Tag: ಮತದಾರರ ಗುರುತಿನ ಚೀಟಿ

  • ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ವೋಟರ್ ಐಡಿಗೆ ಆಧಾರ್ ಲಿಂಕ್ ಕಡ್ಡಾಯ?

    ನವದೆಹಲಿ: ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕುರಿತು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ.

    ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಹಾಗೂ ಸರ್ಕಾರದ ಸವಲತ್ತು ಪಡೆಯುವ ಯೋಜನೆಗಳಲ್ಲಿ ಮಾತ್ರವೇ ಬಳಸುವಂತೆ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಯನ್ನು ಆಧಾರ್ ನೊಂದಿಗೆ ಜೋಡಿಸಲು ಮುಂದಾಗುತ್ತಿದೆ.

    ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕೆಂದರೆ ಮೊದಲು ಜನಪ್ರತಿನಿಧಿ ಕಾಯ್ದೆ-1951 ರ ತಿದ್ದುಪಡಿಯಾಗಬೇಕಿದೆ. ಹೀಗಾಗಿ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶೀಘ್ರವೇ ಪ್ರಸ್ತಾವನೆಯನ್ನು ಸಲ್ಲಿಸಲು ಮುಂದಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.

    ಇದಲ್ಲದೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಎಂ.ಎಲ್.ರವಿ ಎಂಬವರು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಬಗ್ಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಈ ಬಗ್ಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲವೆಂದು ಚುನಾವಣಾ ಆಯೋಗ ಹೇಳಿತ್ತು.

    ಜೋಡಣೆಯಿಂದ ಉಪಯೋಗವೇನು?
    ದೇಶದಲ್ಲಿರುವ ಎಲ್ಲಾ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿದರೆ, ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಅಕ್ರಮ ಮತದಾನದ ಹಾವಳಿ ನಿಯಂತ್ರಣವಾಗುತ್ತದೆ. ಅಲ್ಲದೇ ಎರಡೆರಡು ಗುರುತಿನ ಚೀಟಿಗಳನ್ನು ಪಡೆದವರ ಕಾರ್ಡು ಗಳು ರದ್ದಾಗುತ್ತವೆ. ಇದರಿಂದಾಗಿ ದೇಶದಲ್ಲಿರುವ ಮತದಾರರ ನಿಖರ ಸಂಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಡಲಾಳದಲ್ಲಿ ಮಿಲೇನಿಯಮ್ ಮತದಾರರಿಗೆ ಗುರುತಿನ ಚೀಟಿ ವಿತರಣೆ

    ಕಡಲಾಳದಲ್ಲಿ ಮಿಲೇನಿಯಮ್ ಮತದಾರರಿಗೆ ಗುರುತಿನ ಚೀಟಿ ವಿತರಣೆ

    ಕಾರವಾರ: 18 ವರ್ಷ ಪೂರ್ಣಗೊಳಿಸಿದವರು ಮತದಾರರ ಗುರುತಿನ ಚೀಟಿ ಪಡೆಯುವುದು ಎಂದರೆ ಕಷ್ಟದ ಕೆಲಸ. ಸರ್ಕಾರಿ ಕಚೇರಿಗೆ ಅಲೆದು ಮತದಾನ ಗುರುತಿನ ಚೀಟಿ ಮಾಡಿಸಿದರು, ಅದು ಕೈ ಸೇರಲು ತಿಂಗಳುಗಳೇ ಬೇಕು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ವಿಶಿಷ್ಟವಾಗಿ ಗುರುತಿನ ಚೀಟಿ ನೀಡುವ ಅಭಿಯಾನ ನಡೆಸಿದೆ.

    ಹೌದು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಮತದಾರ ಪಟ್ಟಿಯಿಂದ ಹೊರಗುಳಿದ ಹಾಗೂ ಹೊಸದಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡಿ ಪ್ರಚಾರ ನಡೆಸುತ್ತಿದೆ. ಮತದಾರರಿಗೆ ಜಿಲ್ಲೆಯಾದ್ಯಾಂತ ಮಾಹಿತಿ ಹಾಗೂ ಕಾರ್ಡ್ ವಿತರಣೆಯನ್ನು ಶೀಘ್ರದಲ್ಲಿ ನೀಡುತ್ತಿದೆ. ಇದರ ಒಂದು ಭಾಗವಾಗಿ ದೇಶದಲ್ಲಿಯೇ ಮೊದಲ ಬಾರಿ ಮಿಲೇನಿಯಮ್ ಮತದಾರರಿಗೆ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಮತದಾರರ ಗುರುತಿನ ಚೀಟಿ ನೀಡಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ.

