಸದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು ಹೀಗಾಗಿ ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಲು ಹೊರಟಿದ್ದಾರೆ. ನಾಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ. ಸರ್ಕಾರದ್ದೇ ಚಾನಲ್ ಮಾಡಲು ಚಿಂತನೆ ಮಾಡಿದ್ದೆವು. ನಿರ್ಬಂಧ ಹೇರಲು ನಾವು ಹೊರಟಿರಲಿಲ್ಲ. ಬಹಳ ಮಾಧ್ಯಮಗಳು ಬಿಜೆಪಿಯವರ ಪರ ಇದ್ದವು, ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಉಪಚುನಾವಣೆ ತನಕ ತಂತಿ ಮೇಲಿನ ನಡಿಗೆ – ಕರಂದ್ಲಾಜೆ ಸಮರ್ಥನೆ

    ಉಪಚುನಾವಣೆ ತನಕ ತಂತಿ ಮೇಲಿನ ನಡಿಗೆ – ಕರಂದ್ಲಾಜೆ ಸಮರ್ಥನೆ

    ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತಂತಿ ಮೇಲಿನ ನಡಿಗೆ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡಿದ್ದು, ಉಪಚುನಾವಣೆ ವರೆಗೆ ತಂತಿಯ ಮೇಲಿನ ನಡಿಗೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹೇಳಿಕೆ ಸಹಜವಾಗಿದೆ. ರಾಜ್ಯದಲ್ಲಿ ಉಪಚುನಾವಣೆ ಇನ್ನಷ್ಟೇ ಆಗಬೇಕು. ಬಿಜೆಪಿ ಬೆಂಬಲಕ್ಕೆ ಕೇವಲ 106 ಮಂದಿ ಶಾಸಕರಿದ್ದಾರೆ. ಬಹುಮತ ಸಾಧಿಸಲು ಸಂಖ್ಯೆ 113 ಆಗಲೇಬೇಕು. ಬಹುಮತ ಸಿಗುವ ತನಕ ನಮ್ಮದು ತಂತಿ ಮೇಲಿನ ನಡಿಗೆಯೇ ಆಗಿದೆ. ಉಪಚುನಾವಣೆಯಲ್ಲಿ ಶಾಸಕರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕಿದೆ. ಸರ್ಕಾರ ಸ್ಥಿರ ಆದಮೇಲೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಉಮೇಶ್ ಕತ್ತಿ ಅಸಮಾಧಾನದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಅವರು, ಸರ್ಕಾರದಲ್ಲಿ ಮಂತ್ರಿಗಳಾಗಿರುವವರ ಸಂಖ್ಯೆ ಕಡಿಮೆ ಇದೆ. ಹಿರಿಯ ಶಾಸಕರಿಗೆಲ್ಲ ಮಂತ್ರಿ ಆಗುವ ಅಪೇಕ್ಷೆ ಇದೆ. ಅಪೇಕ್ಷೆ ತಪ್ಪಲ್ಲ, ಅವರೂ ಸಹ ಅನೇಕ ಬಾರಿ ಗೆದ್ದಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸುವುದು ಸಹಜವಾಗಿ ಕಷ್ಟದ ಕೆಲಸ ಎಂದು ಬಿಜೆಪಿ ನಾಯಕರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಉಪ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ನರಿಗೆ ದ್ರಾಕ್ಷಿ ಹುಳಿಯಾಗಿಯೇ ಇರುತ್ತದೆ. ಅಧಿಕಾರ ಸಿಗದಿದ್ದಾಗ ಈ ರೀತಿಯ ಹೇಳಿಕೆ ಕೊಡುತ್ತಾರೆ ಎಂದು ಕಿಡಿಕಾರಿದರು.

    ಯಡಿಯೂರಪ್ಪ- ಕಟೀಲ್ ಸಮನ್ವಯ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು 40 ವರ್ಷ ರಾಜಕಾರಣ ಮಾಡಿದ್ದಾರೆ. ನಳೀನ್ ಕುಮಾರ್ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಬಿಜೆಪಿ ಮತ್ತು ಸರ್ಕಾರ ಒಟ್ಟು ಸೇರಿ ರಾಜ್ಯದ ಅಭಿವೃದ್ಧಿ ಮಾಡುತ್ತದೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಮಾತನಾಡಿದ ಅವರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಮಗೆ ಬಹುಮತ ಇಲ್ಲ. ಏನಾದರೂ ಮಾಡಿ ಬಹುಮತ ಸಾಬೀತು ಮಾಡಬೇಕು. ಬೆಂಗಳೂರಿನ ನಾಯಕರ ವಿಶೇಷ ಪ್ರಯತ್ನದಿಂದ ಎಲ್ಲಾ ಸರಿಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

  • ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    ಬಿಎಸ್‍ವೈ ಒಬ್ಬಂಟಿಯಾಗಿದ್ದಾರೆ, ಫ್ರೀ ಹ್ಯಾಂಡ್ ಕೊಟ್ಟಿಲ್ಲ- ಎಸ್.ಆರ್.ಪಾಟೀಲ್

    – ಹೈ ಕಮಾಂಡ್ ಸಿಎಂ ನಿಯಂತ್ರಿಸುತ್ತಿದೆ

    ಬಾಗಲಕೋಟೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ನಡುವೆ ಮುಸುಕಿನ ಕಾಳಗ ಇದೆ. ರಾಜ್ಯಾಧ್ಯಕ್ಷರಿಗೆ ಹೈಕಮಾಂಡ್ ಬೆಂಬಲ ಇದೆ. ಆದರೆ ಯಡಿಯೂರಪ್ಪ ಅವರಿಗೆ ಫ್ರಿ ಹ್ಯಾಂಡ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹರಿಹಾಯ್ದಿದ್ದಾರೆ.

    ತಂತಿ ಮೇಲೆ ನಡೆಯುತ್ತಿದ್ದೇನೆ ಎಂಬ ಸಿಎಂ ಬಿಎಸ್‍ವೈ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಕೆಲಸ ಕಾರ್ಯದಲ್ಲಿ ವರಿಷ್ಠರು ಅಡೆತಡೆ ಉಂಟು ಮಾಡುತ್ತಿರಬಹುದು. ಸಿಎಂಗೆ ವರಿಷ್ಠರಿಂದ ಮೂಗುದಾರ ಹಾಕುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಕೊಡಬೇಕಿತ್ತು. ಆದರೆ ಹೈ ಕಮಾಂಡ್ ಹಿಡಿತ ಸಾಧಿಸುತ್ತಿದೆ. ಇದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಉಪಚುನಾವಣೆ ನಂತರ ಯಡಿಯೂರಪ್ಪ ಅವರಿಗೆ ನಿಶ್ಚಿತವಾಗಿಯೂ ತೊಂದರೆ ಇದೆ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅನರ್ಹ ಶಾಸಕರು ಸ್ಪರ್ಧೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. 15 ಸ್ಥಾನದಲ್ಲಿ ಕನಿಷ್ಟ 12 ಜನ ಶಾಸಕರು ಕಾಂಗ್ರೆಸ್‍ನಿಂದ ಆಯ್ಕೆಯಾಗುತ್ತಾರೆ. ಬಿಜೆಪಿ ಮೇಲೆ ಇದು ಪರಿಣಾಮ ಬೀರುತ್ತದೆ. ಉಪಚುನಾವಣೆ ಬಳಿಕ ಬಿಎಸ್‍ವೈ ಸರ್ಕಾರಕ್ಕೆ ತೊಂದರೆ ಇದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಉಮೇಶ್ ಕತ್ತಿ ಅನರ್ಹರಿಗೆ ಟಿಕೆಟ್ ಕೊಟ್ಟರೆ ಹುಷಾರ್ ಅಂತ ಹೇಳುತ್ತಾರೆ. ಇತ್ತ ಸಿಎಂ ತಂತಿ ಮೇಲೆ ನಡೆಯುತ್ತಿದ್ದೇನೆ ಎನ್ನುತ್ತಾರೆ. ಬಿಜೆಪಿಯಲ್ಲಿ ಆಂತರಿಕವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಮುಸುಕಿನ ಗುದ್ದಾಟಗಳು ನಡೆದಿವೆ. ಇವರ ಆಂತರಿಕ ಕಚ್ಚಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿ ಕಾರಿದರು.

    ಕೋರ್ಟ್ ಆದೇಶದ ಮೇಲೆ ಅನರ್ಹ ಶಾಸಕರ ಭವಿಷ್ಯ ನಿಂತಿದೆ. ಅನರ್ಹರನ್ನು ಯಾರೂ ಕ್ಷಮಿಸುವುದಿಲ್ಲ, ಕ್ಷೇತ್ರದ ಜನರು ಸಹ ಅವರನ್ನು ಕ್ಷಮಿಸುವುದಿಲ್ಲ. ಅವರ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ, ಒಳ್ಳೆಯದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಹೆಚ್.ಮುನಿಯಪ್ಪ ವಾಕ್ಸಮರದ ಕುರಿತು ಮಾತನಾಡಿದ ಅವರು, ನಾನು ಕೆ.ಎಚ್.ಮುನಿಯಪ್ಪ ಸ್ನೇಹಿತರು ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಪಕ್ಷದ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ಒಬ್ಬರಿಗೊಬ್ಬರು ಸಮಜಾಯಿಷಿ ನೀಡಿದ್ದಾರೆ. ಚರ್ಚೆ ಮಾಡಿದ್ದನ್ನೇ ಭಿನ್ನಾಭಿಪ್ರಾಯ ಎಂದು ತೋರಿಸಬಾರದು. ಇದು ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು.

  • ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ

    ನಾನು ಒಂದು ರೀತಿ ತಂತಿಮೇಲೆ ನಡೆಯುತ್ತಿದ್ದೇನೆ: ಬಿಎಸ್‍ವೈ

    – ಎಚ್‍ಡಿಕೆ ನಂತರ ಬಿಎಸ್‍ವೈ ಭಾವನಾತ್ಮಕ ಹೇಳಿಕೆ

    ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನಾನು ಸಾಂದರ್ಭಿಕ ಶಿಶು, ವಿಷಕಂಠ ಎಂದು ಹೇಳಿದ್ದರು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿಯ ಹೇಳಿಕೆ ನೀಡಿದ್ದಾರೆ.

    ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭಮಂಟಪದ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಈಗ ರಾಜ್ಯದಲ್ಲಿ ಭೀಕರ ಪ್ರವಾಹವಾಗಿದ್ದು, ಇನ್ನೊಂದೆಡೆ ಬರಗಾಲವಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯವಾಗಿದೆ. ಬೇರೆ ಯೋಜನೆಗಳಿಗೆ ಹಣ ನೀಡಿದರೆ ಅದು ಅಪರಾಧವಾಗುತ್ತದೆ. ಯಾರೇ ಅನುದಾನ ಕೇಳಿದರೂ ಮುಂದಿನ ಬಜೆಟ್ ನಂತರ ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದಾಗ ನನಗೆ ಸನ್ಮಾನಿಸಿದರು. ಇದೀಗ ಅಭಿನವ ರೇಣುಕ ಮಂದಿರ ಕಟ್ಟಲು 2 ಕೋಟಿ ರೂ. ಕೊಡುತ್ತೇನೆ ನೀವು ಒಂದು ಕೋಟಿ ರೂ. ಜೋಡಿಸಿ ಅಭಿನವ ರೇಣುಕ ಮಂದಿರ ನಿರ್ಮಿಸೋಣ. ಎಲ್ಲ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮ ವಹಿಸುತ್ತೇನೆ. ಈ ಸಂದರ್ಭದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ಅಕ್ಷ್ಯಮ್ಯ ಅಪರಾಧವಾಗುತ್ತದೆ. ಮುಂದಿನ ಬಜೆಟ್‍ನಲ್ಲಿ ದಸರಾ ಮಾದರಿ ಸಮಾರಂಭಗಳಿಗೆ ಹಣ ನೀಡಲು 250 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ವಿವರಿಸಿದರು.

