Tag: ಮಾಜಿ ಮೇಯರ್

  • ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾಜಿ ಮೇಯರ್

    ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಮಾಜಿ ಮೇಯರ್

    ಬೆಳಗಾವಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆ ಪಕ್ಕದಲ್ಲಿ ನರಳುತ್ತಾ ಬಿದ್ದಿದ್ದ ಯುವಕನನ್ನು ಬೆಳಗಾವಿ ಮಾಜಿ ಮಹಾನಗರ ಪಾಲಿಕೆ ಮೇಯರ್ ವಿಜಯ ಮೋರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಮಚ್ಚೆಯಲ್ಲಿ ಕೆಎಸ್ ಆರ್ ಪಿ ಬಳಿ ಯುವಕನೊಬ್ಬ ಬೈಕ್(Bike) ಅಪಘಾತದಲ್ಲಿ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮಾಜಿ ಮೇಯರ್ ವಿಜಯ ಮೋರೆ ಮತ್ತು ಅವರ ಪತ್ನಿ ಮಾರಿಯಾ ಮೋರೆ ಗಾಯಾಳು ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಅಪ್ಪು ನೆನಪು

    ಆಸ್ಪತ್ರೆಯಲ್ಲಿ(Hospital) ಯುವಕನಿಗೆ ಮಾಜಿ ಮೇಯರ್(Former Mayor) ಹಾಗೂ ಅವರ ಪತ್ನಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಮಾಜಿ ಮೇಯರ ವಿಜಯ ಮೋರೆ ಅವರ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೆಲಸದಲ್ಲಿ ಅಸಡ್ಡೆ – ಜ್ಯೂನಿಯರ್ಸ್‍ನ ಲಾಕಪ್‍ಗೆ ಹಾಕಿದ ಪೊಲೀಸ್ ಅಧಿಕಾರಿ

    Live Tv
    [brid partner=56869869 player=32851 video=960834 autoplay=true]

  • ಮಾಜಿ ಮೇಯರ್ ಮನೆಗೆ ಕನ್ನ ಹಾಕಿದ ಖದೀಮ

    ಮಾಜಿ ಮೇಯರ್ ಮನೆಗೆ ಕನ್ನ ಹಾಕಿದ ಖದೀಮ

    ಹುಬ್ಬಳ್ಳಿ: ಮಾಜಿ ಮೇಯರ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಮನೆಯಲ್ಲಿದ್ದ ನಗದು ಚಿನ್ನಾಭರಣ ದೋಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಮಾಜಿ ಮೇಯರ್ ಬಿಜೆಪಿ ಮುಖಂಡ ಈರಣ್ಣ ಸವಡಿಯನವರ ವಿಜಯನಗರದ ನಿವಾಸದಲ್ಲಿ ಕಳ್ಳತನವಾಗಿದ್ದು, ಮನೆಯ ಬೆಡ್ ರೂಮ್‍ನ ಕಪಾಟಿನ ಬಾಕ್ಸ್‍ನಲ್ಲಿದ್ದ 1 ಲಕ್ಷ 32 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು 23 ಸಾವಿರ ನಗದು, ಐದು ಸಾವಿರ ಮೌಲ್ಯದ ವಾಚ್‍ಗಳನ್ನು ದೋಚಲಾಗಿದೆ.

    ತಂದೆಯ ಆರೈಕೆಗಾಗಿ ಕೇರ್ ಟೇಕರ್ ಆಗಿ ನೇಮಕ ಮಾಡಿಕೊಂಡಿದ್ದ ವ್ಯಕ್ತಿಯೇ ಕಳ್ಳತನ ಮಾಡಿದ್ದಾನೆ ಎಂದು ಈರಣ್ಣ ಸವಡಿ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ತಾಂಡಾದ ಅರುಣ ನಾಯಕ ಎಂಬಾತನೇ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಈರಣ್ಣ ಸವಡಿ ದೂರು ನೀಡಿದ್ದಾರೆ.

    ಈ ಕುರಿತು ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭಿಸಿ- ಮಾಜಿ ಮೇಯರ್ ಕವಿತಾ ಸನಿಲ್

    ಮಂಗಳೂರು: ಭಕ್ತರ ಹಾಗೂ ಅರ್ಚಕರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಸೇವೆಗಳನ್ನು ಆರಂಭಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡೆ ಕವಿತಾ ಸನಿಲ್ ಆಗ್ರಹಿಸಿದ್ದಾರೆ.

    ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಸಾಕಷ್ಟು ದೇಗುಲಗಳಿವೆ, ಅದರಲ್ಲೂ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಕೊರೊನಾದಿಂದಾಗಿ ವಿಶೇಷ ಪೂಜಾ ಸೇವೆಗಳು ನಡೆಯುತ್ತಿಲ್ಲ. ಹೀಗಾಗಿ ದೇಗುಲದ ಅರ್ಚಕರಿಗೆ ತಮ್ಮ ಕಷ್ಟವನ್ನು ಯಾರ ಹತ್ತಿರವೂ ಹೇಳಲಾಗುತ್ತಿಲ್ಲ ಎಂದರು.

    ಅರ್ಚಕರಿಗೆ ದೇವರ ಕೆಲಸ ಬಿಟ್ಟು ಬೇರೆ ಏನೂ ಕೆಲಸ ಮಾಡುವ ಹಾಗಿಲ್ಲ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ದೇಗುಲಗಳ ಬಾಗಿಲನ್ನು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಬಾರ್, ವೈನ್ ಶಾಪ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅವರು ಯಾವ ರೀತಿ ಸಾಮಾಜಿಕ ಅಂತರ ಪಾಲಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.

    ಆದ್ದರಿಂದ ದೇವಸ್ಥಾನಗಳಲ್ಲಿ ಸೇವೆಯನ್ನು ಅರಂಭಿಸಿದರೆ ಅರ್ಚಕರ ವೃಂದ, ಅಡಳಿತ ಮಂಡಳಿಯವರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಸರ್ಕಾರ ಶೀಘ್ರದಲ್ಲೇ ದೇವಸ್ಥಾನಗಳಲ್ಲಿ ಸೇವೆ ಅರಂಭಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗೂ ಕೊರೊನಾ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗೂ ಕೊರೊನಾ

    ಹುಬ್ಬಳ್ಳಿ: ಕೊರೊನಾ ಮಹಾಮಾರಿ ವಾಣಿಜ್ಯ ನಗರಿಯಲ್ಲಿ ಅಟ್ಟಹಾಸ ಮುಂದಿವರಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್‍ಗೆ ಕೋವಿಡ್ ದೃಢಪಟ್ಟಿದೆ.

    ಕಳೆದ ಅವಧಿಯಲ್ಲಿ ಬಿಜೆಪಿ ಪಕ್ಷದಿಂದ ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು 52 ವರ್ಷದ ವ್ಯಕ್ತಿಯಾಗಿದ್ದು, ಹುಬ್ಬಳ್ಳಿಯ ಸಿಬಿಟಿ ನಿವಾಸಿಯಾಗಿದ್ದಾರೆ.

    ಎರಡು ದಿನದ ಹಿಂದಷ್ಟೇ(ಬಿಜೆಪಿ) ಪಾಲಿಕೆಯ ಮಾಜಿ ಸದಸ್ಯರೊಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಇಬ್ಬರಿಗೂ ಕಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರು ಕೆಲವು ಗಣ್ಯರ ಜೊತೆ ಸಂಪರ್ಕ ಹೊಂದಿದಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಇದೀಗ ಎಲ್ಲರಲ್ಲೂ ಆತಂಕ ಶುರುವಾಗಿದೆ.

  • ನಿರ್ಬಂಧಿತ ರಸ್ತೆಯಲ್ಲಿ ಬಂದ ಮಾಜಿ ಮೇಯರ್‌ಗೆ ಪೊಲೀಸರು ಕ್ಲಾಸ್

    ನಿರ್ಬಂಧಿತ ರಸ್ತೆಯಲ್ಲಿ ಬಂದ ಮಾಜಿ ಮೇಯರ್‌ಗೆ ಪೊಲೀಸರು ಕ್ಲಾಸ್

    – ರಸ್ತೆಗಿಳಿದವರಿಗೆ ನಿಲ್ಲುವ ಶಿಕ್ಷೆ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಲಾಕ್‍ಡೌನ್ ನಿಯಮಗಳನ್ನು ಪೊಲೀಸರು ಶಿಸ್ತಾಗಿ ಜಾರಿ ಮಾಡುತ್ತಿದ್ದಾರೆ. ಹೀಗಾಗಿ ನಿರ್ಬಂಧಿತ ರಸ್ತೆಯಲ್ಲಿ ಬಂದಿದ್ದ ಮಾಜಿ ಮೇಯರ್ ಅಯೂಬ್ ಖಾನ್‍ರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.

