Tag: ಮಿಸ್ ಕಾಲ್

  • ಪ್ರೀತಿಸಿ ಮದ್ವೆಯಾದ ನಂತ್ರ ಮಿಸ್‍ಕಾಲ್‍ನಿಂದಾದ ಗೆಳೆಯನಿಂದ್ಲೇ ಪತಿಯ ಬರ್ಬರ ಹತ್ಯೆ!

    ಪ್ರೀತಿಸಿ ಮದ್ವೆಯಾದ ನಂತ್ರ ಮಿಸ್‍ಕಾಲ್‍ನಿಂದಾದ ಗೆಳೆಯನಿಂದ್ಲೇ ಪತಿಯ ಬರ್ಬರ ಹತ್ಯೆ!

    ಚಿತ್ರದುರ್ಗ: ಪೋಷಕರ ವಿರೋಧದ ಮಧ್ಯೆಯೇ ಪ್ರೇಮಿಗಳು ಮದುವೆಯಾಗಿದ್ದರು. ಆದರೆ ಮಹಿಳೆಯ ಮೊಬೈಲ್‍ನಿಂದ ಆಕಸ್ಮಿಕವಾಗಿ ಮಿಸ್ ಕಾಲ್ ಮೂಲಕ ಗೆಳೆಯನಾಗಿ ಎಂಟ್ರಿಯಾದ ಯುವಕನೊಬ್ಬ, ಆಕೆಯ ಪತಿಯನ್ನೇ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ಬಿ.ಎಲ್.ಗೌಡ ಲೇಔಟ್‍ನ ಹಳೇ ಬೆಂಗಳೂರು ರಸ್ತೆ ಬಳಿ ನಡೆದಿದೆ.

    ಮಾರ್ಚ್ 21 ರಂದು ಚಿಕ್ಕಪೇಟೆ ಬಡಾವಣೆಯ ಎಸ್.ಕೆ ನವೀನ್ ನ ಬರ್ಬರವಾಗಿ ಹತ್ಯೆಯಾಗಿತ್ತು. ಕೇವಲ ಒಂದು ವಾರ ಕಳೆಯುವಷ್ಟರಲ್ಲೇ ಕೊಲೆ ಪ್ರಕರಣವನ್ನು ಚಿತ್ರದುರ್ಗ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ಮೂಲದ ಅಕ್ಷಯ್, ಕಿರಣ್ ಹಾಗೂ ಕೃಷ್ಣ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಮೃತ ನವೀನ್ ಎರಡೂವರೆ ವರ್ಷದ ಹಿಂದೆ ಸಾನಿಯಾ ಅಲಿಯಾಸ್ ಸುಮಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಕೆಲ ತಿಂಗಳ ಹಿಂದೆ ಸಾನಿಯಾ ಕೈಯಿಂದ ಮಿಸ್ಸಾಗಿ ಬೆಂಗಳೂರಿನ ಅಕ್ಷಯ್ ಗೆ ಮಿಸ್ ಕಾಲ್ ಹೋಗಿತ್ತು. ಆಗಿನಿಂದ ಅವರಿಬ್ಬರು ಪರಿಚಿತರಾಗಿ ಸ್ನೇಹಿತರಾಗಿದ್ದು, ಅಕ್ಷಯ್ ನನ್ನು ನವೀನ್‍ಗೂ ಪರಿಚಯಿಸಿದ್ದಳು. ಆದರೆ ಕೆಲ ದಿನಗಳ ಹಿಂದೆ ಅಕ್ಷಯ್ ಅನುಚಿತವಾಗಿ ಸಂದೇಶ ಮಾಡುತ್ತಿದ್ದು, ಅದನ್ನ ತನ್ನ ಪತಿಯ ಗಮನಕ್ಕೂ ತರಲಾಗಿತ್ತು. ಹೀಗಾಗಿ ಸಾನಿಯಾ ಪತಿ ನವೀನ್ ಅಕ್ಷಯ್ ಗೆ ವಾರ್ನ್ ಮಾಡಿದ್ದನು. ಬಳಿಕ ತಪ್ಪಾಯ್ತು ಎಂದು ಸಾರಿ ಕೇಳಿದ್ದ ಅಕ್ಷಯ್, ಒಳೊಳಗೆ ಸ್ಕೆಚ್ ಹಾಕಿ ಚಳ್ಳಕೆರೆ ಗೇಟ್ ಬಳಿಗೆ ನವೀನ್ ನನ್ನು ಕರೆಸಿಕೊಂಡು ಹತ್ಯೆ ಮಾಡಿದ್ದಾನೆ ಎಸ್.ಪಿ ಡಾ.ಅರುಣ್ ಹೇಳಿದ್ದಾರೆ.


    ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ನವೀನ್ ಪತ್ನಿ ಸುಮಾಳ ತಪ್ಪಿಲ್ಲ ಎಂದು ಕಂಡುಬರುತ್ತಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಮಿಸ್ ಕಾಲ್ ಮೂಲಕ ಸಾನಿಯಾಗೆ ಪರಿಚಯವಾಗಿದ್ದ ಅಕ್ಷಯ್ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾದರೂ ಹೇಗೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಸಾನಿಯಾ ಮತ್ತು ಅಕ್ಷಯ್ ಆತ್ಮೀಯವಾಗಿ ಚಾಟ್ ಮಾಡಿದ್ದು, ಟಿಕ್ ಟಾಕ್ ಮಾಡಿದ್ದ ವಿಡಿಯೋಗಳು ಕೂಡ ಎಲ್ಲೆಡೆ ಬಹಿರಂಗವಾಗಿವೆ. ಹೀಗಾಗಿ ಹತ್ಯೆಯ ಹಿಂದೆ ಸಾನಿಯಾಳ ಪಾತ್ರವೂ ಇರುವ ಅನುಮಾನವಿದೆ. ಈ ಬಗ್ಗೆಯೂ ಕೂಲಂಕುಷ ತನಿಖೆ ಆಗಲಿ ಎಂದು ನವೀನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಾನಿಯಾರನ್ನು ಪ್ರಯತ್ನಿಸಲಾಗುತ್ತಿದೆ.

    ಪ್ರೇಮಜೋಡಿಗಳ ನಡುವೆ ಗೆಳೆಯನಾಗಿ ಎಂಟ್ರಿಯಾದ ಅಕ್ಷಯ್, ನಿಜಕ್ಕೂ ವಿಲನ್ ಆಗಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಮೂವರನ್ನು ಬಂಧಿಸಿರುವ ಪೊಲೀಸರು ಇನ್ನುಳಿದ ಮೂವರಿಗಾಗಿ ಜಾಲ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ. ಬಡಾವಣೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಮುಂಬೈ: ಮಿಸ್ ಕಾಲ್ ಗಳಿಂದ ಪ್ರೀತಿ-ಪೇಮಗಳು ಹುಟ್ಟಿ ಕ್ರಮೇಣ ಸಂಬಂಧ ಮುರಿದು ಹೋದ ಸುದ್ದಿಗಳನ್ನು ಕೇಳಿರ್ತಿವಿ. ಅಲ್ಲದೇ ಪ್ರೀತಿಸಿದವರು ಮದುವೆಯಾಗುವುದು ಕೇವಲ ಬೆರಳೆಣಿಕೆಯಷ್ಟು. ಆದ್ರೆ ಒಂದು  ರಾಂಗ್ ನಂಬರ್ ನಿಂದ ಆ್ಯಸಿಡ್ ದಾಳಿಗೊಳಗಾದ ಯುವತಿಯೊಬ್ಬಳಿಗೆ ಯುವಕನೊಬ್ಬ ಬಾಳು ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈಯ ಕಲ್ವಾದಲ್ಲಿರುವ 26 ವರ್ಷದ ಲಲಿತ ಬೆನ್‍ಬನ್ಸಿ ಎಂಬವರೇ ಆ್ಯಸಿಡ್ ದಾಳಿಗೊಳಗಾಗಿ ಇಂದು ತನ್ನ ಪ್ರಿಯತಮ ರವಿಶಂಕರ್ ಸಿಂಗ್ ಜೊತೆ ಹಸೆಮಣೆಯೇರಿದ್ದಾರೆ.

    ಪ್ರೀತಿ ಹುಟ್ಟಿದ್ದು ಹೇಗೆ?: ಲಲಿತಾ ಅವರಿಗೆ 2012ರಲ್ಲಿ ಮದುವೆ ಮಾಡುವುದಾಗಿ ತೀರ್ಮಾನಿಸಿ ಯುವಕನೊಬ್ಬನನ್ನು ಗೊತ್ತು ಮಾಡಿದ್ದರು. ಆದರೆ ಮದುವೆಗೆ ಇನ್ನೇನು ವಾರವಿದೆ ಅಂದಾಗ ಲಲಿತಾಳ ಸಂಬಂಧಿಯೊಬ್ಬ, ವೈಯಕ್ತಿಕ ದ್ವೇಷದಿಂದ ಲಲಿತಾ ಮೇಲೆ ಆಸಿಡ್ ದಾಳಿ ನಡೆಸಿದ್ದ. ಇದರಿಂದ ಅವರ ಮುಖವೆಲ್ಲ ಸುಟ್ಟು ಹೋಗಿ ಮದುವೆಯೇ ಮುರಿದು ಬಿದ್ದಿತ್ತು.

    ಹೀಗೆ ಮುಖವೆಲ್ಲ ಸುಟ್ಟು ಹೋಗಿದ್ದರಿಂದ ಮುಂಬೈ ಆಸ್ಪತ್ರೆಯೊಂದರಲ್ಲಿ 17 ಬಾರಿ ಲಲಿತಾ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆ ಮುಂದುವರಿಯುತ್ತಿದ್ದಂತೆಯೇ 2 ತಿಂಗಳ ಹಿಂದೆ ಅವರಿಗೊಂದು ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತ್ತು. ಆದ್ರೆ ಅದು ರಾಂಗ್ ನಂಬರ್ ಆಗಿತ್ತು. ಆ ಕ್ಷಣದಲ್ಲಿ ಲಲಿತಾ ಸಾರಿ ರಾಂಗ್ ನಂಬರ್ ಅಂತಾ ಹೇಳಿ ಫೋನ್ ಕುಕ್ಕಿದರು. ಆದ್ರೆ ಕ್ರಮೇಣ ಅವರಿಬ್ಬರ ಮಧ್ಯೆ ಮಾತುಕತೆ ಬೆಳೆದು ಪ್ರೇಮಾಂಕುರವಾಯಿತು. ಆ ಯುವಕನೇ ಇಂದು ಲಲಿತಾಳನ್ನು ವರಿಸಿದ ರವಿಶಂಕರ್ ಸಿಂಗ್.

    ಅಂತೆಯೇ ಎಲ್ಲರಂತೆ ಪ್ರತಿನಿತ್ಯ ಮಾತುಕತೆ ನಡೆದು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದರು. ಲಿಲಿತಾ ಅದೃಷ್ಟ ಚೆನ್ನಾಗಿದೆ ಅಂತಾನೇ ಹೇಳಬಹುದು. ಯಾಕಂದ್ರೆ ಇಂದು ಅವರು ರವಿಶಂಕರ್ ನ ಬಾಳಸಂಗಾತಿಯಾಗಿದ್ದಾರೆ. ಸದ್ಯ ಈ ದಂಪತಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಇವರಿಬ್ಬರ ಲವ್ ಸ್ಟೋರಿ ವೈರಲ್ ಆಗಿದೆ. ಈ ಮದುವೆಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಾಕ್ಷಿಯಾಗಿದ್ದಾರೆ. ಅಲ್ಲದೇ ಈ ಜೋಡಿಗೆ ನಟ ಥಾಣೆಯಲ್ಲಿ ಅಪಾರ್ಟ್‍ಮೆಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

    ರಾಂಗ್ ನಂಬರ್ ನನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇಂದು ನಾನು ತುಂಬಾ ಖುಷಿಯಾಗಿದ್ದೇನೆ. ನಾನು ಎಂದಿಗೂ ವಿವಾಹವಾಗುತ್ತೇನೆ ಅಂತಾ ಭಾವಿಸಿರಲಿಲ್ಲ. ಸತ್ಯವನ್ನು ತಿಳಿದು ನನ್ನನ್ನು ಮದುವೆಯಾಗಲು ನಿರ್ಧರಿಸಿದ ರವಿಶಂಕರ್ ಗೆ ಹ್ಯಾಟ್ಸ್ ಆಫ್ ಅಂತಾ ಲಲಿತಾ ಖುಷಿ ವ್ಯಕ್ತಪಡಿಸಿದ್ದಾರೆ.

    ರವಿಶಂಕರ್ ಅಂಥವರ ಸಂತತಿ ಸಾವಿರವಾಗಲಿ. ಅಸಹಾಯಕ ಹೆಣ್ಣು ಮಕ್ಕಳ ಬಾಳಲ್ಲಿ ಇಂತಹವರು ಪ್ರವೇಶಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.