Tag: ಮಾಜಿ ನಾಯಕ

  • ಬಾಂಗ್ಲಾ ಕ್ರಿಕೆಟರ್ ಮುಶ್ರಫೆ ಮೊರ್ತಾಜಾಗೆ ಕೊರೊನಾ

    ಬಾಂಗ್ಲಾ ಕ್ರಿಕೆಟರ್ ಮುಶ್ರಫೆ ಮೊರ್ತಾಜಾಗೆ ಕೊರೊನಾ

    – ಒಂದೇ ದಿನ ಬಾಂಗ್ಲಾದ ಇಬ್ಬರು ಕ್ರಿಕೆಟಿಗರಿಗೆ ಸೋಂಕು ದೃಢ

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ, ವೇಗದ ಬೌಲರ್ ಮುಶ್ರಫೆ ಮೊರ್ತಾಜಾ ಅವರಿಗೆ ಕೋವಿಡ್-119 ವೈರಸ್ ತಗುಲಿರುವುದು ದೃಢಪಟ್ಟಿದೆ.

    ಮುಶ್ರಫೆ ಮೊರ್ತಾಜಾ ಅವರಿಗೆ ಕೊರೊನಾ ತಗುಲಿರುವ ವಿಚಾರವನ್ನ ಸ್ವತಃ ಅವರ ಸಹೋದರ, ಮೊರ್ಸಾಲಿನ್ ಬಿನ್ ಮೊರ್ತಾಜಾ ಸ್ಪಷ್ಟ ಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

    36 ವರ್ಷದ ಮುಶ್ರಫೆ ಮೊರ್ತಾಜಾ ಅವರು ಪ್ರಸ್ತುತ ಮನೆಯ ಪ್ರತ್ಯೇಕತೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಂಗ್ಲಾದೇಶದ ಸಂಸತ್ತಿನ ಸದಸ್ಯರಾದ ಮೊರ್ತಾಜಾ ಈವರೆಗೂ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿಲ್ಲ. ಬಾಂಗ್ಲಾದೇಶದಲ್ಲಿ ಈವರೆಗೂ 1.05 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದ್ದು, ಸುಮಾರು 43,000 ಜನರು ಗುಣಮುಖರಾದರೆ 1,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

    ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ಮುಶ್ರಫೆ ಮೊರ್ತಾಜಾ ಅವರು ತಮ್ಮ ನೆಚ್ಚಿನ ಕಡಗವನ್ನು ಹರಾಜು ಹಾಕಿದ್ದರು. ಅದರ ಮೂಲ ಬೆಲೆಯನ್ನು 5 ಲಕ್ಷ ರೂ. ನಿಗದಿಗೊಳಿಸಲಾಗಿತ್ತು. ಆದರೆ ಭಾರೀ ಬೇಡಿಕೆ ಉಂಟಾಗಿ ಕಡಗವು 37 ಲಕ್ಷ ರೂ.ಕ್ಕೆ ಹರಾಜಾಗಿತ್ತು.

    ತಮ್ಮ ಶ್ರೇಷ್ಠ ವೃತ್ತಿಜೀವನದಲ್ಲಿ 220 ಏಕದಿನ, 36 ಟೆಸ್ಟ್ ಮತ್ತು 54 ಟಿ20 ಪಂದುಗಳನ್ನು ಆಡಿದ ಮೊರ್ತಾಜಾ ಅವರು, ಕೋವಿಡ್-19 ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿದ್ದರು. ಮಾರ್ಚ್ ನಲ್ಲಿ ಅವರು ಕೋವಿಡ್-19ನಿಂದ ಬಳಲುತ್ತಿದ್ದ 300 ಕುಟುಂಬಗಳಿಗೆ ಸಹಾಯ ಮಾಡಿದ್ದರು.

    ನಫೀಸ್ ಇಕ್ಬಾಲ್:
    ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಆಟಗಾರ, ಬಾಂಗ್ಲಾ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್ ಅವರಿಗೂ ಕೊರೊನಾ ವೈರಸ್ ತಗುಲಿದೆ. ಸ್ವತಃ ನಫೀಸ್ ಇಕ್ಬಾಲ್ ಅವರು ತಮಗೆ ಹೆಮ್ಮಾರಿ ಕೋವಿಡ್-19 ದೃಢಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಈಗ ಚಿತ್ತಗಾಂಗ್‍ನ ತಮ್ಮ ನಿವಾಸದಲ್ಲಿ ಐಸೊಲೇಶನ್‍ನಲ್ಲಿದ್ದಾರೆ ಎನ್ನಲಾಗಿದೆ.

    ಬಲಗೈ ಆರಂಭಿಕ ಬ್ಯಾಟ್ಸ್‍ಮನ್ ಆಗಿದ್ದ ನಫೀಸ್ ಇಕ್ಬಾಲ್, ಬಾಂಗ್ಲಾದೇಶ ಪರ 2003ರಲ್ಲಿ ಪಾದಾರ್ಪಣೆ ಮಾಡಿದ್ದರು. ಆದರೆ 2006ರಿಂದಲೂ ನಫೀಸ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. 34 ವರ್ಷದ ಹರೆಯದ ನಫೀಸ್, ಬಾಂಗ್ಲಾ ಪರ 11 ಟೆಸ್ಟ್, 16 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 518 ಮತ್ತು 309 ರನ್ ಗಳಿಸಿದ್ದಾರೆ.

  • ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್(77) ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಅವರು ವಿದೇಶಿ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದಿದ್ದ ಭಾರತೀಯ ತಂಡವನ್ನು ಮುನ್ನಡೆಸಿದ್ದ ಕಪ್ತಾನನೆಂಬ ಹೆಗ್ಗಳಿಕೆಯನ್ನು ಪಡೆದಿದ್ದರು.

    ಟೆಸ್ಟ್ ಆಟಗಾರ, ನಾಯಕ, ತರಬೇತುದಾರ ಮತ್ತು ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಅಜಿತ್ ವಾಡೇಕರ್ ಕೆಲಸ ಮಾಡಿದ್ದರು. ಇವರು 1971 ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಜಯಗಳಿಸಿದ್ದ ಭಾರತ ತಂಡದ ನಾಯಕರಾಗಿದ್ದರು.

    ವಾಡೇಕರ್ ಭಾರತವನ್ನು 37 ಟೆಸ್ಟ್ ಮತ್ತು ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. 1974ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಇವರ ಕೊನೆಯ ಪಂದ್ಯವಾಗಿತ್ತು. ಅಜಿತ್ ಲಕ್ಷ್ಮಣ್ ವಾಡೇಕರ್ ಅವರು 1941 ಏ.1ರಂದು ಜನಿಸಿದ ಇವರು 1966 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ವಾಡೇಕರ್ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಇವರು ಆಡಿದ ಒಟ್ಟು ಪಂದ್ಯಗಳಿಂದ 2113 ರನ್ ಕಲೆಹಾಕಿದ್ದರು. ಅಜಿತ್ ವಾಡೇಕರ್ ಅವರಿಗೆ 1972 ರಲ್ಲಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

    ಸದ್ಯ ಮಾಜಿ ನಾಯಕನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv