ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ವಿಭಿನ್ನ ಸಿನಿಮಾಗಳನ್ನು ಚಿತ್ರಪ್ರೇಮಿಗಳ ಮಡಿಲಿಗೆ ಹಾಕುತ್ತಾ ಬರ್ತಿದ್ದಾರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್-1978’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ಸದ್ಯ ‘19.20.21’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಚಿತ್ರತಂಡ ವಿಶೇಷವಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಬಾಯಿಗೆ ಬಟ್ಟೆ ಕಟ್ಟಿರುವ ವ್ಯಕ್ತಿ, ಆತನ ಬೆನ್ನು, ಬಾಯಲ್ಲಿ ರಕ್ತದ ಕಲೆ ಇರುವ ಕೌತುಕ ಮೂಡಿಸುವ ಒಂದು ಪೋಸ್ಟರ್ ಅನ್ನು ಮಂಸೋರೆ ಬಳಗ ಅನಾವರಣ ಮಾಡಿದೆ.
ಜೈ ಭೀಮ್, ಜನಗಣಮನ ಸಿನಿಮಾಗಳ ಮಾದರಿಯಲ್ಲಿ ‘19.20.21’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ಶೃಂಗ, ಸಂಪತ್ ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಲೆ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ‘ಆ್ಯಕ್ಟ್-1978’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದು , ಬಿಂದುಮಾಲಿನಿ ಸಂಗೀತ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಶಿವು ಬಿಕೆ ಕುಮಾರ್ ಕ್ಯಾಮೆರಾ, ಸುರೇಶ್ ಆರುಮುಗಂ ಸಂಕಲನವಿದ್ದು. ಇದನ್ನೂ ಓದಿ:ಗಂಟಲು ನೋವಿನ ಔಷಧಿ ವಿಚಾರಕ್ಕೆ ಸೋನು ಕಾಲೆಳೆದ ಕಿಚ್ಚ ಸುದೀಪ್
ಚಿತ್ರಕಥೆಯಲ್ಲಿ ಮಂಸೋರೆ ಜೊತೆಗೆ ವೀರೇಂದ್ರ ಮಲ್ಲಣ್ಣ ಲೇಖನಿ ಹಂಚಿಕೊಂಡಿದ್ದರೆ, ಸಂಭಾಷಣೆಗಳ ಬರವಣಿಗೆಯಲ್ಲಿ ಅವಿನಾಶ್ ಜಿ ಮತ್ತು ವೀರೇಂದ್ರ ಮಲ್ಲಣ್ಣ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ತಂಡ, ಈಗ ಸಂಕಲನ ಮುಗಿಸಿ ಮುಂದಿನ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾಗೆ ಕರ್ನಾಟಕ ಸರಕಾರವು ತೆರಿಗೆ ವಿನಾಯತಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಿನಿಮಾವನ್ನು ವೀಕ್ಷಿಸಿ ಎರಡ್ಮೂರು ದಿನಗಳು ಕಳೆದ ನಂತರ ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಈ ಬೆನ್ನೆಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಮಂಸೋರೆ ಅವರ ಅಸಮಾಧಾನ ಯಾರ ಮೇಲೆ? ಅವರ ಪತ್ರವನ್ನೇ ಓದಿ..
ಕರ್ನಾಟಕದ ಮುಖ್ಯಮಂತ್ರಿಗಳಾದ Chief Minister of Karnataka ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ.
ನನ್ ಹೆಸರು,
ಮಂಸೋರೆ, ಕನ್ನಡ ಸಿನೆಮಾ ನಿರ್ದೇಶಕ.
ತಾವು ಕನ್ನಡ ಸಿನೆಮಾ, ಚಾರ್ಲಿ 777ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ , ಸದರಿ ಸಿನೆಮಾಗೆ 100% ಜಿಎಸ್ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಗು ತಾವು 100% ಜಿಎಸ್ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ. ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲಾ ಕನ್ನಡ ಸಿನೆಮಾಗಳಿಗೆ 100% ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ?
ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ? ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಆಗ ಮುಖ್ಯಮಂತ್ರಿಗಳೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಮತೆ ಒಪ್ಪಿಸುತ್ತಾರೆ ಹಾಗು ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ) ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ 100% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿದೆಯೇ?
ಈಗ ವಾಪಸ್ಸು ನಿಮ್ಮ ಆಡಳಿತದ ಸರ್ಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ 100% ಜಿಎಸ್ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಗಳಾಗಿ ಕೇಳಿತ್ತಿದ್ದೇನೆ, ದಯವಿಟ್ಟು ತಿಳಿಸಿ.
ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ : ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ, ಅದು ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಚಿಸುತ್ತೇನೆ. ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ. ರಾಜ್ಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ದೈಹಿಕವಾಗಿ ಅಗಲಿ ಇಂದಿಗೆ ಒಂದು ವರ್ಷ. ವಿಜಯ್ ಅವರ ಆತ್ಮೀಯ ಸ್ನೇಹಿತರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೂ ಆದ ಮಂಸೋರೆ ಅವರು, ವಿಜಯ್ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಕೊನೆ ದಿನವನ್ನೂ ನೆನಪಿಸಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4, ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು. ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ ಬೆಸೆದುಕೊಂಡಿರುತ್ತದೆ. ಆದರೆ ನನಗೆ ರಾಷ್ಟ್ರೀಯ ಹೆದ್ದಾರಿ 4 ಹೆಚ್ಚು ಮುಖ್ಯವಾದದ್ದು, ಹರಿವು ಸಿನೆಮಾದ ಕಾರಣಕ್ಕೆ.
