Tag: ಮಳೆ

  • ಬಿರುಬೇಸಿಗೆಯ ಮಧ್ಯೆ ರಾಜ್ಯದ ಹಲವೆಡೆ ಮಳೆ

    ಬಿರುಬೇಸಿಗೆಯ ಮಧ್ಯೆ ರಾಜ್ಯದ ಹಲವೆಡೆ ಮಳೆ

    ಬೆಂಗಳೂರು: ಬಿರುಬೇಸಿಗೆಯ ಮಧ್ಯೆ ಅಕಾಲಿಕವಾಗಿ ರಾಜ್ಯದ ಹಲವೆಡೆ ಮಳೆಯಾಗಿದೆ. ಹಾಸನ, ಚಿಕ್ಕಬಳ್ಳಾಪುರ, ನೆಲಮಂಗಲ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಇಂದು ಮಳೆಯಾಗಿದೆ.

    ಜೋರಾದ ಗಾಳಿ ಬೀಸಿ ಜೈನ ಸಮಾವೇಶದ ಪಂಚಕಲ್ಯಾಣ ಪ್ರತಿಷ್ಟಾನ ಮಹಾಮಹೋತ್ಸವ ಕಾರ್ಯಕ್ರಮದ ಊಟದ ಆವರಣದ ಪೆಂಡಾಲ್ ಬಿದ್ದು ಮೂವರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅರಟಾಳ ಗ್ರಾಮದಲ್ಲಿ ನಡೆದಿದೆ.

    ಬಿಸಿಲಿನಿಂದ ಕಂಗೆಟ್ಟಿದ್ದ ಜನ ಮಳೆಯಿಂದ ಕೂಲ್ ಆಗಿದ್ದಾರೆ. ಈ ಮಧ್ಯೆ, ತೀವ್ರ ಬರಗಾಲದ ನಡುವೆಯೂ ಸಹಕಾರ ಸಂಸ್ಥೆಗಳಿಂದ ರೈತರು ಪಡೆದಿದ್ದ ಶೇ.90ರಷ್ಟು ಸಾಲವನ್ನು ಮರುಪಾವತಿ ಮಾಡಿರುವುದಾಗಿ ತಿಳಿದುಬಂದಿದೆ.

  • ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಕೊಡಗಿನ ಕಾಫಿ, ಕರಿಮೆಣಸು ಬೆಳಗಾರರಿಗೂ ತಟ್ಟಿದ ಬರಗಾಲದ ಬಿಸಿ

    ಮಡಿಕೇರಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ಕೊಡಗಿನ ಕಾಫಿ ಹಾಗೂ ಕರಿಮೆಣಸು ಬೆಳೆಗಾರರ ಸ್ಥಿತಿಯಾಗಿದೆ. ಬೇಕಾದಾಗ ಸಮಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಕಾಫಿ ಕರಿಮೆಣಸು ಗಿಡಗಳು ದಿನದಿಂದ ದಿನಕ್ಕೆ ಒಣಗುತ್ತಿವೆ.

    ಡಿಸೆಂಬರ್ ನಲ್ಲಿ ಆರಂಭವಾಗುವ ಕಾಫಿ ಕೂಯ್ಲು ಮಾರ್ಚ್‍ವರೆಗೂ ನಡೆಯುತ್ತದೆ. ನಂತರ ಮಳೆ ಅಥವಾ ನೀರಾವರಿ ಮೂಲಕ ಬೆಳೆಗಾರರು ಕಾಫಿಗಿಡದಲ್ಲಿ ಹೂಗಳನ್ನರಳಿಸಿ ಮುಂದಿನ ಬೆಳೆಗೆ ತೋಟಗಳನ್ನ ಅಣಿಗೊಳಿಸುತ್ತಾರೆ. ಆದರೆ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯೇ ಬಿದ್ದ ಕಾರಣ ಕಾಫಿ ಗಿಡಗಳು ಒಣಗಲು ಆರಂಭವಾಗಿದೆ.

    ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಕೊಡಗಿನಲ್ಲಿ ಮಳೆಯಾಗಿ ಕಾಫಿ ಗಿಡಗಳಲ್ಲಿ ಹೂ ಬರುವುದು ವಾಡಿಕೆ. ಅದರೆ ಈ ಬಾರಿ ಮಳೆಯೇ ಬಾರದೇ ಗಿಡಗಳು ನಾಶವಾಗುತ್ತಿವೆ. ಆದರೆ ಕಳೆದ ಒಂದು ವಾರದ ಹಿಂದೆ ಮಳೆ ಬಂದು ಕಾಫಿ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಹೂ ಬಿಟ್ಟಿದೆ. ಈಗ ಹೂ ಬಿಟ್ಟಿರುವುದು ಈಗ ಸಮಸ್ಯೆಯಾಗಿದೆ.

    ಕಾಫಿ ಬೆಳೆಯ ಜೊತೆಗೆ ಕರಿಮೆಣಸು ಬೆಳೆಯುತ್ತಾರೆ. ಈ ಬಾರಿ ಪ್ರತಿ ಕೆಜಿ ಮೆಣಸಿಗೆ 700 ರೂ ಇದೆ. ಆದರೆ ಮಳೆ ಇಲ್ಲದೇ ಮೆಣಸಿನ ಬೀಜವೆಲ್ಲವೂ ಹಾಳಾಗುತ್ತಿದ್ದು, ಗುಣಮಟ್ಟ ಕಡಿಮೆಯಾಗ್ತಿದೆ.

    ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಕರಿಮೆಣಸು ಗಿಡಗಳನ್ನು ತೆಗೆದು ಹೊಸದಾಗಿಯೇ ನಾಟಿ ಮಾಡಬೇಕಾಗುತ್ತದೆ. ಹೀಗೆ ಹೊಸದಾಗಿ ನಾಟಿ ಮಾಡಿದ ಬೆಳೆಯಿಂದ ಫಸಲು ಬರಲು ಸುಮಾರು 5 ರಿಂದ 7 ವರ್ಷ ಬೇಕಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಬಾಳೆಲೆ, ನಿಟ್ಟೂರು, ಮಾಯಾಮುಡಿ ಗ್ರಾಮಗಳ ರೈತರು ಈ ತೊಂದರೆಗೆ ಒಳಗಾಗಿದ್ದಾರೆ.

     

  • ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಬಿರು ಬೇಸಿಗೆಯಲ್ಲಿ ಮಳೆ ತರಿಸಬಲ್ಲ ಡ್ರೋನ್ ವಿನ್ಯಾಸಗೊಳಿಸಿದ್ದಾರೆ ಉಡುಪಿ ಯುವಕರು

    ಉಡುಪಿ: ಡ್ರೋನ್ ಕ್ಯಾಮೆರಾ ಭಾರತ ದೇಶದ ಸೈನ್ಯದಲ್ಲಿ ಮಹತ್ವದ ಪಾತ್ರವಹಿಸ್ತಾಯಿದೆ. ಅದು ಬಿಟ್ಟರೆ ಡ್ರೋನ್ ಯೂಸ್ ಆಗೋದು ವಿಭಿನ್ನ ದೃಶ್ಯಾವಳಿಗಳ ಶೂಟಿಂಗ್‍ಗಾಗಿ. ಇದೇ ಡ್ರೋನನ್ನು ಉಪಯೋಗಿಸಿಕೊಂಡು ಕರ್ನಾಟಕದ ಬರವನ್ನು ನೀಗಿಸಿ ಮಳೆ ಬರಿಸೋದಕ್ಕೆ ಹೊರಟಿದೆ ಉಡುಪಿಯ ಒಂದು ಟೀಂ.

