Tag: ಮಾಸ್ಟರ್ ಪ್ಲಾನ್

  • ಗಣಿ ಕೋಟೆಯನ್ನು ಉಳಿಸಿಕೊಳ್ಳಲು ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್

    ಗಣಿ ಕೋಟೆಯನ್ನು ಉಳಿಸಿಕೊಳ್ಳಲು ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್

    ಬಳ್ಳಾರಿ: ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯ ಸರ್ಕಾರ ಇರಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ ಇತ್ತ ಬಳ್ಳಾರಿಯಲ್ಲಿ ಜಲಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಚುನಾವಣೆ ಮುಗಿದ ನಂತರ ಕೈ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿ ಮತ ಬೇಟೆ ಮಾಡುತ್ತಿದ್ದಾರೆ.

    ಹೌದು. ಬಳ್ಳಾರಿ ಉಸ್ತುವಾರಿ ಸಚಿವರಾಗಿರುವ ಕಾಂಗ್ರೆಸ್‍ನ ಟ್ರಬಲ್ ಶೂಟರ್, ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಾವಿಲ್ಲದಿದ್ದರೂ ಜಿಲ್ಲೆಯನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ಅತೃಪ್ತ ಶಾಸಕರಿಗೆ ಆಮಿಷ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.

    ಕಳೆದ ಉಪಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡು ಹಗಲಿರುಳು ಶ್ರಮಿಸಿ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದ ಡಿಕೆಶಿ ಈ ಬಾರಿ ತಮ್ಮ ಅನುಪಸ್ಥಿತಿಯಲ್ಲೂ ಕ್ಷೇತ್ರವನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಅಭ್ಯರ್ಥಿ ಉಗ್ರಪ್ಪ ಗೆಲುವಿಗೆ ಜಿಲ್ಲೆಯ ಇಬ್ಬರೂ ಸಚಿವರಿಗೆ ಟಾಸ್ಕ್ ನೀಡಿದ್ದಾರೆ. ಇನ್ನುಳಿದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ ಉಪಚುನಾವಣೆಯಲ್ಲಿ ಹೆಚ್ಚು ಕಡಿಮೆ ಇಡೀ ಸರ್ಕಾರವೇ ಉಗ್ರಪ್ಪ ಅವರ ಪರವಾಗಿ ಕೆಲಸ ಮಾಡಿತ್ತು. ಇದರ ಜೊತೆಗೆ ಜಿಲ್ಲೆಯ 6 ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಉಗ್ರಪ್ಪರನ್ನು ಗೆಲ್ಲುವಂತೆ ಡಿಕೆಶಿ ನೋಡಿಕೊಂಡಿದ್ದರು. ಆದರೆ ಬೈ ಎಲೆಕ್ಷನ್ ನಂತರ ಸಚಿವ ತುಕಾರಾಂ ಹಾಗೂ ಪರಮೇಶ್ವರ ನಾಯ್ಕ್‍ಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದ ಪರಿಣಾಮ ಉಳಿದ ಶಾಸಕರು ಅಸಮಾಧಾನಗೊಂಡಿದ್ದರು. ಕೈ ಶಾಸಕರ ಈ ಅಸಮಧಾನ ಉಗ್ರಪ್ಪ ಗೆಲುವಿಗೆ ಅಡ್ಡಿಯಾಬಹುದು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಡಿಕೆಶಿ ಸಚಿವರಿಗೆ ಟಾಸ್ಕ್ ನೀಡಿದ್ರೆ ಉಳಿದ ಶಾಸಕರಿಗೆ ಮತ್ತೆ ಸಚಿವ ಸ್ಥಾನದ ಆಮಿಷವೊಡ್ಡಿ ರಣತಂತ್ರ ರೂಪಿಸಿದ್ದಾರೆ.

    ಪಕ್ಷದಿಂದ ದೂರವುಳಿದಿರುವ ಅತೃಪ್ತ ಶಾಸಕರ ಹೆಣ ಹೋರೋದು ನಾನೇ, ಪಲ್ಲಕ್ಕಿ ಹೊರೋದು ನಾನೇ ಎನ್ನುವ ಮೂಲಕ ಅವರ ಕಷ್ಟ ಸುಖಕ್ಕೆ ಭಾಗೀದಾರ ನಾನೇ ಎನ್ನುವ ಸಂದೇಶವನ್ನು ಡಿಕೆಶಿ ಈಗಾಗಲೇ ಪಾಸ್ ಮಾಡಿದ್ದು ಈ ರಣತಂತ್ರದಲ್ಲಿ ಯಶಸ್ವಿ ಆಗುತ್ತಾರಾ ಎನ್ನುವ ಪ್ರಶ್ನೆಗೆ ಮೆ 23 ರಂದು ಉತ್ತರ ಸಿಗಲಿದೆ.

  • ಉತ್ತರ-ದಕ್ಷಿಣ ವಿವಾದ ತಣ್ಣಗಾಗಿಸಲು ಎಚ್‍ಡಿಕೆ ಮಾಸ್ಟರ್ ಪ್ಲಾನ್!

    ಉತ್ತರ-ದಕ್ಷಿಣ ವಿವಾದ ತಣ್ಣಗಾಗಿಸಲು ಎಚ್‍ಡಿಕೆ ಮಾಸ್ಟರ್ ಪ್ಲಾನ್!

    ಬೆಂಗಳೂರು: ಉತ್ತರ-ದಕ್ಷಿಣ ವಿವಾದ ತಣ್ಣಗಾಗಿಸಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದು, ಕೆಲವೊಂದು ಮಹತ್ವದ ಹುದ್ದೆಗಳ ನೇಮಕಾತಿಗೆ ಹೆಚ್‍ಡಿಕೆ ತೀರ್ಮಾನಿಸಿದ್ದಾರೆ.

    ಉತ್ತರಕ್ಕೊಬ್ರು, ದಕ್ಷಿಣಕ್ಕೊಬ್ರು ರಾಜಕೀಯ ಕಾರ್ಯದರ್ಶಿ ನೇಮಿಸಲು ಸಿಎಂ ಯೋಜನೆ ಹಾಕಿದ್ದಾರೆ. ಉತ್ತರಕ್ಕೆ ಮಾಜಿ ಶಾಸಕ ಕೋನರೆಡ್ಡಿ, ದಕ್ಷಿಣಕ್ಕೆ ಪರಿಷತ್ ಸದಸ್ಯ ಶರವಣ ಅವರನ್ನು ನೇಮಕ ಮಾಡುವುದಾಗಿ ನಿರ್ಧರಿಸಿಲಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಇದರಿಂದ ಎರಡು ಭಾಗದ ಸಮಸ್ಯೆ ಬಗೆಹರಿಸಲು ಅನುಕೂಲವಾಗುತ್ತದೆ. ರಾಜಕೀಯ ಕಾರ್ಯದರ್ಶಿ ಜೊತೆ ನಾಲ್ವರು ಸಂಸದೀಯ ಕಾರ್ಯದರ್ಶಿ ಹುದ್ದೆ ಭರ್ತಿಗೂ ನಿರ್ಧಾರ ಮಾಡಿದ್ದು, ಮುಸ್ಲಿಂ, ಲಂಬಾಣಿ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಒಂದೊಂದು ಸ್ಥಾನ ನೀಡಲು ಚಿಂತನೆ ನಡೆಸಲಾಗಿದೆ. ಮುಸ್ಲಿಂ ಸಮುದಾಯದಿಂದ ಜಫ್ರುಲ್ಲಾ ಖಾನ್, ಲಂಬಾಣಿ ಸಮುದಾಯದಿಂದ ರೇವುನಾಯಕ್ ಬೆಳಮಗಿ, ಬ್ರಾಹ್ಮಣ ಸಮುದಾಯದಿಂದ ವೈ.ಎಸ್.ವಿ.ದತ್ತಾ ನೇಮಕ ಬಹುತೇಕ ಖಚಿತವಾಗಿದೆ.

    ಒಟ್ಟಿನಲ್ಲಿ ಜಾತಿ ಲೆಕ್ಕಾಚಾರದ ಜೊತೆ ಉತ್ತರ-ದಕ್ಷಿಣ ಸಮತೋಲನ ಕಾಯ್ದುಕೊಳ್ಳಲು ಹೆಚ್‍ಡಿಕೆ ರಣತಂತ್ರ ಹೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ದೆಹಲಿಯಲ್ಲಿ ಶಾ ರಣತಂತ್ರ: ಏನಿದು ಆಪರೇಷನ್ 10 ಸ್ಟಾರ್ ಟಾರ್ಗೆಟ್? ಇಲ್ಲಿದೆ ಇನ್ ಸೈಡ್ ಸ್ಟೋರಿ

    ದೆಹಲಿಯಲ್ಲಿ ಶಾ ರಣತಂತ್ರ: ಏನಿದು ಆಪರೇಷನ್ 10 ಸ್ಟಾರ್ ಟಾರ್ಗೆಟ್? ಇಲ್ಲಿದೆ ಇನ್ ಸೈಡ್ ಸ್ಟೋರಿ

    ಬೆಂಗಳೂರು: ಸಂಖ್ಯಾಬಲದ ಕೊರತೆಯ ನಡುವೆಯೂ ಸರ್ಕಾರ ರಚನೆ ಮಾಡಿಯೇ ಸಿದ್ಧ ಎಂದು ಮುನ್ನುಗ್ಗುತ್ತಿರುವ ಬಿಜೆಪಿ ಈಗ `ಆಪರೇಷನ್ 10 ಸ್ಟಾರ್’ ಟಾರ್ಗೆಟ್ ಮಾಡಿದೆ.

    ದೆಹಲಿಯಿಂದಲೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ಲಾನ್ ರೂಪಿಸಿದ್ದು, ಈ ಕುರಿತು ರಾಜ್ಯದ ಕೆಲ ಬೆರಳೆಣಿಕೆ ನಾಯಕರಿಗಷ್ಟೇ ನಿರ್ದೇಶನ ನೀಡಿದ್ದಾರೆ. ಬಿಜೆಪಿ ಬಹುಮತ ಸಾಬೀತು ಪಡಿಸುವ ಅಗತ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಏನಿದು ಆಪರೇಷನ್ 10?
    ಬಹುಮತ ಸಾಬೀತು ಪಡಿಸಲು ಕನಿಷ್ಠ ಅಗತ್ಯವಿರುವ ಶಾಸಕರ ಸಂಖ್ಯೆಗಿಂತಲೂ ಹೆಚ್ಚಿನ ಶಾಸಕರನ್ನು ಪಕ್ಷಕ್ಕೆ ಸೆಳೆಯವುದು. ಅದರಲ್ಲಿ ಪ್ರಮುಖ 10 ಶಾಸಕರನ್ನು ಆಯ್ಕೆ ಮಾಡಬೇಕು. ಹಿರಿಯ ನಾಯಕರಿಂದ ಕಡೆಗಣನೆಗೆ ಒಳಗಾಗಿ ಬೇಸರದಲ್ಲಿರುವ ಶಾಸಕರನ್ನು ಸೆಳೆಯಬೇಕು. ಪ್ರಮುಖವಾಗಿ ಮೈಸೂರು ಭಾಗದ ಅತೃಪ್ತರ ಮನವೊಲಿಸಬೇಕು. ಇದರ ಭಾಗವಾಗಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಅವರ ಜೊತೆಗೆ ಈಶ್ವರಪ್ಪ ಮಾತುಕತೆ ನಡೆಸಿದ್ದು, 2ನೇ ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ.

    ಹೈದರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಆತೃಪ್ತ ನಾಯಕರ ಮನವೊಲಿಸಬೇಕು. ಈ ವೇಳೆ ಕಾಂಗ್ರೆಸ್ ವಿರುದ್ಧ ಗೆದ್ದು ಅವರೊಂದಿಗೆ ಅಧಿಕಾರ ಹಂಚಿಕೆ ಹೇಗೆ ಎಂಬ ಅಂಶ ಮುಂದಿಟ್ಟು ಚರ್ಚಿಸಬೇಕು. ಬಿಎಸ್‍ವೈ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಲಿಂಗಾಯತ ಶಾಸಕರನ್ನು ಸೆಳೆಯಲು ಯತ್ನಿಸಬೇಕು. ಇದರ ಭಾಗವಾಗಿ ಈಗಾಗಲೇ 21 ಲಿಂಗಾಯತ ಶಾಸಕರಿಗೆ ಕರೆ ಮಾಡಿ ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ.

    ಬಳ್ಳಾರಿ ಹಳೆಯ ನಾಯಕರನ್ನು ಸೆಳೆಯಬೇಕು. ಶ್ರೀ ರಾಮುಲು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಈಗಾಗಲೇ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಬಿಟ್ಟು ಹೋದ ಮುಖಂಡರಿಗೂ ಮತ್ತೆ ಘರ್ ಪಾಪ್ಸಿ ಆಫರ್ ನೀಡಲಾಗಿದೆ. ಈ ಸಂಬಂಧ ಪಾವಗಡದ ವೆಂಕಟರಮಣಪ್ಪ ಅವರೊಂದಿಗೆ ಶ್ರೀ ರಾಮುಲು ಮಾತುಕತೆ ನಡೆಸಬೇಕು. ಅದೇ ರೀತಿಯಾಗಿ ಕುಷ್ಟಗಿಯ ಅಮರೇಗೌಡ ಬಯ್ಯಾಪುರ ಅವರ ಮನವೊಲಿಸಬೇಕು. ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡುವ ಬಗ್ಗೆಯೂ ಆಶ್ವಾಸನೆ ನೀಡುವ ಕುರಿತು ಭರವಸೆ ನೀಡಿ ಎರಡು ಪಕ್ಷದಲ್ಲಿ ಇರುವ ಶಾಸಕಿಯರನ್ನು ಸೆಳೆಯಲು ಯತ್ನಿಸಬೇಕು.

    ಈ ತಂತ್ರದ ಪ್ರಮುಖ ಭಾಗವನ್ನು ಕೇಂದ್ರದ ನಾಯಕರೇ ನೇರವಾಗಿ ನಡೆಸುತ್ತಿದ್ದು, ರಾಜ್ಯ ನಾಯಕರಾದ ಶ್ರೀರಾಮುಲು, ಬಿಎಎಸ್‍ವೈ, ಆರ್ ಆಶೋಕ್ ಸೇರಿದಂತೆ ಕೆಲ ನಾಯಕರಿಗೆ ಮಾತ್ರ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಎಸ್‍ವೈ ಅವರ ಜೆಡಿಎಸ್‍ನ ಕೆಲ ಅತೃಪ್ತ ಶಾಸಕರ ಸಂಪರ್ಕ ಬೆಳೆಸಿ ಮನವೊಲಿಸುವ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದರೆ ಸಾಬೀತು ಪಡಿಸುವ ವೇಳೆ ಸದನಕ್ಕೆ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಬರದಂತೆ ತಡೆಯಬೇಕು. ಇದು ಕೊನೆಯ ಅಸ್ತ್ರವಾಗಿದ್ದು, ಕನಿಷ್ಠ 10 ರಿಂದ 15 ಶಾಸಕರು ಗೈರು ಹಾಜರಾಗುವಂತೆ ನೋಡಿಕೊಂಡರೆ ಬಹುಮತ ಸಾಬೀತು ಪಡಿಸಬಹುದು ಎನ್ನುವ ಪ್ಲಾನ್ ಬಿಜೆಪಿ ಹಾಕಿಕೊಂಡಿದೆ.