Tag: ಮದ್ಯಪಾನಿ

  • ‘ಕುಡಿದು ಗಲಾಟೆ ಮಾಡಬೇಡ’ – ತಾಯಿ ಸಾಯುವವರೆಗೂ ದೊಣ್ಣೆಯಲ್ಲಿ ಹೊಡೆದ ಮಗ

    ‘ಕುಡಿದು ಗಲಾಟೆ ಮಾಡಬೇಡ’ – ತಾಯಿ ಸಾಯುವವರೆಗೂ ದೊಣ್ಣೆಯಲ್ಲಿ ಹೊಡೆದ ಮಗ

    – ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡ ಪತ್ನಿ

    ರಾಯ್ಪರ್: ಕುಡಿದು ಗಲಾಟೆ ಮಾಡಬೇಡ ಎಂದಿದ್ದಕ್ಕೆ ತಾಯಿಯನ್ನು ಮಗನೋರ್ವ ಸಾಯುವರೆಗೆ ದೊಣ್ಣೆಯಿಂದ ಹೊಡೆದಿರುವ ಘಟನೆ ಚತ್ತೀಸ್‍ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ನಡೆದಿದೆ.

    ತಾಯಿಯನ್ನೇ ಹೊಡೆದು ಕೊಂದ ಪಾಪಿ ಮಗನನ್ನು ಅಮೃತ್ ಲಾಲ್ ಗಡೆವಾಲ್ ಎಂದು ಗುರುತಿಸಲಾಗಿದೆ. ಮದ್ಯಪಾನಕ್ಕೆ ದಾಸನಾಗಿದ್ದ ಅಮೃತ್ ಲಾಲ್ ಲಾಕ್‍ಡೌನ್‍ನಿಂದ ಮದ್ಯದಂಗಡಿ ಮುಚ್ಚಿದ ದಿನದಿಂದಲೂ ಸಮ್ಮನೆ ಇದ್ದ. ಆದರೆ ಸೋಮವಾರದಿಂದ ಬಾರ್ ಗಳು ಓಪನ್ ಆದ ಕಾರಣ ಇಂದು ಕಂಠಪೂರ್ತಿ ಕುಡಿದು ಬಂದಿದ್ದಾನೆ.

    ಬಂದವನೇ ಅಮೃತ್ ಲಾಲ್ ತನ್ನ ಗ್ರಾಮವಾದ ಪುಟ್ಪುರದಲ್ಲಿ ಜನರಿಗೆ ತೊಂದರೆ ಕೊಡಲು ಆರಂಭಿಸಿದ್ದಾನೆ. ಜೊತೆಗೆ ರಸ್ತೆಯಲ್ಲಿ ನಿಂತುಕೊಂಡು ಓಡಾಡುವ ಮಂದಿ ಜೊತೆ ಜಗಳವಾಡಿದ್ದಾನೆ. ಕುಡುಕನ ತೊಂದರೆಯನ್ನು ಸಹಿಸಿಕೊಳ್ಳದ ಗ್ರಾಮಸ್ಥರು ಹೇಗೋ ಆತನ ಮನವೊಲಿಸಿ ಮನೆಗೆ ಹೋಗುವಂತೆ ಹೇಳಿದ್ದಾರೆ. ನಂತರ ಅಮೃತ್ ಲಾಲ್ ಮನೆಗೆ ಬಂದಿದ್ದಾನೆ.

    ಮನೆಗೆ ಬಂದವ ಮನೆಯ ಮುಂದೆ ಕೂಡ ಗಲಾಟೆ ಮಾಡಿ ಅಕ್ಕಪಕ್ಕದ ಮನೆಯವರ ಜೊತೆ ಜಗಳಕ್ಕೆ ಹೋಗಿದ್ದಾನೆ. ಈ ವೇಳೆ ಆತನ ಪತ್ನಿ ಹಾಗೂ ವೃದ್ಧೆ ತಾಯಿ ಮನೆಯೊಳಗೆ ಕರೆದುಕೊಂಡು ಬಂದಿದ್ದಾರೆ. ಇದರಿಂದ ಕೋಪಗೊಂಡ ಲಾಲ್ ದೊಣ್ಣೆ ತೆಗೆದುಕೊಂಡು ಇಬ್ಬರಿಗೂ ಹೊಡೆಯಲು ಆರಂಭಿಸಿದ್ದಾನೆ. ಈ ವೇಳೆ ಪತ್ನಿ ಪಕ್ಕದ ಮನೆಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಆದರೆ ಅಮೃತ್ ಲಾಲ್ ತಾಯಿಯನ್ನು ದೊಣ್ಣೆಯಿಂದ ಹೊಡೆದು ಸ್ಥಳದಲ್ಲೇ ಕೊಂದು ಹಾಕಿದ್ದಾನೆ.

    ಇದಾದ ನಂತರ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಘಟನಾ ಸ್ಥಳದಲ್ಲೇ ಇದ್ದ ಅಮೃತ್ ಲಾಲ್ ನನ್ನು ಬಂಧಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದು ವಾಟರ್ ಟ್ಯಾಂಕ್ ಏರಿದ ಭೂಪ- ಪತ್ನಿ ಬಂದು ಕಾಪಾಡುವಂತೆ ಬೇಡಿಕೆ

    ಕುಡಿದು ವಾಟರ್ ಟ್ಯಾಂಕ್ ಏರಿದ ಭೂಪ- ಪತ್ನಿ ಬಂದು ಕಾಪಾಡುವಂತೆ ಬೇಡಿಕೆ

    – ಶೋಲೆ ಸಿನಿಮಾದಿಂದ ಪ್ರೇರಣೆ

    ಲಕ್ನೋ: ಕಂಠಪೂರ್ತಿ ಮದ್ಯ ಕುಡಿದು ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಕುಡುಕನೋರ್ವ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶ ಅಲಿಗರ್ ಪ್ರದೇಶದಲ್ಲಿ ನಡೆದಿದೆ.

    ಸುಮಾರು 40 ದಿನಗಳ ನಂತರ ಮದ್ಯದಂಗಡಿಗಳು ಓಪನ್ ಆಗಿರುವುದು ಮದ್ಯಪ್ರಿಯರಿಗೆ ಬಿಡುಗಡೆ ಸಿಕ್ಕಿದಂತೆ ಆಗಿದೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಮದ್ಯಪಾನ ಮಾಡಿದ ಕುಡುಕನೋರ್ವ ಶೋಲೆ ಸಿನಿಮಾದಿಂದ ಪ್ರೇರಣೆ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾನೆ. ಕುಡುಕನನ್ನು ಶಶಿ ಎಂದು ಗುರುತಿಸಲಾಗಿದೆ.

    ಮದ್ಯಪಾನ ಮಾಡಿ ಬಂದ ಶಶಿ, ನಗರದ ದೊಡ್ಡ ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೊಲೀಸರು ಮತ್ತು ಮಾಜಿ ಬಿಜೆಪಿ ಮೇಯರ್ ಆದ ಶಕುಂತಲ ಭಾರತಿ ಬಂದು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಮೇಯರ್ ಮತ್ತು ಪೊಲೀಸರು ಎಷ್ಟೇ ಕೇಳಿಕೊಂಡರೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಶಿ ಬೆದರಿಕೆ ಹಾಕಿದ್ದಾನೆ.

    ಪೊಲೀಸರು ಮೈಕ್ ಹಿಡಿದು ಆತನನ್ನು ಮನವೊಲಿಸಿದ್ದಾರೆ. ಆತನನ್ನು ಕರೆತರಲು ಮೇಲೆ ಹೋದರೆ ಅದೇ ಭಯದಲ್ಲಿ ಅವನು ಮೇಲಿಂದ ಜಿಗಿದು ಬೀಡುತ್ತಾನೆ ಎಂಬ ಭಯದಿಂದ ಪೊಲೀಸರು ಮೇಲೆ ಹೋಗದೆ ಕೆಳಗೆ ನಿಂತು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ನಿನ್ನ ಪ್ರೀತಿಯಿಂದ ಕಾಣುವ ಪತ್ನಿ ನಿನಗಾಗಿ ಕಾಯುತ್ತಿದ್ದಾರೆ. ನೀನು ಆತ್ಮಹತ್ಯೆ ಮಾಡಿಕೊಂಡರೆ ಅವರು ಸಾಯುತ್ತಾರೆ ಎಂದು ಹೇಳಿ ಮನವರಿಕೆ ಮಾಡಿ ಕೊನೆಗೆ ಕೆಳಗೆ ಇಳಿಸಿದ್ದಾರೆ.

    ಕೆಳಗೆ ಬಂದ ಶಶಿಯನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಣ್ಣೆ ಕಿಕ್ ಇಳಿದ ಬಳಿಕ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಆತ ನಾನು ಮದ್ಯಪಾನ ಮಾಡಿದ ನಂತರ ನಾನು ಶೋಲೆ ಸಿನಿಮಾದ ಧರ್ಮೇಂದ್ರನಂತೆ ಭಾಸವಾಗಿತು. ನಾನು ಸೂಸೈಡ್ ಮಾಡಿಕೊಳ್ಳಲು ಹೋದಾಗ ನನ್ನ ಹೆಂಡತಿ ಬಂದು ಕಾಪಾಡುತ್ತಾಳೆ ಎಂದು ನಾನು ಹಾಗೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.