    ಡ್ರೋನ್..! ಕ್ಯಾಮೆರಾ ತಂತ್ರಜ್ಞಾನದ ಸದ್ಯದ ಅತ್ಯುನ್ನತ ಸಂಶೋಧನೆಗಳಲ್ಲಿ ಒಂದು. ನಿಂತಲ್ಲಿಂದ ಬರಿಗಣ್ಣಿನಲ್ಲಿ ನೋಡಲಾಗದ- ಪಕ್ಷಿನೋಟವನ್ನು ಸೆರೆ ಹಿಡಿಯುವ ವಿಭಿನ್ನ ತಂತ್ರಜ್ಞಾನ. ಭೂಮಿಯಿಂದ ವಿಮಾನದಂತೆ ಹಾರಿ ಮತ್ತೆ ಭೂಮಿಗೆ ಇಳಿಯುವ ಸಾಧನ. ಸೈನ್ಯದಲ್ಲಿ ದೇಶದ ರಕ್ಷಣೆಯಲ್ಲಿ ಈ ಡ್ರೋನ್ ಉಪಯೋಗವಾಗುತ್ತಿದೆ. ಅದು ಬಿಟ್ಟರೆ, ಸಿನೆಮಾ ಗಳಲ್ಲಿ ಸುಂದರ ದೃಶ್ಯ ಸೆರೆ ಹಿಡಿಯಲು ಫೋಟೋ ಕ್ಲಿಕ್ ಮಾಡಲು ಡ್ರೋನ್ ಬಳಕೆಯಾಗ್ತಿದೆ. ಆದ್ರೆ ಡ್ರೋನನ್ನು ಬೇರೆಯದೇ ಕಾರಣಕ್ಕೆ ಉಪಯೋಗಿಸಬಹುದು.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರತ್ನಾಕರ್ ಮತ್ತು ಪ್ರಜ್ವಲ್ ದೊಡ್ಡ ಗಾತ್ರದ ಡ್ರೋನ್ ತಯಾರಿ ಮಾಡಿದ್ದಾರೆ. ಇದು ಮಾಮೂಲಿ ಡ್ರೋನ್ ಅಲ್ಲ. ಸಿಲ್ವರ್ ಅಯೋಡೈಸ್ಟ್ ಸೆಲ್‍ಗಳನ್ನು ಹೊತ್ತು ಬಾನೆತ್ತರಕ್ಕೆ ಹಾರುತ್ತದೆ. ನೀರಿಯುವ ಮೋಡಗಳ ಮೇಲೆ ಅದನ್ನು ಸಿಡಿಸುತ್ತದೆ. ಬಿರು ಬೇಸಿಗೆಯಲ್ಲಿ ಮಳೆ ತರಿಸುತ್ತದೆ. ಮೋಡ ಬಿತ್ತನೆಗಾಗಿ ಈ ಡ್ರೋನ್ ಸಿಸ್ಟಮನ್ನು ಇವರಿಬ್ಬರು ಕಂಡು ಹುಡುಕಿದ್ದಾರೆ.

    ಕ್ಲೌಡ್ ಸೀಡಿಂಗ್ ಡ್ರೋನ್‍ನಲ್ಲಿ ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು. ಇದರಲ್ಲಿ ವೇ ಪಾಯಿಂಟ್ ಟೆಕ್ನಾಲಜಿ ಅಪ್ಲೈ ಮಾಡಿದ್ದೇವೆ. 11 ಲಕ್ಷ ರೂಪಾಯಿ ಸದ್ಯ ಖರ್ಚಾಗಿದೆ. ನಾನು ಪಿಯುಸಿ ಕಲಿತವ. ಟೆಕ್ನಿಕಲಿ ನಾನು ಅಷ್ಟು ಪರಿಣಿತ ಅಲ್ಲ. ಹೀಗಾಗಿ ಏರೋನಾಟಿಕಲ್ ಕಲಿತಿರುವ ಪ್ರಜ್ವಲ್ ಅವರ ಸಹಾಯ ಪಡೆದಿದ್ದೇನೆ. ಪ್ರಧಾನಿ ಮೋದಿಯವರ ಸ್ಟಾರ್ಟ್ ಅಪ್ ಇಂಡಿಯಾ ಗೂ ಇದು ಅನ್ವಯವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡಿದರೆ ನಾವು ಮಾಡಿದ ಶ್ರಮ ರಾಜ್ಯ- ದೇಶದ ಜನರಿಗೆ ಉಪಯೋಗವಾಗುತ್ತದೆ ಎಂದು ಡ್ರೋನ್ ವಿನ್ಯಾಸಕ ರತ್ನಾಕರ್ ಹೇಳುತ್ತಾರೆ.

    ಡ್ರೋನ್‍ನಲ್ಲಿ ಮೋಡ ಬಿತ್ತನೆ ಮಾಡಬಹುದು. ತಯಾರಿ ಮಾಡಿರುವ ಮಷೀನ್ ಸಮರ್ಥವಾಗಿದೆ ಎಂದು ಇಸ್ರೋದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಡ್ರೋನ್ ಉಪಯೋಗವಾಗಬೇಕಾದ್ರೆ ಅದಕ್ಕೆ ಸರ್ಕಾರದ ಸಪೋರ್ಟ್ ಬೇಕು. ಇದೊಂದು ಉತ್ತಮ ಆವಿಷ್ಕಾರ. ಕಡಿಮೆ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಯಶಸ್ವಿಯಾದ್ರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಕೊಡುಗೆಯಾಗಲಿದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಿದೆ. ಸಿಎಂ ಮತ್ತು ಕೃಷಿ ಸಚಿವರಿಗೆ ಈ ತಂತ್ರಜ್ಞಾನದ ಪರಿಚಯಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

  • ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    -ಎಕರೆಗೆ 30 ಸಾವಿರ ರೂಪಾಯಿ ನಷ್ಟ

    -ಮಳೆ, ನೀರಿಲ್ಲದೆ ಇಳುವರಿ ಕುಂಠಿತ

    ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ ಹೊಡೆತ ನೀಡಿದೆ. ಪ್ರತಿಯೊಬ್ಬ ರೈತ ಕೂಡ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಬೀದಿಗೆ ಬಂದಿದ್ದಾನೆ.

    ರಾಯಚೂರು ಜಿಲ್ಲೆಯ ಜೀವಜಲದ ಮೂಲಗಳಾದ ತುಂಗಾಭದ್ರ, ಕೃಷ್ಣ ನದಿಗಳು ಈಗ ರೈತರನ್ನ ಕೈ ಬಿಟ್ಟಿವೆ. ಇನ್ನು ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಹೀಗಾಗಿ ಜಿಲ್ಲೆಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ನೀರಿಲ್ಲದೆ ಇಳುವರಿ ಕುಗ್ಗಿದೆ. ಪ್ರತೀ ವರ್ಷ ಎಕರೆಗೆ 25 ರಿಂದ 30 ಕ್ವಿಂಟಾಲ್‍ನಷ್ಟು ಬರುತ್ತಿದ್ದ ಬೆಳೆ ಈ ವರ್ಷ ಕೇವಲ 10 ರಿಂದ 13 ಕ್ವಿಂಟಾಲ್ ಬಂದಿದೆ. ಅಲ್ಲಿಗೆ ಎಕರೆಗೆ ಒಂದು ಲಕ್ಷದ ರೂ.ವರೆಗೆ ಖರ್ಚು ಮಾಡಿರುವ ರೈತರಿಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ.

    ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ರಿಂದ 5 ಸಾವಿರ ರೂಪಾಯಿಯಿದೆ. ಅಂದ್ರೆ ಪ್ರತಿ ಕ್ವಿಂಟಾಲ್‍ಗೆ ಸುಮಾರು 7 ಸಾವಿರ ರೂಪಾಯಿ ಇಳಿದಿದೆ. ಒಂದೆಡೆ ಮಳೆ ಕೈಕೊಟ್ಟರೆ, ಮತ್ತೊಂದೆಡೆ ಬೋರ್‍ವೆಲ್‍ನಿಂದ ನೀರು ಹಾಯಿಸಲು ರೈತರಿಗೆ ವಿದ್ಯುತ್ ಸಮಸ್ಯೆ ಕೂಡ ಇದೆ.

    ಕಳೆದ ಎಂಟತ್ತು ವರ್ಷಗಳಲ್ಲಿ ಅನುಭವಿಸದ ನಷ್ಟವನ್ನ ಮೆಣಸಿನಕಾಯಿ ಬೆಳೆಗಾರರು ಈ ವರ್ಷ ಅನುಭವಿಸಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಿಸಿಲ್ಲ. ಅಲ್ಲದೆ ಇತ್ತೀಚಿಗೆ ಸುರಿದ ಮಳೆಗೆ ಒಣಗಲು ಬಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಹೀಗಾಗಿ ಮೆಣಸಿನಕಾಯಿ ಸಂಗ್ರಹಕ್ಕೆ ಗೋದಾಮುಗಳ ವ್ಯವಸ್ಥೆ ಮಾಡಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಲಾಭದ ನಿರೀಕ್ಷೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರು ಭಾರೀ ನಷ್ಟವನ್ನೇ ಅನುಭವಿಸಿದ್ದಾರೆ. ಈಗಲಾದ್ರೂ ಸರ್ಕಾರ ರೈತರ ಕಡೆ ಗಮನಹರಿಸಬೇಕಿದೆ.

     

  • ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

    -ಬಳ್ಳಾರಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

    ರಾಯಚೂರು/ಬಳ್ಳಾರಿ: ಬಿರುಬಿಸಿಲ ಮಧ್ಯದಲ್ಲೇ ಬಿಸಿಲನಾಡು ರಾಯಚೂರಿನಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮೂಲಕ ಜಿಲ್ಲೆ ತಂಪಾಗಿದೆ. ಲಿಂಗಸುಗೂರು, ಸಿಂಧನೂರು, ಮಾನ್ವಿ ಸೇರಿ ಎಲ್ಲೆಡೆ ಮಳೆಯಾಗಿದ್ದು ಅಲ್ಲಲ್ಲಿ ಮಳೆಹಾನಿಯೂ ಆಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಕೆಲವೆಡೆ ಹಾನಿ ಸಂಭವಿಸಿದೆ.

    ಲಿಂಗಸುಗೂರಿನಲ್ಲಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸುಮಾರು 100 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಬೇಸಿಗೆ ಮಳೆ ನೇರವಾಗಿ ತೋಟಗರಿಕಾ ಬೆಳೆಯ ಮೇಲೆ ಪರಿಣಾಮ ಬೀರಿದೆ.

    ಇನ್ನೂ ಬಿರುಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗುರಳಿದ್ದು, 15 ವಿದ್ಯುತ್ ಕಂಬಗಳು ಬಿದ್ದಿವೆ. ಗುಡಿಸಲು ಹಾಗೂ ಗೂಡಂಗಡಿಗಳು ಹಾರಿಹೋಗಿವೆ. ಮಾನ್ವಿ, ಸಿಂಧನೂರು, ರಾಯಚೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ರಾಯಚೂರು ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾದ್ರು ಬೇಸಿಗೆಯ ಮಳೆಗೆ ಜನ ಖುಷಿಯಾಗಿದ್ದಾರೆ.

    ಬಳ್ಳಾರಿಯಲ್ಲೂ ಮಳೆ: ಗಣಿನಾಡು ಬಳ್ಳಾರಿಯಲ್ಲೂ ರಾತ್ರಿ ಮಳೆಯಾಗಿದೆ. ಮಳೆಯಾದ ಪರಿಣಾಮ ಬಳ್ಳಾರಿಯ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿಯ ಹೊಸ ಬಸ ನಿಲ್ದಾಣದ ಬಳಿಯ ಅಂಡರ್ ಬ್ರೀಡ್ಜ್ ಬಳಿ ನೀರು ಶೇಖರಣೆಯಾದ ಪರಿಣಾಮ ಇಂದು ಮುಂಜಾನೆ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

    ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗೇನಹಳ್ಳಿ ಎಂಬಲ್ಲಿ ಗೋಣೆಪ್ಪ ಎಂಬವರಿಗೆ ಸೇರಿದ 14 ಕುರಿ ಹಾಗೂ ಒಂದು ನಾಯಿ ಸಿಡಿಲು ಬಡಿದು ಸಾವನ್ನಪ್ಪಿವೆ.

     

  • ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

    ಹೈದ್ರಾಬಾದ್ ಕರ್ನಾಟಕ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆರಾಯ ರಾತ್ರಿ ಸದ್ದು ಮಾಡಿದ್ದಾನೆ. ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಮಳೆಯಾಗಿದೆ. ಗಣಿನಾಡಲ್ಲಿ ಗುಡುಗು-ಸಿಡಿಲಿನೊಂದಿಗೆ 2 ಗಂಟೆ ಮಳೆ ಸುರಿದಿದೆ.

    ಮಳೆಯ ಪರಿಣಾಮ ಅನೇಕ ನಗರ ಸೇರಿದಂತೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾಯಚೂರಿನ ಲಿಂಗಸುಗೂರು, ಸಿಂಧನೂರು, ಮಾನ್ವಿಯಲ್ಲಿ ಮಳೆಯಾಗಿದೆ. ಲಿಂಗಸುಗೂರಿನಲ್ಲಿ ಭಾರೀ ಗಾಳಿಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ.

    ಕೊಪ್ಪಳ, ಯಲಬುರ್ಗಾದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಭಾರಿ ಮಳೆಗೆ ಹರನಾಳ, ಓತಿಹಾಳ ಗ್ರಾಮದಲ್ಲಿ ದ್ರಾಕ್ಷಿ, ಬಾಳೆ, ಲಿಂಬೆ ಬೆಳೆ ನಾಶವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸಿಡಿಲು ಬಡಿದು 40 ವರ್ಷದ ಮಲ್ಲಪ್ಪ ಧರೆಪ್ಪ ಹುಣಶ್ಯಾಳ ಅನ್ನೋ ರೈತ ಮೃತಪಟ್ಟಿದ್ದಾರೆ.

    ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಸಿಡಿಲು ಬಡಿದು 25 ವರ್ಷದ ಖಾಜಾಹುಸೇನಿ ಮಾಶಾಳಕರ್ ಅನ್ನೋ ಯುವಕ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಸಿಂಚನವಾಗಿದೆ.

     

     

  • ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ಬಳ್ಳಾರಿ: ಬಿಸಿಲಿಗೆ ಕರಗಿಹೋಯ್ತು ವಿದೇಶಗಳಿಗೆ ರಫ್ತಾಗುತ್ತಿದ್ದ ಕರಿಬೇವು!

    ವೀರೇಶ್ ದಾನಿ 

    ಬಳ್ಳಾರಿ: ಜಿಲ್ಲೆಯಲ್ಲಿ ಈ ಭಾರಿ ಎಂದೂ ಕಂಡರಿಯದ ಭೀಕರ ಬರಗಾಲ ಪರಿಸ್ಥಿತಿ ಆವರಿಸಿದೆ. ಬರದ ತೀವ್ರತೆಗೆ ರೈತರು ಬೆಳೆದ ಬೆಳೆಗಳಲ್ಲಾ ಒಣಗಿ ಹೋಗಿವೆ. ಅದರಲ್ಲೂ ಅರಬ್ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ ರಪ್ತಾಗುತ್ತಿದ್ದ ಕರಿಬೇವು ಸೊಪ್ಪಿಗೂ ಈ ಬಾರಿ ಬರದ ಬಿಸಿ ತಟ್ಟಿದೆ. ನೀರಿಲ್ಲದ ಪರಿಣಾಮ ಕರಿಬೇವು ಬೆಳೆದ ರೈತರ ಬೆಳೆಗಳಲ್ಲಾ ಸಂಪೂರ್ಣ ಒಣಗಿ ಹೋಗಿವೆ.

    ಎಲ್ಲರ ಮನೆಯ ಅಡುಗೆಯ ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೆ ಬೇಕು. ಅದರಲ್ಲೂ ದೂರದ ಅರಬ್ ದೇಶಗಳಿಗೆ ರಪ್ತಾಗುತ್ತಿದ್ದ ಬಳ್ಳಾರಿಯ ಸುವಾಸನೆ ಭರಿತ ಕರಬೇವು ಸೊಪ್ಪಿನ ಬೆಳೆಗಳೆಲ್ಲಾ ಈ ಬಾರಿ ಜಿಲ್ಲೆಯಲ್ಲಿ ಒಣಗಿ ಹೋಗಿವೆ. ಅಷ್ಟೊಂದು ಪ್ರಮಾಣದಲ್ಲಿ ಕರಿಬೇವು ಸೊಪ್ಪಿಗೂ ಬರದ ಬಿಸಿ ತಟ್ಟಿದೆ. ರೈತರಿಗೆ ಆದಾಯ ತರುತ್ತಿದ್ದ ಕರಿಬೇವು ಬೆಳೆಯೆಲ್ಲಾ ಒಣಗಿ ಹೋದ ಪರಿಣಾಮ ಬಳ್ಳಾರಿ ತಾಲೂಕಿನ ಬೆಳಗಲ್, ಬೆಳಗಲ್ ತಾಂಡಾ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬೆಳೆದ ನೂರಾರು ಎಕರೆಯಲ್ಲಿನ ಕರಿಬೇವು ಬೆಳೆ ಇದೀಗ ನೀರಿಲ್ಲದೆ ಸಂಪೂರ್ಣವಾಗಿ ನಾಶವಾಗಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಸರಿಯಾಗಿ ಮಳೆಯಾಗದ ಪರಿಣಾಮ, ರೈತರ ತೋಟಗಾರಿಕೆ ಬೆಳೆಗಳಿಗೂ ನೀರು ಪೂರೈಕೆ ಆಗುತ್ತಿಲ್ಲ. ಇನ್ನು ರೈತರು ಬೋರ್‍ವೆಲ್ ಗಳನ್ನು 500 ರಿಂದ 700 ಅಡಿ ಕೊರೆದರು ನೀರು ಸಿಗುತ್ತಿಲ್ಲ.

    ಒರಿಸ್ಸಾ ರಾಜ್ಯದಿಂದ ಲಕ್ಷಾಂತರ ರೂಪಾಯಿ ಕೊಟ್ಟು ಬೀಜ ಖರೀದಿಸಿ ಕರಿಬೇವು ಸೊಪ್ಪು ಬೆಳೆದಿದ್ದವರಿಗೆ ನೀರು ಸಿಗದ ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕಡಿಮೆ ನೀರು ಬಳಸಿ ತೋಟಗಾರಿಕೆ ಮಾಡುವ ಮೂಲಕ ಕರಿಬೇವು ಬೆಳೆದಿದ್ದ ರೈತರಿಗೆ ಇದೀಗ ಸರ್ಕಾರ ಬರ ಪರಿಹಾರ ನೀಡುವ ಮೂಲಕ ನಷ್ಟ ಹೊಂದಿರುವ ರೈತರ ಸಹಾಯಕ್ಕೆ ಮುಂದಾಗಬೇಕಿದೆ.

     

  • ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

    -ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ವೈಫಲ್ಯ
    -ಕೆಲಸವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೊರಟ ಜನ

    ವಿಜಯ್ ಜಾಗಟಗಲ್

    ರಾಯಚೂರು: ಹೆಗಲ ಮೇಲೊಂದು ಕೈಯಲ್ಲೊಂದು ಮೂಟೆ ಹಿಡಿದು ಬೆಂಗಳೂರು, ಪುಣೆ, ಮುಂಬೈ ಬಸ್‍ಗಾಗಿ ಜನ ಕಾಯುತ್ತಿದ್ದಾರೆ. ಈಗ ಬಸ್ ಹತ್ತಿದವರು ಕೈಯಲ್ಲೊಂದಿಷ್ಟು ಕಾಸು ಸಂಪಾದಿಸಿಕೊಂಡು ಎರಡೋ, ಮೂರೋ ತಿಂಗಳ ಬಳಿಕವಷ್ಟೇ ತಮ್ಮ ಗ್ರಾಮಗಳಿಗೆ ಮರುಳುತ್ತಾರೆ. ಅಲ್ಲಿಯವರೆಗೆ ಇಡೀ ಗ್ರಾಮವನ್ನ ಕಾಯುವವರು ವಯೋವೃದ್ಧರು ಹಾಗೂ ಬಾಗಿಲಿಗೆ ಹಾಕಿದ ಬೀಗಗಳು ಮಾತ್ರ. ಇವರು ಮರಳಿ ಬರುವವರೆಗೆ ಮನೆಗಳಲ್ಲಿ ಯಾವ ಶುಭಕಾರ್ಯಗಳೂ ಇಲ್ಲ. ಯಾಕಂದ್ರೆ ಇವರ ಬಳಿ ಮೂರು ಹೊತ್ತು ಸರಿಯಾಗಿ ಊಟಮಾಡಲು ಸಹ ಹಣವಿಲ್ಲ. ಇದು ರಾಯಚೂರಿನ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಹಾಗೂ ಸಣ್ಣ ಮತ್ತು ಅತೀಸಣ್ಣ ರೈತರ ಪ್ರತಿ ವರ್ಷದ ಪರಿಸ್ಥಿತಿ.

    ಕಳೆದ ನಾಲ್ಕೈದು ವರ್ಷಗಳಿಂದ ಬೆಂಬಿಡದೆ ಭೂತದಂತೆ ಕಾಡುತ್ತಿರುವ ಬರಗಾಲ ರೈತರನ್ನ ಇನ್ನಷ್ಟು ಬಡತನಕ್ಕೆ ತಳ್ಳುತ್ತಿದ್ದು ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ಜನ ಬೇಸಿಗೆ ಆರಂಭದಲ್ಲೆ ನಗರ ಪ್ರದೇಶಗಳಲ್ಲಿನ ಕೂಲಿ ಕೆಲಸಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದ್ರೆ ಗುಳೆ ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಶುರುವಾದ ಕಾಮ್ ಮಾಂಗೋ ಅಭಿಯಾನ ಸಹ ಗ್ರಾಮೀಣ ಜನರ ಕೈಹಿಡಿದಿಲ್ಲ. ಬರಗಾಲದಲ್ಲಿ ಕೆಲಸವಿಲ್ಲದೆ ಗುಳೆ ಹೊರಡುವ ಜನರಿಗೆ ಕೆಲಸ ನೀಡಲು ಅರ್ಜಿ ಕೇಳಿದ ಅಭಿಯಾನ ಸೋತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ.

    ರಾಯಚೂರು ತಾಲೂಕಿನ ಯಾಪಲದಿನ್ನಿ, ಆತ್ಕೂರು, ಉಡುಮಗಲ್-ಖಾನಪುರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಅಡಿ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ. ಇನ್ನು ಅರ್ಜಿ ಸ್ವೀಕಾರವಾದ ಕಡೆಗಳಲ್ಲಿ ಕಾಮಗಾರಿ ಮಾಡಿದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಬೇಸಿಗೆಯಲ್ಲಿ ಉದ್ಯೋಗ ಪಡೆದವರು ಶೇಕಡಾ 75 ರಷ್ಟು ಕಾಮಗಾರಿ ಪೂರ್ಣಗೊಳಿಸಿದರೂ ಸಂಪೂರ್ಣ ಹಣ ನೀಡಬೇಕು ಅನ್ನೋ ನಿಯಮವನ್ನೇ ಗಾಳಿಗೆ ತೂರಲಾಗಿದೆ. ಹೀಗಾಗಿ ಜನ ಸರ್ಕಾರದ ಯೋಜನೆಯನ್ನ ನಂಬದೇ ಗುಳೆ ಹೊರಟಿದ್ದಾರೆ. ರಾಯಚೂರು ತಾಲೂಕಿನ ಮರ್ಚಡ, ಗಾಜರಾಳ, ನಾನದೊಡ್ಡಿ ಗ್ರಾಮಗಳಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಜನ ನಗರ ಪ್ರದೇಶಗಳ ಬಸ್ ಹತ್ತುತ್ತಿದ್ದಾರೆ.

    ಪ್ರಮುಖವಾಗಿ ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕುಗಳಿಂದ ಹೆಚ್ಚೆಚ್ಚು ಜನ ಬರಕ್ಕೆ ಹೆದರಿ ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಗುಳೆ ಹೋಗುತ್ತಿದ್ದಾರೆ. 2016-17ರ ಸಾಲಿನಲ್ಲಿ ಯೋಜನೆಗೆ 99 ಕೋಟಿ 68 ಲಕ್ಷ ರೂ. ಖರ್ಚು ಮಾಡಲಾಗಿದೆ ಅಂತ ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದ್ರೆ ಕೂಲಿ ಹಣ ಸಿಗದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳಲ್ಲಿ 7431 ಕುಟುಂಬಗಳು 100 ಮಾನವ ದಿನಗಳನ್ನ ಪೂರೈಸಿದ್ದರೆ, 82 ಕುಟುಂಬಗಳು 150 ದಿನಗಳ ಕೂಲಿ ಕೆಲಸವನ್ನ ಪೂರೈಸಿವೆ. ಕೃಷಿ ಹೊಂಡ, ಒಡ್ಡು ನಿರ್ಮಾಣ, ತೋಟಗಾರಿಕೆ ಸಸಿ ನೆಡುವುದು ಸೇರಿ 8633 ಕಾಮಗಾರಿಗಳು ಪೂರ್ಣಗೊಂಡಿದ್ದು, 447 ಕಾಮಗಾರಿಗಳು ಪ್ರಗತಿಯಲ್ಲಿವೆ.

    ಗುಳೆ ಹೋಗುವವರಲ್ಲಿ ಎರಡು ವಿಧ: ವೃತ್ತಿಪರ ಕೂಲಿ ಕೆಲಸಗಾರರು ಹಾಗೂ ವೃತ್ತಿಪರರಲ್ಲದ ಕೆಲಸಗಾರರು ಇದ್ದಾರೆ. ನರೇಗಾ ಅಡಿ ಪ್ರತಿದಿನ 233 ರೂಪಾಯಿ ಕೂಲಿ ನೀಡಲಾಗುತ್ತೆ. ಆದ್ರೆ ವೃತ್ತಿಪರ ಕೂಲಿಕಾರರು ನಗರ ಪ್ರದೇಶಗಳಲ್ಲಿ 500 ರಿಂದ 600 ರೂಪಾಯಿ ದುಡಿಯುತ್ತಾರೆ. ಹೀಗಾಗಿ ವೃತ್ತಿಪರ ಕೂಲಿಕಾರರ ಗುಳೆ ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಇನ್ನು ವೃತ್ತಿಪರರಲ್ಲದ ಕೂಲಿಕಾರರಿಗಾಗಿ ಯೋಜನೆಯಡಿ ಕೆಲಸ ನೀಡುತ್ತಿದ್ದೇವೆ. ಈಗಾಗಲೇ 58 ಲಕ್ಷ ಮಾನವ ದಿನಗಳ ಸೃಜನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

    ಕೇವಲ ಉದ್ಯೋಗ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆ, ಬೆಳೆ ಹಾನಿ, ಸಾಲ ತೀರಿಸಲಾಗದೆ ಜನ ಗುಳೆ ಹೋಗುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರ ಪರಿಹಾರವನ್ನ ಸಮರ್ಪಕವಾಗಿ ವಿತರಿಸದೇ ಪರಸ್ಪರ ಆರೋಪಗಳಲ್ಲಿ ತೊಡಗಿದ್ದು, ಸರ್ಕಾರದ ಮೇಲಿನ ವಿಶ್ವಾಸವನ್ನ ಜನ ಕಳೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಇನ್ನೂ ಭೀಕರ ಬರಗಾಲದ ಮುನ್ಸೂಚನೆಯಿರುವುದರಿಂದ ರೈತರು ಮಾರ್ಚ್ ಆರಂಭದಲ್ಲೇ ಗುಳೆ ಹೋಗುತ್ತಿದ್ದಾರೆ.

     

  • ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    ಗಣಿ ನಾಡಿನಲ್ಲಿ 625 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಶುರುವಾಗಿದೆ ಹಾಹಾಕಾರ !

    -ಮಾಡೋಕೆ ಕೆಲಸವಿಲ್ಲದೆ ಗುಳೆ ಹೊರಟಿದೆ ಕೂಲಿ ಕಾರ್ಮಿಕ ವರ್ಗ
    -ಮೇವಿಲ್ಲದೆ ಕಂಗಾಲಾಗಿವೆ ಜಾನುವಾರುಗಳು

    ವಿರೇಶ್ ದಾನಿ

    ಬಳ್ಳಾರಿ: ಗಣಿ ಜಿಲ್ಲೆ ಈಗ ಅಕ್ಷರಶಃ `ಬರ’ ಪೀಡಿತ ಜಿಲ್ಲೆಯಾಗಿ ಮಾರ್ಪಡಾಗಿದೆ. ಹಿಂದೆಂದೂ ಕಾಣದ ಭೀಕರ ಕ್ಷಾಮ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಎದುರಾಗಿದೆ. ಒಂದೆಡೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಗಳಲ್ಲಿ ನೀರು, ಮೇವು, ಉದ್ಯೋಗಕ್ಕಾಗಿ ಪರದಾಟ ಕಂಡು ಬರುತ್ತಿದ್ದರೆ ಇನ್ನೊಂದೆಡೆ ಬೇಸಿಗೆಯಲ್ಲಿ ಬಿರು ಬಿಸಿಲಿನ ತಾಪದ ಜೊತೆಗೆ ದಾಹವೂ ಹೆಚ್ಚಾಗಿದೆ. ಇನ್ನು ಸತತ 3 ವರ್ಷಗಳ ಬರದಿಂದಾಗಿ ರೈತರ ಬದುಕು ಅಕ್ಷರಶಃ ಅತಂತ್ರವಾಗಿದೆ. ಸಾಕಷ್ಟು ಸಂಖ್ಯೆಯ ಕೃಷಿ ಕಾರ್ಮಿಕರು ಹಾಗೂ ರೈತ ಸಮೂಹ ಈಗ ನಗರ ಪ್ರದೇಶದತ್ತ ಕೆಲಸ ಅರಸಿ ಗುಳೆ ಹೊರಟಿದ್ದಾರೆ.

    ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಹೂವಿನಹಡಗಲಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳು ನೀರಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿವೆ. ಇನ್ನು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕೇವಲ 4 ಟಿಎಂಸಿ ಮಾತ್ರ ಡೆಡ್ ಸ್ಟೋರೇಜ್ ನೀರು ಸಂಗ್ರಹವಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವ ತ್ರೀವಗೊಂಡಿದೆ.

    ಸಂಡೂರು ತಾಲೂಕಿನಲ್ಲಿ 30ಕ್ಕೂ ಅಧಿಕ ಕೆರೆಗಳಿದ್ದು, ಚೋರುನೂರು, ಬೊಮ್ಮಘಟ್ಟ ಸೇರಿ ಬೆರಳೆಣಿಕೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಉಳಿದಂತೆ ಬಹುತೇಕ ಕೆರೆಗಳು ಬತ್ತಿಹೋಗಿವೆ. ಸಿರಗುಪ್ಪ ತಾಲೂಕಿನ 31 ಕೆರೆಗಳಲ್ಲಿ ಸಿರಿಗೇರಿ, ಕರೂರು, ರಾರಾವಿ, ಹಳೇಕೋಟೆ ಗ್ರಾಮದ ಕೆರೆಗಳು ಹೊರತುಪಡಿಸಿ ಇನ್ನುಳಿದವುಗಳಲ್ಲಿ ಕೊಂಚ ನೀರು ಸಂಗ್ರಹವಿದೆ.

