Tag: ಮಯಾವತಿ

  • ಪ್ರಚಾರಕ್ಕೆ ನಿಷೇಧ – ಯೋಗಿ ಆದಿತ್ಯನಾಥ್, ಮಯಾವತಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

    ಪ್ರಚಾರಕ್ಕೆ ನಿಷೇಧ – ಯೋಗಿ ಆದಿತ್ಯನಾಥ್, ಮಯಾವತಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

    ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಎಸ್‍ಪಿ ನಾಯಕಿ ಮಯಾವತಿ ಅವರಿಗೆ ಚುನಾವಣಾ ಆಯೋಗ ಚಾಟಿ ಬೀಸಿದೆ.

    ಆಯೋಗ ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದು, ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆ ಮತ್ತು ಮಯಾವತಿ ಅವರಿಗೆ 48 ಗಂಟೆಗಳ ಕಾಲ ಪ್ರಚಾರಕ್ಕೆ ನಿಷೇಧ ಹೇರಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಈ ನಿಷೇಧ ಜಾರಿಗೆ ಬರಲಿದೆ.

    ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ಇಬ್ಬರು ಕೂಡ ಆಕ್ಷೇಪರ್ಹ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಕುರಿತಂತೆ ಕ್ರಮಕೈಗೊಳ್ಳದ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ ಇಂತಹ ಪ್ರಕರಣಗಳಿಗೆ ನಾವು ನೋಟಿಸ್ ನೀಡಿ ಕ್ರಮಕ್ಕೆ ಮುಂದಾಬಹುದು ಅಷ್ಟೇ. ಆದರೆ ಅಭ್ಯರ್ಥಿಯನ್ನ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲು ಅಧಿಕಾರ ಇಲ್ಲ ಎಂದು ತಿಳಿಸಿತ್ತು. ಆದರೆ ಆಯೋಗ ಉತ್ತರಕ್ಕೆ ನ್ಯಾಯಾಲಯ ಅಸಮ್ಮತಿ ಸೂಚಿಸಿ ಕ್ರಮಕೈಗೊಳ್ಳಲು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಸದ್ಯ ಆಯೋಗ ಕಟ್ಟು ನಿಟ್ಟಿನ ಕ್ರಮಕೈಗೊಂಡಿದೆ.

    ಆದಿತ್ಯನಾಥ್ ಹೇಳಿದ್ದೇನು?
    ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಭಾರತೀಯ ಸೈನ್ಯ `ಮೋದಿ ಸೈನ್ಯ’, ಮುಸ್ಲಿಂ ಲೀಗ್ `ವೈರಸ್’ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಅಲಿ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ನಾವು ಭಜರಂಗಬಲಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಅವರು ಅಲಿಯನ್ನು ಹೊಂದಿದ್ದರೆ, ನಾವು ಭಜರಂಗಬಲಿಯನ್ನು ಹೊಂದಿದ್ದೇವೆ ಎಂದಿದ್ದರು.

    ಮಯಾವತಿ ಹೇಳಿದ್ದೇನು?
    ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೂ ಕೆಲ ದಿನಗಳ ಮುನ್ನ ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು ಮುಸ್ಲಿಂ ಸಮುದಾಯದ ಬಳಿ ಮತಯಾಚನೆ ಮಾಡಿದ್ದರು. ಈ ವೇಳೆ ಕಾಂಗ್ರೆಸ್ಸಿಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.

    ಮಯಾವತಿ ಅವರ ಈ ಹೇಳಿಕೆಗೆ ತಿರುಗೇಟು ನೀಡಲು ಸಿಎಂ ಯೋಗಿ ಆದಿತ್ಯನಾಥ್ ಅವರು ಅಲಿ, ಭಜರಂಗ ಬಲಿ ಹೇಳಿಕೆಯನ್ನು ನೀಡಿದ್ದರು.

  • ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಮೋದಿ.. ಮೋದಿ.. ಯೋಗಿ.. ಯೋಗಿ.. ಇದು ಬಿಜೆಪಿ ಕಾರ್ಯಕರ್ತರ ಅಬ್ಬರಿಸಿ ಬೊಬ್ಬರಿದು ಘೋಷಣೆ ಕೂಗುತ್ತಿದ್ದ ಪರಿ. ಆದರೆ ಇವತ್ತು ಈ ಘೋಷಣೆ ಕೂಗು ತಗ್ಗಿ ಹೋಗಿತ್ತು. ಆನೆಯ ಸಹಾಯದಿಂದ ಸೈಕಲ್ ಸವಾರಿ ಮಾಡಿದವರಿಗೆ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ.

    ಪ್ರಧಾನಿ ಮೋದಿಯ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಬೇಕು ಎನ್ನುವ ಕೂಗಿಗೆ ಪುಷ್ಠಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಗಟ್ಟಿ ಕೇತ್ರಗಳಲ್ಲೇ ಬಿಜೆಪಿ ಮಕಾಡೆ ಮಲಗಿದೆ. ಉತ್ತರಪ್ರದೇಶದ ಗೋರಖ್‍ಪುರ್, ಫೂಲ್‍ಪುರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೆಲಕೆಚ್ಚಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಯೋಗಿ ಆರ್ಭಟ ನಿಂತಿದೆ. ಈ ಉಪಚುನಾವಣೆಗಳಲ್ಲಿನ ಸೋಲು ಮೋದಿ, ಯೋಗಿಯ ಜಬರ್ದಸ್ತ್ ಹವಾವನ್ನೇ ಪ್ರಶ್ನಿಸುವಂತಾಗಿದೆ.

    ಅಂದಿದ್ದ ಹವಾ, ಈಗ ಎಲ್ಲೋಯ್ತು ಶಿವಾ ಅನ್ನೋ ಪ್ರಶ್ನೆಗಳ ಸುರಿಮಳೆ ಜೋರಾಗಿವೆ. ಹಾಗಾದ್ರೆ ಈ ಉಪಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿನಾ? ಮೋದಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗುಡ್ಡೆ ಹಾಕುತ್ತಾ ಎನ್ನುವ ಲೆಕ್ಕಚಾರಗಳು ಭರ್ಜರಿಯಾಗಿಯೇ ನಡೆದಿವೆ.

    ಈ ನಡುವೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‍ನ ಶಕ್ತಿಯೇನೂ ವೃದ್ಧಿಯಾಗಿಲ್ಲ. ಆದರೂ ಮೈತ್ರಿ ರಾಜಕಾರಣ ಗಟ್ಟಿಗೊಳಿಸಲು ಕೈಗೆ ವೇದಿಕೆ ಸಿಕ್ಕಂತಾಗಿದೆ. ಎಸ್‍ಪಿ, ಬಿಎಸ್‍ಪಿ ಕಾಂಬಿನೇಶನ್ ಫೈಟ್‍ನಿಂದಾಗಿಯೇ ಬಿಜೆಪಿ ಸೋಲಿಗೆ ಕಾರಣವಾಗಿರೋದು ಸ್ಪಷ್ಟವಾಗಿದ್ದು, ಇದೇ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದುವರಿದರೆ ಬಿಜೆಪಿಗೆ ಕಷ್ಟ ಎನ್ನುವ ಚರ್ಚೆಗಳು  ನಡೆಯಲು ಆರಂಭಿಸಿದೆ. ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಮುನ್ನುಡಿ ಬರೆದಿದ್ದು, ನಿನ್ನೆಯಷ್ಟೇ ಸೋನಿಯಾಗಾಂಧಿ 20 ಮಿತ್ರ ಪಕ್ಷಗಳ ಜತೆ ಭೋಜನ ಕೂಟ ನಡೆಸಿ ಮೈತ್ರಿ ಕಸರತ್ತು ಆರಂಭಿಸಿದ್ದಾರೆ. ಹಾಗಾಗಿಯೇ ಮೋದಿ ದುಷ್ಮನ್‍ಗಳೆಲ್ಲಾ ಒಂದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಾದಿ ಕಠಿಣ ಎನ್ನುವ ಲೆಕ್ಕಾಚಾರಗಳು ಜೋರಾಗಿದೆ.

    ಕರ್ನಾಟಕ ಚುನಾವಣೆಯಲ್ಲೂ ಮೋದಿ, ಶಾ ಜೋಡಿ ಎಚ್ಚರಿಕೆಯ ಹೆಜ್ಜೆಯ ಇಡಬೇಕಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್ ಪಕ್ಷವನ್ನು ದೂರ ಇರುವಂತೆಯೇ ನೋಡಿಕೊಳ್ಳುವುದನ್ನು ಕಲಿಯಬೇಕಿದೆ. ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ ಆರಂಭವಾಗಿದೆ.

    2014ರಿಂದ ಇಲ್ಲಿ ತನಕ ಕೆಲ ಸಣ್ಣ ಸಣ್ಣ ಸೋಲುಗಳನ್ನು ಹೊರತುಪಡಿಸಿದರೆ ಮೋದಿಗೆ ವಿಜಯದ ಮೇಲೆ ವಿಜಯ ದಕ್ಕಿದ್ದು ದೊಡ್ಡ ಸಾಧನೆಯೇ ಸರಿ. ಆದರೆ ಇದೇ ಹವಾದ ಉತ್ತರ ಪ್ರದೇಶದ ಉಪಚುನಾವಣೆಗಳ ಸೋಲಿನಿಂದ ಕಡಿಮೆಯಾಗಲು ಶುರುವಾಯ್ತಾ? ಕರ್ನಾಟಕ ಚುನಾವಣೆ ಮೋದಿ, ಶಾ ಪಾಲಿನ ಅತಿದೊಡ್ಡ ಅಗ್ನಿ ಪರೀಕ್ಷೆಯಲ್ಲವಾ? ಮೈತ್ರಿ ರಾಜಕಾರಣ ಮೋದಿಯ ಮಾಂತ್ರಿಕ ರಾಜಕಾರಣಕ್ಕೆ ಪೆಟ್ಟು ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.