Tag: ಬೆಳ್ಳಂದೂರು ಕೆರೆ

  • ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

    ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ಈ ವಿಷಯ ತಿಳಿಸಿದರು. ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರೆ ಕಾಮಗಾರಿಗಳಿಗೆಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಅಂದರೆ 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

    ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್:
    ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಓಪನ್ ಜಿಮ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.

    ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:
    ಇನ್ನು ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು. ಇದೇ ವೇಳೆ, ಕಾಮಗಾರಿಯಲ್ಲಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣ – ನಮ್ಮ ಅರ್ಜಿ ಪ್ರತ್ಯೇಕವಾಗಿ ಪರಿಗಣಿಸಿ ಸಂಸದ ಕುಪೇಂದ್ರ ರೆಡ್ಡಿ

    ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣ – ನಮ್ಮ ಅರ್ಜಿ ಪ್ರತ್ಯೇಕವಾಗಿ ಪರಿಗಣಿಸಿ ಸಂಸದ ಕುಪೇಂದ್ರ ರೆಡ್ಡಿ

    ನವದೆಹಲಿ : ಬೆಳ್ಳಂದೂರು ಕರೆ ಮಾಲಿನ್ಯ ಪ್ರಕರಣದಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ರಾಜ್ಯಸಭಾ ಸಂಸದ ಕುಪೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಸೇರಿ ಒಂಬತ್ತು ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.

    ಇಂದು ಸಿಜೆಐ ಎಸ್.ಎ ಬೋಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಮುಂದೆ ವಾದ ಮಂಡಿಸಿದ ವಕೀಲ ರಾಮ್ ಪ್ರಸಾದ್, ರಾಷ್ಟ್ರೀಯ ಹಸಿರು ನ್ಯಾಯಧೀಕರಣದಲ್ಲಿ ಮೊದಲು ಅರ್ಜಿ ಸಲ್ಲಿಸಿದ್ದು ನಮ್ಮ ಕಕ್ಷಿದಾರರು ಬಳಿಕ ಎನ್ ಜಿಟಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಅಲ್ಲದೇ ಎನ್ ಜಿಟಿ ದಾಖಲಿಸಿರುವ ಸ್ವಯಂ ದೂರಿನಲ್ಲೆ ನಮ್ಮ ಅರ್ಜಿಯನ್ನು ಸೇರ್ಪಡೆ ಮಾಡಿಕೊಂಡು ವಿಚಾರಣೆ ನಡೆಸುತ್ತಿದೆ. ಆದರೆ ನಮ್ಮ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಬೇಕು ಎಂದು ಮನವಿ ಮಾಡಿದರು.

     

    ವಿಚಾರಣೆ ಆಲಿಸಿದ ಪೀಠ ರಾಜ್ಯ ಸರ್ಕಾರ, ಬಿಡಿಎ, ತಮಿಳುನಾಡು ಸರ್ಕಾರ, ಕೇಂದ್ರ ಪರಿಸರ ಇಲಾಖೆ, ಬಿಬಿಎಂಪಿ, ಪರಿಸರ ನಿಯಂತ್ರಣ ಮಂಡಳಿ ಸೇರಿ 9 ಇಲಾಖೆಗಳಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.

  • ಬೆಳ್ಳಂದೂರು ಕಲುಷಿತ ಕೆರೆಯೊಳಗೆ ಫೋಟೋಶೂಟ್: ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಳ್ಳಂದೂರು ಕಲುಷಿತ ಕೆರೆಯೊಳಗೆ ಫೋಟೋಶೂಟ್: ರಶ್ಮಿಕಾ ಮಂದಣ್ಣ ಸ್ಪಷ್ಟನೆ

