Tag: ಮಹಾಬಲೇಶ್ವರ

  • ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು

    ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು

    ಕಾರವಾರ: ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬುವ ಮೂಲಕ ಅಂತರ ಗಂಗೆಯು ಆತ್ಮಲಿಂಗ ಸ್ಪರ್ಷ ಮಾಡಿದ್ದಾಳೆ.

    ಇಂದು ಏಕಾ ಏಕಿ ಗರ್ಭಗುಡಿ ಕೆಳಭಾಗದಿಂದ ಜಲ ಒಡೆಯುವ ಮೂಲಕ ಗರ್ಭಗುಡಿಯ ತುಂಬ ನೀರು ತುಂಬಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಷೇಕ ಮಾಡಿದ ನೀರು ಹೋಗುವ ಸೋಮಸೂತ್ರ ನಾಲಾದ ಭಾಗದಿಂದ ನೀರು ಬರುತ್ತಿದ್ದು, ಸಾತ್ವಿಕರನ್ನು ಪುಳಕ ಗೊಳಿಸಿದೆ. ಈ ವಿಷಯ ತಿಳಿದ ಆಡಳಿತ ಮಂಡಳಿ ದೇವರ ಪೂಜಾ ಕಾರ್ಯಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ನೀರನ್ನು ತೆಗೆಸಿ ಸ್ವಚ್ಛಗೊಳಿಸಿದರು.

    ಇತಿಹಾಸದಲ್ಲೇ ಇದು ಎರಡನೇ ಬಾರಿ:
    ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಗೋಕರ್ಣ ಮಹಾಬಲೇಷ್ವರನ ಗರ್ಭಗುಡಿಯಲ್ಲಿ ನೀರು ತುಂಬಿದ ದಾಖಲೆಗಳಿಲ್ಲ. ಆದರೇ ಇದೇ ವರ್ಷದಲ್ಲಿ ಇದು ಎರಡನೇ ಬಾರಿ ಈ ರೀತಿ ಗರ್ಭಗುಡಿಯಲ್ಲಿ ನೀರು ತುಂಬಿದೆ.

    ನೀರು ತುಂಬಲು ಕಾರಣ ಏನು?
    ಪ್ರತಿ ಬಾರಿ ದೇವಸ್ಥಾನದ ಗರ್ಭಗುಡಿ ಭಾಗದಲ್ಲಿ ದೇವರಿಗೆ ಅಭಿಷೇಕ ಮಾಡಿದ ನೀರು ಹೋಗಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ನೀರು ಪಕ್ಕದಲ್ಲೇ ಇರುವ ಸೋಮಸೂತ್ರ ನಾಲದ ಮೂಲಕ ಸಮುದ್ರಕ್ಕೆ ಹೋಗುತ್ತದೆ. ಪ್ರತಿ ವರ್ಷ ನೀರು ಹೋಗಲು ಗ್ರಾಮಪಂಚಾಯ್ತಿ ವತಿಯಿಂದ ನಾಲಾದಲ್ಲಿ ಸ್ವಚ್ಛ ಕಾರ್ಯ ಮಾಡಲಾಗುತ್ತದೆ. ಈ ಬಾರಿ ಗ್ರಾಮ ಪಂಚಾಯ್ತಿಯಿಂದ ಈ ಕೆಲಸವಾಗಿಲ್ಲ. ಇದನ್ನೂ ಓದಿ: ಗೋಕರ್ಣದಲ್ಲಿ ವಿದ್ಯುಕ್ತವಾಗಿ ನೆರವೇರಿತು ಶಿವಗಂಗಾ ವಿವಾಹ ಮಹೋತ್ಸವ

    ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಕೂಡ ಬಂದ್ ಮಾಡಲಾಗಿದ್ದು, ಜಲವಡೆದಾಗ ನೀರು ನಾಲದಲ್ಲಿ ಹೋಗದೇ ಹಿಮ್ಮುಖವಾಗಿ ಚಲಿಸಿ ಗರ್ಭಗುಡಿಗೆ ಬರುತ್ತಿದೆ ಎಂಬುದು ಸ್ಥಳೀಯರ ದೂರು. ಇನ್ನು ಗರ್ಭಗುಡಿಯಲ್ಲಿ ತುಂಬಿದ ನೀರಿನೊಂದಿಗೆ ಕಲ್ಮಶ ನೀರು ಸಹ ಸೇರಿ ದೇವರ ಗರ್ಭಗುಡಿ ಆವರಿಸಿದೆ. ಹೀಗಾಗಿ ಸ್ಥಳೀಯರು ಇದು ಮುಂದಿನ ಕೆಡುಕಿನ ಸಂಕೇತ ಎಂದು ಮಾತನಾಡಿಕೊಳ್ಳುತಿದ್ದಾರೆ. ಸದ್ಯ ಗರ್ಭಗುಡಿಯಲ್ಲಿ ತುಂಬಿದ ನೀರನ್ನು ಆಡಳಿತ ಮಂಡಳಿ ಸ್ವಚ್ಛಗೊಳಿಸಿದೆ. ಇದನ್ನೂ ಓದಿ: ಗೋಕರ್ಣ ಭಕ್ತರಿಂದ ದಕ್ಷಿಣೆ ಸ್ವೀಕಾರ ವಿವಾದ- ರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

  • ಗೋಕರ್ಣ: ಗ್ರಹಣಕಾಲದಲ್ಲಿ ಸಮುದ್ರದಲ್ಲಿ ಮಿಂದೆದ್ದ ಮಹಾಬಲೇಶ್ವರ ಭಕ್ತರು

    ಗೋಕರ್ಣ: ಗ್ರಹಣಕಾಲದಲ್ಲಿ ಸಮುದ್ರದಲ್ಲಿ ಮಿಂದೆದ್ದ ಮಹಾಬಲೇಶ್ವರ ಭಕ್ತರು

    ಕಾರವಾರ: ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸ್ಥಳೀಯ ಜನರು ಹಾಗೂ ಯಾತ್ರಿಕರು ಸಮುದ್ರ ಸ್ನಾನ ಮಾಡಿ ಗ್ರಹಣ ದೋಷ ನಿವಾರಣೆಗಾಗಿ ಜಪತಪ ಕೈಗೊಂಡರು.

    ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಗೋಕರ್ಣದ ಕಡಲತೀರಕ್ಕೆ ಆಗಮಿಸಿದ ಜನರು ಮೊದಲು ಪವಿತ್ರ ಸಮುದ್ರ ಸ್ನಾನ ನೆರವೇರಿಸಿದರು. ನಂತರ ಕಡಲತೀರದ ಮರಳಿನಲ್ಲಿ ಲಿಂಗವನ್ನು ಸೃಷ್ಟಿಸಿ ಪೂಜೆ ನೆರವೇರಿಸಿ ಗ್ರಹಣ ಮುಗಿಯುವವರೆಗೂ ಮಹಾಬಲೇಶ್ವರನ ಧ್ಯಾನದಲ್ಲಿ ನಿರತರಾಗಿ ನಂತರ ಗೋಕರ್ಣದ ಮಹಾಬಲೇಶ್ವರನ ದರ್ಶನ ನೆರವೇರಿಸಿದರು.

