Tag: ಮರಣ ಪ್ರಮಾಣಪತ್ರ

  • ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ಮಾಲೀಕರು ಬದುಕಿದ್ದರೂ ಮರಣ ಪತ್ರ ಪಡೆದು ಜಮೀನು ಮಾರಿದ್ರು

    ರಾಮನಗರ: ಜಮೀನಿನ ಮಾಲೀಕರು ಬದುಕಿದ್ದರೂ ಸಾವನ್ನಪ್ಪಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿರುವ ಘಟನೆ ರಾಮನಗರ ತಾಲೂಕಿನ ಭೈರಮಂಗಲದಲ್ಲಿ ನಡೆದಿದೆ.

    ಭೈರಮಂಗಲ ಗ್ರಾಮದ ಸಹೋದರರಾದ ಬಿಳಿಗಿರಿಯಪ್ಪ ಹಾಗೂ ಸ್ವಾಮಿ ವಂಚನೆಗೆ ಒಳಗಾದ ಮಾಲೀಕರು. ಅದೇ ಗ್ರಾಮದ ರಂಗಪ್ಪ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಿ. 2001ರಲ್ಲಿ ಜಮೀನು ಮಾರಾಟವಾಗಿದ್ದರೂ ಮಾಲೀಕರಿಗೆ ತಡವಾಗಿ ಗೊತ್ತಾಗಿದೆ.

    ಬಿಳಿಗಿರಿಯಪ್ಪ ಹಾಗೂ ಸ್ವಾಮಿ ಅವರಿಗೆ ಸೇರಿದ್ದ 22 ಗುಂಟೆ ಜಮೀನನ್ನು ರಂಗಪ್ಪ ಮಾರಾಟ ಮಾಡಲು ಯತ್ನಿಸಿದ್ದ. ಈ ನಿಟ್ಟಿನಲ್ಲಿ ಆರೋಪಿ ರಂಗಪ್ಪ ಜಮೀನಿನ ಮಾಲೀಕರು ಮೃತಪಟ್ಟಿದ್ದಾರೆ ಎಂದು 2001ರಲ್ಲಿ ನಾಡ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದ. ಬಳಿಕ ಜಮೀನನ್ನು ಮಾರಾಟ ಮಾಡಿದ್ದಾನೆ.

    ಸಹೋದರರು ಇತ್ತೀಚೆಗೆ ಜಮೀನಿನ ಬಗ್ಗೆ ದಾಖಲೆಗಳನ್ನು ಪಡೆಯಲು ತೆರಳಿದ್ದಾಗ ಜಮೀನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಮೊಕದ್ದಮೆ ಹೂಡಿದ್ದು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಹಣದಾಸೆಗೆ ಬದುಕಿರುವವರನ್ನೇ ಸತ್ತಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡಿ ಜಮೀನು ಮಾರಾಟಕ್ಕೆ ಸಾಥ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಆಸ್ತಿಗಾಗಿ ತಮ್ಮನ ನಕಲಿ ಮರಣ ಪ್ರಮಾಣಪತ್ರ ತೆಗೆಸಿದ ಅಣ್ಣ!

    ಧಾರವಾಡ: ಕಿರಿಯ ಸಹೋದರನ ನಕಲಿ ಮರಣ ಪ್ರಮಾಣ ಪತ್ರ ತೆಗೆಸಿ ಆಸ್ತಿ ಲಪಟಾಯಿಸಲು ಅಣ್ಣನೊಬ್ಬನು ಹೊಂಚು ಹಾಕಿರೋ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.

    ಧಾರವಾಡ ತಾಲೂಕಿನ ಮಾಳಮಡ್ಡಿಯ ನಿವಾಸಿಯಾದ ನಾನಾಸಾಹೇಬ್ ದೇಶಪಾಂಡೆ ಅವರು 2012 ರಲ್ಲಿ ಉತ್ತರಾಖಂಡ ಪ್ರವಾಸಕ್ಕೆ ಹೋದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ನಾನಾಸಾಹೇಬ ಸಹೋದರ ರಂಗಾರಾವ್ ದೇಶಪಾಂಡೆ 2000ರಲ್ಲಿಯೇ ತಮ್ಮನ ಮರಣ ಪ್ರಮಾಣಪತ್ರ ತೆಗೆಸಿದ್ದಾನೆ.

    ಅಮ್ಮಿನಬಾವಿ ಗ್ರಾಮದ ಬಳಿಯಿರುವ 8 ಎಕರೆ ಜಮೀನು ಲಪಟಾಯಿಸಲು ರಂಗರಾವ್ ಹೊಂಚು ಹಾಕಿದ್ದನು. ಆದರೆ ಇದು ನಾನಾಸಾಹೇಬ ಕುಟುಂಬಸ್ಥರಿಗೆ 2014ರಲ್ಲಿ ಆಸ್ತಿಯನ್ನು ವಿಭಜಿಸುವಾಗ ತಿಳಿದಿದೆ. ಆದ್ರೆ ಇದೂವರೆಗೂ ನಾನಾಸಾಹೇಬ ಪತ್ನಿ ಲಕ್ಷ್ಮೀಬಾಯಿ ಮತ್ತು ಪುತ್ರ ವೆಂಕಟೇಶ್ ಅವರಿಗೆ ಆಸ್ತಿಯನ್ನು ನೀಡಿಲ್ಲ. ಇದೀಗ ರಂಗಾರಾವ್‍ಗೆ ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹೇಗೆ ನಕಲಿ ಪ್ರಮಾಣ ಪತ್ರ ನೀಡಿದರು ಎಂದು ನಾನಾಸಾಹೇಬ್ ಪುತ್ರ ವೆಂಕಟೇಶ್ ಪ್ರಶ್ನಿಸುತ್ತಾರೆ.

    ಈ ಸಂಬಂಧ ನಾನಾಸಾಹೇಬ ಪುತ್ರ ವೆಂಕಟೇಶ್ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.