    ಬೆಂಗಳೂರು: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯ ಪಕ್ಕ ನಿಂತಿರುವುದು ಮತ್ತು ಮುಳುಗಿರುವ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಯಾಕೆಂದರೆ ಬೆಳ್ಳಂದೂರು ಕೆರೆಯ ಬಳಿ ಜನರು ಹೋಗಲು ಇಷ್ಟ ಪಡುವುದಿಲ್ಲ. ಅಷ್ಟೊಂದು ಕೊಳಚೆಯಾಗಿ ವಾಸನೆ ಬರುತ್ತಿರುತ್ತದೆ. ಆದರೆ ರಶ್ಮಿಕಾ ಹೇಗೆ ಕೆರೆಯಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಇದನ್ನೂ ಓದಿ: ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, “ಆ ಕೆರೆ ನೀರನ್ನು ನೀವೇನಾದರೂ ನೋಡಿದರೆ ಹತ್ತಿರ ಹೋಗಲೂ ಭಯವಾಗುತ್ತದೆ. ಅಲ್ಲಿನ ಕೆಟ್ಟ ವಾಸನೆಯಿಂದ ರಸ್ತೆಯಲ್ಲಿ ಹೋಗುವಾಗಲೂ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಅಲ್ಲಿಗೆ ಹೋದಾಗ ನನಗೆ ಕಾರಿನಿಂದ ಕೆಳಗೆ ಇಳಿಯಲೂ ಸಾಧ್ಯವಾಗದಂತಹ ವಾತಾವರಣವಿತ್ತು. ಅಂದಮೇಲೆ ನಾನು ಆ ನೀರಿನಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದು ಜನರು ಹೇಗೆ ಅಂದುಕೊಂಡರೋ ಖಂಡಿತವಾಗಿಯೂ ನನಗೆ ಗೊತ್ತಾಗುತ್ತಿಲ್ಲ. ನಾನು ಬೆಳ್ಳಂದೂರು ಕೆರೆಯ ದಡದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ. ಆದರೆ ಅದರೊಳಗೆ ಇಳಿದಿಲ್ಲ. ಬೆಳ್ಳಂದೂರು ಕೆರೆ ಕೆಮಿಕಲ್‍ನಿಂದ ಆವೃತವಾದ ಕಾರಣ ಇಳಿಯೋದು ಅಸಾಧ್ಯ. ಈ ರೀತಿಯಾಗಿ ಫೋಟೋ ಮೂಲಕ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸೋದಕ್ಕಾಗಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಈ ಫೋಟೋವೊಂದನ್ನ ಶೂಟ್ ಮಾಡಲಾಗಿದೆ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ಕೆರೆಗಳ ಸಂರಕ್ಷಣೆ ಬಗ್ಗೆ ಫೋಟೋಶೂಟ್ ಮೂಲಕ ಜಾಗೃತಿ ಮೂಡಿಸಲು ಎಂದು ಸನ್ಮತಿ ಪ್ರಸಾದ್ ಅನ್ನೋರು ರಶ್ಮಿಕಾರನ್ನು ಕೇಳಿದ್ದರು. ಇದಕ್ಕೆ ಒಪ್ಪಿದ್ದ ರಶ್ಮಿಕಾ ನೊರೆ ಕೆರೆಯ ಪಕ್ಕ ನಿಂತು ಫೋಟೋಗೆ ಪೋಸ್ ನೀಡಿದ್ದರು. ಇದಕ್ಕೆ ಸಂಭಾವನೆ ಕೂಡ ಪಡೆದಿರಲಿಲ್ಲ. ಆದರೆ ಅಪ್ಪಿ ತಪ್ಪಿಯೂ ಕೆರೆಗೆ ಇಳಿದಿರಲಿಲ್ಲ. ಆದರೆ ಈ ಫೋಟೋಶೂಟ್ ರಶ್ಮಿಕಾ ಗೆಳತಿಯ ಮನೆಯಲ್ಲಿರುವ ಈಜುಕೊಳದಲ್ಲಿ ಮಾಡಲಾಗಿದೆ.

    ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ನೀರಿನಲ್ಲಿ ತೇಲುತ್ತಿರುವಾಗ ಅದರ ಮಧ್ಯದಲ್ಲಿ ರಶ್ಮಿಕಾ ಇರುವಂತೆ ಅಂಡರ್ ವಾಟರ್‍ನಲ್ಲಿ ಮಾಡಿದ್ದ ಫೋಟೋಶೂಟ್ ಇದಾಗಿದೆ. ಆದರೆ ಆ ಫೋಟೋಗಳನ್ನು ನೋಡಿ ಎಲ್ಲರೂ ರಶ್ಮಿಕಾ ಕಲುಷಿತ ಕೆರೆಯಲ್ಲಿ ಈಜಾಡಿದ್ದಾರೆ ಅಂತ ಸುದ್ದಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿದ್ದಾರೆ.

    ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ ಜನರಲ್ಲಿ ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯಲ್ಲಿ ಅಂಡರ್‍ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ.

    ರಶ್ಮಿಕಾ ಅವರ ಫೋಟೋಶೂಟ್ ಅನ್ನು ಸನ್ಮತಿ ಡಿ. ಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಅಂಡರ್ ವಾಟರ್ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಬೆಳ್ಳಂದೂರು ಕೆರೆಯ ಪರಿಸ್ಥಿತಿ ತಿಳಿದಿರಲಿಲ್ಲ. ಈಗ ಬೆಳ್ಳಂದೂರು ಕೆರೆ ಇರುವ ಸ್ಥಿತಿಗೆ ಮುಂದೆ ಬೇರೆ ಕೆರೆಗಳು ಬರಬಹುದು ಎಂದು ರಶ್ಮಿಕಾ ತಮ್ಮ ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಯ ರಾಸಾಯನಿಕಗಳು ಬೆಳ್ಳಂದೂರು ಕೆರೆಗೆ ಸೇರುತ್ತಿದೆ. ಹಿಂದೆ ಇದರಿಂದಲೇ ಕೆರೆಗೆ ಬೆಂಕಿ ಹತ್ತಿಕೊಂಡಿತ್ತು.

    ಎನ್‍ಜಿಟಿಯಿಂದ ದಂಡ:
    ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‍ಜಿಟಿ) ಡಿಸೆಂಬರ್ 6 ರಂದು ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

    ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.

    ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದಲ್ಲಿ ತಿಳಿಸಿತ್ತು.

    ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿತ್ತು.

    ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್‍ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೊಡ್ಡವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ- ಕೆರೆ ಅಭಿವೃದ್ಧಿ ಪ್ರಾಧಿಕಾರವೇ ಬಂದ್

    ದೊಡ್ಡವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ- ಕೆರೆ ಅಭಿವೃದ್ಧಿ ಪ್ರಾಧಿಕಾರವೇ ಬಂದ್

    ಬೆಂಗಳೂರು: ರಾಜಕಾರಣಿಗಳು ಹಾಗು ಬಿಲ್ಡರ್ ಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನ ಮುಚ್ಚಲು ಹೊರಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಿಲ್ಡರ್ ಗಳಿಗೆ, ಕೈಗಾರಿಗಳಿಗೆ ಮತ್ತು ಅಪಾರ್ಟ್ ಮೆಂಟ್‍ಗಳಿಗೆ ನೋಟಿಸ್ ನೀಡಿತ್ತು. ಕೂಡಲೇ ಕೆರೆಗೆ ಹರಿಸುತ್ತಿರುವ ಮಾಲಿನ್ಯ ನೀರು ನಿಲ್ಲಿಸಿ. ಇಲ್ಲವೇ ಕಾನೂನು ಕ್ರಮಕ್ಕೆ ಮುಂದಾಗಿ ಅಂತ ಪಾಧಿಕಾರ ನೋಟಿಸ್ ನೀಡಿತ್ತು. ಇದೇ ವರದಿಯನ್ನು ಪ್ರಾಧಿಕಾರ ಎನ್‍ಜಿಟಿಗೂ ಸಹ ನೀಡಿತ್ತು. ಎನ್‍ಜಿಟ್ ಬೆಳ್ಳಂದೂರು ಕೆರೆ ಸಂಬಂದಿಸಿದ ವರದಿಗೆ ಪ್ರಶಂಸೆ ವ್ಯಕ್ತಪಡಿಸಿ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ವರದಿ ನೀಡಿ ಅಂತ ಹೇಳಿತ್ತು. ಇದರಿಂದ ಬೆಳ್ಳಂದೂರು ಕೆರೆ ಸಮೀಪವಿದ್ದ ಹಲವು ಕೈಗಾರಿಕೆಗಳು ಮುಚ್ಚುವ ಭೀತಿ ಎದುರಿಸಿದ್ದವು.

    ಈ ಹಿನ್ನೆಲೆಯಲ್ಲಿ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಕೆರೆ ಅಭಿವೃದ್ಧ ಪ್ರಾಧಿಕಾರವನ್ನ ಇತ್ತೀಚೆಗೆ ರಚನೆಯಾಗಿರೋ ಟ್ಯಾಂಕ್ ಕನ್ಸರ್ವವೇಷನ್ ಪ್ರಾಧಿಕಾರದ ಜೊತೆ ವಿಲೀನಗೊಳಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದ ಈಗಾಗಲೇ ಅಧಿಕೃತ ಆದೇಶವನ್ನ ಸರ್ಕಾರ ಹೊರಡಿಸಿದೆ. ಈಗಾಗಲೇ ಕೆರೆ ಅಭಿವೃದ್ದಿ ಪ್ರಾಧಿಕಾರಕಕ್ಕೆ ನೀಡಿರೋ ದೂರಗಳನ್ನು ಮತ್ತು ಇತರೆ ಫೈಲ್‍ಗಳನ್ನು ಹಸ್ತಾಂತರಿಸಿ ಅಂತ ಹೇಳಿದ್ದರಿಂದ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಪೈಲ್‍ಗಳನ್ನ ಸಿಬ್ಬಂದಿ ಗಂಟುಮೂಟೆ ಕಟ್ಟಿದ್ದಾರೆ.

  • ಬೆಳ್ಳಂದೂರು, ವರ್ತೂರ್ ಕೆರೆ ಬಗ್ಗೆ ಬೆಚ್ಚಿಬೀಳಿಸ್ತಿದೆ ಗ್ರೀನ್ ಟ್ರಿಬ್ಯೂನಲ್ ವರದಿ!

    ಬೆಳ್ಳಂದೂರು, ವರ್ತೂರ್ ಕೆರೆ ಬಗ್ಗೆ ಬೆಚ್ಚಿಬೀಳಿಸ್ತಿದೆ ಗ್ರೀನ್ ಟ್ರಿಬ್ಯೂನಲ್ ವರದಿ!