    ಕಾರ್ಯಕ್ರಮಕ್ಕೂ ಮುನ್ನ ಜಿಎಂಐಟಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 3ರಂದು ಸಚಿವ ಸಂಪುಟ ಸಭೆ ಇದೆ, ಇದಾದ ಬಳಿಕ 6ನೇ ತಾರೀಖು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ನಿರೀಕ್ಷೆ ಇದೆ. ನಮ್ಮಲ್ಲೇ ಇರುವ ಅನುದಾನದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಜಿಲ್ಲೆ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಅವರು, 10-11 ತಾಲೂಕುಗಳಿರುವ ದೊಡ್ಡ ಜಿಲ್ಲೆಗಳಾಗಿವೆ. ಅಯಾ ತಾಲೂಕಿನ ಜನಪ್ರತಿಧಿಗಳು ಹಾಗೂ ಅಧಿಕಾರಿಗಳನ್ನು ಕರೆದು ಈ ಕುರಿತು ಚರ್ಚೆ ಮಾಡುತ್ತೇನೆ. ಈಗಾಗಲೇ ಹತ್ತು ಹನ್ನೊಂದು ಜಿಲ್ಲೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಲವೆಡೆ ಹತ್ತು ಹಲವು ತಾಲೂಕುಗಳಿವೆ ಸಣ್ಣ ಜಿಲ್ಲೆಯಾದರೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆಯಾ ಕ್ಷೇತ್ರದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನೆರೆ ಹಾವಳಿಯಿಂದ ಅಧಿವೇಶನವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ಕರೆದಿದ್ದೇವೆ. ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    33 ವರ್ಷಗಳ ಬಳಿಕ ದಾವಣಗೆರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಗಣ್ಯರು ಭಾಗಿಯಾಗಿದ್ದರು. ದಸರಾ ಕಾರ್ಯಕ್ರಮದಲ್ಲಿ ರಾಜ ಪೋಷಾಕಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಪಾಲ್ಗೊಂಡಿದ್ದರು.

  • ನಂ.1 ಶತ್ರು ಎಂದು ಹೇಳಿ ಬಿಎಸ್‍ವೈಯನ್ನು ಹೊಗಳಿದ ವಾಟಾಳ್

    ನಂ.1 ಶತ್ರು ಎಂದು ಹೇಳಿ ಬಿಎಸ್‍ವೈಯನ್ನು ಹೊಗಳಿದ ವಾಟಾಳ್

    ಚಾಮರಾಜನಗರ: ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಇಲ್ಲ ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ನೆರೆಯ ಕೇರಳ ನಡೆಸುತ್ತಿರುವ ಒತ್ತಡದ ತಂತ್ರಗಳನ್ನು ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಚಾಮರಾಜನಗರ ಜಿಲ್ಲೆ ಬಂಡೀಪುರ ಹುಲಿ ರಕ್ಷಿತಾರಣ್ಯದ ಮದ್ದೂರು ಚೆಕ್ ಪೋಸ್ಟ್ ಬಳಿ ವಾಟಾಳ್ ನಾಗರಾಜ್ ನಡುರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು.

    ಪ್ರತಿಭಟನೆಯಿಂದಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಬಂಡೀಪುರದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಿದರೆ ವನ್ಯಜೀವಿಗಳಿಗೆ ಕಂಟಕವಾಗಲಿದೆ. ಅಲ್ಲದೆ ಈ ಮಾರ್ಗದಲ್ಲಿ ಸ್ಮಗ್ಲಿಂಗ್ ನಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು ಹಾಗೂ ಯಾವುದೇ ಕಾರಣಕ್ಕೂ ನಿಷೇಧ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.

    ಬಂಡೀಪುರದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಯಡಿಯೂರಪ್ಪನವರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಎಸ್‍ವೈ ಅವರಿಂದಲೇ ರಾಜ್ಯದಲ್ಲಿ 25 ಸಂಸದರು ಗೆದ್ದಿದ್ದಾರೆ. ಯಡಿಯೂರಪ್ಪ ಇಲ್ಲದಿದ್ದರೆ ಯಾವ ಈಶ್ವರಪ್ಪನೂ ಇಲ್ಲ, ಗಣೇಶಪ್ಪನು ಎಂದು ವ್ಯಂಗವಾಡಿದರು.

    ಯಡಿಯೂರಪ್ಪ ಮತ್ತು ನಾನು ಹಿಂದೆ ಆತ್ಮೀಯ ಸ್ನೇಹಿತರಾಗಿದ್ದೆವು. ಆದರೆ ನನ್ನ ವಿರುದ್ಧವೇ ಎರಡು ಬಾರಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಯಡಿಯೂರಪ್ಪ ನನ್ನ ನಂಬರ್ ಒನ್ ಶತ್ರು ಎನ್ನುತ್ತಲೇ ಬಿಎಸ್‍ವೈ ಬಗ್ಗೆ ವಾಟಾಳ್ ನಾಗರಾಜ್ ಅನುಕಂಪದ ಮಾತುಗಳನ್ನಾಡಿದ್ದಾರೆ. ಬಿಎಸ್‍ವೈ ಈಗ ಒಬ್ಬಂಟಿ, ರೂಂನಲ್ಲಿ ಅವರೊಬ್ಬರೆ ಮಲಗುತ್ತಾರೆ, ಅಕ್ಕಪಕ್ಕ ಯಾವ ಸ್ನೇಹಿತರೂ ಮಲಗುವುದಿಲ್ಲ, ರೂಂನಲ್ಲಿ ಮಲಗಿ ತಮ್ಮ ಸ್ಥಿತಿ ಹೀಗೇಕೆ ಆಯಿತು ಎಂದು ತಪಸ್ಸು ಮಾಡುತ್ತಾರೆ. ಒಬ್ಬರೇ ಮಲಗುತ್ತಾರೆ, ಒಬ್ಬರೇ ಸ್ನಾನ ಮಾಡ್ತಾರೆ, ಒಬ್ಬರೇ ತಿಂಡಿ ತಿನ್ನುತ್ತಾರೆ ಎಂದು ಹೇಳಿದರು.

