Tag: ಭಯ

  • ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ನಿನ್ನೆಯಷ್ಟೇ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಟಿ ನಿವೇದಿತಾ ಗೌಡ, ತಮ್ಮ ಖಾಸಗಿ ಬದುಕಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿ ಇರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಹೊತ್ತು ಪತಿ ಚಂದನ್ ಶೆಟ್ಟಿ ಮನೆಯಲ್ಲಿ ಇರದೇ ಇದ್ದರೆ, ಇಡೀ ರಾತ್ರಿ ನಿದ್ದೆಯೇ ಬರುವುದಿಲ್ಲ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.

    ರಾತ್ರಿ ಹೊತ್ತು ಒಬ್ಬಳೆ ಮನೆಯಲ್ಲಿ ಇದ್ದರೆ ತುಂಬಾ ಭಯವಾಗುತ್ತದೆ. ಹಾಗಾಗಿ ಇಡೀ ಮನೆ ಬೆಳಕಿನಿಂದ ತುಂಬಿರುತ್ತದೆ. ಅಷ್ಟೂ ಲೈಟ್ಸ್ ಆನ್ ಮಾಡಿಕೊಂಡೇ ಮನೆತುಂಬಾ ಓಡಾಡಿಕೊಂಡಿರುತ್ತೇನೆ. ನನ್ನಿಷ್ಟದ ವೆಬ್ ಸೀರಿಸ್ ನೋಡುತ್ತೇನೆ. ಒಂದೊಂದು ವೆಬ್ ಸೀರಿಸ್ ಅನ್ನು ಹತ್ತಿಪ್ಪತ್ತು ಬಾರಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸಲುವಾಗಿಯೇ ಆದಷ್ಟು ಒಂಟಿಯಾಗಿ ಇರದಂತೆ ಪತಿ ಎಚ್ಚರಿಕೆ ವಹಿಸುತ್ತಾರೆ ಎಂದೂ ಗಂಡನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಮಿಸೆಸ್ ಇಂಡಿಯಾ ತಯಾರಿ ಬಗ್ಗೆಯೂ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ ಆಗಬೇಕು ಎನ್ನುವುದು ಅವರ ಚಿಕ್ಕಂದಿನ ಕನಸಾಗಿತ್ತಂತೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಅವರು ತಾಯಿ ಎನ್ನುವುದನ್ನೂ ಹೇಳಿದ್ದಾರೆ. ಹಲವು ದಿನಗಳಿಂದ ಕಷ್ಟಪಟ್ಟು ಮಿಸೆಸ್‍ ಇಂಡಿಯಾ ಸ್ಪರ್ಧೆಗಾಗಿ ತಯಾರಿ ನಡೆಸಿದ್ದನ್ನೂ ಅವರು ಹಂಚಿಕೊಂಡಿದ್ದಾರೆ. ಕೊನೆಗೂ ಆ ಟೈಟಲ್ ಅನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

    ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಬಳಿ ರಸ್ತೆ ಪಕ್ಕದ ಮರದವೊಂದರ ಕೆಳಗಿರೋ ಪೂಜಾ ಸಾಮಗ್ರಿಗಳನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

    ಕರ್ಜಗಿ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಟ್ಟಿಗೆಯ ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ, ಎಳೆನೀರು, ನೂರಾರು ಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಇಟ್ಟು ಹೋಗಿದ್ದಾರೆ. ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

    ಗಡಿ ದುರಗಮ್ಮನೋ ಅಥವಾ ಯಾರಾದರೂ ವಾಮಾಚಾರವೋ ಮಾಡಿದ್ದರ ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಮಸ್ಥರಲ್ಲಿ ಆತಂಕವನ್ನ ಉಂಟುಮಾಡಿದೆ. ಊರಿನ ಹಿರಿಯರ ಜೊತೆ ಚರ್ಚಿಸಿ ವಸ್ತುಗಳನ್ನ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ. ಗಡಿ ದುರಗಮ್ಮದೇವಿ ಆಗಿದ್ದರೆ ಕಡಿಮೆ ವಸ್ತುಗಳನ್ನ ಇಟ್ಟು ಪೂಜೆ ಮಾಡುತ್ತಿದ್ದರು. ಈಗ ಹೆಚ್ಚು ಪೂಜಾ ಸಾಮಗ್ರಿಗಳನ್ನ ಇಟ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಗ್ರಾಮಸ್ಥರು.