    ಬೆಂಗಳೂರು: ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಬೆಂಗಳೂರಿನ ಅತಿದೊಡ್ಡ ಎರಡು ಸೆಪ್ಟಿಕ್ ಟ್ಯಾಂಕಗಳಂತೆ. ಕೆರೆಯಲ್ಲಿನ ಒಂದು ಮಿಲಿ ಲೀಟರ್ ನೀರು ಕೂಡಾ ಶುದ್ಧವಾಗಿಲ್ಲ ಅನ್ನೋ ಆಘಾತಕಾರಿ ಅಂಶವನ್ನು ವರದಿಯೊಂದು ತಿಳಿಸಿದೆ.

    ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ಮೇರೆಗೆ ಅಧ್ಯಯನ ನಡೆಸಿದ ಹಿರಿಯ ವಕೀಲರ ನೇತೃತ್ವದ ತಜ್ಞರ ತಂಡವೊಂದು ಈ ಆಘಾತ ಸುದ್ದಿ ಬಯಲು ಮಾಡಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆ ಮಾಲಿನ್ಯದ ಕುರಿತು ಅಧ್ಯಯನ ಮಾಡಿದ ತಂಡ ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ತನ್ನ ವರದಿ ಸಲ್ಲಿಕೆ ಮಾಡಿದೆ.

    ವರದಿಯಲ್ಲಿ ಕೆರೆ ವ್ಯಾಪ್ತಿಯ ಮನೆಗಳ ಚರಂಡಿ ನೀರೇ ಮಾಲಿನ್ಯಕ್ಕೆ ಮುಖ್ಯ ಕಾರಣ ಅಂತಾ ಉಲ್ಲೇಖಿಸಿದ್ದು, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ತಜ್ಞರು ಸೆಪ್ಟಿಕ್ ಟ್ಯಾಂಕ್ ಗೆ ಹೋಲಿಸಿದ್ದಾರೆ. ಕೆರೆ ತುಂಬಾ ಘನತಾಜ್ಯ ಹಾಗೂ ಕೊಳಚೆ ನೀರು ತುಂಬಿಕೊಂಡಿದೆ. ಒಟ್ಟು 906 ಎಕರೆ ಕೆರೆ ವಿಸ್ತಿರ್ಣದ ಬೆಳ್ಳಂದೂರು ಕೆರೆ ಪೈಕಿ 71.45 % ನಾಶವಾಗಿದೆ. ಕೆರೆಯಲ್ಲಿನ ಕಳೆ ತಗೆಯುವುದಕ್ಕಿಂತ ಹೆಚ್ಚು ವೇಗವಾಗಿ ಕಳೆ ಬೆಳೆಯುತ್ತಿದೆ ಅಂತಾ ವರದಿಯಲ್ಲಿ ವಿವರಿಸಲಾಗಿದೆ. ವರ್ತೂರು ಕೆರೆ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗುತ್ತಿದೆ ಅಂತಾ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

    ಕೆರೆಯ ನೀರಿನಲ್ಲಿರುವ ಗ್ರೀಸ್, ಆಯಿಲ್, ಮೀಥೇನ್ ಅಂಶಗಳಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಸಮಿತಿ ಹೇಳಿದೆ. ಅಗಸ್ಟ್ 12 ರ ಬಳಿಕ ಇದುವರೆಗೂ 12 ಬಾರಿ ಬೆಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಮಸ್ಯೆ ಪರಿಹಾರಕ್ಕೆ ಕೆಲ ಸಲಹೆಗಳನ್ನು ಸಮಿತಿ ನೀಡಿದೆ. ಸದ್ಯ ವರದಿ ಕೊರ್ಟ್ ರಿಜಿಸ್ಟ್ರಾರ್ ಗೆ ಸಲ್ಲಿಕೆಯಾಗಿದ್ದು, ವರದಿ ಆಧರಿಸಿ ಜುಲೈ 18 ರಂದು ಹಸಿರು ನ್ಯಾಯಾಧೀಕರಣದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.

  • ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ನೊರೆ ಬಂತು, ಕಾಂಗ್ರೆಸ್ ಅದಕ್ಕೆ ಬೆಂಕಿ ಹಾಕ್ತು: ಎಚ್‍ಡಿಕೆ

    ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ ನೊರೆ ಬಂತು, ಕಾಂಗ್ರೆಸ್ ಅದಕ್ಕೆ ಬೆಂಕಿ ಹಾಕ್ತು: ಎಚ್‍ಡಿಕೆ

    ಕಲಬುರಗಿ: ಸಿಲಿಕಾನ್ ಸಿಟಿಯಲ್ಲಿರೋ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗ ನೊರೆ ಆರಂಭವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೆಂಗಳೂರು ಅಭಿವೃದ್ಧಿಯ ಯೋಜನೆಯಿಲ್ಲ ಅಂತ ವಾಗ್ದಾಳಿ ನಡೆಸಿದರು.

    ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಮಾಡುವುದೇ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳ ಕೆಲಸವಾಗಿದೆ. ವಿಶ್ವ ಮಟ್ಟದಲ್ಲಿ ಅನೇಕ ತಂತ್ರಜ್ಞಾನಗಳಿವೆ. ಆದ್ರೆ ಅದನ್ನು ಬಳಸಲು ಸರ್ಕಾರಕ್ಕೆ ಏನಾಗಿದೆ ಅಂತ ಪ್ರಶ್ನಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಬೆಳ್ಳಂದೂರು ಕೆರೆಯ ಇಬ್ಬಲೂರು ಮತ್ತು ಈಜಿಪುರ ಕಡೆಯ ದಡದಲ್ಲಿನ ಹುಲ್ಲಿಗೆ ಹತ್ತಿದ್ದ ಬೆಂಕಿಯನ್ನು ನಂದಿಸುವ ಕಾರ್ಯ ಶನಿವಾರವೂ ಮುಂದುವರಿದಿದೆ. ನಿನ್ನೆಯಿಂದಲೇ ಅಗ್ನಿಶಾಮಕದಳದ ಜೊತೆಗೆ 5 ಸಾವಿರ ಸೈನಿಕರಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ಕೆರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ತಣ್ಣಾಗಾಗಿಲ್ಲ.

    ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಹಿಂದಿನ ವಿಚಾರಣೆ ವೇಳೆ ಬೆಳ್ಳಂದೂರು ಕೆರೆಯನ್ನು ಸಂಪೂರ್ಣ ಸ್ವಚ್ಛ ಮಾಡಬೇಕು ಎಂದು ಅನೇಕ ಬಾರಿ ತಾಕೀತು ಮಾಡಿತ್ತು. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ), ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‍ಸಿಡಿಎ), ಬಿಡಿಎ ಹಾಗೂ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಈ ಹಿಂದೆ 2015ರಲ್ಲಿ ಕೆರೆಯಲ್ಲಿ ವಿಷಪೂರಿತ ನೊರೆಯಿಂದಾಗಿ ಬೆಂಕಿ ಹೊತ್ತಿಕೊಂಡಿತು. ಇದಾದ ಬಳಿಕ 2016ರ ಫೆಬ್ರುವರಿಯಲ್ಲಿ ನೊರೆ ಸಮಸ್ಯೆಯಿಂದ ಕೆರೆಗೆ ಬೆಂಕಿ ಹತ್ತಿಕೊಂಡಿತ್ತು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಈ ಪ್ರಕರಣ ಎನ್‍ಜಿಟಿಯನ್ನು ತಲುಪಿತ್ತು. ಅರ್ಜಿ ವಿಚಾರಣೆ ವೇಳೆ ನ್ಯಾಯಮಂಡಳಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಪರಿಣಾಮ ಕೆರೆಯ ಹೂಳನ್ನು ತೆಗೆಯಲಾಗಿತ್ತು. ಈಗ ಕೆರೆಯ ಸುತ್ತಲೂ ಬೇಲಿ ಹಾಕಲಾಗಿದೆ.

    https://www.youtube.com/watch?v=F_VbVFNu6F0

    https://www.youtube.com/watch?v=syYAEeLN9wc

    https://www.youtube.com/watch?v=j98T-w6QJ98

  • ಬೆಳ್ಳಂದೂರು ಕೆರೆ ಈಗ ಕಾಂಗ್ರೆಸ್ ಕೆರೆ: ನಾಮಕರಣ ಪ್ರೋಗ್ರಾಂನಲ್ಲಿ ಸಿಎಂ, ಜಾರ್ಜ್!

    ಬೆಳ್ಳಂದೂರು ಕೆರೆ ಈಗ ಕಾಂಗ್ರೆಸ್ ಕೆರೆ: ನಾಮಕರಣ ಪ್ರೋಗ್ರಾಂನಲ್ಲಿ ಸಿಎಂ, ಜಾರ್ಜ್!

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆಳ್ಳಂದೂರು ಕೆರೆಗೆ ನವ ಭಾರತ ಪ್ರಜಾ ಸತ್ತಾತ್ಮಕ ಪಕ್ಷ ಮಂಗಳವಾರ ‘ಕಾಂಗ್ರೆಸ್ ಕೆರೆ’ ಎಂದು ನಾಮಕರಣ ಮಾಡಿದೆ.

    ಕಳೆದ ನಾಲ್ಕೈದು ವರ್ಷಗಳಿಂದ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ತಾಂಡವವಾಡುತ್ತಿದ್ದರೂ ಮುಕ್ತಿ ಕಲ್ಪಿಸದ ಕಾರಣ ಕಾಂಗ್ರೆಸ್ ಸರ್ಕಾರ ಕೆರೆ ಎಂದು ನಾಮಕರಣ ಮಾಡಲಾಗಿದೆ. ನಾಮಕರಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಂಸದ ಪಿ.ಸಿ. ಮೋಹನ್, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರ ವೇಷ ತೊಟ್ಟ ಮುಸುಕುದಾರಿ ಅತಿಥಿಗಳು ಭಾಗಿಯಾಗಿದ್ದಾರೆ.

