Tag: ಮದ್ಯದಂಗಡಿ

  • ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರಲ್ಲಿ ಮದ್ಯದಂಗಡಿಗಳಿಗೆ ಮುಗಿಬಿದ್ದ ಪಾರ್ಟಿಪ್ರಿಯರು!

    ಬೆಂಗಳೂರು: ಕೊರೊನಾ ವೈರಸ್ ಈ ಬಾರಿಯ ಹೊಸ ವರ್ಷಾಚರಣೆರಗೆ ಬ್ರೇಕ್ ಹಾಕಿದೆ. ಬಾರ್, ಪಬ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಜನ ಮದ್ಯ ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದಿದ್ದಾರೆ.

    ಹೌದು. ಚಿಕ್ಕ ಪೇಟೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ಹಾಗೂ ಸರಿಯಾಗಿ ಮಾಸ್ಕ್ ಹಾಕದೇ ಜನ ಓಡಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಫೀಲ್ಡ್ ಗೆ ಇಳಿದಿದ್ದಾರೆ. ಪಾರ್ಟಿ ಮಾಡಲು ಜನ ಮದ್ಯ ಖರೀದಿಸುವಲ್ಲಿ ನಿರತರಾಗಿದ್ದಾರೆ. ಕೊರೊನಾ ನಿಯಮಕ್ಕೆ ಬ್ರೇಕ್ ಹಾಕಿ ಜನ ಮದ್ಯ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಮದ್ಯದಂಗಡಿಗಳ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ನಿಷೇಧಾಜ್ಞೆ ಬೆನ್ನಲ್ಲೇ ಸಾಕಷ್ಟು ಮದ್ಯ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಾಗಿದ್ದು, ನಾಳೆ ಬೆಳಗ್ಗೆವರೆಗೆ ಮುಂದುವರಿಯಲಿದೆ. ಈ ಹಿಂದೆ ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲು ನಿರ್ಧರಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ರೂಪಾಂತರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಬೆಂಗಳೂರಿನಲ್ಲಿ ಹೊಸ ಮಾದರಿಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ದೃಷ್ಟಿಯಿಂದ ಇಂದು ಮಧ್ಯಾಹ್ನದಿಂದಲೇ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

  • ಮದ್ಯಪ್ರಿಯರಿಗೆ ಮತ್ತೊಂದು ಶಾಕ್- ಕಳೆದ 3 ದಿನಗಳಿಂದ ಸಿಗ್ತಿಲ್ಲ ನೆಚ್ಚಿನ ಬ್ರಾಂಡ್

    ಮದ್ಯಪ್ರಿಯರಿಗೆ ಮತ್ತೊಂದು ಶಾಕ್- ಕಳೆದ 3 ದಿನಗಳಿಂದ ಸಿಗ್ತಿಲ್ಲ ನೆಚ್ಚಿನ ಬ್ರಾಂಡ್

    ಬೆಂಗಳೂರು: ಲಾಕ್‍ಡೌನ್ ಸಡಲಿಕೆಯ ನಂತರ ಮದ್ಯ ಸಿಗುತ್ತಿದೆ ಎಂದು ಮದ್ಯಪ್ರಿಯರು ಸಖತ್ ಖುಷಿಪಟ್ಟಿದ್ದರು. ಆದರೆ ಈಗ ಮದ್ಯಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುವಂತೆ ಆಗಿದೆ.

    ಕಳೆದ ಮೂರು ದಿನಗಳಿಂದ ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಮದ್ಯಪ್ರಿಯರು ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.33 ಫಾರ್ಮುಲಾದಲ್ಲಿ ಮದ್ಯ ತಯಾರಿಕಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ ನಿರೀಕ್ಷೆಯಷ್ಟು ಮದ್ಯ ಸರಬರಾಜು ಆಗುತ್ತಿಲ್ಲ. ಈ ಕಾರಣದಿಂದ ಮದ್ಯ ಪ್ರಿಯರು ಶಾಕ್‍ಗೆ ಒಳಗಾಗಿದ್ದಾರೆ.

    ಹಳೆ ಸ್ಟಾಕ್ ಖಾಲಿ ಮಾಡಿ ಡಿಪ್ಪೋದಲ್ಲಿ ಇದ್ದ ಸ್ಟಾಕ್ ಅನ್ನು ಮದ್ಯದಂಗಡಿಗಳು ತರಿಸಿ ಮಾರಾಟ ಮಾಡಲಾಗುತ್ತಿವೆ. ಆದರೆ ಬಹುತೇಕ ಎಂ.ಆರ್.ಪಿ, ಎಂಎಸ್‍ಐಎಲ್‍ಗಳಲ್ಲಿ ಬ್ರಾಂಡೆಡ್ ಡ್ರಿಂಕ್ಸ್ ಬಾಟಲ್‍ಗಳ ಕೊರತೆ ಉಂಟಾಗಿದೆ. ಈ ಕಾರಣಕ್ಕೆ ಲಾಡ್ಜ್, ಕ್ಲಬ್, ಬಾರ್ ಗಳ ಸ್ಟಾಕ್ ಖಾಲಿ ಮಾಡಲು ಸರ್ಕಾರ ಸೂಚನೆ ನೀಡಿದ್ದ ಹಿನ್ನೆಲೆ ಅಲ್ಲಿ ತಮ್ಮ ನೆಚ್ಚಿನ ಬ್ರಾಂಡ್ ಕೊಂಡು ಮದ್ಯ ಪ್ರಿಯರು ಕುಡಿಯುತ್ತಿದ್ದಾರೆ.

    ಆದರೆ ಇತ್ತೀಚೆಗೆ ಅಲ್ಲೂ ಕೂಡ ಸ್ಟಾಕ್ ಖಾಲಿಯಾದ ಹಿನ್ನೆಲೆ ಎಂಎಸ್‍ಐಎಲ್, ಎಂ.ಆರ್.ಪಿಗಳಲ್ಲಿ ನಿಗದಿತ ಬ್ರಾಂಡ್‍ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕೆಲವರು ಅನಿವಾರ್ಯವಾಗಿ ಇರುವ ಬ್ರಾಂಡ್‍ಗೆ ಹೊಂದಾಣಿಕೆ ಮಾಡಿಕೊಂಡು ಕುಡಿಯುತ್ತಿದ್ದಾರೆ. ಆದರೆ ನೆಚ್ಚಿನ ಬ್ರಾಂಡ್‍ಗೆ ಸಿಮೀತವಾಗಿರುವ ಮದ್ಯವ್ಯಸನಿಗಳಿಗೆ ಬಹುತೇಕ ನಿರಾಸೆಯಾಗಿದೆ. ತಮ್ಮ ನೆಚ್ಚಿನ ಬ್ರಾಂಡ್ ಸಿಗದೆ ಪರದಾಡುತ್ತಿದ್ದಾರೆ.

    ದೇಶದಲ್ಲಿ ಸಂಪೂರ್ಣ ಲಾಕ್‍ಡೌನ್ ಸಡಲಿಕೆ ಆಗದ ಹಿನ್ನೆಲೆ ಬೇರೆ ರಾಜ್ಯಗಳಿಂದ ಬರಬೇಕಿದ್ದ ಎಣ್ಣೆ ಸ್ಟಾಕ್ ಸಹ ಸರಿಯಾಗಿ ಬರುತ್ತಿಲ್ಲ. ಇನ್ನೊಂದೆಡೆ ಬೇಡಿಕೆಗೆ ಪೂರಕವಾದ ಮದ್ಯ ಉತ್ಪಾದನೆಯು ಆಗುತ್ತಿಲ್ಲ. ಕಳೆದ ಮೂರು ದಿನದದಿಂದ ಮದ್ಯ ಪ್ರಿಯರಿಗೆ ತನ್ನ ನೆಚ್ಚಿನ ಬ್ರಾಂಡ್ ಸರಿಯಾಗಿ ಸಿಗುತ್ತಿಲ್ಲ.

  • ಬಳ್ಳಾರಿಯ ಗಡಿಭಾಗದ ಮದ್ಯದಂಗಡಿಗಳು ಬಂದ್ – ಆನಂದ್ ಸಿಂಗ್

    ಬಳ್ಳಾರಿಯ ಗಡಿಭಾಗದ ಮದ್ಯದಂಗಡಿಗಳು ಬಂದ್ – ಆನಂದ್ ಸಿಂಗ್

    ಬಳ್ಳಾರಿ: ಜಿಲ್ಲೆಯ ಗಡಿಭಾಗದ ಮದ್ಯದಂಗಡಿಗಳನ್ನ ಬಂದ್ ಮಾಡುವಂತೆ ನಾನು ಜಿಲ್ಲಾಧಿಕಾರಿಗೆ ಆದೇಶ ಕೊಟ್ಟಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ವಿರೋಧ ಇಲ್ಲ. ಆದರೆ ನಮ್ಮ ಬಳ್ಳಾರಿ ಜಿಲ್ಲೆಗೆ ಆಂಧ್ರ ಪ್ರದೇಶದಿಂದ ಮದ್ಯ ಖರೀದಿಗೆ ಬರುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಾದ ಕಾರಣ ಬಳ್ಳಾರಿ ಗಡಿ ಭಾಗಕ್ಕೆ ರಹದಾರಿ ಮೂಲಕ ಬರುತ್ತಿದ್ದಾರೆ ಎಂದರು.

    ಎಲ್ಲಾ ಕಡೆ ಚೆಕ್ ಪೋಸ್ಟ್‌ಗಳಿವೆ. ಆದರೂ ಅಲ್ಲಿನ ಜನರು ಇಲ್ಲಿಗೆ ಬಂದು ಮದ್ಯ ಖರೀದಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೇ ಒಂದು ರೀತಿ ದಂಧೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಡಿಸಿಗೆ ಆದೇಶ ನೀಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

    ನಗರದ ಶಾಸಕರು ಇಡೀ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮದ್ಯ ಬಂದ್ ಮಾಡುವ ಯೋಚನೆ ಇದೆ. ಈ ಬಗ್ಗೆ ಶಾಸಕರು ಸಹ ಸಲಹೆ ನೀಡಿದ್ದು, ಅದರ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ಬಳ್ಳಾರಿ ಜಿಲ್ಲೆಯ ಗಡಿಭಾಗದ ಮದ್ಯ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದೇನೆ ಎಂದು ತಿಳಿಸಿದರು.

  • ಮತ್ತೆ ಅಧಿಕಾರಕ್ಕೆ ಬರೋದು ಮರೆತುಬಿಡಿ: ತಮಿಳುನಾಡು ಸರ್ಕಾರದ ಮೇಲೆ ರಜನಿ ಗರಂ

    ಮತ್ತೆ ಅಧಿಕಾರಕ್ಕೆ ಬರೋದು ಮರೆತುಬಿಡಿ: ತಮಿಳುನಾಡು ಸರ್ಕಾರದ ಮೇಲೆ ರಜನಿ ಗರಂ

    ಚೆನ್ನೈ: ಮತ್ತೆ ಅಧಿಕಾರಕ್ಕೆ ಬರುವುದನ್ನು ಮರೆತುಬಿಡಿ ಎಂದು ನಟ ರಜನಿಕಾಂತ್ ಅವರು ತಮಿಳುನಾಡು ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

    ಕೊರೊನಾ ಸಮಯದಲ್ಲಿ ಮದ್ಯ ಮಾರಬಾರದು ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಹೈಕೋರ್ಟಿನ ಈ ಅಜ್ಞೆಗೆ ತಡೆಯಾಜ್ಞೆ ನೀಡುವಂತೆ ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರಕ್ಕೆ ರಜನಿಕಾಂತ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಜನಿಕಾಂತ್ ಅವರು, ಈ ಸಮಯದಲ್ಲಿ ರಾಜ್ಯ ಸರ್ಕಾರ ಮದ್ಯದಂಗಡಿಗಳನ್ನು ತೆರೆದರೆ ಮತ್ತೆ ಅವರು ಮುಂದಿನ ಬಾರಿ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕು. ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಮದ್ಯದಂಗಡಿಯನ್ನು ಓಪನ್ ಮಾಡುವುದರ ಬದಲು ಬೊಕ್ಕಸ ತುಂಬಿಸಲು ಬೇರೆ ಉತ್ತಮ ಮಾರ್ಗಗಳನ್ನು ದಯವಿಟ್ಟು ಹುಡುಕಿ ಎಂದು ಟ್ವೀಟ್ ಮಾಡಿದ್ದಾರೆ.

    ಕೊರೊನಾ ಹಿಡಿತಕ್ಕೆ ಸಿಗದ ಸಮಯದಲ್ಲಿ ತಮಿಳುನಾಡಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಮದ್ಯದಂಗಡಿಗಳನ್ನು ಮತ್ತೆ ಓಪನ್ ಮಾಡಲು ತೀರ್ಮಾನಿಸಿತ್ತು. ಇದಕ್ಕೆ ಮದ್ರಾಸ್ ಹೈಕೋಟ್ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ರಜನಿಕಾಂತ್ ರೀತಿಯಲ್ಲೇ ನಟ ಕಮಲ್ ಹಾಸನ್ ಡಿಎಂಕೆಯ ಎಂಕೆ ಸ್ಟಾಲಿನ್ ಅವರು ಕೂಡ ವಿರೋಧ ವ್ಯಕ್ತಪಸಿದ್ದಾರೆ.

    ರಾಜ್ಯ ಸರ್ಕಾರದ ವಿರುದ್ಧ ರಜನಿಕಾಂತ್ ಟ್ವೀಟ್ ಮಾಡುತ್ತಿದ್ದಂತೆ ತಮ್ಮ ನೆಚ್ಚಿನ ನಟನ ಪರವಾಗಿ ನಿಂತಿರುವ ಥಲೈವಾ ಫ್ಯಾನ್ಸ್, ರಜನಿಕಾಂತ್ ಅವರದ್ದು ನೇರಮಾತು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಜೊತಗೆ ಇನ್ನೂ ಕೆಲವರು ರಜನಿ ಅವರು ಜನರ ಮನಸ್ಸುನ್ನು ಅರ್ಥಮಾಡಿಕೊಂಡ ಅದರ ಪರವಾಗಿ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಮದ್ರಾಸ್ ಹೈಕೋರ್ಟ್, ಮದ್ಯದಂಗಡಿಗಳ ಮುಂದೆ ಸರಿಯಾದ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿಲ್ಲ. ಜೊತೆಗೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಅಪಾಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಸೂಚಿಸಿತ್ತು. ಇದಾದ ನಂತರ ಶನಿವಾರ ತಮಿಳುನಾಡು ರಾಜ್ಯ ಸರ್ಕಾರ ಹೈಕೋರ್ಟಿನ ಅಜ್ಞೆಯನ್ನ ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.

    ಕೊರೊನಾದಿಂದ ದೇಶ ಲಾಕ್‍ಡೌನ್ ಆದ ಬಳಿಕ ಮಾರ್ಚ್ 25ರಿಂದ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಮೇ 4ರಂದು ಸ್ವಲ್ಪ ಪ್ರಮಾಣದಲ್ಲಿ ಲಾಕ್‍ಡೌನ್ ಅನ್ನು ಸಡಿಲಿಕೆ ಮಾಡಿದ ಕಾರಣ ಕೆಲ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಕೆಲ ಷರತ್ತುಗಳನ್ನು ವಿಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಆದರೆ ಕೆಲ ಕಡೆ ಈ ನಿಯಮಗಳು ಪಾಲನೆ ಆಗಿಲ್ಲ.

  • ಕಲ್ಲೆಸೆದು ಮದ್ಯದ ಅಂಗಡಿ ಬಂದ್ ಮಾಡಿಸಿದ ಮಹಿಳೆಯರು

    ಕಲ್ಲೆಸೆದು ಮದ್ಯದ ಅಂಗಡಿ ಬಂದ್ ಮಾಡಿಸಿದ ಮಹಿಳೆಯರು

    ಹಾವೇರಿ: ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಮದ್ಯದ ಅಂಗಡಿಗಳ ಆರಂಭದ ದಿನವೇ ಮಹಿಳೆಯರು ಕಲ್ಲೆಸೆದು ಮದ್ಯದ ಅಂಗಡಿಗಳನ್ನ ಬಂದ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಮೇ 4ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಒಂದು ಎಂಎಸ್‍ಐಎಲ್ ಮತ್ತು ಎರಡು ಎಂಆರ್‌ಪಿ ಮದ್ಯದ ಅಂಗಡಿಗಳಿಗೆ ಮಹಿಳೆಯರು ಕಲ್ಲೆಸೆದು ಕೆಲಕಾಲ ಅಂಗಡಿಗಳನ್ನ ಬಂದ್ ಮಾಡಿಸಿದರು. ಲಾಕ್‍ಡೌನ್ ವೇಳೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದರಿಂದ ಪುರುಷರು ಮನೆಯಲ್ಲಿ ಸುಮ್ಮನಿದ್ದರು. ಆದರೆ ಈಗ ಮದ್ಯದ ಅಂಗಡಿಗಳು ಆರಂಭ ಆಗಿದ್ದರಿಂದ ಮತ್ತೆ ಕುಟುಂಬಗಳು ಹಾಳಾಗುತ್ತವೆ ಎಂದು ಗರಂ ಆಗಿದ್ದ ಮಹಿಳೆಯರು ಮದ್ಯದಂಗಡಿಗಳ ಮೇಲೆ ಕಲ್ಲೆಸೆದು, ಅಂಗಡಿಗಳನ್ನ ಬಂದ್ ಮಾಡಿಸಿ ತಮ್ಮ ಆಕ್ರೋಶ ಹೊರಹಾಕಿದರು.

    ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರೂ ಕ್ಯಾರೇ ಮಾಡದೆ ಮದ್ಯದ ಅಂಗಡಿಗಳ ಮೇಲೆ ಕಲ್ಲೆಸೆದು ಅಂಗಡಿಗಳನ್ನ ಮಹಿಳೆಯರು ಬಂದ್ ಮಾಡಿಸಿದರು. ಅಂಗಡಿಗಳ ಮೇಲೆ ಮಹಿಳಾ ಮಣಿಗಳು ಕಲ್ಲೆಸೆದು ಮದ್ಯದಂಗಡಿ ಬಂದ್ ಮಾಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ರಾಯಚೂರಿನಲ್ಲಿ ಮಧ್ಯಾಹ್ನವೇ ಮದ್ಯದಂಗಡಿಗಳು ಕ್ಲೋಸ್

    ರಾಯಚೂರಿನಲ್ಲಿ ಮಧ್ಯಾಹ್ನವೇ ಮದ್ಯದಂಗಡಿಗಳು ಕ್ಲೋಸ್

    – ಅಂತರರಾಜ್ಯ ಗಡಿಯಲ್ಲಿ ಎಣ್ಣೆ ಮಾರಾಟ ಇಲ್ಲ
    – ಮೊದಲ ದಿನ 2.5 ಕೋಟಿ ರೂ. ಮದ್ಯ ಸೇಲ್

    ರಾಯಚೂರು: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ಮದ್ಯದಂಗಡಿಗಳನ್ನ ತೆರೆದಿರುವ ಕಾರಣಕ್ಕೆ ರಾಯಚೂರಿನಲ್ಲಿ ರಸ್ತೆಗಳಲ್ಲಿ ಜನರ ಓಡಾಟವೂ ಹೆಚ್ಚಾಗಿದೆ. ಮದ್ಯದಂಗಡಿ ಮುಂದೆ ಜನರ ಕ್ಯೂ ದೊಡ್ಡದಿದೆ ಇದರ ಜೊತೆಗೆ ಜನ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಎಲ್ಲ ಬಂದ್ ಮಾಡಲಾಗಿದೆ. ನಿನ್ನೆ ಸಂಜೆ 7 ಗಂಟೆವರೆಗೆ ಮದ್ಯದಂಗಡಿ ತೆರೆಯಲಾಗಿತ್ತು. ಜನರ ಓಡಾಟ ವಿಪರೀತವಾಗಿದ್ದರಿಂದ ಇಂದಿನಿಂದ ಮಧ್ಯಾಹ್ನ ಎರಡು ಗಂಟೆಗೆ ಮದ್ಯದಂಗಡಿ ಬಂದ್ ಮಾಡಲಾಗುತ್ತಿದೆ.

    ಜಿಲ್ಲೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಗಡಿರಾಜ್ಯಗಳ ಭೀತಿ ಹೆಚ್ಚಾಗಿರುವುದರಿಂದ ಗಡಿಗಳಿಂದ 5 ಕಿ.ಮೀ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನ ಬಂದ್ ಮಾಡಿದ್ದು, ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಗಡಿ ಗ್ರಾಮಗಳ ಜನ ಮದ್ಯಕ್ಕಾಗಿ ರಾಯಚೂರಿಗೆ ಬರುತ್ತಿದ್ದಾರೆ. ಬೆಳಗಿನ ಜಾವ ಬಂದು ಕ್ಯೂ ನಿಲ್ಲುತ್ತಿದ್ದಾರೆ.

    ಮದ್ಯದಂಗಡಿ ಆರಂಭವಾದ ಮೊದಲನೇ ದಿನವೇ ರಾಯಚೂರಿನಲ್ಲಿ ಭರ್ಜರಿ ವ್ಯಾಪಾರವಾಗಿದೆ. 5,900 ಕೇಸ್ ನ 53,750 ಲೀಟರ್ ಮದ್ಯ ಹಾಗೂ 1,730 ಕೇಸ್‍ನ 13,895 ಲೀಟರ್ ಬಿಯರ್ ನಿನ್ನೆ ಮಾರಾಟವಾಗಿದ್ದು, 2 ಕೋಟಿ 50 ಲಕ್ಷ ರೂಪಾಯಿ ಮದ್ಯವನ್ನ ಮದ್ಯಪ್ರಿಯರು ಖರೀದಿಸಿದ್ದಾರೆ. ಜಿಲ್ಲೆಯ 89 ವೈನ್ ಶಾಪ್, 29 ಎಂಎಸ್‍ಐಎಲ್ ಅಂಗಡಿ ಸೇರಿ 118 ಮದ್ಯದಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಇಂದಿನಿಂದ ಮಧ್ಯಾಹ್ನವೇ ಮದ್ಯದಂಗಡಿ ಬಂದ್ ಆಗುತ್ತಿರುವ ಹಿನ್ನೆಲೆ ದೂರದಿಂದ ಬಂದವರು ನಿರಾಸೆಯಿಂದ ಮರಳುತ್ತಿದ್ದಾರೆ.

  • ರಾಜ್ಯದಲ್ಲಿ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

    ರಾಜ್ಯದಲ್ಲಿ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

    – 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟ

    ಬೆಂಗಳೂರು: ಬರೋಬ್ಬರಿ 41 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯ ಪ್ರಿಯರಿಗೆ ಲಾಕ್‍ಡಾನ್ ಸಡಿಲಿಕೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮದ್ಯ ಲಭ್ಯವಾಗಿದೆ. ರಾಜ್ಯಾದ್ಯಂತ ಒಂದೇ ದಿನ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

    ನಿರ್ಬಂಧಿತ ವಲಯ ಹೊರತು ಪಡಿಸಿ ರಾಜ್ಯದ ಎಲ್ಲ ಕಡೆ ಮದ್ಯದಂಗಡಿಗಳು ತೆರೆದಿದ್ದವು. ಪರಿಣಾಮ ಬಹುತೇಕ ಮದ್ಯದಂಗಡಿಗಳಲ್ಲಿದ್ದ ಸ್ಟಾಕ್ ಖಾಲಿಯಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 60 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗುತ್ತಿತ್ತು. ಬಹು ದಿನಗಳ ಬಳಿಕ ಮತ್ತೆ ವಹಿವಾಟು ಆರಂಭವಾದ ಕಾರಣ ನಿರೀಕ್ಷೆಯಂತೆಯೇ ಇಂದು ಮದ್ಯ ಮಾರಾಟ ಜೋರಾಗಿದೆ. ಇದನ್ನು ಓದಿ: ರಾಯಚೂರಿನಲ್ಲಿ ಹೈ ಬ್ರಾಂಡ್ ಮದ್ಯ ಖಾಲಿ- ಕ್ಯೂ ನಿಂತವರಿಗೆ ನಿರಾಸೆ

    ಇಂದು ಒಟ್ಟಾರೆ 3.9 ಲಕ್ಷ ಲೀಟರ್ ಬಿಯರ್ ಹಾಗೂ 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟವಾಗಿದೆ. ಸರ್ಕಾರ ಹಲವು ಷರತ್ತುಗಳ ಅನ್ವಯ ಇಂದು ಮದ್ಯದಂಗಡಿ ತೆರಯಲು ಅನುಮತಿ ನೀಡಿತ್ತು. ಮೊದಲ ದಿನವಾದ ಕಾರಣ ಬಹುತೇಕ ಭಾಗಗಳಲ್ಲಿ ಮದ್ಯದಂಗಡಿಗಳ ಎದುರು ದೂರದವರೆಗೆ ಸಾಲು ಕಂಡು ಬಂದಿತ್ತು.

    ಉಳಿದಂತೆ ಮದ್ಯದ ದಾಸ್ತಾನಿನ ಬಗ್ಗೆ ಸ್ಪಷ್ಟನೆ ನೀಡಿರುವ ಅಬಕಾರಿ ಇಲಾಖೆ, ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಮಾಡಲಾಗಿದೆ. ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿರುತ್ತದೆ. ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುದಾರರ ಸಭೆಯನ್ನು ಕರೆದು ಈಗಾಗಲೇ ತಿಳುವಳಿಕೆಯನ್ನು ನೀಡಿದ್ದಾರೆ ಎಂದು ತಿಳಿಸಿದೆ. ಇದನ್ನು ಓದಿ: ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    ಹಲವು ಸ್ಥಳಗಳಲ್ಲಿ ಸಾಮಾಜಿಕ ಅಂತರ ಮರೆತು ಮದ್ಯದಂಗಡಿಗಳ ಎದುರು ಜನರು ಸೇರಿದ್ದರು. ಈ ಕುರಿತು ಕ್ರಮಕೈಗೊಳ್ಳುವ ಕುರಿತು ಇಲಾಖೆ ತಿಳಿಸಿದೆ. ಅಲ್ಲದೇ ಎಂ.ಆರ್.ಪಿ ಬೆಲೆಯನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಬಂದರೆ ಪರಿಶೀಲನೆ ನಡೆಸಿ ಕಾನೂನಿ ಅನ್ವಯ ಅಮಾನತು ಮಾಡುವ ಕುರಿತು ಕ್ರಮಕೈಗೊಳ್ಳಲಾಗಿದೆ. ಅಬಕಾರಿ ಆಯುಕ್ತರು ಆಗಿಂದಾಗೆ ಬೇಕಾದ ಕ್ರಮಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇದನ್ನು ಓದಿ: ಅಂಗಡಿ ಓಪನ್ ಮಾಡಿ ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ

  • ಮದ್ಯದಂಗಡಿ ಕಳವು ಪ್ರಕರಣದಲ್ಲಿ ಮಾಲೀಕನೇ ಕಳ್ಳ!

    ಮದ್ಯದಂಗಡಿ ಕಳವು ಪ್ರಕರಣದಲ್ಲಿ ಮಾಲೀಕನೇ ಕಳ್ಳ!

    -ನಗರಸಭೆ ಸದಸ್ಯ ಸೇರಿ 4 ಮಂದಿ ಬಂಧನ

    ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರಿನಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಅತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

    ಏಪ್ರಿಲ್ 30ರ ರಾತ್ರಿ ನಗರ ಹೊರವಲಯದ ಗೋಲ್ಡನ್ ಬಾರಿನ ಸಿಸಿಟಿವಿ ಒಡೆದು ಹಾಕಿ, ಬಾರಿನ ಹಿಂಭಾಗದ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಮೇ 1ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬಾರ್ ಮಾಲೀಕ, ನಗರಸಭೆ ಸದಸ್ಯ ದೀಪಕ್ ಹಾಗೂ ಆತನ ಸಹಚರರೇ ಕಳ್ಳತನದ ರೂವಾರಿಗಳು ಎಂಬ ಅಂಶ ಬೆಳಕಿಗೆ ಬಂದಿದೆ.

    ಲಾಕ್‍ಡೌನ್ ಸಮಯದಲ್ಲಿ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಳಕ್ಕೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿ ಹಣ ಗಳಿಸಲು ಮಾಲೀಕ, ಆತನ ಸಹಚರರು ಸಂಚು ರೂಪಿಸಿದ್ದರು. ಇದರಂತೆ ಬಾರ್ ಗೋಡೆಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಿದ್ದರು. ತದನಂತರ ತಮ್ಮ ಬಾರ್ ಕಳ್ಳತನ ಆಗಿದೆ ಎಂದು ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದರು.

    ಪೊಲೀಸರು ಹಾಗೂ ಅಬಕಾರಿ ಇಲಾಖಾಧಿಕಾರಿಗಳಿಗೆ ಮಂಕು ಬೂದಿ ಎರಚಲು ಹೋದ ಮಾಲೀಕ ಈಗ ಜೈಲು ಸೇರುವಂತಾಗಿದೆ. ಲಾಕ್‍ಡೌನ್ ವೇಳೆ ಜಿಲ್ಲೆಯ 4 ಕಡೆ ಸಹ ಮದ್ಯದಂಗಡಿಗಳ ಕಳವು ಪ್ರಕರಣಗಳು ನಡೆದಿದೆ. ಈ ಪ್ರಕರಣ ಇದೀಗ ಬಾರ್ ಮಾಲೀಕರ ಮೇಲೆಯೇ ಅನುಮಾನ ಪಡುವಂತೆ ಮಾಡಿದೆ. ಪ್ರಕರಣಕ್ಕೆ ಸಂಬಧಿಸಿದಂತೆ ಬಂಧಿತರಿಂದ 07 ಕ್ರೇಟ್ ಮದ್ಯ, ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಆಟೋ, ಬೈಕ್ ವಶಕ್ಕೆ ಪಡೆಯಲಾಗಿದೆ.

  • ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    – ಕಂಟೈನ್ಮೆಂಟ್ ಝೋನ್‍ನಲ್ಲಿ ಇಲ್ಲ ಎಣ್ಣೆ ಮಾರಾಟ

    ಬಳ್ಳಾರಿ: ಕಳೆದ 41 ದಿನಗಳಿಂದ ಮದ್ಯಕ್ಕಾಗಿ ಕಾದು ಕುಳಿತಿದ್ದ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಿಗೆ ನಿರಾಶೆ ಎದುರಾಗಿದೆ. ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ್ದ ಸರ್ಕಾರ ಸದ್ಯ ಕೆಲ ಸಡಿಲಿಕೆಯನ್ನು ಜಾರಿ ಮಾಡಿದೆ. ಲಾಕ್‍ಡೌನ್ ಜಾರಿ ಇದ್ದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜಿಲ್ಲೆಯ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವುದರಿಂದ ಮದ್ಯ ಪ್ರಿಯಯರು ನಿರಾಸೆ ಅನುಭವಿಸಿದ್ದಾರೆ.

    ಹಳದಿ ವಲಯದಲ್ಲಿರುವ ಜಿಲ್ಲೆಯ ಹೊಸಪೇಟೆ ನಗರ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮದ್ಯ ಮಾರಾಟ ಜೋರಾಗಿದೆ. ಆದರೆ ಹೊಸಪೇಟೆ ನಗರದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ನಗರವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಝೋನ್ ಮಾಡಿಲಾಗಿರುವ ಕಾರಣ ಮದ್ಯ ಮಾರಾಟ ಮಾಡಲು ನಿರಾಕರಿಸಲಾಗಿದೆ.

    ಇತ್ತ ಮದ್ಯ ದಂಗಡಿ ತೆರೆಯಲಿದೆ ಎಂದು ಭಾವಿಸಿದ್ದ ಹಲವರು ಬೆಳಿಗ್ಗೆ ಇಂದಲೇ ಹೊಸಪೇಟೆ ನಗರದಲ್ಲಿರುವ ಮದ್ಯದಂಗಡಿ ಎದುರು ಕಾದು ಕುಳಿತ್ತಿದ್ದರು. ಆದರೆ ಶಾಪ್ ಮಾತ್ರ ಓಪನ್ ಆಗಲೇ ಇಲ್ಲಾ. ಪರಿಣಾಮ ಅಂಗಡಿಯ ಎದುರು ಕಾದು ಕಾದು ಸುಸ್ತಾದ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿ ಬೇಸರದಿಂದಲೇ ಮನೆಗಳತ್ತ ತೆರಳಿದರು.

  • ಮದ್ಯದಂಗಡಿ ತೆರೆದಿದ್ದಕ್ಕೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡ ಯುವಕ

    ಮದ್ಯದಂಗಡಿ ತೆರೆದಿದ್ದಕ್ಕೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡ ಯುವಕ

    ಕೋಲಾರ: ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಮದ್ಯದಂಗಡಿಗಳು ಪುನರಾರಂಭಗೊಂಡಿದ್ದು, ಮದ್ಯಪ್ರಿಯರು ಬೆಳಗಿನಿಂದ ಕಾದು ಮದ್ಯ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗಿನಿಂದ ಸಾಲುಗಟ್ಟಿ ನಿಂತಿದ್ದ ಮದ್ಯ ವ್ಯಸನಿಗಳು ಅಂಗಡಿ ತೆರೆಯುವುದನ್ನು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಜಿಲ್ಲೆಯಲ್ಲಿ 74 ಮದ್ಯದಂಗಡಿಗಳಿದ್ದು, ಬಹುತೇಕ ಎಲ್ಲ ಮದ್ಯದಂಗಡಿಗಳ ಮುಂದೆ ಬೆಳಗ್ಗೆ ಆರು ಗಂಟೆಯಿಂದಲೇ ಎಣ್ಣೆ ಪ್ರಿಯರು ಸಾಲುಗಟ್ಟಿ ನಿಂತಿದ್ದರು. ಕೆಲವರು ಮದ್ಯದಂಗಡಿ ಮುಂದೆ ಗಂಧದಕಡ್ಡಿ ಹಚ್ಚಿ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

    ಇನ್ನೂ ವಿಶೇಷ ಎಂಬಂತೆ ಕೆಲವರು ವಿಡಿಯೋ ಕಾಲ್ ಮಾಡಿ ಮದ್ಯದಂಗಡಿ ತೆರೆದಿರುವ ಬಗ್ಗೆ ಸ್ನೇಹಿತರಿಗೆ ತೋರಿಸಿ ಸಂತಸ ಹಂಚಿಕೊಂಡರು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಮದ್ಯದಂಗಡಿಗಳು ತೆರೆಯಬೇಕು, ಒಬ್ಬರಿಗೆ 750 ಎಂ.ಎಲ್. ಗಿಂತ ಹೆಚ್ಚು ಮದ್ಯ ಮಾರಾಟಮಾಡಬಾರದು, ಮಾಸ್ಕ್ ಧರಿಸದಿದ್ದವರಿಗೆ ಮದ್ಯ ಇಲ್ಲ ಎಂಬ ನಿಯಮ ಪಾಲಿಸಲಾಗುತ್ತಿದೆ. ಅಲ್ಲದೆ ಸಿಸಿ ಟಿವಿ ಅಳವಡಿಕೆ ಕಡ್ಡಾಯ, ಸಾಮಾಜಿಕ ಅಂತರ ಪಾಲಿಸಬೇಕು ಎಂಬ ಷರತ್ತುಗಳನ್ನು ಜಿಲ್ಲಾಡಳಿತ ವಿಧಿಸಿದೆ.