    ಗ್ರಾಮದ ಹಿರಿಯ ಜೊತೆಗೆ ಮಾತನಾಡಿ ಪೂಜಾ ಹಾಗೂ ದೇವಿಯನ್ನ ನದಿಯಲ್ಲಿ ಬಿಡಬೇಕು. ಅಥವಾ ನಾವು ಗಡಿಯಲ್ಲಿ ಪೂಜೆ ಮಾಡಿ ಅಲ್ಲಿಯೇ ಮುಚ್ಚಬೇಕು ಅನ್ನೋದನ್ನ ತೀರ್ಮಾನ ಮಾಡುತ್ತೆವೆ ಅಂತಾರೆ ಗ್ರಾಮದ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು.

  • ಸೋಂಕಿತರ ಜೊತೆಯಿದ್ದು ಬಂದ್ರೂ ನನಗೆ ಕೊರೊನಾ ಬರಲ್ಲ: ಕಲ್ಯಾಣ ಸ್ವಾಮೀಜಿ

    ಸೋಂಕಿತರ ಜೊತೆಯಿದ್ದು ಬಂದ್ರೂ ನನಗೆ ಕೊರೊನಾ ಬರಲ್ಲ: ಕಲ್ಯಾಣ ಸ್ವಾಮೀಜಿ

    – ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಇಷ್ಟೊಂದು ಪ್ರಚಾರ ಏಕೆ

    ಬಳ್ಳಾರಿ: ಬಿಸಿ ನೀರಿನಿಂದ ಸಾಯೋ ಕೊರೊನಾ ರೋಗಕ್ಕೆ ಕೋಟ್ಯಂತರ ರೂ.ಗಳನ್ನು ವ್ಯಯಿಸಿ ಇಷ್ಟೊಂದು ಪ್ರಚಾರ ನೀಡಲಾಗುತ್ತೆ. ನಾನು ಬೇಕಾದರೆ ಚಾಲೆಂಜ್ ಮಾಡುತ್ತೇನೆ. ಕೋವಿಡ್ ಸೋಂಕಿತರೊಂದಿಗೆ ಕಾಲ ಕಳೆದು ಬರುತ್ತೇನೆ. ನನಗೆ ಕೋವಿಡ್ ಸೋಂಕು ಬರುತ್ತಾ ನೋಡುತ್ತೇನೆ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸವಾಲೆಸೆದಿದ್ದಾರೆ.

    ಬಳ್ಳಾರಿ ನಗರದ ಸ್ನೇಹ ಸಂಪುಟದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಭಯದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಜಿಲ್ಲಾಡಳಿತವಾಗಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವಾಗಲಿ ಕೊರೊನಾ ಸೋಂಕಿನ ಭಯವನ್ನು ಹೋಗಲಾಡಿಸಲು ಯಾವ ಪ್ರಯತ್ನವನ್ನು ನಡೆಸುತ್ತಿಲ್ಲ ಎಂದು ದೂರಿದರು.

    ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿ. ಅವರು ಸತ್ತಿರುವುದು ಈ ಕೋವಿಡ್ ಸೋಂಕಿನಿಂದ ಅಲ್ಲ. ಬದಲಾಗಿ ಭಯದಿಂದ ಅಥವಾ ಗಂಭೀರ ಸ್ವರೂಪದ ಕಾಯಿಲೆಯಿಂದ ಮಾತ್ರ ಸಾವನ್ನಪ್ಪಿರುವುದು. ನಾನು ಕೂಡ ಕೋವಿಡ್ ಸೋಂಕಿತರೊಂದಿಗೆ ಬೆರೆತು ಬರುವೆ. ನನಗೆ ಟೆಸ್ಟ್ ಮಾಡಿ ನೋಡಿ. ಇದೆಲ್ಲ ಶುದ್ಧ ಸುಳ್ಳು. ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಸಾವಿರಾರು ಕೋಟಿ ರೂ.ಗಳ ಹಣ ವ್ಯಯಿಸಿ ಜಾಹೀರಾತು ಪ್ರಸಾರ ಮಾಡಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದರು.