    ಪಕ್ಷದ ವತಿಯಿಂದ ಬೆಳ್ಳಂದೂರು ಕೊಡಿಯಿಂದ ಯಮಲೂರು ಕೋಡಿವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಸರ್ಕಾರ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೆಳ್ಳಂದೂರು ಕೆರೆ ಅಭಿವೃದ್ಧಿ ವಿಚಾರದಲ್ಲಿ ಹಸಿರು ನ್ಯಾಯ ಪೀಠಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಜಾಥಾದಲ್ಲಿ ಕಿಡಿಕಾರಿದ್ರು.

     

    ನ್ಯಾಯಾಧಿಕರಣದಲ್ಲಿ ಇಂದು ಏನಾಯ್ತು?: ಬೆಳ್ಳಂದೂರು ಕೆರೆಯ ಅಭಿವೃದ್ಧಿ ವಿಚಾರವಾಗಿ ಕ್ರಿಯಾವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರವಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದೆ. ಬಿಬಿಎಂಪಿ, ಬಿಡಬ್ಲ್ಯು ಎಸ್‍ಎಸ್‍ಬಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒಟ್ಟಾಗಿ 10 ದಿನದಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು.

    ವರದಿಯಲ್ಲಿ ಘನ ತಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆ, ಚರಂಡಿ ನೀರು ತಡೆ ಸೇರಿದಂತೆ ಒಂದೇ ಬಾರಿ ಹೂಳು ತೆಗೆದು ಸ್ವಚ್ಛ ಮಾಡಲು ತೆಗೆದುಕೊಳ್ಳಬಹುದು ಕ್ರಮಗಳ ಕುರಿತು ಪ್ಲಾನ್ ರೂಪಿಸಿ ಅಂತ ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವಿಚಾರಣೆ ಆರಂಭದಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ನ್ಯಾಯಾಧಿಕರಣ ಇದುವರೆಗೂ ಏನೆಲ್ಲ ಕೆಲಸ ಮಾಡಲಾಗಿದೆ ಅಂತಾ ಪ್ರಶ್ನಿಸಿತು.

    ಈ ವೇಳೆ ಅಧಿಕಾರಿಗಳು ನ್ಯಾಯಾಧಿಕರಣ ನೀಡಿದ ಎಲ್ಲ ಕಾರ್ಯ ಮಾಡಲಾಗಿದೆ ಅಂತ ಉತ್ತರಿಸಿದ್ರು. ಇದಕ್ಕೆ ಗರಂ ಆದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಒಂದು ಕೆಜಿ ಕಸ ಇಲ್ಲವಾದ್ರೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ ವಾಸ್ತವ ವರದಿ ತರಿಸಲಾಗುತ್ತೆ ಎಂದ್ರು. ಈ ವೇಳೆ ಅಧಿಕಾರಿಗಳು ಕೆಲಸ ಪ್ರಗತಿಯಲ್ಲಿದೆ ಅಂತಾ ಪರಿಸ್ಥಿತಿ ನಿಭಾಯಿಸಿದ್ರು.

     

    ಇನ್ನು ಅಫಿಡವಿಟ್ ಸಲ್ಲಿಸುವುದು ಬಿಟ್ಟು ಕಾರ್ಯನ್ಮುಕರಾಗಿ ಕೆಲಸ ಮಾಡಿ. ಅಧಿಕಾರಿಗಳ ವರದಿ ತಯಾರಿಸಿ ಅವುಗಳನ್ನು ಪ್ರತಿವಾದಿಗಳಿಗೆ ನೀಡಿ. 10 ದಿನಗಳಲ್ಲಿ ಸುದೀರ್ಘ ವರದಿ ನ್ಯಾಯಧಿಕರಣ ಕ್ಕೆ ಸಲ್ಲಿಸಬೇಕು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 8 ಮುಂದೂಡಿದ ನ್ಯಾಯಾಧಿಕರಣ, ಮುಂದಿನ ವಿಚಾರಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥ ಲಕ್ಷ್ಮಣ್ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.

    ಕೆರೆ ವ್ಯಾಪ್ತಿಯಲ್ಲಿನ ಅಪಾರ್ಟ್ ಮೆಂಟ್ ಗಳಿಗೆ, ಕೆರೆಗೆ ಕೊಳಚೆ ನೀರು ಹರಿ ಬಿಡಲಾಗುವ ಅಪಾರ್ಟ್ ಮೆಂಟ್ ಗಳಿಗೆ, ಘನತಾಜ್ಯ ಸಂಸ್ಕರಣಾ ಘಟಕ ಅಳವಡಿಸದ ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿ ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣದ ಖಡಕ್ ಸೂಚನೆ ನೀಡಿದೆ.