    ಶೇ.35 ರಷ್ಟು ಮಳೆ ಅಭಾವ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಾಗೂ ಹಿಂಗಾರು ಮಳೆ ಪ್ರಮಾಣವು ವಾಡಿಕೆಗಿಂತಲೂ ಶೇ.35 ರಷ್ಟು ಕಡಿಮೆ ದಾಖಲಾಗಿದೆ. ಮುಂಗಾರು ಹಂಗಾಮಿನಲ್ಲಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಬೆಳೆ ಹಾನಿಯಾಗಿ ಸುಮಾರು 139.98 ಕೋಟಿ ರೂ. ನಷ್ಟವಾಗಿದೆ. 7947 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆ ಹಾನಿಯಿಂದಾಗಿ 709.91 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಮುಂಗಾರು ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲೆಯ 1.53 ಲಕ್ಷ ರೈತರನ್ನು ಗುರುತಿಸಲಾಗಿದೆ. ಇನ್ನು ಹಿಂಗಾರು ಹಂಗಾಮಿನ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಕೃಷಿಯಲ್ಲಿ 1.41 ಲಕ್ಷ ಹೆಕ್ಟೇರ್ ಗುರಿಯಲ್ಲಿ 29657 ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ 3602 ಹೆಕ್ಟೇರ್ ಪೈಕಿ 932 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರ ಜಲಾಶಯವನ್ನು ಅವಲಂಬಿಸಿರುವ ಜಿಲ್ಲೆಯ ರೈತರು ಭತ್ತ, ಕಬ್ಬು ನಾಟಿ ಮಾಡುವುದೇ ಹೆಚ್ಚು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಬೆಳೆಗೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇನ್ನು 2ನೇ ಬೆಳೆಯ ಮಾತಂತೂ ಇಲ್ಲವಾಗಿದೆ.

    ಖಾರವಾದ ಮಿರ್ಚಿ: 2ನೇ ಬೆಳೆ ಬಿತ್ತನೆಗೆ ನೀರಿನ ಅಭಾವದ ಹಿನ್ನೆಲೆಯಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕಿನ ಬಹುತೇಕ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆದರು. ಉತ್ತಮ ಇಳುವರಿಯೂ ಬಂತು. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದಾಗಿ ರೈತರ ಪಾಲಿಗೆ ಮಿರ್ಚಿಯಂತೂ ಬಲು ಖಾರವಾಗಿಯೇ ಪರಿಣಮಿಸಿದೆ. ಹೀಗಾಗಿ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಅಕ್ಷರಶಃ ಖಾರವಾಗಿ ಬಿಟ್ಟಿದೆ.

    625 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ: ಜಿಲ್ಲೆಯಾದ್ಯಂತ ಈ ವರ್ಷ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, 625 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಪೈಕಿ ಬಳ್ಳಾರಿ ತಾಲೂಕಿನ 59, ಹೂವಿನಹಡಗಲಿಯ 65, ಹ.ಬೊ.ಹಳ್ಳಿಯ 99, ಹೊಸಪೇಟೆಯ 66, ಕೂಡ್ಲಿಗಿಯ 145, ಸಂಡೂರಿನ 93 ಹಾಗೂ ಸಿರುಗುಪ್ಪ ತಾಲೂಕಿನ 98 ಗ್ರಾಮಗಳು ಸೇರಿವೆ. ಖಾಸಗಿ ಮಾಲೀಕರಿಂದ 73 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜಿಲ್ಲಾಡಳಿತ ನೀರು ಪೂರೈಸುತ್ತಿದ್ದು ಪ್ರತಿಯೊಂದಕ್ಕೆ ಮಾಸಿಕ 7-9 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಆದ್ರೂ ಜಿಲ್ಲೆಯಲ್ಲಿ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಸಿಗದೆ ಹಾಹಾಕಾರ ತೀವ್ರಗೊಂಡಿದೆ.

    ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವು ತಳ ಮುಟ್ಟಿರುವುದರಿಂದ ಕಾಲುವೆಗಳಿಗೆ ನಿಗದಿತ ಅವಧಿಗಿಂತ ಮುಂಚಿತವಾಗಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು 400-500 ಅಡಿಯಷ್ಟು ಆಳವಾಗಿ ಬೋರವೆಲ್ ಕೊರೆದರೂ ನೀರು ಸಿಗದಂತಾಗಿದೆ. ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಂತೂ ಸಾವಿರ ಅಡಿಯಷ್ಟು ಆಳವಾಗಿ ಬೊರವೆಲ್ ಕೊರೆದರೂ ನೀರು ಸಿಗದಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.

    10-15 ದಿನಕ್ಕೊಮ್ಮೆ ನೀರು ಬಂದ್ರೆ ಪುಣ್ಯ: ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಬಳ್ಳಾರಿ ಮಹಾನಗರದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರು ಕಡಿಮೆಯಾಗಿರುವುದರಿಂದ ಬಿಸಿಲಿನ ಬಿಸಿಯೊಂದಿಗೆ ನೀರಿನ ದಾಹ ಇದೀಗ ಬಳ್ಳಾರಿ ನಗರದ ಸಾರ್ವಜನಿಕರಿಗೆ ಮುಟ್ಟಿದೆ. ನಗರದ ಎಲ್ಲ 35 ವಾರ್ಡ್‍ಗಳಲ್ಲೂ 10-12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದೂ ಕೆಲ ನಿಮಿಷಗಳಿಗೆ ಮಾತ್ರ ನೀರು ಪೊರೈಕೆಯಾಗುತ್ತಿರುವುದರಿಂದ ಜನರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.

    ಜಲಾಶಯದ ಪಕ್ಕದಲ್ಲೇ ಇರುವ ಹೊಸಪೇಟೆ ನಗರದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. 2-3 ದಿನಕ್ಕೊಮ್ಮೆ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಜಿಲ್ಲೆಯ ಸಿರಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹಡಗಲಿ, ಸಂಡೂರು, ಕುರೇಕುಪ್ಪ, ಕಮಲಾಪುರ, ಹ.ಬೊ.ಹಳ್ಳಿ, ತೆಕ್ಕಲಕೋಟೆ, ಕೊಟ್ಟೂರು, ಕುಡತಿನಿ, ಮರಿಯಮ್ಮನಹಳ್ಳಿ ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿನ ಸ್ಥಿತಿ ಭಿನ್ನವಾಗಿಲ್ಲ.

    ಸಂಡೂರು ತಾಲೂಕಿನ ಬಂಡ್ರಿ, ಸಿ.ಕೆ.ಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆ ಬಾವಿಗಳಿದ್ದರೂ ನೀರಿಲ್ಲ. ನೀರಿದ್ದರೆ ಪೈಪ್ ಲೈನ್ ಜೋಡಣೆಯಾಗಿಲ್ಲ. ಎರಡೂ ಇದ್ದರೂ ವಿದ್ಯುತ್ ಸಂಪರ್ಕವಿಲ್ಲದ ಸ್ಥಿತಿ. ತೋರಣಗಲ್, ವಿಠಲಾಪುರ ಸೇರಿ ತಾಲೂಕಿನ ಬಹುತೇಕ ಗ್ರಾಮಸ್ಥರಿಗೆ ಫ್ಲೋರೈಡ್‍ಯುಕ್ತ ನೀರೇ ಗತಿ. ಕೂಡ್ಲಿಗಿ ತಾಲೂಕಿನ ಕಾನಾಮಡುಗು, ಹೊಸಹಳ್ಳಿ, ಹುಡೇಂ, ಕಡೇಕೊಳ್ಳ, ನಿಂಬಳಗೆರೆ, ರಾಂಪುರ, ದೂಪದಹಳ್ಳಿ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ, ಹಿರೆ ಮಲ್ಲನಕೆರೆ, ಸೋಗಿ, ಹಕ್ಕಂಡಿ, ಹೊಳಗುಂದಿ, ಬಸರಹಳ್ಳಿ ತಾಂಡ, ಕಾಲ್ವಿ ತಾಂಡ, ಎಂ.ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.

    ಕಳೆದ ಜುಲೈ ತಿಂಗಳಿಂದಲೇ ಟ್ಯಾಂಕರ್ ನೀರು: ಸಂಡೂರು ತಾಲೂಕಿನ ಅಂತಾಪುರ, ಕೊಡಾಲು, ಕೊರಚರಹಟ್ಟಿ, ಚಿಕ್ಕಂತಾಪುರಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕಳೆದ ಜುಲೈ ತಿಂಗಳಿಂದಲೇ ಈ ಗ್ರಾಮದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ಖರೀದಿಸಲಾಗಿತ್ತಾದರೂ ಬೋರ್‍ಗಳಲ್ಲೂ ನೀರು ಕಡಿಮೆಯಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

    ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದಿಂದಾಗಿ ಅಂತರ್ಜಲ ಮಟ್ಟವು ನೂರಾರು ಅಡಿ ಆಳಕ್ಕೆ ಕುಸಿದಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ 500 ರಿಂದ 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಭುಜಂಗನಗರದಲ್ಲಿ ಕಳೆದ ಮೇ ತಿಂಗಳಿಂದ ಬಳಕೆ ಮಾಡಿರುವ ಕೆಲವು ಖಾಸಗಿ ಬೋರ್‍ವೆಲ್‍ನವರಿಗೆ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಖಾಸಗಿ ಬೋರ್‍ವೆಲ್‍ನವರು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ಸುಮಾರು 212 ಗ್ರಾಮಗಳ ಜನರು ಫ್ಲೋರೈಡ್‍ಯುಕ್ತ ನೀರನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ.

    ಮೇವಿಗೂ ಬರ: ಅಚ್ಚರಿ ಎಂದರೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಮೇವಿಲ್ಲದೇ ಜಾನುವಾರು ಕಸಾಯಿಖಾನೆ ಸೇರುತ್ತಿವೆ. ಸಮಸ್ಯಾತ್ಮಕ ಪ್ರದೇಶದಲ್ಲಿ ಮೇವಿನ ಬ್ಯಾಂಕ್ ಇಲ್ಲವೇ ಗೋಶಾಲೆ ಸ್ಥಾಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಪಶು ಸಂಗೋಪನಾ ಇಲಾಖೆ ಮಾಹಿತಿಗಳ ಪ್ರಕಾರ ಮೇವಿನ ಸಮಸ್ಯೆ ಎಲ್ಲಿಯೂ ಇಲ್ಲ. ಜಿಲ್ಲೆಯಲ್ಲಿ 4.84 ಲಕ್ಷ ಜಾನುವಾರುಗಳಿದ್ದು, 7.09 ಲಕ್ಷ ಟನ್ ಮೇವು ಸಂಗ್ರಹವಿದೆ. ಲಭ್ಯವಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ 16,956 ಟನ್ ಮೇವಿನ ಅವಶ್ಯಕತೆ ಇದೆ. ಪ್ರಸ್ತುತ 42 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮುಂದಿನ ದಿನಗಳಲ್ಲಿ 131 ಗ್ರಾಮಗಳಲ್ಲಿ ಮೇವಿನ ಕೊರತೆ ಎದುರಾಗಬಹುದಾಗಿದ್ದು, 13,103 ಟನ್ ಮೇವಿನ ಅಗತ್ಯವಿದೆ ಎಂದು ಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ.

    20.92 ಲಕ್ಷ ಮಾನವ ದಿನಗಳ ಸೃಷ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ 2.23 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, 20.92 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಅರಣ್ಯ, ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಜಲಾನಯನ, ಪಶುಸಂಗೋಪನೆ, ಮೀನುಗಾರಿಕೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

    ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ನೆಲ್ಕುದ್ರಿ, ತಂಬ್ರಹಳ್ಳಿ, ಕೋಗಳಿ, ಅಲಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಜನರು ಗುಳೆ ಹೋಗುವುದು ಮಾತ್ರ ನಿಂತಿಲ್ಲ.

    125 ಕೋಟಿ ಬರ ಪರಿಹಾರ ಪ್ರಸ್ತಾವನೆ: ಕೇಂದ್ರ ಬರ ಅಧ್ಯಯನ ತಂಡವೂ ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದೆ. ತಂಡದ ಎದುರಿಗೆ ರೈತರು ತಮ್ಮ ಗೋಳನ್ನೂ ತೋಡಿಕೊಂಡಿದ್ದಾರೆ. ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳಲು 125 ಕೋಟಿ ರೂ. ಅನುದಾನ ಬೇಡಿಕೆಯನ್ನು ಜಿಲ್ಲಾಡಳಿತ ಕೇಂದ್ರ ತಂಡಕ್ಕೆ ಸಲ್ಲಿಸಿದೆ.

    ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಿಂಗಾರು ಬೆಳೆ ಹಾನಿಗೆ 813.88 ಲಕ್ಷ ರೂ., ದೊಡ್ಡ ರೈತರ ಬೆಳೆಗೆ 201.38 ಲಕ್ಷ ರೂ.ಗಳನ್ನು ಇನ್‍ಪುಟ್ ಸಬ್ಸಿಡಿಗಾಗಿ, ಮೇವು ದಾಸ್ತಾನಿಗೆ 382 ಲಕ್ಷ ರೂ., ಗೋಶಾಲೆ ನಿರ್ವಹಣೆಗೆ 800 ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 2150 ಲಕ್ಷ ರೂ., ನಗರ ನೀರು ಸರಬರಾಜುಗೆ 1975 ಲಕ್ಷ ರೂ., ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪುನಶ್ಚೇತನಕ್ಕಾಗಿ 6,200 ಲಕ್ಷ ರೂ. ಹೀಗೆ ಒಟ್ಟು 12,522.31 ಲಕ್ಷ ರೂ. ಅನುದಾನವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಮನವಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಿದೆ.

     

  • ಬೆಂಗ್ಳೂರಲ್ಲಿ ಮಳೆಯ ಅಬ್ಬರ- ಧರೆಗುರುಳಿದ ಮರ, ವಿದ್ಯುತ್ ಕಂಬ, ಅಂಡರ್‍ಪಾಸ್‍ನಲ್ಲಿ ಮರ್ಸಿಡಿಸ್ ಕಾರು ಜಖಂ

    ಬೆಂಗ್ಳೂರಲ್ಲಿ ಮಳೆಯ ಅಬ್ಬರ- ಧರೆಗುರುಳಿದ ಮರ, ವಿದ್ಯುತ್ ಕಂಬ, ಅಂಡರ್‍ಪಾಸ್‍ನಲ್ಲಿ ಮರ್ಸಿಡಿಸ್ ಕಾರು ಜಖಂ

    ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಲ್ಲಿ ಸುರಿದ ಭಾರಿ ಮಳೆಗೆ ಇಂದಿರಾನಗರದ ತಿಪ್ಪಸಂದ್ರದ ಬಳಿ ತೆಂಗಿನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದು ವರೆಗೂ ಪಾಲಿಕೆಯಿಂದ ಯಾವ ಸಿಬ್ಬಂದಿಯೂ ಮರ ತೆರವು ಮಾಡಲು ಬಂದಿಲ್ಲ ಅಂತ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಂಗಿನಮರ ವಿದ್ಯುತ್ ತಂತಿ ಮೇಲೆ ಬಿದ್ದಿರೋದ್ರಿಂದ ವಿದ್ಯುತ್ ತಂತಿ ಸಹ ಹರಿದು ಬಿದ್ದಿದ್ದು, ರಾತ್ರಿಯಿಂದ ಕರೆಂಟ್ ಕೂಡ ಇಲ್ಲ.

