Tag: ಬೋಟ್ ಪಲ್ಟಿ

  • ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ಮಂಗಳೂರು: ಓಖಿ ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿ ಭಾಗದಲ್ಲೂ ಬೀರತೊಡಗಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡು ತೀರ ಪ್ರದೇಶದ ಮನೆಗಳು ನೀರು ಪಾಲಾಗುತ್ತಿದೆ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ ಆರು ಮನೆಗಳು ಸಮುದ್ರ ಪಾಲಾಗಿವೆ. ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ. ಮಂಜೇಶ್ವರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಆಗುತ್ತಿದ್ದು ಬ್ರೇಕ್ ವಾಟರ್ ಅವೈಜ್ಞಾನಿಕ ವಾಗಿ ನಿರ್ಮಿಸಿದ್ದರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರದ ತೀವ್ರತೆ ಹೆಚ್ಚಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

     

    ಮಂಜೇಶ್ವರದ ಕಡಲ ಕಿನಾರೆ (ಕಡಪ್ಪರ) ಯಲ್ಲಿ ಮನೆಯೊಂದು ನೋಡ ನೋಡುತ್ತಲೇ ಸಮುದ್ರಕ್ಕೆ ಬಿದ್ದು ನೀರುಪಾಲಾಗುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಸಮುದ್ರ ರಫ್ ಅಗಿದ್ದರಿಂದ ಶನಿವಾರ ಸಂಜೆಯಿಂದಲೇ ಕಡಲ್ಕೊರೆತ ಆರಂಭವಾಗಿತ್ತು. ಇದರಿಂದಾಗಿ ಮನೆಯ ಅಡಿಪಾಯಕ್ಕಿಂತಲೂ ಕೆಳಗಿದ್ದ ಮರಳು ಕಡಲಿನ ಅಲೆಯಲ್ಲಿ ಕೊಚ್ಚಿ ಹೋಗಿತ್ತು. ಹೀಗೆ ಸುಮಾರು ಒಂದೂವರೆ ನಿಮಿಷಗಳ ಬಳಿಕ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

    ಈ ನಡುವೆ ಕೇರಳದ ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಕಾಣಿಸಿದರೂ ಕೆಲವು ಮೀನುಗಾರರು ಅಲೆಯನ್ನು ಎದುರು ಹಾಕಿಕೊಂಡು ಬೋಟ್ ತೆಗೆದುಕೊಂಡು ಹೋಗಲು ಶ್ರಮಿಸಿದ್ದಾರೆ. ಈ ವೇಳೆ ಒಂದು ಬೋಟ್ ಯಶಸ್ವಿಯಾಗಿ ಅಲೆ ದಾಟಿದರೂ ಇನ್ನೊಂದು ಬೋಟ್ ಇದರಲ್ಲಿ ಸಫಲತೆ ಕಾಣಲಿಲ್ಲ. ಇದರ ಪರಿಣಾಮವಾಗಿ ಬೋಟ್ ಸುಮಾರು 2 ನಿಮಿಷಗಳ ಕಾಲ ಅಲೆಗಳ ನಡುವೆ ಸಿಲುಕಿತ್ತು. ಎರಡು ಬಾರಿ ಕಡಲಿನಲ್ಲೇ ಬೋಟ್ ಮುಳುಗುತ್ತೆ ಎನ್ನಿಸಿದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಕೊನೆಗೆ ಭಾರಿ ಗಾತ್ರದ ಅಲೆಯೊಂದು ಬೋಟನ್ನು ಕಡಲ ಕಿನಾರೆಗೆ ನೂಕಿದ ವೇಳೆ ಬೋಟ್ ಪಲ್ಟಿಯಾಯಿತು. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

    https://www.youtube.com/watch?v=IskPbU9PesM

    https://www.youtube.com/watch?v=ampmtdoQElk

    https://www.youtube.com/watch?v=QC37Q2pdg9w

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