    ಈ ದೇಶದಲ್ಲಿ ದಿನದಿಂದ ದಿನಕ್ಕೆ ಈ ಕೋವಿಡ್ ಸೋಂಕಿನ ಭಯ ಹೆಚ್ಚುತ್ತಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸೇರಿದಂತೆ ಯಾರೊಬ್ಬರೂ ಕೂಡ ಈ ಸೋಂಕಿನಿಂದ ಸಾಯಲ್ಲ ಎಂದು ಧೈರ್ಯವಾಗಿ ಹೇಳೋಕೆ ತಯಾರಿಲ್ಲ. ಮಾಸ್ಕ್ ಧರಿಸಿದರೆ ಕೋವಿಡ್ ಸೋಂಕು ಹರಡಲ್ಲ ಎಂಬುವುದು ಶುದ್ಧ ಸುಳ್ಳು. ಮಾಸ್ಕ್ ಹಾಕಿದರೆ ಉಸಿರುಗಟ್ಟಿ ಸಾಯುತ್ತಾರೆ ಎಂದು ತಿಳಿಸಿದ್ದಾರೆ.

    ಗ್ರಾಮೀಣ ಭಾಗಕ್ಕೆ ಒಮ್ಮೆ ಹೋಗಿ ನೋಡಿ. ಅವರು ಯಾರೂ ಕೂಡ ಮಾಸ್ಕ್, ಸ್ಯಾನಿಟೈಸರ್ ಬಳಸಲ್ಲ. ಸಾಮೂಹಿಕವಾಗಿ ಊಟ ಮಾಡುತ್ತಾರೆ. ಅವರಿಗೆ ಏಕೆ ಕೋವಿಡ್ ಬರಲ್ಲ. ಯಥೇಚ್ಛವಾಗಿ ಈ ಕೋವಿಡ್ ಸೋಂಕು ಹರಡುವ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಹತ್ತು ಸಾವಿರ ಭಕ್ತರ ಮಧ್ಯೆ ಓಡಾಡಿಕೊಂಡು ಬಂದಿರುವೆ. ಕಲಬುರಗಿಯಲ್ಲೂ ಕೂಡ ಇಂಥದ್ದೇ ವಾತಾವರಣದಲ್ಲಿ ಓಡಾಡಿಕೊಂಡು ಬಂದಿರುವೆ. ಆದರೂ ಕೂಡ ಕೋವಿಡ್ ಸೋಂಕು ನನ್ನ ಹತ್ರ ಸುಳಿದಿಲ್ಲ ಎಂದರು.

  • ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ರಾಯಚೂರು: ಕೊರೊನಾ ಸೋಂಕಿತ ಶವವನ್ನು ಹೊತ್ತುತಂದ ಅಂಬುಲೆನ್ಸ್ ನೋಡಿ ಭಯಗೊಂಡ ಜನರು ಓಡಿಹೋಗಿರುವ ಘಟನೆ ರಾಯಚೂರು ತಾಲೂಕಿನ ಪೋತಗಲ್ ಗ್ರಾಮದಲ್ಲಿ ನಡೆದಿದೆ.

    ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಗುರುತು ಮಾಡಿದ್ದ ಸ್ಥಳಕ್ಕೆ ತರಲಾಗಿದೆ. ಈ ವೇಳೆ ಅಲ್ಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಅಂಬುಲೆನ್ಸ್ ಕಂಡು ಓಡಿ ಹೋಗಿದ್ದಾರೆ.

    ಪೋತಗಲ್ ಗ್ರಾಮದ ಸರ್ವೇ ನಂ.45ರಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿ ಜಿಲ್ಲಾಡಳಿತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿ ಸೋಂಕಿತರನ್ನು ಅಂತ್ಯಕ್ರಿಯೆ ಮಾಡಬೇಡಿ ಎಂದು ಪೋತಗಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಸೋಂಕಿತ ಅಂತ್ಯಕ್ರಿಯೆಯನ್ನು ಸರ್ಕಾರಿ ಜಾಗದಲ್ಲೇ ಮಾಡಿ ಮುಗಿಸಿದ್ದಾರೆ.

  • ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    – ಪೊಲೀಸರ ಲಾಠಿ ಏಟಿಗೆ ಸಾವು ಆರೋಪ

    ವಿಜಯಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಅಣ್ಣ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಸಾಗರ್ (19) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಸವನಬಾ ಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಸಾಗರ್ ತನ್ನ ತಂಗಿಯನ್ನು ಕರೆದುಕೊಂಡು ಬಂದಿದ್ದ. ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದ.