    ಇತ್ತೀಚೆಗೆ ಬಿಜೆಪಿಯಲ್ಲಿ ಯಡಿಯೂರಪ್ಪನವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಈ ಹಿಂದೆ ಬಿಎಸ್‍ವೈ ವಿರುದ್ಧ ಮಾತನಾಡಿದ್ದ ನಾಯಕರಿಗೆ ಉನ್ನತ ಹುದ್ದೆ ನೀಡುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಅಲ್ಲದೆ, ಈಶ್ವರಪ್ಪನವರು ಸಹ ಪರೋಕ್ಷವಾಗಿ ಬಿಎಸ್‍ವೈ ವಿರುದ್ಧ ಹರಿಹಾಯ್ದಿದ್ದರು.

  • ಯಾವ ಪುರುಷಾರ್ಥಕ್ಕೆ ಹೊಸ ಜಿಲ್ಲೆ – ಬಿಎಸ್‍ವೈ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

    ಯಾವ ಪುರುಷಾರ್ಥಕ್ಕೆ ಹೊಸ ಜಿಲ್ಲೆ – ಬಿಎಸ್‍ವೈ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

    ಬಳ್ಳಾರಿ: ಬಳ್ಳಾರಿಯನ್ನು ವಿಭಾಗಿಸಿ ವಿಜಯನಗರ ಹೊಸ ಜಿಲ್ಲೆ ಮಾಡಬೇಕೆಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರದ ಕುರಿತು ಮತ್ತೊಬ್ಬ ಬಿಜೆಪಿ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿ ಬಳ್ಳಾರಿಯಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ತಿಂಗಳು 19 ರಂದು ಸಿಎಂ ಯಡಿಯೂರಪ್ಪ ವಿಜಯನಗರ ಜಿಲ್ಲೆ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಹೊಸ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಹೊಸ ಜಿಲ್ಲೆ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ನಾವು ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ನಮ್ಮ ಅಭಿಪ್ರಾಯ ಪಡೆಯಬೇಕಿತ್ತು. ಸಿಎಂ ಯಡಿಯೂರಪ್ಪ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಇದು ಆತುರದ ನಿರ್ಧಾರವಾಗಿದೆ. ಕೆಲವರ ಹಿತಾಸಕ್ತಿಗೆ ಬಿಎಸ್‍ವೈ ಮಣಿದಿದ್ದಾರೆ. ಇದು ಸರಿಯಲ್ಲ ಎಂದು ಪರೋಕ್ಷವಾಗಿ ಆನಂದ್ ಸಿಂಗ್ ಅವರಿಗೆ ರೆಡ್ಡಿ ಟಾಂಗ್ ನೀಡಿದ್ದಾರೆ.

    ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಜಿಲ್ಲೆ ಆಗಬೇಕೆಂದು ಹೋರಾಟ ನಡೆಯುತ್ತಿದ್ದು, ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಶಾಂತಿ ವಾತವರಣ ನಿರ್ಮಾಣವಾಗಿದೆ. ಹಂಪಿ, ಟಿಬಿ ಡ್ಯಾಂ ನಮ್ಮ ಹೆಮ್ಮೆ, ಯಡಿಯೂಪ್ಪನವರು ಸಿಎಂ ಆಗಬೇಕಾದರೆ ನಾವೂ ಕೂಡ ಬೆಂಬಲ ಕೊಟ್ಟವರು. ನಮ್ಮನ್ನೂ ಪರಿಗಣಿಸಬೇಕಿದೆ ಎಂದು ತಿಳಿಸಿದರು.

