Tag: ಬ್ಯಾಡ್ಮಿಂಟನ್ ಆಟಗಾರ್ತಿ

  • ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಮಡಿಕೇರಿ: ಖ್ಯಾತ ಬ್ಯಾಡ್ಮಿಂಟರ್ ತಾರೆ (Badminton Player) ಪಿ.ವಿ.ಸಿಂಧು (PV Sindhu) ಇತ್ತೀಚೆಗೆ ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗಿಗೆ (Kodagu) ಭೇಟಿ ನೀಡಿದ್ದರು. ಈ ಬಳಿಕ ನನಗೆ ಕಾಫಿ ತೋಟ ಖರೀದಿಸುವ ಆಸೆ ಇದೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

    ಹೌದು, ಇಂಥ ಆಸೆಗೆ ಕಾರಣವಾದದ್ದು ಇತ್ತೀಚಿಗೆ ಕೊಡಗಿಗೆ ಭೇಟಿ ನೀಡಿ ಇಲ್ಲಿನ ಕಾಫಿ ತೋಟದ ನಡುವೆ ಕೆಲವು ದಿನಗಳು ಕಾಲಕಳೆದ ನಂತರವಂತೆ. ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿಂದ (Telangana) ಕೊಡಗಿಗೆ ಪತಿ ಹಾಗೂ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಅಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದರು. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಈ ಬಗ್ಗೆ ಎಕ್ಸ್‌ನಲ್ಲಿ ಸಂತೋಷ ಹಂಚಿಕೊಂಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ಕಾಫಿ ಸಿಪ್ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. 14 ವನ್ಯಜೀವಿಗಳು, 800 ತಳಿಯ ಪಕ್ಷಿಗಳನ್ನೂ, ವಿವಿಧ ಜಾತಿಯ ಪುಷ್ಪ, ಸಸ್ಯಗಳು ಈ ತೋಟದಲ್ಲಿವೆ. ನನ್ನ ಪತಿ ದತ್ತ ಕೂಡಾ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

    ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಧು, ಬ್ಯಾಡ್ಮಿಂಟನ್‌ನಲ್ಲಿ ವರ್ಲ್ಡ್ ರ‍್ಯಾಂಕಿಂಗ್ 2 ಸ್ಥಾನದಲ್ಲಿದ್ದಾರೆ. ಹೆಸರಾಂತ ಉದ್ಯಮಿ ವೆಂಕಟದತ್ತ ಸಾಯಿ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿರುವ ಸಿಂಧು, ವಿಶ್ರಾಂತಿ ಬಯಸಿ ಪತಿಯೊಂದಿಗೆ ಕೊಡಗಿಗೆ ಬಂದಿದ್ದರು.

  • ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಜೊತೆ ವಿನಾಯಕ್ ಜೋಷಿ ಮದ್ವೆ

    ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ ಜೊತೆ ವಿನಾಯಕ್ ಜೋಷಿ ಮದ್ವೆ

    ಬೆಂಗಳೂರು: ಮಹಾಮಾರಿ ಕೊರೊನಾ ಮಧ್ಯೆಯೂ ಸ್ಯಾಂಡಲ್‍ವುಡ್‍ನಲ್ಲಿ ಕೆಲವು ನಟ-ನಟಿಯರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೆ ನಟಿ ಮಯೂರಿ ತಮ್ಮ ಬಹುಕಾಲದ ಗೆಳೆಯನನ್ನು ವರಿಸಿದ್ದಾರೆ. ಇದೀಗ ನಟ ವಿನಾಯಕ್ ಜೋಷಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ನಟ ವಿನಾಯಕ್ ಜೋಶಿ ತಮ್ಮ ಗೆಳತಿ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರನ್ನು ಮದುವೆಯಾಗಲಿದ್ದಾರೆ. ವರ್ಷಾ ಅವರು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದಾರೆ. ಇವರಿಬ್ಬರಿಗೆ ಬ್ಯಾಲದಲ್ಲಿ  ಪರಿಚಯವಿತ್ತು. ಅಲ್ಲದೇ 25 ವರ್ಷಗಳ ನಂತರ ಮತ್ತೆ ಸಾಮಾನ್ಯ ಸ್ನೇಹಿತರಾಗಿ ಪರಿಯಚರಾಗಿದ್ದರು.

    ತಮ್ಮ ಗೆಳತಿಯ ಬಗ್ಗೆ ಮಾತನಾಡಿದ ವಿನಾಯಕ್ ಜೋಶಿ, ನಾವು 7 ವರ್ಷದವರಿದ್ದಾಗ ಒಟ್ಟಿಗೆ ಡ್ಯಾನ್ಸ್ ಮಾಡಿದ್ದೇವೆ. ನಂತರ 25 ವರ್ಷಗಳ ಬಳಿಕ ಮತ್ತೆ ಸಾಮಾನ್ಯ ಸ್ನೇಹಿತರಾಗುವ ಮೂಲಕ ಭೇಟಿಯಾಗಿದ್ದೆವು. ಅಂದಿನಿಂದ ನಾವು ಆಗಾಗ ಭೇಟಿಯಾಗುತ್ತಿದ್ದೇವೆ ಎಂದರು.

    ವರ್ಷಾ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದು, ಅನೇಕ ಅಂತರಾಷ್ಟ್ರಿಯ ಪಂದ್ಯಾವಳಿಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಕಳೆದ ವರ್ಷ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿದ್ದರು. ಪ್ರಸ್ತುತ ವರ್ಷಾ ಒಂದು ಅಕಾಡೆಮಿಯಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ವರ್ಷಾ ಅವರು ಬ್ಯಾಡ್ಮಿಂಟನ್ ಆಟಗಾರ್ತಿ ಮಾತ್ರವಲ್ಲದೇ ಒಂದು ತಮಿಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಸಿನಿಮಾ ರಿಲೀಸ್ ಆಗುವುದು ಬಾಕಿ ಇದೆ ಎಂದು ವಿನಾಯಕ್ ಜೋಶಿ ತಮ್ಮ ಗೆಳತಿಯ ಬಗ್ಗೆ ಮಾತನಾಡಿದರು.

    ವಿನಾಯಕ್ ಜೋಶಿ ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಮ್ಮೂರ ಮಂದಾರ ಹೂವೆ’, ‘ಅಮೃತ ವರ್ಷಿಣಿ’, ‘ಲಾಲಿ’, ‘ಅಪ್ಪು’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಿಯಾಲಿಟಿ ಶೋ ‘ಬಿಗ್‍ಬಾಸ್’ ಮೊದಲ ಸೀಸನ್‍ನಲ್ಲಿ ವಿನಾಯಕ್ ಸ್ಪರ್ಧಿಸಿದ್ದರು.

    ಸದ್ಯಕ್ಕೆ ಶೀಘ್ರದಲ್ಲೇ ವಿನಾಯಕ್ ಜೋಶಿ ತಮ್ಮ ಗೆಳತಿ ವರ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ. ಆದರೆ ಮದುವೆ ದಿನಾಂಕ ಮತ್ತು ಸ್ಥಳವನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.