    ಸಮುದ್ರ ಸ್ನಾನ-ಆರೋಗ್ಯಕ್ಕೂ ಹಿತ: ಹಲವು ನದಿಗಳು ಸೇರುವ ಅರಬ್ಬಿ ಸಮುದ್ರದ ಗೋಕರ್ಣ ಕಡಲತೀರವು ಮಹೇಶ್ವರನ ಆತ್ಮಲಿಂಗ ನೆಲೆಯೂರಿದ ಸ್ಥಳವಾಗಿದೆ. ಧಾರ್ಮಿಕ ಕಾರಣದಿಂದ ಗೋಕರ್ಣ ವಿಶೇಷ ಸ್ಥಾನ ಪಡೆದಿದ್ದು, ಇಲ್ಲಿನ ಸಮುದ್ರವೂ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಸಮುದ್ರಕ್ಕೆ ಹಲವು ನದಿಗಳು ಸೇರುವುದರಿಂದ ಸಮುದ್ರಕ್ಕೆ ಮಹಾ ಗಂಗಾ ಎಂದು ಹೇಳಲಾಗುತ್ತದೆ. ಹಲವು ರೋಗ ರುಜನೆಗಳನ್ನು ಪರಿಹರಿಸುವ ಶಕ್ತಿ ಈ ಸಮುದ್ರಕ್ಕಿದೆ ಎಂಬ ನಂಬಿಕೆಯಾಗಿದ್ದು, ನಮ್ಮ ದೇಹದ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕುತ್ತದೆ ಎಂಬ ನಂಬಿಕೆ.

    ಗ್ರಹಣ ಸಮಯದಲ್ಲಿ ಸಮುದ್ರ ಹಾಗೂ ನದಿ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರದ ನೀರು ಉಪ್ಪಾಗಿರುವ ಕಾರಣದಿಂದ ಅದು ಚರ್ಮ ರೋಗಗಳನ್ನು ನಿವಾರಣೆ ಮಾಡಿ ದೇಹಕ್ಕೆ ಒಳ್ಳೆಯದನ್ನು ಮಾಡಲಿದೆ ಎನ್ನುತ್ತೆ ವಿಜ್ಞಾನ. ನಮ್ಮ ಪೂರ್ವಜರು ಹಿಂದಿನಿಂದಲೂ ಈ ರೀತಿಯ ಸ್ನಾನದ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಮುದ್ರ ಸ್ನಾನ ಮಾಡುವುದರಿಂದ ನೀರಿನ ತೇಜದಾಯಕ ಸ್ಪರ್ಶದಿಂದ ದೇಹದಲ್ಲಿನ ಚೇತನವೂ ಜಾಗೃತವಾಗಿ ಅದು ದೇಹದ ಟೊಳ್ಳುಗಳಲ್ಲಿ ಸಂಗ್ರಹವಾಗಿರುವ ಮತ್ತು ಘನೀಕೃತವಾಗಿರುವ ರಜ-ತಮಾತ್ಮಕ ಲಹರಿಗಳನ್ನು ಜಾಗೃತಗೊಳಿಸಿ ಹೊರಗೆ ತಳ್ಳುತ್ತದೆ.

    ಸಮುದ್ರದಲ್ಲಿ ಸ್ನಾನ ಮಾಡುವುದಕ್ಕಿಂತ ಮೊದಲು ಜನರು ಜಲದೇವತೆಯನ್ನು ಪ್ರಾರ್ಥಿಸಿ ಸೂರ್ಯನಮಸ್ಕಾರ ಹಾಗೂ ಅರ್ಗೆಯನ್ನು ಕೊಟ್ಟು ಪೂಜಿಸುತ್ತಾರೆ. ನಂತರ ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸೂರ್ಯನಿಗೆ ಮುಖ ಮಾಡಿ ಗ್ರಹಣ ಕಳೆಯುವವರೆಗೂ ಇಷ್ಟ ದೇವರ ಜಪ ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ದೇಹದ ನೆಗಟಿವ್ ಎನರ್ಜಿಯನ್ನು ಹೊರಹಾಕಿ ಮನಸ್ಸು ಶುಭ್ರತೆಯಡೆ ತಿರುಗುತ್ತದೆ ಎಂಬುದು ನಂಬಿಕೆ ಇದ್ದು, ಇಂದು ನೂರಾರು ಜನರು ಸಮುದ್ರ ಸ್ನಾನ ಮಾಡಿ ಗೋಕರ್ಣದ ಮಹಾಬಲೇಶ್ವರನ ಪೂಜೆ ಗೈದು ಗ್ರಹಣ ದೋಷ ಪರಿಹಾರಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

  • ಗೋಕರ್ಣದಲ್ಲಿ ಸಿಗಲಿಲ್ಲ ಆತ್ಮಲಿಂಗ ದರ್ಶನ, ಬಡವರ ಕೈಯಲ್ಲಿ ಮೂಡಿತು ಸಾವಿರಾರು ಲಿಂಗ

    ಗೋಕರ್ಣದಲ್ಲಿ ಸಿಗಲಿಲ್ಲ ಆತ್ಮಲಿಂಗ ದರ್ಶನ, ಬಡವರ ಕೈಯಲ್ಲಿ ಮೂಡಿತು ಸಾವಿರಾರು ಲಿಂಗ

    ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿವ ತಾಣ ಗೋಕರ್ಣದಲ್ಲಿ ದುಡ್ಡು ಇದ್ದರೆ ಮಾತ್ರ ಮಹಾಬಲೇಶ್ವರನ ಆತ್ಮ ಲಿಂಗ ದರ್ಶನ ಬೇಗ ಸಿಗುತ್ತದೆ. ಹೀಗಾಗಿ ದುಡ್ಡಿಲ್ಲದ ಬಡವರು ಗೋಕರ್ಣದ ಕಡಲ ತೀರದಲ್ಲಿ ಮರಳಿನ ಆತ್ಮಲಿಂಗ ರಚಿಸಿ ಪೂಜೆ ಸಲ್ಲಿಸಿದ್ದಾರೆ.

    ಶಿವರಾತ್ರಿ ದಿನ ಗೋಕರ್ಣದ ಮಹಾಬಲೇಶ್ವರ ದರ್ಶನ ಮಾಡುವುದು ಪ್ರಾಯಾಸದಾಯಕ. ದುಡ್ಡು ಇದ್ದರೆ, ಇಲ್ಲವೆ ವಿಐಪಿ ಆಗಿದ್ದರೆ ಎರಡು ನಿಮಿಷದಲ್ಲಿ ಆತ್ಮಲಿಂಗ ದರ್ಶನ ಮಾಡಬಹುದು. ಆದರೆ ಜನಸಾಮಾನ್ಯರಿಗೆ ದರ್ಶನ ಸಿಗುವುದು ತುಂಬಾ ಕಷ್ಟ. ದುಡ್ಡಿಲ್ಲದ ಬಡ ಭಕ್ತರು ಬೆಳಗಿನ ಜಾವದಿಂದಲೇ ಕಿಲೋಮೀಟರ್ ಗಟ್ಟಲೆ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಬೇಕು. ಹೀಗಾಗಿ ಹಲವು ಭಕ್ತರು ದೇವಸ್ಥಾನದ ಮುಖ್ಯದ್ವಾರದಲ್ಲಿ ನಮಸ್ಕರಿಸಿ ಇಲ್ಲಿನ ಕಡಲತೀರದಲ್ಲಿ ಈಶ್ವರನ ಲಿಂಗ ತಯಾರಿಸಿ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ತಾವೇ ರಚಿಸಿದ ಮರಳಿನ ಲಿಂಗದಲ್ಲಿ ದೇವರನ್ನು ಕಾಣುತ್ತಾರೆ.

    ಸಾವಿರಾರು ಶಿವಭಕ್ತರು ಗೋಕರ್ಣದ ಮುಖ್ಯ ಕಡಲತೀರಕ್ಕೆ ಆಗಮಿಸಿ ಮರಳಿನಲ್ಲಿ ಶಿವಲಿಂಗ ನಿರ್ಮಿಸಿ ಬಿಲ್ಪತ್ರೆ, ಹೂವು, ಕುಂಕುಮಗಳ ಮೂಲಕ ಪೂಜೆ ಸಲ್ಲಿಸುತ್ತಾರೆ. ಪ್ರತಿ ಶಿವರಾತ್ರಿಯಂದು ಕೇವಲ ಕರ್ನಾಟಕದವರಲ್ಲದೇ ಮಹರಾಷ್ಟ್ರ, ಗೋವಾಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ಮರಳಿನಲ್ಲಿ ಶಿವಲಿಂಗ ಮಾಡಿ ಅದರಲ್ಲಿ ಶಿವನ ಆತ್ಮಲಿಂಗವನ್ನು ಕಂಡು ಪುನೀತರಾಗುತ್ತಾರೆ.

  • ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುತ್ತೆ ಟಿಪ್ಪುವಿನ ಹೆಸ್ರಲ್ಲಿ ನಿತ್ಯ ಪೂಜೆ!

    ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುತ್ತೆ ಟಿಪ್ಪುವಿನ ಹೆಸ್ರಲ್ಲಿ ನಿತ್ಯ ಪೂಜೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣದ ಮಹಾಬಲೆಶ್ವರ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಲ್ಲಿ ನಿತ್ಯ ಪೂಜೆ ನಡೆಸಲಾಗುತ್ತದೆ.

    ಸುಮಾರು 300 ವರ್ಷಗಳಿಂದ ಗೋಕರ್ಣದ ಮಹಾಬಲೇಶ್ವರ, ಪಾರ್ವತಿ ದೇವಿ ಮತ್ತು ತಾಮ್ರ ಗೌರಿ ಮಂದಿರದಲ್ಲಿ ರಾತ್ರಿ ವೇಳೆ ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ಸಲ್ಲಿಸಲಾಗುತ್ತೆ. ಈ ಪೂಜೆಯು ಹಿಂದೂಪರ ಮಂತ್ರೋಚ್ಛಾರಣೆಯಲ್ಲಿ ನೆಡೆದ್ರೂ, ಪೂಜೆಯ ಪೂರ್ವದಲ್ಲಿ ಮೂರು ಬಾರಿ ಸಲಾಂ ಎಂದು ಉದ್ಘೋಷ ಮಾಡಲಾಗುತ್ತದೆ.

    ಮಹಾಬಲೇಶ್ವರ ದೇವಸ್ಥಾನದ ದ್ವಾರದಲ್ಲಿ ಸಲಾಂ.. ಸಲಾಂ.. ಎಂದು ಕೂಗಿ ಟಿಪ್ಪುವನ್ನು ಸ್ಮರಿಸಿ ನಂತರವೇ ಆತ್ಮಲಿಂಗಕ್ಕೆ ಪೂಜೆ ಕೈಗೊಳ್ಳತ್ತಾ ಬಂದಿದ್ದಾರೆ. ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಗೋಕರ್ಣಕ್ಕೆ ಆತನ ಸೈನಿಕರು ಮುತ್ತಿಗೆ ಹಾಕಿ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಹೊರಟಿದ್ದ ಸಂದರ್ಭದಲ್ಲಿ ಟಿಪ್ಪುವಿಗೆ ಶಿವನು ಕನಸಿನಲ್ಲಿ ಬಂದಿದ್ದನಂತೆ. ಇದರಿಂದ ಭಯಗೊಂಡ ಟಿಪ್ಪು ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಿ ಸಲಾಂ ವಂದನೆ ನೀಡಿ ಕಪ್ಪಕಾಣಿಕೆ ಅರ್ಪಣೆ ಮಾಡಿದ್ದನಂತೆ. ಹೀಗಾಗಿ ಆತ ಬಂದು ಕ್ಷಮೆ ಕೇಳಿದ ಹೊತ್ತನ್ನು ಹಾಗೂ ಆತ ಸಲಾಂ ಹೇಳಿದ ಶಬ್ದವನ್ನು ಇಲ್ಲಿ ಬಳಸಿ ಆತನನ್ನು ಸ್ಮರಿಸಲಾಗುತ್ತಿದೆ ಎನ್ನಲಾಗಿದೆ.