    ಈಗ ಬೆಳಗಾವಿ, ಶಿರಸಿ, ಹೋರಾಟಗಳು ನಡೆಯುತ್ತಿವೆ. ದಯವಿಟ್ಟು ಜಿಲ್ಲೆ ಒಡೆಯಬೇಡಿ. ನಾವು ಒಗ್ಗಟ್ಟಾಗಿ ಇರಲು ಬಿಡಿ. ಬಳ್ಳಾರಿ ಒಡೆಯುವುದಾದರೆ ಹರಪನಹಳ್ಳಿ ಜಿಲ್ಲೆ ಮಾಡಿ. ನಮ್ಮ ಮೊದಲ ಆದ್ಯತೆ ಜಿಲ್ಲೆ ಅಖಂಡವಾಗಿಯೇ ಇರಲಿ. ಜಿಲ್ಲೆಯನ್ನು ಮಾಡಲೇಬೇಕು ಅಂದಾಗ ಹರಪನಹಳ್ಳಿ ಮಾಡಿ. ಆನಂದ್ ಸಿಂಗ್ ಮನವಿ ಪತ್ರ ಸಲ್ಲಿಸಿದ ಮರುದಿನವೇ ಪ್ರತಿಕ್ರಿಯೆ ನೀಡುತ್ತಾರೆ. ಅವಸರದ ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯಬೇಕು. ವೈಜ್ಞಾನಿಕವಾಗಿ ಇದು ಸರಿಯಲ್ಲ. ಮೊದಲು ಕರೆದು ಮಾತನಾಡಲಿ. ಗೌರವಾನ್ವಿತ ಸಿಎಂ ಆಲೋಚನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಿ. ಜಿಲ್ಲೆ ಒಡೆಯುವುದನ್ನು ವಿರೋಧಿಸಿ ಬಳ್ಳಾರಿ ಬಂದ್‍ಗೆ ಕರೆ ನೀಡಿರುವುದಕ್ಕೆ ನನ್ನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

  • ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    ಅಧಿಕಾರ ಉಳಿಸಿಕೊಳ್ಳಲು ಬಿಎಸ್‍ವೈ ಅಮಾವಾಸ್ಯೆ ಪೂಜೆ ಮೊರೆ?

    – ಹೊನ್ನಾಂಬಿಕೆ ದೇವಿ ದರ್ಶನ ಪಡೆದ ಬಿಎಸ್‍ವೈ
    – ಸರ್ಕಾರ ಪೂರ್ಣಾವಧಿ ಪೂರೈಸಲೆಂದು ಪ್ರಾರ್ಥನೆ

    ತುಮಕೂರು: ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹಾಲಯ ಅಮಾವಾಸ್ಯೆ ಪೂಜೆಯ ಮೊರೆ ಹೋದರಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಬಿಎಸ್‍ವೈ ಇಂದು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಹೊನ್ನಾಂಬಿಕೆ ದೇವಿ ಮೊರೆ ಹೋಗಿದ್ದು, ಯಡಿಯೂರಪ್ಪನವರು ಸಿಎಂ ಆಗುವುದಾಗಿ ಇದೇ ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು. ಈ ಕುರಿತು ಮೂರು ತಿಂಗಳ ಹಿಂದೆ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಯಡಿಯೂರಪ್ಪನವರ ಪರ ಭವಿಷ್ಯ ಕೇಳಿದ್ದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಮುಖ್ಯಮಂತ್ರಿಯಾದರೂ ಸಂಕಷ್ಟ ಇದೆ ಎಂದು ಹೊನ್ನಾಂಬಿಕೆ ದೇವಿ ಭವಿಷ್ಯ ನುಡಿದಿದ್ದಳು.

