Tag: ಭಾವೈಕ್ಯತೆ

  • ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಧಾರವಾಡ: ಜಾತಿ, ಧರ್ಮದ ಹೆಸರಿನಲ್ಲಿ ಅದೆಷ್ಟು ಯುದ್ಧಗಳು ನಡೆದಿವೆಯೋ ಗೊತ್ತಿಲ್ಲ. ಅದೆಷ್ಟು ಗಲಭೆಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬರು ವ್ಯಕ್ತಿ ಹಿಂದೂ ಧರ್ಮದ ಹಬ್ಬದ ಜೊತೆಗೆ ಮುಸ್ಲಿಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

    ಧಾರವಾಡ ನಗರದ ಮೇದಾರ ಓಣಿಯ ಸುಧೀರ ಮುಧೋಳ ಅವರು ಗಣಪತಿ ಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹಿಂದೂ ಧರ್ಮದವರಾದರೂ ಮೊಹರಂ ಹಬ್ಬವನ್ನೂ ಅಷ್ಟೇ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಇದೇನಪ್ಪ ಹಿಂದೂ ಆಗಿ ಮೊಹರಂ ಹಬ್ಬ ಆಚರಣೆ ಮಾಡುತ್ತಾರಾ ಎಂದು ನೀವು ಪ್ರಶ್ನೆ ಮಾಡಿದರೆ ತಪ್ಪೇನಿಲ್ಲ. ಕಳೆದ 40 ವರ್ಷಗಳಿಂದ ಮುಧೋಳ ಅವರ ಕುಟುಂಬ ಈ ಗಣಪತಿ ಹಾಗೂ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.

    ಸುಧೀರ್ ಅವರ ತಂದೆ ಮೊದಲು ಮುಸ್ಲಿಂ ಸಮುದಾಯದ ಪಾಂಜಾಗಳು ಪ್ರತಿಷ್ಠಾಪನೆಗೊಳ್ಳುವ ಜಾಗವನ್ನು ಖರೀದಿ ಮಾಡಿದ್ದರು. ಖರೀದಿ ಮಾಡಿದ ಜಾಗದಲ್ಲಿ ಮನೆ ಕಟ್ಟಿಸಿದ ಬಳಿಕವೂ ಮುಸ್ಲಿಂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿಯೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದರು. ಅದಕ್ಕೆ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಮೊಹರಂ ವೇಳೆಯೇ ಮೂರು ವರ್ಷಕ್ಕೊಮ್ಮೆ ಗಣೇಶ ಚತುರ್ಥಿ ಬರುವುದರಿಂದ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಜಾಗದ ಪಕ್ಕವೇ ಗಣೇಶನ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಿ ಈ ಕುಟುಂಬ ಪೂಜೆ ಸಲ್ಲಿಸುತ್ತಿದೆ.

    ಇದರಿಂದ ಒಂದೇ ಮನೆಯಲ್ಲಿ ರಾಮನೂ, ರಹೀಮನೂ ನೆಲೆಸುವಂತಾಗಿದೆ. ಕಳೆದ 40 ವರ್ಷಗಳಿಂದ ತಮ್ಮ ಮನೆಯಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿ, ಗಣೇಶನನ್ನೂ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಒಂದು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ತಮ್ಮ ತಂದೆಯ ತರುವಾಯ ತಾವೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.

  • ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನ – ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಹಿಂದೂ, ಮುಸ್ಲಿಂ ಭಕ್ತರು

    ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನ – ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಹಿಂದೂ, ಮುಸ್ಲಿಂ ಭಕ್ತರು

    ಕಲಬುರಗಿ: ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾದ ಹಿನ್ನೆಲೆ ಅವರ ಲಕ್ಷಾಂತರ ಸಂಖ್ಯೆಯ ಭಕ್ತರು ದುಃಖತಪ್ತರಾಗಿದ್ದಾರೆ. ವಿವಿಧ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಯಾನಗುಂದಿಗೆ ಬರುತ್ತಿದ್ದಾರೆ. ಭಕ್ತರಲ್ಲಿ ಹಿಂದುಗಳಂತೆ ಮುಸ್ಲಿಮರು ಇದ್ದಾರೆ. ಯಾನಗುಂದಿಯ ಮಾಣಿಕ್ಯಗಿರಿ ಬೆಟ್ಟ ಹಿಂದು ಮುಸ್ಲಿಂರ ಭಾವೈಕ್ಯತೆಯ ಕೇಂದ್ರವಾಗಿದ್ದರಿಂದ ಮುಸ್ಲಿಂರು ಸಹ ಮಾತೆಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಾತೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.

    ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾಗಿರುವ ಮಾಣಿಕ್ಯಗಿರಿ ಬೆಟ್ಟ ಸುಮಾರು ವರ್ಷಗಳಿಂದಲೂ ಹಿಂದೂ ಮುಸ್ಲಿಂ ಭಾವೈಕ್ಯತೆ ಕೇಂದ್ರವಾಗಿದೆ. ಬೆಟ್ಟದ ಹಜರತ್ ಮೌಲಾ ಅಲಿ ದರ್ಗಾಕ್ಕೂ ಮಾತಾ ಮಾಣಿಕ್ಕೇಶ್ವರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಹಿಂದೂ ಮುಸ್ಲಿಂ ಭಕ್ತರು ಸಾಗರೋಪಾದಿಯಲ್ಲಿ ಅಂತಿಮ ದರ್ಶನಕ್ಕೆ ಬರುತ್ತಿದ್ದಾರೆ. 800 ವರ್ಷಗಳ ಇತಿಹಾಸವಿರುವ ಹಜರತ್ ಮೌಲಾ ಅಲಿ ದರ್ಗಾದಲ್ಲೇ ಮಾತಾ ಮಾಣಿಕೇಶ್ವರಿ ಮೊದಲು ವಾಸಗಿದ್ದರು.

    ದರ್ಗಾದಲ್ಲಿನ ಪುರಾತನ ಬೃಹತ್ ಬಸರಿ ಮರದಲ್ಲೇ ಮಾತಾ ಮಾಣಿಕೇಶ್ವರಿ ಕುಳಿತುಕೊಳ್ಳುತ್ತಿದ್ದರು. ಆ ಮರದಲ್ಲೇ ತಮ್ಮ ಚಿಕ್ಕವಯಸ್ಸಿನಿಂದ ಆಶ್ರಯಪಡೆದಿದ್ದರು. ಬಳಿಕ ಬೆಟ್ಟದಲ್ಲೆ ಶಿವಲಿಂಗ ಸ್ಥಾಪಿಸಿ ವಾಸಿಸತೊಡಗಿದರು. ಹೀಗಾಗಿ ದರ್ಗಾಕ್ಕೆ ಬರುವ ಭಕ್ತರೆಲ್ಲಾ ಮಾತೆಯ ಭಕ್ತರು. ಮಾತೆಯ ದರ್ಶನಕ್ಕೆ ಬರುವ ಭಕ್ತರೆಲ್ಲಾ ದರ್ಗಾಕ್ಕೂ ಬಂದು ಹೋಗುತ್ತಾರೆ. ಹೀಗಾಗಿ ಮಾತಾ ಮಾಣಿಕೇಶ್ವರಿಯ ಮಾಣಿಕ್ಯಗಿರಿ ಭಾವೈಕ್ಯತೆಯ ಸಂಕೇತದಂತಿದೆ.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.