Tag: ಬ್ಯಾಂಕುಗಳು

  • ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

    ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

    ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾದರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

    ಆರ್‌ಬಿಐ ಬಿಡುಗಡೆ ಮಾಡಿರುವ 20ನೇ ಹಣಕಾಸು ಸ್ಥಿರತೆ ವರದಿ(ಎಫ್‍ಎಸ್‍ಆರ್)ಯಲ್ಲಿ ಈ ಕುರಿತು ತಿಳಿಸಲಾಗಿದೆ. ದೇಶೀಯ ಬೆಳವಣಿಗೆ ಕುಂಠಿತಗೊಂಡರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ. ಅಲ್ಲದೆ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮರು ಬಂಡವಾಳಗೊಳಿಸಿದ ನಂತರ ಬ್ಯಾಂಕಿಂಗ್ ಕ್ಷೇತ್ರದ ಸ್ಥಿತಿಸ್ಥಾಪಕತ್ವ ಸುಧಾರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಹಣಕಾಸು ಸ್ಥಿರತೆ ಅಪಾಯದ ಕುರಿತು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ(ಎಫ್‍ಎಸ್‍ಡಿಸಿ) ಉಪಸಮಿತಿ ಈ ಹಿಂದೆ ನೀಡಿರುವ ವರದಿ ಹಾಗೂ ಹಣಕಾಸು ವ್ಯವಸ್ಥೆಯ ಸ್ಥಿತಿ ಸ್ಥಾಪಕತ್ವವನ್ನು ಇದು ಪ್ರತಿಬಿಂಬಿಸಿದೆ. ಹಣಕಾಸು ಕ್ಷೇತ್ರದ ಅಭಿವೃದ್ಧಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಹ ವರದಿಯಲ್ಲಿ ಚರ್ಚಿಸಲಾಗಿದೆ.

    ಜಾಗತಿಕ, ದೇಶೀಯ ಆರ್ಥಿಕ ಅನಿಶ್ಚಿತತೆಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದಾಗುವ ಅಪಾಯಗಳು ಮುಂದುವರಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ರೆಕ್ಸಿಟ್ ಒಪ್ಪಂದದ ವಿಳಂಬ, ವ್ಯಾಪಾರ ಸಮರ, ಆರ್ಥಿಕ ಹಿಂಜರಿತ, ತೈಲ ಮಾರುಕಟ್ಟೆಯ ಅಡೆ ತಡೆಗಳು ಹಾಗೂ ಭೌಗೋಳಿಕ ರಾಜಕೀಯ ಅಪಾಯಗಳಿಂದಾಗಿ ಜಾಗತಿಕ ಆರ್ಥಿಕತೆಯು ಹಲವು ಅನಿಶ್ಚಿತತೆಗಳನ್ನು ಎದುರಿಸಿದೆ. ಈ ಅನಿಶ್ಚಿತತೆಗಳು ಗ್ರಾಹಕರ ವಿಶ್ವಾಸ, ವ್ಯವಹಾರದ ಬಗೆಗಿನ ಒಲವು ಹಾಗೂ ಹೂಡಿಕೆಯನ್ನು ಕಡಿಮೆ ಮಾಡಿದೆ. ಈ ಕುರಿತು ಗಮನಹರಿಸದಿದ್ದಲ್ಲಿ ಜಾಗತಿಕ ಬೆಳವಣಿಗೆ ಮೇಲೆ ಸಣ್ಣ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ.

    ನಿರಂತರ ಜಾಗತಿಕ ಕುಸಿತದ ಸಂದರ್ಭದಲ್ಲಿ ಭಾರತದ ರಫ್ತು ತಲೆಕೆಳಗಾಗಬಹುದು ಎಂದು ಆರ್‍ಬಿಐ ಆತಂಕ ವ್ಯಕ್ತಪಡಿಸಿದೆ. ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿರಲಿದೆ. ಆದರೆ ಬಳಕೆ ಹಾಗೂ ಹೂಡಿಕೆಗಳನ್ನು ಪುನರುಜ್ಜೀವನಗೊಳಿಸುವುದು ನಿರ್ಣಾಯಕ ಸವಾಲಾಗಿ ಉಳಿಯಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

    ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿತಿ ಕುರಿತು ವಿವರಿಸಿರುವ ಆರ್‌ಬಿಐ, ಸೆಪ್ಟೆಂಬರ್ ತಿಂಗಳಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಬೆಳವಣಿಗೆ ಪ್ರಮಾಣ ಶೇ.16.5ಕ್ಕೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲದ ಬೆಳವಣಿಗೆ ಶೇ.8.7ರಷ್ಟು ಕಡಿಮೆಯಾಗಿದೆ. ಸರ್ಕಾರ ಸಾರ್ವಜನಿಕ ಬ್ಯಾಂಕುಗಳನ್ನು ಮರು ಬಂಡವಾಳಕ್ಕೆ ಒಳಪಡಿಸಿದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಬಂಡವಾಳ ಗಮನಾರ್ಹವಾಗಿ ಸುಧಾರಿಸಿದೆ. 2019ರ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಒಟ್ಟು ಅನುತ್ಪಾದಕ ಆಸ್ತಿ(ಎನ್‍ಪಿಎ) ಅನುಪಾತವು ಶೇ.9.3ಕ್ಕೆ ಬದಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

  • ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    – ಕಾಫಿ ಸಾಮ್ರಾಟ ನಾಪತ್ತೆಯಾಗಿದ್ದ ಕುರಿತು ಮಲ್ಯ ಟ್ವೀಟ್‍

    ನವದೆಹಲಿ: ನಾನೂ ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

    ಭಾರತೀಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ. ಆದರೆ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಸುದ್ದಿ ತಿಳಿದ ಕೂಡಲೇ ಟ್ವೀಟ್ ಮಾಡಿದ ಮಲ್ಯ, ತನಿಖಾ ಸಂಸ್ಥೆ ಹಾಗೂ ಬ್ಯಾಂಕುಗಳನ್ನು ದೂರಿದ್ದಾರೆ. ನಾನು ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ವಿ.ಜಿ. ಸಿದ್ಧಾರ್ಥ ಒಳ್ಳೆಯ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಬರೆದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್‍ಗಳ ವಿರುದ್ಧ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಾಣುವ ಪ್ರಕರಣ ಮೇಲ್ಮನವಿಗಾಗಿ ಕಾಯುತ್ತಿದೆ ಎಂದು ಬರೆದಿದ್ದಾರೆ.

    ಸೋಮವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಹೊಯಿಗೆ ಬಜಾರ್‍ನಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

    https://www.youtube.com/watch?v=i3MTQLbm1KE