ಹರಿವು-ಮೊದಲ ನಿರ್ದೇಶನದ ಸಿನೆಮಾ, ಮೊದಲ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನೆಮಾ, ನಾನಾ ಕೆಲಸಗಳನ್ನು ಮಾಡಿಕೊಂಡಿದ್ದ ನನಗೆ, ನಿರ್ದೇಶಕನಾಗಿ ಒಂದು ಗಟ್ಟಿಯಾದ ನೆಲೆ ಕೊಟ್ಟ ಸಿನೆಮಾ, ಅದೆಲ್ಲದಕ್ಕಿಂತ ಹೆಚ್ಚಾಗಿ ‘ಸಂಚಾರಿ ವಿಜಯ್’ ಎಂಬ ಆಪ್ತ ಗೆಳೆಯನನ್ನು ಕೊಟ್ಟ ಸಿನೆಮಾ. ಮುಖ್ಯ ಪಾತ್ರ ನಾಯಕನಾಗಿ ವಿಜಯ್ ಸರ್ ಮೊದಲ ಸಿನೆಮಾ ಹರಿವು, ಅದರ ಮೊದಲ ಶಾಟ್ 2012ರಲ್ಲಿ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4, ನಾನು ನಿರ್ದೇಶಕನಾಗಿ ಮೊದಲ ಬಾರಿಗೆ Action-Cut ಹೇಳಿದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. ಇದನ್ನೂ ಓದಿ: ಸ್ವಯಂ ಪ್ರೇರಿತನಾಗಿ ಡ್ರಗ್ಸ್ ಸೇವಿಸಿಲ್ಲ, ಬೆಂಗಳೂರು ಪೊಲೀಸ್ ಒಳ್ಳೆಯವರು : ಬಾಲಿವುಡ್ ನಟ ಸಿದ್ಧಾಂತ್ ಕಪೂರ್
ಆ ಸಿನೆಮಾ ಚಿತ್ರೀಕರಣವಾದದ್ದು ಇದೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ. ‘ಹರಿವು’ ಸಿನೆಮಾದ ಮುಖ್ಯ ಕತೆ ಅನಾವರಣಗೊಳ್ಳುವುದು ಇದೇ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ. 2012ರಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಆರಂಭಿಸಿದಾಗ ಮಾಡಿಕೊಂಡ ಅವಾಂತರಗಳು, ಕಲಿಸಿದ ಪಾಠಗಳು, ನಿರ್ದೇಶನದ ಕಡೆಗೆ ಇರಬೇಕಾದ ಬದ್ಧತೆಗಳನ್ನು ಕಲಿಸಿಕೊಟ್ಟದ್ದು ಇದೇ ರಾಷ್ಟ್ರೀಯ ಹೆದ್ದಾರಿ 4. ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ನಾನು ‘ಸಂಚಾರಿ ವಿಜಯ್’ ಸರ್ ಸಾಕಷ್ಟು ಬಾರಿ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ 4 ನನ್ನ ಪಾಲಿಗೆ ಶಾಶ್ವತವಾದ ದುಃಖದ ನೆನಪೊಂದನ್ನು ಉಳಿಸಿ ಬಿಡುತ್ತದೆ ಎಂದು ಯಾವತ್ತೂ ಯೋಚಿಸಿರಲಿಲ್ಲಾ.
ಎಷ್ಟೊ ಕನಸುಗಳು, ನಗು, ಜಗಳ, ನೆನಪುಗಳ ಮೂಲಕ ಸಂಚರಿಸಿದ್ದ ಈ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ, ನನ್ನ ಗೆಳೆಯನ ಜೊತೆ ಅಂತಿಮ ಪ್ರಯಾಣ ಮಾಡುವ ದಿನ ಬಂದಿದ್ದು ನನ್ನ ಪಾಲಿನ ಬಹು ದೊಡ್ಡ ದುರಂತ. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ, ಈ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆಪ್ತ ಗೆಳೆಯನನ್ನು Ambulance ಅಲ್ಲಿ ಮಲಗಿಸಿಕೊಂಡು, ಅವರ ಆಪ್ತವಾದ ಸಾಕಷ್ಟು ಕನಸುಗಳನ್ನು ಕಂಡಿದ್ದ ಅವರ ದುಡಿಮೆಯ ಗಳಿಕೆಯಿಂದ ಕೊಂಡುಕೊಂಡಿದ್ದ ಅವರ ತೋಟಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುವಂತ ದಿನ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲಾ.. ಅಂತ ದುರಂತದ ದಿನಕ್ಕೆ ಇಂದಿಗೆ ಒಂದು ವರ್ಷ.
ವಿಜಯ್ ಸರ್ ನನಗೆ ಪರಿಚಯ ಆಗಿದ್ದು, ಮೊದಲ ಬಾರಿ ಮಾತನಾಡಿದ್ದು 13-06-2012 ಅವರು ನನ್ನೊಂದಿಗೆ ಮಾತು ನಿಲ್ಲಿಸಿ ಮೌನವಾಗಿದ್ದು 13-06-2021 . ಅಪ್ಪನ ಜೊತೆಯ ನೆನಪಿನ ಕೊನೆಯ ಪಯಣವೂ ಇದೇ ರೀತಿ ಆಂಬ್ಯುಲೆನ್ಸ್ ನಲ್ಲೇ ಸಾಗಿತ್ತು, ಅಷ್ಟೇ ಆಪ್ತನಾದ ಗೆಳೆಯನ ಜೊತೆಯ ಕೊನೆಯ ಪಯಣವೂ ಆಂಬ್ಯುಲೆನ್ಸಲ್ಲೇ ಸಾಗುವಂತಾಯಿತು. ಅದು ನಮ್ಮಿಬ್ಬರ ಪಾಲಿನ, ಜೀವನದಲ್ಲಿ ಮುಖ್ಯವಾದ ಹೆದ್ದಾರಿಯಲ್ಲಿ. ಆ ಹೆದ್ದಾರಿಯಲ್ಲಿ ಒಂದೊಂದು ಹಂತದಲ್ಲೂ ಒಂದೊಂದು ನೆನಪುಗಳಿವೆ, ಪ್ರತೀ ಬಾರಿ ಹೋದಾಗಲೂ ಆ ನೆನಪುಗಳು ಕಾಡುತ್ತಲೇ ಇರುತ್ತವೆ, ಮಿಸ್ ಯೂ ‘ಸಂಚಾರಿ ವಿಜಯ್’ ಸರ್.
ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಗಲಿ ಜೂನ್ 14ಕ್ಕೆ ಒಂದು ವರ್ಷ ತುಂಬುತ್ತದೆ. ಅಗಲಿದ ನಟನ ನೆನಪಿಗೆ ಒಂದು ವಾರ ಮುಂಚೆಯೇ ಅವರ ಕುಟುಂಬದವರು ಮತ್ತು ಆಪ್ತರು, ಸ್ನೇಹಿತರು ಹಾಗೂ ಅಭಿಮಾನಿಗಳು ಇಂದು ಮೊದಲ ವರ್ಷದ ಪುಣ್ಯತಿಥಿಯನ್ನು ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ನೆರವೇರಿಸಿದರು. ಇದನ್ನೂ ಓದಿ:`ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ
ಮೊದಲ ವರ್ಷದ ಪುಣ್ಯಸ್ಮರಣೆಯ ದಿನದಂದು ವಿಜಯ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ವಿಜಯ್ ಸಹೋದರರಾದ ಬಿ.ವೀರೂಪಾಕ್ಷ ಮತ್ತು ಸಿದ್ದೇಶಕುಮಾರ್ ಸಹೋದರನ ಸುಂದರ ಮೂರ್ತಿಯನ್ನು ಅರ್ಥಗರ್ಭಿತವಾಗಿ ತಯಾರಿಸಿದ್ದು, ಇಂದು ಆ ಪುತ್ಥಳಿ ಪಂಚನಹಳ್ಳಿಯ ವಿಜಯ್ ಸಮಾಧಿ ಸ್ಥಳದಲ್ಲಿ ಅನಾವರಣಗೊಂಡಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು
ವಿಜಯ್ ಅವರ ಪ್ರಥಮ ಪುಣ್ಯಸ್ಮರಣೆಯಲ್ಲಿ ವಿಜಯ್ ಅವರ ಪರಮಾಪ್ತ ಸ್ನೇಹಿತರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ನಿರ್ದೇಶಕ ವೀರೂ ಮಲ್ಲಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಳೆದ ವರ್ಷ ವಿಜಯ್ ರಸ್ತೆ ಅಪಘಾತದಲ್ಲಿ ನಿಧನಹೊಂದಿದ್ದರು. ಅತೀ ಚಿಕ್ಕ ವಯಸ್ಸಿನ ಪ್ರತಿಭಾವಂತ ನಟನನ್ನು ಕಳೆದುಕೊಂಡ ಸಿನಿಮಾ ರಂಗ ಬಡವಾಗಿತ್ತು.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸದ್ದಿಲ್ಲದೇ ಅವರ ಹೊಸ ಸಿನಿಮಾದ ಶೂಟಿಂಗ್ ಅನ್ನು ಮುಗಿಸಿದ್ದಾರೆ. ಬಿಡುವಿಲ್ಲದೇ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅವರ ತಂಡ ದಾಖಲೆ ಅನ್ನುವಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 19.20.21 ಅನ್ನುವ ಕುತೂಹಲದ ಶೀರ್ಷಿಕೆ ಹೊತ್ತು ಈ ಸಿನಿಮಾ ಬರುತ್ತಿದೆ. ಇದನ್ನೂ ಓದಿ : ‘ಮುದುಕನ ಲವ್ ಸ್ಟೋರಿ’ಗೆ ಕೆಜಿಎಫ್ ತಾತ ಕೃಷ್ಣರಾವ್ ಹೀರೋ
ಈ ಸಿನಿಮಾ ಕುರಿತು ನಿರ್ದೇಶಕ ಮಂಸೋರೆ ಮಾತನಾಡಿ, “ಎರಡು ತಿಂಗಳ ಅವಧಿ, ಸತತ 51 ದಿನಗಳ ಚಿತ್ರೀಕರಣ, ಬಿಸಿಲು, ಚಳಿ, ಮಳೆ, ಹಗಲು-ರಾತ್ರಿ ಚಿತ್ರೀಕರಣ, ನೂರಕ್ಕೂ ಹೆಚ್ಚು ದೊಡ್ಡ-ಚಿಕ್ಕ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಲಾವಿದರ ದಂಡು, ಓಡಾಟ-ಹಾರಾಟ, ಕಾಡು, ಗುಡ್ಡ, ನಾಡು, ನದಿ, ಬಯಲು, ಧುತ್ತನೆ ಎದುರಾಗುವ ಹವಾಮಾನದ ವೈಪರೀತ್ಯಗಳ ನಡುವೆ, ನಾವು ಹೇಳಬೇಕೆಂದು ಬಯಸಿದ, ಈ ನೆಲದ ಕತೆಯೊಂದನ್ನು ಸಿನೆಮಾ ಮಾಡಬೇಕೆನ್ನುವ ನಮ್ಮಾಸೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ತಿಳಿಸಲು ಹರ್ಷವಾಗುತ್ತಿದೆ” ಎಂದಿದ್ದಾರೆ. ಇದನ್ನೂ ಓದಿ : ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ
ಮುಂದುವರೆದು ಮಾತನಾಡಿದ ಅವರು, “ಸಿನೆಮಾದ ಚಿತ್ರೀಕರಣ ಪೂರ್ತಿಯಾಗಿದೆ. ಇದನ್ನು ಸಾಧ್ಯವಾಗಿಸಿದ ನನ್ನೆಲ್ಲಾ ತಂಡದ ಸದಸ್ಯರಿಗೆ ಹಾಗೂ ಚಿತ್ರೀಕರಣ ನಡೆಸಿದ ಪ್ರತೀ ಊರಿನಲ್ಲೂ ಸಹಕರಿಸಿದ, ಸಹಾಯ ಮಾಡಿದ ಸ್ನೇಹಿತರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಚಿತ್ರೀಕರಣ ಯಶಸ್ವಿಯಾಗಿ ಪೂರ್ತಿಗೊಳ್ಳಲು ಶ್ರಮಿಸಿದ ನನ್ನೆಲ್ಲಾ ನಿರ್ದೇಶನ ವಿಭಾಗದ ಸದಸ್ಯರಿಗೂ ಧನ್ಯವಾದಗಳು” ಎಂದಿದ್ದಾರೆ. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್
ಇಂತಹ ಒಂದು ಕತೆಯನ್ನು ಸಿನೆಮಾ ಮಾಡಲು ಮಂಸೋರೆ ಅವರಿಗೆ ಬೆನ್ನೆಲುಬಾಗಿ ನಿಂತವರು ನಿರ್ಮಾಪಕರಾದ ಆರ್.ದೇವರಾಜ್. ಸತ್ಯ ಹೆಗಡೆ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ವೀರೇಂದ್ರ ಮಲ್ಲಣ್ಣ, ಸಂತೋಷ್ ಟೆಮ್ಕರ್ ಸೇರಿದಂತೆ ಹಲವರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಬಯೋಪಿಕ್ ರೆಡಿಯಾಗುತ್ತಿದೆ. ಐದಾರು ವರ್ಷಗಳಿಂದ ಹಲವು ಹಂತಗಳಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಸದ್ಯ ಸ್ಕ್ರಿಪ್ಟ್ ರೆಡಿಯಾಗಿದೆ. ಮುಂದಿನ ಹಂತಕ್ಕಾಗಿ ಹಲವು ಕಸರತ್ತುಗಳನ್ನು ಮಾಡುತ್ತಿದ್ದಾರೆ ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ.
ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ ಅಪರೂಪದ ಹೋರಾಟಗಾರ ನಂಜುಂಡಸ್ವಾಮಿ. ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಸಮಾಜವಾದಿ ಯುವಜನ ಸಭಾ ಹುಟ್ಟು ಹಾಕಿ ನಿರಂತರ ಹೋರಾಟ ಮಾಡುತ್ತಾ ಬಂದವರು. ಪ್ರಖರ ವಿಚಾರ ಲಹರಿ, ಅದ್ಭುತ ಕನ್ನಡ ಭಾಷಾ ಬಳಕೆ, ಖಚಿತ ಅಂಕಿ ಅಂಶಗಳಿಂದ ಕೂಡಿದ ಭಾಷಣ, ನ್ಯಾಯಾಂಗದ ಬಗ್ಗೆ ಇದ್ದ ತಿಳುವಳಿಕೆ, ಜ್ಯಾತಿ ವ್ಯವಸ್ಥೆಯ ಬಗೆಗಿನ ಆಕ್ರೋಶದ ಒಟ್ಟು ಮೊತ್ತ ಆಗಿದ್ದವರು ನಂಜುಂಡಸ್ವಾಮಿ. ಜ್ಯಾತ್ಯಾತೀಯ ರಾಷ್ಟ್ರದಲ್ಲಿ ಜಾತಿ ಸಮ್ಮೇಳನ ಆಗಬಾರದೆಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕಪ್ಪು ಬಾವುಟ ಪ್ರದರ್ಶನ, ವಂಶಪಾರಂಪರ್ಯವಾಗಿ ಆಡಳಿತ ನಡೆಸುವುದರ ವಿರುದ್ಧ ಪ್ರತಿಭಟನೆ, ಕಾರ್ಮಿಕರಿಗೆ ಕಾನೂನುಬದ್ಧ ವೇತನ ಕೊಡದಿದ್ದರೆ ಪ್ರತಿಭಟನೆ, ರೈತರಿಗೆ ಅನ್ಯಾಯವಾದಾಗೆಲ್ಲ ನಂಜುಂಡಸ್ವಾಮಿ ಅವರು ಇದ್ದೇ ಇರುತ್ತಿದ್ದರು. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?
ರೈತರಿಗೆ ದೋಖಾ ಮಾಡುತ್ತಿದ್ದ ಹಲವು ಖಾಸಗಿ ಕಂಪೆನಿಗಳ ವಿರುದ್ಧ ಹೋರಾಟ, ಸರಕಾರಗಳ ಕ್ರಮದ ವಿರುದ್ಧ ಹೋರಾಟ ಹೀಗೆ ಹಠಾತ್ ದಾಳಿಗಳನ್ನು ಮಾಡುತ್ತಲೇ ಬೆಚ್ಚಿ ಬೀಳಿಸುತ್ತಿದ್ದರು ನಂಜುಂಡಸ್ವಾಮಿ. ಅದರಲ್ಲೂ ರೈತರಿಗೆ ಬ್ಯಾಂಕ್ ಗಳು ನೀಡುವ ಕಿರುಕುಳಕ್ಕೆ ನಿರಂತರವಾಗಿ ಪ್ರತಿಭಟನೆ ಇದ್ದೇ ಇರುತ್ತಿತ್ತು. ರೈತ ಸಂಘವೆಂದರೆ ನಂಜುಂಡಸ್ವಾಮಿ, ನಂಜುಂಡ ಸ್ವಾಮಿ ಅಂದರೆ ರೈತ ಸಂಘ ಎನ್ನುವಷ್ಟರ ಮಟ್ಟಿಗೆ ಅವರು ರೈತರೊಂದಿಗೆ ಬೆರೆತು ಹೋಗಿದ್ದರು.
ಇಂತಹ ಹೋರಾಟಗಾರರ ಬಯೋಪಿಕ್ ಸಿನಿಮಾವಾಗಬೇಕು ಎನ್ನುವುದು ಹಲವರ ಆಶಯವಾಗಿತ್ತು. ಅದಕ್ಕೆ ಮೊದಲು ನೀರೆರೆದದ್ದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ. ಹಲವು ವರ್ಷಗಳ ಹಿಂದಿಯೇ ಪ್ರೊಫೆಸರ್ ಕುಟುಂಬವನ್ನು ಮಂಸೋರೆ ಸಂಪರ್ಕಿಸಿದರು. ಆದರೆ, ನಾನಾ ಕಾರಣಗಳಿಂದಾಗಿ ಅದು ಆಗಲಿಲ್ಲ. ಈ ಹಿಂದೆ ಖ್ಯಾತ ಬರಹಗಾರ ನಟರಾಜ್ ಹುಳಿಯಾರ್ ಅವರು ನಂಜುಂಡ ಸ್ವಾಮಿ ಅವರು ಕುರಿತಾದ ನಾಟಕ ಮತ್ತು ಚಿತ್ರಕಥೆ ರೆಡಿ ಮಾಡಿದರು. ಸಿನಿಮಾಗೆ ಮತ್ತೊಂದು ವೇಗ ಸಿಕ್ಕಿತು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ
ನಂಜುಂಡಸ್ವಾಮಿ ಅವರ ಪಾತ್ರವನ್ನು ಡಾ.ವಿಷ್ಣುವರ್ಧನ್ ಮಾಡಬೇಕು ಎನ್ನುವುದು ಹಲವರ ಆಸೆಯಾಗಿತ್ತು. ಯಾಕೆಂದರೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾದಲ್ಲಿ ಹೂವಯ್ಯನ ಪಾತ್ರ ಹೆಣೆದಿದ್ದರಲ್ಲ, ಅದು ಪ್ರೊಫೆಸರ್ ನಂಜುಂಡಸ್ವಾಮಿ ಅವರ ಬದುಕನ್ನೇ ಆಧರಿಸಿತ್ತು. ಆದರೆ, ಡಾ.ವಿಷ್ಣುವರ್ಧನ್ ಕಾಲವಾದರು.
ಕೆಲ ವರ್ಷಗಳ ಹಿಂದೆ ನಿರ್ದೇಶಕ ಕೇಸರಿ ಹರವು ಕೂಡ ಈ ಸಿನಿಮಾದ ಬಗ್ಗೆ ಆಸಕ್ತಿ ತಗೆದುಕೊಂಡು ನಂಜುಂಡಸ್ವಾಮಿ ಅವರ ಪಾತ್ರವನ್ನು ನಾನಾ ಪಾಟೇಕರ್ ಮಾಡಿದರೆ ಸರಿಯಾಗಿರುತ್ತದೆ ಎಂದು ಅವರನ್ನು ಅಪ್ರೋಚ್ ಮಾಡಿದ್ದರು. ನಾನಾ ಕೂಡ ಪ್ರೊಫೆಸರ್ ಅವರ ಹೋರಾಟದ ವಿಡಿಯೋಗಳನ್ನು ಗಮನಿಸಿದ್ದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ
ಅಲ್ಲದೇ, ಡಾಲಿ ಧನಂಜಯ್ ಅವರಿಗೂ ಈ ಸ್ಕ್ರಿಪ್ಟ್ ಕಳುಹಿಸಲಾಗಿತ್ತು. ಈ ಇಬ್ಬರೂ ಕಲಾವಿದರ ಮಧ್ಯೆ ಇದೀಗ ಮತ್ತೊಂದು ಯೋಜನೆ ಸಿದ್ಧವಾಗುತ್ತಿದೆ. ನಂಜುಂಡಸ್ವಾಮಿ ಅವರ ಪಾತ್ರವನ್ನು ಸುದೀಪ್ ಅವರು ಮಾಡಲಿ ಎನ್ನುವುದು ಪ್ರೊಫೆಸರ್ ಕೆಲ ಅಭಿಮಾನಿಗಳ ಬೇಡಿಕೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್
‘ರೈತರು, ಕಾರ್ಮಿಕರು ಮತ್ತು ನಿರ್ಗತಿಕರ ಬದುಕಿಗೆ ನಂಜುಂಡ ಸ್ವಾಮಿ ಅವರು ದೊಡ್ಡ ಶಕ್ತಿಯಾಗಿದ್ದರು. ಅವರ ಸಿನಿಮಾ ಬರಬೇಕು ಎನ್ನುವುದು ನಮ್ಮ ಕುಟುಂಬದ ಆಸೆ. ಹಾಗಾಗಿ ಹಲವರು ಹಲವು ಕಲಾವಿದರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೋ? ಯಾವಾ ಸಿನಿಮಾ ಆಗುತ್ತದೆಯೋ ಕಾದು ನೋಡಬೇಕು’ ಎನ್ನುತ್ತಾರೆ ಪಚ್ಚೆ ನಂಜುಂಡಸ್ವಾಮಿ.
ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಮಂಸೋರೆ, ಇದೀಗ ಮತ್ತೊಂದು ಸಿನಿಮಾಗೆ ಆಕ್ಸನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭಿಸಿದೆ. ಇವರ ಚೊಚ್ಚಲು ಸಿನಿಮಾ ‘ಹರಿವು’ ಕೂಡ ನೈಜಘಟನೆಯನ್ನೇ ಆಧರಿಸಿತ್ತು. ಇದೀಗ ನಾಲ್ಕನೇ ಚಿತ್ರಕ್ಕೂ ಅವರು ನಡೆದ ಘಟನೆಯನ್ನೇ ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು
ಹರಿವು ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯೊಬ್ಬರು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಹಳ್ಳಿಗೆ ತಮ್ಮ ಮಗನ ಶವವನ್ನು ಪೆಟ್ಟಿಗೆಯಲ್ಲಿ ತಗೆದುಕೊಂಡು ಹೋದ ಅಮಾನವೀಯ ಘಟನೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿ ಅವರು ಘಟನೆಯ ಬಗ್ಗೆ ಹೇಳಿಕೊಳ್ಳದೇ ‘ಈ ನೆಲದ ಮಣ್ಣಿನ ಜನರ ಆರ್ದ್ರ ಬದುಕಿನ ನೈಜ ಘಟನೆಯೊಂದನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದಷ್ಟೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ
ಸಿನಿಮಾದ ಶೀರ್ಷಿಕೆಯೇ ಆಕರ್ಷಕವಾಗಿದೆ ಮತ್ತು ಕುತೂಹಲ ಮೂಡಿಸುತ್ತದೆ. ತಮ್ಮ ನಾಲ್ಕನೇ ಸಿನಿಮಾಗೆ ಅವರು ’19, 20, 21’ ಎಂದು ಹೆಸರಿಟ್ಟಿದ್ದಾರೆ. ಈ ಟೈಟಲ್ ನಾನಾ ಅರ್ಥಗಳನ್ನು ಹೇಳುತ್ತಿದೆ. ಈ ಮೂರು ತಾರೀಖಿನ ದಿನಗಳಲ್ಲಿ ನಡೆದ ಘಟನೆಯಾ? ಅಥವಾ ಆರ್ಟಿಕಲ್ 19, 20, 21ರ ಬಗೆಗಿನ ಕಥಾನಕವಾ ಎನ್ನುವುದು ಸದ್ಯ ಚರ್ಚೆಯ ವಿಷಯವಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
ಎರಡ್ಮೂರು ದಿನಗಳ ಹಿಂದೆಯೇ ಇಡೀ ಟೀಮ್ ಕಟ್ಟಿಕೊಂಡು ಮಲೆನಾಡಿನ ಸೆರೆಗಿನಲ್ಲಿ ಬೀಡುಬಿಟ್ಟಿದ್ದಾರೆ ಮಂಸೋರೆ. ಉತ್ತರ ಕರ್ನಾಟಕದ ಕೆಲ ಕಡೆ ಮತ್ತು ಕರಾವಳಿ ಭಾಗದಲ್ಲೂ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ನಡೆಸಲಿದೆ ತಂಡ. ಎಂದಿನಂತೆ ಬಹುತೇಕ ಆಕ್ಟ್ 1978 ಸಿನಿಮಾದಲ್ಲಿ ಕೆಲಸ ಮಾಡಿದವರೇ ಈ ಟೀಮ್ ನಲ್ಲೂ ಮುಂದುವರೆದಿದ್ದಾರೆ. ಸತ್ಯಾ ಹೆಗಡೆ ಅವರ ಸಿನಿಮಾಟೋಗ್ರಫಿ, ದೇವರಾಜ್ ಅವರ ನಿರ್ಮಾಣ ಚಿತ್ರಕ್ಕಿದೆ.
ಬೆಂಗಳೂರು: ಬಹುಭಾಷಾ ನಟಿ ಸಾಯಿ ಪಲ್ಲವಿ ಟಾಲಿವುಡ್ನಲ್ಲಿ ಸಖತ್ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿದ್ದಾರೆ. ತಮ್ಮ ಸಹಜ ಸೌಂದರ್ಯದ ಮೂಲಕವೇ ಜನಮನ ಗೆದ್ದಿರುವ ಸಾಯಿ ಪಲ್ಲವಿ ಇದೀಗ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಡುತ್ತಿದ್ದಾರೆ.
ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ರಿಲೀಸ್ ಡೇಟ್ ಸಹ ಅನೌನ್ಸ್ ಆಗಿದ್ದು, ಸೆಪ್ಟೆಂಬರ್ 10ಕ್ಕೆ ತೆರೆ ಕಾಣುತ್ತಿದೆ. ಇದೆಲ್ಲದರ ಮಧ್ಯೆ ಕನ್ನಡಿಗರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದ್ದು, ಸಹಜ ಸುಂದರಿ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ
ಸಿನಿಮಾ ಕುರಿತು ಮಂಸೋರೆ ಸಾಯಿ ಪಲ್ಲವಿ ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದು, ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಂಸೋರೆ ಸ್ಟೋರಿ ಕೇಳಿ ಸಾಯಿ ಪಲ್ಲವಿ ಸಖತ್ ಖುಷಿಪಟ್ಟಿದ್ದಾರೆ. ಫೈನಲ್ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದಾರೆ. ವಿವಾಹಕ್ಕೋಸ್ಕರ ಬ್ರೇಕ್ ತೆಗೆದುಕೊಂಡಿದ್ದೆ. ಆದಷ್ಟು ಬೇಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆ್ಯಕ್ಟ್ 1978 ಸಿನಿಮಾ ಮೂಲಕ ನಿರ್ದೇಶಕ ಮಂಸೂರೆ ಜನಪ್ರಿಯರಾಗಿದ್ದಾರೆ. ಕೊರೊನಾ ಮೊದಲ ಅಲೆಯ ಲಾಕ್ಡೌನ್ ಬಳಿಕ ಸಿನಿಮಾ ರಿಲೀಸ್ ಮಾಡಿ ಸಕ್ಸೆಸ್ ಆಗಿದ್ದಾರೆ. ಈ ಸಿನಿಮಾ ಒಳ್ಳೆಯ ಗಳಿಕೆ ಕಂಡಿತ್ತು. ಇದು ಟಾಲಿವುಡ್ ಅಂಗಳಕ್ಕೂ ತಲುಪಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.
ಹರಿವು, ನಾತಿಚರಾಮಿ ಹಾಗೂ ಇತ್ತೀಚೆಗೆ ಆ್ಯಕ್ಟ್ 1978 ಸಿನಿಮಾ ಮಂಸೋರೆ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಇದೆಲ್ಲದರ ಮಧ್ಯೆ ಬ್ರೇಕ್ ಪಡೆದಿದ್ದ ಮಂಸೋರೆ ಆಗಸ್ಟ್ 15ರಂದು ತಮ್ಮ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ. ಈ ಮೂಲಕ ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಭಾಗವಹಿಸಿದ್ದರು. ಇದೀಗ ವಿವಾಹದ ಬಳಿಕ ಮತ್ತೆ ಕೆಲಸದಲ್ಲಿ ತೊಡಗಿದ್ದು, ಸಾಯಿ ಪಲ್ಲವಿ ಅವರಿಗೆ ಕರೆ ಮಾಡಿ ಕಥೆ ಹೇಳಿದ್ದಾರೆ. ಆದರೆ ಕಥೆ ಹೇಗಿದೆ, ಸಾಯಿ ಪಲ್ಲವಿ ಒಪ್ಪುತ್ತಾರಾ ಕಾದು ನೋಡಬೇಕಿದೆ.
ಬೆಂಗಳೂರು: ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಮಂಸೋರೆ’ ಅವರು ಇಂದು ಬೆಂಗಳೂರಿನಲ್ಲಿ ‘ಅಖಿಲಾ’ ಅವರೊಂದಿಗೆ ನಿಶ್ಚಿತಾರ್ಥವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೇ, ಕುಟುಂಬದವರು ಹಾಗೂ ಕೆಲವು ಗೆಳೆಯರ ಸಮಕ್ಷಮದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಮದುವೆಗೆ ಆಗಸ್ಟ್ 15ನೇ ತಾರೀಖು ದಿನಾಂಕ ನಿಗದಿ ಆಗಿದೆ. ಮಂಸೋರೆ ಅವರ ವೃತ್ತಿಜೀವನದಲ್ಲಿ ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಹಲವಾರು ಸ್ನೇಹಿತರು ಭಾಗಿಯಾಗಿರುವುದರಿಂದ, ಮಾಧ್ಯಮಗಳ ಮೂಲಕವೇ ಅವರೆಲ್ಲರಿಗೂ ತಮ್ಮ ಮದುವೆ ನಿಶ್ಚಯವಾಗಿರುವ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.
