Tag: ಭಾರತದ ಬಾಕ್ಸರ್‌

  • ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ – ಕಬಡ್ಡಿ ಆಟಗಾರ ಪತಿ ವಿರುದ್ಧ ಬಾಕ್ಸರ್‌ ಎಫ್‌ಐಆರ್‌ ದಾಖಲು

    ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ – ಕಬಡ್ಡಿ ಆಟಗಾರ ಪತಿ ವಿರುದ್ಧ ಬಾಕ್ಸರ್‌ ಎಫ್‌ಐಆರ್‌ ದಾಖಲು

    ಚಂಡೀಗಢ: ಅರ್ಜುನ ಪ್ರಶಸ್ತಿ ಪುರಸ್ಕೃತೆ, ಮಾಜಿ ವಿಶ್ವ ಚಾಂಪಿಯನ್‌ ಬಾಕ್ಸರ್‌ ಸವೀತಿ ಬೂರಾ ಅವರು ತಮ್ಮ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ.

    ಬೂರಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕಬಡ್ಡಿ ಆಟಗಾರ ಪತಿ ದೀಪಕ್ ಹೂಡಾ ಮತ್ತು ಅವರ ಕುಟುಂಬದವರು ವರದಕ್ಷಿಣೆಗಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

    ಈ ಇಬ್ಬರೂ 2022 ರಲ್ಲಿ ವಿವಾಹವಾದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಹೂಡಾ ವಿರುದ್ಧ ಬೂರಾ ಅವರು ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

    ಫೆ.25 ರಂದು ಸವೀತಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಹೂಡಾ ಅವರಿಗೆ ನಾವು 2-3 ಬಾರಿ ನೋಟಿಸ್ ನೀಡಿದ್ದೇವೆ. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ತಿಳಿಸಿದ್ದಾರೆ.

    ಈ ಬಗ್ಗೆ ಹೂಡಾ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಆರೋಗ್ಯದ ಸಮಸ್ಯೆಯಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ. ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದೇನೆ. ಖಂಡಿತವಾಗಿಯೂ ಠಾಣೆಗೆ ತೆರಳಿ ವಿಚಾರಣೆ ಎದುರಿಸಲಿದ್ದೇನೆ. ಆದರೆ, ನನ್ನ ಹೆಂಡತಿಯ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಆಕೆಯನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.

    ಕಬಡ್ಡಿ ಆಟಗಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 85 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೂಡಾ 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಅವರು 2016 ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಕಬಡ್ಡಿ ತಂಡದ ಭಾಗವಾಗಿದ್ದರು. ಅವರು ಪ್ರೊ ಕಬಡ್ಡಿ ಲೀಗ್‌ನಲ್ಲೂ ಸ್ಪರ್ಧಿಸಿದ್ದಾರೆ.