Tag: ಬ್ರೋಕರ್

  • ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ – ವಾಹನ ಓಡಿಸಲು ಬರದಿದ್ರೂ ಸಿಗುತ್ತೆ ಲೈಸೆನ್ಸ್.!

    ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ – ವಾಹನ ಓಡಿಸಲು ಬರದಿದ್ರೂ ಸಿಗುತ್ತೆ ಲೈಸೆನ್ಸ್.!

    ಬೆಂಗಳೂರು: ದೇಶಾದ್ಯಂತ ಇರುವ ಆರ್‌ಟಿಓ ಕಚೇರಿಗಳನ್ನು ಕೇಂದ್ರ ಸರ್ಕಾರ ಡಿಜಿಟಲೀಕರಣಗೊಳಿಸಿ ಪಾರದರ್ಶಕ ಮಾಡುತ್ತಿದೆ. ಇಲ್ಲಿನ ಆರ್‌ಟಿಓ ಕಚೇರಿಯನ್ನು ಅಧಿಕಾರಿಗಳು ಬ್ರೋಕರ್ ಗಳ ಜೊತೆ ಶಾಮೀಲಾಗಿ ಹಣಮಾಡುವ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ವಾಹನ ಓಡಿಸಲು ಬರದಿದ್ದರೂ ಆರ್‌ಟಿಓ ಕಚೇರಿಯಲ್ಲಿ ಹಣ ಕೊಟ್ಟರೆ ಬ್ರೋಕರ್ ಗಳ ಮೂಲಕ ನೇರವಾಗಿ ಲೈಸೆನ್ಸ್ ಮನೆಗೆ ಬರುತ್ತದೆ.

    ಹೌದು..ಬೆಂಗಳೂರು ಹೊರವಲಯ ಆನೇಕಲ್‍ನ ಆರ್ ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳಿಲ್ಲದೇ ಯಾವ ಕೆಲಸನೂ ನಡೆಯಲ್ಲ. ಇಲ್ಲಿನ ಅಧಿಕಾರಿಗಳು ಕಚೇರಿ ಟೈಮಿಂಗ್ಸ್ ಮಧ್ಯಾಹ್ನ 12 ಗಂಟೆಯಾಗಿದೆ. ಇದು ಸರ್ಕಾರದ ಸಮಯ ಅಲ್ಲ. ಬದಲಿಗೆ ಅವರೇ ಮಾಡಿಕೊಂಡಿರೋ ಟೈಮಿಂಗ್. ಹೀಗಾಗಿ ವಾಹನಗಳ ಲೈಸೆನ್ಸ್, ಎಫ್‍ಸಿ, ಇನ್ಷೂರೆನ್ಸ್ ಸೇರಿ ಹಲವು ಕೆಲಸಗಳಿಗೆ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಆನ್‍ಲೈನ್ ಮೂಲಕ ಅರ್ಜಿ ಹಾಕಿದ್ದರೂ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಿಕೊಡದೆ ದಲ್ಲಾಳಿಗಳ ಜೊತೆ ಶಾಮೀಲಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸ್ಥಳೀಯ ಪುರುಷೋತ್ತಮ್ ಹೇಳಿದ್ದಾರೆ.

    ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ಆನೇಕಲ್-ಚಂದಾಪುರ ರಸ್ತೆಯ ಬ್ಯಾಗಡೆದೇನಹಳ್ಳಿ ಬಳಿ ಆರ್‌ಟಿಓ ಕಚೇರಿ ನಿರ್ಮಾಣ ಮಾಡಿದ್ದರು. ಇಲ್ಲಿನ ಟ್ರ್ಯಾಕ್‍ನಲ್ಲಿ ವಾಹನ ಓಡಿಸಿ ಲೈಸೆನ್ಸ್ ಪಡೆಯಬೇಕು. ಆದರೆ ಹಣ ಕೊಟ್ಟರೆ ಟ್ರ್ಯಾಕ್‍ನಲ್ಲಿ ವಾಹನ ಓಡಿಸೋ ಅವಶ್ಯಕತೆನೇ ಇಲ್ಲ. ಮನೆ ಬಾಗಿಲಿಗೆ ಲೈಸೆನ್ಸ್ ಬರುತ್ತೆ, ಹಣ ನೀಡದಿದ್ದರೆ ತಿಂಗಳುಗಟ್ಟಲೆ ಲೈಸೆನ್ಸ್ ಗಾಗಿ ಅಲೆಸುತ್ತಾರೆ ಇಲ್ಲಿನ ಅಧಿಕಾರಿಗಳು ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ಆರೋಪಿಸುತ್ತಾರೆ.