    ಒಂದು ತಿಂಗಳೊಳಗೆ ಸಂಸ್ಕರಣಾ ಘಟಕ ಅಳವಡಿಸಿಕೊಳ್ಳಬೇಕು. ಅಳವಡಿಸಿಕೊಂಡಿರುವ ಸಂಸ್ಕರಣಾ ಘಟಕ ಚಾಲನೆಯಲ್ಲಿರಬೇಕು. ನಿಯಮ ಪಾಲಿಸದ ಅಪಾಟ್ರ್ಮೆಂಟ್‍ಗಳಿಗೆ ನೀರು ವಿದ್ಯುತ್ ಕಟ್ ಮಾಡಿ ಅಂತ ಮೌಖಿಕವಾಗಿ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ.

    https://www.youtube.com/watch?v=syYAEeLN9wc

    https://www.youtube.com/watch?v=SxvNEB7nWI0

    https://www.youtube.com/watch?v=NF8nmES0nO4

    https://www.youtube.com/watch?v=uapgPEwN7oY

     

  • ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಅರ್ಭಟ- ಸ್ಥಳಕ್ಕೆ ಬಾರದ ಅಧಿಕಾರಿಗಳು

    ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಅರ್ಭಟ- ಸ್ಥಳಕ್ಕೆ ಬಾರದ ಅಧಿಕಾರಿಗಳು

    ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆ ಕೋಡಿಯಲ್ಲಿ ನೊರೆಯ ಅರ್ಭಟ ಹೆಚ್ಚಾಗಿದೆ.

    ಈ ನೊರೆಯನ್ನು ನಿಯಂತ್ರಿಸುವ ಸಲುವಾಗಿ ನೀರು ಸಿಂಪಡಿಸಲು ಅಳವಡಿಸಿದ್ದ ಮೋಟರ್ ರಿಪೇರಿಯಾಗಿರುವುದರಿಂದ ನೊರೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲು ಬೆಳ್ಳಂದೂರು ಕೆರೆ, ವರ್ತೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಜನರು ನೊರೆಯ ಸಮಸ್ಯೆ ಜೊತೆಗೆ ದುರ್ವಾಸನೆ, ಸೊಳ್ಳೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕೆರೆಯನ್ನು ಅಭಿವೃದ್ಧಿಪಡಿಸಿ ಎಂದು ಹಸಿರು ನ್ಯಾಯ ಪೀಠ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಕಾಟಚಾರಕ್ಕಾಗಿ ಅರ್ಧ ಕೆಲಸ ಮಾಡಿ ಬಿಟ್ಟಿರುವುದರಿಂದ ಮತ್ತೆ ನೊರೆಯ ಸಮಸ್ಯೆ ಉಲ್ಬಣವಾಗಿದೆ.

    ಕಳೆದ ನಾಲ್ಕು ದಿನಗಳಿಂದ ಈ ಸಮಸ್ಯೆ ಹೆಚ್ಚಾಗಿದ್ದರೂ ಬಿಡಿಎ, ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಇತ್ತ ಸುಳಿಯದೆ ತಮಗೂ ಈ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮ್ಮನಾಗಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಇನ್ನಾದರು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ನೊರೆ ಭಾಗ್ಯಕ್ಕೆ ಮುಕ್ತಿ ಕಲ್ಪಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    https://www.youtube.com/watch?v=syYAEeLN9wc

  • ನಿಮ್ಮನ್ನು ಜೈಲಿಗೆ ಕಳುಹಿಸಿದ್ರೆ ಹೇಗೆ? ಎನ್‍ಜಿಟಿ ಮುಂದೆ ಮಂಡಿಯೂರಿದ ಬಿಬಿಎಂಪಿ

    ನಿಮ್ಮನ್ನು ಜೈಲಿಗೆ ಕಳುಹಿಸಿದ್ರೆ ಹೇಗೆ? ಎನ್‍ಜಿಟಿ ಮುಂದೆ ಮಂಡಿಯೂರಿದ ಬಿಬಿಎಂಪಿ

    – ಬೆಳ್ಳಂದೂರು ಕೆರೆ ಸುರಕ್ಷತೆಗೆ ಖಡಕ್ ಸೂಚನೆ

    ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಸಮಸ್ಯೆ ಸಂಬಂಧ ಬಿಬಿಎಂಪಿ ಮತ್ತು ಬಿಡಿಎಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಚಳಿಜ್ವರ ಬಿಡಿಸಿದೆ.

    ಬೆಳ್ಳಂದೂರು ಕೆರೆಯ ಸುತ್ತಲಿನ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನ ತಕ್ಷಣವೇ ಮುಚ್ಚಿ ಅಂತ ಟ್ರಿಬ್ಯೂನಲ್ ಮಧ್ಯಂತರ ಆದೇಶ ನೀಡಿದೆ. ಕೆರೆಗೆ ಬೆಂಕಿಬಿದ್ದ ಪ್ರಕರಣ ಸಂಬಂಧ ಇವತ್ತು ಹಾಜರಾದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತು ಅಧಿಕಾರಿಗಳಿಗೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತರಾಟೆಗೆ ತೆಗೆದುಕೊಂಡರು.

    ನ್ಯಾಯಪೀಠದ ಸುತ್ತೋಲೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಹೇಳ್ತೀರಾ? ನ್ಯಾಯಾಂಗಕ್ಕೆ ಬೆಲೆ ಕೊಡದ ನಿಮ್ಮನ್ನ ನ್ಯಾಯಾಂಗ ನಿಂದನೆಯಡಿ ಜೈಲಿಗೆ ಕಳುಹಿಸಬಾರದೇಕೆ ಅಂತಾ ಪ್ರಶ್ನಿಸಿದ್ರು. ಜಡ್ಜ್ ಮಾತಿಗೆ ದಂಗಾದ ಅಧಿಕಾರಿಗಳು ಕ್ಷಮೆಯಾಚಿಸಿದ್ರು.

    ನಿನ್ನೆಯಷ್ಟೇ ಖಾಸಗಿ ಮಾಧ್ಯಮದಲ್ಲಿ ಬೆಳಂದೂರು ಕೆರೆಯ ಪರಿಸ್ಥಿತಿ ನೋಡಿದ್ದೇವೆ. 3 ಸಾವಿರಕ್ಕೂ ಅಧಿಕ ಕೆರೆಗಳಿಂದ ತಂಪಾಗಿದ್ದ ಬೆಂಗಳೂರು ನಗರ ಈಗ ನಿಮ್ಮಂತವರ ಬೇಜವಾಬ್ದಾರಿಯಿಂದ ಏರ್ ಕಂಡಿಷನರ್ ಬಳಸುವಂತಾಗಿದೆ ಅಂತ ಕಳವಳ ವ್ಯಕ್ತಪಡಿಸಿದ್ರು.

    ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಒಂದು ತಿಂಗಳ ಒಳಗೆ ಸ್ವಚ್ಛ ಮಾಡಬೇಕು ಅಂತಾ ಎಚ್ಚರಿಕೆ ನೀಡಿ ಮೇ 18ಕ್ಕೆ ವಿಚಾರಣೆ ಮುಂದೂಡಿದ್ರು.

    ಎನ್‍ಜಿಟಿ ಮಧ್ಯಂತರ ಆದೇಶದಲ್ಲೇನಿದೆ..?
    * ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ ಕೆರೆ ಸ್ವಚ್ಚತಾ ಹೊಣೆ ಹೊರಬೇಕು
    * ಈ ಎಲ್ಲಾ ಇಲಾಖೆಯ ಒಬ್ಬೂಬ್ಬ ಹೆಚ್ಚುವರಿ ಕಾರ್ಯದರ್ಶಿಗಳಿರುವ ಸಮಿತಿ ರಚಿಸಬೇಕು (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಮಿತಿ ಅಧ್ಯಕ್ಷ)
    * ಈ ಸಮಿತಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಪರಿಶೀಲನೆ ನಡೆಸಬೇಕು
    * ಇಂದಿನಿಂದ ಒಂದು ತಿಂಗಳ ಸಮಯದಲ್ಲಿ ಮಾಲಿನ್ಯ ತಡೆಗಟ್ಟಿ ಕೆರೆ ಸ್ವಚ್ಛ ಮಾಡಬೇಕು
    * ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಕೆರೆ ಅಭಿವೃದ್ಧಿಯಾಗಬೇಕು

    * ಯಾವುದೇ ಟೆಂಡರ್ ನೀಡದೆ ಖುದ್ದು ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ನಡೆಯಬೇಕು (ಕೊಳಚೆ ನೀರನ್ನ ಬೇರ್ಪಡಿಸಿ ಶುದ್ಧನೀರನ್ನ ವಿವಿಧ ಕೆಲಸಗಳಿಗೆ ಬಳಕೆ ಮಾಡಬಹುದು)
    * ಅರ್ಪಾಟ್‍ಮೆಂಟ್, ಕಾರ್ಖಾನೆ ತಾಜ್ಯ, ನೀರು ರಾಜಕಾಲುವೆ ಮೂಲಕ ಹರಿಯದಂತೆ ಕ್ರಮ ವಹಿಸಬೇಕು
    * ಹೆಚ್ಚು ಮಾಲಿನ್ಯಕಾರಕ ಕಾರ್ಖಾನೆಗಳಿದ್ರೆ ಬೀಗ ಹಾಕಿ, ಅಪಾರ್ಟ್‍ಮೆಂಟ್ ನೀರಿನ ಮಾರ್ಗ ಬದಲಿಸಲು ಎಚ್ಚರಿಸಿ
    * ನಿಯಮ ಪಾಲಿಸದಿದ್ದರೆ 5 ಲಕ್ಷ ರೂ. ದಂಡ ಹಾಕಿ
    * ಮೇ 18ರ ವಿಚಾರಣೆಗೆ ಬರುವಾಗ ಅದುವರೆಗೂ ತೆಗೆದುಕೊಂಡ ಕ್ರಮದ ಸಂಪೂರ್ಣ ವರದಿ ಸಲ್ಲಿಸಬೇಕು.