    ಈ ವೇಳೆ ಸಾಗರ್ ತಂಗಿಗೆ ನಕಲು ಪತ್ರ ಕೊಡಲು ಹೋದಾಗ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ಹೆದರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ ಈ ಹೇಳಿಕೆಯನ್ನು ಯುವಕನ ಕುಟುಂಬದವರು ತಳ್ಳಿ ಹಾಕಿದ್ದು, ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.

    ಜೊತೆ ಇದ್ದ ಪ್ರತ್ಯಕ್ಷದರ್ಶಿ ಈ ವಿಚಾರವಾಗಿ ಮಾಹಿತಿ ನೀಡಿದ್ದು, ನಾವು ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತಿದ್ದೆವು. ಆಗ ಅಲ್ಲಿಗೆ ಪೊಲೀಸ್ ಬಂದು ಪರೀಕ್ಷೆ ಮುಗಿಯುವವರೆಗೂ ಇಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳಿದರು. ಆಗ ನಾವು ಬೈಕ್ ಹತ್ತಿ ಹೊರಟಿದ್ದೆವು. ಆ ಸಂದರ್ಭದಲ್ಲಿ ಪೇದೆಯೊಬ್ಬರು ನನಗೂ ಕಾಲಿಗೆ ಒಂದು ಏಟು ಹೊಡೆದರು. ನಂತರ ಬೈಕ್‍ನಲ್ಲಿ ನನ್ನ ಹಿಂದೆ ಕುಳಿತಿದ್ದ ಸಾಗರ್ ಬೆನ್ನಿಗೆ ಹೊಡೆದರು. ಆಗ ಆತ ಕೆಳಗಡೆ ಬಿದ್ದ. ನಂತರ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಹೇಳಿದ್ದಾರೆ.

    ಸದ್ಯ ಸಾಗರ್ ಹೃದಯಾಘಾತದಿಂದ ಸಾವನ್ನಪ್ಪಿದನೋ ಅಥವಾ ಪೊಲೀಸ್‍ರ ಲಾಠಿ ಏಟಿಗೆ ಸಾವನ್ನಪ್ಪಿದನೋ ಎಂಬುದು ಸೂಕ್ತ ತನಿಖೆಯ ನಂತರ ತಿಳಿಯಬೇಕಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    ಲಾಕ್‍ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ಜಿರಳೆ ಕಥೆ ಹೇಳಿದ ಹರಿಪ್ರಿಯಾ

    – ಮಹಿಳೆಯರಿಗೆ ಸಲಹೆಯೊಂದನ್ನು ನೀಡಿದ ನಟಿ

    ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ.

    ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಹರಿಪ್ರಿಯಾ ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಹೆದರಿ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಭಯಪಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರೇ ಹೊಣೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.

    ಮಹಿಳೆಯರಿಗೆ ಎಲ್ಲವನ್ನು ಎದುರಿಸಬಲ್ಲ ಶಕ್ತಿ ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಭಯವಾಗುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಭಯಪಡುತ್ತೇನೆ. ಜಿರಳೆಗಳು ನೋಡಲು ಚಿಕ್ಕದಾಗಿದ್ದರೂ ದೊಡ್ಡ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರೂ ಕೂಡ ದೊಡ್ಡ ಗಾತ್ರದ ಡೈನೋಸರ್ಸ್ ಅನ್ನು ಬೇಕಾದರೂ ಪಳಗಿಸುತ್ತಾರೆ. ಆದರೆ ಜಿರಳೆಯನ್ನು ಕಂಡರೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಭಯಪಡುತ್ತೀರಾ ಎಂಬ ವಿಚಾರವನ್ನು ಪುರುಷರೊಂದಿಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಮುಂದೆ ಬಳಸಬಹುದು. ಈ ಹಿಂದೆ ಕೂಡ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯಪಡಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು. ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ ಎಂದು ಹರಿಪ್ರಿಯಾ ಅನುಭವವನ್ನು ಬರೆದಿದ್ದಾರೆ.

    ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು ಸಾವಿರ ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು. ಇಲ್ಲವೇ ಅದು ಬೇರೆ ಕಡೆ ಹೋಗಬೇಕು. ಸಿನಿಮಾದಲ್ಲಿನ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೆ ಈಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.

  • ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕೊರೊನಾಗೆ ಹೆದರಿ ವೈದ್ಯರು ಆಸ್ಪತ್ರೆಯಿಂದ ಪರಾರಿ – ನೋಟಿಸ್ ಜಾರಿ

    ಕಾರವಾರ: ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆಯುತ್ತಿದ್ದ ಇಬ್ಬರು ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ನಡೆದಿದೆ.

    ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಗೆ ಕೊರೊನಾ ಸೋಂಕಿತ ಆರು ಜನ ರೋಗಿಗಳಿದ್ದು ಇವರಿಗೆ ಚಿಕಿತ್ಸೆ ಕೊಡಲು ತರಬೇತಿ ನೀಡಿ ಇಬ್ಬರು ವೈದ್ಯರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಕಾರ್ ಪಾರ್ಕ್ ಮಾಡಿ ಬರುವುದಾಗಿ ಹೇಳಿ ಹೋದ ಈ ವೈದರು ಮೊಬೈಲ್ ಸ್ವಿಚ್ ಆಫ್ ಮಾಡಿ ಪತಂಜಲಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

    ಕರ್ತವ್ಯ ಲೋಪ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಆರ್.ರೋಷನ್ ರಿಂದ ನೋಟಿಸ್ ನೀಡಿದ್ದು ಏಳು ದಿನದಲ್ಲಿ ಉತ್ತರ ನೀಡದಿದ್ದರೆ ಕರ್ತವ್ಯ ಲೋಪದಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯವರು ಸಹ ಕೊರೊನಾ ರೋಗಿಗಳನ್ನು ಹೊರತುಪಡಿಸಿ ಇತರ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ ನೀಡುತಿಲ್ಲ. ಹೀಗೆ ಮಾಡಿದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಇಂತವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಮೋದಿ ಸರ್ಕಾರವನ್ನು ಟೀಕಿಸಲು ಭಯದ ವಾತಾವರಣ ನಿರ್ಮಾಣವಾಗಿದೆ – ರಾಹುಲ್ ಬಜಾಜ್

    ಮೋದಿ ಸರ್ಕಾರವನ್ನು ಟೀಕಿಸಲು ಭಯದ ವಾತಾವರಣ ನಿರ್ಮಾಣವಾಗಿದೆ – ರಾಹುಲ್ ಬಜಾಜ್

    ಮುಂಬೈ: ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಜನರು ಭಯಪಡುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮವೊಂದರ ಸಂವಾದ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೇ ಸಚಿವ ಪಿಯೂಶ್ ಗೋಯಲ್ ಆಗಮಿಸಿದ್ದರು. ಈ ವೇಳೆ ರಾಹುಲ್ ಬಜಾಜ್, ಯುಪಿಎ 2 ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ನಿಮ್ಮನ್ನು ಟೀಕಿಸಿದರೆ ನೀವು ಮೆಚ್ಚುಗೆ ವ್ಯಕ್ತಪಡಿಸುತ್ತೀರಿ ಎನ್ನುವ ಯಾವುದೇ ವಿಶ್ವಾಸವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಹುಲ್ ಬಜಾಜ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಯಾರೂ ಯಾವುದೇ ಕಾರಣಕ್ಕೂ ಭಯಪಡಬೇಕಾದ ಅಗತ್ಯವಿಲ್ಲ. ಮಾಧ್ಯಮಗಳಲ್ಲಿ ನಮ್ಮ ಸರ್ಕಾರದ ವಿರುದ್ಧ ನಿರಂತರ ಟೀಕೆಗಳು ಬರುತ್ತಿವೆ. ನೀವು ಹೇಳಿದಂತೆ ಭಯದ ಪರಿಸರ ಸೃಷ್ಟಿಯಾಗಿದ್ದರೆ ನಾವು ಸುಧಾರಿಸಲು ಪ್ರಯತ್ನಿಸುತ್ತೇವೆ. ನಮ್ಮ ಯಾವುದೇ ಟೀಕೆ ಬಂದರೂ ನಮ್ಮ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ಮಾತಿನ ಆರಂಭದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಬಗ್ಗೆ ಪ್ರಸ್ತಾಪ ಮಾಡಿದ ರಾಹುಲ್ ಬಜಾಜ್, ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಗಾಂಧೀಜಿಗೆ ಗುಂಡು ಹಾರಿಸಿದವರು ಯಾರು ಎನ್ನುವ ಬಗ್ಗೆ ಸಂಶಯವಿದೆಯೇ ಎಂದು ಪ್ರಶ್ನಿಸಿದರು.

    ಈ ಪ್ರಶ್ನೆಗೆ ಅಮಿತ್ ಶಾ ಪ್ರತಿಕ್ರಿಯಿಸಿ, ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಸರ್ಕಾರವಾಗಲಿ ಮತ್ತು ಬಿಜೆಪಿ ಪಕ್ಷವಾಗಲಿ ಯಾರೂ ಒಪ್ಪುವುದಿಲ್ಲ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಹೇಳಿಕೆಯ ಬಳಿಕ ಸಾಧ್ವಿ ಪ್ರಜ್ಞಾ ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಉತ್ತರಿಸಿದರು.

    ಗುಂಪು ಹತ್ಯೆ ಜಾಸ್ತಿ ನಡೆಯುತ್ತಿದ್ದು ಕೃತ್ಯ ಎಸಗಿದವರಿಗೆ ಶಿಕ್ಷೆ ಆಗುತ್ತಿಲ್ಲ ಎಂದು ರಾಹುಲ್ ಬಜಾಜ್ ಹೇಳಿದ್ದಕ್ಕೆ ಅಮಿತ್ ಶಾ, ಗುಂಪು ಹತ್ಯೆ ಈ ಹಿಂದೆಯೂ ಸಂಭವಿಸಿದೆ. ಹಾಗೆ ಹೋಲಿಸಿದರೆ ಈಗ ಕಡಿಮೆ ನಡೆಯುತ್ತಿದೆ. ಕೃತ್ಯ ಎಸಗಿದವರಿಗೆ ಶಿಕ್ಷೆ ಆಗುತ್ತಿಲ್ಲ ಎನ್ನುವ ಮಾತನ್ನು ನಾವು ಒಪ್ಪುವುದಿಲ್ಲ. ಗುಂಪು ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳು ಈಗಾಗಲೇ ಇತ್ಯರ್ಥವಾಗಿದ್ದು ದೋಷಿಗಳಿಗೆ ಶಿಕ್ಷೆಯಾಗಿದೆ. ಆದರೆ ಮಾಧ್ಯಮಗಳಲ್ಲಿ ಇವುಗಳ ಬಗ್ಗೆ ವರದಿಯಾಗಿಲ್ಲ ಎಂದರು.

  • ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಒಂದೇ ವಾರದಲ್ಲಿ 10 ಕಡೆ ದರೋಡೆ, ಯುವಕನ ಕೊಲೆ- ಜನರಲ್ಲಿ ಆತಂಕ

    ಬೆಂಗಳೂರು: ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ದಿನನಿತ್ಯ ಒಂದಲ್ಲ ಒಂದು ಕಡೆ ಕಳ್ಳರು ತಮ್ಮ ಕೈ ಚಳಕ ತೋರುತ್ತಲೇ ಇದ್ದಾರೆ. ಜೊತೆಗೆ ಕೊಲೆ ಬೇರೆ ನಡೆದಿದೆ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪಟ್ಟಣದ ಪೊಲೀಸರು ಮಾತ್ರ ಅಪರಾಧಿಗಳನ್ನ ಮಟ್ಟ ಹಾಕಲು ಮುಂದಾಗುತ್ತಿಲ್ಲ. ಈ ಹಿನ್ನೆಲೆ ಪಟ್ಟಣದಲ್ಲಿ ಅಪಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಲ್ಲಿನ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಯುವಕನೊರ್ವನ ಕೊಲೆ ನಡೆದಿತ್ತು. ಜೊತೆಗೆ ಕಳ್ಳರು ಹಾಡಹಗಲೇ ಮನೆಯೊಂದರ ಬೀಗ ಮುರಿದು ಹಣ ಒಡವೆ ಕದ್ದು ಪರಾರಿಯಾಗಿದ್ದರು. ಇದೆಲ್ಲ ನೋಡಿದ ಜನತೆ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆಯೇ ಅನ್ನೋ ಆತಂಕದಲ್ಲಿ ಇದ್ದಾರೆ.