    ಸಂಕಷ್ಟ ಪರಿಹಾರಕ್ಕಾಗಿ ಮಹಾಲಯ ಅಮಾವಾಸ್ಯೆಯಂದು ಪೂಜೆ ಸಲ್ಲಿಸುವಂತೆ ಅರ್ಚಕರು ಈ ಹಿಂದೆ ಬಿಎಸ್‍ವೈ ಭೇಟಿ ನೀಡಿದಾಗ ಸೂಚಿಸಿದ್ದರು. ಹೀಗಾಗಿ ಆಪ್ತ ಸಹಾಯಕ ಸಂತೋಷ್ ಅವರ ಸಲಹೆಯಂತೆ ಸಿಎಂ ಯಡಿಯೂರಪ್ಪ ಹೊನ್ನಾಂಬಿಕಾ ದೇವಸ್ಥಾನಕ್ಕೆ ಮಧ್ಯಾಹ್ನ 1 ಗಂಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿಎಸ್‍ವೈ ದೇವಿಗೆ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ಧೂತರಾಯನ ಬಳಿ ಸಿಎಂ ಪ್ರಶ್ನೆ ಹಾಕಿದರು. ಸಿಎಂ ಮತ್ತು ಅರ್ಚಕರಿಗೆ ಮಾತ್ರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ಕಲ್ಪಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಪೂಜೆ ನಂತರ ಪ್ರತಿಕ್ರಿಯಿಸಿದ ಬಿಎಸ್‍ವೈ, ತಾಯಿಯ ಆಶೀರ್ವಾದ ಪಡೆದಿದ್ದೇನೆ. ಜನತೆ ನೆಮ್ಮದಿ ಸುಭೀಕ್ಷದಿಂದ ಇರಲಿ, ನಮ್ಮ ಸರ್ಕಾರದ ಅವಧಿ ಪೂರ್ಣವಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಮ್ಮ ಆಪ್ತ ಸಂತೋಷ್ ಒತ್ತಾಯದ ಮೇರೆಗೆ ಬಂದಿದ್ದೇನೆ. ಇಂದು ಮಹಾಲಯ ಅಮಾವಾಸ್ಯೆ ಒಳ್ಳೆದಾಗುತ್ತೆ ಎಂದಿದ್ದರು ಹಾಗಾಗಿ ಬಂದಿದ್ದೆ. ತಾಯಿಯ ದರ್ಶನದಿಂದ ನೆಮ್ಮದಿ ಸಮಾಧಾನ ತೃಪ್ತಿ ಹಾಗೂ ಪ್ರೇರಣೆ ಸಿಕ್ಕಿದೆ. ಇಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಒತ್ತಾಯವಿದೆ. ಇದಕ್ಕಾಗಿ ತಕ್ಷಣ 50 ಲಕ್ಷ ರೂ. ಬಿಡುಗಡೆ ಮಾಡುತ್ತೇವೆ. ತಿಂಗಳೊಳಗೆ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

  • ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    – ನಮ್ಮ ಸರ್ಕಾರ ಇನ್ನು ಸಾಲ ಮನ್ನಾ ನಿರ್ಧಾರ ತೆಗೊಂಡಿಲ್ಲ

    ತುಮಕೂರು: ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ನೀಡುವುದು ತಪ್ಪಲ್ಲ. “ಕಮರ್ಷಿಯಲ್ ಬ್ಯಾಂಕ್‍ಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಮಾಡಿದರೂ ರೈತರಿಗೆ ನೋಟಿಸ್ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಾಲದ ಕುರಿತು ನೋಟಿಸ್ ನೀಡಬೇಡಿ ಎಂದು ನಮ್ಮ ಸಹಕಾರಿ ಬ್ಯಾಂಕ್‍ಗಳಿಗೆ ನಿರ್ದೇಶನ ಕೊಡಬಹುದು. ಆದರೆ ಕಮರ್ಷಿಯಲ್ ಬ್ಯಾಂಕ್‍ಗಳಿಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ. ಅಲ್ಲದೆ ಸಾಲ ಮನ್ನಾ ನಿರ್ಧಾರವನ್ನು ನಮ್ಮ ಸರ್ಕಾರ ಇನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಲ ವಸೂಲಾತಿಗೆ ಬ್ಯಾಂಕ್‍ಗಳು ಪ್ರತಿ ಸಾರಿ ಅದಾಲತ್ ಮಾಡುತ್ತವೆ. ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿರಬಹುದು. ಸರ್ಕಾರ ಸಾಲಮನ್ನಾ ಯೋಜನೆಯ ಹಣವನ್ನು ಬ್ಯಾಂಕಿಗೆ ತುಂಬದೆ ಬ್ಯಾಂಕಿನವರಿಗೆ ನೋಟಿಸ್ ಕೊಡಬೇಡಿ ಎಂದು ಹೇಳಲು ಆಗುವುದಿಲ್ಲ. ಬ್ಯಾಂಕಿನವರು ಸಾಲದ ನೋಟಿಸ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ರೈತರ ಆಸ್ತಿಗಳನ್ನು ಜಪ್ತಿ ಮಾಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.