    ಮೈಸೂರಿನ ಉದಯಗಿರಿ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೂ ಮಾಜಿ ಮೇಯರ್ ಅಯೂಬ್ ಖಾನ್ ಮಾಸ್ಕ್ ಕೂಡ ಧರಿಸದೆ ನಿರ್ಬಂಧಿತ ರಸ್ತೆಯಲ್ಲಿ ಬರಲು ಯತ್ನಿಸಿದರು. ಈ ವೇಳೆ ಅಯೂಬ್‍ಖಾನ್‍ಗೆ ತಿಳಿ ಹೇಳಿದ ಪೊಲೀಸರು, ಮಾಸ್ಕ್ ಹಾಕಿಸಿ ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಈ ಎಲ್ಲ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಮೈಸೂರಿನಲ್ಲಿ ಲಾಕ್‍ಡೌನ್ ನಿಯಮ ಬಿಗಿಯಾಗಿ ಜಾರಿಯಾಗಿದ್ದು, ಮೈಸೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನ ಹಾಗೂ ಕಾರ್ ಸಂಚಾರಕ್ಕೆ ಅವಕಾಶವಿದೆ. ಅದು ಜನರು ತಾವು ವಾಸಿಸುವ ಪ್ರದೇಶಗಳ 2 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ಬಳಸಬಹುದು.

    ಈ ಮೊದಲು ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್ ನೀಡಲಾಗಿದೆ. ಆದರೆ ಇಂದಿನಿಂದ ವಾಹನ ಜಪ್ತಿ ಮಾಡಲಾಗುತ್ತದೆ. ಒಂದು ವೇಳೆ ಈ ನಿಯಮ ಮೀರಿ ಬೇರೆ ಬಡಾವಣೆಗಳಿಗೆ ರಸ್ತೆಗಳಿಗೆ ಬರುವ ಜನರ ವಾಹನಗಳನ್ನು ಮೈಸೂರು ಪೊಲೀಸರು ತಾತ್ಕಾಲಿಕವಾಗಿ ಜಪ್ತಿ ಮಾಡುತ್ತಾರೆ. ಅಲ್ಲದೇ ರಸ್ತೆಯಲ್ಲಿ ನಿಲ್ಲುವ ಶಿಕ್ಷೆ ನೀಡುತ್ತಿದ್ದಾರೆ.

  • ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ – ಸಿಹಿ ಹಂಚಿ ಸಂಭ್ರಮಿಸಿದ ಮಾಜಿ ಮೇಯರ್ ಪದ್ಮಾವತಿ

    ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ – ಸಿಹಿ ಹಂಚಿ ಸಂಭ್ರಮಿಸಿದ ಮಾಜಿ ಮೇಯರ್ ಪದ್ಮಾವತಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸ ಮುಂದೆ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಈಗ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ಮಾಜಿ ಮೇಯರ್ ಪದ್ಮಾವತಿಗೆ ಸಂತಸ ತಂದಿದೆ.

    ಡಿಕೆ ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ಘೋಷಣೆ ಆಗುತ್ತಿದ್ದಂತೆ ಪದ್ಮಾವತಿ ಅವರ ನಿವಾಸಕ್ಕೆ ಆಗಮಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್ ನಿವಾಸದ ಮನೆ ಮುಂದೆ, ಅಕ್ಕಪಕ್ಕ ಇದ್ದ ನಿವಾಸದವರಿಗೂ ಸಿಹಿ ಹಂಚಿ ಡಿಕೆ ಪರ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ.

    ಇನ್ನೂ ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮೇಯರ್ ಪದ್ಮಾವತಿ, ಡಿಕೆ ಶಿವಕುಮಾರ್ ಸಾಹೇಬ್ರಿಗೆ ಕೆಪಿಸಿಸಿ ಪಟ್ಟ ಸಿಗುತ್ತೆ ಎಂದು ನಿರೀಕ್ಷೆ ಇತ್ತು. ಇಂದು ಅದು ದಕ್ಕಿದೆ. ಒಳ್ಳೆಯವರಿಗೆ ಯಾವತ್ತು ಒಳ್ಳೆದಾಗುತ್ತೆ. ಏನೇ ಭಿನ್ನಾಭಿಪ್ರಾಯಗಳು ಇದ್ದರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ. ಪಕ್ಷ ಸಂಘಟನೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಮುಂಬೈ: ಮಾಜಿ ಮೇಯರ್, ಶಿವ ಸೇನಾ ಕಾರ್ಪೋರೇಟರ್ ಮಿಲಿಂದ್ ವೈದ್ಯ ಅವರು ಕೋಳಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ.

    ಕೋಳಿಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅನ್ನು ಚಾಲಕ ಮಹಿಂ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ. ಈ ವೇಳೆ ಅಲ್ಲಿಗೆ ಬಂದ ಮಿಲಿಂದ್ ವೈದ್ಯ ಅವರು ಏಕಾಏಕಿ ಚಾಲಕ ಹಾಗೂ ಸಹಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಿಲಿಂದ್ ವೈದ್ಯ ಅವರ ಬೆಂಬಲಿಗರು ಕೂಡ ಕೆಲ ಚಾಲಕರನ್ನು ಥಳಿಸಿದ್ದಾರೆ.

    ಚಾಲಕರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲಯಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಕಾರ್ಪೋರೇಟರ್ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಿಲಿಂದ್ ವೈದ್ಯ ಅವರು, ಪಾರ್ಕಿಂಗ್ ಸಮಸ್ಯೆ ಕುರಿತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ)ಗೆ ದೂರು ನೀಡಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನೇ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

    ಘಟನೆಯು ಬೆಳಗ್ಗೆ 10 ಗಂಟೆಗೆ ನಡೆದಿದೆ. ಈ ಸ್ಥಳದಲ್ಲಿ ನಿತ್ಯವೂ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರಿಂದ ನೈರ್ಮಲ್ಯ ಉಂಟಾಗಿತ್ತು. ಅಷ್ಟೇ ಅಲ್ಲದೆ ಸಂಚಾರ ಅಸ್ತವ್ಯಸ್ತವಾಗುತಿತ್ತು. ಹೀಗಾಗಿ ಮಿಲಿಂದ್ ವೈದ್ಯ ಕೋಪಗೊಂಡ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ರಂಜಾನ್ ದಿನಗಳಲ್ಲಿ ಮಾತ್ರ ಮಾಂಸ ತಿನ್ನಲಿ: ಬಿಜೆಪಿ ಮುಖಂಡೆ

    ರಂಜಾನ್ ದಿನಗಳಲ್ಲಿ ಮಾತ್ರ ಮಾಂಸ ತಿನ್ನಲಿ: ಬಿಜೆಪಿ ಮುಖಂಡೆ

    – ಗೋ ಮಾಂಸ ತಿಂದ್ರೆ ಹಿಡಿದು ಹೊಡಿರಿ
    – ಪೊಲೀಸ್ ಎದುರೇ ಬೆಂಬಲಿಗರಿಗೆ ಮೇಯರ್ ಆದೇಶ

    ಲಕ್ನೋ: ರಂಜಾನ್ ದಿನಗಳಲ್ಲಿ ಉಪವಾಸ ಇರುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ಮಾತ್ರ ಮುಸ್ಲಿಮರು ಮಾಂಸವನ್ನು ತಿನ್ನಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಮುಖಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಅಲಿಘಡ್‍ನ ಮಾಜಿ ಮೇಯರ್ ಶಕುಂತಲಾ ಭಾರತಿ ಅವರು ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಕುಂತಲಾ ಅವರ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ) ಅಧಿಕಾರದಲ್ಲಿ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗೋವುಗಳ ಹತ್ಯೆಯ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಗೋ ಹತ್ಯೆ ಮಾಡುವವರ ಮೇಲೆ ಜನರು ಹಲ್ಲೆ ಮಾಡಿದರೆ ನಾವು ಜವಾಬ್ದಾರರಲ್ಲ ಎಂದು ಶಕುಂತಲಾ ಭಾರತಿ, ಪೊಲೀಸ್ ಅಧಿಕಾರಿಗೆ ತಿಳಿಸಿದ್ದಾರೆ.