    ಹಣದ ಆಸೆಗೆ ಬ್ರೋಕರ್ ಗಳ ಜೊತೆ ಶಾಮಿಲಾಗಿರುವ ಆರ್‌ಟಿಓ ಅಧಿಕಾರಿಗಳ ವಿರುದ್ಧ ಸಾರಿಗೆ ಸಚಿವರು ಕೂಡಲೇ ಕ್ರಮ ಜರುಗಿಸಬೇಕು. ಜೊತೆಗೆ ಇಲ್ಲಿನ ಬ್ರೋಕರ್ ಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆವರು ಸುರಿಸಿ ದುಡಿದ ಹಣಕ್ಕೆ ಪೂಜೆ, ಅಕ್ರಮ ಎಸಗಿಲ್ಲ: 15 ವರ್ಷದಲ್ಲಿ ಶ್ರೀಮಂತರಾಗಿದ್ದನ್ನು ವಿವರಿಸಿದ ಸುರೇಶ್

    ಬೆವರು ಸುರಿಸಿ ದುಡಿದ ಹಣಕ್ಕೆ ಪೂಜೆ, ಅಕ್ರಮ ಎಸಗಿಲ್ಲ: 15 ವರ್ಷದಲ್ಲಿ ಶ್ರೀಮಂತರಾಗಿದ್ದನ್ನು ವಿವರಿಸಿದ ಸುರೇಶ್

    ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಪ್ರತಿವರ್ಷ ನಾವು ತೆರಿಗೆ ಕಟ್ಟಿಕೊಂಡು ಬಂದಿದ್ದೇನೆ. ನಾನು ಮೋಸ ಮಾಡಿದ್ದರೆ ಯಾರೂ ಬೇಕಾದರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು ಎಂದು ಗುತ್ತಿಗೆಗೆದಾರರಾಗಿರುವ ಸುರೇಶ್ ಅವರು ತಿಳಿಸಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕಳೆದ 10 ವರ್ಷಗಳಿಂದ ನಾವು ವರಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೇವೆ. ಪ್ರತಿ ವರ್ಷವೂ ನಾವು ಈ ರೀತಿ ಹಣವನ್ನು ಇರಿಸಿ ಪೂಜೆ ಮಾಡುತ್ತೇವೆ. ಈ ವಿಚಾರ ನನ್ನ ಸ್ನೇಹಿತರು, ಸಂಬಂಧಿಗಳಿಗೆ ತಿಳಿದಿದೆ ಎಂದು ಹೇಳಿದರು.

    ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಬಗ್ಗೆ ಪತ್ರ ತೋರಿಸಿದ ಅವರು, 2 ಲಕ್ಷ ರೂ. ನಗದು ಹಣವನ್ನು ವಹಿವಾಟು ಮಾಡಬಾರದು ಎಂದು ಸರ್ಕಾರ ಹೇಳಿದೆ ಹೊರತು ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಬಾರದು ಎಂದು ಹೇಳಿಲ್ಲ. ನಾವು ನ್ಯಾಯಬದ್ಧವಾಗಿ ಸಂಪಾದಿಸಿದ ಹಣ. ಲಕ್ಷಿ ವಿಲಾಸ್ ಬ್ಯಾಂಕ್ ನಿಂದ 83 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದೇನೆ ಎಂದು ಸುರೇಶ್ ತಿಳಿಸಿದರು.

    ಇಷ್ಟೊಂದು ಹಣವನ್ನು ಸಂಪಾದಿಸಿದ್ದು ಹೇಗೆ ಎಂದು ಕೇಳಿದ್ದಕ್ಕೆ 2002ರಲ್ಲಿ ನಮ್ಮದೊಂದು ಜಾಗ ಇತ್ತು. ಆ ಜಾಗವನ್ನು ಮಾರಾಟ ಮಾಡಿದ ಬಳಿಕ ಎಚ್‍ಎಸ್‍ಆರ್ ಲೇಔಟ್ ನಲ್ಲಿ ನಾವು ಮೂರು ಅಂತಸ್ತಿನ ಕಟ್ಟಡವನ್ನು 4.5 ಲಕ್ಷ ರೂ. ಖರ್ಚು ಮಾಡಿ ಕಟ್ಟಿದ್ವಿ. ಬಳಿಕ ಅದನ್ನು 9 ಲಕ್ಷ ರೂ. ಮಾರಾಟ ಮಾಡಿದ್ವಿ. ಇದಾದ ಬಳಿಕ ನಾವು ಕಟ್ಟಡ ಕಟ್ಟಲು ಆರಂಭಿಸಿದ್ವಿ. ನಾನು ಡಿಪ್ಲೊಮ ಓದುವ ಸಮಯದಲ್ಲಿ ಬೆಳಗ್ಗೆ 4.30ಕ್ಕೆ ಎದ್ದ ಕಟ್ಟಡದ ಬಳಿ ಹೋಗುತ್ತಿದ್ದೆ. ನಮ್ಮ ತಂದೆ, ತಾಯಿ, ಅಕ್ಕಂದಿರು ಇಟ್ಟಿಗೆಯನ್ನು ಹೊತ್ತಿದ್ದಾರೆ. ಅಲ್ಲಿಂದ ನಮ್ಮ ಬ್ಯುಸಿನೆಸ್ ಬದಲಾಯ್ತು ಎಂದು ಅವರು ವಿವರಿಸಿದರು.

    ಇದೇ ವೇಳೆ ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲೆ ಇದೆ ಅಲ್ಲವೇ ಎಂದು ಕೇಳಿದ್ದಕ್ಕೆ, ಈ ಆರೋಪ ಶುದ್ಧ ಸುಳ್ಳು. ಬಿಬಿಎಂಪಿ ಅವರು ನನಗೆ ಜಾಗ ನೀಡಿ ಬಳಿಕ ಅದು ಪಾರ್ಕ್ ಗೆ ಸೇರಿದ ಜಾಗ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಾನು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.

    ನ್ಯಾಯಬದ್ಧವಾಗಿ ಸಂಪಾದನೆ ಮಾಡಿದ್ದೇವೆ. ಯಾವುದೇ ಅಕ್ರಮವನ್ನೂ ಎಸಗಿಲ್ಲ. ಸಂಪಾದನೆಯಾದ ಹಣದಲ್ಲಿ ಮೋಜು ಮಸ್ತಿ ಮಾಡಿಲ್ಲ. ಎಲ್ಲದಕ್ಕೂ ಲೆಕ್ಕ ಇದೆ. ಈ ಹಿಂದೆ ಆರ್ಕ್ಯೂಟ್ ನೆಟ್ ವರ್ಕ್ ಇದ್ದಾಗ ನಾನೇ ಪೂಜೆಯ ಫೋಟೋಗಳನ್ನು ಹಾಕಿದ್ದೆ. ಧೈರ್ಯ ಇರುವ ಕಾರಣಕ್ಕೆ ನಾವು ಈ ರೀತಿಯ ಪೂಜೆ ಮಾಡಿದ್ದೇವೆ ಎಂದು ಅವರು ಪಬ್ಲಿಕ್ ಟಿವಿಗೆ ವಿವರಿಸಿದರು.