ನವದೆಹಲಿ: ಭೂ, ವಾಯು ಮತ್ತು ನೌಕಾ ಸೇನೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸೇನಾ ಪ್ರಧಾನ ದಂಡ ನಾಯಕನ(ಸಿಡಿಎಸ್) ಹುದ್ದೆ ಸೃಷ್ಟಿಗೆ ಕೇಂದ್ರ ಭದ್ರತಾ ಸಂಪುಟ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಸಚಿವ ಸಂಪುಟ ಸಭೆ ಬಳಿಕ ನಡೆದ ಭದ್ರತಾ ಸಮಿತಿ ಸಭೆಯಲ್ಲಿ ಪ್ರಧಾನಿ ಈ ನರೇಂದ್ರ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಕಳೆದ ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಬಗ್ಗೆ ಸುಳಿವು ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಚೀಫ್ ಡಿಫೆನ್ಸ್ ಸ್ಟಾಫ್ ಸೃಷ್ಟಿಗೆ ಅನುಮೋದನೆ ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಆರ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

ಮೂಲಗಳ ಪ್ರಕಾರ ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ ಆಗಲಿರುವ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಮೊದಲ ಸಿಡಿಎಸ್ ಆಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಶೀಘ್ರದಲ್ಲೇ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಡಿಎಸ್ ವಿಶೇಷತೆ ಏನು?:
ಭೂ, ವಾಯು ಹಾಗೂ ನೌಕಾ ಪಡೆಗಳಿಗೆ ಪ್ರತ್ಯೇಕ ಮುಖ್ಯಸ್ಥರಿದ್ದಾರೆ. ರಾಷ್ಟ್ರಪತಿಗಳು ನೇತೃತ್ವ, ಆದೇಶದಂತೆ ಮೂರು ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಮೂರು ಪಡೆಗಳ ಮಧ್ಯೆ ಸಮನ್ವಯ ತರುವ ಕೆಲಸವನ್ನು ಸಿಡಿಎಸ್ ಮಾಡಲಿದ್ದಾರೆ. ಈ ಹುದ್ದೆಗೆ ಆಯ್ಕೆ ಆಗಲಿರುವ ಅವರು 4 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಮುಖ್ಯ ಸೇನಾಧಿಕಾರಿಯು ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವ ಅಧಿಕಾರಿಯಾಗಿರುತ್ತಾರೆ. ಭಾರತದ ಭೂ ಸೇನೆ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಲಹೆಯನ್ನು ಸರ್ಕಾರಕ್ಕೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ.
ಕೆಲಸ ಏನು?
ಮೂರು ಸೇನೆಗಳ ನಡುವೆ ಉತ್ತಮ ಸಂವಹನ ಸಮನ್ವಯ ಸಾಧಿಸುವುದು ಮುಖ್ಯ ಉದ್ದೇಶ. ಸೇನೆಗೆ ಹಂಚಿಯಾಗುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು. ಮೂರು ಸೇನೆಗಳ ಸಂಬಂಧ ಏಕ ವ್ಯಕ್ತಿಯಾಗಿ ಪ್ರಧಾನಿಗಳಿಗೆ ಸಲಹೆ ನೀಡುವುದು. ಮೂರು ಸೇನೆಗಳ ಸಂಬಂಧ ಆಡಳಿತ್ಮಾಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ತ್ರಿಸೇನೆಗಳ ಜಂಟಿ ನಿರ್ವಹಣೆ ಹಾಗೂ ತರಬೇತಿ ಕೂಡಾ ಈ ಮಹಾದಂಡನಾಯಕ ವ್ಯಾಪ್ತಿಯಲ್ಲಿ ಬರಲಿದೆ. ಸೈಬರ್, ಬಾಹ್ಯಾಕಾಶ, ವಿಶೇಷ ಭದ್ರತಾ ದಳಗಳು ಕೂಡಾ ಮಹಾ ದಂಡನಾಯಕ ಕಚೇರಿ ವ್ಯಾಪ್ತಿಗೆ ಬರಲಿದೆ.
ಈ ವರ್ಷದ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ ಅವರು, ಭೂ, ವಾಯು ಹಾಗೂ ನೌಕಾ ಪಡೆಗಳು ನಮ್ಮ ಹೆಮ್ಮೆ. ಈ ಮೂರೂ ಸೇನಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನೇಮಕ ಮಾಡಲಾಗುತ್ತದೆ ಎಂದು ಐತಿಹಾಸಿಕ ಘೋಷಣೆ ಮಾಡಿದ್ದರು.
ಸಿಡಿಎಸ್ ನೇಮಕಕ್ಕಾಗಿ ದೀರ್ಘಕಾಲದಿಂದ ಸೇನಾ ಅಧಿಕಾರಿಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಸದ್ಯ ನಾವು ಅದನ್ನು ಕಾರ್ಯಗತಕ್ಕೆ ತರಲು ನಿರ್ಧಸಿದ್ದೇವೆ. ಈ ನೇಮಕವು ಮೂರು ಪಡೆಗಳ ಉನ್ನತ ಮಟ್ಟದಲ್ಲಿ ಪರಿಣಾಮಕಾರಿ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದರು.

ಮುಖ್ಯ ಸೇನಾಧಿಕಾರಿ ನೇಮಕವು ಈಗಿನ ಮಾತಲ್ಲ. 20 ವರ್ಷಗಳ ಹಿಂದೆಯೇ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಕಾರ್ಯರೂಪಕ್ಕೆ ಬಾರದೇ ಹಾಗೆ ಉಳಿದಿತ್ತು. ಕಾರ್ಗಿಲ್ ಯುದ್ಧದ ನಂತರ ಭದ್ರತಾ ಲೋಪ ಮತ್ತು ಸೇನಾಪಡೆಗಳ ನಡುವೆ ಇರುವ ಅಂತರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 1999ರಲ್ಲಿ ಸಂಸತ್ತಿನ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೇತೃತ್ವವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ವಹಿಸಿಕೊಂಡಿದ್ದರು. ಸುದೀರ್ಘ ಅಧ್ಯಯನ ನಡೆಸಿದ ಸಮಿತಿಯು, ಮೂರೂ ಸೇನಾಪಡೆಗಳ ನಡುವೆ ಹಲವೆಡೆ ಸಂವಹನ ಮತ್ತು ಹೊಂದಾಣಿಕೆಯ ಕೊರತೆಯಾಗಿದ್ದನ್ನು ಗುರುತಿಸಿತ್ತು. ಹೀಗಾಗಿ ಮೂರೂ ಸೇನಾಪಡೆಗಳು ಸೇರಿ ಓರ್ವ ಮುಖ್ಯಸ್ಥರನ್ನು ನೇಮಿಸುವಂತೆ ವರದಿ ನೀಡಿತ್ತು. ಆದರೆ ಬದಲಾದ ರಾಜಕೀಯ ಹಾಗೂ ಅಧಿಕಾರಿಗಳ ಆಕ್ಷೇಪದಿಂದಾಗಿ ಸಮಿತಿಯ ಶಿಫಾರಸು ಕಾರ್ಯರೂಪಕ್ಕೆ ಬಂದಿರಲಿಲ್ಲ.

2012 ರಲ್ಲಿ ನರೇಶ್ ಚಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್, 2016 ರಲ್ಲಿ ಲೆಫ್ಟಿನೆಂಟ್ ಜನರಲ್ ಡಿಬಿ ಶೇಕ್ತ್ಕಾರ್ ಸಮಿತಿ ಸಿಡಿಎಸ್ ನೇಮಕವಾಗಬೇಕೆಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಮೂರು ಸೇನೆಯ ಪ್ಲಾನಿಂಗ್, ಬಜೆಟ್, ಸಂಗ್ರಹಣೆ, ಶಸ್ತ್ರಾಸ್ತ್ರ ಖರೀದಿ, ತರಬೇತಿ ವಿಚಾರದ ಬಗ್ಗೆ ಸಿಡಿಎಸ್ ಗಮನ ಹರಿಸಿ ಕೇಂದ್ರ ರಕ್ಷಣಾ ಇಲಾಖೆಯ ಜೊತೆ ಸೇತುವೆಯಾಗಿ ಕೆಲಸ ಮಾಡಲಿದೆ.