    ಮಂಗಳವಾರ ರಾತ್ರಿ ನಗರದಲ್ಲಿ ಒಂದು ಗಂಟೆ ಸುರಿದ ಮಳೆ ಹತ್ತಾರು ಅನಾಹುತಗಳನ್ನ ಸೃಷ್ಟಿಸಿದೆ. ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಬಿದ್ದಿದೆ. ಮನೆಗಳಿಗೆ ನೀರು ನುಗ್ಗಿದೆ. ಕಾರು, ಬಸ್ ನೀರಲ್ಲಿ ಮುಳುಗಿ ಹೋಗಿವೆ.

    ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಅಂಡರ್‍ಪಾಸ್‍ನಲ್ಲಿ ಸಿಕ್ಕಿಕೊಂಡ ಕಾರನ್ನು ಇನ್ನೂ ಹೊರತೆಗೆದಿಲ್ಲ. ಅಂಡರ್‍ಪಾಸ್‍ನಲ್ಲಿ ನೀರು ತುಂಬಿರೋದ್ರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನೀರನ್ನು ಹೊರತೆಗೆದಿಲ್ಲ, ಕಾರು ಹೊರಬಂದಿಲ್ಲ. ಹೀಗಾಗಿ ಪ್ಯಾಲೆಸ್ ಗುಟ್ಟಹಳ್ಳಿ, ಗಾಲ್ಫ್ ರಸ್ತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.

    ಆನಂದ್‍ರಾವ್ ಸರ್ಕಲ್‍ನಲ್ಲಿ ಮತ್ತೆ ಮುಳುಗಿದ ಬಸ್: ಇದು ಪ್ರತಿ ಬಾರಿ ಮಳೆ ಬಂದಾಗ್ಲೂ ಕಿನೋ ಥಿಯೇಟರ್ ಮುಂದೆ ಆಗೋ ಮಾಮೂಲಿ ಪ್ರಾಬ್ಲಂ. ಸುತ್ತಲೂ ಎತ್ತರ ಪ್ರದೇಶದಲ್ಲಿ ಮನೆಗಳು ಹಾಗೂ ರಸ್ತೆಗಳಿವೆ. ಅಲ್ಲಿಂದ ಹರಿದುಬರುವ ನೀರು ಅಂಡರ್‍ಪಾಸ್‍ನಲ್ಲಿ ಬಂದು ನಿಲ್ಲುತ್ತೆ. ಇದ್ರಿಂದ ಇಂಥಾ ಅನಾಹುತಗಳು ಪ್ರತಿ ಬಾರಿನೂ ಆಗ್ತಾನೇ ಇದೆ. ಮಂಗಳವಾರದಂದು ಕೂಡ ಇದೇ ಪರಿಸ್ಥಿತಿ ಉಂಟಾಗಿದ್ದು, ಕೆಲವು ಹುಡುಗರು ಅದೇ ಮೋರಿ ನೀರು, ಚೇಂಬರ್ ನೀರಲ್ಲಿ ಈಜಿಕೊಂಡು ಹೋಗಿ ಬಸ್‍ನಲ್ಲಿದ್ದವರನ್ನ ರಕ್ಷಣೆ ಮಾಡಿದ್ದಾರೆ. ಬಸ್ ಮುಳುಗಡೆ ಆಗಿರೋದು ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಮೇಯರ್ ಪದ್ಮಾವತಿ ಬಂದ್ರು. ಅಗ್ನಿಶಾಮಕ ದಳವೂ ಬಂತು. ನೀರನ್ನ ಹೊರಹಾಕುವ ಕೆಲಸ ಮಾಡಿದ್ರು. ಆದ್ರೆ ಜನ ಮಾತ್ರ ಮೇಯರ್‍ಗೆ ಕ್ಲಾಸ್ ತಗೊಂಡ್ರು. ಇಷ್ಟಾದ್ಮೇಲೆ ಮೇಯರ್ ಪದ್ಮಾವತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ಕೆಲಸ ಆಗ್ತಿದೆ. ಇನ್ನೊಂದು ತಿಂಗಳಲ್ಲಿ ಶಾಸ್ವತ ಪರಿಹಾರ ಕೊಡ್ತೀವಿ ಅಂದ್ರು.

    ಇದು ಆನಂದ್ ರಾವ್ ಸರ್ಕಲ್ ಕಥೆಯಾದ್ರೆ, ಕಾವೇರಿ ಜಂಕ್ಷನ್‍ನ ಅಂಡರ್‍ಪಾಸ್‍ನಲ್ಲಿ ಕಾರು ಮುಳುಗಡೆಯಾಗಿತ್ತು. ಜಯನಗರದಲ್ಲಿ ಭಾರೀ ಮಳೆಗೆ ಜಾಹಿರಾತು ಫಲಕ ರಸ್ತೆಗೆ ಬಂದು ಬಿತ್ತು ಸಂಜಯ್‍ನಗರದಲ್ಲಿ ಬುಡ ಸಮೇತ ಮರ ಬಿದ್ದಿದ್ರಿಂದ ಕಾರು ಜಖಂ ಆಗಿದೆ. ಕಾಕ್ಸ್ ಟೌನ್‍ನಲ್ಲಿ ಪಾದಚಾರಿಯೊಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಚಂದ್ರಲೇಔಟ್‍ನಲ್ಲಿ ಮತ್ತಿಕೆರೆಯ ಅಯ್ಯಪ್ಪ ದೇವಸ್ಥಾನದ ಹತ್ತಿರ ಮರಗಳು ನೆಲಕಚ್ಚಿವೆ. ಹೊಸಕೆರೆಹಳ್ಳಿಯಲ್ಲಿ ವಿದ್ಯುತ್ ಕಂಬ ಉರುಳಿಬಿದ್ದಿದೆ.

    ಹತ್ತಾರು ಮನೆಗಳಿಗೆ ನುಗ್ಗಿದ ನೀರು: ಮಲ್ಲೇಶ್ವರಂ 12ನೇ ಮುಖ್ಯರಸ್ತೆಯಲ್ಲಿ ರಾಘವೇಂದ್ರ ಅನ್ನೋರ ಮನೆಗೆ ನೀರು ನುಗ್ಗಿದೆ. ಹಲಸೂರಿನ ಕೆರೆ ಬಳಿ ನಾಲ್ಕೈದು ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು. ಜೆಪಿನಗರದ ಕೆಎಸ್‍ಆರ್‍ಟಿಸಿ ಲೇಔಟ್‍ನಲ್ಲೂ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ರಿಂದ ಜನ ರಾತ್ರಿಯಿಡೀ ಮನೆ ಕ್ಲೀನ್ ಮಾಡೋದೇ ಕೆಲಸವಾಗಿತ್ತು.

    ಇನ್ನು ಇಂದಿರಾನಗರ, ಪೀಣ್ಯಾ, ಮೈಸೂರು ರಸ್ತೆ, ಯಶವಂತಪುರ, ಯಲಹಂಕ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿದ್ರಿಂದ ವಾಹನ ಸವಾರರು ಪರದಾಡಿದ್ರು. ಬರೀ ಒಂದು ದಿನದ ಮಳೆ, ಅದು ಬೇಸಿಗೆ ಮಳೆಗೆ ಬೆಂಗಳೂರು ಗತಿ ಹೀಗಾಗಿದೆ. ಮಳೆಗಾಲ ಬಂದ್ರೆ ಏನ್ ಗತಿ. ಮೇಯರ್ ಅವರು ಸಮಸ್ಯೆ ಬಂದಾಗ ಸ್ಥಳಕ್ಕೆ ಬಂದ್ರೆ ಸಾಲಲ್ಲ. ಸಮಸ್ಯೆ ಸರಿಮಾಡೋಕೆ ಕ್ರಮ ಕೈಗೊಳ್ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.