Tag: ಮನ್ವೇಂದ್ರ ಸಿಂಗ್

  • ಭೀಕರ ರಸ್ತೆ ಅಪಘಾತ- ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು

    ಭೀಕರ ರಸ್ತೆ ಅಪಘಾತ- ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸೊಸೆ ಸಾವು

    – ಜಸ್ವಂತ್‌ ಪುತ್ರ, ಮೊಮ್ಮಗನಿಗೆ ಗಾಯ

    ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ (Former Foreign Minister Jaswant Singh) ಅವರ ಸೊಸೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ರಾಜಸ್ಥಾನದ ಅಲ್ವಾರ್‌ನ (Alwar Rajasthan) ನೌಗಾಂವ್ ಬಳಿಯ ಖುಷ್ಪುರಿ ಗ್ರಾಮದ ಬಳಿ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಸಂಜೆ ಈ ರಸ್ತೆ ಅಪಘಾತ ಸಂಭವಿಸಿದೆ. ಮನ್ವೇಂದ್ರ ಅವರು ತಮ್ಮ ಕುಟುಂಬದೊಂದಿಗೆ ದೆಹಲಿಯಿಂದ ಜೈಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮೋರಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಘಟನೆಯಲ್ಲಿ ಪತ್ನಿ ಚಿತ್ರಾ ಸಿಂಗ್ (Chitra Singh)  ಸ್ಥಳದಲ್ಲೇ ಸಾವನ್ನಪ್ಪಿದರೆ, ಕೈ ನಾಯಕ ಮನ್ವೇಂದ್ರ ಸಿಂಗ್ (Congress leader Manvendra Singh) ಹಾಗೂ ಅವರ ಮಗ ಹಮೀರ್‌ ಸಿಂಗ್ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಅಲ್ವಾರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಾಲೇಜಿಗೆ ಹೋಗುವಂತೆ ಬೈದಿದ್ದಕ್ಕೆ ಬಾವಿಗೆ ಜಿಗಿದ ತಂಗಿ- ರಕ್ಷಿಸಲು ಹೋದ ಅಣ್ಣನೂ ಸಾವು

    ತಂದೆ-ಮಗ ಇಬ್ಬರಿಗೂ ಪಕ್ಕೆಲುಬುಗಳಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳುಗಳ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅಲ್ವಾರ್‌ನ ಸೋಲಂಕಿ ಆಸ್ಪತ್ರೆಯ ವೈದ್ಯ ವೈದ್ಯ ದೇವವ್ರತ್ ಶರ್ಮಾ ಮಾತನಾಡಿ, ಮಾಜಿ ಸಂಸದ ಮನ್ವೇಂದ್ರ ಸಿಂಗ್ ಅವರ ಪಕ್ಕೆಲುಬಿಗೆ ಗಾಯವಾಗಿದೆ. ಅದರಲ್ಲಿ ಮೂಳೆ ಮುರಿತದಿಂದಾಗಿ ಅವರ ಶ್ವಾಸಕೋಶಕ್ಕೂ ಹಾನಿಯಾಗಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

  • ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಮೋದಿ, ಶಾ ಸೇರಿಕೊಂಡು ಬಿಜೆಪಿ ಸಂಪ್ರದಾಯ, ಮೌಲ್ಯವನ್ನು ಬದಲಿಸಿದ್ದಾರೆ: ಜಸ್ವಂತ್ ಪುತ್ರ ಕಿಡಿ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿಕೊಂಡು ಬಿಜೆಪಿ ಪಕ್ಷದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಬದಲಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಕಿಡಿಕಾರಿದ್ದಾರೆ.

    ಕಳೆದ ವರ್ಷ ಮನ್ವೇಂದ್ರ ಸಿಂಗ್ ಅವರು ಕಾಂಗ್ರೆಸ್ ಸೇರಿದ್ದು, ಸದ್ಯ ರಾಜಸ್ಥಾನದ ಬರ್ಮರ್ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಪುಲ್ವಾಮಾ ಉಗ್ರರ ದಾಳಿ, ಬಾಲಾಕೋಟ್‍ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಇಟ್ಟುಕೊಂಡು ಮತ ಕೇಳುತ್ತಿರುವುದು ಬಿಜೆಪಿಯ ತತ್ವಗಳಿಗೆ ವಿರುದ್ಧವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಬದಲಿಸಿದ್ದಾರೆ. ಈಗ ಸಂಸ್ಕೃತಿ, ನಂಬಿಕೆ, ಯೋಚನೆ, ಆಚರಣೆ, ಪ್ರಮುಖವಾಗಿ ಮಾನವ ಸಂಬಂಧಗಳು ಹೀಗೆ ಎಲ್ಲ ವಿಚಾರಗಳಲ್ಲೂ ಬಿಜೆಪಿ ಬದಲಾಗಿದೆ ಎಂದು ಆರೋಪಿಸಿದರು.

    ಜಸ್ವಂತ್ ಸಿಂಗ್ ಸೇರಿದಂತೆ 75 ವರ್ಷ ಮೀರಿರುವ ಕೆಲವು ಹಿರಿಯ ನಾಯಕರಿಗೆ ಬಿಜೆಪಿ ಲೋಕಸಮರಕ್ಕೆ ಟಿಕೆಟ್ ನೀಡಲು ನಿರಾಕರಿಸಿದೆ. ಬಿಜೆಪಿಯ ಮೂಲ ತತ್ವವನ್ನೇ ಈಗಿರುವ ನಾಯಕರು ಬದಲಿಸಿದ್ದಾರೆ. ದ್ವೇಷವನ್ನು ಬಿತ್ತುತ್ತಿರುವವರ ವಿರುದ್ಧ ನಾನು ನಿಲ್ಲುತ್ತೇನೆ, ಹೋರಾಟ ಮಾಡುತ್ತೇನೆ ಎಂದು ಮನ್ವೇಂದ್ರ ಸಿಂಗ್ ಹೇಳಿದರು.

    ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲುವು ಸೋಲು ನಿರ್ಧಾರವಾಗುತ್ತದೆ ಎನ್ನುವುದನ್ನು ನಾನು ನಂಬಲ್ಲ. ರಾಜಕೀಯದಲ್ಲಿ ಪದೇ ಪದೇ ಅಲೆ ಏಳಲ್ಲ. ಹಾಗೆಯೇ ಯಾವಾಗಲೂ ಒಂದೇ ಸೂತ್ರ ಯಶಸ್ಸು ತಂದು ಕೊಡಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.