Tag: ಮಹಾಲಕ್ಷ್ಮೀ ಲೇಔಟ್

  • ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅರಳಿದ ಕಮಲ – ನೆಲಕಚ್ಚಿದ ಕೈ-ತೆನೆ

    ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅರಳಿದ ಕಮಲ – ನೆಲಕಚ್ಚಿದ ಕೈ-ತೆನೆ

    ಬೆಂಗಳೂರು: ಜೆಡಿಎಸ್‍ನ ಭದ್ರಕೋಟೆಯಾಗಿರುವ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಈ ಬಾರಿ ಉಪಸಮರದಲ್ಲಿ ಕಮಲ ಅರಳಿದ್ದು, ಕೈ- ತೆನೆ ನೆಲಕಚ್ಚಿದೆ. ಬಿಜೆಪಿ ಗೆಲುವಿನೊಂದಿಗೆ ಕಾರ್ಯಕರ್ತರಲ್ಲಿ ಹೊಸ ಮಂದಹಾಸ, ಚೈತನ್ಯ ಮೂಡಿದೆ.

    ಜೆಡಿಎಸ್‍ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗೆಲುವಿನ ನಾಗಲೋಟವನ್ನ ಮುಂದುವರೆಸಿದ್ದಾರೆ. ಫಲಿತಾಂಶದ ಬಳಿಕ ಮಾತನಾಡಿದ ಗೋಪಾಲಯ್ಯ, ಕ್ಷೇತ್ರದ ಜನರ ಸಹಕಾರ, ಬೆಂಬಲದಿಂದ ಗೆಲುವು ಸಿಕ್ಕಿದೆ. ಈ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿತಾರೆ ಎನ್ನುವ ವಿಶ್ವಾಸವಿತ್ತು. ವಿಶ್ವಾಸಕ್ಕೆ ತಕ್ಕಂತೆ ಗೆಲುವು ಸಿಕ್ಕಿದೆ. ಯಾವ ಮಂತ್ರಿ ಸ್ಥಾನವನ್ನ ಕೊಟ್ಟರು ನಿಭಾಯಿಸುತ್ತೇನೆ ಎಂದು ಖುಷಿ ಹಂಚಿಕೊಂಡರು.

    ತೆನೆ ಬಿಟ್ಟು ಕಮಲ ಹಿಡಿದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಗೋಪಾಲಯ್ಯಗೆ, ತಮ್ಮ ಪತ್ನಿ ಹೇಮಲತಾರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಹೇಮಾಲತಾ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯೆರಾಗಿದ್ದರೂ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪತಿಗೆ ಬೆಂಬಲವನ್ನ ಕೊಟ್ಟು, ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಜೆಡಿಎಸ್ ಪಕ್ಷದ ನಾಯಕರ ಎಚ್ಚರಿಕೆಗೂ ಜಗ್ಗದೆ ಪ್ರಚಾರ ಸಮಾರಂಭಗಳಲ್ಲಿ ಭಾಗಿಯಾಗಿ ಹಗಲಿರುಳು ಶ್ರಮಿಸಿದ್ದರು. ಇದು ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ, ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಹೇಮಲತಾರನ್ನ ಜೆಡಿಎಸ್‍ನಿಂದ ಉಚ್ಛಾಟಿಸಲಾಯಿತು. ಆದರೂ ತಮ್ಮ ಪತಿಯ ಬೆನ್ನಿಗೆ ನಿಂತು ಚುನಾವಣೆಯಲ್ಲಿ ವಾರ್ಡ್ ಮಟ್ಟದಲ್ಲಿ ಸಂಚರಿಸಿ, ಪತಿಯ ಗೆಲುವಿಗೆ ಕಾರಣರಾದರು.

  • ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ದಾಳಿ-20 ಲೀಟರ್ ವಿದೇಶಿ ಮದ್ಯ ವಶ

    ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ದಾಳಿ-20 ಲೀಟರ್ ವಿದೇಶಿ ಮದ್ಯ ವಶ

    ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಇಸ್ಪೀಟ್ ಅಡ್ಡೆ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಇಂದು ಗ್ಯಾಂಬ್ಲಿಂಗ್ ರೂವಾರಿ, ಮೀಟರ್ ಬಡ್ಡಿ ಆರೋಪ ಇರುವ ಕಪಾಲಿ ಮೋಹನ್ ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಹಲವು ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಪಾಲಿ ಮೋಹನ್, ಶೀಘ್ರ ಹಣ ಸಂಪಾದನೆಗೆ ಅಕ್ರಮದ ದಾರಿ ಹಿಡಿದಿದ್ದರು ಎಂಬ ಆರೋಪದ ಮೇಲೆ ಸದಾಶಿವನಗರದ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಕಪಾಲಿ ಮೋಹನ್ ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭಿಸಿದ್ದು, ಮನೆಯಲ್ಲಿ ದುಬಾರಿ ಬೆಲೆಯ ವಿದೇಶಿ ಮದ್ಯದ ಬಾಟೆಲ್‍ಗಳು ಪತ್ತೆಯಾಗಿವೆ. ಸುಮಾರು 20 ಲೀಟರ್ ನಷ್ಟಿದ್ದ ಅಕ್ರಮ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೇ ಸದ್ಯ ಜಾರಿ ಇರುವ ನಿಯಮದ ಪ್ರಕಾರ 9 ಲೀಟರ್‍ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಮದ್ಯ ಸಂಗ್ರಹ ಮಾಡಿದ್ದರೆ ಅದು ಅಪರಾಧವಾಗುತ್ತದೆ. ಇದರೊಂದಿಗೆ ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಬಾಲಾಜಿ ಫೈನಾನ್ಸ್ ಮೇಲೆಯೂ ಸಿಸಿಬಿ ದಾಳಿ ನಡೆಸಿ ಹಲವು ದಾಖಲೆ ವಶಕ್ಕೆ ಪಡೆದಿರುವುದಾಗಿ ಉತ್ತರ ವಿಭಾಗ ಅಬಕಾರಿ ಡಿಸಿ ಕೆಎಸ್ ಮುರಳಿ ತಿಳಿಸಿದ್ದಾರೆ. ಬಾಲಾಜಿ ಫೈನಾನ್ಸ್ ಕಪಾಲಿ ಮೋಹನ್ ಒಡೆತನದಲ್ಲಿ ಸಂಸ್ಥೆಯಾಗಿದೆ.

    ಉಳಿದಂತೆ ಶನಿವಾರ ನಡೆಸಿದ ಸಿಸಿಬಿ ದಾಳಿಗೆ ಸಂಬಂಧಿಸಿದಂತೆ ಆರ್ ಜಿ ಹೋಟೆಲ್ ಬಿಲ್ಡಿಂಗ್ ಮಾಲೀಕನ ಮೇಲೆ ಸಹ ದೂರು ದಾಖಲು ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಪಾರ್ಕ್‍ನಲ್ಲಿ ಎಸಿ ಹಾಕಿಸಿದ ಶಾಸಕರು- ಸುಮ್ಮನೆ ಹಣಪೋಲು ಎಂದು ಸ್ಥಳೀಯರ ಆಕ್ರೋಶ

    ಬೆಂಗಳೂರು: ಮಳೆ ಬಂದ್ರೆ ಬೆಂಗಳೂರು ತೊಯ್ದು ತೊಪ್ಪೆಯಾಗತ್ತೆ. ಮತ್ತೊಂದು ಕಡೆ ರಸ್ತೆ ಗುಂಡಿ ವಾಹನ ಸವಾರರನ್ನ ಹಿಂಡಿ ಹಿಪ್ಪೆ ಮಾಡತ್ತೆ. ನೈಸರ್ಗಿಕ ಗಾಳಿ ಸಿಗಲಿ ಅಂತ ಪಾರ್ಕ್‍ಗೆ ವೃದ್ಧರು, ಮಹಿಳೆಯರು, ಮಕ್ಕಳು ಪಾರ್ಕ್‍ಗೆ ಬರ್ತಾರೆ. ಆದ್ರೆ ಈ ಪಾರ್ಕ್ ಮಾತ್ರ ಸಿಕ್ಕಾಪಟ್ಟೆ ಹೈಫೈ. ಈ ಪಾರ್ಕ್‍ಗೆ ಬಂದ್ರೆ ಎಸಿ ಗಾಳಿ ಕುಡೀಬೇಕು.

    ಇಂಥದ್ದೊಂದು ಪಾರ್ಕ್ ಇರೋದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ. ಇದನ್ನ ಉಪಮಹಾಪೌರರ ಅನುದಾನದಡಿಯಲ್ಲಿ ಮಾಡಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಪಾರ್ಕ್‍ನಲ್ಲೂ ಎಸಿ ಹಾಕಿಸಿದ್ದಾರೆ.

    ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡುವ ಯೋಜನೆಗೆ ಬಿಬಿಎಂಪಿ ಹಾಗೂ ಸರ್ಕಾರದ ಹಣವನ್ನು ಬಳಕೆ ಮಾಡಿ ಹಣ ದೋಚುವ ಸಾಹಸಕ್ಕೆ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಕೆಲ ಸ್ಥಳೀಯರು ಮಾತನಾಡಿ, ಬಡಾವಣೆಯಲ್ಲಿ ಎಷ್ಟೆಲ್ಲಾ ಸಮಸ್ಯೆಗಳು ಇವೆ. ಮಳೆ ಬಂತೆಂದರೆ ಬಡಾವಣೆಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತಿದೆ. ಅಲ್ಲದೇ ರಸ್ತೆಗಳೆಲ್ಲ ಹದಗೆಟ್ಟಿದ್ದು, ವಾಹನ ಸವಾರರಿಗೆ ತಲೆ ನೋವಾಗಿದೆ. ಇಂತಹ ಕೆಲಸಗಳಿಗೆ ಅನುದಾನ ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹೈಫೈ ಎಸಿ ಪಾರ್ಕ್ ಯೋಜನೆ ಸಮಂಜಸವಲ್ಲ ಎಂದು ಆರೋಪಿಸಿದ್ದಾರೆ.

    ಸರ್ಕಾರದ ಮತ್ತು ಬಿಬಿಎಂಪಿ ಉಪಮೇಯರ್ ಅನುದಾನವನ್ನ ಒಳ್ಳೆಯ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬೇಕು. ಅವ್ಯವಸ್ಥೆಯ ಬಗ್ಗೆ ಗಮನಹರಿಸದೇ ಶಾಸಕ ಗೋಪಾಲಯ್ಯ ಹಾಗೂ ಕಾರ್ಪೊರೇಟರ್ ಕೇಶವಮೂರ್ತಿ ಸಾರ್ವಜನಿಕ ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಮಾಡಲು ಮುಂದಾಗಿದ್ದಾರೆ. ಜನರಿಗೆ ಹೈಫೈ ಎಸಿ ಪಾರ್ಕ್‍ನ ಅವಶ್ಯಕತೆಯಿಲ್ಲ. ಇದು ಹುಚ್ಚಾಟದ ಆಲೋಚನೆ. ಪಾರ್ಕ್‍ನಲ್ಲಿ ಎಸಿ ಅಳವಡಿಕೆ ಆಲೋಚನೆ ಬಿಟ್ಟು ಜನಪರ ಕೆಲಸ ಮಾಡಬೇಕು ಎಂದು ಸ್ಥಳೀಯ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.