    ಈ ವೇಳೆ ಮಧ್ಯ ಪ್ರವೇಶ ಮಾಡಿ ಬೆಂಬಲಿಗ, ಗೋವುಗಳ ಹತ್ಯೆ ತಡೆಯಲು ಮುಂದಾದರೆ ನಮ್ಮ ವಿರುದ್ಧ ಬಿಳುತ್ತಾರೆ ಎಂದು ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಕುಂತಲಾ ಅವರು, ಅಂತವರನ್ನು ಹಿಡಿದು ಹೊಡೆಯಿರಿ. ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಪೊಲೀಸ್ ಅಧಿಕಾರಿಯ ಎದುರೇ ಹೇಳಿದ್ದಾರೆ.

    ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಮೇ 22ರಂದು ಆಟೋದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಯುವಕರ ಗುಂಪೊಂದು ಮುಸ್ಲಿಂ ಯುವತಿ ಹಾಗೂ 4 ಮಂದಿ ಯುವಕರಿಗೆ ಮನಬಂದಂತೆ ಥಳಿಸಿದ್ದರು. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಯುವಕರು ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡುತ್ತಿದ್ದರೆ ವಿನಾಃ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ವಿಡಿಯೋದಲ್ಲಿ ಕೆಲ ಯುವಕರ ಗುಂಪು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಯುವತಿಯ ತಲೆಗೆ ಚಪ್ಪಲಿಯಿಂದ ಹೊಡೆದಿದ್ದರು ಮತ್ತು ಕೆಲ ಯುವಕರನ್ನು ಮರಕ್ಕೆ ಕಟ್ಟಿ ಅವರಿಗೆ ದೊಣ್ಣೆಗಳಿಂದ ಹೊಡೆಸಿದ್ದರು.

    ಮೇ 23 ರಂದು ಈ ವಿಡಿಯೋವನ್ನು ಶುಭಮ್ ಸಿಂಗ್ ಎಂಬ ಶ್ರೀ ರಾಮ ಸೇನಾ ಕಾರ್ಯಕರ್ತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ನಂತರ ತೆಗೆದು ಹಾಕಿದ್ದನು. ಈ ಆಧಾರದ ಮೇಲೆ ವಿಚಾರಣೆ ಮಾಡಿರುವ ಪೊಲೀಸರು ವಿಡಿಯೋದಲ್ಲಿ ಕಾಣುವ ಸಿಯೋನಿ ನಗರದ ಐದು ಜನ ಯುವಕರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

  • ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ- ಯುವಕನಿಗೆ ಮಾಜಿ ಮೇಯರ್‌ನಿಂದ ಬಸ್ಕಿ!

    ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ- ಯುವಕನಿಗೆ ಮಾಜಿ ಮೇಯರ್‌ನಿಂದ ಬಸ್ಕಿ!

    ನವದೆಹಲಿ: ಪ್ರೇಯಸಿ ಜೊತೆ ಓಡಿ ಹೋಗಲು ಯುವಕನಿಗೆ ಮತ್ತೊಬ್ಬ ಯುವಕ ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಯುವಕನಿಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಸಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಮೊಹಮದ್ ಹನೀಶ್ ಸಹಾಯ ಮಾಡಿದ ಯುವಕ. ಯುವಕನೊಬ್ಬನಿಗೆ ಯುವತಿ ಜೊತೆ ಪರಾರಿ ಆಗಲು ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಶಕುಂತಲಾ ಭರ್ತಿ ಹನೀಶ್‍ನನ್ನು ಸಾರ್ವಜನಿಕ ಸ್ಥಳದಲ್ಲಿ ಬಸ್ಕಿ ಹೊಡೆಸಿದ್ದಾರೆ. ಬಸ್ಕಿ ಹೊಡೆಸುವ ಮೊದಲು ಹನೀಶ್ ಕೈಗೆ ಕಟ್ಟಿಕೊಂಡಿದ್ದ ದಾರವನ್ನು ತೆಗೆಸಿದ್ದಾರೆ.

    ಈ ಘಟನೆ ಮೇ 12ರಂದು ನಡೆದಿದ್ದು, ಗುರುವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ನೋಡಿದ ಜನರು ಮಾಜಿ ಮೇಯರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಯುವತಿ ಅನ್ಯ ಧರ್ಮದ ಯುವಕನ ಜೊತೆ ಓಡಿ ಹೋಗಲು ಹನೀಶ್ ಸಹಾಯ ಮಾಡಿದ್ದನು. ಹೀಗಾಗಿ ಆತನಿಗೆ ಬಸ್ಕಿ ಹೊಡೆಸಿದ್ದಾರೆ. ಸದ್ಯ ಯುವತಿಯನ್ನು ಕವರ್ಸಿ ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಯುವಕರು ಭಾಗಿಯಾಗಿದ್ದರು. ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಹನೀಶ್‍ನನ್ನು ಹಿಡಿದಿದ್ದಾರೆ.

    ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

  • ತುಮಕೂರು ಮಾಜಿ ಮೇಯರ್ ಹತ್ಯೆ: ಆರೋಪಿಗಳು ಪೊಲೀಸರಿಗೆ ಶರಣು

    ತುಮಕೂರು ಮಾಜಿ ಮೇಯರ್ ಹತ್ಯೆ: ಆರೋಪಿಗಳು ಪೊಲೀಸರಿಗೆ ಶರಣು

    ಚಿಕ್ಕಬಳ್ಳಾಪುರ: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಮೂಲ ರೂವಾರಿಯಾಗಿದ್ದ ರೌಡಿಶೀಟರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಹಾಗೂ ಆತನ ಸಹಚರರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

    ಭಾನುವಾರ ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಬೆಳ್ಳಂಬೆಳಗ್ಗೆ ಮಾಜಿ ಮೇಯರ್ ಗಡ್ಡರವಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಸುಜಯ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಪೊಲೀಸರು ಸಹ ಸುಜಯ್ ಹಾಗೂ ಆತನ ಸಹಚರರೇ ಹತ್ಯೆ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ರಾಜಕಾರಣಿಗಳ ಒತ್ತಡದಿಂದ ಸುಜಯ್ ಮೇಲೆ ಎನ್‍ಕೌಂಟರ್ ಮಾಡುವ ಸುದ್ದಿಯೂ ಸಹ ಹಬ್ಬಿತ್ತು.

    ಪೊಲೀಸರ ಎನ್‍ಕೌಂಟರ್ ನಿಂದ ತಪ್ಪಿಸಿಕೊಳ್ಳಲು ಸುಜಯ್ ಹಾಗೂ ಆತನ ಸಹಚರರು ತಲೆ ಮರೆಸಿಕೊಂಡಿದ್ದರು. ಅಲ್ಲದೇ ಆರೋಪಿಗಳ ಬಲೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ಸಹ ರಚಿಸಿದ್ದರು. ಇದಲ್ಲದೇ ಸೋಮವಾರ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎನ್ನುವ ಕಾರಣದಿಂದ ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಕಾದು ಕುಳಿತಿದ್ದರು. ಆದರೆ ಇಂದು ಸುಜಯ್ ಸೇರಿದಂತೆ ಇತರೆ ಆರೋಪಿಗಳು ಸ್ವತಃ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

    ಏನಿದು ಪ್ರಕರಣ?
    ಭಾನುವಾರ ಬೆಳ್ಳಂಬೆಳಗ್ಗೆ 8 ಗಂಟೆಯ ಸುಮಾರಿಗೆ ರವಿ ಬಟವಾಡಿ ಸೇತುವೆ ಬಳಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೇ ಟಾಟಾ ಏಸ್‍ನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಸಿದರೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿಯ ತಲೆಗೆ ಹೊಡೆದಿದ್ದಾರೆ. ಮಾರಕಾಸ್ತ್ರಗಳ ದಾಳಿಯಿಂದಾಗಿ ತಲೆ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ರವಿ ಸಾವನ್ನಪ್ಪಿದ್ದರು. ರವಿ ಸಾವನ್ನಪ್ಪುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.

    ಈ ಹಿಂದೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರವಿ, ಕಳೆದ 10 ವರ್ಷಗಳಿಂದ ಜೆಡಿಎಸ್ ಪಕ್ಷ ಕಾರ್ಯಕರ್ತನಾಗಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೇ ಜೆಡಿಎಸ್‍ನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2015 ರಲ್ಲಿ ಹಟ್ಟಿ ಮಂಜಣ್ಣ ಕೊಲೆ ನಡೆದಿದ್ದು, ಅದರಲ್ಲಿ ರವಿಯ ಕೈವಾಡವಿತ್ತು. ಹೀಗಾಗಿ ಹಟ್ಟಿ ಮಂಜನ ಸಹಚರರೇ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv