Tag: ಮನ್ಸೂರು ಖಾನ್

  • ದುಬೈಗೆ ಓಡೋಗಿದ್ದ ಮನ್ಸೂರ್ ವಾಪಸ್- ದೆಹಲಿಗೆ ಬರುತ್ತಿದ್ದಂತೆ ಲಾಕ್ ಮಾಡಿದ ಖಾಕಿಪಡೆ

    ದುಬೈಗೆ ಓಡೋಗಿದ್ದ ಮನ್ಸೂರ್ ವಾಪಸ್- ದೆಹಲಿಗೆ ಬರುತ್ತಿದ್ದಂತೆ ಲಾಕ್ ಮಾಡಿದ ಖಾಕಿಪಡೆ

    ಬೆಂಗಳೂರು: ಐಎಂಎ ಸಾವಿರಾರು ಕೋಟಿ ರೂಪಾಯಿ ವಂಚನೆ ಕೇಸ್ ಸಂಬಂಧ ದುಬೈಗೆ ಓಡಿ ಹೋಗಿದ್ದ ವಂಚಕ ಮನ್ಸೂರ್ ಖಾನ್‍ನನ್ನು ಬಂಧಿಸಲಾಗಿದೆ.

    ಮಧ್ಯರಾತ್ರಿ 1.30ರ ಸುಮಾರಿಗೆ ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಎಸ್‍ಐಟಿ(ವಿಶೇಷ ತನಿಖಾ ತಂಡ) ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ಇಂದು ಆತನನ್ನು ಎಸ್‍ಐಟಿ ಪೊಲೀಸರು ಬೆಂಗಳೂರಿಗೆ ಕರೆತರಲಿದ್ದಾರೆ.

    ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಮರಳುತ್ತಿದ್ದೇನೆ ತಮಗೆ ಜೀವ ಭಯ ಇದ್ದು, ಪೊಲೀಸರು ರಕ್ಷಣೆ ಕೊಡಬೇಕು ಎಂದು ಕೋರಿ ಸೋಮವಾರ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದನು. ಆದರೆ 24 ಗಂಟೆಗಳಲ್ಲಿ ಮನ್ಸೂರ್ ವಾಪಸ್ ಬರಲಿಲ್ಲ. ರಾತ್ರಿ ದೆಹಲಿಗೆ ಬಂದು ಎಸ್‍ಐಟಿ ಖೆಡ್ಡಾಗೆ ಬಿದ್ದಿದ್ದಾನೆ.

    ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೂನ್ 8 ರಂದು ರಾತ್ರೋರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದನು. ವಿಷಯ ತಿಳಿದ ಹೂಡಿಕೆದಾರರು ಎಸ್‍ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಮನ್ಸೂರ್ ಖಾನ್ ಬಂಧನ ಬೆನ್ನಲ್ಲೇ ಹಲವರಿಗೆ ನಡುಕ ಶುರುವಾಗಿದೆ. ಈ ನಡುವೆ ಬನ್ನೇರುಘಟ್ಟ ರಸ್ತೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದ ಮೌಲ್ವಿ ಉಮರ್ ಬಶೀರ್ ಎಂಬವರನ್ನು ಎಸ್‍ಐಟಿ ಬಂಧಿಸಿದೆ.

    ಐಎಂಎನಲ್ಲಿ ಹೂಡಿಕೆ ಮಾಡುವಂತೆ ಮೌಲ್ವಿ ಬಶೀರ್ ಮಸೀದಿಗಳಲ್ಲಿ ಪ್ರಚಾರ ಮಾಡಿದ್ದನು. ಇದಕ್ಕೆ ಪ್ರತಿಯಾಗಿ ಐಎಂಎ ಮಾಲೀಕನಿಂದ ಬಶೀರ್, 60 ಲಕ್ಷ ಹಣ ಮತ್ತು 15 ಲಕ್ಷ ಮೌಲ್ಯದ ವಾಹನವೊಂದನ್ನು ಪಡೆದಿದ್ದ ಎನ್ನಲಾಗಿದೆ.

    ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿತ್ತು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ವಿರುದ್ಧ 40 ಸಾವಿರ ದೂರು ದಾಖಲಾಗಿತ್ತು. ಹೀಗಾಗಿ ಮನ್ಸೂರ್‍ಗಾಗಿ ಎಸ್‍ಐಟಿ ಮತ್ತು ಇಡಿ ತಂಡ ಕಾಯುತ್ತಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

  • ಮನ್ಸೂರ್ ಖಾನ್‍ಗೆ ಸೂಕ್ತ ರಕ್ಷಣೆ ಖಂಡಿತ ಕೊಡ್ತೀವಿ – ಜಮೀರ್ ಅಹ್ಮದ್

    ಮನ್ಸೂರ್ ಖಾನ್‍ಗೆ ಸೂಕ್ತ ರಕ್ಷಣೆ ಖಂಡಿತ ಕೊಡ್ತೀವಿ – ಜಮೀರ್ ಅಹ್ಮದ್

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಜೀವ ಭಯದ ಬಗ್ಗೆ ಚಿಂತೆ ಮಾಡೋದು ಬೇಡ. ಅವರಿಗೆ ರಕ್ಷಣೆ ಕೊಡೋಕೆ ಪೊಲೀಸರು ಇದ್ದಾರೆ. ಕಾನೂನು ಕೂಡ ಇದೆ. ಸೂಕ್ತ ರಕ್ಷಣೆ ಖಂಡಿತವಾಗಿಯೂ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಭರವಸೆ ನೀಡಿದ್ದಾರೆ.

    ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್ ಖಾನ್ ವಿಡಿಯೋದಲ್ಲಿ ತನ್ನ ಹೆಸರು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ನಾನು ಅಂದೇ ಮಾಧ್ಯಮಗಳಲ್ಲೆ ಮನ್ಸೂರ್ ಅವರಿಗೆ ಹೇಳಿದ್ದೆ. ದಯಮಾಡಿ ನೀವು ಬನ್ನಿ. ಯಾವ ರಾಜಕಾರಣಿಗಳಿಗೆ ದುಡ್ಡು ಕೊಟ್ಟಿದ್ದೀರ ಪಟ್ಟಿ ಮಾಡಿ ಹಣ ಪಡೆದು ಕಳೆದುಕೊಂಡವರಿಗೆ ವಾಪಸ್ ಕೊಡೋಣ ಅಂದಿದ್ದೆ. ನನ್ನ ಮಾತಿಗೆ ಟಿಕೆಯೂ ವ್ಯಕ್ತವಾಗಿತ್ತು. ಬೆಂಬಲವು ವ್ಯಕ್ತವಾಗಿತ್ತು ಎಂದು ಅವರು ಹೇಳಿದರು.

    ನಾನು ಮತ್ತೊಮ್ಮೆ ಮನ್ಸೂರ್ ಖಾನ್ ಬಳಿ ಮನವಿ ಮಾಡುತ್ತೇನೆ. ಮನ್ಸೂರ್ ಖಾನ್, ನೀವು ಬನ್ನಿ ಬಡವರ ದುಡ್ಡು ವಾಪಸ್ ಕೊಡಿ ನಿಮ್ಮ ಜೊತೆ ನಾನು ಇದ್ದೇನೆ. ಸರ್ಕಾರ ಇರುವುದು ಬಡವರಿಗಾಗಿ ಶ್ರೀಮಂತರಿಗಾಗಿ ಅಲ್ಲ. ಬಡವರ ಪರವಾಗಿ ಒಬ್ಬ ಮಂತ್ರಿಯಾಗಿ ಮನ್ಸೂರ್ ಖಾನ್ ಅವರನ್ನ ಬನ್ನಿ ಎಂದು ಕರೆಯುವುದಾಗಿ ತಿಳಿಸಿದರು.

    ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದೆ. ಮನ್ಸೂರ್ ಖಾನ್ ಬರಲಿ ಸತ್ಯ ಗೊತ್ತಾಗಲಿ. ಯಾವ ಯಾವ ರಾಜಕಾರಣಿಗೆ ಹಣ ಕೊಟ್ಟಿದಾರೆಂಬುದರ ಬಗ್ಗೆ ಪಟ್ಟಿ ಕೊಡಲಿ. ಸುಮ್ಮನೆ ಯಾರು ಕೂಡ ಆರೋಪ ಮಾಡಲು ಸಾಧ್ಯವಿಲ್ಲ. ಯಾರು ಯಾರಿಗೆ ಹಣ ಕೊಟ್ಟಿದ್ದಾರೆ. ಯಾವ ರಾಜಕಾರಣಿಗೆ ಎಷ್ಟು ಕೊಟ್ಟಿದ್ದಾರೆ ಹೇಳಲಿ. 2 ಸಾವಿರ ಕೋಟಿ ಹಣ ವಂಚನೆ ಆಗಿದೆ ಎನ್ನುವುದು ನನಗೆ ಸಿಕ್ಕಿದ ಮಾಹಿತಿ. ಆ ಹಣ ವಸೂಲಾಗಬೇಕು ಎಂದು ಅವರು ಒತ್ತಾಯಿಸಿದರು.

    ದೇಶಪಾಂಡೆಯವರು, ರೋಶನ್ ಬೇಗ್ ಹೆಸರು ಹೇಳಿದ್ದಾರೆ. ಅದರ ಬಗ್ಗೆ ರೋಶನ್ ಬೇಗ್ ಮಾತಾಡಬೇಕು ಅಥವಾ ದೇಶಪಾಂಡೆಯವರು ಮಾತಾಡಬೇಕು ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಅವರು ತಿಳಿಸಿದರು.