2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ ‘ಹರಿವು’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ ‘ಸಂಚಾರಿ ವಿಜಯ್’ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಂಸೋರೆ ನಿರ್ದೇಶನದಲ್ಲಿ, ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ ‘ನಾತಿಚರಾಮಿ’ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು. ಇದನ್ನೂ ಓದಿ : ಬಾಯಿ ಮುಚ್ಚಿದರೆ ಸರಿ- ಚಕ್ರವರ್ತಿಗೆ ಪ್ರಿಯಾಂಕಾ ಅವಾಜ್
ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ನೇತೃತ್ವದ, ‘ಬದಲಾದ ಭಾರತ’ ಎಂಬ ಯೋಜನೆಯಡಿಯಲ್ಲಿ ಆಯ್ಕೆಯಾದ ಸಿನಿಮಾಗಳ ಪಟ್ಟಿಯಲ್ಲಿ ‘ನಾತಿಚರಾಮಿ’ ಚಿತ್ರವೂ ಒಂದಾಗಿತ್ತು. ಮಂಸೋರೆ ನಿರ್ದೇಶನದ ಮೂರನೇ ಚಲನಚಿತ್ರ “ಆಕ್ಟ್-1978” ಕಳೆದ ವರ್ಷ ದೀರ್ಘಕಾಲದ ಲಾಕ್-ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ದಕ್ಷಿಣ ಭಾರತದ ಚಲನಚಿತ್ರ ಎಂದೇ ಖ್ಯಾತಿಯಾಗಿತ್ತು.
ಕೊರೋನಾ ಲಾಕ್-ಡೌನ್ ನಂತರ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರರಂಗ ಹಿಂದೇಟು ಹಾಕುತ್ತಿದ್ದ ವೇಳೆಯಲ್ಲಿ ಬಿಡುಗಡೆಯಾದ ‘ಆಕ್ಟ್-1978’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯಕ್ಕೆ ಮಂಸೋರೆ ಅವರು ‘ರಾಣಿ ಅಬ್ಬಕ್ಕ’ನ ಕುರಿತಾದ ಚಿತ್ರ ಮಾಡುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಅದರ ಚಿತ್ರೀಕರಣಕ್ಕೆ ಹೋಗುವ ಮುನ್ನ ಮತ್ತೊಂದು ಚಿತ್ರ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಮದುವೆಯ ಬಳಿಕ ಮುಂದಿನ ಚಿತ್ರದ ಘೋಷಣೆ ಮಾಡುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ.
ಕೊರೊನಾ ಲಾಕ್ಡೌನ್ ಬಳಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ತರುವಲ್ಲಿ ಯಶಸ್ವಿಯಾದ ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರ 25 ದಿನ ಪೂರೈಸಿದ ಖುಷಿಯಲ್ಲಿದೆ. ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ‘ಆಕ್ಟ್ 1978’ ಚಿತ್ರ ಮೊದಲ ದಿನವೇ ಪ್ರೇಕ್ಷಕರು ಹಾಗೂ ವಿಮರ್ಶಕರ ಮನಸ್ಸನ್ನು ಗೆದ್ದಿತ್ತು. ಕೊರೊನಾ ನಡುವೆಯೂ ಚಿತ್ರಮಂದಿರದಲ್ಲೇ ಸಿನಿಮಾ ವೀಕ್ಷಿಸಿ, ಮೆಚ್ಚಿ 25 ದಿನಗಳ ಗೆಲುವನ್ನು ದಾಖಲಿಸಲು ಸಹಕರಿಸಿದ ಪ್ರೇಕ್ಷಕ ಪ್ರಭುಗಳಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಲಾಕ್ಡೌನ್ ಬಳಿಕ ಮೊದಲ ಬಾರಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ‘ಆಕ್ಟ್ 1978’ ಚಿತ್ರ ಇದೀಗ ಕೊರೊನಾ ಮಹಾಮಾರಿ ನಡುವೆಯೂ ಯಶಸ್ವಿ 25 ದಿನಗಳನ್ನು ಪೂರೈಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಚಿತ್ರಕ್ಕೆ ಸಿಕ್ಕ ಗೆಲುವು ಹಾಗೂ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದ್ದು ಐವತ್ತು ದಿನಗಳ ಸಂಭ್ರಮದತ್ತ ಎದುರು ನೋಡುತ್ತಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನದ ಮೂರನೇ ಸಿನಿಮಾ ಇದಾಗಿದ್ದು, ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಚಿತ್ರಕ್ಕೆ ಸಿನಿರಸಿಕರಲ್ಲದೆ ಚಿತ್ರರಂಗದ ಗಣ್ಯರು ಕೂಡ ಸಿನಿಮಾ ನೋಡಿ ಭೇಷ್ ಎಂದಿದ್ದರು. ಸೋಶಿಯಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿರುವ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅಮೋಘ ಅಭಿನಯ ಎಲ್ಲರ ಮನಸೆಳೆದಿತ್ತು. ಇನ್ನು ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃಷ್ಣ ಹೆಬ್ಬಾಳೆ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯ, ಶ್ರುತಿ ಒಳಗೊಂಡಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಆಕ್ಟ್ 1978’ ದೇವರಾಜ್.ಆರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಚಿತ್ರಕ್ಕೆ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗ್ಡೆ ಕ್ಯಾಮೆರಾ ನಿರ್ದೇಶನವಿದೆ.