    ಒಂದೆಡೆ ಕೊಲೆ ಪ್ರಕರಣ ನಡೆದಿದ್ದರೆ ಮತ್ತೊಂದೆಡೆ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಹಾಡಹಗಲೇ ರಮೇಶ್ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಮನೆಯವರು ಹೊರಹೋಗೋದನ್ನೇ ಗಮನಿಸಿ ಕೇವಲ 10 ನಿಮಿಷದಲ್ಲಿ ಮನೆ ಬೀಗ ಮುರಿದು ಮನೆಯಲ್ಲಿದ್ದ 400 ಗ್ರಾಂ ಚಿನ್ನ, 40 ಸಾವಿರ ನಗದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಅಕ್ಕಪಕ್ಕ ನೂರಾರು ಮನೆಗಳಿದ್ರೂ ಯಾರಿಗೂ ಅನುಮಾನ ಬರದಂತೆ ಕಳ್ಳರು ತಮ್ಮ ಚಲಾಕಿತನ ಮೆರೆದಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಇನ್ನೂ ಆನೇಕಲ್ ಪಟ್ಟಣದ ಮುಟ್ಟಕಟ್ಟಿ ಬಳಿ ರಾತ್ರಿ ಪಾರ್ಟಿ ಮಾಡಲು ಬಂದ ಯುವಕರ ಗುಂಪೊಂದು ಮದ್ಯದ ಅಮಲಿನಲ್ಲಿ ಜೊತೆಯಲ್ಲಿ ಬಂದಿದ್ದ ಗುಮ್ಮಳಪುರದ ಲೋಕೆಶ್(30)ನನ್ನು ಮದ್ಯದ ಬಾಟಲಿಯಿಂದ ಹೊಡೆದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ಜಾಗದಲ್ಲಿ ಕೆಎ.51ಎಚ್.ಎಫ್.9207 ಹೋಂಡಾ ಡಿಯೋ ಬೈಕ್ ಪತ್ತೆಯಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

    ಇತ್ತೀಚೆಗೆ ಆನೇಕಲ್ ಪಟ್ಟಣದ ಹೊರಭಾಗದಲ್ಲಿ ರಾತ್ರಿ ವೇಳೆ ತೋಪುಗಳ ಬಳಿ ಖಾಲಿ ಬಡಾವಣೆಗಳಲ್ಲಿ ಯುವಕರು ಪಾರ್ಟಿ ನಡೆಸುವುದು ಹೆಚ್ಚಾಗಿದ್ದು, ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುವುದು ಕಡಿಮೆಯಾಗಿರುವುದೇ ಈ ರೀತಿಯ ಪ್ರಕರಣಗಳು ಹೆಚ್ಚಾಗಲು ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಆನೇಕಲ್ ಪಟ್ಟಣದಲ್ಲಿ ಸುಮಾರು 15 ದಿನಗಳಲ್ಲಿ ಅಂಗಡಿ ಮನೆಗಳಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದು, ಸುಮಾರು 20ಕ್ಕೂ ಹೆಚ್ಚು ಕಳ್ಳತನ ನಡೆದಿದೆ. ಕೆಲವೊಂದು ಕಡೆ ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದುವರೆಗೂ ಯಾವೊಬ್ಬ ಕಳ್ಳನನ್ನ ಆನೇಕಲ್ ಪೊಲೀಸರು ಬಂಧಿಸದಿರುವುದು ಪಟ್ಟಣದಲ್ಲಿ ಕಳ್ಳರು ಪುಂಡ ಪೋಕರಿಗಳಿಗೆ ಪೊಲೀಸರ ಭಯವಿಲ್ಲದಂತ ವಾತಾವರಣ ಉಂಟಾಗಿದೆ. ಇಷ್ಟೆಲ್ಲ ಪ್ರಕರಣ ವರದಿಯಾಗಿದ್ರು ಪೊಲೀಸರು ಇದೂವರೆಗೆ ಒಂದೇ ಒಂದು ಪ್ರಕರಣವನ್ನು ಪತ್ತೆಹಚ್ಚದಿರುವುದು ಪಟ್ಟಣದ ಜನತೆಯ ಸಿಟ್ಟು, ಆತಂಕಕ್ಕೆ ಕಾರಣವಾಗಿದೆ ಎಂದು ಮನೆಯ ಮಾಲೀಕರಾದ ಶುಭಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯು ಹಳದಿ ಬಣ್ಣದಿಂದ ಕೂಡಿದ್ದ ಬೆನ್ನಲ್ಲೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಪರಿಸರ ವಿಜ್ಞಾನಿಯಾದ ಎನ್.ಎ.ಮಧ್ಯಸ್ಥರವರು ಸ್ಪಷ್ಟನೆ ನೀಡಿದ್ದಾರೆ.

