ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳು ಥಿಯೇಟರ್ ಗೆ ಬರೋದೆ ಗೊತ್ತಾಗಲ್ಲ. ಯಾಕಂದ್ರೆ ವಾರಕ್ಕೆ ಏನಿಲ್ಲ ಅಂದ್ರು 8 ರಿಂದ 9 ಸಿನಿಮಾಗಳು ತೆರೆಗೆ ಬರುತ್ತವೆ. ಅದರಲ್ಲಿ ಪ್ರೇಕ್ಷಕ ಆಯ್ದುಕೊಳ್ಳೋದು ಕೆಲವೊಂದು. ಹೀಗಾಗಿ ಇನ್ನುಳಿದ ಸಿನಿಮಾಗಳು ಬಂದು ಹೋಗುವುದು ಗೊತ್ತೇ ಆಗಲ್ಲ. ಅದೇ ಸಾಲಿಗೆ ‘ಮನರೂಪ’ ಕೂಡ ಸೇರಿತ್ತು. ರಿಲೀಸ್ ಆದಾಗ ಹೇಳಿಕೊಳ್ಳುವಷ್ಟು ರೆಸ್ಪಾನ್ಸ್ ಪಡೆಯದೆ ಹೋದ್ರು, ಈಗ ಜನರಿಂದ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ.
ಜೀವನವನ್ನೇ ಆಟವಾಗಿಸಿಕೊಳ್ಳುವ ದುರಂತ ಕಥೆ ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ಈ ಸಿನಿಮಾದ ಕಥೆ ಎಲ್ಲರ ಜೀವನಕ್ಕೂ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಮಕ್ಕಳಲ್ಲಿರುವ ಕೆಲವು ಕ್ರೇಜ್ ಗಳು ಅವರ ಜೀವನವನ್ನೇ ಹಳ್ಳ ಹಿಡಿಸುತ್ತವೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಮಹತ್ತರವಾದ ಸಂದೇಶವೊಂದು ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ತಂದೆ ತಾಯಂದಿರು, ಪೋಷಕರು ಮಕ್ಕಳ ಜೊತೆ ಕುಳಿತು ಈ ಸಿನಿಮಾ ನೋಡುವಂತಿದೆ. ಇಡೀ ಸಿನಿಮಾವನ್ನ ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಅಮೆಜಾನ್ ಪ್ರೈಂ ನಲ್ಲಿ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸಿನಿಮಾ ಥಿಯೇಟರ್ ನಲ್ಲಿ ಉಳಿದದ್ದು ಕಡಿಮೆ. ಆದ್ರೆ ಅಮೆಜಾನ್ ಪ್ರೈಮ್ ನಲ್ಲಿ ನೋಡಿದವರು, ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಜೊತೆಗೆ ಈ ಸಿನಿಮಾ ಮಾಡಿದ್ದು ಹೊಸ ತಂಡ. ಆದ್ರೆ ಸಿನಿಮಾ ನೋಡಿದವರಿಗೆ ಹಾಗೇ ಅನ್ನಿಸೋಕೆ ಸಾಧ್ಯವೇ ಆಗುವಂತ ದೃಶ್ಯಗಳು ಕಾಣಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಕಥೆಯ ಜಾಡನ್ನು ಹೆಣೆದಿದ್ದಾರೆ.
ಒಬ್ಬ ನಿರ್ದೇಶಕನ ಸಿನಿಮಾ ಗೆಲ್ಲೋದು ಎಲ್ಲಿ ಹೇಳಿ. ಆ ಸಿನಿಮಾ ಬಗ್ಗೆ ಪ್ರೇಕ್ಷಕ ಒಳ್ಳೆ ಮಾತುಗಳನ್ನಾಡಿದಾಗ. ಈ ಸಿನಿಮಾಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಗಳನ್ನು ನೋಡಿ ನಿರ್ದೇಶಕ ಕಂ ನಿರ್ಮಾಪಕ ಕಿರಣ್ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಬಂಡವಾಳ ಹಾಕಿ ನಿರ್ದೇಶಿಸಿದ ಸಿನಿಮಾವನ್ನು ಥಿಯೇಟರ್ ನಲ್ಲಿ ಜನಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದ್ರೆ ಕಥೆಯನ್ನು ಜನರು ಇಷ್ಟ ಪಟ್ಟಿದ್ದಾರೆ ಅನ್ನೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಂದ ರೆಸ್ಪಾನ್ಸ್ ಸಾಕ್ಷಿ. ಮನರೂಪದ ಎರಡನೇ ಭಾಗದಲ್ಲಿ ಬರುವ ದೃಶ್ಯಗಳು ಅನೇಕ ವರ್ಗದ ಯುವಕರು, ಕುಟುಂಬಗಳ ಮನಸ್ಸನ್ನು ತಟ್ಟಿದೆ. ಜನರ ಪ್ರೀತಿಗೆ ನಾನು ಆಭಾರಿ ಎಂದಿದ್ದಾರೆ.
‘ಮನರೂಪ’ ಸಿನಿಮಾಗೆ ಪ್ರಶಸ್ತಿಯ ಗರಿಯೂ ಸಿಕ್ಕಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ‘ಉತ್ತಮ ಪ್ರಯೋಗಾತ್ಮಕ’ ಸಿನಿಮಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗಾಗಲೇ ಮುಂಬೈನಲ್ಲಿ ನಡೆದ ಕೆಫೆ ಇರಾನಿ ಚಲನಚಿತ್ರೋತ್ಸವದಲ್ಲಿ ಬಣ್ಣಿಸಲಾಗಿದೆ. ಹಾಗೇ ಅಮೆರಿಕಾದ ಮಿಯಾಮಿ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವ ಹಾಗೂ ಟರ್ಕಿಯ ಇಸ್ತಾನ್ ಬುಲ್ ಫಿಲ್ಮ್ ಅವಾರ್ಡ್ಸ್ ಚಿತ್ರೋತ್ಸವಕ್ಕೂ ‘ಮನರೂಪ’ ಆಯ್ಕೆಯಾಗಿದೆ ಎಂಬುದೇ ಸಂತಸದ ವಿಚಾರ.
ಇನ್ನು ಸಿನಿಮಾದಲ್ಲಿ ಹೊಸಬರ ದಂಡೆ ಇದೆ. ದಿಲೀಪ್ ಕುಮಾರ್, ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್ ಸೇರಿದಂತೆ ಹೊಸಬರೇ ಸೇರಿ ಅದ್ಬುತ ಸಿನಿಮಾ ಮಾಡಿದ್ದಾರೆ. ಅಮೆಜಾನ್ ಪ್ರೈಂ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೀವೂ ಒಮ್ಮೆ ಬಿಡುವು ಮಾಡಿಕೊಂಡು ನೋಡಿ. ಉತ್ತಮ ಸಂದೇಶದ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮನದಲ್ಲಿ ಮೂಡದೆ ಇರದು.
ಕಾಡು ಮತ್ತು ಅದರೊಳಗಿನ ನಿಶ್ಯಬ್ಧ ನಿಗೂಢಗಳು ಯಾವತ್ತಿಗೂ ಸಿನಿಮಾ ಸೃಷ್ಟಿಕರ್ತರನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಅವರವರ ಅಭಿರುಚಿಗೆ ತಕ್ಕಂತೆ ಅದು ದೃಶ್ಯದ ಚೌಕಟ್ಟಿಗೆ ಒಗ್ಗುತ್ತಾ ಬಂದಿದೆ. ಆದರೂ ಸಹ ಕಾಡೊಳಗೆ ದೃಷ್ಟಿ ನೆಟ್ಟು ಅದರೊಳಗೆ ಕದಲುವ ಕಥೆಗಳಿಗಾಗಿ ಕಾತರರಾಗಿರುವ ಪ್ರೇಕ್ಷಕರ ಸಂಖ್ಯೆ ಬಹಳಷ್ಟಿದೆ. ಅದನ್ನು ಬೇರೆಯದ್ದೇ ರೀತಿಯಲ್ಲಿ ತೃಪ್ತಗೊಳಿಸುವಂತೆ ರೂಪುಗೊಂಡಿರೋ ‘ಮನರೂಪ’ ಚಿತ್ರವೀಗ ತೆರೆ ಕಂಡಿದೆ. ಬಿಡುಗಡೆಗೂ ಮುನ್ನವೇ ಹೊರಳಿಕೊಂಡಿದ್ದ ನಿರೀಕ್ಷೆಯ ನೋಟಗಳೆಲ್ಲ ಥ್ರಿಲ್ ಆಗುವಂಥಾ ಸಮ್ಮೋಹಕ ಶೈಲಿಯಲ್ಲಿ ಮೂಡಿ ಬಂದಿರುವ ಮನರೂಪ ಪ್ರೇಕ್ಷಕರನ್ನು ಮೋಡಿಗೀಡು ಮಾಡುವಲ್ಲಿ ಸಫಲವಾಗಿದೆ.
ಮಾಮೂಲಿ ಜಾಡಿನ ಭರಾಟೆ ಅದೇನೇ ಇದ್ದರೂ ಕನ್ನಡದ ಪ್ರೇಕ್ಷಕರು ಹೊಸ ಅಲೆಯ ಚಿತ್ರಗಳಿಗಾಗಿ ಕಾತರಿಸುತ್ತಾರೆ. ಅವರೆಲ್ಲರ ಪಾಲಿಗೆ ಮಾತ್ರವಲ್ಲದೆ ಎಲ್ಲರನ್ನೂ ತಾಜಾತನದೊಂದಿಗೆ ತೃಪ್ತಗೊಳಿಸಬಲ್ಲ ಚಿತ್ರ ಮನರೂಪ. ನಿರ್ದೇಶಕ ಕಿರಣ್ ಹೆಗ್ಡೆ ಅಂಥಾ ಶೈಲಿಯಲ್ಲಿ, ಹೊಸತನದೊಂದಿಗೆ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಸೀಮಿತ ಪ್ರದೇಶದೊಳಗೆ ಸುತ್ತಾಡುತ್ತಾ ಏಕತಾನತೆ ಹುಟ್ಟಿಸುವಂತೆ ರೂಪುಗೊಳ್ಳೋದೂ ಇದೆ. ಮನರೂಪ ಕೂಡಾ ಕಾಡಿನಲ್ಲಿಯೇ ಬಹುಪಾಲು ನಡೆಯುತ್ತದಾದರೂ ಎಲ್ಲಿಯೂ ಬೋರು ಹೊಡೆಸೋದಿಲ್ಲ. ಕಾಡಿನ ತಪ್ಪಲಲ್ಲಿ ಸುತ್ತಾಡಿಸಿದರೂ ಕುತೂಹಲದ ಒರತೆ ಬತ್ತುವುದಿಲ್ಲ. ಕಣ್ಣಿಗೆ ಹಬ್ಬವಾಗುವಂಥಾ, ಮನಸಿಗೆ ನಾಟಿಕೊಳ್ಳುವ ದೃಶ್ಯಾವಳಿಗಳೊಂದಿಗೆ ಬಿಚ್ಚಿಕೊಳ್ಳುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೂ ವಿಭಿನ್ನ ಜಾಡೊಂದನ್ನು ಕಂಡುಕೊಂಡಿರೋ ಚಿತ್ರ.
ತಂತಮ್ಮ ಕೆಲಸಗಳಲ್ಲಿ ಕಳೆದು ಹೋಗಿದ್ದ, ಅದರ ಏಕತಾನತೆಯಿಂದ ಬೇಸತ್ತಿದ್ದ ಸ್ನೇಹಿತರೊಂದಷ್ಟು ಮಂದಿ ಒಗ್ಗೂಡುತ್ತಾರೆ. ನಂತರ ರಿಲ್ಯಾಕ್ಸ್ ಆಗಲು ಕಾಡಿನೊಳಗೆ ಚಾರಣ ಹೋಗುತ್ತಾರೆ. ಅವರೆಲ್ಲರದ್ದೂ ಒಂದೊಂದು ಹಿನ್ನೆಲೆ. ಚಿತ್ರವಿಚಿತ್ರ ಆಲೋಚನೆಗಳನ್ನು ಹೊದ್ದಿರೋ ಮನೋಲೋಕ. ಈ ಕಥೆಯ ಮೂಲ ಸೆಲೆಯೂ ಅದರಲ್ಲೇ ಅಡಗಿದೆ. ಹಾಗೆ ಕಾಡೊಳಗೆ ಅಡಿಯಿರಿಸುವವರ ಮುಂದೆ ನಾನಾ ಘಟನಾವಳಿಗಳು ತೆರೆದುಕೊಳ್ಳುತ್ತವೆ. ಮನರೂಪದ ಅಸಲೀ ಕಥೆ ಅಲ್ಲಿಂದಲೇ ಆರಂಭವಾಗುತ್ತದೆ. ಐದು ಪಾತ್ರಗಳ ಮೂಲಕ ಒಂದು ಜನರೇಷನ್ನಿನ ಯುವಕ ಯುವತಿಯರ ಎಲ್ಲ ತಲ್ಲಣ ತಾಕಲಾಟಗಳನ್ನು ಬಿಚ್ಚಿಡುತ್ತಲೇ ರೋಚಕವಾಗಿ ಮುಂದುವರಿಯುವ ಮನರೂಪ ಸಸ್ಪೆನ್ಸ್ ಥ್ರಿಲ್ಲರ್ ಗುಣ ಎಲ್ಲಿಯೂ ಮಾಸದಂತೆ ನೋಡಿಕೊಂಡು ಮುಂದುವರಿಯುತ್ತದೆ.
ಕಾಡೊಳಗೇ ಕಥೆ ಘಟಿಸಿದರೂ ಅದು ಪ್ರತೀ ಫ್ರೇಮಿನಲ್ಲಿಯೂ ಲಕಲಕಿಸುವಂತೆ ಮಾಡುವಲ್ಲಿ ಗೋವಿಂದ ರಾಜ್ ಛಾಯಾಗ್ರಹಣ ಗೆದ್ದಿದೆ. ಒಂದು ವಿಶಿಷ್ಟ ಕಥೆಯನ್ನು ಎಲ್ಲಿಯೂ ಬೋರು ಹೊಡೆಸದಂತೆ, ಫ್ರಶ್ನೆಸ್ ಕಳೆದುಕೊಳ್ಳದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕ ಕಿರಣ್ ಹೆಗ್ಡೆ ಕೂಡಾ ಗೆದ್ದಿದ್ದಾರೆ. ಅನುಷಾ ರಾವ್, ನಿಶಾ ಬಿ ಆರ್, ಆರ್ಯನ್, ಶಿವಪ್ರಸಾದ್ ಮುಂತಾದವರ ನಟನೆ ಮನರೂಪವನ್ನು ಪರಿಣಾಮಕಾರಿಯಾಗಿಸಿದೆ. ಈ ಚಿತ್ರ ಹೊಸಾ ಅನುಭವವನ್ನು ನೋಡುಗರೆಲ್ಲರಿಗೂ ಕೊಡ ಮಾಡುವಂತಿದೆ.
ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಬಹು ನಿರೀಕ್ಷಿತ ಚಿತ್ರ ಮನರೂಪ. ಟೈಟಲ್ ಪೋಸ್ಟರ್ ಮೂಲಕವೇ ಪ್ರೇಕ್ಷಕರನ್ನೆಲ್ಲ ಅಚ್ಚರಿಗೀಡು ಮಾಡಿದ್ದ ಈ ಸಿನಿಮಾ ಇದೇ 22ರಂದು ತೆರೆಗಾಣಲಿದೆ. ಒಂದು ಸಿನಿಮಾ ಯಾವ ಯಾವ ರೀತಿಯಲ್ಲಿ ಸೆಳೆಯುವಂಥಾ ಕಂಟೆಂಟು ಹೊಂದಿರಬೇಕೋ ಅದೆಲ್ಲವನ್ನೂ ಬೆರೆಸಿಯೇ ನಿರ್ದೇಶಕರು ಈ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಇದುವರೆಗೆ ಪ್ರೇಕ್ಷಕರು ಅಂದುಕೊಂಡಿರುವಂತೆ, ಮೊನ್ನೆ ಬಿಡುಗಡೆಯಾದ ಟ್ರೇಲರ್ನಲ್ಲಿ ಕಾಣಿಸಿದಂತೆ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಧಾಟಿಯ ಕಥಾನಕವನ್ನೊಳಗೊಂಡಿದೆ ಅಂತಲೇ ಹೇಳಲಾಗುತ್ತದೆ. ನೋಡುಗರನ್ನು ಕ್ಷಣ ಕ್ಷಣವೂ ಕ್ಯೂರಿಯಾಸಿಟಿಯ ಕಮರಿಗೆ ತಳ್ಳುವಂತಹ ರೋಚಕ ಕಥೆಯನ್ನೊಳಗೊಂಡಿರೋ ಈ ಕಥೆಗೆ ಶೀರ್ಷಿಕೆಗೆ ತಕ್ಕುದಾದ ಛಾಯೆಯೂ ಇದೆ. ಒಂದು ಜನರೇಷನ್ನಿನ ಒಟ್ಟಾರೆ ಮನೋ ಪಲ್ಲಟಗಳನ್ನೂ ಕೂಡ ಈ ಕಥೆಯೊಂದಿಗೆ ಬೆರೆಸಲಾಗಿದೆ. ಅದುವೇ ಈ ಸಿನಿಮಾದ ಪ್ರಧಾನ ಅಂಶವೆಂದರೂ ತಪ್ಪಲ್ಲ.
ಮನರೂಪ ಸಿನಿಮಾ 1980 ರಿಂದ 2000ದ ನಡುವಿನ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿರುವವರ ಕಥೆ. ಹೊಸ ತಲೆಮಾರು ಅಥವಾ ಮಿಲೆನಿಯಲ್ಸ್ ಎಂದು ಕರೆಸಿಕೊಳ್ಳುವ ಈ ಅವಧಿಯಲ್ಲಿ ಜನಿಸಿದ ಸಮೂಹದಲ್ಲಿ ಕಾಣುವ ಎರಡು ಬಗೆಯ ಭಿನ್ನತೆಯನ್ನು ಮನರೂಪ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಖಂಡಿತವಾಗಿಯೂ, ಮನರೂಪ ಹೊಸ ತಲೆಮಾರಿನ ಸಿನಿಮಾ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕುಟುಂಬದಲ್ಲಿ ಇರಲಾಗದ, ಹೊಂದಿಕೊಂಡು ಜೀವಿಸಲಾಗದ, ಒಂಟಿಯಾಗಿಯೇ ಉಳಿಯಲು ಇಚ್ಛಿಸುವ, ಆದರೆ ತಮ್ಮನ್ನೇ ಗಮನಿಸಬೇಕು ಎನ್ನುವ ಮನೋಭಾವದ ಯುವ ಮನಸ್ಸಿನ ಕಥೆ ಇಲ್ಲಿದೆ.
ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ. ನಿರ್ದೇಶಕ ಕಿರಣ್ ಹೆಗ್ಡೆ ಹಲವಾರು ವರ್ಷಗಳ ಕಾಲ ಕಾಡಿಸಿಕೊಂಡು, ಅದಕ್ಕಾಗಿ ತಯಾರಾಗಿ, ವರ್ಷಗಟ್ಟಲೆ ಶ್ರಮವಹಿಸಿ ರೂಪಿಸಿರೋ ಚಿತ್ರ ಮನೋರೂಪ. ಅದು ನಿಮ್ಮೆಲ್ಲರೆದುರು ಬಿಚ್ಚಿಕೊಳ್ಳಲು ದಿನಗಣನೆ ಶುರುವಾಗಿದೆ.
ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿರೋ ಮನರೂಪ ಚಿತ್ರ ಇದೇ ತಿಂಗಳ 22ರಂದು ತೆರೆ ಕಾಣಲಿದೆ. ಸಿಎಂಸಿಆರ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಟೈಟಲ್ ಪೋಸ್ಟರ್ನೊಂದಿಗೆ ಸೃಷ್ಟಿಸಿದ್ದ ಸಂಚಲನ ಸಣ್ಣ ಮಟ್ಟದ್ದೇನಲ್ಲ. ದಟ್ಟ ಕಾಡನ್ನು ಸೀಳಿಕೊಂಡು ಹೋಗುತ್ತಿರೋ ಕಾರಿನ ಹೆಡ್ಲೈಟ್ ಮೂಲಕವೇ ಕಥೆಯ ನಿಗೂಢ ದಿಕ್ಕನ್ನು ಪ್ರೇಕ್ಷಕರಿಗೆ ತಲುಪಿಸಲಾಗಿತ್ತು.
ಸಿನಿಮಾಗಳಲ್ಲಿ ಸ್ಟಿಲ್ಲುಗಳ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆಯಲಾಗುತ್ತೆ. ಆದರೆ ಈ ಪೋಸ್ಟರಿನಲ್ಲಿ ಯಾವ ನಟ ನಟಿಯರ ಭಾವ ಚಿತ್ರಗಳೂ ಇರಲಿಲ್ಲ. ಅಲ್ಲಿದ್ದದ್ದು ಕಾಡು, ಕಾರು ಮತ್ತು ಹೆಡ್ಲೈಟ್ ಬೆಳಕಲ್ಲಿ ಹೊಳೆಯೋ ದಾರಿ ಮಾತ್ರ. ಹೀಗೆ ಟೈಟಲ್ ಪೋಸ್ಟರಿನಲ್ಲಿ ಕಾರಿನ ಹೆಡ್ಲೈಟ್ ಮೂಲಕ ನಿಗೂಢ ದಾರಿಯತ್ತ ಬೊಟ್ಟು ಮಾಡಿ ತೋರಿಸಲಾಗಿತ್ತಲ್ಲಾ? ಅದು ಸೀದಾ ದಟ್ಟಾರಣ್ಯದ ಒಡಲಲ್ಲಿರೋ ಭಯಾನಕವಾದ ಕರಡಿ ಗುಹೆ ಎಂಬ ಪ್ರದೇಶಕ್ಕೆ ಕೊಂಡೊಯ್ದು ಬಿಡುತ್ತದೆ. ಈ ಕರಡಿ ಗುಹೆ ಎಂಬ ಕಾಲ್ಪನಿಕ ಪ್ರದೇಶವೇ ಇಡೀ ಚಿತ್ರದ ಕೇಂದ್ರಬಿಂದು. ಇದು ವಾಸ್ತವಕ್ಕೆ ಹತ್ತಿರಾದಂತಹ ಕಲ್ಪನೆಯೂ ಹೌದು.
ಯಾಕೆಂದರೆ ಕರ್ನಾಟಕದ ದಟ್ಟಾರಣ್ಯದ ಒಡಲೊಳಗೆ ಇಂತಹ ಅನೇಕ ಭಯಾನಕ ಪ್ರದೇಶಗಳಿವೆ. ಅದರ ಸುತ್ತ ಬೆಚ್ಚಿ ಬೀಳುವಂತಹ ಕಥೆಗಳೂ ಇದ್ದಾವೆ. ಅಲ್ಲಿಗೆ ಹೋದವರು ವಾಪಾಸ್ ಬರೋದಿಲ್ಲವೆಂಬುದರಿಂದ ಮೊದಲ್ಗೊಂಡು ಇಂತಹ ಪ್ರದೇಶಗಳ ಸುತ್ತ ಚಿತ್ರ ವಿಚಿತ್ರವಾದ ಕಥೆಗಳು ಹುಟ್ಟಿಕೊಂಡಿವೆ. ಹಾಗೆಯೇ ನಾವು ಆಗಾಗ ಕೇಳುತ್ತಾ ಬಂದಿರುವ ಕಥೆಗಳನ್ನೇ ಮೀರಿಸುವಂತಹ ದೃಶ್ಯಗಳು ಮನರೂಪ ಸಿನಿಮಾದಲ್ಲಿವೆಯಂತೆ. ಈ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕವೇ ಅದರ ಲಕ್ಷಣಗಳು ಗೋಚರಿಸಿದ್ದವು.
ನಿರ್ದೇಶಕ ಕಿರಣ್ ಹೆಗ್ಡೆ ಶಿರಸಿ ಸೀಮೆಯ ಡಟ್ಟ ಕಾಡುಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಗಿ ನಿಲ್ಲುವಂತಹ ಚಿತ್ರವಾಗಲಿದೆ ಎಂಬ ಭರವಸೆ ಚಿತ್ರತಂಡದಲ್ಲಿದೆ. ಕರಡಿ ಗುಹೆ ಎಂಬ ಪ್ರದೇಶದಲ್ಲಿನ ನಿಗೂಢಗಳು, ಸುಳಿವೇ ಕೊಡದಂತೆ ಧುತ್ತನೆದುರಾಗೋ ಟ್ವಿಸ್ಟುಗಳ ಮಜಾ ಅನುಭವಿಸಲು ದಿನಗಣನೆ ಶುರುವಾಗಿದೆ.
ಬೆಂಗಳೂರು: ಕಾಡು ಮತ್ತು ಅದರೊಳಗಿನ ನಿಗೂಢಗಳ ಕಥೆ ಈ ವರೆಗೂ ಅನೇಕ ಸಿನಿಮಾ ರೂಪದಲ್ಲಿ ಪ್ರೇಕ್ಷಕರನ್ನು ಎದುರುಗೊಂಡಿವೆ. ಕಾಡೊಳಗೆ ಸಂಚರಿಸುವ ಕಥೆಯನ್ನೊಳಗೊಂಡಿರೋ ಸಿನಿಮಾಗಳ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲಿ ಎಂದೂ ಬತ್ತದ ಬೆರಗುಗಳಿವೆ. ಈ ಕಾರಣದಿಂದಲೇ ಆಗಾಗ ಅಂಥಾ ಸಿನಿಮಾಗಳು ಅಣಿಗೊಂಡರೆ ಎಲ್ಲರೂ ಅದರತ್ತ ಆಕರ್ಷಿತರಾಗುತ್ತಾರೆ. ಇಂಥಾ ಕಾಡಿನ ರಹಸ್ಯಗಳ ಜೊತೆಗೆ ಮನುಷ್ಯನ ಮಾನಸಿಕ ತಲ್ಲಣಗಳೂ ಸೇರಿದ ಕಥೆಯೊಂದಿಗೆ ತೆರೆಗಾಣಲು ರೆಡಿಯಾಗಿರೋ ಚಿತ್ರ ಮನರೂಪ. ಕಿರಣ್ ಹೆಗ್ಡೆ ನಿರ್ದೇಶನದ ಈ ಸಿನಿಮಾ ಇದೇ ತಿಂಗಳ 22ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ ಅಪಾರ ಆಸಕ್ತಿ ಹೊಂದಿರುವ, ಆ ಮೂಲಕವೇ ಸೂಕ್ಷ್ಮವಾದ ಮನಸ್ಥಿತಿಯನ್ನು ತಮ್ಮದಾಗಿಸಿಕೊಂಡಿರುವವರು ನಿರ್ದೇಶಕ ಕಿರಣ್ ಹೆಗ್ಡೆ. ಸಾಹಿತ್ಯಾಸಕ್ತಿ ಮತ್ತು ತಾವು ಹುಟ್ಟಿ ಬೆಳೆದ ಶಿರಸಿ ಭಾಗದ ವಾತಾವರಣದಿಂದಲೇ ಅವರಿಗೆ ಸೂಕ್ಷ್ಮವಂತಿಕೆಯ ಮನಸ್ಥಿತಿ ಸಿದ್ಧಿಸಿದೆ. ಬಹುಶಃ ಸಾಹಿತ್ಯದ ಸಂಗವಿರದೆ ಮನರೂಪದಂಥಾ ಕಥೆಗಳು ರೂಪುಗೊಳ್ಳಲು ಸಾಧ್ಯವೇ ಇಲ್ಲವೇನೋ… ಈ ಸಿನಿಮಾ ಹೊಸತನ ದ ಕಥೆಯನ್ನೊಳಗೊಂಡಿದೆ ಅನ್ನೋ ಸುಳಿವು ಈ ಹಿಂದೆ ಪೋಸ್ಟರ್ ಗಳ ಮೂಲಕವೇ ಸಿಕ್ಕಿ ಹೋಗಿತ್ತು. ಇದೀಗ ಮನರೂಪ ಬಿಡುಗಡೆಯ ಹೊಸ್ತಿಲಲ್ಲಿರುವ ಘಳಿಗೆಯಲ್ಲಿ ನಿರ್ದೇಶಕರು ಮತ್ತೂ ಇಂಟರೆಸ್ಟಿಂಗ್ ಆದ ಒಂದಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದುವೇ ಈ ಸಿನಿಮಾದತ್ತ ಪ್ರೇಕ್ಷಕರಲ್ಲಿರೋ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸುವಂತಿವೆ.
ಇಲ್ಲಿನ ಇಡೀ ಕಥೆ ಕಾಡಿನ ಬ್ಯಾಕ್ಡ್ರಾಪ್ನಲ್ಲಿ ಕಳೆಗಟ್ಟಿಕೊಳ್ಳುವಂತೆ ಕಿರಣ್ ಹೆಗ್ಡೆ ನೋಡಿಕೊಂಡಿದ್ದಾರೆ. ಕಾಡೊಳಗಿನ ನಿಶ್ಯಬ್ಧ ಮೋಹಕವೂ ಹೌದು, ಭಯಾನಕವೂ ಹೌದು. ಅಂಥಾ ವಾತಾವರಣಕ್ಕೆ ಎಂಭತ್ತರ ದಶಕದಿಂದ ಎರಡು ಸಾವಿರನೇ ಇಸವಿಯ ವರೆಗಿನ ಜನರೇಷನ್ನಿನ ಮನೋಲೋಕವನ್ನು ಸಮ್ಮಿಳಿತಗೊಳಿಸಿ ಕಿರಣ್ ಹೆಗ್ಡೆ ಈ ಕಥೆಯನ್ನು ರೂಪಿಸಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ನಲ್ಲಿ ಇಡೀ ಸಿನಿಮಾ ಅದೆಷ್ಟು ಕುತೂಹಲಕರವಾಗಿ ಮೂಡಿ ಬಂದಿದೆ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಸದರಿ ಟ್ರೇಲರ್ ನಲ್ಲಿನ ತೀವ್ರತೆಯೇ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ಥ್ರಿಲ್ ಆಗಿಸಲಿದೆಯಂತೆ.
ಹತ್ತು ವರ್ಷಗಳ ನಂತರ ಮುಖಾಮುಖಿಯಾಗಿ ಖುಷಿಗೊಳ್ಳುವ ಸ್ನೇಹಿತರ ದಂಡೊಂದು ಕರಡಿ ಗುಹೆಯೆಂಬ ಪ್ರದೇಶಕ್ಕೆ ಚಾರಣ ಹೊರಡುತ್ತೆ. ಆ ಹಾದಿಯಲ್ಲಿ ಎದುರಾಗುವ ವಿಕ್ಷಿಪ್ತ ಮತ್ತು ಭಯಾನಕ ಸನ್ನಿವೇಶಿಗಳಿಗೆ ಅವರೆಲ್ಲ ಹೇಗೆ ಸ್ಪಂದಿಸುತ್ತಾರೆ, ಅವರ ಮಾನಸಿಕ ಸ್ಥಿತಿಗತಿಗಳು ಹೇಗೆಲ್ಲ ರೂಪಾಂತರಗೊಳ್ಳುತ್ತವೆ ಎಂಬುದರ ಸುತ್ತ ಕಥೆ ಚಲಿಸುತ್ತೆ. ಹಾಗಂತ ಇದನ್ನು ಬೇರೆ ಜಾಡಿನ ಸಿನಿಮಾ ಅಂದುಕೊಳ್ಳಬೇಕಿಲ್ಲ. ಅದೆಷ್ಟೋ ವರ್ಷಗಳಿಂದ ಸಿನಿಮಾ ವ್ಯಾಮೋಹ ಹೊಂದಿರುವ ಕಿರಣ್ ಹೆಗ್ಡೆ ಕಮರ್ಶಿಯಲ್ ಹಾದಿಯಲ್ಲಿಯೇ ಈ ದೃಷ್ಯಗಳನ್ನು ಕಟ್ಟಿ ಕೊಟ್ಟಿದ್ದಾರಂತೆ. ಅಂತೂ ಕಾಡುತ್ತಲಾ ಬೆಚ್ಚಿ ಬೀಳಿಸಲಿರೋ ಮನರೂಪ ಇದೇ 22ರಂದು ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.
ಬೆಂಗಳೂರು: ಕಿರಣ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದು ಇದೇ ನವೆಂಬರ್ 22ರಂದು ಬಿಡುಗಡೆಯಾಗಲಿರೋ ಚಿತ್ರ ಮನರೂಪ. ಈ ಹಿಂದೆ ಟೈಟಲ್ ಪೋಸ್ಟರ್ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ.
ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಚಿತ್ರ ವಿಭಿನ್ನ ಕಥೆ ಹೊಂದಿದೆ ಎಂಬ ವಿಚಾರ ಟೈಟಲ್ ಪೋಸ್ಟರ್ ಮೂಲಕವೇ ಅನಾವರಣಗೊಂಡಿತ್ತು. ಕಾರೊಂದು ಕಾಡಿನ ನಡುವೆ ಗೀರು ಮೂಡಿಸಿಕೊಂಡು ಹೋದಂತಹ ದೃಶ್ಯದ ಮೂಲಕವೇ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿತ್ತು. ಈಗ ಟ್ರೇಲರ್ನೊಂದಿಗೆ ಅನಾವರಣಗೊಂಡಿರೋದು ನಡುಕ ಹುಟ್ಟಿಸುವ ನಿಗೂಢ ಮನರೂಪ!
ಕಾಡೆಂದರೇನೇ ನಿಶ್ಯಬ್ದ. ಅದರಾಳದಲ್ಲಿ ನಾನಾ ನಿಗೂಢಗಳಿವೆ. ಅಂತಹ ಕಾಡು, ಅದರೊಳಗಿರೋ ಕರಡಿ ಗುಹೆಯೆಂಬ ಭಯಾನಕ ಪ್ರದೇಶದ ಸುತ್ತ ಸುಳಿದಾಡುವ ಕಥೆಯ ಜಾಡಿನೊಂದಿಗೆ ನಿಜಕ್ಕೂ ಈ ಟ್ರೇಲರ್ ತುಂಬಾನೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಹತ್ತು ವರ್ಷಗಳ ನಂತರ ಜೊತೆಗೂಡೋ ಸ್ನೇಹಿತರು ಅತ್ಯಂತ ಅಪಾಯಕಾರಿಯಾದ ಪ್ರದೇಶಕ್ಕೆ ಚಾರಣ ಹೋದಾಗ ಅಲ್ಲೆದುರಾಗೋ ಸನ್ನಿವೇಶಗಳನ್ನು ಒಂದು ಜನರೇಷನ್ನಿನ ಮನೋಲೋಕದೊಂದಿಗೆ ತೆರೆದಿಡೋದು ಈ ಸಿನಿಮಾದ ಸ್ಪೆಷಾಲಿಟಿ.
ಒಂದು ತಂಡ ಚಾರಣ ಹೊರಟಾಗ ಅಲ್ಲಿ ಜರುಗೋ ಸನ್ನಿವೇಶಗಳನ್ನು ಕಟ್ಟಿಕೊಡುವಂತಹ ಸಾಕಷ್ಟು ಸಿನಿಮಾಗಳು ತೆರೆ ಕಂಡಿವೆ. ಆದರೆ ಮನರೂಪ ಅಪರೂಪದ ಕಂಟೆಂಟು ಹೊಂದಿರೋ ಸಿನಿಮಾ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿಯಂತಿದೆ. ಸಿ.ಎಂ.ಸಿ.ಆರ್. ಮೂವೀಸ್ ನಿರ್ಮಾಣ ಮಾಡಿರುವ ಮನರೂಪ ಸಿನಿಮಾದಲ್ಲಿ ಎಲ್ಲಾ ಕಲಾವಿದರೂ ಹೊಸಬರೇ. ಅದಕ್ಕೆ ತಕ್ಕುದಾದ ಈ ಕಥೆಗಾಗಿ ಚಿತ್ರೀಕರಣದ ಪೂರ್ವದಲ್ಲಿ ಹದಿನೈದು ದಿನಗಳ ಕಾಲ ಅಭಿನಯ ತಾಲೀಮು ನಡೆಸಲಾಗಿದೆ. ಉತ್ತರಕನ್ನಡದ ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ.
ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ.
ಬೆಂಗಳೂರು: ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾಗಳ ಬಗ್ಗೆ ಯಾವತ್ತಿದ್ದರೂ ಕನ್ನಡದ ಪ್ರೇಕ್ಷಕರಲ್ಲೊಂದು ಮೋಹವಿದ್ದೇ ಇದೆ. ಅದರಲ್ಲಿಯೂ ಹೊಸ ತಂಡ, ಹೊಸ ಥರದ ಕಥೆಯೊಂದಿಗೆ ಆಗಮಿಸಿದೆಯೆಂದರೆ ಅದರತ್ತ ತೀವ್ರವಾದ ಕುತೂಹಲ ಇದ್ದೇ ಇರುತ್ತದೆ. ಹೀಗೆಯೇ ಆಗಮಿಸಿರುವ ಹೊಸಬರ ತಂಡವೊಂದು ಮನರೂಪ ಎಂಬ ಚಿತ್ರವನ್ನು ರೂಪಿಸಿದೆ. ಚಿತ್ರೀಕರಣವೆಲ್ಲ ಮುಗಿಸಿಕೊಂಡು ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ ಮಜವಾದ ಕಥಾ ಹಂದರದ ಸುಳಿವು ಬಿಟ್ಟು ಕೊಡುತ್ತಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನೂ ಪಡೆದುಕೊಳ್ಳುತ್ತಿದೆ.
ಇದು ಕಿರಣ್ ಹೆಗ್ಡೆ ನಿರ್ದೇಶನದ ಚಿತ್ರ. ಅವರೇ ಸಿಎಂಸಿಆರ್ ಮೂವೀಸ್ ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವಂಥಾ ಚಿತ್ರ. ಆದರೆ ಇದು ಈ ಜಾನರಿನ ಮಾಮೂಲಿ ಚಿತ್ರಗಳಂತಿಲ್ಲ ಎಂಬ ವಿಚಾರ ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಮೂಲಕವೇ ಸಾಬೀತಾಗಿದೆ. ಕಾಡೊಳಗೆ ಟ್ರಿಪ್ಪು ಹೊರಡೋ ಐವರು ಸ್ನೇಹಿತರ ಟೀಮು ಕರಡಿ ಗುಹೆ ಪ್ರದೇಶದಲ್ಲಿ ಎದುರಿಸೋ ಸನ್ನಿವೇಶಗಳನ್ನು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿ ಮನರೂಪ ಮೂಲಕ ಕಟ್ಟಿ ಕೊಡಲಾಗಿದೆ.
ಈ ಚಿತ್ರವನ್ನು ಹೊಸಬರೇ ಸೇರಿ ರೂಪಿಸಿದ್ದಾರೆ. ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರೂ ಇಲ್ಲಿ ನಟಿಸಿದ್ದಾರೆ.
ಇದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಅಂದಾಕ್ಷಣ ಅದೊಂದು ಚೌಕಟ್ಟಿಗೆ ಮಾತ್ರವೇ ಸೀಮಿತವಾಗಿದೆ ಅಂದುಕೊಳ್ಳಬೇಕಿಲ್ಲ. ಇಲ್ಲಿ ಈ ಪೀಳಿಗೆಯ ಯವ ಸಮೂಹದ ಮನೋಭೂಮಿಕೆಯನ್ನು ಅಚ್ಚರಿದಾಯಕವಾಗಿ ಬಿಚ್ಚಿಡುವ ಪ್ರಯೋಗವೂ ನಡೆದಿದೆ. 1980ರಿಂದ 2000ದವರೆಗಿನ ಯುವ ಸಮೂಹದ ರೋಚಕ ಕಥೆಯೂ ಇಲ್ಲಿದೆಯಂತೆ. ಈಗ ಮೋಷನ್ ಪೋಸ್ಟರ್ ಮೂಲಕ ಹವಾ ಎಬ್ಬಿಸಿರೋ ಚಿತ್ರತಂಡ ವಾರದೊಪ್ಪತ್ತಿನಲ್ಲಿಯೇ ಟೀಸರ್ ಅನಾವರಣ ಮಾಡಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರಿನಲ್ಲಿ ಮನರೂಪ ತೆರೆ ಕಾಣಲಿದೆ.
– ಒಂದು ದುರ್ಗಮ ಕಾನನ ರಸ್ತೆಯ ಮನದ ಮುಗಿಲಿನ ಕಥನ
– ಕರಡಿ ಗುಹೆಯ ನಿಗೂಢತೆಗೆ ಪಶ್ಚಿಮ ಘಟ್ಟದ ಹಸಿರು ಸಿರಿಯ ಕನ್ನಡಿ
ಬೆಂಗಳೂರು: ದಶಕದ ನಂತರ ಭೇಟಿ ಮಾಡುವ ಐದು ಜನ ಗೆಳೆಯರು. ಪಶ್ಚಿಮ ಘಟ್ಟದ ಕತ್ತಲೆಯ ರಾತ್ರಿಯಲ್ಲಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಟಿದ್ದಾರೆ. ಪ್ರಯಾಣದಲ್ಲಿ ಅವರು ತಮ್ಮ ಗುರಿಯತ್ತ ಸಾಗಿದಂತೆಲ್ಲ ಹಲವು ಅಡೆತಡೆಗಳು ಆಶ್ಚರ್ಯದ ರೂಪದಲ್ಲಿ ಎದುರಾಗುತ್ತವೆ. ಮನರೂಪ ಸಿನಿಮಾದ ಮೋಷನ್ ಪೋಸ್ಟರ್ (ವೀಡಿಯೋ ತುಣುಕು) ಹಲವು ಕುತೂಹಲಗಳನ್ನು ಹಾಗೇ ಉಳಿಸಿಕೊಂಡು, ನೋಡುಗರ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ.
ಮನರೂಪ – ಎಪಿಸೋಡ್ ನೆವರ್ ಎಂಡ್ಸ್ ಎಂಬ ಹೊಸ ತಂಡದ ಸಿನಿಮಾ ತನ್ನ ಪೋಸ್ಟರ್ ಮೂಲಕವೇ ಗಮನ ಸೆಳೆದಿತ್ತು. ಈಗ ಬಿಡುಗಡೆಗೊಂಡಿರುವ ಮೋಷನ್ ಪೋಸ್ಟರ್ ಕೇವಲ ಕುತೂಹಲ ಕೆರಳಿಸುವುದು ಮಾತ್ರವಲ್ಲ, ನೋಡುಗರ ಮನದಲ್ಲಿ ಈ ಸಿನಿಮಾದಲ್ಲಿ ಇರುವ ರೋಚಕತೆಯ ಸುತ್ತ ಹತ್ತಾರು ಪ್ರಶ್ನೆಗಳನ್ನು ಮೂಡಿಸುತ್ತಾ ಹೋಗುತ್ತದೆ. ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಹಿನ್ನೆಲೆಯ ಮನರೂಪ ಸಿನಿಮಾ ಕಾಡಿನಲ್ಲಿ ನಡೆಯುವ ಕತೆ. ಇದು ಕಾಡಿನಲ್ಲಿ ನಡೆಯುವ ಕಥನ ಎಂಬುದನ್ನು ನಿರೂಪಿಸಲು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ.
ಮೋಷನ್ ಪೋಸ್ಟರಲ್ಲಿ ಏನಿದೆ?
ಕತ್ತಲೆಯ ರಾತ್ರಿ, ಒಂಟಿ ರಸ್ತೆಯಲ್ಲ್ಲಿ ಸಾಗುವ ಕಾರಿನಲ್ಲಿ ಸಂಭಾಷಣೆಯೊಂದಿಗೆ ಮೋಷನ್ ಪೋಸ್ಟರ್ ಆರಂಭವಾಗುತ್ತದೆ. ಅದರಲ್ಲಿ ಪುರುಷ ಪಾತ್ರವೊಂದು ‘ನಾನು ಕಾಡಿನ ಹಾದಿಯಲ್ಲಿ ಕಾರಿನಲ್ಲಿ ಚಲಿಸುತ್ತಿರುವಾಗ ಮನಸ್ಸು ಸೂರೆಹೋಗುತ್ತಿರುತ್ತದೆ’ ಎಂದರೆ, ಅದಕ್ಕೆ ಪ್ರತಿಯಾಗಿ ಹೆಣ್ಣಿನ ಧ್ವನಿಯೊಂದು ನಿರಾಸಕ್ತವಾಗಿ ‘ಇನ್ನೆಷ್ಟು ದೂರ ಬೇಕು ಅಲ್ಲಿಗೆ ತಲುಪಲು’ ಎಂದು ಕೇಳುತ್ತದೆ. ಅದಕ್ಕೆ ಉತ್ತರವಾಗಿ ಗಂಡು ಧ್ವನಿ ‘ಹೇ…! ನಾವು ಕರಡಿಗುಹೆ ಸಿಗುವವರೆಗೂ ಹೀಗೆ ಸಾಗುತ್ತಲೇ ಇರೋಣ’ ಎಂದು ನಗುತ್ತಾ ಹೇಳುತ್ತದೆ. ಅಲ್ಲದೆ, ಅದೇ ಧ್ವನಿ ‘ಶಶಾಂಕ, ಈ ರೋಚಕತೆ ಹೇಗಿದೆ’ ಎಂದು ಕೇಳುತ್ತದೆ. ಆಗ ಅಲ್ಲಿರುವುದು ಕೇವಲ ಎರಡು ಪಾತ್ರಗಳಲ್ಲ ಮೂರು ಎಂಬುದು ಗಮನಕ್ಕೆ ಬರುತ್ತದೆ. ಶಶಾಂಕ ಉತ್ತರ ರೂಪದಲ್ಲಿ ‘ಇದು ಎಂಥ ರೋಚಕತೆ? ನನಗೆ ನಾವು ನರಕಕ್ಕೆ ಹೋಗುತ್ತಿದ್ದೇವೆ ಅನಿಸ್ತಾ ಇದೆ’ ಎನ್ನುತ್ತಾನೆ. ಅದಕುತ್ತರವಾಗಿ ಇನ್ನೊಂದು ಹೆಣ್ಣು ಧ್ವನಿ, ‘ಶಟ್ ಅಪ್, ಶಶಾಂಕ. ಎಷ್ಟೋ ದಿನದ ನಂತರ ಭೇಟಿಯಾಗುತ್ತದ್ದೇವೆ. ಸುಮ್ಮನೆ ಈ ಕ್ಷಣಗಳನ್ನು ಅನುಭವಿಸೋಣ’ ಎನ್ನುತ್ತದೆ. ಇದರಿಂದ ಉತ್ತೇಜಿತನಾದ ಗೌರವ್ ‘ಸರಿ ಹೇಳಿದೆ ಪೂರ್ಣ, ಹೇ ಶರವಣ, ನೀನು ನಿದ್ದೆ ಮಾಡ್ತಿದ್ದಿಯೋ ಹೇಗೆ’ ಎಂದಾಗ ಶರವಣ ತಾನೂ ಏನಾದರೂ ಹೇಳಬೇಕು ಎನಿಸಿ ‘ಗೌರವ್, ಕಾರನ್ನು ಜಾಗ್ರತೆಯಿಂದ ಓಡಿಸು ಮಾರಾಯಾ. ಇನ್ನು ಹೋಗಿ ಕರಡಿಗೆ ಡಿಕ್ಕಿ ಹೊಡೆಯಬೇಡ’ ಎನ್ನುತ್ತಾನೆ. ಈ ಸಂಭಾಷಣೆಯಲ್ಲಿರುವುದು ಐದು ಜನ ಸ್ನೇಹಿತರು. ತುಂಬಾ ಸಮಯದ ನಂತರ ಅವರು ಭೇಟಿಯಾಗುತ್ತಿದ್ದಾರೆ, ಅವರೆಲ್ಲರೂ ಲಾಂಗ್ ಡ್ರೈವ್ ಹೋಗಲು ಬಯಸುತ್ತಿದ್ದಾರೆ ಜೊತೆಗೆ ಪಶ್ಚಿಮ ಘಟ್ಟದಲ್ಲಿರುವ ಕರಡಿಗುಹೆಯನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ ಅನ್ನುವ ಅಂಶ ಪ್ರಾರಂಭದ ಹಂತದಲ್ಲಿ ತಿಳಿಯುತ್ತದೆ.
ಆದರೆ ಈ ಸ್ನೇಹಿತರ ಗುಂಪು ಮುಂದೆ ಚಲಿಸಿದಂತೆ, ಇದ್ದಕ್ಕಿದ್ದಂತೆ ಒಂದು ಅಸ್ಪಷ್ಟ ಧ್ವನಿ ಕೇಳುತ್ತದೆ. ಕಾರು ಗಕ್ಕನೆ ಒಂದು ಮರದಡಿಯಲ್ಲಿ ನಿಲ್ಲುತ್ತದೆ. ಈ ಕ್ಷಣದಲ್ಲಿ ಮೋಷನ್ ಪೋಸ್ಟರ್ ಇನ್ನೊಮ್ಮೆ ಜೀವಂತವಾಗುತ್ತದೆ. ಜೊತೆಗೆ ಅದರ ಮೇಲೆ ಗುಮ್ಮಾ 1 ಎಂಬ ಅಕ್ಷರಗಳು ಮೂಡುತ್ತವೆ. ಕಾರು ನಿಂತಿದ್ದೇಕೆ? ಯಾರು ಈ ಗುಮ್ಮ 1? ಕಗ್ಗತ್ತಲ ರಾತ್ರಿ ಮುಂದೆ ಹೇಗೆ ಮುಂದುವರಿಯುತ್ತದೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಮೋಷನ್ ಪೋಸ್ಟರ್ ಕೊನೆಯಾಗುತ್ತದೆ. ಜೊತೆಗೆ ಶರವಣ ಅವರ ಹಿನ್ನಲೆ ಸಂಗೀತ ಇನ್ನಷ್ಟು ನಿಗೂಢತೆಯೊಂದಿಗೆ ಸಾಗುತ್ತದೆ. ಇದು ಏನೆಲ್ಲಾ ನಿಗೂಢತೆಯನ್ನು ತನ್ನೊಳಗೆ ಅಡಗಿಸಿಕೊಂಡಿದೆ? ಈ ಸಿನಿಮಾವನ್ನು ಉಸಿರನ್ನು ಬಿಗಿ ಹಿಡಿದುಕೊಂಡು ನೋಡಬೇಕು ಎಂಬುದು ಚಿತ್ರ ತಂಡದ ಅಭಿಪ್ರಾಯ.
ಅಭಿನಯ ವಿಷಯಕ್ಕೆ ಬಂದರೆ, ದಿಲೀಪ್ ಕುಮಾರ ಈ ಚಿತ್ರದ ಮೂಲಕ ಹೊಸ ಪರಿಚಯ. ದಿಲೀಪ್ ತಮ್ಮ ಪ್ರಬುದ್ಧ ಅಭಿನಯವನ್ನು ಈ ಚಲನಚಿತ್ರದಲ್ಲಿ ಶ್ರುತ ಪಡಿಸಿದ್ದಾರೆ. ಕನ್ನಡ ಕಿರುತೆರೆಯ ಪರಿಚಿತ ಮುಖ ಅನುಷಾ ರಾವ್ ಹಾಗೂ ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ನಿಶಾ ಬಿ. ಆರ್ ಮತ್ತು ಆರ್ಯನ್, ಶಿವ ಪ್ರಸಾದ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಮೋಘ್ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕವೇ ಆವರಿಸಿಕೊಳ್ಳಲಿದ್ದಾರೆ. ಮತ್ತು ಇವರೆಲ್ಲರದೂ ಸದಾ ಕಾಡುವಂತಹ ಪಾತ್ರಗಳಾಗಿವೆ. ಸೂರಿ ಹಾಗೂ ಲೋಕಿ ಅವರ ಸಂಕಲನ ಈ ಚಿತ್ರದ ಇನ್ನೊಂದು ಹೈಲೈಟ್ಸ್. ಛಾಯಾಗ್ರಾಹಕ ಗೋವಿಂದರಾಜ್ ಕಾಡಿನ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ. ಶರವಣ ಸಂಗೀತ ಮನಸಿನ ರೂಪಗಳನ್ನು ಕೆರಳಿಸುವಂತಿದೆ ಹಾಗೂ ಸೌಂಡ್ ಡಿಸೈನರ್ ನಾಗರಾಜ್ ಹುಲಿವಾನ್ ಅವರು ಶಿರಸಿ ಮತ್ತು ಸಿದ್ಧಾಪುರ ಕಾಡು ಮೇಡನ್ನು ಅಲೆದು ಫ್ರೆಶ್ ಅನಿಸುವ ಶಬ್ಧವನ್ನು ಸಂಗ್ರಹಿಸಿದ್ದಾರೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆ 2019ರಲ್ಲಿ ಯುವ ಮನಸನ್ನು ಮನರೂಪ ತಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸ.
ಮನರೂಪದ ನಿರ್ದೇಶಕ ಕಿರಣ ಹೆಗಡೆ ಪ್ರಕಾರ, ‘ವಿಭಿನ್ನತೆಯಿಂದ ಕೂಡಿದ ಸಿನಿಮಾ ಮೋಷನ್ ಪೋಸ್ಟರನ್ನು ಬಿಡುಗಡೆ ಮಾಡಬೇಕೆಂಬ ನಮ್ಮ ಹಂಬಲ ಮತ್ತು ಪ್ರಯತ್ನದ ಫಲ ಈ ಪೋಸ್ಟರ್. ಕಲಾವಿದ ನವೀನ್ ರೇವಣ್ ಮತ್ತು ಪಿಕ್ಸೆಲ್ ಫ್ರೇಮ್ ನ ಮಹೇಶ್ ಅವರು ಈ ಮೋಷನ್ ಪೋಸ್ಟರ್ ಮಾಡಿಕೊಟ್ಟಿದ್ದಾರೆ. ಸಿನಿಮಾದ ರೋಚಕತೆ ಮತ್ತು ಕುತೂಹಲಕಾರಿ ಅಂಶಗಳನ್ನು ಸಾರಬೇಕು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ನಮ್ಮ ಮೊದಲ ಸಿನಿಮಾ ಪೋಸ್ಟರ್ನಲ್ಲಿ ನಾವು ನಮ್ಮ ಚಿತ್ರಕಥೆಯ ವಸ್ತು ಏನೆಂಬುದನ್ನು ತಿಳಿಸಿದ್ದೆವು. ಈಗ ಬಿಡುಗಡೆಗೊಳಿಸಿದ ಮೋಷನ್ ಪೋಸ್ಟರ್ ಐದು ಜನ ಸ್ನೇಹಿತರು ಕರಡಿಗುಹೆಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ ಎಂಬುದನ್ನು ನೇರವಾಗಿ ಹೇಳುತ್ತದೆ ಮತ್ತು ಆ ಐದೂ ಜನ ಸ್ನೇಹಿತರ ಸ್ವಭಾವ ಹೇಗೆ ಎಂಬುದನ್ನೂ ಸಂಕ್ಷಿಪ್ತವಾಗಿ ಸೂಚಿಸುತ್ತದೆ. ಇದರ ಜೊತೆಗೆ ಕಾಡಿನ ಮಧ್ಯದಲ್ಲಿ ನಿಲ್ಲುವ ಕಾರು ಚಿತ್ರಕಥೆಯ ಬಗ್ಗೆ ಇನ್ನೊಂದು ಸುಳಿವನ್ನೂ ನೀಡುತ್ತದೆ. ಮೋಷನ್ ಪೋಸ್ಟರ್ ಮೇಲೆ ‘ಬಲಿಪಶುಗಳು ಸಿಕ್ಕಿಬಿದ್ದರು’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಯಾರು ಮಾಡಿದರು ಎಂಬುದು ಪ್ರಶ್ನೆ. ಪ್ರೇಕ್ಷಕರು ಇಂತಹ ಕುತೂಹಲ ಹುಟ್ಟಿಸುವ ಸಂಗತಿಗಳನ್ನು ಮೆಚ್ಚುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ತಿಳಿಸಿದರು.
ಚಿತ್ರದ ಛಾಯಾಚಿತ್ರಗ್ರಾಹಕ ಗೋವಿಂದರಾಜ್, ಈ ಚಿತ್ರ ಛಾಯಾಗ್ರಹಣ ತಂಡಕ್ಕೆ ನಾನಾ ಹೊಸ ರೀತಿಯ ಸವಾಲುಗಳನ್ನು ಒಡ್ಡಿತು. ಕ್ಯಾಮರಾ ಹಾಗೂ ಇನ್ನಿತರ ಛಾಯಾಗ್ರಹಣದ ಸಲಕರಣೆಗಳೊಂದಿಗೆ ನಾವು ಹಲವಾರು ಮೈಲಿಗಳಷ್ಟು ದೂರ ನಡೆಯಬೇಕಾಯಿತು. ಏಕೆಂದರೆ ನಮಗೆ ಬೇಕಾದ ಅತಿ ಸೂಕ್ತ ದೃಶ್ಯಗಳಿಗಾಗಿ ಈ ಪ್ರಯಾಸ ಪಡಲೇಬೇಕಿತ್ತು. ಈ ಪ್ರಯಾಸವನ್ನು ನಮ್ಮ ಇಡೀ ತಂಡ ಖುಷಿಖುಷಿಯಾಗಿಯೇ ಕಳೆಯಿತು. ಪಶ್ಚಿಮ ಘಟ್ಟದ ದಟ್ಟ ಕಾನನ ಹಾಗೂ ಕಠಿಣ ಭೌಗೋಳಿಕ ಸ್ಥಿತಿಯ ನಡುವೆ ಛಾಯಾಗ್ರಹಣ ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ.
ಹೊಸ ಬಗೆಯ ಕಥಾನಕ: 1981 ಹಾಗೂ 1996 ನಡುವೆ ಜನಿಸಿದ, 2019ರ ವೇಳೆಗೆ 23 ಹಾಗೂ 38 ವರ್ಷ ವಯೋಮಾನದ ಮಿಲೆನಿಯಲ್ಸ್ ಜನಾಂಗದ ವ್ಯಕ್ತಿತ್ವವನ್ನು ಹಿಡಿದುಕೊಳ್ಳುವ ಚಿತ್ರ ಮನರೂಪ. ಈ ಪ್ರಯತ್ನ ನಮ್ಮ ಚಿತ್ರರಂಗಕ್ಕೆ ತೀರಾ ಹೊಸದು. ಈ ಜನಾಂಗದ ಬಹುಮುಖ್ಯ ಮನಸ್ಥಿತಿಯೆಂದರೆ ಸ್ವಾರ್ಥ, ಅತಿಯಾಗಿ ತಮ್ಮನ್ನು ತಾವೇ ಪ್ರೀತಿಸುವುದು, ತನ್ನನ್ನೇ ಗಮನಿಸಬೇಕು ಎಂಬ ಅಭಿಲಾಷೆ ಹಾಗೂ ಎಲ್ಲೂ ನಿಲ್ಲದೇ ಯಾವುದೋ ಒಂದು ಅಪರೂಪದ ಸಂಗತಿಯನ್ನು ಅರಸಿಕೊಂಡು ತಿರುಗಾಡುವುದು. ನಿರ್ದೇಶಕ ಕಿರಣ್ ಹೆಗಡೆ ಪ್ರಕಾರ ಈ ಮನೋಸ್ಥಿಯನ್ನು, ಅದರ ಮೂಲ ಪ್ರೇರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಿನಿಮಾ ಜನರಿಗೆ ತಲುಪಿಸಲಿದೆ. ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಕನ್ನಡದ ಪಶ್ಚಿಮ ಘಟ್ಟ ಶ್ರೇಣಿಯ ಸುಂದರ ತಾಣಗಳಾದ ಶಿರಸಿ, ಸಿದ್ದಾಪುರದಲ್ಲಿ ಮಾಡಲಾಗಿದೆ. ಮನರೂಪ ಪ್ರಯಾಣ, ಹೊಸ ಸ್ಥಳಗಳ ಅನ್ವೇಷಣೆ, ಹಳೆ ಸ್ನೇಹದ ನೆನಪನ್ನು ಮರುಕಳಿಸುವುದು, ಮನಸ್ಸಿನ ಒಳಗಿನ ಕತ್ತಲು, ಸ್ವ-ಮೋಹ, ಸಂಬಂಧಗಳು, ಪ್ರೇಮದ ಪಾವಿತ್ರ್ಯತೆ ಹೀಗೆ ನಾನಾ ಅಂಶಗಳನ್ನು ಒಳಗೊಂಡ ಚಿತ್ರ. ಎಲ್ಲಾ ಅಂದುಕೊಂಡಂತೆ ಆದರೆ ಜೂನ್ನಲ್ಲಿ ಮುಂಗಾರಿನ ಮುಸಲಧಾರೆಯ ಜತೆಗೆ ಈ ಚಿತ್ರವೂ ಬಿಡುಗಡೆಯಾಗಲಿದೆ.