    ಏನಿದು ಮಿಲೇನಿಯಮ್ ಮತದಾರ: 2000 ನೇ ವರ್ಷದ ಜನವರಿ 1 ರಂದು ಜನಿಸಿದವರು ಈ ವರ್ಷ 18 ವರ್ಷ ಕ್ಕೆ ಕಾಲಿಟ್ಟಿದ್ದರೆ. ಇವರನ್ನು ಮಿಲೇನಿಯಮ್ ಮತದಾರ ಎಂದು ಪರಿಗಣಿಸಲಾಗುತ್ತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಜನಿಸಿದವರು 13 ಮಂದಿ ಇದ್ದಾರೆ. ಇವರಿಗೆ ಮತದಾರರ ಗುರುತಿನ ಚೀಟಿಯನ್ನು ವಿಶಿಷ್ಟವಾಗಿ ನೀಡಲಾಗಿದೆ.

    ಕಾರವಾರದ ಅರಬ್ಬಿ ಸಮುದ್ರ ದೇವಭಾಗ್ ಲೈಟ್ ಹೌಸ್ ಬಳಿಯಲ್ಲಿ 10 ರಿಂದ 15 ಅಡಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಜಿಲ್ಲಾಪಂಚಾಯ್ತಿ ಸಿಇಓ ಎಲ್ ಚಂದ್ರಶೇಖರ್ ನಾಯ್ಕ ಹಾಗೂ ಬಾರನ್ ವೈಲ್ಡ್ ಅಡ್ವೆಂಚರ್ ಸ್ಕೂಬಾ ಡೈ ತರಬೇತುದಾರಾದ ರಂಜಿತ್ ರವರೊಂದಿಗೆ ತೆರಳಿ ಭಟ್ಕಳ ತಾಲೂಕಿನ ಮುರಡೇಶ್ವರದ ದೀಕ್ಷ, ಪೃಥ್ವಿ ಎಂಬುವವರಿಗೆ ಸಮುದ್ರದಾಳದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಿದರು. ಬಳಿಕ `ಪ್ರತಿ ಮತ ಅಮೂಲ್ಯ ಮತ’ ಎಂಬ ಘೋಷವಾಕ್ಯದ ಸಂದೇಶ ಸಾರುವ ಬ್ಯಾನರ್ ಹಿಡಿದು ಸಂದೇಶ ನೀಡಿದರು.

    18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಹಕ್ಕನ್ನು ಪಡೆಯಬೇಕು. ಜಿಲ್ಲೆಯಲ್ಲಿ 11,34,513 ಮತದಾರರಿದ್ದಾರೆ. ಅಂಗವಿಕಲರಿಗೂ ಕೂಡ ಮತದಾನದ ಹಕ್ಕು ತಪ್ಪದಂತೆ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡಿ 13,612 ಅಂಗವಿಕಲರಿಗೆ ಹೊಸದಾಗಿ ಎಪಿಕ್ ಕಾರ್ಡ್ ನೀಡಲಾಗಿದೆ. ಆದರೆ ಇನ್ನು 362 ಅಂಗವಿಕಲರು ಎಪಿಕ್ ಕಾರ್ಡ ವಂಚಿತರಾದವರಿದ್ದಾರೆ. ಇಂತಹವರಿಗೂ ಸಹ ಶೀಘ್ರದಲ್ಲೇ ಮತದಾರರ ಗುರುತಿನ ಚೀಟಿ ನೀಡಲಾಗುತ್ತದೆ. ಅಂಗವಿಕಲರಿಗೆ ಮತದಾನ ಮಾಡಲು ಸಹಾಯ ವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತೆ. ಯಾವೊಬ್ಬ ವ್ಯಕ್ತಿಯೂ ಮತದಾನದಿಂದ ವಂಚಿತವಾಗಬಾರದೆಂಬುದು ನಮ್ಮ ಅಪೇಕ್ಷೆ. ಹೀಗಾಗಿ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಎಪಿಕ್ ಕಾರ್ಡ್ ಮಾಡಿಸಿದವರಿಗೆ ಸ್ಕೂಬಾ ಡೈ ಮಾಡಿಸುವ ಮೂಲಕ ವಿನೂತನವಾಗಿ ಪ್ರಚಾರ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.