    ಹಳದಿ ಮಳೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಣ್ಣದ ಕೀಟಗಳು ಇದ್ದು, ಇವು ಆಗಸ್ಟ್ ತಿಂಗಳ ಸುಮಾರಿಗೆ ಹೆಚ್ಚಾಗಿ ಕಂಡುಬರುತ್ತವೆ. ಕೀಟಗಳು ಬೆಳೆದ ನಂತರ ಅವುಗಳು ಪುಡಿಪುಡಿಯಾಗಿ ವಾತಾವರದಲ್ಲಿ ಸೇರಿಕೊಂಡಿರುತ್ತವೆ. ಗಾಳೆ ಮಳೆ ಜೊತೆಯಾದರೆ ತೆಂಗಿನ ಗರಿಯಲ್ಲಿದ್ದ ಹಳದಿ ಮಿಶ್ರಿತ ಬಿಳಿ ಕೀಟಗಳು ಮಳೆ ಹನಿಗಳ ಜೊತೆ ನೆಲಕ್ಕೆ ಬೀಳುವುದರಿಂದ ಹಳದಿ ಮಿಶ್ರಿತ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

    ಕರಾವಳಿಯಲ್ಲಿ ಲಕ್ಷಾಂತರ ತೆಂಗಿನ ಮರಗಳಲ್ಲಿ ಈ ಬಿಳಿ ಕೀಟ ಕಾಣಿಸಿಕೊಳ್ಳುವುದರಿಂದ ವಾತಾವರಣದಲ್ಲಿ ಕೀಟಗಳು ಇರುವ ಸಂದರ್ಭದಲ್ಲೇ ಮಳೆಯಾಗಿದ್ದರಿಂದ ಹಳದಿ ಮಿಶ್ರಿತ ಬೂದಿ ಬಣ್ಣದ ಮಳೆಯಾಗಿದೆ. ಪರಿಸರದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಹಿರಿಯ ಪರಿಸರ ತಜ್ಞ ಎನ್.ಎ.ಮಧ್ಯಸ್ಥರವರು, ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳದಲ್ಲಿಯೂ ಇಂತಹುದೇ ಮಳೆಯಾಗಿತ್ತು ಎಂದು ಹೇಳಿದ್ದಾರೆ.

    ಈ ಹಳದಿ ಮಿಶ್ರಿತ ಬಿಳಿ ಮಳೆಯ ಬಗ್ಗೆಯೂ ಭಯ ಬೇಡ. ಕೃಷಿ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಲಿ, ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕೇಂದ್ರವಿದೆ. ಈಗಾಗಲೇ ತಜ್ಞರು ಮಳೆಯ ಸ್ಯಾಂಪಲನ್ನು ಸಂಗ್ರಹ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ, ಕುಂದಾಪುರದಲ್ಲಿ ಹಳದಿ ಮಳೆ!

    ವಿಯೆಟ್ನಾಂನಲ್ಲೊಮ್ಮೆ ಭಾರೀ ಪ್ರಮಾಣದಲ್ಲಿ ಹೂವುಗಳು ಬೆಳೆದಿತ್ತು. ಕಾಡು, ಊರಿನೊಳಗೆ ಭಾರೀ ಪ್ರಮಾಣದಲ್ಲಿ ಬೆಳೆದ ಹೂವುಗಳ ಪರಾಗ ಗಾಳಿಯಲ್ಲಿ ಬೆರೆತ ಸಂದರ್ಭ ಇದೇ ರೀತಿ ಹಳದಿ ಮಳೆಯಾಗಿತ್ತು. ಅಲ್ಲಿನ ಜನರು ಇದು ಹಳದಿ ರಾಸಾಯನಿಕ ಮಳೆ ಎಂದು ಭಯಗೊಂಡು, ವಿರೋಧಿ ದೇಶದವರು ರಾಸಾಯನಿಕ ದಾಳಿ ಮಾಡಿರಬಹುದು ಎಂಬ ಸಂಶಯವನ್ನು ಹೊರಹಾಕಿದ್ದರು. ಆದರೆ ಸಂಶೋಧನೆಯ ಬಳಿಕ ಅದು ಪರಾಗ ಮಳೆ ಅಂತ ಸಾಬೀತಾಯಿತು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews